ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
February 2024 » Page 6 of 7 » Dynamic Leader
October 23, 2024
Home 2024 February (Page 6)
ರಾಜ್ಯ

ಯಾದಗಿರಿ: ನೆನ್ನೆ ಕೋಕಲ್ ಗ್ರಾಮದಲ್ಲಿ “ಸ್ವರ ಸಾಮ್ರಾಟ್ ಸಂಗೀತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ತಂಡ” ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ 2023-24 ಸಾಲಿನ ಅಸ್ಪೃಶ್ಯತೆ ಆಚರಣೆಯ ಬಗ್ಗೆ ಜನಜಾಗೃತಿ ಮೂಡಿಸು ಜಾನಪದ ಹಾಗೂ ಬೀದಿ ನಾಟಕಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಲಾಯಿತು.

ಈ ದೇಶದಲ್ಲಿ ಕೆಲವು ಮತಾಂಧ ಶಕ್ತಿಗಳು, ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ನ್ಯಾಯ ಮುಂತಾದವುಗಳನ್ನು ಬದಿಗೊತ್ತಿ, ಧರ್ಮ, ಜಾತಿ ಹಾಗೂ ಭಾಷೆಯ ವಿಚಾರಗಳನ್ನು ಮುಂದಿಟ್ಟು ಅದನ್ನು ರಾಜಕೀಯ ಗೊಳಿಸಿ, ಈ ದೇಶವನ್ನು / ರಾಜ್ಯವನ್ನು ತುಂಡಾಡುತ್ತಿರುವ ಇಂತಹ ಸಂದರ್ಭದಲ್ಲಿ, “ಸ್ವರ ಸಾಮ್ರಾಟ್ ಸಂಗೀತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ತಂಡ” ಮತ್ತು ಸಮಾಜ ಕಲ್ಯಾಣ ಇಲಾಖೆ, ಗ್ರಾಮಗಳಲ್ಲಿ ಈ ರೀತಿಯ ಅಸ್ಪೃಶ್ಯತೆ ಆಚರಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಜಾನಪದ ಕಲೆಯನ್ನು ನಾಟಕದ ಮೂಲಕ ಪ್ರದರ್ಶಿಸಿ, ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿತ್ತು.

ಈ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೈಯದ್ ಅಲಿ, ಆಶಾ ಕಾರ್ಯಕರ್ತರು, ಕೊಂಕಲ್ ಹಾಸ್ಟೆಲ್ ವಾರ್ಡನ್ ಲಕ್ಷ್ಮಣ, ಕಲಾ ತಂಡದ ನಾಯಕರಾದ ಶರಣು ಎಸ್ ನಾಟೇಕರ್, ಶ್ರೀಮತಿ ನಿರ್ಮಲಾ ಎಸ್ ನಾಟೇಕರ್, ಶಾಂತಯ್ಯ ಎಸ್ ಮಠಪತಿ, ಸದಾಶಿವ ನಾಟೇಕರ್, ಮರೆಪ್ಪ ಈಟೆ, ರಾಜು ಕೊಂಕಲ್, ಗಿರೀಶ್ ಚಟ್ಟೇರಕರ್ ಇನ್ನಿತರರು ಗ್ರಾಮಸ್ಥರು ಭಾಗವಹಿಸಿದ್ದರು.

ರಾಜ್ಯ

ನವದೆಹಲಿ: ರಾಯಚೂರಿನಲ್ಲಿ ಪ್ರತಿಷ್ಠಿತ ಏಮ್ಸ್ (AIIMS ) ಸಂಸ್ಥೆಯನ್ನು ಸ್ಥಾಪಿಸುವ ಕುರಿತಂತೆ ದೆಹಲಿಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಸಚಿವರಾದ ಡಾ.ಮನ್ಸುಖ್ ಮಾಂಡವಿಯಾ ಅವರನ್ನು  ಭೇಟಿ ಮಾಡಿ ಎರಡನೇ ಬಾರಿ ಮನವಿ ಸಲ್ಲಿಸಿದ್ದಾರೆ.

ರಾಯಚೂರಿನಲ್ಲಿ ಪ್ರತಿಷ್ಠಿತ ಏಮ್ಸ್ ಸಂಸ್ಥೆಯನ್ನು ಸ್ಥಾಪಿಸಬೇಕೆಂಬುದು ಇಲ್ಲಿನ ಜನರ ಬಹುದಿನಗಳ ಕನಸಾಗಿದ್ದು ಅದಕ್ಕಾಗಿ ನಡೆಸಲಾಗುತ್ತಿರುವ ಹೋರಾಟ 636 ದಿನಗಳಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರನ್ನು ಮತ್ತೊಮ್ಮೆ ಭೇಟಿ ಮಾಡಿ ರಾಯಚೂರಿನಲ್ಲಿ ಸಂಸ್ಥೆಯ ಸ್ಥಾಪನೆಯ ಅಗತ್ಯತೆಯ ಕುರಿತು ಮನವರಿಕೆ ಮಾಡಿಕೊಡಲಾಯಿತು ಎಂದು ಹೇಳಿದ್ದಾರೆ.

ಕೇಂದ್ರ ಸಚಿವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಈ ಸಂಸತ್ ಅಧಿವೇಶನದಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ನಮ್ಮದಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜು ಅವರು ಉಪಸ್ಥಿತರಿದ್ದರು.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಾವಿರಾರು ಸಂಖ್ಯೆಯಲ್ಲಿ ಜನರು ತಮ್ಮ ಅಹವಾಲುಗಳನ್ನು ಹೊತ್ತು ಜನಸ್ಪಂದನಕ್ಕೆ ಆಗಮಿಸಿದ್ದಾರೆ. ಇಂದು ಇಡೀ ದಿನ ಇವರೆಲ್ಲರ ಸಮಸ್ಯೆಗಳಿಗೆ ಸ್ಥಳದಲ್ಲೇ ಅಥವಾ ನಿಗದಿತ ಕಾಲಮಿತಿಯೊಳಗೆ ಪರಿಹಾರ ಒದಗಿಸುವ ಮೂಲಕ ಕಣ್ಣೀರು ಒರೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹೇಳಿದರು.

ಕಳೆದ ಬಾರಿಯ ಜನಸ್ಪಂದನದ ಅಭೂತಪೂರ್ವ ಯಶಸ್ಸು ಈ ಬಾರಿ ನಿರೀಕ್ಷೆಗೂ ಮೀರಿದಷ್ಟು ಜನರನ್ನು ಕರೆತಂದಿದೆ. ಎಲ್ಲರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುತ್ತೇವೆ, ಆಗಮಿಸಿರುವ ಬಂಧುಗಳು ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದೆ ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

ನವೆಂಬರ್‌ 27 ರಂದು ನಡೆದ ಮೊದಲ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪೈಕಿ ಶೇ.98ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಿ, ಜನರಿಗೆ ಪರಿಹಾರಗಳನ್ನು ಒದಗಿಸಲಾಗಿದೆ. ಸರ್ಕಾರವನ್ನು ಜನರ ಬಳಿಗೇ ಒಯ್ಯಬೇಕೆಂಬುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ವರೆಗೆ ಒಟ್ಟು 108 ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಎಂದು ಹೇಳಿದರು.

ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿಯೂ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇಲ್ಲಿ ಬಗೆಹರಿಯದ ಸಮಸ್ಯೆಗಳನ್ನು ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಸಲ್ಲಿಸಬಹುದಾಗಿದೆ. ಕಾನೂನುಬದ್ಧವಾದ ಸಮಸ್ಯೆಗಳಿಗೆ ನಮ್ಮ ಸರ್ಕಾರ ಪರಿಹಾರ ಒದಗಿಸಲಿದೆ ಎಂದು ಹೇಳಿದರು.

ಸಮಸ್ಯೆ ಬಗೆಹರಿಸಲು ಕಾನೂನು ತೊಡಕು ಇದ್ದಲ್ಲಿ, ಈ ಕುರಿತು ಅರ್ಜಿದಾರರಿಗೆ ಕಾರಣ ಸಹಿತ ಹಿಂಬರಹ ನೀಡಲಾಗುವುದು. ಜನಸ್ಪಂದನದಲ್ಲಿ ಸ್ವೀಕರಿಸಲಾದ ಅರ್ಜಿಗಳಿಗೆ ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಆಡಳಿತ ವ್ಯವಸ್ಥೆ ಚುರುಕುಗೊಳ್ಳಬೇಕು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರ ರೂಪಿಸುವ ಜನೋಪಯೋಗಿ ಕಾರ್ಯಕ್ರಮಗಳು ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳೊಳಗಾಗಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಯಿಂದ ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಯೋಜನೆ ಜಾರಿಗೊಳಿಸಿದಾಗ ವಿರೋಧ ಪಕ್ಷಗಳ ನಾಯಕರು ‘ಈಗ ಯೋಜನೆ ಜಾರಿಗೊಳಿಸಿ ಆಮೇಲೆ ನಿಲ್ಲಿಸುತ್ತಾರೆ’ ಎಂದಿದ್ದರು. ಆದರೆ ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಗ್ಯಾರಂಟಿ ಯೋಜನೆಗಳು ಬಡವರ ಕಾರ್ಯಕ್ರಮ, ಅಸಮಾನತೆ ನಿವಾರಿಸುವ ಕಾರ್ಯಕ್ರಮ ಎಂದು ವಿರೋಧ ಪಕ್ಷಗಳನ್ನು ಕುಟುಕಿದರು.

ನಾವು ಸಂವಿಧಾನದಲ್ಲಿ, ಬಸವಾದಿ ಶರಣರಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಸಮಾಜದಲ್ಲಿ ಭ್ರಾತೃತ್ವ ಬೆಳೆಯಬೇಕು, ಸಮಾನತೆ ಮೂಡಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಪಾಡಲು ಸಾಧ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದ್ದರೆ ಬಂಡವಾಳ ಹೂಡಿಕೆ ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ-ಬದಲಾವಣೆ ತರಲು ಜನಸ್ಪಂದನ ಅಗತ್ಯವಾಗಿದೆ ಎಂದು ಹೇಳಿದರು.

ರಾಜಕೀಯ

ನವದೆಹಲಿ:  2014ಕ್ಕಿಂತ ಮೊದಲು ಕಾಂಗ್ರೆಸ್ ನೇತೃತ್ವದ ಒಕ್ಕೂಟ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕ ಸ್ಥಿತಿಯನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯ ಪ್ರಸ್ತುತ 10 ವರ್ಷಗಳ ಆಡಳಿತದೊಂದಿಗೆ ಹೋಲಿಸಿ ಸಂಸತ್ತಿಗೆ “ಶ್ವೇತ ಪತ್ರ” ತರಲು ಒಕ್ಕೂಟ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉಭಯ ಸದನಗಳಲ್ಲಿ ಶ್ವೇತಪತ್ರ ಮಂಡಿಸಲಿದ್ದಾರೆ. ಅದರ ಮೇಲಿನ ಚರ್ಚೆಯ ನಂತರ ಮತದಾನಕ್ಕೆ ಬಿಡಲಾಗುತ್ತದೆ.

ಈ ಹಿನ್ನಲೆಯಲ್ಲಿ, 10 ವರ್ಷಗಳ ಬಿಜೆಪಿ ಆಡಳಿತದ ಬಗ್ಗೆ “ಕಪ್ಪು ಪತ್ರ” ಹೊರಡಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ “ಕಪ್ಪು ಪತ್ರ” ಪ್ರಕಟಿಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದರಿಂದಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಬಿರುಸಿನ ಚರ್ಚೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

Uncategorized

ದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ದೆಹಲಿ ಸರ್ಕಾರದ ಮದ್ಯ ನೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ಇಲಾಖೆ ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಕರಣ ದಾಖಲಿಸಿದೆ. ಪ್ರಕರಣದಲ್ಲಿ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡಿದರೂ ಕೇಜ್ರಿವಾಲ್ ಹಾಜರಾಗಲಿಲ್ಲ.

ಈ ಹಿನ್ನಲೆಯಲ್ಲಿ, ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರ ಮನೆ ಮೇಲೆ ಜಾರಿ ಇಲಾಖೆ ಇಂದು ದಾಳಿ ನಡೆಸುತ್ತಿದೆ. ಅದೇ ರೀತಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರ ಮನೆ ಮೇಲೂ ದಾಳಿ ನಡೆಸಲಾಗುತ್ತಿದೆ.

ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್

ಇದಕ್ಕೂ ಮುನ್ನ ಇಂದು ಬೆಳಗ್ಗೆ 10 ಗಂಟೆಗೆ ಜಾರಿ ಇಲಾಖೆಯನ್ನು ಬಹಿರಂಗಪಡಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ಸಚಿವೆ ಅತಿಶಿ ಮರ್ಲೆನಾ ಹೇಳಿದ್ದ ಹಿನ್ನಲೆಯಲ್ಲಿ, ಇಂದು ಪಕ್ಷದ ಪದಾಧಿಕಾರಿಗಳ ಮನೆ ಮೇಲೆ ಜಾರಿ ಇಲಾಖೆ ದಾಳಿ ನಡೆಸಿರುವ ಘಟನೆ ಸಂಚಲನ ಮೂಡಿಸಿದೆ.

ಆಪರೇಷನ್ ಕಮಲ ನಡೆಸುವ ಹೊಣೆಯನ್ನು ಬಿಜೆಪಿ ತನಿಖಾ ಸಂಸ್ಥೆಗಳಿಗೆ ವಹಿಸಿದೆ ಎಂದು ತಟಸ್ಥವಾದ ಮಾಧ್ಯಮಗಳು ವಿಮರ್ಶಿಸುತ್ತಿದೆ. ಮತ್ತು ಕೆಲಸ ಮಾಡದ ಮಾಧ್ಯಮಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ದೇಶ

ಕ್ರಿಶ್ಚಿಯನ್ನರ ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ 2 ಅಮೆರಿಕನ್ನರಿಗೆ 41,500 ರೂಪಾಯಿ ದಂಡ ವಿಧಿಸಿರುವ ಅಸ್ಸಾಂ ಪೊಲೀಸರಿಗೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ.

ಪ್ರಪಂಚದಾದ್ಯಂತದ ಪ್ರವಾಸಿಗರು ಪ್ರತಿದಿನ ಭಾರತಕ್ಕೆ ಭೇಟಿ ನೀಡುತ್ತಾರೆ. ಅವರು ಭಾರತದ ಕಲೆ, ಸಂಸ್ಕೃತಿ ಮತ್ತು ವಸ್ತ್ರಾಲಂಕಾರ ಮುಂತಾದವುಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಕೆಲವರು ಇದನ್ನು ಫೋಟೋ ತೆಗೆದು ಅಥವಾ ವೀಡಿಯೊ ಮಾಡಿ ಅದನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಅಥಾವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.

ಹೀಗೆ ದಿನನಿತ್ಯ ಭಾರತಕ್ಕೆ ಬರುವ ಪ್ರವಾಸಿಗರು ಯಾವುದಾದರೊಂದು ರೀತಿಯಲ್ಲಿ ದುರಂತಕ್ಕೆ ಸಿಲುಕಿಕೊಳ್ಳುತ್ತಾರೆ. ನಿರ್ದಿಷ್ಟವಾಗಿ, ಬಿಜೆಪಿ ಆಡಳಿತವಿರುವ ಅಥವಾ ಬಿಜೆಪಿ ಮೈತ್ರಿಕೂಟದ ರಾಜ್ಯಗಳಲ್ಲಿ ಪ್ರವಾಸಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಘಟನೆಗಳು ನಡೆಯುತ್ತವೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ  ಭಾರತೀಯ ಮಹಿಳೆಯರಿಗೆ ಭದ್ರತೆ ಇಲ್ಲದ ಹಾಗೇ ವಿದೇಶಿ ಮಹಿಳೆಯರಿಗೂ ಇಲ್ಲಿ ಭದ್ರತೆ ಇಲ್ಲವೆಂದು ಹಲವರು ಖಂಡಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ, ಅಮೆರಿಕದ ಜಾನ್ ಮ್ಯಾಥ್ಯೂ (64) ಮತ್ತು ಮೈಕಲ್ ಜೇಮ್ಸ್ (77) ಎಂಬ ಇಬ್ಬರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ನಂತರ ಅವರು ಫೆಬ್ರವರಿ 1 ರಂದು ಬಿಜೆಪಿ ಆಡಳಿತವಿರುವ ಅಸ್ಸಾಂ ರಾಜ್ಯದ ಸೋನಿತ್ಪುರ್ ಜಿಲ್ಲೆಗೆ ತೆರಳಿ, ಅಲ್ಲಿ ನಡೆಯುತ್ತಿದ್ದ ಕ್ರೈಸ್ತರ ಸಭೆಯೋಂದರಲ್ಲಿ ಭಾಗವಹಿಸಿದ್ದಾರೆ. ಇದನ್ನು ಕಂಡ ರಾಜ್ಯ ಪೊಲೀಸರು ಕೂಡಲೇ ಅವರಿಗೆ ದಂಡ ವಿಧಿಸಿದ್ದಾರೆ. ಅದೂ ಐನೂರು, ಸಾವಿರ ರೂ ಅಲ್ಲ 500 ಡಾಲರ್ (ಭಾರತೀಯ ಕರೆನ್ಸಿಯಲ್ಲಿ ರೂ.41,500) ದಂಡ ವಿಧಿಸಿದ್ದಾರೆ.

ಅವರು ತಮ್ಮ ಬಗ್ಗೆ ಹೇಳಿಕೊಳ್ಳಲು ಪ್ರಯತ್ನಿಸಿದರೂ, ರಾಜ್ಯ ಪೊಲೀಸರು ತಲಾ 41,500 ರೂ.ಗಳ ದಂಡವನ್ನು ಸಂಗ್ರಹಿಸಿದ ನಂತರವೇ ಅವರನ್ನು ಬಿಡುಗಡೆ ಗೊಳಿಸಿದ್ದಾರೆ. ಈ ಘಟನೆಗೆ ಬಗ್ಗೆ ಹೇಳಿರುವ ರಾಜ್ಯ ಪೊಲೀಸರು, ‘ಪ್ರವಾಸಿ ವೀಸಾದಲ್ಲಿರುವವರು ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಬಾರದು ಎಂಬ ನಿಯಮವಿದ್ದು, ಆ ನಿಯಮವನ್ನು ಉಲ್ಲಂಘಿಸಿ, ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅವರಿಗೆ ದಂಡ ವಿಧಿಸಲಾಗಿದೆ’ ಎಂದು ಹೇಳಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರವಲ್ಲದೆ, ಪ್ರತಿದಿನ ವಿವಿಧ ಪ್ರವಾಸಿಗರು ದೇಶಾದ್ಯಂತ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಮತ್ತು ಪೂಜೆಯ ಸಮಯದಲ್ಲಿ ಅಲ್ಲಿದ್ದು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಅವರಿಗೆಲ್ಲ ದಂಡ ವಿಧಿಸದೇ, ಕ್ರಿಶ್ಚಿಯನ್ ಕೂಟಗಳಿಗೆ ಹಾಜರಾಗಿದ್ದಕ್ಕಾಗಿ ಮಾತ್ರ ದಂಡ ವಿಧಿಸಬೇಕೇ? ಎಂದು ಹಲವರು ಪ್ರಶ್ನೆಗಳ ಮೂಲಕ ಖಂಡಿಸುತ್ತಿದ್ದಾರೆ.

ವಿದೇಶ

ವಾಷಿಂಗ್ಟನ್: ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಗ್ರ್ಯಾಮಿ ಪ್ರಶಸ್ತಿ ನೀಡುವ ಸಮಾರಂಭವು ಇಂದು ಅಮೇರಿಕಾದಲ್ಲಿ ನಡೆಯುತ್ತಿದೆ. ಗ್ರ್ಯಾಮಿ ಪ್ರಶಸ್ತಿಗಳನ್ನು ವಿವಿಧ ವಿಭಾಗಗಳಲ್ಲಿ ನೀಡಲಾಗುತ್ತದೆ.

ಈ ಹಿನ್ನಲೆಯಲ್ಲಿ, ಭಾರತದ “ಶಕ್ತಿ ಆಲ್ಬಂ”ಗೆ ಸಂಗೀತ ಕ್ಷೇತ್ರದ ಅತ್ಯುನ್ನತ ಗ್ರ್ಯಾಮಿ ಪ್ರಶಸ್ತಿಯನ್ನು ನೀಡಲಾಗಿದೆ. ಶಂಕರ್ ಮಹಾದೇವನ್, ಸೆಲ್ವಗಣೇಶ್ ವಿನಾಯಕ್ ರಾಮ್, ಗಣೇಶ್ ರಾಜಗೋಪಾಲನ್ ಮತ್ತು ಜಾಕಿರ್ ಹುಸೇನ್ ಅವರನ್ನೊಳಗೊಂಡ ತಂಡವು ರಚಿಸಿರುವ “ಶಕ್ತಿ ಆಲ್ಬಂ” ಒಟ್ಟು 8 ಹಾಡುಗಳನ್ನು ಹೊಂದಿದೆ.

ಈ ಆಲ್ಬಂಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ನೀಡಲಾಗಿದೆ. ದಿಸ್ ಮೊಮೆಂಟ್ ಆಲ್ಬಂನಲ್ಲಿ ಕಾಣಿಸಿಕೊಂಡಿರುವ ಶಕ್ತಿ ಸಂಗೀತ ತಂಡದ ಹಾಡುಗಳಿಗೆ ವಿಶ್ವದ ಅತ್ಯುತ್ತಮ ಆಲ್ಬಮ್ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ದೊರೆತಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯ

ಗದಗ: ಗದಗದಲ್ಲಿ ನೂತನ 50 ಬಸ್‌ಗಳ ಲೋಕಾರ್ಪಣೆ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮಕ್ಕೆ ಸಚಿವರಾದ ಎಚ್.ಕೆ ಪಾಟೀಲ್ ಅವರೊಂದಿಗೆ ಸೇರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ಚಾಲನೆ ನೀಡಿದರು.  

ಸರ್ಕಾರವು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 375 ಗ್ರಾಮಾಂತರ ಸಾರಿಗೆ ವಾಹನಗಳ ಖರೀದಿಗಾಗಿ ರೂ.150 ಕೋಟಿ ಅನುದಾನವನ್ನು ಮಂಜೂರಾತಿ ಮಾಡಿದ್ದು, ಈ ಪೈಕಿ ಮೊದಲ ಹಂತವಾಗಿ 50 ಗ್ರಾಮಾಂತರ ಸಾರಿಗೆ ಬಸ್ಸುಗಳನ್ನು ಈ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಈ ವರ್ಷದ ಏಪ್ರಿಲ್ ನಲ್ಲಿ 645 ಬಸ್ಸುಗಳು ಸೇರ್ಪಡೆಯಾಗಲಿದೆ ಎಂದು ಹೇಳಿದ್ದಾರೆ.

ನಗದು ರಹಿತ ವ್ಯವಹಾರ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಫೋನ್ ಪೇ ಕಂಪನಿಯ ಸಹಯೋಗದಲ್ಲಿ UPI ಮೂಲಕ ಹಣ ಸ್ವೀಕೃತಿ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಬಸುಗಳಲ್ಲಿ ದಿನಾಂಕ: 01.09.2023 ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.  

ಸಮಾರಂಭದಲ್ಲಿ, ಡಿ.ಆರ್.ಪಾಟೀಲ್, ವ್ಯವಸ್ಥಾಪಕ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ವಿಭಾಗೀಯ ನಿಯಂತ್ರಣಾಧಿಕಾರಿ ಸೀನಪ್ಪ, ಸಾರಿಗೆ ಇಲಾಖೆ ಅಧಿಕಾರಿ ಸಿಬ್ಬಂದಿ ಇದ್ದರು.

ವಿದೇಶ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧಿತರಾಗಿ ಅಡಿಯಾಲಾ ಜೈಲಿನಲ್ಲಿದ್ದಾರೆ. ಅವರ ವಿರುದ್ಧದ ಪ್ರಕರಣಗಳ ವಿಚಾರಣೆ ಪೂರ್ಣಗೊಂಡು ಕಾಲಕಾಲಕ್ಕೆ ತೀರ್ಪುಗಳು ಹೊರಬೀಳುತ್ತಿವೆ.

ಆ ರೀತಿಯಲ್ಲಿ, ಇಸ್ಲಾಂ ಧರ್ಮ ವಿರೋಧಿ ವಿವಾಹ ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ನ್ಯಾಯಾಲಯ ಇಂದು ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬುಶ್ರಾ ಬೀಬಿಯ ಮೊದಲ ಪತಿ ಖಾವರ್ ಮನೇಕಾ ಪ್ರಕರಣವನ್ನು ದಾಖಲಿಸಿದ್ದರು. ಮರುಮದುವೆಗಾಗಿ ಕಡ್ಡಾಯ ಕಾಯುವ ಅವಧಿ (ಇದ್ದತ್) ಎಂಬ ಇಸ್ಲಾಮಿಕ್ ಪದ್ಧತಿಯನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ಅವರು ಆರೋಪಿಸಿದ್ದರು. ಮದುವೆಗೆ ಮುನ್ನ ಅಕ್ರಮ ಸಂಭೋಗ ಕಲ್ಲೆಸೆಯುವಂಥ ಅಪರಾಧ ಎಂದೂ ಆರೋಪಿಸಿದ್ದರು.

ನಿನ್ನೆ ಅಡಿಯಾಲಾ ಜೈಲಿನಲ್ಲಿ ಅಂತಿಮ ವಿಚಾರಣೆ ಸುಮಾರು 14 ಗಂಟೆಗಳ ಕಾಲ ನಡೆಯಿತು. ವಿಚಾರಣೆಯ ಕೊನೆಯಲ್ಲಿ, ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಇಬ್ಬರೂ ಇಸ್ಲಾಮಿಕ್ ಪದ್ಧತಿಯನ್ನು ಉಲ್ಲಂಘಿಸಿ ವಿವಾಹವಾಗಿದ್ದಾರೆ ಎಂಬುದು ದೃಢವಾಯಿತು. ಇದರಿಂದಾಗಿ ಇಬ್ಬರಿಗೂ ಶಿಕ್ಷೆಯಾಗಿದೆ.

ಕ್ರೀಡೆ ಸಿನಿಮಾ

ಅರುಣ್ ಜಿ

ಸಿಸಿಎಲ್‌ಗೆ ಕಿಕ್ ಸ್ಟಾರ್ಟ್… ದುಬೈನಲ್ಲಿ ಪ್ರೋಮೋ ರಿಲೀಸ್.. ಯಾವೆಲ್ಲಾ  ಸೂಪರ್ ಸ್ಟಾರ್ಸ್ ಭಾಗಿ..?

ದುಬೈ ನೆಲದಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ಗೆ ಚಾಲನೆ… ಸಿಸಿಎಲ್ ಪಂದ್ಯಾವಳಿ ಯಾವಾಗಿಂದ ಶುರು? ಎಷ್ಟು ತಂಡಗಳು? ಎಲ್ಲಿ ಪಂದ್ಯ? ಇಲ್ಲಿದೆ ಕಂಪ್ಲೀಟ್ ವಿವರ

ಫೆಬ್ರವರಿ 23 ರಿಂದ ಶುರುವಾಗ್ತಿದೆ ಸಿಸಿಎಲ್-10; ದುಬೈನಲ್ಲಿ ಪ್ರೋಮೋ‌ ರಿಲೀಸ್!

ಭಾರತ ಚಿತ್ರರಂಗದ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಅಭಿಮಾನಿಗಳಿಗೆ ಮತ್ತೊಮ್ಮೆ ಒದಗಿ ಬಂದಿದೆ. 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ಗೆ ದಿನಗಣನೆ ಆರಂಭವಾಗಿದ್ದು, ದೇಶದ ಸ್ಟಾರ್ ನಟರು ಇದೇ ಫೆಬ್ರವರಿ 23 ರಿಂದ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

ಅದರ ಭಾಗವಾಗಿ ನಿನ್ನೆ (feb.2) ದುಬೈನಲ್ಲಿ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಸಿಸಿಎಲ್‌ಗೆ ಚಾಲನೆ ನೀಡಲಾಗಿದೆ. ಬುರ್ಜ್ ಖಲೀಫಾದಲ್ಲಿ ಕಟ್ಟಡದ ಮೇಲೆ ಸಿಸಿಎಲ್ ಪ್ರೋಮೋ ಝಲಕ್ ಪ್ರದರ್ಶಿಸಲಾಯಿತು. ಈ ದೃಶ್ಯವನ್ನು ಕಣ್ತುಂಬಿಕೊಂಡ ಸ್ಟಾರ್ಸ್ ರೋಮಾಂಚನಗೊಂಡರು.

ಪ್ರೋಮೋ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡದಿಂದ  ಕಿಚ್ಚ ಸುದೀಪ್, ಹಿಂದಿಯಿಂದ ಸೊಹೈಲ್ ಖಾನ್, ತಮಿಳು ಚಿತ್ರರಂಗದಿಂದ ಆರ್ಯ ಮತ್ತು ಜೀವಾ, ತೆಲುಗಿನಿಂದ ತಮನ್ ಮತ್ತು ಸುಧೀರ್ ಬಾಬು, ಬಂಗಾಳಿಯಿಂದ ಜಿಸ್ಸು ಸೇನ್‌ ಗುಪ್ತಾ, ಪಂಜಾಬಿಯಿಂದ ಬುನ್ನು ಧಿಲ್ಲೋನ್ ಮತ್ತು ಸೋನು ಸೂದ್, ಮಲಯಾಳಂನಿಂದ ಇಂದ್ರಜಿತ್ ಸುಕುಮಾರನ್ ಮತ್ತು ಉನ್ನಿ ಮುಕುಂದನ್ ಸೇರಿದಂತೆ CCL ನ ಎಲ್ಲಾ 8 ತಂಡಗಳ ನಾಯಕರು ಹಾಗೂ ಸೂಪರ್ ಸ್ಟಾರ್ಸ್ ಭಾಗಿಯಾಗಿದ್ದರು.

ಸಿಸಿಎಲ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆಗಿರುವ ವಿಷ್ಣುವರ್ಧನ್ ಇಂದೂರಿ ಮಾತನಾಡಿ, “ಸಿಸಿಎಲ್ ಮನರಂಜನಾತ್ಮಕ ಕ್ರೀಡೆಯಾಗಿದ್ದು, ಎಲ್ಲಾ ಸ್ಟಾರ್ ಅವರ ಬ್ಯುಸಿ ಶೆಡ್ಯುಲ್ಡ್ ನಡುವೆ ಕ್ರಿಕೆಟ್ ನಲ್ಲಿ ಭಾಗಿಯಾಗಿಯಾಗುತ್ತಾರೆ” ಎಂದರು.

ಕಿಚ್ಚ ಸುದೀಪ್ ಮಾತಾನಾಡಿ, “ನಾನು ಈ ಹಿಂದೆ ಸಿನಿಮಾಗಾಗಿ ಬುರ್ಜ್ ಖಲೀಫ್‌ದಲ್ಲಿದ್ದೆ. ಆದರೆ ಈಗ ಕ್ರಿಕೆಟ್‌ಗಾಗಿ ಇಲ್ಲಿರುವುದು ವಿಶೇಷ ಹಾಗೂ ಮರೆಯಲಾಗದ ಸಂಗತಿ ಎಂದರು.

ಫೆಬ್ರವರಿ 23 ರಿಂದ ಆರಂಭವಾಗುವ ಸಿಸಿಎಲ್‌ನ 10ನೇ ಸೀಸನ್ ಮಾರ್ಚ್ 17 ರವರೆಗೆ ನಡೆಯಲ್ಲಿದೆ. ಲೀಗ್ ಸುತ್ತು ಮಾರ್ಚ್ 10 ರವರೆಗೆ ನಡೆಯಲಿದ್ದು, ಈ ಸುತ್ತಿನಲ್ಲಿ 16 ಪಂದ್ಯಗಳು ನಡೆಯಲಿವೆ. ಆ ಬಳಿಕ ಪ್ಲೇಆಫ್ ಸುತ್ತು ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) ಶಾರ್ಜಾದಲ್ಲಿ ನಡೆಯಲ್ಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಭಾರತದ ಜನಪ್ರಿಯ ಒಟಿಟಿ ವೇದಿಕೆಯಾಗಿರುವ ಜಿಯೊಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ. ಇದರ ಭಾಗವಾಗಿ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಹತ್ತನೇ ಸೀಸನ್ ಅನ್ನು ಜಿಯೊಸಿನಿಮಾ ಎಕ್ಸ್ ಕ್ಲೂಸಿವ್ ಆಗಿ ನೇರಪ್ರಸಾರ ಮಾಡಲಿದೆ. ಕ್ರೀಡೆ ಮತ್ತು ಮನರಂಜನೆಗಳನ್ನು ಒಂದುಗೂಡಿಸಿ ಭಾರತದಲ್ಲಿ ರೂಪಿಸಿರುವ ಏಕಮಾತ್ರ ಪ್ರಯತ್ನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದಾಗಿದೆ.

ಭಾರತದ ಎಂಟು ಚಲನಚಿತ್ರೋದ್ಯಮಗಳ ಸೂಪರ್ಸ್ಟಾರ್ಗಳನ್ನು ಒಳಗೊಂಡಿರುವ ಒಟ್ಟು ಎಂಟು ತಂಡಗಳು ಯುಎಇ ಸೇರಿದಂತೆ ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಮೇಲೆ ಹೇಳಿದಂತೆ ಯುಎಇಯ ಶಾರ್ಜಾದಲ್ಲಿ ಲೀಗ್ನ ಮೂರು ಪಂದ್ಯಗಳು ನಡೆಯಲ್ಲಿದ್ದು, ಆ ನಂತರ ಲೀಗ್ ಭಾರತಕ್ಕೆ ಕಾಲಿಡಲಿದೆ. ಭಾರತದ ಐದು ನಗರಗಳಾದ ಹೈದರಾಬಾದ್, ಬೆಂಗಳೂರು, ಚಂಡೀಗಢ, ತಿರುವನಂತಪುರ ಮತ್ತು ವೈಜಾಗ್ನಲ್ಲಿ ಉಳಿದ ಪಂದ್ಯಗಳು ನಡೆಯಲ್ಲಿವೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ ಪಂದ್ಯಗಳಿರಲಿವೆ. ಅಂದರೆ ದಿನಕ್ಕೆ ಎರಡು ಪಂದ್ಯಗಳು ನಡೆಯಲ್ಲಿವೆ.

ತಂಡಗಳು ಯಾವುವು?

  • ಮುಂಬೈ ಹೀರೋಸ್
  • ಕೇರಳ ಸ್ಟ್ರೈಕರ್ಸ್
  • ತೆಲುಗು ವಾರಿಯರ್ಸ್
  • ಭೋಜ್ಪುರಿ ದಬಾಂಗ್ಸ್
  • ಕರ್ನಾಟಕ ಬುಲ್ಡೋಜರ್ಸ್
  • ಬೆಂಗಾಲ್ ಟೈಗರ್ಸ್
  • ಚೆನ್ನೈ ರೈನೋಸ್
  • ಪಂಜಾಬ್ ದಿ ಶೇರ್

‘ಮುಂಬೈ ಹೀರೋಸ್’ ತಂಡಕ್ಕೆ ನಟ ಸಲ್ಮಾನ್ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ರಿತೇಶ್ ದೇಶಮುಖ್ ಕ್ಯಾಪ್ಟನ್ ಆಗಿದ್ದಾರೆ. ಸೋಹೈಲ್ ಖಾನ್ ಅವರು ಈ ತಂಡದ ಮಾಲೀಕ. ‘ತೆಲುಗು ವಾರಿಯರ್ಸ್’ ಟೀಮ್ಗೆ ವೆಂಕಟೇಶ್ ಅವರು ಬ್ರ್ಯಾಂಡ್ ಅಂಬಾಸಿಡರ್. ಆ ತಂಡಕ್ಕೆ ಅಖಿಲ್ ಅಕ್ಕಿನೇನಿ ನಾಯಕನಾಗಿದ್ದಾರೆ. ‘ಕರ್ನಾಟಕ ಬುಲ್ಡೋಜರ್ಸ್’ ಟೀಮ್ಗೆ ಕಿಚ್ಚ ಸುದೀಪ್ ಕ್ಯಾಪ್ಟನ್ ಆಗಿದ್ದಾರೆ. ಮೋಹನ್‌ಲಾಲ್ ಸಹ-ಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್’ ತಂಡವನ್ನು ಕ್ಯಾಪ್ಟನ್ ಇಂದ್ರಜಿತ್ ಮುನ್ನಡೆಸಲಿದ್ದಾರೆ. ‘ಭೋಜಪುರಿ ದಬಾಂಗ್ಸ್’ ಟೀಮ್ಗೆ ಮನೋಜ್ ತಿವಾರಿ ನಾಯಕ. ಸೋನು ಸೂದ್ ಅವರು ‘ಪಂಜಾಬ್ ದೆ ಶೇರ್’ ತಂಡಕ್ಕೆ ನಾಯಕರಾಗಿದ್ದಾರೆ. ಬೋನಿ ಕಪೂರ್ ಒಡೆತನದ ‘ಬೆಂಗಾಲ್ ಟೈಗರ್ಸ್’ ಟೀಮ್ಗೆ ಜಿಸ್ಸು ಸೇನ್ಗುಪ್ತ ಕ್ಯಾಪ್ಟನ್ ಆಗಿದ್ದಾರೆ.