ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
December 2023 » Page 2 of 4 » Dynamic Leader
October 23, 2024
Home 2023 December (Page 2)
ದೇಶ

ನವದೆಹಲಿ: ಕಾಂಗ್ರೆಸ್ ಪಕ್ಷದ 138ನೇ ಸಂಸ್ಥಾಪನಾ ದಿನವನ್ನು ನಾಳೆ (ಡಿಸೆಂಬರ್ 28) ಆಚರಿಸಲಾಗುತ್ತಿದೆ. ಇದಕ್ಕಾಗಿ ನಾಗ್ಪುರದಲ್ಲಿ ಬೃಹತ್ ಸಾರ್ವಜನಿಕ ಸಭೆ ಹಾಗೂ ರ‍್ಯಾಲಿ ನಡೆಸಲು ಪಕ್ಷ ಮುಂದಾಗಿದೆ. ಇದರ ಬೆನ್ನಲ್ಲೇ ಜನವರಿ 14ರಿಂದ ಮಾರ್ಚ್ 20 ರವರೆಗೆ ಮಣಿಪುರದಿಂದ ಮುಂಬೈಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮುಂದಿನ ಹಂತದ ಯಾತ್ರೆ ಆರಂಭಿಸಲಿದ್ದಾರೆ ಎಂದು ಘೋಷಿಸಲಾಗಿದೆ.

ಕಾಂಗ್ರೆಸ್ ಪಕ್ಷವನ್ನು 28 ಡಿಸೆಂಬರ್ 1885 ರಂದು ಸ್ಥಾಪಿಸಲಾಯಿತು. ಆರಂಭದಲ್ಲಿ ವಿದ್ಯಾವಂತ ಭಾರತೀಯರಿಗೆ ರಾಜಕೀಯ ಸಬಲೀಕರಣವನ್ನು ಒದಗಿಸುವ ಗುರಿಯನ್ನು ಹೊಂದಿದ್ದ ಕಾಂಗ್ರೆಸ್ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಯಿತು. ಭಾರತದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಂಗ್ರೆಸ್ ತನ್ನ 138ನೇ ಸಂಸ್ಥಾಪನಾ ದಿನವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ. ಇದಕ್ಕಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಿದೆ.

ಕಾಂಗ್ರೆಸ್ ಪಕ್ಷವನ್ನು 28 ಡಿಸೆಂಬರ್ 1885 ರಂದು ಸ್ಥಾಪಿಸಲಾಯಿತು.

ಈ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಮತ್ತು ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಈ ಕುರಿತು ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಕೆ.ಸಿ.ವೇಣುಗೋಪಾಲ್ ಅವರು, “ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನವಾದ ನಾಳೆ ನಾಗ್ಪುರದಲ್ಲಿ ‘ನಾವು ಸಿದ್ಧರಿದ್ದೇವೆ’ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಎಲ್ಲಾ ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ರಾಹುಲ್ ಯಾತ್ರೆ:
2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಕೆಲಸಗಳೂ ನಡೆಯುತ್ತಿವೆ. ಜನವರಿ 14 ರಂದು ರಾಹುಲ್ ಮಣಿಪುರದಿಂದ ಮುಂಬೈಗೆ ಬಸ್ ಮೂಲಕ 6,200 ಕಿ.ಮೀ ದೂರದ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ‘ಭಾರತ್ ನ್ಯಾಯ ಯಾತ್ರ’ ಎಂಬ ಈ ಯಾತ್ರೆ ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳಲ್ಲಿ 66 ದಿನಗಳ ಕಾಲ (ಮಾರ್ಚ್ 20) ರಾಹುಲ್ ಗಾಂಧಿ ಬಸ್ಸಿನಲ್ಲಿ ಪ್ರಯಾಣ ಮಾಡಲಿದ್ದಾರೆ” ಎಂದು ಅವರು ಹೇಳಿದರು.

ದೇಶ

ನವದೆಹಲಿ: ‘ಭಾರತ್’ ಬ್ರಾಂಡ್‌ನಲ್ಲಿ ಒಂದು ಕೆಜಿ ಅಕ್ಕಿಯನ್ನು ರೂ.25ಕ್ಕೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.

ಭಾರತದ ಪ್ರಮುಖ ಆಹಾರವಾದ ಅಕ್ಕಿಯ ಬೆಲೆ ಗಗನಕ್ಕೇರಿದೆ. ನಿರಂತರವಾಗಿ ಹೆಚ್ಚುತ್ತಿರುವ ಹಣದುಬ್ಬರ ದರದಿಂದಾಗಿ ಭಾರತದಲ್ಲಿ ಅಕ್ಕಿಯ ಬೆಲೆ ಏರುತ್ತಲೇ ಇದೆ. ಈ ಬೆಲೆ ತಗ್ಗಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಕೇಂದ್ರ ಸರ್ಕಾರವು ‘ಭಾರತ್’ ಬ್ರಾಂಡ್‌ನಲ್ಲಿ ಒಂದು ಕಿಲೋ ಅಕ್ಕಿಯನ್ನು 25 ರೂ.ಗೆ ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

ಇದರಿಂದ ಬೆಲೆ ಏರಿಕೆಗೆ ಕಡಿವಾಣ ಬೀಳುವ ನಿರೀಕ್ಷೆ ಇದೆ. ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (NAFED) ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಮತ್ತು ಈ ಕಡಿಮೆ ಬೆಲೆಯ ಅಕ್ಕಿಯನ್ನು ಕೇಂದ್ರೀಯ ಬಂದರ್ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುವುದು ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಭಾರತ್ ಬ್ರಾಂಡ್ ಅಡಿಯಲ್ಲಿ ಗೋಧಿ ಹಿಟ್ಟು ಮತ್ತು ಬೇಳೆಕಾಳುಗಳನ್ನು ಮಾರಾಟ ಮಾಡುತ್ತಿದೆ ಎಂಬುದು ಗಮನಾರ್ಹ.

ಸಂಪಾದಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು
dynamicleaderdesk@gmail.com

ಕ್ರಿಸ್‌ಮಸ್ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸಮಾಜಕ್ಕೆ ಮಾರ್ಗದರ್ಶನ ನೀಡುವ ಮತ್ತು ಸೇವೆ ಮಾಡುವಲ್ಲಿ ಕ್ರಿಶ್ಚಿಯನ್ ಸಮುದಾಯದ ಕೊಡುಗೆಯನ್ನು ಭಾರತವು ಹೆಮ್ಮೆಯಿಂದ ಗುರುತಿಸುತ್ತದೆ ಎಂದು ಹೇಳಿದರು. ಇದು ಚುನಾವಣಾ ಕಾಲದಲ್ಲಿ ಅವರಿಗಾದ ತಾತ್ಕಾಲಿಕ ‘ಜ್ಞಾನೋದಯ’ ಅಷ್ಟೇ.

ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಆಗಿರುವ ತಾರತಮ್ಯ ಮತ್ತು ಅನ್ಯಾಯ ಸಣ್ಣದೇನಲ್ಲ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರೈಸ್ತರು ಹೆಮ್ಮೆಯ ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಈಗ ಬೊಬ್ಬಿಡುತ್ತಿದ್ದಾರೆ. ಆದರೆ, ಅವರು ಈ ಸೇವೆಯನ್ನು ಮತಾಂತರಗೊಳಿಸಲಿಕ್ಕಾಗಿಯೇ ಮಾಡುತ್ತಿದ್ದಾರೆ ಎಂದು ಆರೆಸ್ಸೆಸ್-ಬಿಜೆಪಿ ಪರಿವಾರದವರು ಇನ್ನೂ ದೂಷಣೆ ಮಾಡುತ್ತಿದ್ದಾರೆ.

ಗ್ರಹಾಂ ಸ್ಟೇನ್ಸ್ ಮತ್ತು ಕುಟುಂಬ

ಆಸ್ಟ್ರೇಲಿಯಾದ ಕ್ರಿಶ್ಚಿಯನ್ ಪಾದ್ರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರನ್ನು ಹಿಂದುತ್ವ ಪರಿವಾರದವರು ಸಜೀವ ದಹನ ಮಾಡಿದರು. ಆ ಹಂತಕರನ್ನು ಆರ್‌ಎಸ್‌ಎಸ್ ಪರಿವಾರ ರಕ್ಷಣೆ ಮಾಡಿತು. ಬುಡಕಟ್ಟು ಜನರ ಸೇವೆ ಮಾಡಿದ ಪಾದ್ರಿ ಸ್ಟಾನ್ ಸ್ವಾಮಿಯನ್ನು ಸುಳ್ಳು ಪ್ರಕರಣದಲ್ಲಿ ಜೈಲಿಗೆ ತಳ್ಳಿತು. ಅವರು ಜಾಮೀನು ಸಿಗದೆ ಜೈಲಿನಲ್ಲೇ ತಮ್ಮ ಕೊನೆಯುಸಿರೆಳೆದರು. ಇದು ಕ್ರೈಸ್ತ ಸಮುದಾಯದ ಕೊಡುಗೆಯನ್ನು ಅನುಮೋದಿಸುವ ಸಂಕೇತವಾ?

ಕರ್ನಾಟಕದಲ್ಲಿ ಮತಾಂತರ ನಿಷೇದ ಕಾಯ್ದೆಯನ್ನು ಜಾರಿಗೆ ತಂದು ಕ್ರೈಸ್ತರಿಗೆ ಅನಾವಶ್ಯಕವಾಗಿ ಕಿರುಕುಳ ನೀಡಲಾಯಿತು. “ಮತಾಂತರ ಮಾಡುತ್ತಿದ್ದಾರೆ; ಬೈಬಲ್ ಹಂಚುತ್ತಿದ್ದಾರೆ” ಎಂದು ಸುಳ್ಳು ಹೇಳಿಕೊಂಡು ಹಲವು ಚರ್ಚ್ ಗಳ ಮೇಲೆ ಹಿಂದೂ ಪರಿವಾರದವರಿಂದ ದಾಳಿ ಮಾಡಲಾಯಿತು. ಪೊಲೀಸರ ಸಹಭಾಗಿತ್ವದಲ್ಲೇ ಹಲವು ಚರ್ಚ್ ಗಳಿಗೆ ನುಗ್ಗಿ ದಾಂಧಲೆ ಮಾಡಿದ ವರದಿಗಳೂ ಇವೆ.

ಈಶಾನ್ಯ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಈಶಾನ್ಯ ಹಲವು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಯುತ್ತಿದೆ. ಕ್ರಿಶ್ಚಿಯನ್ನರಲ್ಲಿ ಬಿಜೆಪಿ ಸ್ವೀಕಾರ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ.

ಫಾದರ್ ಸ್ಟಾನ್ ಸ್ವಾಮಿ

ಚುನಾವಣೆಗೂ ಮುನ್ನ ಮಣಿಪುರದಲ್ಲಿ ಬಿಜೆಪಿ ಒಕ್ಕೂಟ ಆಡಳಿತ ನಡೆಸಿತ್ತು. ಮುಖ್ಯಮಂತ್ರಿಯ ಬೆಂಬಲದೊಂದಿಗೆ ಕ್ರೈಸ್ತ ಜನಾಂಗದ ಕುಕಿಗಳ ವಿರುದ್ಧ ಮತಾಂಧ ಮತ್ತು ಜನಾಂಗೀಯ ದಾಳಿಯನ್ನು ಪ್ರಾರಂಭಿಸಲಾಯಿತು. ಇಬ್ಬರು ಸಹೋದರಿಯರನ್ನು ವಿವಸ್ತ್ರಗೊಳಿಸಿ, ಬೀದಿಯಲ್ಲಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಈಗಲೂ ಆ ರಾಜ್ಯದಲ್ಲಿ ಕ್ರಿಶ್ಚಿಯನ್ ಜನರ ಮೇಲೆ ದಾಳಿ ಮುಂದುವರಿದಿದೆ. ಆ ರಾಜ್ಯದ ಕಡೆ ತಿರುಗಿಯೂ ನೋಡದ ಪ್ರಧಾನಿ ಈ ರೀತಿ ಮಾತನಾಡುತ್ತಿರುವುದು ಆಘಾತಕಾರಿಯಾಗಿದೆ. ಆದರೆ ಈ ರೀತಿ ಮಾತನಾಡುವುದು ಅವರಿಗೆ ಹೊಸದೇನಲ್ಲ.

ಮಾತು ಒಂದು, ಕ್ರಿಯೆ ಇನ್ನೊಂದು ಆರೆಸ್ಸೆಸ್ ಸಂಘಟನೆಯ ಲಕ್ಷಣ. ಆ ಶಾಲೆಯಲ್ಲಿ ಓದಿದ ನರೇಂದ್ರ ಮೋದಿ ಹೀಗೆ ಮಾತನಾಡುವುದರಲ್ಲಿ ಆಶ್ಚರ್ಯವೇನಿಲ್ಲ. ಅವರ ಕ್ರಿಸ್‌ಮಸ್ ದಿನದ ಭಾಷಣ ಎಷ್ಟು ಸುಳ್ಳಾಗಿತ್ತು ಎಂಬುದು ಕ್ರೈಸ್ತರಿಗೆ ಚೆನ್ನಾಗಿ ಗೊತ್ತಿರುತ್ತದೆ. ಅವರ ಮಾತಿನಿಂದಲ್ಲ, ಅವರು ಅನುಭವಿಸುವ ಯಾತನೆಗಳ ಆಧಾರದ ಮೇಲೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ರಾಜ್ಯ

ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ದ ಅಖಿಲ ಭಾರತೀಯ ಸಂಪರ್ಕ್ ಪ್ರಮುಖ್ ಆಗಿರುವ ರಾಮಲಾಲ್ ಅವರು ಹಾಗೂ ಇತರರು ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ.

ಆಹ್ವಾನ ಪತ್ರಿಕೆಯನ್ನು ತುಂಬು ಹೃದಯದಿಂದ ಸ್ವೀಕರಿಸಿಕೊಂಡ ಹೆಚ್.ಡಿ.ಕುಮಾರಸ್ವಾಮಿ ಅವರು “ನನ್ನನ್ನು ಆಹ್ವಾನಿಸಿದ ಅವರೆಲ್ಲರಿಗೂ (ಸ್ವಯಂ ಸೇವಕ ಸಂಘ-RSS) ಧನ್ಯವಾದಗಳು. ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಹಾಗೂ ಶ್ರೀರಾಮ ಸೇವಾ ಕೈಂಕರ್ಯದಲ್ಲಿ ಕುಟುಂಬ ಸಮೇತವಾಗಿ ಸಂತೋಷದಿಂದ ಭಾಗಿಯಾಗುತ್ತೇನೆ” ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಗಮನಾರ್ಹ.

ರಾಜ್ಯ

ಸಂವಿಧಾನ ವಿರೋಧಿ, ಕೋಮು ದ್ವೇಷ ಹರಡುವ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಈ ಕೂಡಲೇ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕಾನೂನು ಕ್ರಮ ಜರುಗಿಸಿ ಬಂಧಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯ.

ಇತ್ತೀಚಿಗೆ ಶ್ರೀರಂಗಪಟ್ಟಣದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ಮುಸ್ಲಿಂ ಮಹಿಳೆಯರನ್ನು ಉದ್ದೇಶಿಸಿ ನೀಡಿದ ಹೇಳಿಕೆ ಕೋಮು ಪ್ರಚೋದನಕಾರಿ ಆಗಿದೆ. ಭಟ್ ಈ ಮೂಲಕ ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಸಿ, ಮತೀಯ ಉದ್ವಿಗ್ನತೆ ಸೃಷ್ಟಿಸುವ ಮತ್ತು ಕೋಮು ಗಲಭೆಗಳನ್ನು ಹುಟ್ಟು ಹಾಕುವ ರೀತಿಯ ಹೇಳಿಕೆ ನೀಡಿದ್ದಾರೆ. ಇದು ಸಂವಿಧಾನ ವಿರೋಧಿ ಎಂದು ಕರ್ನಾಟಕ ಮುಸ್ಲಿಂ ಯೂನಿಟಿಯ ಅಧ್ಯಕ್ಷ ಜಬ್ಬಾರ್ ಕಲ್ಬುರ್ಗಿ ಹೇಳಿದ್ದಾರೆ.  

ಅಲ್ಪಸಂಖ್ಯಾತರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ಜೊತೆಗೆ ಮುಸ್ಲಿಂ ಮಹಿಳೆಯ ಗೌರವ ಘನತೆಗಳಿಗೆ ಕುಂದುಂಟು ಮಾಡಿರುವ ಇವರ ಕೋಮುದ್ವೇಷಿ ಹೇಳಿಕೆ ಖಂಡನೀಯ. ಕರ್ನಾಟಕ ರಾಜ್ಯದಲ್ಲಿ ಶಾಂತಿ ಭಂಗವನ್ನು ಉಂಟು ಮಾಡುವ ಮತ್ತು ಮಹಿಳಾ ಹಕ್ಕುಗಳ ಉಲ್ಲಂಘನೆಯ ಹೇಳಿಗಳನ್ನು ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಶೀಘ್ರ ಹಾಗೂ ಸೂಕ್ತ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲು ಗೊಳಿಸಬೇಕು ಎಂದು ಸರ್ಕಾರವನ್ನು ಹಾಗೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಅವರೇ ನೇರಹೊಣೆ ಎಂದು ಹೇಳಿದ್ದಾರೆ.  

ಇತರೆ ಧರ್ಮ ಸಮುದಾಯದ ಹೆಣ್ಣು ಮಕ್ಕಳ ಕುರಿತು ಅಸಭ್ಯವಾಗಿ, ಅಶ್ಲೀಲವಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಆ ವೇದಿಕೆಯಲ್ಲಿ ಉಪಸ್ಥಿತರಿದ್ದ ಇತರೆ ಎಲ್ಲಾ ಮುಖಂಡರ ವಿರುದ್ಧವೂ ಕಾನೂನು ಕ್ರಮ ಜರುಗಿಸುವ ಹೊಣೆ ಸರಕಾರದ್ದಾಗಿದೆ. ಈ ಹೇಯ ಕೃತ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಪಕ್ಷದ ಮೌನವೂ ಸಹ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಾನೂನು ಬಾಹಿರ ಕೃತ್ಯವನ್ನು ಕೆಎಂಯು ಖಂಡಿಸುತ್ತದೆ. ಅಲ್ಲದೆ, ಸಂವಿಧಾನ ವಿರೋಧಿ, ಕೋಮು ದ್ವೇಷ ಹರಡುವ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಈ ಕೂಡಲೇ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕಾನೂನು ಕ್ರಮ ಜರುಗಿಸಿ ಬಂಧಿಸಲು ಕರ್ನಾಟಕ ಮುಸ್ಲಿಂ ಯುನಿಟಿ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.

ದೇಶ

ಶ್ರೀನಗರ: ಪಾಕಿಸ್ತಾನದೊಂದಿಗೆ ಮಾತುಕತೆಗೆ ಏಕೆ ಸಿದ್ಧರಿಲ್ಲ? ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ನಮ್ಮ ಸ್ನೇಹಿತರನ್ನು ಬದಲಾಯಿಸಬಹುದು. ಆದರೆ ನಮ್ಮ ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ವಾಜಪೇಯಿ ಹೇಳಿದ್ದರು. ನೆರೆಯ ದೇಶದೊಂದಿಗೆ ಸ್ನೇಹದಿಂದ ಇದ್ದರೆ ಇಬ್ಬರೂ ಪ್ರಗತಿ ಹೊಂದಬಹುದು. ಪಾಕಿಸ್ತಾನದೊಂದಿಗೆ ಮಾತುಕತೆ ಮುಂದುವರಿಸುವುದು ಅಗತ್ಯವಾಗಿದೆ. ಈಗ ನವಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ.

ನಾವು ಭಾರತದೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ ಎನ್ನುತ್ತಾರೆ. ನಾವು ಪಾಕಿಸ್ತಾನದೊಂದಿಗೆ ಏಕೆ ಮಾತನಾಡಲು ಸಿದ್ಧರಿಲ್ಲ? ಪಾಕಿಸ್ತಾನದೊಂದಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಇಸ್ರೇಲಿ ಪಡೆಗಳಿಂದ ಬಾಂಬ್ ದಾಳಿಗೊಳಗಾದ ಗಾಜಾದ ಪರಿಸ್ಥಿತಿ ನಮಗೂ ಬರಲಿದೆ. ಜಮ್ಮು ಮತ್ತು ಕಾಶ್ಮೀರ ಮುಂದಿನ ಗಾಜಾ ಆಗಲಿದೆ. ಎಂದು ಅವರು ಹೇಳಿದ್ದಾರೆ.

ದೇಶ

ನವದೆಹಲಿ: “ಬಡವರು ಮತ್ತು ನಿರ್ಗತಿಕರ ಸೇವೆಯಲ್ಲಿ ಕ್ರೈಸ್ತ ಸಮುದಾಯ ಮುಂಚೂಣಿಯಲ್ಲಿದೆ. ಅವರು ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ಅವರ ಶೈಕ್ಷಣಿಕ ಬೆಳವಣಿಗೆಗೆ ಸಹಾಯ ಮಾಡಲು ಅನೇಕ ಶಾಲೆಗಳನ್ನು ನಡೆಸುತ್ತಿದ್ದಾರೆ” ಎಂದು ಕ್ರಿಶ್ಚಿಯನ್ನರಿಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರಿಸ್‌ಮಸ್ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ದೆಹಲಿಯ ತಮ್ಮ ನಿವಾಸದಲ್ಲಿ ಪಾದ್ರಿಗಳು ಸೇರಿದಂತೆ ಪ್ರಮುಖ ಕ್ರಿಶ್ಚಿಯನ್ ಧಾರ್ಮಿಕ ಮುಖಂಡರುಗಳನ್ನು ಭೇಟಿ ಮಾಡಿದರು. ಅವರ ನಡುವೆ ಮಾತನಾಡಿದ ಮೋದಿ ಅವರು,”ಕ್ರಿಸ್‌ಮಸ್ ಹಬ್ಬದಂದು ವಿಶ್ವದ ಜನರಿಗೆ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ನನ್ನ ಶುಭಾಶಯಗಳು. ಇಂತಹ ವಿಶೇಷವಾದ ಶುಭದಿನದಂದು ನೀವೆಲ್ಲರೂ ನನ್ನ ನಿವಾಸಕ್ಕೆ ಬಂದಿರುವುದಕ್ಕೆ ನನಗೆ ಸಂತೋಷವಾಗಿದೆ. ಕ್ರಿಸ್ಮಸ್ ಹಬ್ಬ ಬಡವರ ಕಲ್ಯಾಣಕ್ಕಾಗಿ. ಬಡವರು ಮತ್ತು ನಿರ್ಗತಿಕರ ಸೇವೆಯಲ್ಲಿ ಕ್ರೈಸ್ತ ಸಮುದಾಯ ಮುಂಚೂಣಿಯಲ್ಲಿದೆ.

ಕ್ರೈಸ್ತರು ಸಾಮಾಜಿಕ ನ್ಯಾಯದ ಪರ ನಿಂತಿರುವ ಜನರು. ಅವರು ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ಅವರ ಶೈಕ್ಷಣಿಕ ಬೆಳವಣಿಗೆಗೆ ಸಹಾಯ ಮಾಡಲು ಅನೇಕ ಶಾಲೆಗಳನ್ನು ನಡೆಸುತ್ತಿದ್ದಾರೆ. ದೇಶಕ್ಕೆ ನಿಮ್ಮ ಕೊಡುಗೆಯನ್ನು ಭಾರತ ಹೆಮ್ಮೆಯಿಂದ ಅನುಮೋದಿಸುತ್ತದೆ. ಕೆಲವು ವರ್ಷಗಳ ಹಿಂದೆ ಪೋಪ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಇದು ನನಗೆ ಬಹಳ ಸ್ಮರಣೀಯ ಕ್ಷಣವಾಗಿತ್ತು.

ನಾವು ಸಾಮಾಜಿಕ ಸಾಮರಸ್ಯ, ಜಾಗತಿಕ ಭ್ರಾತೃತ್ವ, ಹವಾಮಾನ ಬದಲಾವಣೆ ಮತ್ತು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಅಂತರ್ಗತ ಅಭಿವೃದ್ಧಿ ಕುರಿತು ಚರ್ಚಿಸಿದ್ದೇವೆ” ಎಂದು ಹೇಳಿದರು.

ರಾಜ್ಯ

ಖಾಸಿಂ ಸಾಬ್ ಎ.

ಸಾವಿರಾರು ವರ್ಷಗಳ ಕಾಲದಿಂದ ವರ್ಣ ಜಾತಿಯ ಕಾರಣಕ್ಕಾಗಿ ಸಾಮಾಜಿಕ ನ್ಯಾಯ ಹಾಗೂ ಅಧಿಕಾರದ ಎಲ್ಲಾ ಅವಕಾಶಗಳಿಂದ ವಂಚಿತರಾಗಿರುವ ದಲಿತರು, ನಾಗರಿಕ ಹಕ್ಕುಗಳು ಮತ್ತು ಹಳ್ಳಿಯಿಂದ ದಿಲ್ಲಿಯವರೆಗಿನ ಎಲ್ಲಾ ರಾಜಕೀಯ ಅವಕಾಶಗಳಿಂದ ಇಂದಿಗೂ ವಂಚಿತರಾಗಿದ್ದಾರೆ.

ಡಾ.ಬಾಬಾಸಾಹೇಬ್ ಅಂಬೇಡ್ಕರರ ಸಂಸದೀಯ ಪ್ರಜಾಪ್ರಭುತ್ವದ ಸಂವಿಧಾನದ ಮೂಲಕವೇ ದಲಿತ, ಶೋಷಿತರ ಸಾಮಾಜಿಕ ನ್ಯಾಯ ಸಾಧ್ಯ. ಈ ಮೂಲಕವೇ ರಾಜಕೀಯ ಪಾಲುದಾರಿಕೆ, ಹಂಚಿಕೆ ಸಾಧ್ಯ ಎಂಬ ಕಲ್ಪನೆಗೆ ಭಾರತಕ್ಕೆ ದಲಿತ ಪ್ರಧಾನಿ ಎಂಬ ಕೂಗು ಹಿಂಬು ನೀಡುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಫಲವಾಗಿ ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯವನ್ನು ಪಡೆದರೂ, ಅದು ರಾಜಕೀಯ ಹಸ್ತಾಂತರವಾಗಿಯೇ ಉಳಿದಿದೆಯೆ ಹೊರತು ದೇಶದ ದಲಿತರ, ಮಹಿಳೆಯರ, ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಮರ, ಶೋಷಿತ ಸಮುದಾಯಗಳ ಪಾಲಿಗೆ ಈ ಸ್ವತಂತ್ರ ಇನ್ನು ಸಾಧ್ಯವಾಗಿಲ್ಲ. ಅಸಮಾನತೆಯ ಸಿದ್ಧಾಂತಗಳಲ್ಲಿಯೇ ಇಂದಿಗೂ ಜೀವಿಸುತ್ತಿರುವ ದೇಶದ ಜಾತಿಗ್ರಸ್ಥ, ಧರ್ಮಗ್ರಸ್ಥ ಹಾಗೂ ಪಾಳೆಗಾರಿಕೆಯ ವ್ಯವಸ್ಥೆಯಿಂದ  ಭಾರತೀಯ ರಾಜಕಾರಣ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಲಿಲ್ಲ.

ಭಾರತ ಸ್ವಾತಂತ್ರ್ಯದ ಎಂಟುವರೆ ದಶಕಗಳ ನಂತರದ ರಾಷ್ಟ್ರ ರಾಜಕಾರಣದ ಪ್ರಬಲ ಕೂಗು, ದೇಶಕ್ಕೆ ಒಬ್ಬ ದಲಿತ ಪ್ರಧಾನ ಮಂತ್ರಿ ಏಕೆ ಆಗಬಾರದು? ಅಥವಾ ಆಗಬೇಕು ಎಂಬುದಾಗಿದೆ. ಈ ಧ್ವನಿಯ ಹಿಂದೆಯೇ ಇದುವರೆಗೂ ಭಾರತ ಒಬ್ಬ ದಲಿತ ಅಸ್ಪೃಶ್ಯ ವ್ಯಕ್ತಿ ಅಥವಾ ಪ್ರತಿನಿಧಿ ದೇಶದ ಪ್ರಧಾನಿಯ ಹುದ್ದೆಗೇರಲಿಲ್ಲ ಅಥವಾ ಈ ಸ್ಥಾನಪಡೆಯಲು ಬಿಟ್ಟಿಲ್ಲ ಅಥವಾ ಈ ಹುದ್ದೆ ಅಲಂಕರಿಸಲು ಭಾರತೀಯ ಜಾತಿ ಕೇಂದ್ರೀತ ರಾಜಕಾರಣ ಒಪ್ಪಿಲ್ಲ ಎಂಬ ಕಟು ಸತ್ಯವೂ ಅಡಗಿದೆ. ಈ ನಗ್ನ ಸತ್ಯ ಕಾಂಗ್ರೆಸ್ ಪಕ್ಷವೂ ಸೇರಿ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೂ ಅನ್ವಯವಾದ ರಾಜಕೀಯ ನೀತಿಯೆ ಆಗಿದೆ.

ಭಾರತೀಯ ಸಾಮಾಜವು ಮೂಲತಃ ವರ್ಣ, ವರ್ಗ, ಜಾತಿಯಾದಾರಿತ ಮನಸ್ಥಿತಿಯುಳ್ಳದ್ದೆ ಆಗಿದ್ದು ಇಂತಹ ಸಾಮಾಜಿಕ ಸಂರಚನೆಯಿಂದ ಹುಟ್ಟಿದ ಎಲ್ಲಾ ರಾಷ್ಟೀಯ ಪ್ರಾದೇಶಿಕ ಪಕ್ಷಗಳೂ ಸಹ ದಲಿತ ಪ್ರಧಾನಿಯ ಕಲ್ಪನೆಯನ್ನು ಅಷ್ಟು ಸಹಜವಾಗಿ ಇದುವರೆಗೂ ಸ್ವೀಕರಿಸಲು, ಬೆಂಬಲಿಸಲು ಸಾಧ್ಯವಾಗಲಿಲ್ಲ. ಭಾರತದ ವರ್ತಮಾನದ ಅಸ್ಪೃಶ್ಯರ ರಾಜಕೀಯ ನಿರಾಳವೆಂಬಂತೆ ಇಂದು ದಲಿತ ಪ್ರಧಾನಿ ಎಂಬ ಮಾತು ಮುನ್ನೆಲೆಗೆ ಬಂದಿದೆ. ಅದೂ ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಒಕ್ಕೂಟವಾದ “ಇಂಡಿಯಾ” ಮೈತ್ರಿಕೂಟದಲ್ಲಿ ಪ್ರಸ್ತಾಪವಾಗಿದೆ.

ಖರ್ಗೆ ಹೆಸರಿನ ಮೂಲಕ ಇತಿಹಾಸದ ರಾಷ್ಟ ರಾಜಕಾರಣದಲ್ಲಿ ಇಂದು ಎರಡನೇಯ ಬಾರಿ ಒಬ್ಬ ದಲಿತ ರಾಜಕಾರಣಿಯ ಹೆಸರು ಪ್ರಧಾನಿ ಹುದ್ದೆಗಾಗಿ ಮುನ್ನಲೆಗೆ ಬಂದಿದೆ. ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಲ್ಲಿ 8 ಬಾರಿ ಚುಣಾವಣೆಯಲ್ಲಿ ಗೆದ್ದಿದ್ದ ಪ್ರಭಾವಿ ರಾಜಕೀಯ ಮುತ್ಸದ್ದಿ ಬಾಬು ಜಗಜೀವನ್ ರಾಮ್ ಅವರ ಹೆಸರು ಕೇಳಿ ಬಂದಿತ್ತು. 1977 ಮತ್ತು 1979ರಲ್ಲಿ ಎರಡು ಬಾರಿಯೂ ಇವರು ಪ್ರಧಾನಿಯಾಗುವ ಅವಕಾಶಗಳಿದ್ದರೂ ಕಾಂಗ್ರೆಸ್ ಪಕ್ಷದಲ್ಲಿದ್ದ ಜಾತಿಗ್ರಸ್ಥ ಮೇಲ್ಜಾತಿ ಮುಖಂಡರೇ ಅಡ್ಡಗಾಲಾದ ಪರಿಣಾಮ ಮೊದಲ ದಲಿತ ಪ್ರಧಾನಿಯಾಗುವ ಅವಕಾಶ ತಪ್ಪಿತ್ತು. ಇದರಿಂದ ಬೇಸತ್ತ ಜಗಜೀವನ್ ರಾಮ್ ಕೊನೆಗೆ ಪಕ್ಷದಿಂದ ಹೊರಬಂದು Congress for Democracy (CFD) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಆನಂತರ ಇವರ ಪಕ್ಷವನ್ನು ಜನತಾ ಸರ್ಕಾರದೊಂದಿಗೆ ವಿಲೀನಗೊಳಿಸಿ ಕೊನೆಗೆ ಉಪ ಪ್ರಧಾನಿಯಾದರು.

ಜಗತ್ತಿನ ರಾಜಕೀಯ ಇತಿಹಾಸ ಕಂಡಾಗ, ವರ್ಣ ಶ್ರೇಷ್ಠತೆಯ ಗೀಳಿನಲ್ಲಿಯೇ ನೂರಾರು ವರ್ಷಗಳು ಅಧಿಕಾರನಡೆಸಿದ ಜೊತೆಗೆ ನೂರು ವರ್ಷಗಳು ಜಗತ್ತಿನ ದೊಡ್ಡಣ್ಣನಾಗಿ ಆಳಿದ ಅಮೇರಿಕಾದಂತ ದೇಶವೂ ಸಹ ಬರಾಕ್ ಒಬಾಮರಂತ ಕರಿಯರನ್ನು ತನ್ನ ದೇಶದ ಅತ್ಯುನ್ನತ ಸ್ಥಾನವಾದ ಅಧ್ಯಕ್ಷ ಸ್ಥಾನವನ್ನು ನೀಡಿ, ಕಪ್ಪು ಜಜಾಂಗದ ಒಬ್ಬರಿಗೆ ಆಳುವ ಅವಕಾಶವನ್ನು ನೀಡಿತು. ಹಾಗೆಯೇ ಸೂರ್ಯ ಮುಳುಗದ ಸಾಮ್ರಾಜ್ಯವಾಗಿ, ಒಂದು ಕಾಲದಲ್ಲಿ ಭಾರತವನ್ನು ತನ್ನ ವಸಾಹತು ದೇಶವಾಗಿಸಿಕೊಂಡು ತನ್ನ ಆಡಳಿತಾವಧಿಯಲ್ಲಿ ತಮ್ಮ ಹೋಟಲ್ ಮತ್ತು ಕ್ಲಬ್ ಗಳಲ್ಲಿ ಭಾರತೀಯರು ಮತ್ತು ನಾಯಿಗಳಿಗೆ ಪ್ರವೇಶವಿಲ್ಲ ಎಂದು ನಾಮಫಲಕಗಳನ್ನು ಹಾಕಿ ತಮ್ಮ ವರ್ಣ ಶ್ರೇಷ್ಠತೆಯನ್ನು ಪ್ರದರ್ಶಿಸಿದ ಬ್ರಿಟಿಷರ ಬ್ರಿಟನ್ ದೇಶ ಕೂಡ ಇಂದು ಭಾರತೀಯನಾದ ರಿಷಿ ಸುನಕ್ ಅವರನ್ನು ತಮ್ಮ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿಕೊಂಡಿದೆ. ಆದರೆ ಭಾರತದಲ್ಲಿ ಮಾತ್ರ ಸ್ವಾತಂತ್ರ್ಯನಂತರವೂ ಕೂಡ ಬಹುಪಕ್ಷಿಯ ಸಂಸದಿಯ ಪ್ರಜಾಪ್ರಭುತ್ವದಲ್ಲಿ ಇಂದಿಗೂ ದಲಿತ ಪ್ರಧಾನಿಯನ್ನು ನೋಡಲು ಸಾಧ್ಯವಾಗಲಿಲ್ಲ. ಅಲ್ಲದೆ, ಸಮಾಜವಾದ, ಮಾರ್ಕ್ಸ್ ವಾದ, ಅಂಬೇಡ್ಕರ್ ವಾದ, ಪೆರಿಯಾರ್ ವಾದ, ಸಮ ಸಮಾಜವಾದ ಬಯಸುವ ಅನೇಕ ಪಕ್ಷಗಳು ಹಲವಾರು ರಾಜ್ಯಗಳಲ್ಲಿ ಅಧಿಕಾರ ಸ್ಥಾಪಿಸಿ ಆಡಳಿತ ನಡೆಸಲು ಸಾಧ್ಯವಾಗಿದ್ದರೂ ಇಂದಿನವರೆಗೂ ಯಾವುದೇ ಪಕ್ಷವು ತನ್ನದೆ ದೇಶದ ದಲಿತ, ಮುಸ್ಲಿಂ, ಮಹಿಳೆಯರಿಗೆ ದೇಶದ ಪ್ರಧಾನಿಯಾಗಲು ಬಿಟ್ಟಿಲ್ಲ.

ಇತ್ತೀಚೆಗೆ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ ಹಾಗೂ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ರವರು ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸುವ ಮೂಲಕ  ದಲಿತ ಪ್ರಧಾನಿ ಎಂಬ ಐತಿಹಾಸಿಕ ಕಲ್ಪನೆಗೆ ಮರು ಹುಟ್ಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಸಹ ಸದಸ್ಯ ಪಕ್ಷಗಳೇ  ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವ ಮಾತುಗಳನ್ನು ಆ ಒಕ್ಕೂಟದ ವೇದಿಕೆಯ ನಾಯಕರಿಂದಲೇ ವ್ಯಕ್ತವಾಗಿವೆ. ದೇಶದ ರಾಜಕೀಯದ ಮಟ್ಟಿಗೆ ಇದು ಪ್ರಮುಖ ಹಾಗೂ ಮಹತ್ವದ ಬೆಳವಣಿಯಾಗಿದೆ. ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪಗೊಂಡದ್ದು ಕಾಂಗ್ರೆಸೇತರ ಹಾಗೂ ಬಹುಜನ ಸಮಾಜ ಪಾರ್ಟಿ, ಲೋಕ ಜನಶಕ್ತಿ ಪಾರ್ಟಿ, ರೀ ಪಬ್ಲಿಕನ್ ಪಾರ್ಟಿ, ದಲಿತ್ ಪ್ಯಾಂಥರ್ಸ್ ನಂತಹ ದಲಿತ ಮುಂದಾಳತ್ವದ ಪಕ್ಷಗಳಿಂದಲ್ಲ. ದಲಿತೇತರ ಪಕ್ಷ ಹಾಗೂ ನಾಯಕರಿಂದ ಎಂಬುದು ಗಮನರ್ಹ.

ಅನಿರೀಕ್ಷಿತವಾದರೂ, ಇದು ಒಂದು ರೀತಿಯಲ್ಲಿ ಬಿಜೆಪಿ ವಿರೋಧಿ ಒಕ್ಕೂಟಕ್ಕೆ ಅನಿವಾರ್ಯವೂ ಕೂಡ. ‘ಇಂಡಿಯಾ’ ಒಕ್ಕೂಟದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ಬಿಜೆಪಿಯ ಮಟ್ಟಿಗೆ ಪ್ರಮುಖ ಪ್ರತಿಪಕ್ಷವೂ ಆಗಿದೆ. ದೇಶದಲ್ಲಿ ಈಗಾಗಲೇ ಸುಮಾರು 150 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಕಾಂಗ್ರೆಸ್‌ ನೇರಾ ನೇರ ಪ್ರತಿರೋಧ ಒಡ್ಡುತ್ತಿದೆ. ಯಾವುದೇ ಒಕ್ಕೂಟದಲ್ಲಿ ದೊಡ್ಡ ಪಕ್ಷದವರೇ ಪ್ರಧಾನಿ ಅಭ್ಯರ್ಥಿಯಾಗುವುದು ಸ್ವಾಭಾವಿಕ. ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೂಡ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪುವ ಎಲ್ಲಾ ಸಾಧ್ಯತೆ-ಕಾರಣಗಳು ದಟ್ಟವಾಗಿವೆ. ಇನ್ನು ಕಾಂಗ್ರೆಸ್ ಒಳಗಿನ ಮೇಲ್ಜಾತಿ ಬಲಿಷ್ಠ ನಾಯಕರ ಒಪ್ಪಿಗೆ ಅಷ್ಟು ಸುಲಭವಲ್ಲದಿದ್ದರೂ ರಾಹುಲ್ ಗಾಂಧಿಯ ಶೃಜನಶೀಲ, ಪ್ರಗತಿಪರ ನಿಲುವುಗಳೇ ಮುಂದಿನ ಕಾಂಗ್ರೆಸ್ ಪಕ್ಷದ ಭವಿಷ್ಯವಾಗುತ್ತಿರುವುದರಿಂದ ಪಕ್ಷದ ಖರ್ಗೆ ವಿರೋಧಿ ಒಳಗುದಿ ತಾತ್ಕಾಲಿಕವಾಗಿ ತಣ್ಣಗಾಗಬಹುದು. ಖರ್ಗೆ ಅವರಂತಹ ಹಿರಿಯ ರಾಜಕೀಯ ಮುತ್ಸದ್ದಿ, ಪ್ರಖರ ವಾಗ್ಮಿಯನ್ನು ಸಹಜವಾಗಿಯೇ ಲೋಹಿಯ ಸಮಾಜವಾದದ ಸಿದ್ಧಾಂತಗಳನ್ನು ನಂಬಿರುವ ನಿತೀಶ್ ಕುಮಾರ್, ಅಖಿಲೇಶ್ ಯಾದವ್, ಲಾಲು ಪ್ರಸಾದ್ ಯಾದವ್ ರವರು ಒಪ್ಪಿಕೊಳ್ಳಬೇಕಿದೆ.

ದಕ್ಷಿಣದ  ಎಡಪಂತಿಯರ ಅಧಿಕಾರವುಳ್ಳ ಕೇರಳ, ಪೆರಿಯಾರ್ ವಿಚಾರ ಪ್ರೇರಿತ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಅಧಿಕಾರಸ್ಥ ಪಕ್ಷಗಳು ಈಗಲೇ ‘ಇಂಡಿಯಾ’ ಮೈತ್ರಿಕೂಟದ ಸಹಭಾಗಿ ಪಕ್ಷಗಳಾಗಿವೆ. ಮುಖ್ಯವಾಗಿ ಈ ದಕ್ಷಿಣ ಭಾರತದ ರಾಜ್ಯಗಳು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿದ್ದು ಸುಮಾರು 200 ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ. ದಕ್ಷಿಣ ಭಾರತದ ಕರ್ನಾಟಕದ ಖರ್ಗೆ ಪ್ರಧಾನಿ ಎಂದು ಬಿಂಬಿಸುವ ಮೂಲಕ, ದಲಿತ ಪ್ರಧಾನಿ ಎಂಬ ಪ್ರಚಾರದಿಂದ ರಾಷ್ಟ್ರಾದ್ಯಂತ ದಲಿತ ಮತಗಳ ಕ್ರೋಢೀಕರಣ ಜೊತೆಗೆ ಸೆಕ್ಯುಲರ್ ಅಜಂಡಾದೊಂದಿಗೆ ಮುಸ್ಲಿಮರ ಮತಗಳನ್ನು ಪಡೆಯುವ ಮೂಲಕ ಬಿಜೆಪಿಯನ್ನು ಸೋಲಿಸುವ ರಾಜಕೀಯ ಲೆಕ್ಕಾಚಾರವನ್ನು ‘ಇಂಡಿಯಾ’ ಮೈತ್ರಿಕೂಟವು ಒಳಗೊಂಡಿದೆ. ಅಲ್ಲದೆ, ಇಪ್ಪತ್ತೆಂಟಕ್ಕೂ ಹೆಚ್ಚು ಪಕ್ಷಗಳ ವೇದಿಕೆಯಾದ ಈ ಮೈತ್ರಿಕೂಟವನ್ನು ಸಮಾಧಾನಿಸಿ, ಸಮನ್ವಯಗೊಳಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಇದರ ಜೊತೆಗೆ ಸಂಘಪರಿವಾರದ ಹಿಂದುತ್ವದ ಸಾಂಸ್ಕೃತಿಕ ರಾಜಕಾರಣ ಹಾಗೂ ಮುಸ್ಲಿಂ ವಿರೋಧಿ ಅಜಂಡಾವನ್ನೇ ವೋಟ್ ಬ್ಯಾಂಕ್ ಆಗಿಸಿಕೊಂಡು ಎರಡು ಬಾರಿ ಗೆದ್ದು, ಅಧಿಕಾರ ಹಿಡಿದಿರುವ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಸೋಲಿಸುವಂತಹ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವ ಹಿರಿತನ ಮತ್ತು ಅರ್ಹ ವ್ಯಕ್ತಿತ್ವ ಖರ್ಗೆಯವರಿಗಿದೆ ಎಂಬ ಕಾರಣಕ್ಕಾಗಿಯೆ ಕಾಂಗ್ರೆಸಲ್ಲದ ಹಾಗೂ ದಲಿತೇತರ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿಯವರು ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆಯವರ ಹೆಸರನ್ನು ಸೂಚಿಸಿದ್ದಾರೆ.

‘ಇಂಡಿಯಾ’ ಮೈತ್ರಿಕೂಟ ಪಕ್ಷಗಳ ದಲಿತ ಪ್ರಧಾನಿ ಎಂಬ ರಾಜಕಾರಣದ ಹಿಂದೆ ಏನೇ ರಾಜಕೀಯವಿದ್ದರೂ, ವಿದ್ಯಾರ್ಥಿ ದೇಸೆಯಲ್ಲಿಯೇ ರಾಜಕಾರಣದ ಆಸಕ್ತಿಯುಳ್ಳ ಖರ್ಗೆಯವರು ಕಾನೂನು ಪದವೀಧರರು. 1969ರಲ್ಲಿ ಪಕ್ಷ ಸೇರಿ ಕಲಬುರಗಿ ನಗರ ಕಾಂಗ್ರೆಸ್‌ನ ಅಧ್ಯಕ್ಷರಾದರು. 1972ರಲ್ಲಿ ಗುರುಮಿಠಕಲ್‌ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಅಂದಿನಿಂದ ಸತತ ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾದ ಖರ್ಗೆ, 2008ರ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಚಿತ್ತಾಪುರಕ್ಕೆ ಬಂದು, ಅಲ್ಲಿಂದ ಸ್ಪರ್ಧಿಸಿ ಸತತ ಒಂಬತ್ತನೇ ಬಾರಿಗೆ ಶಾಸಕರಾದರು.

ಖರ್ಗೆಯವರು ಕರ್ನಾಟಕ ಸರ್ಕಾರದ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಪ್ರಮುಖ ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. 1976ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ, 1978ರ ದೇವರಾಜ ಅರಸುರವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ ರಾಜ್ ರಾಜ್ಯ ಸಚಿವ, 1980ರಲ್ಲಿ ಗುಂಡೂರಾವ್ ರವರ ಸಂಪುಟದಲ್ಲಿ ಕಂದಾಯ ಸಚಿವ,  1990ರಲ್ಲಿ ಬಂಗಾರಪ್ಪ ಸಂಪುಟದಲ್ಲಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ,  1992ರ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಹಕಾರ ಮತ್ತು ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಸಚಿವ, 1999ರಲ್ಲಿ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಮಲ್ಲಿಕಾರ್ಜುನ ಖರ್ಗೆ ಜವಾಬ್ದಾರಿ ನಿರ್ವಹಿಸಿದ್ದಾರೆ. ಅಲ್ಲದೆ, 2004ರ ಧರ್ಮಸಿಂಗ್ ಸಂಪುಟದಲ್ಲಿ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವರೂಸಹ ಆಗಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವಾರು ಬಾರಿ ಮುಖ್ಯಮಂತ್ರಿ ಗಾದಿಯ ಸನಿಹ ಬಂದಿದ್ದ ಖರ್ಗೆಯವರು ಕೊನೆ ಗಳಿಗೆಯಲ್ಲಿ ಜಾತಿ ರಾಜಕೀಯ ಲೆಕ್ಕಾಚಾರಗಳಿಂದ ವಂಚಿತರಾಗಿದ್ದರು.

1994 ಹಾಗೂ 2008ರಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದ ಖರ್ಗೆ 2005ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಆ ನಂತರ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿ, ಮನಮೋಹನ್‌ ಸಿಂಗ್ ಸಂಪುಟದಲ್ಲಿ ರೈಲ್ವೆ ಸಚಿವ, ಕಾರ್ಮಿಕ ಮತ್ತು ಉದ್ಯೋಗ ಸಚಿವ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು. 2014-19ರವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದರು. ಜೊತೆಗೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರೂ ಆಗಿದ್ದರು. ನಂತರ 2019ರ ಲೋಕಸಭಾ ಚುನಾವಣೆಯಲ್ಲಿ ಸೋತರು. ಅದು ಅವರ ಐದು ದಶಕಗಳ ಚುನಾವಣಾ ರಾಜಕಾರಣದಲ್ಲಿನ ಮೊದಲ ಸೋಲು.

ಖರ್ಗೆ ಕೂಡ ದೇವೇಗೌಡರಂತೆಯೇ ಪ್ರಬುದ್ಧ ರಾಜಕಾರಣಿ. ಸಾಧ್ಯವಾದರೆ ಎರಡನೇ ಕನ್ನಡಿಗ ಪ್ರಧಾನಿ. ಶೂದ್ರ ಹಾಗೂ ದಲಿತ ಪ್ರಧಾನಿಗಳನ್ನು ದೇಶಕ್ಕೆ ಕೊಡುಗೆ ಕೊಟ್ಟ ರಾಜ್ಯ ಕರ್ನಾಟಕವಾಗಬಹುದು. ಇವರು ಅಧ್ಯಕ್ಷರಾದಾಗಿನಿಂದ ಕಾಂಗ್ರೆಸ್ ಪಕ್ಷ ಜನರಿಗೆ ಹಾಗೂ ಕಾರ್ಯಕರ್ತರಿಗೆ ಹೆಚ್ಚು ಹತ್ತಿರವಾಗುತ್ತಿದೆ. ಒಂದಷ್ಟು ಪಕ್ಷದ ನಾಯಕರು ಜಾತ್ಯತೀತ ತತ್ವಗಳಪರ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿ ತಾವು ಕೂಡ ಜನಪದ, ಪ್ರಗತಿಪರ ಎಂದು ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದಾರೆ; ಎನ್ನುವುದು ಕೂಡ ಸತ್ಯ. ಕರ್ನಾಟಕದ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ಸಹ ದಶಕಗಳ ಹಿಂದಿನ ಒತ್ತಾಯವಾಗಿದೆ. ಇದರ ಮೊದಲ ಸಾಲಿನಲ್ಲಿ ಇದ್ದ ಹೆಸರು ಖರ್ಗೆಯವರದ್ದೇ ಆಗಿದೆ. ದಲಿತರೊಳಗಿನ ಎಡ-ಬಲ ಒಳಮೀಸಲಾತಿಗಳ ನಡುವೆಯೂ ಖರ್ಗೆ ಹೆಸರೇ ರಾಜ್ಯದ ಬಹುತೇಕ ಎಸ್ಸಿ-ಎಸ್ಟಿ ಸಮುದಾಯಗಳ ಆಯ್ಕೆ ಆಗಿತ್ತು.

ಅಂಬೇಡ್ಕರರ ನೈಜ ಅನುಯಾಯಿ, ಸಮಾಜವಾದಿ, ಸಮ ಸಮಾಜದ ಕನಸುಳ್ಳ ಒಬ್ಬ ದಲಿತ ಪ್ರತಿನಿದಿಯಾಗಿ ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಯಾದರೇ ದೇಶದ ಮೊದಲ ದಲಿತ ಪ್ರಧಾನಮಂತ್ರಿ ಎನ್ನಿಸಿಕೊಳ್ಳಲಿದ್ದಾರೆ. ಅಲ್ಲದೆ, ಇಂದು ದೇಶದಲ್ಲಿ ತಾಂಡವವಾಡುತ್ತಿರುವ ಧರ್ಮದ್ವೇಷದ, ಜಾತಿ ಕೇಂದ್ರೀತ ರಾಜಕಾರಣದ ಬದಲಾಗಿ ಸೋಷಿತರ ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ಅವರು ಸಾಕ್ಷಿಯೂ ಆಗಬಹುದು.

ದೇಶ

ವಿರೋಧ ಪಕ್ಷಗಳು ಸೇರಿದಂತೆ ವಿವಿಧ ಪಕ್ಷಗಳು ಅಪರಾಧ ಮಸೂದೆಗಳನ್ನು ಟೀಕಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಸರ್ಕಾರ ಅನೇಕ ತಿದ್ದುಪಡಿಗಳೊಂದಿಗೆ ಮೂರು ಮಸೂದೆಗಳನ್ನು ಜಾರಿಗೆ ತಂದಿದೆ.

ಪ್ರಸ್ತುತ ಭಾರತದಲ್ಲಿ ಜಾರಿಯಲ್ಲಿರುವ ಭಾರತೀಯ ದಂಡ ಸಂಹಿತೆ 1860, ಕ್ರಿಮಿನಲ್ ಪ್ರೊಸೀಜರ್ ಕೋಡ್ 1898 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ 1872 ಅನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ತರಲಾಯಿತು. ಈ ಮೂರು ಕಾನೂನುಗಳನ್ನು ಬದಲಾಯಿಸಲು ನಿರ್ಧರಿಸಿದ ಕೇಂದ್ರ ಬಿಜೆಪಿ ಸರ್ಕಾರ ‘ಭಾರತೀಯ ನ್ಯಾಯ ಸಂಹಿತೆ’, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ್ಯ ಸಂಹಿತೆ’ ಎಂಬ ಮೂರು ತಿದ್ದುಪಡಿ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿತು.

ವಿರೋಧ ಪಕ್ಷಗಳ ಬಹುತೇಕ ಸಂಸದರನ್ನು ಇಡೀ ಅಧಿವೇಶನಕ್ಕೆ ಅಮಾನತುಗೊಳಿಸಿ ಅವರ ಅನುಪಸ್ಥಿತಿಯಲ್ಲಿ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ಮೂರು ಮಸೂದೆಗಳ ಮೇಲಿನ ಚರ್ಚೆ ಡಿಸೆಂಬರ್ 19 ರಂದು ಲೋಕಸಭೆಯಲ್ಲಿ ಪ್ರಾರಂಭವಾಯಿತು. ವಿರೋಧ ಪಕ್ಷದ ಸಂಸದರು ಅಮಾನತುಗೊಂಡಿದ್ದು, ಚರ್ಚೆಯಲ್ಲಿ ಯಾರೂ ಭಾಗವಹಿಸಲಿಲ್ಲ. ಆಡಳಿತ ಪಕ್ಷದ ಸಂಸದರು ಮಾತ್ರ ಚರ್ಚೆಯಲ್ಲಿ ಭಾಗವಹಿಸಿದ್ದರು.

ಈ ಚರ್ಚೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅಮಿತ್ ಶಾ, ‘ವಿವರವಾದ ಸಮಾಲೋಚನೆಯ ನಂತರ ಈ ಮೂರು ಮಸೂದೆಗಳಲ್ಲಿ ತಿದ್ದುಪಡಿಗಳನ್ನು ಮಾಡಿ ಮಂಡಿಸಲಾಯಿತು. ವಸಾಹತುಶಾಹಿ ಕಾಲದಲ್ಲಿ ತಂದ ಕಾನೂನುಗಳು ಶಿಕ್ಷೆಗೆ ಗುರಿಯಾಗಿದ್ದವೇ ಹೊರತು ನ್ಯಾಯ ಒದಗಿಸಲಿಲ್ಲ. ಈ ಹೊಸ ಕ್ರಿಮಿನಲ್ ಕಾನೂನುಗಳು ನ್ಯಾಯ ವ್ಯವಸ್ಥೆಯು ಭಾರತೀಯ ಸನ್ನಿವೇಶಕ್ಕೆ ಹೊಂದಿಕೊಳ್ಳುವುದನ್ನು ಖಚಿತಪಡಿಸುತ್ತದೆ’ ಎಂದು ಅಮಿತ್ ಶಾ ಹೇಳಿದರು.

ಮೂರು ಮಸೂದೆಗಳ ಮುಖ್ಯ ಲಕ್ಷಣಗಳನ್ನು ತಿಳಿಯೋಣ. ‘ದೂರು ಸ್ವೀಕರಿಸಿದ ಮೂರು ದಿನಗಳಲ್ಲಿ ಪ್ರಥಮ ಮಾಹಿತಿ ವರದಿ ಸಲ್ಲಿಸಬೇಕು ಮತ್ತು 14 ದಿನಗಳಲ್ಲಿ ಪ್ರಾಥಮಿಕ ತನಿಖೆ ಪೂರ್ಣಗೊಳಿಸಬೇಕು. 24 ಗಂಟೆಯೊಳಗೆ ತನಿಖಾ ವರದಿಯನ್ನು ನ್ಯಾಯಾಧೀಶರಿಗೆ ಸಲ್ಲಿಸಬೇಕು. ಆರೋಪಪಟ್ಟಿ ಸಲ್ಲಿಕೆಯನ್ನು 180 ದಿನಗಳಿಗಿಂತ ಹೆಚ್ಚು ಕಾಲ ವಿಳಂಬ ಮಾಡಬಾರದು’ ಮುಂತಾದ ಅಂಶಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ.

ಅಲ್ಲದೆ, ನ್ಯಾಯಾಧೀಶರು ಪ್ರಕರಣದ ತೀರ್ಪನ್ನು 45 ದಿನಗಳಿಗಿಂತ ಹೆಚ್ಚು ಕಾಲ ಮುಂದೂಡಬಾರದು. ಆರೋಪಿಗಳನ್ನು ಖುಲಾಸೆಗೊಳಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗುವುದು. ಆ ಏಳು ದಿನಗಳಲ್ಲಿ, ನ್ಯಾಯಾಧೀಶರು ವಿಚಾರಣೆಯನ್ನು ನಡೆಸಿ, ಗರಿಷ್ಠ 120 ದಿನಗಳಲ್ಲಿ ವಿಚಾರಣೆಯನ್ನು ಮುಕ್ತಾಯಗೊಳಿಸಬೇಕು. 30 ದಿನಗಳೊಳಗೆ ತಪ್ಪೊಪ್ಪಿಕೊಂಡವರ ಶಿಕ್ಷೆಯನ್ನು ಕಡಿಮೆ ಮಾಡಲಾಗುತ್ತದೆ. ದಾಖಲೆಗಳನ್ನು 30 ದಿನಗಳಲ್ಲಿ ಸಲ್ಲಿಸಬೇಕು. ಈ ಅಂಶಗಳು ಮಸೂದೆಯಲ್ಲಿ ಇವೆ.

ಹೊಸ ಮಸೂದೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಕುರಿತು ಹೊಸ ಅಧ್ಯಾಯವನ್ನು ಪರಿಚಯಿಸಲಾಗಿದೆ. ಆತ್ಮಹತ್ಯೆ ಪ್ರಯತ್ನದ ಸೆಕ್ಷನ್ ಅಳಿಸಲಾಗಿದೆ. ಹೊಸ ಮಸೂದೆಯಲ್ಲಿ ಒಳಗೊಂಡಿರುವ ಕೆಲವು ಹೊಸ ಅಪರಾಧಗಳೆಂದರೆ ಭಯೋತ್ಪಾದನೆ, ಗುಂಪುಗಾರಿಕೆ, ಅಪರಾಧಗಳನ್ನು ಮಾಡಲು ಮಕ್ಕಳನ್ನು ಬಾಡಿಗೆಗೆ ಪಡೆಯುವುದು, ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವುದು, ಹಿಟ್ ಅಂಡ್ ರನ್ ಮತ್ತು ತಪ್ಪು ಅಥವಾ ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದು.

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳ ಸಂಸದರ ಅನುಪಸ್ಥಿತಿಯಲ್ಲಿ, ಸದನದಲ್ಲಿ ಮೂರು ವಿಧೇಯಕಗಳಿಗೆ ಅನುಮೋದನೆ ನೀಡಲಾಗಿದೆ. ಆ ವೇಳೆ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಸದನದಲ್ಲಿ ಹಾಜರಿದ್ದರು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳದ ಸಂಸದರು ಮತ್ತು ಬಹುಜನ ಸಮಾಜ ಪಕ್ಷದ ಸಂಸದರು ಸದನದಲ್ಲಿ ಉಪಸ್ಥಿತರಿದ್ದರು.

ದೇಶ

“ಈ ನಾಚಿಕೆಗೇಡಿನ ಭದ್ರತಾ ಲೋಪಕ್ಕಾಗಿ ಉನ್ನತ ಅಧಿಕಾರಿಗಳನ್ನು ಶಿಕ್ಷಿಸದೆ, ಸಂಸದರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದು, ಆ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ”

“ಪ್ರಧಾನಿ ಮತ್ತು ಅವರ ಪಕ್ಷವು ದೇಶದಲ್ಲಿ ಏಕಪಕ್ಷೀಯ ಆಡಳಿತವನ್ನು ಸ್ಥಾಪಿಸಲು ಬಯಸುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ‘ಎಕ್ಸ್’ ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಭದ್ರತೆ ಕೊರತೆ ಕುರಿತು ಗೃಹ ಸಚಿವರಿಂದ ವರದಿ ಕೇಳಿದ ಕಾರಣಕ್ಕಾಗಿ 141 ಸಂಸದರನ್ನು ಅಮಾನತು ಮಾಡಲಾಗಿದೆ. 6 ಅತಿಕ್ರಮಣ ಪ್ರವೇಶ ಮಾಡಿದವ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತಿಕ್ರಮಣ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಸಂಸದರು ಮುಕ್ತರಾಗಿದ್ದಾರೆ. ಅವರನ್ನು ಇನ್ನೂ ವಿಚಾರಣೆ ಮಾಡಿಲ್ಲ.

ಇದು ಯಾವ ರೀತಿಯ ವಿಚಾರಣೆ? ಸಂಸತ್ತಿನ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಹಿರಿಯ ಅಧಿಕಾರಿಗಳು ಏಕೆ ಇದರ ಹೊಣೆಯನ್ನು ವಹಿಸಿಕೊಂಡಿಲ್ಲ? ನಿಸ್ಸಂಶಯವಾಗಿ ಅತಿಕ್ರಮಣಕಾರರು ತಿಂಗಳಿನಿಂದ ಈ ಯೋಜನೆ ರೂಪಿಸಿರುತ್ತಾರೆ. ಈ ಗುಪ್ತಚರ ವೈಫಲ್ಯಕ್ಕೆ ಯಾರು ಹೊಣೆ? ಸಂಸತ್ತಿನ ಬಹು-ಪದರದ ಭದ್ರತೆಯನ್ನು ಗಮನಿಸಿ, ಇಬ್ಬರು ಅತಿಕ್ರಮಣ ಪ್ರವೇಶ ಮಾಡಿದವರು ತಮ್ಮ ಶೂಗಳಲ್ಲಿ ಹಳದಿ ಅನಿಲ ಡಬ್ಬಿಗಳನ್ನು ಮರೆಮಾಡಿ ಕಟ್ಟಡದೊಳಗೆ ನುಸುಳಿ, ಭಾರತೀಯ ಪ್ರಜಾಪ್ರಭುತ್ವದ ತೊಟ್ಟಿಲನ್ನು ಹೇಗೆ ತಲುಪಿದರು?

ಪ್ರಧಾನಿ ಮತ್ತು ಅವರ ಪಕ್ಷವು ದೇಶದಲ್ಲಿ “ಏಕಪಕ್ಷೀಯ ಆಡಳಿತ” ಸ್ಥಾಪಿಸಲು ಬಯಸುತ್ತಿದ್ದಾರೆ. ಅವರು “ಏಕ್ ಅಕೇಲಾ” ಎಂದು ಹೇಳುತ್ತಾರೆ. ಇದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವುದಕ್ಕೆ ಸಮ. ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ಮೂಲಕ ಅವರು ನಿಖರವಾಗಿ ಇದನ್ನೇ ಮಾಡಿದ್ದಾರೆ. ಈ ನಾಚಿಕೆಗೇಡಿನ ಭದ್ರತಾ ಲೋಪಕ್ಕಾಗಿ ಉನ್ನತ ಅಧಿಕಾರಿಗಳನ್ನು ಶಿಕ್ಷಿಸದೆ, ಸಂಸದರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದು, ಆ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.