ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
May 2023 » Page 5 of 10 » Dynamic Leader
October 23, 2024
Home 2023 May (Page 5)
ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಪರಿಶಿಷ್ಟ ಜಾತಿ ಸಮುದಾಯದ ಬೆಂಬಲವಿಲ್ಲದಿದ್ದರೆ ಸತತ ಚುನಾವಣೆ ಗೆಲ್ಲುವುದು ಕಷ್ಟ ಎಂದು, ಆರ್‌ಎಸ್‌ಎಸ್-ಬಿಜೆಪಿಗೆ ಈಗ ಮನವರಿಕೆಯಾಗಿದೆ ಎಂದು ತಿಳಿದು ಬಂದಿದೆ.

ಸಂಘ ಪರಿವಾರ ಸಂಘಟನೆಗಳಿಗೆ ಮಾರ್ಗದರ್ಶನ ನೀಡಲು, ಪ್ರತಿ ಸಂಘಟನೆಗೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಪದಾಧಿಕಾರಿಗಳನ್ನು ಆರ್‌ಎಸ್‌ಎಸ್ ನೇಮಕ ಮಾಡಿರುತ್ತದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಮಾಸಿಕ ಸಮಾಲೋಚನೆ ನಡೆಸುವುದು ವಾಡಿಕೆ. ಅದರಂತೆ ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆಯಲ್ಲಿ ಆರ್‌ಎಸ್‌ಎಸ್ ಪದಾಧಿಕಾರಿಗಳು ಸಭೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಆಗ ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸೋಲಿಗೆ ಹಲವು ಕಾರಣಗಳಿದ್ದರೂ ಪರಿಶಿಷ್ಟ ಜಾತಿಯ ಮತಗಳು ಸಿಗದಿರುವುದು ಪ್ರಮುಖ ಕಾರಣವಾಗಿದೆ ಎಂದು ಪದಾಧಿಕಾರಿಗಳು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಜೆಪಿಯ ಹಿರಿಯ ಮುಖಂಡರೊಬ್ಬರು ನಮ್ಮಲ್ಲಿ ಮಾತನಾಡುತ್ತಾ,

‘ರಾಜ್ಯಗಳಲ್ಲಿ ಹಿಂದುಳಿದ ಸಮಾಜದ ನಾಯಕರುಗಳನ್ನು ಸೃಷ್ಟಿಸಿದ ನಂತರವೇ, ಬಿಜೆಪಿ ಚುನಾವಣೆ ಗೆಲ್ಲಲು ಆರಂಭಿಸಿತು. ಕಳೆದ 10 ವರ್ಷಗಳಲ್ಲಿ ಹೆಚ್ಚಿನ ರಾಜ್ಯಗಳಲ್ಲಿ, ಪರಿಶಿಷ್ಟರ ಜನಸಂಖ್ಯೆ ಎರಡರಿಂದ ಐದು ಪರ್ಸೆಂಟ್ ಹೆಚ್ಚಳವಾಗಿದೆ. ಇದನ್ನು ಬಿಜೆಪಿ ನಾಯಕರಿಗೆ ಸೂಚಿಸಿ ಪರಿಶಿಷ್ಟ ಜಾತಿಯ ಬೆಂಬಲವಿದ್ದರೆ ಮಾತ್ರ, ಸತತ ಗೆಲುವು ಸಾಧಿಸಬಹುದು ಎಂದು ಆರ್‌ಎಸ್‌ಎಸ್ ಮನವರಿಕೆ ಮಾಡಿ ಕೊಟ್ಟಿದೆ.

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಮತಗಳು ಸಿಗದೇ ಇರಲು, ಬಿಜೆಪಿಗೆ ಪರಿಶಿಷ್ಟ ಜಾತಿಯ ಪ್ರಭಾವಿ ನಾಯಕರ ಕೊರೆತೆಯೇ ಕಾರಣ. ಇದನ್ನು ಗಮನದಲ್ಲಿಟ್ಟು ಮುಂದಿನ ದಿನಗಳಲ್ಲಿ ದೇಶಾದ್ಯಂತ ಪರಿಶಿಷ್ಟ ಜಾತಿಯ ಬೆಂಬಲವನ್ನು ಪಡೆಯಬೇಕಾಗಿದೆ. ಅದಕ್ಕಾಗಿ ಪ್ರತಿ ರಾಜ್ಯದಲ್ಲಿ, ಪರಿಶಿಷ್ಟ ಜಾತಿಯ ಪ್ರಭಾವಿ ನಾಯಕರುಗಳನ್ನು ಕಟ್ಟಿ ಬೆಳಸಬೇಕಾಗಿದೆ. ಪ್ರಧಾನಿ ಮೋದಿಯ ನಂತರ ಪ್ರಧಾನಿ ಅಭ್ಯರ್ಥಿಯಾಗುವ ಮಟ್ಟಕ್ಕೆ, ಪರಿಶಿಷ್ಟ ಜಾತಿ ನಾಯಕರುಗಳನ್ನು ಬೆಳೆಸುವುದು ಕಾಲದ ಅನಿವಾರ್ಯತೆ ಎಂದು ಆರ್‌ಎಸ್‌ಎಸ್ ಹೇಳಿದೆ’ ಎಂದು ಹೇಳಿದರು.

ಭವಿಷ್ಯದ ರಾಜಕೀಯ ಪರಿಸ್ಥಿತಿಯನ್ನು ಅರಿತೇ ಕೇಂದ್ರ ಸಚಿವ ಸಂಪುಟದಲ್ಲಿ 12 ಜನ ಪರಿಶಿಷ್ಟರು, 8 ಜನ ಪರಿಶಿಷ್ಟ ಪಂಗಡದವರು, 27 ಜನ ಹಿಂದುಳಿದ ವರ್ಗದವರು ಮತ್ತು 11 ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅವಕಾಶವನ್ನು ನೀಡಿದ್ದಾರೆ. ಕೊನೆಯದಾಗಿ, ತಮಿಳುನಾಡಿನ ಪರಿಶಿಷ್ಟ ಜಾತಿಗೆ ಸೇರಿದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರನ್ನು ರಾಜ್ಯಸಭೆ ಸಂಸದರನ್ನಾಗಿ ನೇಮಕ ಮಾಡಿತು. ಐದು ಸ್ಥಳಗಳಲ್ಲಿ ಸ್ಮಾರಕಗಳ ನಿರ್ಮಾಣದಂತಹ ಕ್ರಮಗಳನ್ನೂ ಮೋದಿ ಕೈಗೊಂಡರು.

ಪರಿಶಿಷ್ಟ ಜಾತಿಯ ನಾಯಕರನ್ನು ಬೆಳೆಸಲು ಆರ್‌ಎಸ್‌ಎಸ್ ಸೂಚನೆ ನೀಡಿರುವುದರಿಂದ, ಬಿಜೆಪಿಯ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಆ ದಿಕ್ಕಿನಲ್ಲಿ ಸಾಗುತ್ತವೆ’ ಎಂದು ಪಕ್ಷದವರು ಹೇಳುತ್ತಿದ್ದಾರೆ.

ವಿದೇಶ

ಟೋಕಿಯೊ: ಜಪಾನ್‌ನ ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಪ್ರಧಾನಿ ಮೋದಿ ಇಂದು ಉದ್ಘಾಟಿಸಿದರು. ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ನಲ್ಲಿದ್ದಾಗ ಅವರು ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದೇ ವೇಳೆ ಪ್ರಧಾನಿ ಮೋದಿ ಅವರು ಹಿರೋಷಿಮಾದಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರನ್ನು ಭೇಟಿ ಮಾಡಿದರು.

ಹಿರೋಷಿಮಾದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ, “ಇದು ಶಾಂತಿ ಮತ್ತು ಸೌಹಾರ್ದತೆಯ ಸಂದೇಶ. ಶಾಂತಿ ಮತ್ತು ಸೌಹಾರ್ದತೆಯ ಗಾಂಧಿ ಆದರ್ಶಗಳು ಜಾಗತಿಕವಾಗಿ ಪ್ರತಿಧ್ವನಿಸುತ್ತವೆ ಮತ್ತು ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡುತ್ತವೆ” ಎಂದರು.

ಹಿರೋಷಿಮಾದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಶಾಂತಿ ಮತ್ತು ಅಹಿಂಸೆಯ ಒಗ್ಗಟ್ಟಿನ ಸಂಕೇತವಾಗಿ ಗಾಂಧಿ ಪ್ರತಿಮೆಯ ಸ್ಥಳವನ್ನು ಆಯ್ಕೆ ಮಾಡಲಾಗಿದೆ. ಅಮೆರಿಕ ಆಗಸ್ಟ್ 6, 1945 ರಂದು ಹಿರೋಷಿಮಾದ ಮೇಲೆ ವಿಶ್ವದ ಮೊದಲ ಪರಮಾಣು ದಾಳಿಯನ್ನು ನಡೆಸಿತು, ಇದರಿಂದ ಹಿರೋಷಿಮಾ ನಗರವೇ ನಾಶವಾಯಿತು ಮತ್ತು ಸುಮಾರು 1,40,000 ಜನರನ್ನು ತಮ್ಮ ಪ್ರಾಣವನ್ನು ಕಳೆದುಕೊಂಡರು.

ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, “ಇಂದಿಗೂ ಹಿರೋಷಿಮಾ ಎಂಬ ಪದವನ್ನು ಕೇಳಿದರೆ ಜಗತ್ತು ಹೆದರುತ್ತದೆ” ಎಂದರು.

ರಾಜಕೀಯ

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯು ಮೇ 10 ರಂದು ಒಂದೇ ಹಂತದಲ್ಲಿ ನಡೆದಿತ್ತು. ಮೇ 13 ರಂದು ಮತ ಎಣಿಕೆ ನಡೆಯಿತು. ಇದರಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಸೋಲಿಸಿ ಬಹುಮತಕ್ಕಿಂತ ಹೆಚ್ಚು ಸ್ಥಾನಗಳನ್ನು ವಶಪಡಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತು. ಈ ಬಾರಿಯ ಚುನಾವಣೆಯಲ್ಲಿ ಮೋದಿ ಕರ್ನಾಟಕದಲ್ಲಿ ಹಲವು ಬಾರಿ ಪ್ರಚಾರ ಮಾಡಿದರೂ ಬಿಜೆಪಿ ಗೆದ್ದಿದ್ದು ಕೇವಲ 66 ಸ್ಥಾನಗಳು ಮಾತ್ರ. ಹಲವು ಕ್ಷೇತ್ರಗಳಲ್ಲಿ ಠೇವಣಿಯನ್ನು ಕಳೆದುಕೊಂಡಿತು. ಮತ್ತು ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯಿತು.

ಕಾಂಗ್ರೆಸ್ ಪಕ್ಷದ ಗೆಲುವಿನ ನಂತರ ಕರ್ನಾಟಕದ ಮುಖ್ಯಮಂತ್ರಿ ಯಾರು ಎಂಬ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರು. ಅವರು ಸೋನಿಯಾ ಗಾಂಧಿಯವರೊಂದಿಗೂ ಸಮಾಲೋಚನೆ ನಡೆಸಿದರು. ನಂತರ ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರು ಸಿದ್ದರಾಮಯ್ಯ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಎಂದು ಘೋಷಿಸಿದರು.

ಮುಂದುವರಿದು, ಇಂದು ಬೆಂಗಳೂರಿನ ಕಂಠೀರವ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇವರೊಂದಿಗೆ ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಕೆ.ಹೆಚ್.ಮುನಿಯಪ್ಪ, ಬಿ.ಝಡ್.ಜಮೀರ್ ಅಹಮದ್ ಖಾನ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೋಳಿ ಮುಂತಾದ 8 ಜನ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಸಮಾರಂಭದಲ್ಲಿ ಎಐಸಿಸಿ ಅಧ್ಯಕರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್,   ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಹಾಗೂ ಮೆಗಬೂಬ ಮುಫ್ತಿ, ಕಮ್ಯುನಿಸ್ಟ್ ಪಕ್ಷದ ಸೀತಾರಾಂ ಯೆಚೂರಿ, ಡಿ.ರಾಜಾ, ವಿಡುದಲೈ ಚಿರುತ್ತೈಗಳ್ ನಾಯಾಕ ಸಂಸದ ತೊಲ್ ತಿರುಮಾವಳವನ್ ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮುಂತಾದವರು ಭಾಗವಹಿಸಿದ್ದರು.

ಸಿನಿಮಾ

ವರದಿ: ಅರುಣ್ ಜಿ.,

‘ಸೈಂಧವ್’ ಸಿನಿಮಾ ಮೂಲಕ ಟಾಲಿವುಡ್ ಗೆ ನವಾಜುದ್ದೀನ್ ಸಿದ್ದಿಕಿ ಎಂಟ್ರಿ; ವಿಕ್ಟರಿ ವೆಂಕಟೇಶ್‌ಗೆ ಟಕ್ಕರ್ ಕೊಡಲು ಬಂದ ಬಾಲಿವುಡ್ ಸ್ಟಾರ್ ಲುಕ್ ರಿವೀಲ್.

ಬಾಲಿವುಡ್ ಕಂಡ ಅತ್ಯದ್ಭುತ ನಟರಲ್ಲಿ ನವಾಜುದ್ದೀನ್ ಸಿದ್ದಿಕಿ ಕೂಡ ಒಬ್ಬರು. ಯಾವುದೇ ಪಾತ್ರ ಕೊಟ್ಟರು‌ ಲೀಲಾಜಾಲವಾಗಿ ಅಭಿನಯಿಸುವ, ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿರುವ ಸಿದ್ದಿಕಿ, ಸೈಂಧವ್ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರೀಯತ್ತ ಹೆಜ್ಜೆ ಇಟ್ಟಿದ್ದಾರೆ. 

ಇದನ್ನೂ ಓದಿ: ಚಿತ್ರರಂಗದ ಗಣ್ಯರಿಂದ ಬಿಡುಗಡೆಯಾಯಿತು “ಸೈರನ್” ಟ್ರೇಲರ್: ಮೇ 26 ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆ!

ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’. ಶೈಲೇಶ್ ಕೋಲನು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ವಿಲನ್ ಆಗಿ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಮಾಡಿದೆ. ವಿಕಾಸ್ ಮಲಿಕ್ ಎಂಬ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ,  ದುಬಾರಿ ಕಾರಿನ ಬಾನೆಟ್ ಮೇಲೆ ಕುಳಿತು ಬೀಡಿ ಸೇದುತ್ತಾ ಸಖತ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. 

ಶ್ರದ್ಧಾ ಶ್ರೀನಾಥ್ ಮನೋಜ್ಞ ಎಂಬ ಪಾತ್ರದಲ್ಲಿ, ಡಾ.ರೇಣು ಪಾತ್ರದಲ್ಲಿ ರುಹಾನಿ ಶರ್ಮಾ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್.ಮಣಿಕಂಡನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲಾ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ.

ಇದನ್ನೂ ಓದಿ: ವೆಬ್ ಸಿರೀಸ್ ಲೋಕಕ್ಕೆ ವಿಕ್ರಮ್ ರವಿಚಂದ್ರನ್ ಹಾಗೂ ಅದಿತಿ ಪ್ರಭುದೇವ ಎಂಟ್ರಿ: ಇಂದಿನಿಂದ ಜಿಯೋ ಸಿನಿಮಾದಲ್ಲಿ ‘ಲವ್ ಯೂ ಅಭಿ’ ಉಚಿತ!

ನಿಹಾರಿಕಾ ಎಂಟರ್ಟೈನ್ಮೆಂಟ್ ಅಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ‘ಸೈಂಧವ್‌’ ಚಿತ್ರಕ್ಕೆ ಕಿಶೋರ್ ತಲ್ಲೂರ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ‘ಸೈಂಧವ್’ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಡಿಸೆಂಬರ್ 22 ರಂದು ಕ್ರಿಸ್ಮಸ್ ಹಬ್ಬದಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.‌

ಸಿನಿಮಾ

ವರದಿ: ಅರುಣ್ ಜಿ.,

ಈಗಾಗಲೇ ಟೀಸರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರುವ “ಸೈರನ್” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ‌ಡಾಲಿ ಧನಂಜಯ, ರಾಕ್ ಲೈನ್ ವೆಂಕಟೇಶ್, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಪತ್ರಕರ್ತ ರಂಗನಾಥ್ ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೇಲರ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ‌. ಚಿತ್ರ ಮೇ 26 ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ‌.

ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಮಗ ಪ್ರವೀರ್ ಶೆಟ್ಟಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಡೆಕ್ಕನ್ ಕಿಂಗ್ ಬ್ಯಾನರ್‌ನಲ್ಲಿ ಬಿಜು ಶಿವಾನಂದ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ರಾಜಾ ವೆಂಕಯ್ಯ ನಿರ್ದೇಶಿಸಿದ್ದಾರೆ. ಕಳೆದ 30 ವರ್ಷಗಳಿಂದ ನಿರ್ದೇಶಕ ಮುರುಗದಾಸ್ ಸೇರಿದಂತೆ ಹಲವರ ಬಳಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ರಾಜಾ ವೆಂಕಯ್ಯ ಕೆಲಸ ಮಾಡಿದ್ದಾರೆ. “ಸೈರನ್” ಅವರ ನಿರ್ದೇಶನದ ಮೊದಲ ಕನ್ನಡ ಸಿನಿಮಾ.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಡಾಲಿ ಧನಂಜಯ್, ‘ಪ್ರವೀರ್ ಶೆಟ್ಟಿ ಅವರನ್ನು ಮೊದಲು ನೋಡಿದಾಗ ಚಿಕ್ಕ ಹುಡುಗ. ಈಗ ಹೀರೋ ಆಗಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಹೆಚ್ಚಾಗಿ ಅವಕಾಶ ಸಿಗಲಿ’ ಎಂದು ಹಾರೈಸಿದರು.

ಇದನ್ನೂ ಓದಿ: ವೆಬ್ ಸಿರೀಸ್ ಲೋಕಕ್ಕೆ ವಿಕ್ರಮ್ ರವಿಚಂದ್ರನ್ ಹಾಗೂ ಅದಿತಿ ಪ್ರಭುದೇವ ಎಂಟ್ರಿ: ಇಂದಿನಿಂದ ಜಿಯೋ ಸಿನಿಮಾದಲ್ಲಿ ‘ಲವ್ ಯೂ ಅಭಿ’ ಉಚಿತ!

‘ಕನ್ನಡ ಎಂದು ಬಂದಾಗ ಹೋರಾಟ ನೆನಪಾಗುತ್ತದೆ. ನಾನು ಹಲವಾರು ವರ್ಷಗಳಿಂದ ಪ್ರವೀಣ್ ಶೆಟ್ಟಿ ಅವರನ್ನು ನೋಡುತ್ತಾ ಬಂದಿದ್ದೇನೆ. ಅವರ ಮನೆಯಿಂದ ಚಿತ್ರರಂಗಕ್ಕೆ ಒಂದು ಉಡುಗೊರೆಯಾಗಿ ಮಗನನ್ನು ಕೊಡುತ್ತಿದ್ದಾರೆ. ಟ್ರೇಲರ್ ನೋಡಿದಾಗ ಹೊಸ ಹುಡುಗ ಅನಿಸಲಿಲ್ಲ. ಅಷ್ಟು ಚೆನ್ನಾಗಿ ನಟಿಸಿದ್ದಾರೆ ಪ್ರವೀರ್. ಹೊಸದಾಗಿ ಬರುವವರು ಗುರಿ ಇಟ್ಟುಕೊಂಡು ಬರಬೇಕು ಜೊತೆಗೆ ತಾಳ್ಮೆ ಇರಬೇಕು’ ಎಂದರು ರಾಕ್ ಲೈನ್ ವೆಂಕಟೇಶ್. 

ಚಿತ್ರದ ನಾಯಕ ಪ್ರವೀರ್ ಶೆಟ್ಟಿ ಮಾತನಾಡಿ ‘ನಾನು ಈ ದಿನಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದೆ.  ಶ್ರೀಮುರಳಿ ಅವರು ಟ್ರೇಲರ್‌ಗೆ ಧ್ವನಿ ಕೊಟ್ಟಿದ್ದು ಮತ್ತಷ್ಟು ಶಕ್ತಿ ಬಂದಿದೆ. ನಿರ್ದೇಶಕರು ಶ್ರಮವಹಿಸಿ ಸಿನಿಮಾ ಮಾಡಿದ್ದಾರೆ. ನಿಮ್ಮೆಲ್ಲರ ಸಹಕಾರ ಇರಲಿ’ ಎಂದರು. 

‘ಮೂಲತಃ ನಾನು ಚೆನ್ನೈನವನು. “ಸೈರನ್” ಚಿತ್ರದ ಮೂಲಕ ಪ್ರವೀರ್ ಶೆಟ್ಟಿ ಲಾಂಚ್ ಆಗುತ್ತಿದ್ದಾರೆ. ಒಳ್ಳೆಯ  ನಟನಾಗುವ ನಿರೀಕ್ಷೆ ಇದೆ’ ಎಂದರು ತಮಿಳು ನಟ ದೀನಾ, ಚಿತ್ರದ ನಾಯಕಿ ಲಾಸ್ಯ, ನಟಿ ಸ್ಪರ್ಶ ರೇಖಾ, ಸಂಗೀತ ನಿರ್ದೇಶಕ ಭಾರದ್ವಾಜ್, ಛಾಯಾಗ್ರಾಹಕ ನಾಗೇಶ್ ಆಚಾರ್ಯ ಮುಂತಾದವರು ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು.

ಸಿನಿಮಾ

ವರದಿ: ಆರುಣ್ ಜಿ.,

ಪರಭಾಷೆಗಳಲ್ಲಿ ವೆಬ್ ಸಿರೀಸ್‌ಗಳ ಟ್ರೆಂಡ್ ಜೋರಾಗಿದೆ. ದೊಡ್ಡ ದೊಡ್ಡ ಸ್ಟಾರ್ಸ್ ವೆಬ್ ಸಿರೀಸ್ ಪ್ರಪಂಚಕ್ಕೆ ಎಂಟ್ರಿ ಕೊಡ್ತಿದ್ದಾರೆ. ಆದರೆ ಕನ್ನಡದಲ್ಲಿ ವೆಬ್ ಸಿರೀಸ್ ಗಳ ಸಂಖ್ಯೆ ಕಡಿಮೆ ಇದೆ ಎಂಬ ಮಾತಿತ್ತು. ಈಗ ಟ್ರೆಂಡ್ ಬದಲಾಗಿದೆ. ಕನ್ನಡದಲ್ಲಿಯೂ ವೆಬ್ ಸಿರೀಸ್ ಜಮಾನ ಶುರುವಾಗಿದೆ. 

ಮನರಂಜನಾ ಲೋಕದಲ್ಲೀಗ ಹೊಸ ಅವೇಗ ಸೃಷ್ಟಿಸಿರುವ ಜಿಯೋ ಸಿನಿಮಾ, ಕನ್ನಡಲ್ಲಿ ವೆಬ್ ಸಿರೀಸ್ ಆರಂಭಿಸಿದೆ. ಅದರ ಮೊದಲ ಭಾಗವಾಗಿ ‘ಲವ್ ಯೂ ಅಭಿ’ ಎಂಬ ಸಿರೀಸ್ ಶುರು ಮಾಡಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಸುಪುತ್ರ ವಿಕ್ರಮ್ ರವಿಚಂದ್ರನ್ ಹಾಗ ಅದಿತಿ ಪ್ರಭುದೇವ ‘ಲವ್ ಯೂ ಅಭಿ’ ಮೂಲಕ ವೆಬ್ ಸಿರೀಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಂದಿನಿಂದ ಜಿಯೋ ಸಿನಿಮಾದಲ್ಲಿ ಈ ಸಿರೀಸ್ ಸ್ಕ್ರೀಮ್ ಆಗ್ತಿದೆ.

ಏಳು ಎಪಿಸೋಡ್‌ಗಳನ್ನು ಒಳಗೊಂಡ ಈ ಸಿರೀಸ್ ಉಚಿತವಾಗಿ ನೋಡುವ ಅವಕಾಶವನ್ನು ಜಿಯೋ ಸಿನಿಮಾ ಪ್ರೇಕ್ಷಕರಿಗೆ ಕಲ್ಪಿಸಿದೆ. ಕಾಳಿ ವೇಲಾಯುಧಂ ನಿರ್ಮಾಣ ಮಾಡಿ, ನಿರ್ದೇಶಿಸಿರುವ ‘ಲವ್ ಯೂ ಅಭಿ’ ಸಿರೀಸ್‌ನಲ್ಲಿ ವಿಕ್ಕಿ ಶಿವ ಎಂಬ ಪಾತ್ರದಲ್ಲಿ ನಟಿಸಿದ್ರೆ, ಅದಿತಿ ಅಭಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚಿತ್ರರಂಗದ ಗಣ್ಯರಿಂದ ಬಿಡುಗಡೆಯಾಯಿತು “ಸೈರನ್” ಟ್ರೇಲರ್: ಮೇ 26 ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆ!

ಕನ್ನಡ ದೃಶ್ಯಮಾಧ್ಯಮ ಲೋಕಕ್ಕೆ ಹೊಸ ಫ್ಲೇವರ್ ಪರಿಚಯಿಸಲಿರುವ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೊಸ ಉತ್ಸಾಹದ ನಟರ ಜೊತೆಗೆ ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್‌ರಾಜ್ ಹೀಗೆ ಅನುಭವಿ ಕಲಾವಿದರ ದಂಡೂ ಇದೆ. ‘ಲವ್‌ ಯು ಅಭಿ’ಗೆ ಅರುಣ್ ಬ್ರಹ್ಮ  ಕ್ಯಾಮೆರಾ ಚಳಕವಿದ್ದು, ಪ್ರದಿಪ್‌ ರಾಘವ್ ಸಂಕಲನ ಮಾಡಿದ್ದಾರೆ. ನಿಜಿಲ್‌ ದಿನಕರ್‍ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವನ್ನು ನಿರ್ವಹಿಸಿದ್ದಾರೆ. ಅಭಿಲಾಷ್‌ ಗೌಡ ಮತ್ತು ಜಿ.ವಿ.ಸತೀಶ್‌ ಕುಮಾರ್ ಜಂಟಿಯಾಗಿ ಮಾತು ಪೋಣಿಸಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್

2022-23ನೇ ಸಾಲಿಗೆ ಕೇಂದ್ರ ಸರ್ಕಾರಕ್ಕೆ ರೂ.87,416 ಕೋಟಿ ಡಿವಿಡೆಂಡ್ ನೀಡಲು ಆರ್‌ಬಿಐ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದಂದಿನಿಂದ ಆರ್‌ಬಿಐಗೆ ಆದಾಯ ಹರಿದು ಬರುತ್ತಿದೆ.

ಜನರು ಬ್ಯಾಂಕ್‌ಗಳಿಂದ ಹಣ ಸಂಪಾದಿಸಲಿ ಅಥವಾ ಇಲ್ಲದಿರಲಿ, ಬ್ಯಾಂಕ್‌ಗಳು ಮಾತ್ರ ಜನರಿಂದ ಉತ್ತಮ ಹಣವನ್ನು ಗಳಿಸುತ್ತವೆ. ಇದಲ್ಲದೆ, ರಿಸರ್ವ್ ಬ್ಯಾಂಕ್‌ನ ಆದಾಯವು ಕೂಡ ಏರುತ್ತಲೇ ಇದೆ. ಅದು ಹೇಗೆ ಎಂದು ನೀವು ಕೇಳಬಹುದು?

ಭಾರತೀಯ ರಿಸರ್ವ್ ಬ್ಯಾಂಕಿನ ಆಡಳಿತ ಮಂಡಳಿಯು 2022-23ನೇ ಸಾಲಿಗೆ ಕೇಂದ್ರ ಸರ್ಕಾರಕ್ಕೆ ರೂ.87,416 ಕೋಟಿ ಲಾಭಾಂಶವನ್ನು ಅನುಮೋದಿಸಿದಾಗಿನಿಂದ ರಿಸರ್ವ್ ಬ್ಯಾಂಕಿನ ಆದಾಯವು ಹರಿದುಬರುತ್ತಿದೆ ಎಂದು ಹೇಳಲಾಗುತ್ತದೆ!

ಆರ್‌ಬಿಐ ಸಾಮಾನ್ಯವಾಗಿ ತನ್ನ ಲಾಭವನ್ನು ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಲಾಭಾಂಶವಾಗಿ ನೀಡುತ್ತದೆ. ಈ ಮೂಲಕ 2022-23ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ರೂ.87,416 ಕೋಟಿ ಡಿವಿಡೆಂಡ್ ನೀಡಲು ರಿಸರ್ವ್ ಬ್ಯಾಂಕ್ ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕ್‌ನಿಂದ ಕೇವಲ 48,000 ಕೋಟಿ ರೂಪಾಯಿ ಲಾಭಾಂಶವನ್ನು ಪಡೆಯಬಹುದೆಂದು ನಿರೀಕ್ಷಿಸಿತ್ತು. ಆದರೆ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಸುಮಾರು ದುಪ್ಪಟ್ಟು ಮೊತ್ತವನ್ನು ನೀಡಲಿದೆ.

ನರೇಂದ್ರ ಮೋದಿಯವರ ಮತ್ತೊಂದು ನೋಟು ನಿಷೇಧ! ಸಿದ್ದರಾಮಯ್ಯ

ಚಾಲ್ತಿಯಲ್ಲಿರುವ ಜಾಗತಿಕ ಮತ್ತು ರಾಜಕೀಯ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಆರ್‌ಬಿಐ ಸಹ ಅನುಮೋದನೆ ಪಡೆದಿರುವ ಲಾಭಾಂಶವನ್ನು ಈ ವರ್ಷ ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು ಎಂದು ಹೇಳಿದೆ.

ಕಳೆದ 2012-13ನೇ ಸಾಲಿನಲ್ಲಿ ಆರ್‌ಬಿಐ ಕೇವಲ ರೂ.33,000 ಡಿವಿಡೆಂಡ್ ನೀಡಿತ್ತು. ಆದರೆ 2019ರಲ್ಲಿ ಆರ್‌ಬಿಐ ರೂ.1,76,000 ಕೋಟಿಯನ್ನು ಡಿವಿಡೆಂಡ್‌ ರೂಪದಲ್ಲಿ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಅದರ ನಂತರ, 2021ರಲ್ಲಿ ರೂ.1,00,000 ಕೋಟಿಯವರೆಗೆ ಲಾಭಾಂಶವನ್ನು ನೀಡಿತು ಎಂಬುದು ಗಮನಾರ್ಹ.

ಆರ್‌ಬಿಐ ಲಾಭಾಂಶವನ್ನು ಹೆಚ್ಚಿಸಿರುವ ಅದೇ ಸಂದರ್ಭದಲ್ಲಿ, ಭವಿಷ್ಯದ ತುರ್ತು ವೆಚ್ಚಗಳನ್ನು ಪೂರೈಸಲು ಅಗತ್ಯವಿರುವ ನಿಧಿಯ ಮಟ್ಟವನ್ನೂ ಸ್ವಲ್ಪಮಟ್ಟಿಗೆ ಹೆಚ್ಚಿಸಿದೆ. ದರವು ಮೊದಲು ಶೇ5.50 ಇತ್ತು; ಈಗ ಅದನ್ನು ಶೇಕಡಾ 6ಕ್ಕೆ ಹೆಚ್ಚಿಸಲಾಗಿದೆ.

ಇಷ್ಟು ಆದಾಯ ಹೇಗೆ ಬಂದವು?
ಆರ್‌ಬಿಐ, ಕೇಂದ್ರ ಸರ್ಕಾರಕ್ಕೆ ಇಷ್ಟೊಂದು ಡಿವಿಡೆಂಡ್ ಆದಾಯವನ್ನು ನೀಡಲು, ಅದಕ್ಕೆ ಇಷ್ಟೊಂದು ಆದಾಯ ಹೇಗೆ ಬರುತ್ತದೆ ಎಂದು ನೀವು ಕೇಳಬಹುದು?

ಆರ್‌ಬಿಐಗೆ ದೇಶದ ವಿವಿಧ ಬ್ಯಾಂಕ್‌ಗಳ ಮೂಲಕ ಆದಾಯ ಸಿಗುವುದು ಒಂದು ವಿಧ. ಆದಾಯದ ಮತ್ತೊಂದು ಪ್ರಮುಖ ರೂಪವೆಂದರೆ, ಡಾಲರ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು. ಭಾರತೀಯ ರೂಪಾಯಿ ಎದುರು ಅಮೆರಿಕ ಡಾಲರ್ ಬೆಲೆಯು ರೂ.82ರಷ್ಟಿದೆ. ಅಂದರೆ 82 ರೂಪಾಯಿ ಕೊಟ್ಟರೆ ಒಂದು ಅಮೆರಿಕ ಡಾಲರ್ ನಿಮಗೆ ಸಿಗುತ್ತದೆ.

ಹೊಸ 2000 ರೂಪಾಯಿ ನೋಟು ಮತ್ತೆ ಬಿಡುಗಡೆ ಆಗಲಿದೆಯೇ?

ಆದರೆ ಆರ್‌ಬಿಐ ಹೊಂದಿರುವ ಒಂದು ಅಮೆರಿಕನ್ ಡಾಲರ್‌ನ ಸರಾಸರಿ ಮೌಲ್ಯವು 62 ರಿಂದ 65 ರೂಪಾಯಿಗಳಾಗಿರುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಆರ್‌ಬಿಐ ಒಂದು ಡಾಲರ್ ಮಾರಿದರೆ ಅದಕ್ಕೆ ರೂ.17 ರಿಂದ ರೂ.20 ರವರೆಗೆ ಲಾಭ ಸಿಗಬಹುದು! ಈ ಡಾಲರ್‌ಗಳನ್ನು ಆಗಾಗ ಖರೀದಿಸಿ ಮಾರಾಟ ಮಾಡುವುದರಿಂದ ಆರ್‌ಬಿಐ ಸ್ವಲ್ಪ ಲಾಭವನ್ನೂ ಗಳಿಸುತ್ತದೆ. ಡಾಲರ್ ಮೌಲ್ಯವನ್ನು ತುಂಬಾ ಕಡಿಮೆ ಅಥವಾ ಹೆಚ್ಚು ಹೋಗದಂತೆ ನಿಯಂತ್ರಿಸಲೂ ಮಾಡಬಹುದು!

ನಮ್ಮ ದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಹಣದುಬ್ಬರವನ್ನು ಸರಿಯಾಗಿ ನಿಯಂತ್ರಿಸುವ ಕೆಲಸವನ್ನು ಮಾಡುತ್ತಾ, ಕರೆನ್ಸಿಗಳನ್ನು ಸರಿಯಾದ ರೀತಿಯಲ್ಲಿ ಖರೀದಿಸಿ ಮತ್ತು ಮಾರಾಟ ಮಾಡುವ ಕೆಲಸವನ್ನೂ ಮಾಡಿ, ಭಾರಿ ಲಾಭವನ್ನು ಗಳಿಸಿ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಇದರಿಂದ ಆರ್‌ಬಿಐಗೆ ಹೆಚ್ಚು ಆದಾಯ ಸಿಗುತ್ತದೆ.

ರಾಜಕೀಯ

ಭಾರತದಲ್ಲಿ ರೂ.2000 ನೋಟುಗಳನ್ನು ಹಿಂಪಡೆಯಲು ಆರ್‌ಬಿಐ ನಿರ್ಧರಿಸಿದೆ. ಅದರಂತೆ ಭಾರತದಲ್ಲಿ ರೂ.2000 ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಬ್ಯಾಂಕಿಂಗ್ ಸೇವೆಗಳನ್ನು ಬಳಸುವ ಸಾರ್ವಜನಿಕರಿಗೆ ರೂ.2000 ನೋಟುಗಳನ್ನು ನೀಡದಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.

“ಜನರು ತಮ್ಮ ಬಳಿಯಿರುವ ರೂ.2000 ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಬಹುದು. ಸೆಪ್ಟೆಂಬರ್ 30ರ ನಂತರ ಭಾರತದಲ್ಲಿ ರೂ.2000 ನೋಟುಗಳ ವ್ಯವಹಾರ ಇರುವುದಿಲ್ಲ” ಎಂದು ಆರ್‌ಬಿಐ ಘೋಷಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯನವರು, “ಬಿಜೆಪಿ ಸರ್ಕಾರಕ್ಕೆ ತಮ್ಮದೇ ನೀತಿಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಬೇಸರದ ಸಂಗತಿ” ಎಂದು ವ್ಯಂಗ್ಯವಾಡಿದ್ದಾರೆ.

“ಈಗ ರೂ.2000 ಮೌಲ್ಯದ ನೋಟುಗಳನ್ನು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ರೂ.500 ಮತ್ತು ರೂ.1000 ನೋಟುಗಳನ್ನು ನಿಷೇಧ ಮಾಡಿದಾಗ ತಿಳಿಸಿದ್ದ ಯಾವ ಉದ್ದೇಶಗಳು ಈಡೇರಿವೆ ಎನ್ನುವುದನ್ನು ದೇಶದ ಜನರಿಗೆ ಮೊದಲು ತಿಳಿಸಬೇಕು.

2016ರಲ್ಲೇ ರೂ.2000 ನೋಟುಗಳನ್ನು ಬ್ಯಾನ್ ಮಾಡುವ ಯೋಜನೆ ಇದ್ದಿದರೆ ಅದನ್ನು ಏಕೆ ಪರಿಚಯಿಸಿದರು? ತಮ್ಮ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಈಗ ರೂ.2000 ಮೌಲ್ಯದ ನೋಟು ನಿಷೇಧಿಸುವುದಿದ್ದರೆ 2016ರಲ್ಲಿ ಅದನ್ನು ಚಲಾವಣೆಗೆ ತಂದದ್ದು ಯಾಕೆ? ಯಾವ ಕಾರಣಕ್ಕಾಗಿ ಈಗ ಇದನ್ನು ನಿಷೇಧಿಸಲಾಗಿದೆ? ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರೆ.

 

ಬೆಂಗಳೂರು

ಕರ್ನಾಟಕ ಪರೀಕ್ಷಾ ಪ್ರಾಧೀಕಾರದ ವತಿಯಿಂದ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯು (CET) ದಿನಾಂಕ: 20-05-2023 ಮತ್ತು 21-05-2023 ರಂದು ನಡೆಯಲಿದ್ದು, ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಷವನ್ನು ನಿಷೇಧಿತ ಸ್ಥಳವೆಂದು ಘೋಷಿಸಲಾಗಿದೆ. ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಕೇಂದ್ರಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.

“ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (CET) ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ದೃಷ್ಟಿಯಿಂದ, ಹಾಗೂ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಇವರ ಸೂಚನೆಯ ಮೇರೆಗೆ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 144ನೇ ಪ್ರರಕರಣದ ಅನ್ವಯ ಪ್ರದತ್ತರವಾದ ಅಧಿಕಾರವನ್ನು ಚಲಾಯಿಸಿ, ದಿನಾಂಕ: 20-05-2023 ರಂದು ಬೆಳಿಗ್ಗೆ 9-00 ಗಂಟೆಯಿಂದ ಮಧ್ಯಾಹ್ನ 3-50 ಗಂಟೆಯವರೆಗೆ ಮತ್ತು ದಿನಾಂಕ: 21-05-2023 ಬೆಳಿಗ್ಗೆ 9-00 ಗಂಟೆಯಿಂದ ಮಧ್ಯಾಹ್ನ 3-50 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಲಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಹಾಗೂ ಸದರಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಘೋಷಿಸಿ ಪ್ರತಿಬಂಧಕಾಜ್ಞೆಯನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ” ಎಂದು ವಿಷೇಶ ಪೊಲೀಸ್ ಆಯುಕ್ತರು, ಸಂಚಾರ ಮತ್ತು ಪೊಲೀಸ್ ಆಯುಕ್ತರು (ಪ್ರಭಾರ) ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಎಂ.ಎ.ಸಲೀಂ ಅವರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

     

ಕ್ರೈಂ ರಿಪೋರ್ಟ್ಸ್

ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಾಧಿಗಳು ಮುಗಿ ಬೀಳುತ್ತಿದ್ದಾರೆ. ದರ್ಶನ ಪಡೆದು ಸುಸ್ತಾಗಿ ಬರುವ ಭಕ್ತಾಧಿಗಳು, ಲಡ್ಡು ಕೌಂಟರ್ ಗಳಲ್ಲಿ ಬಹಳ ಹೊತ್ತು ಕಾದು ಲಾಡನ್ನು ಪಡೆಯಬೇಕಾದ ಪರಿಸ್ಥಿತಿಯಿದೆ. ಇದನ್ನು ಬಳಸಿಕೊಂಡು ಹೆಚ್ಚುವರಿ ಬೆಲೆಗೆ ಲಾಡುಗಳನ್ನು ಹೊರಗೆ ಮಾರಾಟ ಮಾಡಲಾಗುತ್ತಿದೆ.

ಲಡ್ಡು ತಯಾರಿಸುವ ಘಟಕದಿಂದ ಟ್ರೇಗಳಲ್ಲಿ ಲಡ್ಡುಗಳನ್ನು ಜೋಡಿಸಿ, ಕನ್ವೇಯರ್ ಬೆಲ್ಟ್ ಮೂಲಕ ಪ್ರಸಾದ ಮಾರಾಟ ಕೌಂಟರ್‌ ಬಳಿ ಸಾಗಿಸಲಾಗುತ್ತದೆ. ಅಲ್ಲಿಂದ ಟ್ರಾಲಿಗಳನ್ನು ಬಳಸಿ ಪ್ರಸಾದ ಕೌಂಟರ್‌ಗಳಿಗೆ ಲಡ್ಡುಗಳನ್ನು ತೆಗೆದುಕೊಂಡು ಹೋಗುತ್ತಾರೆ.

ಈ ಕೆಲಸಕ್ಕೆ ನಿಯೋಜನೆಗೊಂಡಿರುವ ನೌಕರರು, ಮಾರ್ಗ ಮಧ್ಯೆ ಲಡ್ಡುಗಳನ್ನು ಕದ್ದು, ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಗೌಪ್ಯ ಮಾಹಿತಿಯು ದೇವಸ್ತಾನದ ವಿಜಿಲೆನ್ಸ್ ಅಧಿಕಾರಿಗಳಿಗೆ ಲಭಿಸಿತು. ಮಾಹಿತಿ ಮೇರೆಗೆ ದೇವಸ್ಥಾನದ ವಿಜಿಲೆನ್ಸ್ ಅಧಿಕಾರಿಗಳು ಲಡ್ಡು ಸಾಗಾಟದ ಮೇಲೆ ನಿಗಾ ವಹಿಸಿದ್ದರು.

ಆ ವೇಳೆ ದೇವಸ್ಥಾನದ ಐವರು ನೌಕರರು 15 ಟ್ರೇಗಳಲ್ಲಿ ಇಟ್ಟಿದ್ದ 750 ಲಾಡುಗಳನ್ನು ಕದ್ದು, ತೆಗೆದುಕೊಂಡು ಹೋಗುವುದನ್ನು ಕಂಡ ವಿಜಿಲೆನ್ಸ್ ಅಧಿಕಾರಿಗಳು ಅವರನ್ನು ಸುತ್ತುವರಿದು ಹಿಡಿದರು. ಅದಲ್ಲದೇ ಈ ಲಾಡು ಖದೀಮರು ಇದುವರೆಗೂ 35 ಸಾವಿರ ಲಡ್ಡುಗಳನ್ನು ಕದ್ದು ಹೆಚ್ಚುವರಿ ಬೆಲೆಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ದೇವಸ್ಥಾನದ 5 ಜನ ನೌಕರರನ್ನು ಬಂಧಿಸಿರುವ ವಿಜಿಲೆನ್ಸ್ ಅಧಿಕಾರಿಗಳು, ಈ ಘಟನೆಯಲ್ಲಿ ಇನ್ನು ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.