ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
September 2024 » Page 5 of 7 » Dynamic Leader
October 23, 2024
Home 2024 September (Page 5)
ದೇಶ ರಾಜಕೀಯ

ಪಾಟ್ನಾ: ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ಸಂಪೂರ್ಣ ಮದ್ಯಪಾನ ನಿಷೇದವನ್ನು ರದ್ದುಗೊಳಿಸಲಾಗುವುದು ಎಂದು ಪ್ರಶಾಂತ್ ಕಿಶೋರ್ (Prashant Kishor) ಹೇಳಿದ್ದಾರೆ.

ರಾಜಕೀಯ ತಂತ್ರಗಾರ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್ ತಮ್ಮ ‘ಜನ್ ಸುರಾಜ್’ (Jan Suraaj) ಸಂಘಟನೆಯನ್ನು ಹೊಸ ಪಕ್ಷವನ್ನಾಗಿ ಆರಂಭಿಸಲು ಮುಂದಾಗಿದ್ದಾರೆ. ಅಕ್ಟೋಬರ್ 2 ರಂದು ಔಪಚಾರಿಕವಾಗಿ ಪಕ್ಷ ಆರಂಭಿಸಲಿದ್ದಾರೆ. ಬಿಹಾರದಲ್ಲಿ ಪ್ರಶಾಂತ್ ಕಿಶೋರ್ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸರ್ಕಾರವನ್ನು ಹಿಡಿಯಲು ಸಜ್ಜಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ಇಂದು ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಪ್ರಶಾಂತ್ ಕಿಶೋರ್, “ರಾಜ್ಯದಲ್ಲಿ ಪ್ರಸ್ತುತ ಮದ್ಯಪಾನ ನಿಷೇಧ ನಿಯಂತ್ರಣಗಳು ನಿಷ್ಪರಿಣಾಮಕಾರಿಯಾಗಿದೆ. ಅದು ಅಕ್ರಮ ಮದ್ಯವನ್ನು ಮನೆಗೆ ತಲುಪಿಸಲು ಕಾರಣವಾಗಿದೆ. ರಾಜ್ಯವು ರೂ.20,000 ಕೋಟಿ ಅಬಕಾರಿ ಆದಾಯವನ್ನು ಕಳೆದುಕೊಂಡಿದೆ. ನಾನು ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ಸಂಪೂರ್ಣ ಮದ್ಯಪಾನ ನಿಷೇಧವನ್ನು ಹಿಂತೆಗೆದುಕೊಳ್ಳುತ್ತೇನೆ” ಎಂದು ಅವರು ಹೇಳಿದ್ದಾರೆ.

ದೇಶ

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ರಾಜಸ್ಥಾನದ ಅಜ್ಮೀರ್ ದರ್ಗಾದಲ್ಲಿರುವ ದರ್ಗಾ ಆಡಳಿತ ಮಂಡಳಿಯು ಸಸ್ಯಾಹಾರವನ್ನು ತಯಾರಿಸಿ 4,000 ಜನರಿಗೆ ಆಹಾರ ನೀಡಲು ಯೋಜಿಸಿದೆ.

ಪರ್ಷಿಯನ್ ಸೂಫಿ ಸಂತರಾದ ಖ್ವಾಜಾ ಮೊಯಿನುದ್ದೀನ್ ಚಿಶ್ತಿ (Khwaja Moinuddin Chishti) ಅವರು 1192 ರಿಂದ 1236 ರವರೆಗೆ ರಾಜಸ್ಥಾನದ ಅಜ್ಮೀರ್‌ನಲ್ಲಿ ವಾಸಿಸುತ್ತಿದ್ದರು. ಅವರ ನಿಧನದ ನಂತರ, ಅವರ ದೇಹವನ್ನು ಆ ಸ್ಥಳದಲ್ಲೇ ಹೂಳಲಾಯಿತು. ಇಲ್ಲಿ, ಎಲ್ಲ ಧರ್ಮದವರೂ ಬಂದು ಪೂಜೆ ಸಲ್ಲಿಸುವುದು ವಾಡಿಕೆ.

ಈ ಹಿನ್ನೆಲೆಯಲ್ಲಿ, ಇದೇ 17 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ 74ನೇ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಅಂದು ಅಜ್ಮೀರ್ (Ajmer) ದರ್ಗಾದಲ್ಲಿರುವ ‘ಡೆಗ್’ (Ajmer Dargah Deg) ಎಂದು ಕರೆಯಲ್ಪಡುವ ವಿಶ್ವದ ಅತಿದೊಡ್ಡ ಅಡುಗೆ ಪಾತ್ರೆಯಲ್ಲಿ 4 ಸಾವಿರ ಜನರಿಗೆ ಸಸ್ಯಾಹಾರವನ್ನು ತಯಾರಿಸಿ ಅನ್ನಸಂತರ್ಪಣೆ ಮಾಡಲಾಗುವುದು ಎಂದು ದರ್ಗಾ ಆಡಳಿತ ತಿಳಿಸಿದೆ.

ದೇಶ ರಾಜಕೀಯ

ಕೇಂದ್ರ ಬಿಜೆಪಿ ಸರ್ಕಾರ ಮಣಿಪುರದ ಜನರನ್ನು ಕಡೆಗಣಿಸಿದೆ ಎಂದು ಸಂಸದ ಬಿಮಲ್ ಅಕೋಯಿಜಮ್ (Bimol Akoijam) ಆರೋಪಿಸಿದ್ದಾರೆ.

ಮಣಿಪುರ ರಾಜ್ಯದಲ್ಲಿ ಒಂದು ವರ್ಷದಿಂದ ಎರಡು ಸಮುದಾಯಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇದರಿಂದಾಗಿ ರಾಜ್ಯಾದ್ಯಂತ ಹಿಂಸಾಚಾರ ಪ್ರಕರಣಗಳು ಹೆಚ್ಚಿವೆ.

ನೂರಾರು ಮಹಿಳೆಯರು ಲೈಂಗಿಕ ಕಿರುಕುಳ ಮತ್ತು ಹತ್ಯೆಗೀಡಾಗಿದ್ದಾರೆ. ಅಮಾಯಕ ಮಕ್ಕಳನ್ನು ನಡುಬೀದಿಗೆ ತಳ್ಳಲಾಗಿದೆ. ಮತ್ತು ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿ ಇಂದಿಗೂ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ಕೂಡ ಮಾಜಿ ಮುಖ್ಯಮಂತ್ರಿ ದಿವಂಗತ ಮೈರೆಂಬಮ್ ಕೊಯಿರೆಂಗ್ ಸಿಂಗ್ (Mairembam Koireng Singh) ಅವರ ಮನೆಯ ಮೇಲೆ ರಾಕೆಟ್ ಉಡಾಯಿಸಲಾಗಿತ್ತು. ಇದರಲ್ಲಿ 70 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಇತರ 5 ಮಂದಿ ಗಾಯಗೊಂಡಿದ್ದಾರೆ.

ಅದೇ ರೀತಿ ಜಿರಿಬಾಮ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಹೆಚ್ಚಾಗಿದೆ.

ಅಲ್ಲದೆ, ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಅವರ ಮೇಲೆ ಗುಂಡು ಹಾರಿಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ್ದಾರೆ. ಆದರೂ, ವಿದ್ಯಾರ್ಥಿಗಳು ಹೋರಾಡುತ್ತಿದ್ದಾರೆ. ಪ್ರಧಾನಿ ಮೋದಿಯವರ ಬ್ಯಾನರ್‌ಗಳನ್ನು ಹರಿದು ಹಾಕಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಮಣಿಪುರ ಸಂಸದ ಬಿಮಲ್ ಅಕೋಯಿಜಮ್ (Bimol Akoijam) ಅವರು, ಕೇಂದ್ರ ಬಿಜೆಪಿ ಸರ್ಕಾರ ಮಣಿಪುರದ ಜನರನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸಂದರ್ಶನ ನೀಡಿರುವ ಬಿಮಲ್ ಅಕೋಯಿಜಮ್, “ಮಣಿಪುರದಲ್ಲಿ 16 ತಿಂಗಳಿನಿಂದ ಹಿಂಸಾಚಾರ ನಡೆಯುತ್ತಿದೆ.

ಕೇಂದ್ರ ಸರ್ಕಾರ ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದೆ. 33 ಲಕ್ಷ ಜನರಿರುವ ರಾಜ್ಯದಲ್ಲಿ 66,000 ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ಸೇನೆಯನ್ನು ವಾಪಸ್ ಪಡೆಯಿರಿ, ನಮ್ಮ ಭದ್ರತೆಯನ್ನು ನಾವೇ ನೋಡಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

ವಿದೇಶ

ಡಿ.ಸಿ.ಪ್ರಕಾಶ್

ವಿಶ್ವವನ್ನೇ ಬೆಚ್ಚಿಬೀಳಿಸಿದ ಅವಳಿ ಗೋಪುರದ ದಾಳಿ ನಡೆದು ಇಂದಿಗೆ 23 ವರ್ಷಗಳು. ದಾಳಿಯ ದಿನವಾದ ಸೆಪ್ಟೆಂಬರ್ 11 ಅನ್ನು ಅಮೆರಿಕದಲ್ಲಿ ಕಪ್ಪು ದಿನವಾಗಿ ಆಚರಿಸಲಾಗುತ್ತದೆ. ಈ ದುರಂತ ನಡೆದಿದ್ದು ಹೇಗೆ?… ಇತಿಹಾಸದಲ್ಲಿ ಸ್ವಲ್ಪ ಹಿಂದಕ್ಕೆ ಹೋಗೋಣ….

ಈ ಭೀಕರ ದಾಳಿಯು ಸೆಪ್ಟೆಂಬರ್ 11, 2001 ರಂದು ಬೆಳಿಗ್ಗೆ 8.46ಕ್ಕೆ ನ್ಯೂಯಾರ್ಕ್ ನಗರದಲ್ಲಿ ನಡೆಯಿತು. 19 ಅಲ್ ಖೈದಾ ಭಯೋತ್ಪಾದಕರು 4 ಪ್ರಯಾಣಿಕ ವಿಮಾನಗಳನ್ನು ಅಪಹರಿಸಿ, ನ್ಯೂಯಾರ್ಕ್‌ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್, ಸೇನಾ ಪ್ರಧಾನ ಕಛೇರಿಯಾದ ಪೆಂಟಗನ್, ಮತ್ತು ಪೆನ್ಸಿಲ್ವೇನಿಯಾ ಪ್ರದೇಶ ಮುಂತಾದ ಮೂರು ಕಡೆ ದಾಳಿಯನ್ನು ನಡೆಸಿದರು.

81 ಪ್ರಯಾಣಿಕರು ಮತ್ತು 11 ಸಿಬ್ಬಂದಿಯೊಂದಿಗೆ ವಾಷಿಂಗ್ಟನ್‌ನಿಂದ ಲಾಸ್ ಏಂಜಲೀಸ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿದ ಉಗ್ರರು, ನ್ಯೂಯಾರ್ಕ್‌ನ ಅವಳಿ ಗೋಪುರಕ್ಕೆ ಅಪ್ಪಳಿಸಿ ಸ್ಫೋಟಿಸಿದರು. ಸತತ 18 ನಿಮಿಷಗಳ ಅಂತರದಲ್ಲಿ, ವಾಷಿಂಗ್ಟನ್ ಏರ್‌ಪೋರ್ಟ್‌ನಿಂದ 56 ಪ್ರಯಾಣಿಕರು ಮತ್ತು 9 ಸಿಬ್ಬಂದಿಯೊಂದಿಗೆ ಟೇಕ್ ಆಫ್ ಆಗಿದ್ದ ಮತ್ತೊಂದು ವಿಮಾನವು ಬೆಳಿಗ್ಗೆ 9.03ಕ್ಕೆ ಅವಳಿ ಗೋಪುರದ ದಕ್ಷಿಣ ಭಾಗದ ಕಟ್ಟಡದ ಮೇಲೆ ಅಪ್ಪಳಿಸಿತು.

ಈ ಕ್ರೂರ ದಾಳಿಯಿಂದ ಗಗನಚುಂಬಿ ಕಟ್ಟಡಗಳು ಕ್ಷಣಾರ್ಧದಲ್ಲಿ ನೆಲಸಮಗೊಂಡವು. ಅಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನ ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದವರು ದಾರುಣವಾಗಿ ಸಾವನ್ನಪ್ಪಿದರು. ಮುಂದಿನ ಕೆಲವು ನಿಮಿಷಗಳಲ್ಲಿ, ನಿಖರವಾಗಿ 9.37ಕ್ಕೆ, ಮುಂದಿನ ದಾಳಿಯು ಅಮೆರಿಕದ ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಪ್ರಧಾನ ಕಛೇರಿಯಾದ ಪೆಂಟಗನ್ ಮೇಲೆ ನಡೆದಿತ್ತು. ಮತ್ತೊಂದು ವಿಮಾನವು ಪೆನ್ಸಿಲ್ವೇನಿಯಾದ ಮೈದಾನದಲ್ಲಿ ಪತನಗೊಂಡು ಸ್ಫೋಟಗೊಂಡಿತು.

ಸೂಪರ್ ಪವರ್ ಅಮೆರಿಕಕ್ಕೆ ಎಚ್ಚರಿಕೆಯಂತೆ ನಡೆದ ಈ ದಾಳಿಗಳಲ್ಲಿ 2,977 ಅಮಾಯಕರು ದಾರುಣವಾಗಿ ಸಾವನ್ನಪ್ಪಿದರು. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇದು ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದೂ ದಾಖಲಾಯಿತು. ಇದರ ಬೆನ್ನಲ್ಲೇ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದ ಅಮೆರಿಕ, 2011ರಲ್ಲಿ ಅಲ್-ಖೈದಾ ಭಯೋತ್ಪಾದಕ ಆಂದೋಲನದ ನಾಯಕ ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿತು.

ವಿಶ್ವವನ್ನೇ ಬೆಚ್ಚಿ ಬೀಳಿಸಿದ ಈ ಅವಳಿ ಗೋಪುರದ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಅಮೆರಿಕದಲ್ಲಿ ಸೆಪ್ಟೆಂಬರ್ 11ನ್ನು ದೇಶಪ್ರೇಮಿಗಳ ದಿನವನ್ನಾಗಿಯೂ ಆಚರಿಸಲಾಗುತ್ತದೆ.

ದೇಶ

ನವದೆಹಲಿ: ಸೈಬರ್ ಅಪರಾಧ ಸಮನ್ವಯ ಕೇಂದ್ರದ ಮೊದಲ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಿನ್ನೆ ದೆಹಲಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಜಾಗತಿಕ ಡಿಜಿಟಲ್ ವಹಿವಾಟುಗಳಲ್ಲಿ ಸುಮಾರು ಶೇ.46ರಷ್ಟು ಅಥವಾ ಬಹುತೇಕ ಅರ್ಧದಷ್ಟು ಗಾತ್ರವನ್ನು ಭಾರತ ಕೈಗೊಳ್ಳುತ್ತದೆ. ಇದು ಏಜೆನ್ಸಿಗಳ ಕೆಲಸವನ್ನು ಸವಾಲಾಗಿಸುವಂತೆ ಮಾಡುತ್ತದೆ.

ಅಪರಾಧಿಗಳು ಬಳಸುವ MO ಅನ್ನು ಗುರುತಿಸಲು ಕೃತಕ ಬುದ್ಧಿಮತ್ತೆ (AI)ಯನ್ನು ಬಳಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಮುಂದಿನ ಐದು ವರ್ಷಗಳಲ್ಲಿ 5000 ಸೈಬರ್ ಕಮಾಂಡೋಗಳಿಗೆ (Commandos) ತರಬೇತಿ ನೀಡಿ ಸಿದ್ಧಪಡಿಸಲು ಸರ್ಕಾರ ಯೋಜಿಸಿದೆ” ಎಂದು ಅವರು ಹೇಳಿದರು.

ಕ್ರೈಂ ರಿಪೋರ್ಟ್ಸ್

ಉತ್ತರ ಪ್ರದೇಶ: 17 ವರ್ಷದ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದ ವ್ಯಕ್ತಿ, ಮತ್ತೆ ಅದೇ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಮತ್ತೆ ಬಂಧನಕ್ಕೊಳಗಾಗಿರುವ ಘಟನೆ ಆಘಾತವನ್ನು ಉಂಟು ಮಾಡಿದೆ.

ವಿರನಾಥ್ ಪಾಂಡೆ, ಬಿಹಾರ ರಾಜ್ಯದ ಭೋಜ್‌ಪುರ ಜಿಲ್ಲೆಯವನು. ಉತ್ತರ ಪ್ರದೇಶದಲ್ಲಿ 17 ವರ್ಷದ ಬಾಲಕಿಯನ್ನು ಅಪಹರಿಸಿದ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿದವನು.

ಈ ಹಿನ್ನೆಲೆಯಲ್ಲಿ, ಸಂತ್ರಸ್ತೆಯ ತಂದೆ ಕಳೆದ ಮೇನಲ್ಲಿ ತನ್ನ ಮಗಳು ಮತ್ತೆ ಕಾಣೆಯಾಗಿದ್ದಾಳೆ ಎಂದು ಕೊಯ್ರಾವುನಾ (Koirauna) ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ನಂತರ ಪೊಲೀಸರು ಪ್ರಥಮ ಮಾಹಿತಿ ವರದಿ (FIR) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಹೆಚ್ಚಿನ ತನಿಖೆಯಲ್ಲಿ ಬಾಲಕಿಯನ್ನು ರಕ್ಷಿಸಿದ್ದು, ಪಾಂಡೆಯನ್ನು ಜೈಲಿಗೆ ಕಳುಹಿಸಲಾಗಿದೆ.

ಈ ಕುರಿತು ಮಾತನಾಡಿದ ಕೊಯ್ರಾವುನಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಮನೋಜ್ ಕುಮಾರ್, ‘ಪಾಂಡೆ ಜಾಮೀನಿನ ಮೇಲೆ ಹೊರಬಂದ ಕೆಲವು ದಿನಗಳ ನಂತರ ಅಂದರೆ, ಆಗಸ್ಟ್ 5 ರಂದು ಹುಡುಗಿಯನ್ನು ಅಪಹರಿಸಿ, ಒಂದು ತಿಂಗಳ ಕಾಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ನಂತರ ಸೆಪ್ಟೆಂಬರ್ 2 ರಂದು ಜಂಗಿಗಂಜ್ (Jangiganj) ರೈಲ್ವೆ ನಿಲ್ದಾಣದ ಬಳಿ ಬಾಲಕಿಯನ್ನು ಬಿಟ್ಟು ಪಾಂಡೆ ಪರಾರಿಯಾಗಿದ್ದಾನೆ. ಇದರ ನಂತರ ಸಂತ್ರಸ್ತೆ ಕಳೆದ ಒಂದು ತಿಂಗಳಿನಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದಳು.

ಪಾಂಡೆ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ, ಅಪಹರಣ ಮತ್ತು ಪೋಕ್ಸೋ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಮಹಿಳೆಯ ವೈದ್ಯಕೀಯ ಪರೀಕ್ಷೆಯಲ್ಲಿ, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ’ ಎಂದು ಅವರು ಹೇಳಿದರು.

ಪಾಂಡೆ ಅವರನ್ನು ನಿನ್ನೆ (ಸೆ.9) ಇಟಹರಾ ಚೌರಾಹಾ (Itahara Chaura)ದಲ್ಲಿ ಬಂಧಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ರಾಜಕೀಯ

ಕಾಶ್ಮೀರಿ ಪಂಡಿತರು ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಸೆಪ್ಟೆಂಬರ್ 18 ರಂದು ನಡೆಯಲಿದೆ. “ಇಂಡಿಯಾ ಮೈತ್ರಿಕೂಟ”ದಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಪಕ್ಷ, ಪ್ಯಾಂಥರ್ ಪಕ್ಷಗಳು ಸ್ಪರ್ಧಿಸುತ್ತಿವೆ.

ಅಂತೆಯೇ ಈ ಚುನಾವಣೆಯನ್ನು ಬಿಜೆಪಿ ಮತ್ತು ಡೆಮಾಕ್ರಟಿಕ್ ಪಾರ್ಟಿ ಪ್ರತ್ಯೇಕವಾಗಿ ಎದುರಿಸುತ್ತಿವೆ. ಇದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಸಮಯದಲ್ಲಿ ಮಾತ್ರ ನಮ್ಮ ಬಗ್ಗೆ ಮಾತನಾಡುವುದೇಕೆ? ಎಂದು ಪ್ರಶ್ನಿಸಿರುವ ಕಾಶ್ಮೀರ ಪಂಡಿತರ ಸಮನ್ವಯ ಸಮಿತಿಯು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.

ಈ ಕುರಿತು, ಮಾತನಾಡಿರುವ ಕಾಶ್ಮೀರ ಪಂಡಿತರ ಸಂಯೋಜಕರೊಬ್ಬರು, ‘ನಾವು ಹಲವಾರು ದಶಕಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ವಲಸಿಗ ಸಮುದಾಯವಾಗಿದ್ದೇವೆ. ನಂತರ ಬಂದ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಕೂಡ ಚುನಾವಣೆ ಸಮಯದಲ್ಲಿ ಮಾತ್ರ ನಮ್ಮ ಮತ್ತು ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತವೆ.

ನಿರ್ದಿಷ್ಟವಾಗಿ ಕೆಲವು ಪಕ್ಷಗಳು ಚುನಾವಣಾ ಸಮಯದಲ್ಲಿ ಕಾಶ್ಮೀರಿ ಪಂಡಿತರಿಂದ ಲಾಭ ಪಡೆದುಕೊಳ್ಳುತ್ತವೆ. ಆದರೆ ನಮಗೆ ಯಾವುದೇ ಪ್ರಾತಿನಿಧ್ಯವನ್ನು ಕೊಡುವುದಿಲ್ಲ. ಇದರಿಂದಾಗಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ದೇಶ ರಾಜಕೀಯ

ನವದೆಹಲಿ: ಕನ್ಸಲ್ಟೆನ್ಸಿ ಹೆಸರಿನಲ್ಲಿ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ (Madhabi Puri Buch) ಅವರು ಮಹೀಂದ್ರಾ ಸೇರಿದಂತೆ ಕಂಪನಿಗಳಿಂದ 2.95 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ಮಾಧವಿ ಬುಚ್ ಅವರು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ (SEBI) ಅಧ್ಯಕ್ಷರಾಗಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಹಲವಾರು ಆರೋಪಗಳನ್ನು ಮಾಡುತ್ತಿದೆ.

ಇಂದು ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರ, “ಸೆಬಿ ಮುಖ್ಯಸ್ಥೆ ಮಾಧವಿ ಅವರು 2016 ರಿಂದ 2024ರ ಅವಧಿಯಲ್ಲಿ ಮಹೀಂದ್ರಾದಿಂದ 2.95 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಅವರ ಸಲಹಾ ಸಂಸ್ಥೆ ಅಗೋರಾ ಅಡ್ವೈಸರಿ (Agora Advisory) ಮೂಲಕ ಮೊತ್ತವನ್ನು ಸ್ವೀಕರಿಸಲಾಗಿದೆ.

ಮಾಧವಿ ಈ ಕಂಪನಿ ದಿವಾಳಿಯಾಗಿದೆ ಎಂದು ಹೇಳುತ್ತಿದ್ದಾರೆ. ಅದು ತಪ್ಪು. ಆ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಹಣಕಾಸು ಕೂಡ ಪಡೆದಿದೆ. ಅದರಲ್ಲಿ ಮಾಧವಿ ಶೇ.99ರಷ್ಟು ಪಾಲು ಹೊಂದಿದ್ದಾರೆ. ಮಹೀಂದ್ರಾ ಅಲ್ಲದೆ ಡಾ.ರೆಡ್ಡೀಸ್, ಬಿಡ್ಲೈಟ್, ಐಸಿಐಸಿಐ, ಸೆಂಬ್ಕಾರ್ಪ್, ವಿಸು ಲೀಸಿಂಗ್ ಮುಂತಾದ ಕಂಪನಿಗಳು ಮಾಧವಿಯವರ ಅಗೋರಾ ಕಂಪನಿ ಸೇವೆಯನ್ನು ಪಡೆದುಕೊಂಡಿವೆ.

ಕಳೆದ ತಿಂಗಳು, ಐಸಿಐಸಿಐ ಬ್ಯಾಂಕ್‌ನಲ್ಲಿ ಉಭಯ ಸ್ಥಾನಗಳನ್ನು ನಿರ್ವಹಿಸುವ ಮೂಲಕ 16.80 ಕೋಟಿ ರೂಪಾಯಿ ಲಾಭ ಗಳಿಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು. ಬ್ಯಾಂಕಿನವರೇ ಅದನ್ನು ನಿರಾಕರಿಸಿದ್ದು, ಇಂದು ಮತ್ತೊಂದು ಹೊಸ ಆರೋಪವನ್ನು ಕಾಂಗ್ರೆಸ್ ಮಾಡಿದೆ.

ರಾಜಕೀಯ ವಿದೇಶ

ಭಾರತ ಎಲ್ಲರಿಗೂ ಸೇರಿದ್ದು ಎಂಬುದು ಬಿಜೆಪಿಗೆ ಅರ್ಥವಾಗುತ್ತಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಹೇಳಿದ್ದಾರೆ.

ಅಮೆರಿಕದಲ್ಲಿ ನೆಲಸಿರುವ ಭಾರತೀಯ ಮೂಲದವರ ನಡುವೆ ಮಾತನಾಡಿದ ರಾಹುಲ್ ಗಾಂಧಿ, “ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ಬಿಜೆಪಿ ಮತ್ತು ಭಾರತದ ಪ್ರಧಾನಿ ಮೋದಿ ಬಗ್ಗೆ ಜನರಲ್ಲಿ ಇದ್ದ ಭಯ ಮಾಯವಾಗಿದೆ. ಈ ಭಯದ ವಾತಾವರಣವನ್ನು ಹುಟ್ಟುಹಾಕಲು ಅವರಿಗೆ ವರ್ಷಗಳೇ ಬೇಕಾಯಿತು. ಆದರೆ ಇದು ಕೆಲವೇ ಸೆಕೆಂಡುಗಳಲ್ಲಿ ಕಣ್ಮರೆಯಾಯಿತು.

ಕೆಲವು ರಾಜ್ಯಗಳು ಇತರ ರಾಜ್ಯಗಳಿಗಿಂತ ಕೀಳು ಎಂದು ಆರ್‌ಎಸ್‌ಎಸ್ ಹೇಳುತ್ತಿದೆ. ಕೆಲವು ಭಾಷೆಗಳು ಇತರ ಭಾಷೆಗಳಿಗಿಂತ ಕೀಳು.. ಕೆಲವು ಧರ್ಮಗಳು ಇತರ ಧರ್ಮಗಳಿಗಿಂತ ಕೀಳು.. ಕೆಲವು ಸಮುದಾಯಗಳು ಇತರ ಸಮುದಾಯಗಳಿಗಿಂತ ಕೀಳು.. ಪ್ರತಿಯೊಂದು ರಾಜ್ಯವು ತನ್ನದೇ ಆದ ಇತಿಹಾಸ ಮತ್ತು ಸಂಪ್ರದಾಯವನ್ನು ಹೊಂದಿದೆ. ಮರಾಠಿ, ತಮಿಳು, ಬಂಗಾಳಿ ಮತ್ತು ಮಣಿಪುರಿ ಇವೆಲ್ಲವೂ ಕೀಳು ಭಾಷೆಗಳು ಎಂಬುದು ಆರ್‌ಎಸ್‌ಎಸ್ ಸಿದ್ಧಾಂತ.

ಭಾರತ ಎಲ್ಲರಿಗೂ ಸೇರಿದ್ದು ಎಂಬುದು ಬಿಜೆಪಿಗೆ ಅರ್ಥವಾಗುತ್ತಿಲ್ಲ. ನಮ್ಮ ಸಂವಿಧಾನವು ಭಾರತವನ್ನು ಒಕ್ಕೂಟ ಎಂದು ಒತ್ತಿಹೇಳುತ್ತದೆ. ಲೋಕಸಭೆ ಚುನಾವಣೆಗೆ 3 ತಿಂಗಳ ಮೊದಲು ನಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತ ಗೊಳಿಸಲಾಯಿತು. ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು. ಆದರೆ ನಾವು ಧೈರ್ಯದಿಂದ ಚುನಾವಣೆ ಎದುರಿಸಿದ್ದೇವೆ. ಎಂದು ಹೇಳಿದ್ದಾರೆ.

ದೇಶ ರಾಜಕೀಯ

ನವದೆಹಲಿ: ಜನಗಣತಿ ವಿಳಂಬಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಅಂಕಿಅಂಶಗಳ ಸ್ಥಾಯಿ ಸಮಿತಿ [Standing Committee on Statistics (SCoS)]ಯನ್ನು ವಿಸರ್ಜನೆ ಮಾಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕಳೆದ ವರ್ಷ ಜುಲೈ 13 ರಂದು ಅರ್ಥಶಾಸ್ತ್ರಜ್ಞ ಪ್ರಣಬ್ ಸೇನ್ ನೇತೃತ್ವದ 14 ಸದಸ್ಯರ ಅಂಕಿಅಂಶಗಳ ಸ್ಥಾಯಿ ಸಮಿತಿಯನ್ನು ರಚಿಸಲಾಯಿತು.

ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಮಾದರಿ ಸಮೀಕ್ಷೆಗಾಗಿ ಹೊಸದಾಗಿ ರಚಿಸಲಾದ ಸ್ಟೀರಿಂಗ್ ಸಮಿತಿಯ ಚಟುವಟಿಕೆಗಳೊಂದಿಗೆ SCoS ಸಮಿತಿಯ ಚಟುವಟಿಕೆಗಳನ್ನು ಗೊಂದಲಗೊಳಿಸಬಾರದು ಎಂದು SCoS ಸಮಿತಿಯನ್ನು ವಿಸರ್ಜಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

2021ರಲ್ಲಿಯೇ ಜನಗಣತಿ ನಡೆಸಬೇಕಿತ್ತು ಆದರೆ, 3 ವರ್ಷ ಕಳೆದರೂ ಸಮೀಕ್ಷೆ ವಿಳಂಬವಾಗುತ್ತಿರುವುದು ಏಕೆ ಎಂದು SCoS ಸಮಿತಿ ಸದಸ್ಯರು ಪ್ರಶ್ನಿಸುತ್ತಲೇ ಇದ್ದರು. ಇದರಿಂದಾಗಿ ಈಗ SCoS ಗುಂಪನ್ನು ವಿಸರ್ಜಿಸಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಖಂಡನೆ ವ್ಯಕ್ತಪಡಿಸಿವೆ.