ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
2023 » Page 19 of 76 » Dynamic Leader
October 24, 2024
Home 2023 (Page 19)
ದೇಶ ರಾಜ್ಯ

ಜನಸಂಖ್ಯೆಯ ಆಧಾರದ ಮೇಲೆ, ಲೋಕಸಭೆ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಿದಾಗ, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತದೆ.

ಡಿ.ಸಿ.ಪ್ರಕಾಶ್ ಸಂಪಾದಕರು

ಜನಸಂಖ್ಯೆಯ ಆಧಾರದ ಮೇಲೆ 2026ರ ನಂತರ, ಲೋಕಸಭೆ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಿದಾಗ, ಕರ್ನಾಟಕ, ತಮಿಳುನಾಡು, ಕೇರಳ, ಮತ್ತು ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದ್ದು, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದಂತಹ ಉತ್ತರದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂಬ ಆಘಾತಕಾರಿ ವರದಿಯನ್ನು ಕಾರ್ನೆಗೀ ಸೆಂಟರ್ (Carnegie Report) ಪ್ರಕಟಿಸಿದೆ.

2026ರಲ್ಲಿ ಮತ್ತೊಮ್ಮೆ ಕ್ಷೇತ್ರದ ಮರುವಿಂಗಡಣೆ:
ಜನಸಂಖ್ಯೆಯ ಆಧಾರದ ಮೇಲೆಯೇ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ (Delimitation) ಮತ್ತು ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಆ ರೀತಿಯಲ್ಲಿ, ಪ್ರತಿ ಕ್ಷೇತ್ರವು ಸರಿಸುಮಾರು ಒಂದೇ ಸಂಖ್ಯೆಯ ಮತದಾರರನ್ನು ಹೊಂದಿದೆ ಎಂದು ಸರ್ಕಾರಗಳು ಖಚಿತಪಡಿಸುತ್ತವೆ. ಅಲ್ಲದೆ, ಜನಸಂಖ್ಯೆ ಹೆಚ್ಚಾದಂತೆ ಕ್ಷೇತ್ರಗಳನ್ನು ಸಹ ಮರುವಿಂಗಡಿಸಲಾಗುತ್ತದೆ. ಆದರೆ, ಕೇಂದ್ರ ಸರ್ಕಾರವು 1976 ರಿಂದ 2000 ರವರೆಗೆ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಅಲ್ಲದೆ, 2001ರಲ್ಲಿ, ನಿಷೇಧವನ್ನು 2026 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನಲೆಯಲ್ಲಿ, 2026ರ ನಂತರ, ಸಂಸತ್ತಿನ ಕ್ಷೇತ್ರಗಳನ್ನು ಮತ್ತೆ ಜನಸಂಖ್ಯೆಯ ಆಧಾರದ ಮೇಲೆ ಮರುವಿಂಗಡಣೆಗೊಳಿಸಲಾಗುವುದು.

ಆಘಾತಕಾರಿ ಸಂಶೋಧನಾ ವರದಿ:
ಈ ಹಿನ್ನಲೆಯಲ್ಲಿ, ಕಾರ್ನೆಗೀ ಸೆಂಟರ್ (Carnegie Report) ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ, “ದಕ್ಷಿಣ ಭಾರತದ ರಾಜ್ಯಗಳಿಗಿಂತ ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ತುಂಬಾ ವೇಗವಾಗಿದೆ. ಜನಗಣತಿಯ ಆಧಾರದ ಮೇಲೆ ಸಂಸತ್ತಿನ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಲಾಗುವುದರಿಂದ, ತುಲನಾತ್ಮಕವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಕ್ಷೇತ್ರಗಳ ಸಂಖ್ಯೆಯು ಹೆಚ್ಚಾಗುತ್ತದೆ. ಅದೇ ಸಂದರ್ಭದಲ್ಲಿ, ಜನಸಂಖ್ಯೆ ನಿಯಂತ್ರಣದಲ್ಲಿರುವ ದಕ್ಷಿಣ ರಾಜ್ಯಗಳ ಸಂಸದೀಯ ಕ್ಷೇತ್ರಗಳು ಗಣನೀಯವಾಗಿ ಕಡಿಮೆಯಾಗಲಿವೆ. ಅಂದರೆ ಈಗಿರುವ ಕ್ಷೇತ್ರಗಳಲ್ಲಿ ಭಾರಿ ನಷ್ಟವಾಗುತ್ತದೆ!” ಎಂಬ ಅಘಾತಕ್ಕಾರಿ ವರದಿಯನ್ನು ಪ್ರಕಟಿಸಿದೆ.

ಅಲ್ಲದೆ, “2026ರ ನಂತರ ಜನಸಂಖ್ಯೆಯನ್ನು ಅಂದಾಜಿಸಿ, ಅದರ ಆಧಾರದ ಮೇಲೆ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಉತ್ತರದ ರಾಜ್ಯಗಳಿಗೆ ಹೆಚ್ಚುವರಿ ಸ್ಥಾನಗಳು ಸಿಗಲಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತದ ಅತಿದೊಡ್ಡ ರಾಜ್ಯವಾದ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶವು ಪ್ರಸ್ತುತ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಆದರೆ, ಕ್ಷೇತ್ರಗಳ ಮರು ವಿಂಗಡಣೆ ನಂತರ 11 ಹೆಚ್ಚುವರಿ ಕ್ಷೇತ್ರಗಳು ಪಡೆದು, ಒಟ್ಟು ಕ್ಷೇತ್ರಗಳ ಸಂಖ್ಯೆ 91ಕ್ಕೆ ಏರುವ ನಿರೀಕ್ಷೆಯಿದೆ. ಅಂತೆಯೇ, ಕ್ಷೇತ್ರಗಳ ಮರು ವಿಂಗಡಣೆ ನಂತರ ಅಸ್ತಿತ್ವದಲ್ಲಿರುವ ಕ್ಷೇತ್ರಗಳಿಗಿಂತ ಬಿಹಾರ ರಾಜ್ಯ 10, ರಾಜಸ್ಥಾನ 6 ಮತ್ತು ಮಧ್ಯಪ್ರದೇಶ 4 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಪಡೆಯಲಿದೆ. ಅದೇ ರೀತಿ ಗುಜರಾತ್, ಹರಿಯಾಣ, ಜಾರ್ಖಂಡ್, ದೆಹಲಿ (ಕೇಂದ್ರಾಡಳಿತ ಪ್ರದೇಶ), ಛತ್ತೀಸ್‌ಗಢ ಸೇರಿದಂತೆ ಉತ್ತರದ ರಾಜ್ಯಗಳು ತಲಾ 1 ಲೋಕಸಭಾ ಸ್ಥಾನವನ್ನು ಹೆಚ್ಚುವರಿಯಾಗಿ ಪಡೆಯಲಿವೆ!

ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ:
ಅದೇ ಸಮಯದಲ್ಲಿ “ನಾವಿಬ್ಬರು ನಮಗಿಬ್ಬರು” ಎಂದು ಜನಸಂಖ್ಯಾ ನಿಯಂತ್ರಣವನ್ನು ಜವಾಬ್ದಾರಿಯುತವಾಗಿ ಜಾರಿಗೆ ತಂದ ದಕ್ಷಿಣದ ರಾಜ್ಯಗಳು ಆ ಹೊಣೆಗಾರಿಕೆಗಾಗಿಯೇ ತಕ್ಕ ಶಿಕ್ಷೆಯನ್ನು ಅನಿಭವಿಸಲಿದೆ. ಅಂದರೆ ಅಸ್ತಿತ್ವದಲ್ಲಿರುವ ಕ್ಷೇತ್ರಗಳು ಗಮನಾರ್ಹವಾಗಿ ಕಳೆದುಕೊಳ್ಳಲಿವೆ. ಅದರಲ್ಲೂ ತಮಿಳುನಾಡು ರಾಜ್ಯವು ಪ್ರಸ್ತುತ 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಆದರೆ 2026ರ ನಂತರ ಕೇಂದ್ರ ಸರ್ಕಾರದ ಕ್ಷೇತ್ರದ ಪುನರ್ ವಿಂಗಡಣೆಯಿಂದಾಗಿ ಸುಮಾರು 8 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕೇವಲ 31ಕ್ಕೆ ಇಳಿಯಲಿದೆ. ತಮಿಳುನಾಡಿನಂತೆ ಮತ್ತೊಂದು ದಕ್ಷಿಣದ ರಾಜ್ಯವಾದ ಕೇರಳವು ಪ್ರಸ್ತುತ 20 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ 12ಕ್ಕೆ ಕುಗ್ಗಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡು ರಾಜ್ಯಗಳು ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಅದು 34ಕ್ಕೆ ಇಳಿಯಲಿದೆ. ಕರ್ನಾಟಕವೂ ಈಗಿನ 28 ರಿಂದ 2 ಸ್ಥಾನ ಕಳೆದುಕೊಂಡು 26ಕ್ಕೆ ಕುಗ್ಗುವುದೆಂದು ಊಹಿಸಲಾಗಿದೆ!” ಎಂದು ಕಾರ್ನೆಗೀ ವರದಿಯಲ್ಲಿ ಹೇಳಲಾಗಿದೆ.

‘ಸೆಂಟ್ರಲ್ ವಿಸ್ಟಾ’ ನಿರ್ಮಾಣದ ಸಮಯದಲ್ಲೇ ಎದ್ದ ವಿವಾದ:
ಇತ್ತೀಚೆಗಷ್ಟೇ `ಸೆಂಟ್ರಲ್ ವಿಸ್ಟಾ’ ಹೆಸರಿನ ನೂತನ ಸಂಸತ್ ಭವನವನ್ನು ನಿರ್ಮಿಸಿ ಪ್ರಧಾನಿ ಮೋದಿ ಉದ್ಘಾಟಿಸಿದರು. ನೂತನ ಸಂಸತ್ ಭವನ ನಿರ್ಮಾಣದ ವೇಳೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಫೋಟೋಗಳು, ವೀಡಿಯೊಗಳ ವಿವರಗಳು ವಿವಾದವನ್ನು ಹುಟ್ಟುಹಾಕಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಲೋಕಸಭಾ ಮತ್ತು ರಾಜ್ಯಸಭಾ ಕಲಾಪಗಳು ನಡೆಯುವ ಸಭಾಂಗಣದ ಆಸನಗಳು ಈಗಿರುವ ಹಳೆಯ ಸಂಸತ್ ಕಟ್ಟಡಕ್ಕಿಂತ ಎರಡು ಪಟ್ಟು ಹೆಚ್ಚಿಸಲಾಗಿದೆ. ಉದಾಹರಣೆಗೆ, ಪ್ರಸ್ತುತ ಲೋಕಸಭೆಯು 543 ಸದಸ್ಯರನ್ನು ಮತ್ತು ರಾಜ್ಯಸಭೆಯು 245 ಸದಸ್ಯರನ್ನು ಹೊಂದಿದೆ. ಅದರಂತೆಯೇ ಹಳೆಯ ಸಂಸತ್ ಭವನದ ಉಭಯ ಸದನಗಳ ಆಸನಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಈ ಹೊಸ ಸಂಸತ್ ಕಟ್ಟಡದ ಲೋಕಸಭೆಯಲ್ಲಿ 888 ಸ್ಥಾನಗಳು, ರಾಜ್ಯಸಭೆಯಲ್ಲಿ 384 ಸ್ಥಾನಗಳಂತೆ ಒಟ್ಟು 1272 ಹೆಚ್ಚುವರಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನು ಅಂದೇ ಎತ್ತಿ ತೋರಿಸಿದ ವಿರೋಧ ಪಕ್ಷಗಳು, ಸಂಸತ್ತಿನ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಿರುವುದರಿಂದ ಬಿಜೆಪಿ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಪುನರ್ ವಿಂಗಡಿಸಲು ಹೊರಟಿದೆ ಎಂದು ಅನುಮಾನ ವ್ಯಕ್ತಪಡಿಸಿತು. ನಿರ್ದಿಷ್ಟವಾಗಿ, ಕ್ಷೇತ್ರಗಳ ಮರು ವಿಂಗಡಣೆಯಿಂದ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ಕ್ಷೇತ್ರಗಳ ಸಂಖ್ಯೆಯಲ್ಲಿ ಹಿನ್ನಡೆ ಎದುರಿಸಬೇಕಾಗುತ್ತದೆ. ಬಿಜೆಪಿ ಪ್ರಾಬಲ್ಯವಿರುವ ಉತ್ತರ ಪ್ರದೇಶದಂತಹ ಉತ್ತರದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ದಕ್ಷಿಣ ರಾಜ್ಯದ ನಾಯಕರು ಆತಂಕಗೊಂಡಿದ್ದರು. ಈ ಹಿನ್ನಲೆಯಲ್ಲಿ ಕಾರ್ನೆಗೀ ವರದಿಯೂ ಇದನ್ನು ದೃಢಪಡಿಸಿದೆ.

ರಾಜಕೀಯ

ನವದೆಹಲಿ: ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲಾ ಒಂದು ಧ್ವನಿಯಾಗಿ ಗಟ್ಟಿ ನಿಲ್ಲಬೇಕು ಎಂದು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಸಚಿವರು, ಸರ್ವ ಪಕ್ಷದ ಸಂಸತ್ ಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  

“ಸಂಕಷ್ಟ ಸೂತ್ರ ಸಿದ್ಧವಾಗದೇ ಇರುವುದರಿಂದ ಕಾವೇರಿ ನೀರು ಹಂಚಿಕೆ ಎನ್ನುವುದು ನಮ್ಮ ರಾಜ್ಯಕ್ಕೆ ಕ್ಲಿಷ್ಟಕರವಾಗಿ ಪರಿಣಮಿಸಿದೆ. ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ. ಕುಡಿಯುವ ನೀರಿಗೆ 33 ಟಿಎಂಸಿ, ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಸೇರಿ ಒಟ್ಟು 106 ಟಿಎಂಸಿ ನೀರು ನಮಗೆ ಅನಿವಾರ್ಯವಾಗಿ ಬೇಕಿದೆ. ಈಗ ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ. ನಮಗೆ ಆಗಸ್ಟ್ ಬಳಿಕ ಮಳೆ ಬರಲ್ಲ. ತಮಿಳುನಾಡಿಗೆ ಆಗಸ್ಟ್ ಬಳಿಕ ಮಳೆ ಬರುತ್ತದೆ. ಅಲ್ಲಿ ಅಂತರ್ಜಲ ಕೂಡ ಹೆಚ್ಚಿದೆ. ಆದ್ದರಿಂದ ನಾವು ಹೆಚ್ಚು ಸಂಕಷ್ಟದಲ್ಲಿದ್ದೇವೆ.

ಇದನ್ನೂ ಓದಿ: ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳಯರಿಗೆ ಶೇ.33 ಮೀಸಲಾತಿ: 7 ವರ್ಷ ಕಾಯಬೇಕು?

ವಾಸ್ತವ ಪರಿಸ್ಥಿತಿಯನ್ನು ನಮ್ಮ ಕಾನೂನು ತಂಡ ಮತ್ತು ತಜ್ಞರು ಹಾಗೂ ಅಧಿಕಾರಿಗಳ ತಂಡ CWMC ಎದುರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ 108.4 ಟಿಎಂಸಿ ನೀರನ್ನು ನಾವು ಬಿಡಬೇಕಿತ್ತು. ಆದರೆ ನಾವು ಬಿಟ್ಟಿರುವುದು 39.8 ಟಿಎಂಸಿ ನೀರು ಮಾತ್ರ. ಇಂಥಾ ಪರಿಸ್ಥಿತಿ ಎದುರಾದಾಗ ಸಮರ್ಥವಾಗಿ ಜನರ ಹಿತ ಕಾಪಾಡಲು ಮೇಕೆದಾಟು ನಮಗೆ ಅನಿವಾರ್ಯ.

ಆದ್ದರಿಂದ ನಮ್ಮ ನೀರನ್ನು, ನಮ್ಮ ಜಾಗದಲ್ಲಿ ಬಳಸಿಕೊಳ್ಳಲು, ಸಂಗ್ರಹಿಸಿಕೊಳ್ಳಲು, ವಿದ್ಯುತ್ ಉತ್ಪಾದಿಸಿಕೊಳ್ಳಲು ಮೇಕೆದಾಟು ನಮಗೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಂಥಾ ಪರಿಸ್ಥಿತಿಗೆ ಮೇಕೆದಾಟು ಪರಿಹಾರ ಆಗುತ್ತದೆ. ಈಗಾಗಲೇ ನಾವು ಕೇಂದ್ರ ನೀರಾವರಿ ಸಚಿವರಿಗೆ ಎರಡು ಬಾರಿ ಪತ್ರ ಬರೆದು ಪರಿಸ್ಥಿತಿಯನ್ನು ಸಮಗ್ರವಾಗಿ ವಿವರಿಸಿದ್ದೇವೆ. ಸರ್ವಪಕ್ಷ ನಿಯೋಗದೊಂದಿಗೆ ಭೇಟಿ ಮಾಡಲು ಕೇಂದ್ರದ ಜಲ ಶಕ್ತಿ ಸಚಿವರು ಹಾಗೂ ಪ್ರಧಾನಿ ಅವರ ಸಮಯ ಕೇಳಿದ್ದೇವೆ. ಹೀಗಾಗಿ ಮುಂದೆ ನಾವು ಇಡಬೇಕಾದ ಹೆಜ್ಜೆಗಳ ಕುರಿತು ವೈಜ್ಞಾನಿಕ ಸಂಗತಿಗಳ ಆಧಾರದಲ್ಲಿ ಚರ್ಚಿಸಬೇಕು” ಎಂದು ಹೇಳಿದ್ದಾರೆ.  

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ನವದೆಹಲಿ: ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ, 33 ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ, 30 ವರ್ಷಗಳಿಗೂ ಹೆಚ್ಚು ಕಾಲ ವಿಳಂಬವಾಗಿದ್ದು, ಪ್ರಸ್ತುತ ಈಡೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗಿದೆ. ಮಸೂದೆ ಕಾನೂನಾದರೂ ಮುಂದಿನ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಇದು ಜಾರಿಗೆ ಬರುವುದಿಲ್ಲ.

ನಿನ್ನೆ ಸಂಸತ್ತಿನಲ್ಲಿ ಮಂಡಿಸಲಾದ ಆರು ಪುಟಗಳ ಮಹಿಳಾ ಮೀಸಲಾತಿ ಮಸೂದೆ 2023ರ ಮುಖ್ಯಾಂಶಗಳು:
ಲೋಕಸಭೆ ಮತ್ತು ವಿಧಾನಸಭೆಗಳಿಗೆ ನೇರ ಚುನಾವಣೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುತ್ತವೆ. ಅದೇ ಸಮಯದಲ್ಲಿ ಇದು ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ಅನ್ವಯಿಸುವುದಿಲ್ಲ. ಈ ಮೀಸಲಾತಿಯಲ್ಲಿ ಎಸ್.ಸಿ. ಎಸ್.ಟಿ. ಸಮುದಾಯಕ್ಕೆ ಮೂರನೇ ಒಂದು ಭಾಗವನ್ನು ಒಳಮೀಸಲಾತಿಯಾಗಿ ನೀಡಲಾಗುವುದು.

ಇತರೆ ಹಿಂದುಳಿದ ವರ್ಗಗಳಿಗೆ ಅಸೆಂಬ್ಲಿಗಳಲ್ಲಿ ಯಾವುದೇ ಕೋಟಾ ಇರುವುದಿಲ್ಲ. ಹೀಗಾಗಿ, ಈ ಒಳಮೀಸಲಾತಿಯಲ್ಲಿ ಈ ವರ್ಗಗಳನ್ನು ಸೇರಿಸಲಾಗಿಲ್ಲ. ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ದಳದಂತಹ ಪಕ್ಷಗಳು ಈ ಕಾರಣಕ್ಕಾಗಿಯೇ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದವು.

ಈ ಹಿಂದೆ 2010ರಲ್ಲಿ ಸಲ್ಲಿಸಲಾಗಿದ್ದ ಮಸೂದೆಯಲ್ಲಿದ್ದ ಆಂಗ್ಲೋ-ಇಂಡಿಯನ್ನರ ಮೀಸಲಾತಿಯನ್ನು ಪ್ರಸ್ತುತ ಮಸೂದೆಯಲ್ಲಿ ತೆಗೆದುಹಾಕಲಾಗಿದೆ. ಮಹಿಳಯರಿಗೆ ಮೀಸಲಾದ ಕ್ಷೇತ್ರಗಳು, ಪ್ರತಿ ಕ್ಷೇತ್ರಗಳ ಮರು ವಿಂಗಡಣೆಯ ಸಮಯದಲ್ಲಿ, ಆವರ್ತಕ ರೀತಿಯಲ್ಲಿ ಬದಲಾಯಿಸಲಾಗುವುದು.

ಪ್ರಸ್ತುತ ಸ್ಥಿತಿಯಲ್ಲಿ 15 ವರ್ಷಗಳು ಈ ಮಸೂದೆ ಜಾರಿಯಲ್ಲಿರುತ್ತದೆ. ಅದರ ನಂತರ ಮತ್ತೆ ವಿಸ್ತರಿಸಬೇಕು. ಸಂವಿಧಾನದ 82ನೇ ವಿಧಿ, 2002ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ, 2026ರ ನಂತರದ ಜನಗಣತಿಯ ಆಧಾರದ ಮೇಲೆ ದೇಶಾದ್ಯಂತ ಕ್ಷೇತ್ರಗಳ ಮರು ವಿಂಗಡಣೆ ನಡೆಸಬೇಕು. ಇದರ ಪ್ರಕಾರ 2031ರ ಜನಗಣತಿ ನಂತರವೇ ಮೀಸಲಾತಿ ಜಾರಿಗೆ ಬರಬೇಕು.

ಆದರೆ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಪ್ರಸ್ತುತ ಮುಂದಿನ ಜನಗಣತಿ 2027ರಲ್ಲಿ ನಡೆಯಲಿದೆ. ಆ ನಂತರ ಕ್ಷೇತ್ರಗಳ ಮರು ವಿಂಗಡಣೆ ಕಾರ್ಯ ಮುಗಿದು, 2029ರಿಂದ ಮಹಿಳಾ ಮೀಸಲಾತಿ ಜಾರಿಗೆ ಬರುವ ಸಾಧ್ಯತೆ ಇದೆ.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ತಂದೆ ಪೆರಿಯಾರ್ (ಈರೋಡ್ ವೆಂಕಟಪ್ಪ ರಾಮಸ್ವಾಮಿ):
ಅವರು ತಮಿಳುನಾಡು ಈರೋಡ್‌ನಲ್ಲಿ 1879ರ ಸೆಪ್ಟೆಂಬರ್ 17 ರಂದು ವೆಂಕಟಪ್ಪ ನಾಯಕರ್ ಮತ್ತು ಚಿನ್ನತಾಯಿ ದಂಪತಿಗಳ ಮಗನಾಗಿ ಜನಿಸಿದರು. ಪೆರಿಯಾರ್ ಅವರ ಮಾತೃಭಾಷೆ ಕನ್ನಡವಾದರು ಅವರು ತಮಿಳು, ತೆಲುಗು ಮತ್ತು ಕನ್ನಡ ಮೂರು ದ್ರಾವಿಡ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. 1915ರಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಪೆರಿಯಾರ್ ಈರೋಡ್‌ನಲ್ಲಿ ಬ್ರಾಹ್ಮಣೇತರ ಕಾಂಗ್ರೆಸ್ ಸಮ್ಮೇಳನವನ್ನು ನಡೆಸಿದರು.

1918ರಲ್ಲಿ ಈರೋಡ್ ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ 1919ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. 1920ರಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರು. 1921ರಲ್ಲಿ ಪೆರಿಯಾರ್ ಅವರ ಪತ್ನಿ ನಾಗಮ್ಮ ಮತ್ತು ಅಕ್ಕ ಕಣ್ಣಮ್ಮ ಅವರೊಂದಿಗೆ ಈರೋಡ್‌ನಲ್ಲಿ ನಡೆದ ಸೇಂದಿ ಅಂಗಡಿ ಮುಷ್ಕರದಲ್ಲಿ ಭಾಗವಹಿಸಿದರು. ಈ ಸೇಂದಿ ಅಂಗಡಿ ಮುಷ್ಕರದ ಸಮಯದಲ್ಲಿ, ಅವರು ತಮ್ಮ ಸ್ವಂತ ತೋಪಿನಲ್ಲಿದ್ದ 1000 ತೆಂಗಿನ ಮರಗಳನ್ನು ಕಡಿದು ಹಾಕಿದರು.

1922ರಲ್ಲಿ ಮದ್ರಾಸ್ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಬಳಿಕ ನಡೆದ ಸಭೆಯಲ್ಲಿ ತಿರುಪ್ಪೂರದಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಮಾರ್ಚ್ 3, 1924ರಂದು, ಕೇರಳ ರಾಜ್ಯದ ವೈಕಂ ಎಂಬ ಪಟ್ಟಣದಲ್ಲಿ, ದಲಿತ ಜನರಿಗಾಗಿ ದೇವಾಲಯ ಪ್ರವೇಶಕ್ಕಾಗಿ ಪ್ರತಿಭಟನೆಯನ್ನು ಮಾಡಿ ಯಶಸ್ವಿಯಾದರು. ಹೀಗಾಗಿ ಅವರನ್ನು ‘ವೈಕಂ ವೀರ’ ಎಂದು ಕರೆಯಲಾಗುತ್ತದೆ.

ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೇ ಬ್ರಾಹ್ಮಣೇತರರ ಹಿತಾಸಕ್ತಿ ಕಾಪಾಡಲು 1924ರ ಮೇ 2ರಂದು ‘ಕುಡಿಅರಸು’ (Republic) ಎಂಬ ತಮಿಳು ವಾರಪತ್ರಿಕೆಯನ್ನು ಆರಂಭಿಸಿದರು. 1925ರಲ್ಲಿ ವಿವಿಎಸ್ ಅಯ್ಯರ್ ಅವರ ಚೇರನ್ ಮಾದೇವಿ ಗುರುಕುಲದಲ್ಲಿ ಚಾಲ್ತಿಯಲ್ಲಿದ್ದ ವರುಣಾಶ್ರಮ ಕ್ರಮವನ್ನು ಪೆರಿಯಾರ್ ವಿರೋಧಿಸಿದರು. ನವೆಂಬರ್ 1925ರಲ್ಲಿ ಕಾಂಚಿಪುರಂನಲ್ಲಿ ತಿರು ವಿಕ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಸಮ್ಮೇಳನದಲ್ಲಿ ಪೆರಿಯಾರ್ ಮಂಡಿಸಿದ ಜಾತಿವಾರು ಪ್ರಾತಿನಿಧ್ಯದ ಬೇಡಿಕೆಯನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ನಿರಾಕರಿಸಿದಾಗ ಪೆರಿಯಾರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು.

1925ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ನಂತರ ಅವರು ಸ್ವಾಭಿಮಾನ ಚಳವಳಿಯನ್ನು ಪ್ರಾರಂಭಿಸಿದರು. 1929ರಲ್ಲಿ ಚೆಂಗಲ್ಪಟ್ಟುವಿನಲ್ಲಿ ಸ್ವಾಭಿಮಾನ ಚಳವಳಿಯ ಮೊದಲ ಸಮ್ಮೇಳನ ನಡೆಯಿತು. ಸೌಂದರ ಪಾಂಡ್ಯನಾರ್, ಕುತ್ತೂಸಿ ಗುರುಸ್ವಾಮಿ, ಮೂವಲೂರು ರಾಮಾಮೃತಂ ಅಮ್ಮಯಾರ್ ಮೊದಲಾದವರು ಇದರಲ್ಲಿ ಭಾಗವಹಿಸಿದ್ದರು. 1926ರಲ್ಲಿ, ಅವರು “ದ್ರಾವಿಡನ್” ಪತ್ರಿಕೆಯ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡರು. ನವೆಂಬರ್ 7, 1928 ರಂದು “ರಿವೋಲ್ಟ್” (Revolt) ಎಂಬ ಇಂಗ್ಲಿಷ್ ಪತ್ರಿಕೆಯನ್ನು ಪ್ರಾರಂಭಿಸಿದರು.

ಜನವರಿ 1930ರಲ್ಲಿ, ಕುಟುಂಬ ಯೋಜನೆ ಕುರಿತು ಪುಸ್ತಕವನ್ನು ಪ್ರಕಟಿಸಿ, ಭಾರತದಲ್ಲಿ ಮೊದಲ ಬಾರಿಗೆ ಜನಸಂಖ್ಯೆ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಿದರು. 1933ರಲ್ಲಿ ‘ಕುಡಿಅರಸು’ ವಾರ ಪತ್ರಿಕೆಯನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿದ ಕಾರಣ, 20.11.1933 ರಂದು ಅವರು “ಪುರಟ್ಚಿ” (ಕ್ರಾಂತಿ) ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು. 1934 ರಿಂದ ಜಸ್ಟೀಸ್ ಪಾರ್ಟಿಯನ್ನು ಬೆಂಬಲಿಸಲು ಪ್ರಾರಂಭಿಸಿದ ಪೆರಿಯಾರ್, ಜನವರಿ 12, 1934 ರಂದು ‘ಪಗುತ್ತರಿವು’ (ವಿಚಾರವಾದ)  ಎಂಬ ತಮಿಳು ವಾರಪತ್ರಿಕೆಯನ್ನು ಪ್ರಕಟಿಸಿದರು. ಜೂನ್ 1, 1935 ರಂದು ಜಸ್ಟೀಸ್ ಪಾರ್ಟಿಯಿಂದ ಪ್ರಾರಂಭವಾದ ‘ವಿಡುದಲೈ’ (ವಿಮೋಚನೆ) ವಾರ ಪತ್ರಿಕೆಯನ್ನು ಪೆರಿಯಾರ್ ಜನವರಿ 1, 1937 ರಂದು ದಿನಪತ್ರಿಕೆಯಾಗಿ ಪ್ರಕಟಿಸಿದರು.

1937ರಲ್ಲಿ ಅಂದಿನ ತಮಿಳುನಾಡು ಮುಖ್ಯಮಂತ್ರಿ ರಾಜಾಜಿ ಸರ್ಕಾರದಿಂದ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸುವುದನ್ನು ವಿರೋಧಿಸಿ ಜೈಲಿಗೆ ಹೋಗಿದ್ದರು. ನವೆಂಬರ್ 13, 1938 ರಂದು, ಮರೈಮಲೈ ಅಡಿಗಳ್ ಅವರ ಪುತ್ರಿ ನೀಲಾಂಬಿಕೆ ಅಮ್ಮಯಾರ್ ನೇತೃತ್ವದಲ್ಲಿ ಚೆನ್ನೈನಲ್ಲಿ ನಡೆದ ಮಹಿಳಾ ಸಮ್ಮೇಳನದಲ್ಲಿ, ಅವರಿಗೆ “ಪೆರಿಯಾರ್” ಎಂಬ ಬಿರುದು ನೀಡಲಾಯಿತು. ಡಿಸೆಂಬರ್ 29, 1938 ರಂದು ಜಸ್ಟೀಸ್ ಪಕ್ಷದ ನಾಯಕರಾದರು. 1939ರಲ್ಲಿ, ದ್ರಾವಿಡ ಜನಾಂಗೀಯ ಏಕತಾ ಸಮ್ಮೇಳನದ ಮೂಲಕ ದ್ರಾವಿಡ ರಾಷ್ಟ್ರದ ಬೇಡಿಕೆಯನ್ನು ಎತ್ತಿದರು.

ಆಗಸ್ಟ್ 27, 1944 ರಂದು, ಸೇಲಂನಲ್ಲಿ ಜಸ್ಟೀಸ್ ಪಾರ್ಟಿ ಸಮ್ಮೇಳನದಲ್ಲಿ, ಅಣ್ಣಾದುರೈ ಅವರ ನಿರ್ಣಯದ ಪ್ರಕಾರ, ಜಸ್ಟೀಸ್ ಪಾರ್ಟಿಯ ಹೆಸರನ್ನು “ದ್ರಾವಿಡರ್ ಕಳಗಂ” ಎಂದು ಬದಲಾಯಿಸಲಾಯಿತು. 1957ರಲ್ಲಿ ಜಾತಿ ನಿರ್ಮೂಲನೆಗಾಗಿ ಭಾರತದ ನಕ್ಷೆಯನ್ನು ಸುಡಲಾಯಿತು ಮತ್ತು ದೇವಸ್ಥಾನಗಳಲ್ಲಿ ಜಾತಿ ಪ್ರಾಬಲ್ಯವನ್ನು ಕೊನೆಗಾಣಿಸಲು ಚಳುವಳಿಯನ್ನು ನಡೆಸಿದರು. 1970ರಲ್ಲಿ ಉನ್ಮಯ್ (ಸತ್ಯ) ಎಂಬ ಪಾಕ್ಷಿಕ ಪತ್ರಿಕೆಯನ್ನು ತಿರುಚ್ಚಿಯಿಂದ ಪ್ರಾರಂಭಿಸಿದರು. ಇವರು 1970ರಲ್ಲಿ ಎಲ್ಲಾ ಜಾತಿಯವರೂ ಅರ್ಚಕರಾಗಿಸುವ ಹೋರಾಟವನ್ನು ಮುನ್ನಡೆಸಿದರು.

ಸಮಾಜಕ್ಕೆ ಅವರ ಕೊಡುಗೆಯನ್ನು ಶ್ಲಾಘಿಸಿ, ಜೂನ್ 27, 1970 ರಂದು ವಿಶ್ವಸಂಸ್ಥೆಯ ಯುನೆಸ್ಕೋ “ಆಧುನಿಕ ಪ್ರಪಂಚದ ದಾರ್ಶನಿಕ”, “ಆಗ್ನೇಯ ಏಷ್ಯಾದ ಸಾಕ್ರಟೀಸ್”, “ಸಮಾಜ ಸುಧಾರಣಾ ಚಳವಳಿಯ ಪಿತಾಮಹ” ಅಜ್ಞಾನ, ಮೂಢನಂಬಿಕೆ, ಅರ್ಥಹೀನ ಆಚರಣೆಗಳು ಮತ್ತು ಪದ್ಧತಿಗಳ ಶತ್ರು ಎಂದು ಮೆಚ್ಚುಗೆ ಸೂಚಿಸಿ ಪ್ರಮಾಣ ಪತ್ರ ನೀಡಿದೆ.

ಮಹಿಳಾ ಹಕ್ಕು:
ಮಹಿಳೆಯರು ಪುರುಷರುಗಿಂತ ಕೀಳಲ್ಲ ಎಂದು ಭಾವಿಸಿದವರು ಪೆರಿಯಾರ್. ಮಹಿಳೆಯರು ಪುರುಷ ಸಮಾಜದ ಗುಲಾಮರಾಗದೇ, ಮಾನವ ಸಮಾಜಕ್ಕೆ ಕೊಡುಗೆ ನೀಡುವ ಖ್ಯಾತ ಮಹಿಳೆಯರಾಗಬೇಕು ಎಂದು ಅವರು ಒತ್ತಯಿಸುತ್ತಿದ್ದರು.

ಆಸ್ತಿ ಹಕ್ಕುಗಳು:
ಮಹಿಳೆಯರಿಗೆ ಆಸ್ತಿ ಹಕ್ಕು ನಿರಾಕರಣೆಯೇ ಅವರ ಗುಲಾಮಗಿರಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು. ಅದಕ್ಕಾಗಿ ಮಹಿಳೆಯರು ಸಂಘಟಿತ ಹೋರಾಟ ನಡೆಸಬೇಕು ಎಂದರು.

ಸರ್ಕಾರಿ ಕೆಲಸ:
ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಮಹಿಳೆಯರು ಕೆಲಸ ಮಾಡಿದಾಗ ನಮ್ಮ ಸಮಾಜದಲ್ಲಿ ಕ್ರಾಂತಿಯಾಗುತ್ತದೆ ಎಂದರು.

ಬಾಲ್ಯ ವಿವಾಹ:
ಬಾಲ್ಯ ವಿವಾಹದ ಬಗ್ಗೆ “ಸ್ಲೇಟು ಒಡೆದು ಆಡುವ ಸಮಯದಲ್ಲಿ, ಹೆತ್ತವರು ಮಾಡಿದ ಸಂಕಟದ ಆಟ” ಎಂದು ಹೇಳಿ ಅದನ್ನು ತಡೆಯಲು ಪ್ರಯತ್ನಿಸಿದರು.

ವರದಕ್ಷಿಣೆ ನಿರಾಕರಣೆ ಮತ್ತು ವಿಧವಾ ಪದ್ಧತಿ ನಿರ್ಮೂಲನೆ:
ಸಮಾಜದಲ್ಲಿ ಸರಿಯಾದ ಪ್ರೀತಿ, ತ್ಯಾಗ, ಪ್ರಜ್ಞೆ ಇದ್ದರೆ ಮಾತ್ರ ಇಂತಹ ಅನಿಷ್ಟಗಳು ನಿರ್ಮೂಲನೆ ಸಾಧ್ಯ. ಯುವಕರು, ವಿದ್ಯಾರ್ಥಿಗಳು ಮತ್ತು ಪದವೀಧರರು ಎತ್ತಿನ ಗಾಣದಂತೆ ಆಗದೆ ರೇಸು ಕುದುರೆಗಳಾಗಬೇಕು. ಕಷ್ಟಪಟ್ಟು ದುಡಿದು ಮುನ್ನಡೆಯುವ ಉದಾತ್ತ ಚಿಂತನೆ ನಮ್ಮ ಯುವಕರಲ್ಲಿ ಬೆಳೆಯಬೇಕು. ಪತಿಯನ್ನು ಕಳೆದುಕೊಂಡವರು ಮರುಮದುವೆ ಮಾಡಿಕೊಳ್ಳುವುದು ತಪ್ಪಿಲ್ಲ ಎಂದರು.

ಶಿಸ್ತು:
ನೈತಿಕತೆ ಮತ್ತು ಪರಿಶುದ್ಧತೆ ಹೆಣ್ಣಿಗಷ್ಟೇ ಅಲ್ಲ, ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಾಮಾನ್ಯವಾಗಿದೆ ಎಂದರು. ಮಹಿಳೆಯರು ಸಮಾಜದ ಕಣ್ಣುಗಳು ಎಂದು ಪೆರಿಯಾರ್ ನಂಬಿದ್ದರು.

ವೈಚಾರಿಕತೆ:
ಪೆರಿಯಾರ್ ಎಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಅವರ ವೈಚಾರಿಕತೆಯ ತತ್ವ. ವೈಜ್ಞಾನಿಕ ದೃಷ್ಟಿಕೋನದಿಂದ ಎಲ್ಲವನ್ನೂ ಸಮೀಪಿಸಿ, ಏಕೆ? ಹೇಗೆ? ಎಂದು ಪ್ರಶ್ನೆಗಳನ್ನು ಎತ್ತಿ, ಜ್ಞಾನದ ಮೂಲಕ ಯೋಚಿಸಿ, ನಿರ್ಧಾರವನ್ನು ತೆಗೆದುಕೊಳ್ಳುವುದೇ ವೈಚಾರಿಕತೆ. ನಮ್ಮ ಪೂರ್ವಜರು ಅದನ್ನು ಮಾಡಿದರು ಎಂಬ ಕಾರಣಕ್ಕೆ ನಾವು ಇಂದು ಅದನ್ನು ಅನುಸರಿಸಬಾರದು. ಅವರು ಕಾಲಕ್ಕೆ ತಕ್ಕಂತೆ ಮಾಡುತ್ತಿದ್ದರು; ಇಂದು ಕಾಲ ಬದಲಾಗಿದೆ. ಆಧುನಿಕ ಯುಗದ ಬೆಳವಣಿಗೆಗೆ ಅನುಗುಣವಾಗಿ, ಜ್ಞಾನದ ಸ್ಥಿತಿಯಲ್ಲಿ ಪ್ರಾಯೋಗಿಕ ರೀತಿಯಲ್ಲಿ ನಾವು ವರ್ತಿಸಬೇಕು.

ಪೆರಿಯಾರ್ ಆ ದೃಷ್ಟಿಕೋನದಿಂದ ಚಿಂತಿಸಿದರು. ಅವರ ಚಿಂತನೆಯು ಸಮಾಜ, ಭಾಷೆ, ಶಿಕ್ಷಣ, ಸಂಸ್ಕೃತಿ ಮತ್ತು ಆರ್ಥಿಕತೆಯಂತಹ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಆಯಾಮವನ್ನು ಉಂಟುಮಾಡಿತು.

ಸಮಾಜ:
ತಂದೆ ಪೆರಿಯಾರ್ ಅವರ ಜೀವಿತಾವಧಿಯಲ್ಲಿ ಸಮಾಜದಲ್ಲಿ ಜಾತಿ ಮತ್ತು ಧರ್ಮದ ವಿಭಜನೆಗಳು ತಾಂಡವವಾಡುತ್ತಿದ್ದವು. ಹುಟ್ಟಿನ ಆಧಾರದ ಮೇಲೆ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವೆ ವ್ಯತ್ಯಾಸವಿತ್ತು. ಜಾತಿಯ ಹೆಸರಿನಲ್ಲಿ ಪರಸ್ಪರ ನಿಂದಿಸುವ ಕ್ರೌರ್ಯ ನಡೆದಿತ್ತು. ಈ ಅವಮಾನದಿಂದ ತಂದೆ ಪೆರಿಯಾರ್ ಕೋಪಗೊಂಡಿದ್ದರು. “ಜಾತಿ ಪ್ರಜ್ಞೆಯು ಪ್ರಾಬಲ್ಯದ ಭಾವನೆಯನ್ನು ಬೆಳೆಸುತ್ತದೆ. ಇತರರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಮನುಷ್ಯರನ್ನು ಅವಮಾನಿಸುತ್ತದೆ. ಆ ಜಾತಿ ರಚನೆ ಒಡೆಯಬೇಕು’’ ಎಂದರು. ಜಾತಿಯಿಂದ ಮಾನವನ ಬದುಕಿಗೆ ಯಾವುದೇ ಪ್ರಯೋಜನವಿಲ್ಲ. ಅದರಿಂದ ನಿರರ್ಥಕ ಜಗಳಗಳು ಮತ್ತು ಗೊಂದಲಗಳು ಮೇಲುಗೈ ಸಾಧಿಸುತ್ತವೆ. ಅಂತಹ ಜಾತಿ, ಮನುಷ್ಯನಿಗೆ ಅಗತ್ಯವಿಲ್ಲ ಎಂದು ಅವರು ಒತ್ತಾಯಿಸಿದರು.

ಧರ್ಮ:
ಧರ್ಮಗಳು ಮಾನವ ಸಮಾಜದ ಕಲ್ಯಾಣಕ್ಕಾಗಿ ರಚಿಸಲಾಗಿದೆ. ಆದರೆ ಇಂದು ಧರ್ಮದ ಸ್ಥಿತಿ ಹೇಗಿದೆ? ಎಚ್ಚರಿಕೆಯಿಂದ ಯೋಚಿಸಿ: ಮನುಷ್ಯರಿಗಾಗಿ ಧರ್ಮವೇ? ಧರ್ಮಕ್ಕಾಗಿ ಮನುಷ್ಯರೇ? ಧರ್ಮವೆಂದರೆ ಜನರನ್ನು ಒಗ್ಗೂಡಿಸುವುದಕ್ಕಾಗಿಯೇ? ಅಥವಾ ಪ್ರತ್ಯೇಕಗೊಳಿಸುವುದಕ್ಕಾಗಿಯೇ?’ ಪೆರಿಯಾರ್ ಈ ರೀತಿಯ ತರ್ಕಬದ್ಧ ಪ್ರಶ್ನೆಗಳನ್ನು ಎತ್ತಿದರು; ದೇವರು ನಿರಾಕರಣೆ ತತ್ವವನ್ನು ಪಾಲಿಸಿದರು.

ಶಿಕ್ಷಣ:
ಪೆರಿಯಾರ್ ಶಿಕ್ಷಣವನ್ನು ಸಾಮಾಜಿಕ ಅಭಿವೃದ್ಧಿಗೆ ಅತ್ಯುತ್ತಮ ಸಾಧನವೆಂದು ಪರಿಗಣಿಸಿದರು. ‘ಕಲಿಸಿದ ಶಿಕ್ಷಣವು ಜನರಲ್ಲಿ ವಿವೇಚನೆ, ಸ್ವಾಭಿಮಾನ ಮತ್ತು ಸದ್ಗುಣವನ್ನು ಬೆಳೆಸಬೇಕು; ಶ್ರೇಷ್ಠತೆಯ ಜೀವನವು ಬದುಕುವುದಕ್ಕಾಗಿ ವೃತ್ತಿ ಮಾಡಿ, ಕಚೇರಿಯಲ್ಲಿ ಕೆಲಸ ಮಾಡಲು ಬಳಸಿಕೊಳ್ಳಬೇಕು’ ಎಂದರು. ‘ಶಾಲೆಗಳು ಅವೈಜ್ಞಾನಿಕ ಸಂದೇಶಗಳು ಮತ್ತು ಮೂಢನಂಬಿಕೆಗಳನ್ನು ಕಲಿಸಬಾರದು, ಆತ್ಮಾವಲೋಕನ ಮತ್ತು ಆತ್ಮಸ್ಥೈರ್ಯವನ್ನು ಬೆಳೆಸುವ ಶಿಕ್ಷಣವನ್ನು ಕಲಿಸಬೇಕು’ ಎಂದು ಪೆರಿಯಾರ್ ವಾದಿಸಿದರು.

‘ಸಮಾಜದ ಎಲ್ಲ ವರ್ಗದವರಿಗೂ ಶಿಕ್ಷಣ ನೀಡಬೇಕು. ಕೆಲವು ವರ್ಗಗಳಿಗೆ ಮಾತ್ರ ಶಿಕ್ಷಣದ ಹಕ್ಕಿದೆ ಮತ್ತು ಕೆಲವು ವರ್ಗಗಳಿಗೆ ಶಿಕ್ಷಣದ ಹಕ್ಕಿಲ್ಲ ಎಂಬ ಕಲ್ಪನೆಯನ್ನು ಪೆರಿಯಾರ್ ಕಟುವಾಗಿ ವಿರೋಧಿಸಿದರು. ಎಲ್ಲರಿಗೂ ಶಿಕ್ಷಣ ನೀಡಬೇಕು.ವಿಶೇಷವಾಗಿ ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು. ಮಹಿಳೆಯರಿಗೆ ಶಿಕ್ಷಣ ನೀಡುವುದರಿಂದ ಸಮಾಜವು ವೇಗವಾಗಿ ಪ್ರಗತಿ ಹೊಂದುತ್ತದೆ ಎಂದು ಪೆರಿಯಾರ್ ನಂಬಿದ್ದರು. ಕಂಠಪಾಠಕ್ಕೆ ಆದ್ಯತೆ ನೀಡುವ ಪರೀಕ್ಷಾ ಪದ್ಧತಿ ಮತ್ತು ಅಂಕಗಳಿಗೆ ಆದ್ಯತೆ ನೀಡುವ ಪದ್ಧತಿಯನ್ನು ಪೆರಿಯಾರ್ ಕಟುವಾಗಿ ವಿರೋಧಿಸಿದರು.

ಸ್ತ್ರೀ ಶಿಕ್ಷಣ:
ಮಹಿಳೆಯರು ಶಿಕ್ಷಣ ಪಡೆಯದ ಹೊರತು ಸಾಮಾಜಿಕ ಬದಲಾವಣೆಗಳು ಆಗುವುದಿಲ್ಲ ಎಂದರು. ಪುರುಷರು ಮಹಿಳೆಯರಿಗೆ ಶಿಕ್ಷಣ ನೀಡಬೇಕು. ಅವರಿಗೆ ಲೌಕಿಕ ಶಿಕ್ಷಣ ಮತ್ತು ಸಂಶೋಧನಾ ಶಿಕ್ಷಣವನ್ನು ಉದಾರವಾಗಿ ನೀಡಬೇಕು. ದೇಶದಲ್ಲಿರುವ ಅನಿಷ್ಟಗಳಿಗೆಲ್ಲ ದೊಡ್ಡ ಅನಿಷ್ಟ ಎಂದರೆ ಹೆಣ್ಣನ್ನು ವಿವೇಚನಾರಹಿತ ಜೀವಿಗಳನ್ನಾಗಿ ಇಟ್ಟುಕೊಂಡಿರುವ ಕ್ರೌರ್ಯವೇ ಆಗಿದೆ. ಈ ಪರಿಸ್ಥಿತಿ ಹೋಗಲಾಡಿಸಬೇಕು ಎಂದರು.

ಪೆರಿಯಾರ್ ವಿರೋಧಿಸಿದ್ದು:
ಹಿಂದಿ ಹೇರಿಕೆ, ಕುಲ ಶಿಕ್ಷಣಾ ನೀತಿ, ದೇವದಾಸಿ ಪದ್ಧತಿ, ಮದ್ಯಪಾನ, ಬಾಲ್ಯ ವಿವಾಹ ಮತ್ತು ವರದಕ್ಷಿಣೆ.

ಭಾಷೆ, ಸಾಹಿತ್ಯ:
ಭಾಷೆಯ ಅವಶ್ಯಕತೆಯು ಅದರ ಬಳಕೆಯ ವಿಧಾನವನ್ನು ಅವಲಂಬಿಸಿರುತ್ತದೆ; ಭಾಷೆ, ಪುಸ್ತಕ, ಸಾಹಿತ್ಯ ಯಾವುದೇ ಇದ್ದರೂ ಮನುಷ್ಯನಿಗೆ ಘನತೆ, ವೈಚಾರಿಕತೆ, ಬೆಳವಣಿಗೆ ಮತ್ತು ಸದ್ಗುಣಗಳನ್ನು ನೀಡಬೇಕು ಎಂದು ಭಾವಿಸಿ ಭಾಷೆ, ಸಾಹಿತ್ಯದ ಬೆಳವಣಿಗೆಯ ಬಗ್ಗೆಯೂ ಪೆರಿಯಾರ್ ಹೇಳಿದ್ದಾರೆ. ಧರ್ಮ ಮತ್ತು ದೇವರಿಗೆ ಸಂಬಂಧವಿಲ್ಲದ ಸಾಹಿತ್ಯ, ಎಲ್ಲರಿಗೂ ಸಾಮಾನ್ಯವಾದ ನೈಸರ್ಗಿಕ ಜ್ಞಾನವನ್ನು ನೀಡುವ ಸಾಹಿತ್ಯ, ಯಾರೂ ನಿರಾಕರಿಸಲಾಗದ ವಿಜ್ಞಾನದ ಸಾಹಿತ್ಯ ಇವುಗಳಿಂದ ಮಾತ್ರ ಒಂದು ಭಾಷೆ ಮತ್ತು ಅದರ ಸಾಹಿತ್ಯ ಉನ್ನತವಾಗತ್ತದೆ.

ಅದರೊಂದಿಗೆ ಅದನ್ನು ನಿಭಾಯಿಸುವವರು ಜಾಣರಾಗುತ್ತಾರೆ ಎಂದು ಪೆರಿಯಾರ್ ಹೇಳಿದರು. ಪೆರಿಯಾರ್ ತಿರುಕ್ಕುರಳ್ ಅನ್ನು ಅಮೂಲ್ಯವಾದ ಪುಸ್ತಕವೆಂದು ಪರಿಗಣಿಸಿದ್ದಾರೆ. ಏಕೆಂದರೆ, ಇದು ಎಲ್ಲರಿಗೂ ಸಾಮಾನ್ಯವಾದ ವೈಜ್ಞಾನಿಕ ಪರಿಕಲ್ಪನೆಗಳು ಮತ್ತು ತತ್ವಶಾಸ್ತ್ರಗಳನ್ನು ಒಳಗೊಂಡಿದೆ. ರಾಜಕೀಯ, ಸಮಾಜ, ಆರ್ಥಿಕತೆ ಸೇರಿದಂತೆ ಎಲ್ಲವನ್ನೂ ಈ ಪುಸ್ತಕ ಒಳಗೊಂಡಿದೆ ಇದನ್ನು ಕಲಿತವರಿಗೆ ಸ್ವಾಭಿಮಾನ ಮೂಡುತ್ತದೆ ಎಂದರು.

ಮಹಿಳೆಯರ ಕಲ್ಯಾಣ:
ಆ ಕಾಲದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತುಳಿತಕ್ಕೊಳಗಾಗಿದ್ದರು. ಆದ್ದರಿಂದ ದೇಶ ವಿಮೋಚನೆಗಿಂತ ಮಹಿಳಾ ವಿಮೋಚನೆ ಮುಖ್ಯ ಎಂದು ಪೆರಿಯಾರ್ ಮನಗಂಡರು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಹಿಳೆಯರಿಗೆ-ಪುರುಷರಿಗೆ ಸಮಾನವಾದ ಹಕ್ಕುಗಳನ್ನು ನೀಡಬೇಕು. ಮಹಿಳೆಯರಿಗೆ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿ ನೀಡಬೇಕು. ಮಹಿಳೆಯರು ಆರ್ಥಿಕವಾಗಿ ಇತರರ ಮೇಲೆ ಅವಲಂಬಿತರಾಗಬಾರದು. ಸುಶಿಕ್ಷಿತರಾಗಿ, ಸ್ವಂತ ದುಡಿಮೆಯಲ್ಲಿ, ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಳ್ಳಬೇಕು. ಸ್ಪಷ್ಟ ಜ್ಞಾನದಿಂದ ಹಾಗೂ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳಬೇಕು ಎಂದರು.

ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬಾರದು; ವಿಧವೆಯರು ಮರುಮದುವೆಯಾಗಲು ದಾರಿ ಮಾಡಿಕೊಡಬೇಕು ಎಂಬ ವಿಚಾರವನ್ನು ಒತ್ತಿ ಹೇಳಿದರು. ಕುಟುಂಬದಲ್ಲಿ ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಮಹಿಳೆಯರಿಗೂ ನೀಡಬೇಕು. ಮಹಿಳೆಯರ ಅಭಿಪ್ರಾಯಗಳನ್ನೂ ಗೌರವಿಸಬೇಕು. ಕೌಟುಂಬಿಕ ಆಸ್ತಿಯಲ್ಲಿ ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಮಹಿಳೆಯರಿಗೆ ನೀಡಬೇಕು. ಕೌಟುಂಬಿಕ ಕೆಲಸದಲ್ಲಿ ಪುರುಷರಿಗೆ ಪ್ರತ್ಯೇಕ ಕಾರ್ಯಗಳಿಲ್ಲ. ಪುರುಷರು ಕೂಡ ಕುಟುಂಬದ ಕೆಲಸದಲ್ಲಿ ಪಾಲ್ಗೊಳ್ಳಬೇಕು ಎಂದರು.

ಪೆರಿಯಾರ್ ಬಿತ್ತಿದ ಬೀಜಗಳು:
ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ಮಹಿಳೆಯರಿಗೆ ಮೀಸಲಾತಿ, ಮಹಿಳೆಯರಿಗೆ ಆಸ್ತಿ ಹಕ್ಕುಗಳು, ಕುಟುಂಬ ಕಲ್ಯಾಣ ಯೋಜನೆ, ಅಂತರ್ಜಾತಿ ವಿವಾಹ, ಸುಧಾರಿತ ವಿವಾಹ ಕಾಯಿದೆ ಮುಂತಾದವುಗಳು.

ಮಿತವ್ಯಯ:
ಪೆರಿಯಾರ್ ಅವರು ಮಿತವ್ಯಯ ಮಾಡುವ ಸದ್ಗುಣವನ್ನು ಹೆಚ್ಚು ಒತ್ತಿಹೇಳುತ್ತಿದ್ದರು; ಅದಕ್ಕೆ ತಕ್ಕಂತೆ ಬದುಕಿದರು. ಆರ್ಥಿಕ ಸ್ವಾವಲಂಬನೆ ಇಲ್ಲದಿರುವಾಗ ಎಲ್ಲರೂ ಮಿತವ್ಯಯ ರೂಢಿಸಿಕೊಳ್ಳಬೇಕು ಎಂದರು. ಹಬ್ಬ, ಆಚರಣೆಗಳಿಂದ ಮೂಢನಂಬಿಕೆಗಳು, ದುಂದುವೆಚ್ಚಗಳು ಉಂಟಾಗುವುದರಿಂದ ಅನಾವಶ್ಯಕವಾದ ಆಚಾರ-ವಿಚಾರಗಳನ್ನು ತಪ್ಪಿಸಬೇಕು ಎಂದರು. ಮದುವೆಯಂತಹ ಸಮಾರಂಭಗಳನ್ನು ಆಡಂಬರವಿಲ್ಲದೆ ಅತ್ಯಂತ ಸರಳವಾಗಿ ಹಾಗೂ ಸುಧಾರಿತ ರೀತಿಯಲ್ಲಿ ನಡೆಸಬೇಕು ಎಂದರು.

ಆಲೋಚನಾ ಕೌಶಲ್ಯಗಳು:
ಪೆರಿಯಾರ್ ಅವರ ಚಿಂತನೆಗಳು ದಾರ್ಶನಿಕವಾದದ್ದು; ವೈಜ್ಞಾನಿಕ ಆಧಾರಿತವಾದದ್ದು; ಮಾನವೀಯತೆ ಬೆಳೆಯಲು ಜನ್ಮತಾಳಿದ್ದು; ಅವರು ಎಂದಿಗೂ ಪ್ರಾಯೋಗಿಕವಲ್ಲದ ಅಭಿಪ್ರಾಯಗಳನ್ನು ಹೇಳಲಿಲ್ಲ. ಅಲ್ಲದೆ, ಅವರು ತಮ್ಮ ಸುಧಾರಣಾ ಕಲ್ಪನೆಗಳಿಗೆ ತಕ್ಕಂತೆ ಬದುಕಿದರು; ಅವರ ಜೀವನದುದ್ದಕ್ಕೂ ವಿಚಾರವಾದವನ್ನು ಪ್ರತಿಪಾದಿಸಿದರು; ಸಮಾಜವು ಮೂಢನಂಬಿಕೆಗಳಿಂದ ಚೇತರಿಸಿಕೊಳ್ಳಲು ಶ್ರಮಿಸಿದರು; ಅದಕ್ಕಾಗಿ ಹಲವು ಬಾರಿ ಜೈಲಿಗೆ ಹೋದರು; ಅವರು ಅನೇಕ ಜನರ ತೀವ್ರ ವಿರೋಧವನ್ನು ಎದುರಿಸಿದ್ದಾರೆ.

ಆದರೆ, ಕೊನೆಯ ಉಸಿರು ಇರುವವರೆಗೂ ಸಮಾಜ ಸುಧಾರಕರಾಗಿಯೇ ಬದುಕಿ, ತೀರಿಕೊಂಡರು. ಪೆರಿಯಾರ್ ಅವರ ಚಿಂತನೆಗಳು ಜ್ಞಾನದ ಜಗತ್ತಿಗೆ ಕೀಲಿ ಇದ್ದಂತೆ; ವೈಚಾರಿಕತೆಯ ಮಾರ್ಗಕ್ಕೆ ಮಾರ್ಗದರ್ಶಕರಂತೆ. ಮಾನವ ನೇಮದ ಕರೆ ಗಂಟೆ. ಪ್ರಬಲ ಜಾತಿಗಳಿಗೆ ಎಚ್ಚರಿಕೆ ಧ್ವನಿ. ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಇವರೇ ಸರಿಯಾದ ಮದ್ದು ಎಂದು ವಿದ್ವಾಂಸರು ಹೇಳುತ್ತಾರೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನ ನಾಳೆಯಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಾಳೆ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. 5 ರಾಜ್ಯಗಳ ಚುನಾವಣೆ, ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಈ ವಿಶೇಷ ಅಧಿವೇಶನದಿಂದ ಕುತೂಹಲ ಮೂಡಿಸಿದೆ. ಇನ್ನು ಕೆಲವೇ ವಾರಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಘೋಷಣೆಗಳು ಹೊರಬೀಳಲಿವೆ.

ಮುಂದಿನ ವರ್ಷದ ಆರಂಭದಲ್ಲಿ ಸಂಸತ್ತಿನ ಚುನಾವಣೆಯ ಅಧಿಸೂಚನೆಗಳನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ವಿರೋಧ ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟದ ಹೆಸರಿನಲ್ಲಿ ಒಗ್ಗೂಡಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.  ಈ ಹಿನ್ನಲೆಯಲ್ಲಿ ಸೆಪ್ಟಂಬರ್ 18 ರಿಂದ 22 ರವರೆಗೆ 5 ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ. ಮೊದಲ ದಿನದ ಕಾರ್ಯಕ್ರಮಗಳು ಎಂದಿನಂತೆ ಹಳೆಯ ಕಟ್ಟಡದಲ್ಲಿ ನಡೆಯಲಿವೆ. ಮರುದಿನ (ಸೆ.19) ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ನಡೆಯಲಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನು ‘ಇಂಡಿಯಾ’ ಮೈತ್ರಿಯೊಂದಿಗೆ ಒಗ್ಗೂಡಿಸಿ ಬಿಜೆಪಿ ವಿರುದ್ಧ ಹೋರಾಡಿ: ಸೋನಿಯಾ ಗಾಂಧಿ

ಈ ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ಪ್ರಕಟಿಸದಿರುವುದನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಖಂಡಿಸಿದವು. ಈ ನಡುವೆ ನಾಳೆ (ಸೆ.17) ಸರ್ವಪಕ್ಷ ಸಭೆ ನಡೆಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಸಂಸದೀಯ ಸುದ್ದಿ ಪತ್ರಿಕೆಯಲ್ಲಿ ಈ ವಿಶೇಷ ಸಭೆಯ ಬಗ್ಗೆ ವಿವರಣೆ ನೀಡಲಾಗಿದೆ. ಅದರಲ್ಲಿ, ‘ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನ ಸಂವಿಧಾನ ರಚನಾ ಸಭೆ ಸ್ಥಾಪನೆಯಾದ ನಂತರ ಸಂಸತ್ತಿನ 75 ವರ್ಷಗಳ ಪಯಣದ ಕುರಿತು ಚರ್ಚೆ ನಡೆಯಲಿದೆ. ಅದರಲ್ಲೂ ಸಂಸದೀಯ ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಪಾಠಗಳನ್ನು ವಿವರವಾಗಿ ಚರ್ಚಿಸಲಾಗುವುದು’ ಎಂದು ಹೇಳಲಾಗಿದೆ.

ಇದಲ್ಲದೇ ಹೊಸ ವಿವಾದ ಸೃಷ್ಟಿಸಿರುವ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮಗಳು, ಅಧಿಕಾರಾವಧಿ) ಮಸೂದೆಯನ್ನು ಈ ಅಧಿವೇಶನದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಪತ್ರಿಕೆ ತಿಳಿಸಿದೆ. ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ಕೇಂದ್ರ ಸರ್ಕಾರವು ಪ್ರಸ್ತುತ ವಿಶೇಷ ಅಧಿವೇಶನದಲ್ಲಿ ಅದನ್ನು ಅಂಗೀಕರಿಸಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ್: ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಿದ ಅಪರಾಧಕ್ಕಾಗಿ ಒಬ್ಬ ಅಮೇರಿಕನ್ ಸೇರಿದಂತೆ 18 ಸಿಬ್ಬಂದಿಯನ್ನು ಬಂಧಿಸಲಾಗಿದೆ!

ಕೆಲವು ವಾರಗಳ ಹಿಂದೆ ಕೇಂದ್ರ ಸರ್ಕಾರವು ‘ಒಂದು ದೇಶ; ಒಂದು ಚುನಾವಣೆ’ ಯೋಜನೆಯ ಅಧ್ಯಯನಕ್ಕಾಗಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಹೀಗಾಗಿ ಈ ವಿಶೇಷ ಅಧಿವೇಶನದಲ್ಲಿ ಅದರ ಬಗ್ಗೆ ಚರ್ಚೆಯಾಗಬಹುದು ಎಂಬ ಮಾಹಿತಿ ಹೊರಬಿದ್ದಿರುವುದರಿಂದ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರನ್ನು ಒತ್ತಾಯಿಸಿ ವಿಪ್ ಆದೇಶ ಹೊರಡಿಸಲಾಗಿದೆ.

ದೇಶ ರಾಜಕೀಯ

ಬಿಜೆಪಿ ವಿರುದ್ಧ ಮೈತ್ರಿಯೊಂದಿಗೆ ಇಂಡಿಯಾ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ ಮಾತನಾಡಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಕಾಂಗ್ರೆಸ್ ಪಕ್ಷದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಿತಿಯಾಗಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಮಿತಿಯಲ್ಲಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ 39 ಸದಸ್ಯರಿದ್ದಾರೆ.

ಈ ಹಿನ್ನಲೆಯಲ್ಲಿ, ಈ ಸಮಿತಿಯು ಕಳೆದ ಆಗಸ್ಟ್ 20 ರಂದು ಪುನರ್ ರಚಿಸಲಾಯಿತು. ಸಚಿನ್ ಪೈಲಟ್ ಮತ್ತು ಶಶಿ ತರೂರ್ ಸಮಿತಿಯಲ್ಲಿ ಹೊಸ ಸೇರ್ಪಡೆಯಾದರು. ಈ ಸಮಿತಿಯು ಕಾಂಗ್ರೆಸ್ ಪಕ್ಷದಲ್ಲಿ ಅತ್ಯುನ್ನತ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಅದನ್ನು ಜಾರಿಗೊಳಿಸುವ ಅಧಿಕಾರವನ್ನು ಹೊಂದಿರುತ್ತದೆ.

ಇದನ್ನೂ ಓದಿ: ಅಫ್ಘಾನಿಸ್ತಾನ್: ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಿದ ಅಪರಾಧಕ್ಕಾಗಿ ಒಬ್ಬ ಅಮೇರಿಕನ್ ಸೇರಿದಂತೆ 18 ಸಿಬ್ಬಂದಿಯನ್ನು ಬಂಧಿಸಲಾಗಿದೆ!

ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿ ಪುನಾರಚನೆ ಬಳಿಕ ಇಂದು ಮೊದಲ ಸಭೆ ನಡೆಯಿತು. ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಜನತೆಗೆ ಏಕತೆಯ ಸಂದೇಶ ಸಾರಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಕಾಂಗ್ರೆಸ್ ಪಕ್ಷವನ್ನು ‘ಇಂಡಿಯಾ’ ಮೈತ್ರಿಯೊಂದಿಗೆ ಒಗ್ಗೂಡಿಸಿ ಬಿಜೆಪಿ ವಿರುದ್ಧ ಹೋರಾಡುವಂತೆ ಕೇಳಿಕೊಂಡರು.

ವಿರೋಧ ಪಕ್ಷಗಳನ್ನು ಒಳಗೊಂಡ ‘ಇಂಡಿಯಾ’ ರ‍್ಯಾಲಿಯನ್ನು ಅಕ್ಟೋಬರ್ ಮೊದಲ ವಾರದಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ರ‍್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಕಮಲ್ ನಾಥ್ ಇಂದು ಹೇಳಿದ್ದಾರೆ.

ಪಕ್ಷದ ಅಧ್ಯಕ್ಷ ಖರ್ಗೆ ಮತ್ತು ಮೈತ್ರಿಕೂಟದ ಇತರ ಪಕ್ಷಗಳ ನಾಯಕರು ಸಮಾಲೋಚನೆ ನಡೆಸುತ್ತಿದ್ದು, ರ‍್ಯಾಲಿ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎಂಬುದರ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ವಿದೇಶ

ಅಫ್ಘಾನಿಸ್ತಾನದ ತಾಲಿಬಾನ್‌ಗಳು, ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಿದ ಆರೋಪದ ಮೇಲೆ ಎನ್‌ಜಿಒ ಗುಂಪಿನಿಂದ ಒಬ್ಬ ಅಮೇರಿಕನ್ ಸೇರಿದಂತೆ 18 ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ತಾಲಿಬಾನ್ ಅಧಿಕಾರಿಗಳು ಈ ತಿಂಗಳು ಕೇಂದ್ರ ಘೋರ್ ಪ್ರಾಂತ್ಯದಲ್ಲಿರುವ ತನ್ನ ಕಚೇರಿಯ ಮೇಲೆ ಎರಡು ಬಾರಿ ದಾಳಿ ನಡೆಸಿ ಸಿಬ್ಬಂದಿಯನ್ನು ಕರೆದೊಯ್ದಿದ್ದಾರೆ ಎಂದು ಅಫ್ಘಾನ್ ಮೂಲದ ಇಂಟರ್ನ್ಯಾಷನಲ್ ಅಸಿಸ್ಟೆನ್ಸ್ ಮಿಷನ್ (ಐಎಎಂ) ಶುಕ್ರವಾರ ದೃಢಪಡಿಸಿದೆ. ಐಎಎಂ ಸ್ವಿಟ್ಜರ್ಲೆಂಡ್‌ನಲ್ಲಿ ನೋಂದಾಯಿಸಲಾದ ಎನ್‌ಜಿಒ ಆಗಿದ್ದು , ಬಂಧಿತರಲ್ಲಿ ಒಬ್ಬ ವಿದೇಶಿಯರೂ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಆ ವ್ಯಕ್ತಿಯ ರಾಷ್ಟ್ರೀಯತೆಯನ್ನು ಬಹಿರಂಗಪಡಿಸಲಿಲ್ಲ.

“ಈ ಘಟನೆಗಳಿಗೆ ಕಾರಣವಾದ ಸಂದರ್ಭಗಳ ಬಗ್ಗೆ ನಮಗೆ ತಿಳಿದಿಲ್ಲ ಮತ್ತು ನಮ್ಮ ಸಿಬ್ಬಂದಿ ಸದಸ್ಯರ ಬಂಧನಕ್ಕೆ ಕಾರಣವನ್ನು ಸೂಚಿಸಲಾಗಿಲ್ಲ” ಎಂದು IAM ಹೇಳಿಕೆ ತಿಳಿಸಿದೆ. “ನಮ್ಮ ಸಹೋದ್ಯೋಗಿಗಳ ಯೋಗಕ್ಷೇಮ ಮತ್ತು ಸುರಕ್ಷತೆಯು ನಮಗೆ ಅತ್ಯುನ್ನತವಾಗಿದೆ ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಶೀಘ್ರ ಬಿಡುಗಡೆಯನ್ನು ಪಡೆಯಲು ನಾವು ಎಲ್ಲವನ್ನೂ ಮಾಡುತ್ತಿದ್ದೇವೆ” ಎಂದು ಅದು ಹೇಳಿದೆ. ಬಂಧಿತರನ್ನು ಅಫ್ಘಾನ್ ರಾಜಧಾನಿ ಕಾಬೂಲ್‌ಗೆ ವರ್ಗಾಯಿಸಲಾಗಿದೆ.

ಬಂಧಿತರಲ್ಲಿ ಅಮೆರಿಕನ್ ಸೇರಿದಂತೆ ಹಲವು ಮಹಿಳೆಯರು ಇದ್ದಾರೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಅಬ್ದುಲ್ ವಾಹಿದ್ ಹಮಾಸ್ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಫ್ಘಾನಿಸ್ತಾನದಲ್ಲಿ “ಕ್ರಿಶ್ಚಿಯಾನಿಟಿ ಪ್ರಚಾರ ಮಾಡುವುದು ಮತ್ತು ಹರಡುವುದು” ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

IAM ತನ್ನ ವೆಬ್‌ಸೈಟ್‌ನಲ್ಲಿ, ಲಾಭೋದ್ದೇಶವಿಲ್ಲದ ನಮ್ಮ ಗುಂಪು ಅಫ್ಘಾನಿಸ್ತಾನದಲ್ಲಿ ಜೀವನವನ್ನು ಸುಧಾರಿಸಲು ಮತ್ತು ಸ್ಥಳೀಯ ಆರೋಗ್ಯ, ಸಮುದಾಯ ಅಭಿವೃದ್ಧಿ ಮತ್ತು ಶಿಕ್ಷಣ ಸಾಮರ್ಥ್ಯವನ್ನು ನಿರ್ಮಿಸಲು ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತದೆ. “ನಾವು ಅಫ್ಘಾನಿಸ್ತಾನದ ಜನರು ಮತ್ತು ಅಂತರರಾಷ್ಟ್ರೀಯ ಕ್ರಿಶ್ಚಿಯನ್ ಸ್ವಯಂಸೇವಕರ ನಡುವಿನ ಪಾಲುದಾರಿಕೆಯಾಗಿದ್ದೇವೆ ಮತ್ತು ನಾವು 1966 ರಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ.

ಎರಡು ವರ್ಷಗಳ ಹಿಂದೆ ಕಾಬೂಲ್‌ನಲ್ಲಿ ಅಮೆರಿಕಾ ಬೆಂಬಲಿತ ಅಫ್ಘಾನ್ ಸರ್ಕಾರದಿಂದ ಅಧಿಕಾರವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಇಸ್ಲಾಮಿಕ್ ಕಾನೂನು ಅಥವಾ ಶರಿಯಾದ ಕಠಿಣ ವ್ಯಾಖ್ಯಾನವನ್ನು ವಿಧಿಸಿದೆ. ಅವರು ಹದಿಹರೆಯದ ಹುಡುಗಿಯರನ್ನು ರಾಷ್ಟ್ರವ್ಯಾಪಿ ಆರನೇ ತರಗತಿಯನ್ನು ಮೀರಿದ ಶಾಲೆಗಳಿಂದ ನಿರ್ಬಂಧಿಸಿದ್ದಾರೆ ಮತ್ತು ಹೆಚ್ಚಿನ ಮಹಿಳಾ ಸರ್ಕಾರಿ ಉದ್ಯೋಗಿಗಳನ್ನು ಮನೆಯಲ್ಲೇ ಇರುವಂತೆ ಆದೇಶಿಸಿದ್ದಾರೆ.

ಬಡ ಅಫ್ಘಾನಿಸ್ತಾನದಲ್ಲಿ, ಎನ್‌ಜಿಒ ಸಂಸ್ಥೆಗಳಲ್ಲಿ ಕೆಲಸ ಮಾಡುವುದನ್ನು ತಾಲಿಬಾನ್ ನಿಷೇಧಿಸಿದೆ. ಮಹಿಳೆಯರಿಗೆ ಸಾರ್ವಜನಿಕ ಉದ್ಯಾನವನಗಳು, ಜಿಮ್‌ಗಳು ಅಥವಾ ಸ್ನಾನಗೃಹಗಳಿಗೆ ಭೇಟಿ ನೀಡಲು ಅನುಮತಿಸಲಾಗುವುದಿಲ್ಲ ಮತ್ತು ದೀರ್ಘ ರಸ್ತೆ ಪ್ರವಾಸಗಳಿಗೆ ನಿಕಟ ಪುರುಷ ಸಂಬಂಧಿ ಅವರೊಂದಿಗೆ ಹೋಗಬಹುದು.” ಎಂದು ಹೇಳಿಕೊಂಡಿದೆ.

ರಾಜಕೀಯ ರಾಜ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡದೆ ಪ್ರತಿಯೊಬ್ಬ ಭಾರತೀಯ ಪತ್ರಕರ್ತರನ್ನು ಬಹಿಷ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಒಂದು ರಾಜಕೀಯ ಪಕ್ಷದ ಮುಖವಾಣಿಯಂತೆ ವರ್ತಿಸಿ ಮಾಧ್ಯಮ ನೀತಿಗೆ ಧಕ್ಕೆ ತಂದ 14 ಪತ್ರಕರ್ತರಿಗೆ ಬಹಿಷ್ಕಾರ ಹಾಕಿದ್ದು ಹೇಗೆ ತಪ್ಪು? ಎಂದು ಬಿಜೆಪಿ ವರಿಷ್ಠರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಜೆಪಿ ಅಧ್ಯಕ್ಷರಾದ ಜೆಪಿ ನಡ್ಡಾ ಅವರೆ, ದೇಶದ ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾ ಗೋಷ್ಠಿಯನ್ನು ನಡೆಸದೆ ದೇಶದ ಎಲ್ಲಾ ಪತ್ರಕರ್ತರನ್ನು ಬಹಿಷ್ಕರಿಸಿರುವಾಗ…. ಒಂದು ಪಕ್ಷದ ತುತ್ತೂರಿಯಂತೆ ಕಾರ್ಯನಿರ್ವಹಿಸುತ್ತಾ ಮಾಧ್ಯಮ ಧರ್ಮಕ್ಕೆ ದ್ರೋಹ ಬಗೆಯುತ್ತಿರುವ 14 ಪತ್ರಕರ್ತರ ಮೇಲೆ ಬಹಿಷ್ಕಾರ ಹೇರಿದ್ದನ್ನು ಪ್ರಶ್ನಿಸುವ ಯಾವ ನೈತಿಕತೆ ನಿಮಗಿದೆ ಹೇಳಿ ಎಂದಿರುವ ಸಿದ್ದರಾಮಯ್ಯ, ಈ ಕೆಳಗಿನ ಮಾಹಿತಿಯನ್ನು ಎಕ್ಸ್ ಪೇಜ್ ನಲ್ಲಿ ಪ್ರಕಟಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.  

ಸತ್ಯದ ವರದಿ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾದ ಪತ್ರಕರ್ತರು: 1) ಸಿದ್ದಿಕ್ ಕಪ್ಪನ್, 2) ಮೊಹಮ್ಮದ್‌ ಝುಬೇರ್, 3) ಅಜಿತ್ ಓಝಾ, 4) ಜಸ್ಪಾಲ್‌ ಸಿಂಘ್‌, 5) ಸಜದ್ ಗುಲ್, 6) ಕಿಶೋರಚಂದ್ರ ವಾಂಗ್‌ಖೇನ್ 7) ಪ್ರಶಾಂತ್ ಕನೋಜಿಯಾ.

ಇದನ್ನೂ ಓದಿ: ಸುಳ್ಳು ಸುದ್ದಿ, ವದಂತಿಗಳ ಮೂಲಕ ಸಮಾಜದ ಶಾಂತಿ ಕದಡುವವರ ವಿರುದ್ಧ ಸ್ವಯಂಪ್ರೇರಿತ ಎಫ್.ಐ.ಆರ್ ದಾಖಲಿಸಿ! – ಸಿದ್ದರಾಮಯ್ಯ

ಸತ್ಯದ ದನಿಯಾಗಿ ನಿಂತಿದ್ದಕ್ಕೆ ಮೋದಿ ಆಡಳಿತದಲ್ಲಿ ಕೊಲೆಯಾದ ಪತ್ರಕರ್ತರು: 1) ರಾಕೇಶ್ ಸಿಂಗ್ ಉತ್ತರ ಪ್ರದೇಶ, ಸರ್ಕಾರಿ ನಿಧಿ ಅವ್ಯವಹಾರ ಕುರಿತು ವರದಿ 2) ಶುಭಂ ಮಣಿ ತ್ರಿಪಾಠಿ, ಉತ್ತರ ಪ್ರದೇಶ, ಮರಳು ದಂಧೆ ಕುರಿತು ವರದಿ 3) ಜಿ.ಮೋಸೆಸ್‌, ತಮಿಳುನಾಡು, ಗೋಮಾಳ ಅಕ್ರಮ ಮಾರಾಟ ಕುರಿತು ವರದಿ 4) ಪರಾಗ್‌ ಭುಯಾನ್, ಅಸ್ಸಾಮ್‌, ಎಸ್‌.ಐ ನೇಮಕಾತಿ ಹಗರಣ ಕುರಿತು ವರದಿ 5) ಗೌರಿ ಲಂಕೇಶ್‌, ಕೋಮುವಾದ ವಿರೋಧಿಸಿದ್ದಕ್ಕೆ.

ಪತ್ರಿಕಾ ಸ್ವಾತಂತ್ಯ್ರ: ಜಗತ್ತಿನಲ್ಲಿ ಭಾರತದ ಸ್ಥಾನ, ಅವಸಾನ..!! 2015ರಲ್ಲಿ 136ನೇ ಸ್ಥಾನ, 2019ರಲ್ಲಿ 140ನೇ ಸ್ಥಾನ, 2022ರಲ್ಲಿ 150ನೇ ಸ್ಥಾನ, 2023ರಲ್ಲಿ 161ನೇ ಸ್ಥಾನ.

ಪಕ್ಷವೊಂದು ಸುದ್ದಿ ಮಾಧ್ಯಮಕ್ಕೆ ಬರುವುದಿಲ್ಲ, ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದು ನಿಜವಾದ ಅಭಿವ್ಯಕ್ತಿ ಸ್ವಾತಂತ್ಯ್ರದ ಹರಣ…!! ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ಇಂದು ಚಾಲನೆ; ತಮಿಳುನಾಡಿನಲ್ಲಿ ಸಂಭ್ರಮದ ವಾತಾವರಣ!

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಇಂದು ಪಾಲ್ಗೊಂಡು ಮಾತನಾಡಿದರು.

ಆಯಾ ಠಾಣಾ ವ್ಯಾಪ್ತಿಗಳಲ್ಲಿ ಅಕ್ರಮ ಚಟುವಟಿಕೆಗಳು, ಕಾನೂನು ಬಾಹಿರ ಸಂಘಟಿತ ಅಪರಾಧಗಳು ನಡೆಯುತ್ತಿದ್ದರೆ ಡಿಸಿಪಿ, ಎಸ್.ಪಿ ಮಟ್ಟದ ಅಧಿಕಾರಿಗಳನ್ನೂ ಹೊಣೆ ಮಾಡಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ನಮ್ಮ ಸರ್ಕಾರ ಕೇವಲ‌ ಕೆಳ ಹಂತದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಕೈತೊಳೆದುಕೊಳ್ಳುವುದಿಲ್ಲ, ಹಿರಿಯ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸುಳ್ಳು ಸುದ್ದಿ, ವದಂತಿಗಳ ಮೂಲಕ ಸಮಾಜದ ಶಾಂತಿ ಕದಡುವವರ ವಿರುದ್ಧ ಸ್ವಯಂಪ್ರೇರಿತ ಎಫ್.ಐ.ಆರ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ ಪ್ರಕರಣಗಳಲ್ಲಿ ದೂರು ಕೊಡುವವರು ಬರಲಿ ಎಂದು ಕಾಯುತ್ತಾ ಕೂರಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಸಿಸಿಬಿಯನ್ನು ಇನ್ನಷ್ಟು ಸದೃಢಗೊಳಿಸಲು 230 ಸಿಬ್ಬಂದಿಯನ್ನು ಹೊಸದಾಗಿ ನೇಮಿಸಿಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಸಿಬ್ಬಂದಿಗೆ ಅಗತ್ಯವಿದ್ದರೆ ಹೊಸ ಕಟ್ಟಡಗಳನ್ನು ಒದಗಿಸಲಾಗುವುದು ಎಂಬ ಭರವಸೆಯನ್ನು ನೀಡಿದರು.

ಹಿರಿಯ ಅಧಿಕಾರಿಗಳು ಜನ ಸಂಪರ್ಕಕ್ಕೆ ಸಿಗದೇ ಹೋದರೆ , ಜನಸ್ನೇಹಿ ಆಗದೇ ಹೋದರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಠಾಣೆಗೆ ಬರುವ ಬಡವರು, ಜನಸಾಮಾನ್ಯರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ಭರವಸೆ ಹುಟ್ಟುವ ರೀತಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ಇಂದು ಚಾಲನೆ; ತಮಿಳುನಾಡಿನಲ್ಲಿ ಸಂಭ್ರಮದ ವಾತಾವರಣ!

ರಾಜಕೀಯ

ಚೆನ್ನೈ: 2021ರ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಕಟಿಸಲಾದ ಡಿಎಂಕೆ ಚುನಾವಣಾ ಪ್ರಣಾಳಿಕೆಯಲ್ಲಿ ‘ತಮಿಳುನಾಡಿನ ಎಲ್ಲ ಗೃಹಿಣಿಯರಿಗೆ ಮಾಸಿಕ ರೂ.1,000 ಹಕ್ಕುಭತ್ಯೆ ನೀಡುತ್ತೇವೆ’ ಎಂದು ಘೋಷಿಸಲಾಗಿತ್ತು.

ಡಿಎಂಕೆ ಚುನಾವಣೆಯಲ್ಲಿ ಗೆದ್ದು ತಮಿಳುನಾಡಿನಲ್ಲಿ ಸರ್ಕಾರ ರಚಿಸಿದಾಗ, ಹಲವಾರು ಘೋಷಣೆಗಳನ್ನು ಜಾರಿಗೆ ತಂದರೂ, ಮನೆಯ ಎಜಮಾನಿಗೆ ತಿಂಗಳಿಗೆ ರೂ.1,000 ಹಕ್ಕುಭತ್ಯೆ ನೀಡುವ ಯೋಜನೆಯನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಏತನ್ಮಧ್ಯೆ, ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ 2023-24ನೇ ಸಾಲಿನ ಬಜೆಟ್‌ನಲ್ಲಿ ಮನೆಯ ಎಜಮಾನಿಗೆ ಮಾಸಿಕ ರೂ.1,000 ಹಕ್ಕುಭತ್ಯೆ ನೀಡುವ ಯೋಜನೆಗೆ ರೂ.7 ಸಾವಿರ ಕೋಟಿ ಹಣವನ್ನು ನಿಗದಿಪಡಿಸಲಾಯಿತು. ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು (ಇಂದು) ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿತು.

ಕಳೆದ ಜುಲೈ 24 ರಂದು ಧರ್ಮಪುರಿ ಜಿಲ್ಲೆಯ ತೊಪ್ಪೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಹಿಳೆಯರು ಅರ್ಜಿ ಸಲ್ಲಿಸುವ ಶಿಬಿರವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಉದ್ಘಾಟಿಸಿದರು. ಇದಕ್ಕಾಗಿ ರಾಜ್ಯಾದ್ಯಂತ 35 ಸಾವಿರದ 925 ಶಿಬಿರಗಳನ್ನು ನಡೆಸಲಾಗಿದೆ. 68 ಸಾವಿರದ 190 ಸ್ವಯಂಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರವು ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಯೋಜನೆಗೆ ಒಂದು ಕೋಟಿ 63 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಸುಮಾರು 56 ಲಕ್ಷದ 50 ಸಾವಿರ ಅರ್ಜಿಗಳು ಅನರ್ಹವೆಂದು ತಿರಸ್ಕೃತಗೊಂಡಿವೆ. ಅಂತಿಮವಾಗಿ 1 ಕೋಟಿ 6 ಲಕ್ಷದ 55 ಸಾವಿರ ಅರ್ಹ ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಹಿನ್ನಲೆಯಲ್ಲಿ, ಒಂದು ಕೋಟಿ ಮನೆಯ ಎಜಮಾನಿಗೆ ಮಾಸಿಕ ರೂ.1,000 ನೀಡುವ ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇಂದು ಉದ್ಘಾಟಿಸಿದರು. ಈ ಯೋಜನೆಯನ್ನು ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಸಚಿವರು ಉದ್ಘಾಟಿಸಿದ್ದಾರೆ.

ಈ ಯೋಜನೆಯಡಿ, ಅರ್ಹ ಗೃಹಿಣಿಯರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಒಂದು ರೂಪಾಯಿಯನ್ನು ಕಳುಹಿಸಿಕೊಟ್ಟು ಪರೀಕ್ಷಿಸಲಾಗಿದೆ. ಈ ನಡುವೆ ನಿನ್ನೆಯಿಂದ ಹಲವರ ಬ್ಯಾಂಕ್ ಖಾತೆಗೆ ರೂ.1000 ಜಮಾ ಆಗಿದೆ. ಆದರೆ, ತಕ್ಷಣವೇ ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗಲಿಲ್ಲ. ಖಾತೆಯಿಂದ ಇಂದು ಹಣವನ್ನು ತೆಗೆಯಬಹುದು. ಅಲ್ಲದೆ, ತಿರಸ್ಕರಿಸಿದ ಅರ್ಜಿದಾರರಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ದಾಖಲೆ ಪರಿಶೀಲನೆಯಲ್ಲಿ ಅರ್ಹ ಫಲಾನುಭವಿಗಳಾಗಿದ್ದರೆ ಅವರನ್ನೂ ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ಸೇರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.