ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
2024 » Page 17 of 61 » Dynamic Leader
October 24, 2024
Home 2024 (Page 17)
ರಾಜಕೀಯ

ಬೆಂಗಳೂರು: ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕಾರಣಕ್ಕೆ ಸಂಬಂಧಿಸಿದಂತೆ ಮೊದಲನೇ ಆರೋಪಿ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಮೂರನೇ ಆರೋಪಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ಪ್ರಕರಣದಲ್ಲಿ, ‘ಮೇಲ್ಮನವಿ ಮಾಡಲು ಇದು ಅರ್ಹ ಪ್ರಕರಣವಲ್ಲ’ ಎಂದಿರುವ ಸರ್ಕಾರದ ನಡೆಗೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇದು ಕಾನೂನಿನ ಕುಣಿಕೆಯಿಂದ ಕೋಮುವಾದಿಗಳಿಗೆ ಪಾರಾಗಲು ಸರ್ಕಾರ ಅವಕಾಶ ನೀಡುವುದಲ್ಲದೆ ಇನ್ನೇನು? ಸರ್ಕಾರ ಯಾರ ಹಿತವನ್ನು ಕಾಪಾಡುತ್ತಿದೆ ಎಂದು ಅರ್ಥೈಸಲು ಬೇರೆ ಕಾರಣ ಬೇಕಿಲ್ಲ. ಸರ್ಕಾರದ ಇಂತಹ ಧೋರಣೆಗಳಿಂದ ಕೋಮುವಾದಿ ಶಕ್ತಿಗಳಿಗೆ ಇನ್ನಷ್ಟು ಧ್ಯರ್ಯ ಬಂದಂತಾಗಿದೆ.

ಪುನೀತ್ ಕೆರೆಹಳ್ಳಿಯಂತಹ ಸಮಾಜ ಘಾತುಕರು ಕಾನೂನನ್ನು ಕೈಗೆತ್ತಿಕೊಳ್ಳಲು ಸರ್ಕಾರದ ಇಂತಹ ನಿರ್ಧಾರಗಳೇ ಕಾರಣ. ಸರ್ಕಾರ ಇಂತಹವರ ಮೇಲೆ ಯಾಕೆ ಮಮಕಾರ ತೋರಿಸುತ್ತಿದೆ. ಕಾನೂನಿಗೆ ಸವಾಲು ಹಾಕುತ್ತಿರುವ ಪುನೀತ್ ಕೆರೆಹಳ್ಳಿ ಮೆರೆಯಲು ಕಾಂಗ್ರೆಸ್ ಸರ್ಕಾರ ಯಾಕೆ ಅವಕಾಶ ಮಾಡಿಕೊಡುತ್ತಿದೆ” ಎಂದು ಅವರು ಸರಕಾರವನ್ನು ಪ್ರಶ್ನಿಸಿದ್ದಾರೆ.

ಅತನನ್ನು ನಿಯಂತ್ರಿಸಲು ಸರ್ಕಾರ ಆತಂಕ ಪಡುತ್ತಿದೆಯೇ? ಕಾಂಗ್ರೆಸ್ ಕೋಮುವಾದಿಗಳಿಗೆ ಹಿತಕಾರಿಯಾಗಿ ವರ್ತಿಸುತ್ತಿದೆ. ಕಳೆದ ಬಾರಿಯ ಬಿಜೆಪಿ ಸರ್ಕಾರದ ಕೋಮು ಧ್ರುವೀಕರಣದಿಂದ ಬೇಸತ್ತ ಜನರು ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದರು. ಕಾಂಗ್ರೆಸ್ ಸರ್ಕಾರ ಬಂದರೆ ಕೋಮುವಾದಿಗಳ ಸದ್ದಡಗುವುದು ಎಂದು ಭಾವಿಸಿದ್ದರು. ಆದರೆ, ಸರ್ಕಾರದ ಈಗಿನ ನಡೆ ನೋಡಿದರೆ ಅದು ಕೇವಲ ಭ್ರಮೆ ಎಂದೆನಿಸುತ್ತದೆ.

ಯಾಕೆಂದರೆ, ಒಂದೆಡೆ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಸರ್ಕಾರಕ್ಕೆ ಕವಡೆ ಕಾಸಿನ ಬೆಲೆಯನ್ನೂ ನೀಡುತ್ತಿಲ್ಲ. ಆತ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆ ಸೇರಿ ಪಾರಾಗುತ್ತಾನೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡುತ್ತಿರುವುದೇಕೆ? ಈ ಪ್ರಕರಣಗಳನ್ನು ಗಮನಿಸಿದರೆ ಸರ್ಕಾರ ಯಾರ ಹಿತಾಸಕ್ತಿ ಕಾಪಾಡುತ್ತಿದೆ ಎಂದು ಅರ್ಥವಾಗುತ್ತದೆ. ತಮ್ಮನ್ನು ಚುನಾಯಿಸಿದ ಮತದಾರರಿಗೆ ದ್ರೋಹ ಬಗೆಯದೆ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಲು ಮುಂದಾಗಬೇಕೆಂದು ತಾಹೇರ್ ಹುಸೇನ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜಕೀಯ

ಬೆಂಗಳೂರು: ಸುಳ್ಳು ಹೇಳುವುದು ನಿಮಗೆ ಅಭ್ಯಾಸವೋ, ಆಚಾರವೋ, ಚಾಳಿಯೋ ಗೊತ್ತಿಲ್ಲ. ಹಸಿಹಸಿ ಸುಳ್ಳು ಹೇಳುತ್ತಿರುವ ನಿಮ್ಮಲ್ಲಿ ನೈತಿಕತೆ ಸತ್ತಿದೆ. ಆರೋಪಿ ಸ್ಥಾನದಲ್ಲಿರುವ ನೀವು ನನ್ನ ಬಗ್ಗೆ, ನನ್ನ ತಂದೆಯವರ ಬಗ್ಗೆ ಆಡುತ್ತಿರುವ ಸುಳ್ಳುಗಳು ನಿಮ್ಮ ಯೋಗ್ಯತೆಗೆ ತಕ್ಕುದಲ್ಲ ಸಿದ್ದರಾಮಯ್ಯ ನವರೇ.. ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆಯೂ ನಿಮಗಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಮೂಡಾದವರು ನನಗೆ ನಿವೇಶನ ಹಂಚಿದ್ದಾರೆ, ನಿಜ. ಸ್ವಾಧೀನ ಪತ್ರವವನ್ನೂ ನೀಡಿದ್ದಾರೆ. ಆ ಪತ್ರವನ್ನು ನಾನು ಮಾಧ್ಯಮಗಳ ಮುಂದೆಯೂ ತೋರಿಸಿದ್ದೇನೆ. ಹಂಚಿದ ನಿವೇಶನದ ಜಾಗವನ್ನು ನನ್ನ ಸುಪರ್ದಿಗೆ ಕೊಡಬೇಕಲ್ಲವೇ? ಕೊಟ್ಟಿಲ್ಲ. ಹಾಗಾದರೆ, ಇದರಲ್ಲಿ ‘ಸಿದ್ದರಾಮಯ್ಯ ಮಾಡಿದ ಸಂಶೋಧನೆ ಏನಿದೆ?’ ‘ಸುಳ್ಳು ಸಂಶೋಧಕ ಸಿದ್ದರಾಮಯ್ಯ’ನವರೇ, ನಿಮ್ಮ ಮುಖಕ್ಕೆ ಮೆತ್ತಿಕೊಂಡಿರುವ ಕೊಳಕನ್ನು ನನ್ನ ಮೇಲೆ, ಇನ್ನಿತರರ ಮೇಲೆ ಸಿಡಿಸಲು ಹೊರಟು ಲಜ್ಜೆಗೇಡಿತನದ ಪರಮಾವಧಿ ಮೆರೆದಿದ್ದೀರಿ ಎಂದು ಕಿಡಿಕಾರಿದ್ದಾರೆ.

‘ಮೂಡಾ ಭೂಮಿಯನ್ನು ಮುಖ್ಯಮಂತ್ರಿ ಕುಟುಂಬ ಮುಕ್ಕಿ ತಿಂದಿದೆ’ ಎಂದು ಇಡೀ ದೇಶ ಮಾತನಾಡುತ್ತಿದೆ. ದಾಖಲೆಗಳು ಹಾದಿಬೀದಿಯಲ್ಲಿ ಹೊರಳಾಡುತ್ತಿವೆ! ನಿಮ್ಮ ಸಮಾಜವಾದಿ ಮುಖವಾಡ, ಅಹಿಂದಾ ಅಲಂಕಾರ, ಸತ್ಯವಂತನ ಸಿಂಗಾರ.. ಇದೆಲ್ಲವೂ ಕಳಚಿಬಿದ್ದಿದೆ. ಅಸಹ್ಯವಾಗುವಷ್ಟು ಅನಾಚಾರ ಮಾಡಿ ಅಹಿಂದ ರಕ್ಷಣೆ ಪಡೆಯಲು ಯತ್ನಿಸುತ್ತಿರುವ ನಿಮ್ಮ ಅಸಹಾಯತೆ ನನಗೆ ಅರ್ಥವಾಗುತ್ತದೆ. ಪಾಪ.. ನಿಮ್ಮ ಪಕ್ಷದವರೇ ನಿಮಗೆ ‘ಶರಪಂಜರ’ ಸೃಷ್ಟಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ರಾಜ್ಯಕ್ಕೆ ಕೈಗಾರಿಕೆ ತರಲಿ, ರಾಜ್ಯಕ್ಕೆ ಒಳ್ಳೆಯದು ಮಾಡಲಿ ಎನ್ನುತ್ತೀರಿ. ಅದು ನನಗೆ ಗೊತ್ತಿದೆ. ನಾನು ಕೇಂದ್ರ ಸಚಿವನಾಗಿ ಇನ್ನೂ ಎರಡು ತಿಂಗಳಾಗಿಲ್ಲ. ರಾಜ್ಯದ ಕೆಲಸ ಮಾಡೋಣ ಎಂದರೆ ನಿಮ್ಮ ಅಸಹಕಾರ, ಅಸೂಯೆ ಅಡ್ಡಿ. ಒಂದು ನಾಲಿಗೆ ಮೇಲೆ ಸಹಕಾರ, ಅಸಹಕಾರ.. ಇದು ಹೇಗೆ ಸಾಧ್ಯ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.

ಎರಡು ಮುಖ, ಎರಡು ನಾಲಿಗೆ, ಎರಡು ವ್ಯಕ್ತಿತ್ವ, ಎರಡು ನೀತಿ.. ನಿಮ್ಮ ಐಡಿಯಾಲಜಿ! ಆ ಸಿದ್ದಾಲಜಿ (Siddalogy) ನನಗೆ ಗೊತ್ತಿಲ್ಲದಲ್ಲ ಸಿದ್ದರಾಮಯ್ಯನವರೇ.. ರಾಜ್ಯಕ್ಕೆ ಒಳ್ಳೆಯದಾಗಲಿ ಎನ್ನುವ ಆಶಯ ಇರಲಿ, ನನ್ನ ಮೇಲೆ ಅಸೂಯೆ ಏಕೆ? ನಿಮ್ಮ ಸಕಲ ಗುಣಗಳ ಸಿದ್ದಾಲಜಿ ನನಗೆ ಚೆನ್ನಾಗಿಯೇ ಗೊತ್ತಿದೆ ಎಂದು ಹೇಳಿದ್ದಾರೆ.

ದೇಶ

ತಿರುವನಂತಪುರಂ: ಕೇರಳದ ತಿರುವನಂತಪುರದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದೆ. ಕಳೆದ ಕೆಲವು ವಾರಗಳಿಂದ ಭಾರೀ ಮಳೆಯಾಗುತ್ತಿದೆ. ಆ ಮೂಲಕ ಕೇರಳದ ವಯನಾಡು ಪ್ರದೇಶದಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದೆ. ಈ ಭಾರಿ ಮಳೆಯ ನಂತರ ಮುಂಜಾನೆ ಭೂಕುಸಿತ ಸಂಭವಿಸಿದೆ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಸೂರಲ್ಮಲೈ ಪ್ರದೇಶದಲ್ಲಿ ಮೊದಲ ಭೀಕರ ಭೂಕುಸಿತ ಸಂಭವಿಸಿದೆ.

ನಂತರ, ಮುಂಜಾನೆ 4.30ಕ್ಕೆ 2ನೇ ಭಾರಿ ಮತ್ತೊಂದು ಭೂಕುಸಿತ ಸಂಭವಿಸಿದೆ. ಸತತ ಭೂಕುಸಿತದಿಂದಾಗಿ ವೈತ್ತಿರಿ, ವೆಲ್ಲೇರಿಮಲೈ ಮತ್ತು ಮೇಪ್ಪಾಡಿ ಪ್ರದೇಶಗಳು ತೀವ್ರ ಹಾನಿಗೊಳಗಾಗಿವೆ. ಅಟ್ಟಮಲೈನಿಂದ ಮುಂಡಗಿ ಪ್ರದೇಶಕ್ಕೆ ತೆರಳಲು ಇದ್ದ ಒಂದೇ ಒಂದು ಸೇತುವೆ ಕೂಡ ಕೊಚ್ಚಿ ಹೋಗಿದೆ.

ಹೀಗಾಗಿ, 500 ಮನೆಗಳಿಗೆ ಸೇರಿದ ಸಾವಿರಾರು ಜನರು ಪ್ರತ್ಯೇಕ ದ್ವೀಪದಲ್ಲಿ ಸಿಕ್ಕಿಕೊಂಡಂತೆ ಆಗಿದ್ದಾರೆ. ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಹೆಲಿಕಾಪ್ಟರ್ ಮೂಲಕ ಸಂತ್ರಸ್ತ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯ ನಡೆಯುತ್ತಿದೆ. ಹಲವರ ಸ್ಥಿತಿ ತಿಳಿಯದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಭೂಕುಸಿತದಲ್ಲಿ ನೂರಾರು ಮಂದಿ ಸಿಲುಕಿರುವ ಬಗ್ಗೆ ವರದಿಯಾಗಿದೆ. ಬಳಿಕ ನಾಪತ್ತೆಯಾದವರನ್ನು ರಕ್ಷಿಸುವ ಕಾರ್ಯ ಚುರುಕುಗೊಂಡಿದೆ. ಅರಕ್ಕೋಣಂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಧಾವಿಸಿದೆ.

ಭೂಕುಸಿತ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯ ನಡೆಸಲು ತೊಂದರೆಯಾಗಿದೆ ಎಂದು ವರದಿಗಳಾಗಿವೆ. ಏತನ್ಮಧ್ಯೆ, ವಯನಾಡು ಭೂಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.

“ವಯನಾಡಿನ ಕೆಲವು ಭಾಗಗಳು ಭೂಕುಸಿತದಿಂದ ಹಾನಿಗೊಳಗಾಗಿವೆ. ನನ್ನ ಆಲೋಚನೆಗಳು ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೂ ಇವೆ; ಗಾಯಾಳುಗಳೊಂದಿಗೆ ಪ್ರಾರ್ಥನೆಗಳೂ ಇವೆ. ಎಲ್ಲಾ ಸಂತ್ರಸ್ತರಿಗೆ ಸಹಾಯ ಮಾಡಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ” ಕೇರಳಕ್ಕೆ ಎಲ್ಲ ನೆರವು ನೀಡಲು ಕೇಂದ್ರ ಸರಕಾರ ಸಿದ್ಧವಿದೆ ಎಂದ ಮೋದಿ, ಕೇರಳ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದಾರೆ.

ಅಲ್ಲದೆ, “ವಯನಾಡು ಭೂಕುಸಿತ ಸಂತ್ರಸ್ತರ ಕುಟುಂಬಗಳಿಗೆ ತಲಾ 2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂ.ಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲಾಗುವುದು” ಎಂದೂ ಅವರು ಹೇಳಿದ್ದಾರೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ರಾಜ್ಯ ಸಚಿವ ಸುರೇಶ್ ಗೋಪಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ವಯನಾಡಿನ ಪರಿಸ್ಥಿತಿಯನ್ನು ವಿಚಾರಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು:
“ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ಮೃತಪಟ್ಟ ಘಟನೆ ನೋವಿನ ಸಂಗತಿಯಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಹಾಗೂ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ಪರ್ತಿಪಕ್ಷದ ನಾಯಕ ರಾಹುಲ್ ಗಾಂಧಿ:
“ವಯನಾಡಿನ ಮೇಪ್ಪಾಡಿ ಬಳಿ ಸಂಭವಿಸಿದ ಭಾರೀ ಭೂಕುಸಿತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ನನ್ನ ಆಳವಾದ ಸಂತಾಪವನ್ನು ಅರ್ಪಿಸುತ್ತೇನೆ. ಇನ್ನೂ ಸಿಕ್ಕಿಬಿದ್ದಿರುವವರನ್ನು ಶೀಘ್ರದಲ್ಲೇ ರಕ್ಷಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ನಾನು ಕೇರಳ ಮುಖ್ಯಮಂತ್ರಿ ಮತ್ತು ವಯನಾಡು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ನನಗೆ ಭರವಸೆ ನೀಡಿದ್ದಾರೆ.

ಎಲ್ಲಾ ಏಜೆನ್ಸಿಗಳೊಂದಿಗೆ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು, ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ಮತ್ತು ಪರಿಹಾರ ಕಾರ್ಯಗಳಿಗೆ ನೆರವು ಅಗತ್ಯವಿದ್ದರೆ ನಮಗೆ ತಿಳಿಸಲು ನಾನು ಅವರನ್ನು ಕೇಳಿದ್ದೇನೆ. ನಾನು ಕೇಂದ್ರ ಸಚಿವರೊಂದಿಗೆ ಮಾತನಾಡುತ್ತೇನೆ ಮತ್ತು ವಯನಾಡಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಕೇಳುತ್ತೇನೆ. ಎಲ್ಲಾ ಯುಡಿಎಫ್ (UDF) ಕಾರ್ಯಕರ್ತರು ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಆಡಳಿತಕ್ಕೆ ಸಹಾಯ ಮಾಡಲು ನಾನು ವಿನಂತಿಸುತ್ತೇನೆ” ಎಂದು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ತಿಳಿಸಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ:
“ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹಲವರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಮತ್ತು ತುರ್ತು ವೈದ್ಯಕೀಯ ನೆರವು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ನಾನು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ:
“ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಘಟನೆಗಳು ತೀವ್ರ ಕಳವಳಕಾರಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಯುದ್ಧಕಾಲದ ಆಧಾರದ ಮೇಲೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಲು ಎರಡನೇ ತಂಡ ತೆರಳಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಮತ್ತು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.

ರಾಜಕೀಯ

 ಡಿ.ಸಿ.ಪ್ರಕಾಶ್

ನವದೆಹಲಿ: “ಪ್ರಧಾನಿ ಮೋದಿ ತಮ್ಮ ಶರ್ಟ್‌ನ ಮೇಲೆ ಧರಿಸಿರುವ ಕಮಲದ ಚಿಹ್ನೆಯಿಂದ ಪ್ರತಿನಿಧಿಸುವ ಚಕ್ರವ್ಯೂಹದಲ್ಲಿ ಭಾರತ ಸಿಲುಕಿಕೊಂಡಿದೆ. ಮಹಾಭಾರತದಲ್ಲಿ ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಂತೆ ಭಾರತವೂ ಮೋದಿ ಆಡಳಿತದಲ್ಲಿ ಸಿಕ್ಕಿಬಿದ್ದಿದೆ” ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಕುರಿತು ಮಾತನಾಡಿದರು. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, “ಭಾರತದಲ್ಲಿ ಭಯದ ವಾತಾವರಣವಿದೆ. ಆ ಭಯ ನಮ್ಮ ದೇಶದ ಎಲ್ಲ ಭಾಗಗಳಿಗೂ ಹಬ್ಬಿದೆ. ಬಿಜೆಪಿಯಲ್ಲಿ ಒಬ್ಬರಿಗೆ ಮಾತ್ರ ಪ್ರಧಾನಿ ಕನಸು ಕಾಣಲು ಅವಕಾಶವಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿಯಾಗಬೇಕಾದರೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ಆಡಳಿತದಲ್ಲಿ ಕೇಂದ್ರ ಸಚಿವರು, ರೈತರು, ಕಾರ್ಮಿಕರು ಎಲ್ಲರೂ ಭಯದಲ್ಲಿದ್ದಾರೆ. ಈ ಭಯ ಭಾರತದಲ್ಲಿ ಏಕೆ ಆಳವಾಗಿದೆ ಎಂಬುದು ನನ್ನ ಒಂದೇ ಪ್ರಶ್ನೆಯಾಗಿದೆ. ನನ್ನ ಮಾತಿಗೆ ಬಿಜೆಪಿಯವರು ನಗುತ್ತಿದ್ದರೂ ಅವರಿಗೆ ಒಳಗೊಳಗೆ ಒಂದು ರೀತಿಯ ಭಯ ಕಾಡುತ್ತಿದೆ.

ಪ್ರಧಾನಿ ಮೋದಿ ತಮ್ಮ ಶರ್ಟ್‌ನ ಮೇಲೆ ಧರಿಸಿರುವ ಕಮಲದ ಚಿಹ್ನೆಯಿಂದ ಪ್ರತಿನಿಧಿಸುವ ಚಕ್ರವ್ಯೂಹದಲ್ಲಿ ಭಾರತ ಸಿಲುಕಿಕೊಂಡಿದೆ. ಮಹಾಭಾರತದಲ್ಲಿ ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಂತೆ ಭಾರತವೂ ಮೋದಿ ಆಡಳಿತದಲ್ಲಿ ಸಿಕ್ಕಿಬಿದ್ದಿದೆ. ಭಾರತವನ್ನು ವಶಪಡಿಸಿಕೊಂಡಿರುವ ಬಿಜೆಪಿಯ ಚಕ್ರವ್ಯೂಹದ ಹಿಂದೆ 3 ಶಕ್ತಿಗಳಿವೆ. ಅವುಗಳು ಯಾವುದೆಂದರೆ,

ಭಾರತದ ಎಲ್ಲಾ ಸಂಪನ್ಮೂಲಗಳ ಮೇಲೆ ಹಿಡಿತ ಹೊಂದಿರುವ ಇಬ್ಬರು ವ್ಯಕ್ತಿಗಳು, ಸಿಬಿಐ, ಜಾರಿ ನಿರ್ದೇಶನಾಲಯದಂತಹ ಕೇಂದ್ರ ಸರ್ಕಾರದ ಸಂಸ್ಥೆಗಳು, ರಾಜಕೀಯ ಅಧಿಕಾರದ ಆಸೆ. ಈ ಮೂರೂ ಸೇರಿ ಭಾರತವನ್ನು ಹಾಳು ಮಾಡಿದೆ. ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ಈ ಚಕ್ರವ್ಯೂಹದ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂಬುದು ನನ್ನ ಅನಿಸಿಕೆ.

ಕೇಂದ್ರ ಬಜೆಟ್ ಈ ದೇಶದ ರೈತರು, ಯುವಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಆದರೆ, ನನ್ನ ದೃಷ್ಟಿಯಲ್ಲಿ ಈ ಬಜೆಟ್‌ನ ಏಕೈಕ ಉದ್ದೇಶವೆಂದರೆ, ಏಕಸ್ವಾಮ್ಯ ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸುವ ಸರ್ಕಾರಿ ಸಂಸ್ಥೆಗಳ ರಚನೆಯನ್ನು ಬಲಪಡಿಸುವುದು. ಏಕೆಂದರೆ, ಸಣ್ಣ ಉದ್ದಿಮೆಗಳಿಗೆ ಭಾರಿ ಹೊಡೆತ ನೀಡಿರುವ ತೆರಿಗೆ ಭಯೋತ್ಪಾದನೆಗೂ ಬಜೆಟ್‌ಗೂ ಯಾವುದೇ ಸಂಬಂಧವಿಲ್ಲ. ಜಿಎಸ್‌ಟಿ ಒಂದು ತೆರಿಗೆ ಭಯೋತ್ಪಾದನೆ. ಜಿಎಸ್‌ಟಿಯಿಂದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಾಶವಾಗುತ್ತವೆ. ಕೇಂದ್ರ ಸರ್ಕಾರ ಜಿಎಸ್‌ಟಿ ಮೂಲಕ ತೆರಿಗೆ ಭಯೋತ್ಪಾದನೆಯನ್ನು ಹೇರಿದೆ.

‘ಅಗ್ನಿಪಥ್’ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಪಿಂಚಣಿ ನೀಡಲು ಬಜೆಟ್‌ನಲ್ಲಿ ಯಾವುದೇ ಹಣಕಾಸಿನ ಹಂಚಿಕೆ ಇಲ್ಲ. ಯುವಕರನ್ನು ಬಾಧಿಸುವ ದೊಡ್ಡ ಸಮಸ್ಯೆ ಎಂದರೆ ಪ್ರಶ್ನೆ ಪತ್ರಿಕೆ ಸೋರಿಕೆ. ಆದರೆ ಹಣಕಾಸು ಸಚಿವರು ಬಜೆಟ್‌ನಲ್ಲಿ ಈ ಬಗ್ಗೆ ಏನನ್ನೂ ಪ್ರಸ್ತಾಪಿಸಿಲ್ಲ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ 70 ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಗಳು ನಡೆದಿವೆ. ಅಲ್ಲದೆ, ಕಳೆದ 10 ವರ್ಷಗಳಲ್ಲಿ ನಡೆದ ನೀಟ್ ಪರೀಕ್ಷೆಯ ಪತ್ರಿಕೆಗಳ ಸೋರಿಕೆ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪದವಿಲ್ಲ. ಮೋದಿ ಸರ್ಕಾರ ನಿರುದ್ಯೋಗ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಮಾನಾರ್ಥಕವಾಗಿದೆ. ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಕಳೆದ 20 ವರ್ಷಕ್ಕಿಂತ ಕಡಿಮೆ ಹಣ ಮೀಸಲಿಡಲಾಗಿದೆ.

ಅದೇ ರೀತಿ ಬಜೆಟ್‌ನಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಶಾಸನಬದ್ಧ ಖಾತರಿ ಇಲ್ಲ. ಎನ್‌ಡಿಎ ಸರ್ಕಾರ ಮಾಡದ ಕೆಲಸವನ್ನು ನಾವು ಮಾಡುತ್ತೇವೆ ಎಂದು ರೈತರಿಗೆ ಹೇಳಲು ಬಯಸುತ್ತೇನೆ. ಇದೇ ಸದನದಲ್ಲಿ, ನಾವು ಕನಿಷ್ಟ ಬೆಂಬಲ ಬೆಲೆಗೆ ಶಾಸನಬದ್ಧ ಖಾತರಿ ಮಸೂದೆಯನ್ನು ಅಂಗೀಕರಿಸುತ್ತೇವೆ. ಈ ಬಜೆಟ್‌ಗೂ ಮುನ್ನ ಮಧ್ಯಮ ವರ್ಗದವರು ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿದ್ದರು. ಈಗ ಈ ಬಜೆಟ್ ಮೂಲಕ ಬಿಜೆಪಿ ಸರ್ಕಾರ ಅದೇ ಮಧ್ಯಮ ವರ್ಗದ ಬೆನ್ನು ಮತ್ತು ಎದೆಗೆ ಚೂರಿ ಹಾಕಿದೆ.

ಭಾರತದ ಮೂಲಸೌಕರ್ಯ ಮತ್ತು ವ್ಯವಹಾರಗಳನ್ನು ಕೇವಲ ಇಬ್ಬರು ವ್ಯಕ್ತಿಗಳು ಮಾತ್ರ ನಿಯಂತ್ರಿಸುತ್ತಿದ್ದಾರೆ. ಅವರು ವಿಮಾನ ನಿಲ್ದಾಣಗಳು, ದೂರಸಂಪರ್ಕ ಕಂಪನಿಗಳು, ಬಂದರುಗಳು ಇತ್ಯಾದಿಗಳನ್ನು ಹೊಂದಿದ್ದಾರೆ. ಮುಂದೆ ರೈಲ್ವೆಗೂ ಕಾಲಿಡಲಿದ್ದಾರೆ. ಅವರಿಗೆ ಭಾರತದ ಸಂಪತ್ತನ್ನು ತೆಗೆದುಕೊಳ್ಳುವ ಏಕಸ್ವಾಮ್ಯ ಹಕ್ಕನ್ನು ನೀಡಲಾಗಿದೆ.

ಬಜೆಟ್ ಅಧಿವೇಶನಕ್ಕೂ ಮುನ್ನ ಹಣಕಾಸು ಸಚಿವಾಲಯದಲ್ಲಿ ನಡೆದ ಸಾಂಪ್ರದಾಯಿಕ ‘ಅಲ್ವಾ’ ಸಮಾರಂಭದಲ್ಲಿ ಒಬ್ಬನೇ ಒಬ್ಬ ಆದಿವಾಸಿ ಅಥವಾ ದಲಿತ ಅಧಿಕಾರಿಯೂ ಕಾಣಲಿಲ್ಲ. ಒಟ್ಟು 20 ಅಧಿಕಾರಿಗಳು ಕೇಂದ್ರ ಬಜೆಟ್ ಸಿದ್ಧಪಡಿಸಿದರು. ಅವರಲ್ಲಿ ಒಬ್ಬರೂ ಹಿಂದುಳಿದ, ದಲಿತ ಅಥವಾ ಬುಡಕಟ್ಟು ಸಮುದಾಯಕ್ಕೆ ಸೇರಿದವರಲ್ಲ. ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ಜನರು ಭಾರತದ ಜನಸಂಖ್ಯೆಯಲ್ಲಿ ಶೇ.73ರಷ್ಟು ಇದ್ದಾರೆ. ಆದರೆ ಕೇಂದ್ರ ಬಜೆಟ್‌ನಿಂದ ಅವರಿಗೆ ಏನೂ ಸಿಕ್ಕಿಲ್ಲ.

ಬಿಜೆಪಿಯ ಚಕ್ರವ್ಯೂಹ ಕೋಟ್ಯಂತರ ಜನರಿಗೆ ಹಾನಿ ಮಾಡುತ್ತದೆ. ನಾವು ಈ ಚಕ್ರವ್ಯೂಹವನ್ನು ಮುರಿಯಲಿದ್ದೇವೆ. ಇದನ್ನು ಮಾಡುವ ಮಾರ್ಗವೇನಂದರೆ, ನಿಮ್ಮನ್ನು ಹೆದರಿಸುವುವ ಜಾತಿವಾರು ಜನಗಣತಿಯೇ. ಇಂಡಿಯಾ ಮೈತ್ರಿಕೂಟವು ಈ ಸದನದಲ್ಲಿ ಕನಿಷ್ಠ ಬೆಂಬಲ ಬೆಲೆಯ ಶಾಸನಬದ್ಧ ಖಾತರಿ ಮಸೂದೆಯನ್ನು ಅಂಗೀಕರಿಸುತ್ತದೆ. ಅದೇ ರೀತಿ ಜಾತಿವಾರು ಜನಗಣತಿ ನಡೆಸುತ್ತೇವೆ. ನೀವು ಇಷ್ಟಪಡುತ್ತೀರೋ ಇಲ್ಲವೋ ಅದು ಸಂಭವಿಸುತ್ತದೆ.

ಭಾರತದ ಸ್ವರೂಪವೇ ಬೇರೆ. ಪ್ರತಿಯೊಂದು ಧರ್ಮವು ಚಕ್ರವ್ಯೂಹಕ್ಕೆ ವಿರೋಧಿ ತಂತ್ರವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿಯೂ ಸಹ ಇದೆ. ಹಸಿರು ಕ್ರಾಂತಿ, ಸ್ವಾತಂತ್ರ್ಯ, ಸಂವಿಧಾನದ ಮೂಲಕ ನೀವು ರಚಿಸಿದ ಚಕ್ರವ್ಯೂಹವನ್ನು ನಾವು ಮುರಿಯುತ್ತೇವೆ. ನಿಮ್ಮನ್ನು ನೀವು ಹಿಂದೂ ಎಂದು ಕರೆದುಕೊಳ್ಳುತ್ತೀರಿ. ಆದರೆ ನಿಮಗೆ ಹಿಂದೂ ಧರ್ಮ ಅರ್ಥವಾಗುತ್ತಿಲ್ಲ” ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು.

ದೇಶ

ನವದೆಹಲಿ: ಕಳೆದ 5 ವರ್ಷಗಳಲ್ಲಿ 633 ಭಾರತೀಯ ವಿದ್ಯಾರ್ಥಿಗಳು ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದ ವಿದೇಶದಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಒಟ್ಟು 41 ದೇಶಗಳಲ್ಲಿ ವಿದ್ಯಾರ್ಥಿಗಳ ಸಾವಿನ ಘಟನೆಗಳು ನಡೆದಿವೆ. ಕೆನಡಾದಲ್ಲಿ ಗರಿಷ್ಠ 172 ಮತ್ತು ಅಮೆರಿಕದಲ್ಲಿ 108 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇದಲ್ಲದೆ, ದಾಳಿಯಲ್ಲಿ 19 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ, ಅದರಲ್ಲಿ 9 ಕೆನಡಾದಲ್ಲಿ ಮತ್ತು 6 ಅಮೆರಿಕದಲ್ಲಿ ಸಾವನ್ನಪ್ಪಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಕೊಡಿಕುನ್ನಿಲ್ ಸುರೇಶ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವಾಲಯ ಈ ಮಾಹಿತಿಯನ್ನು ಒದಗಿಸಿದೆ. ಈ ಕುರಿತು ಲೋಕಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ. “ಅಪಘಾತಗಳು, ವೈದ್ಯಕೀಯ ಚಿಕಿತ್ಸೆ ಮುಂತಾದ ವಿವಿಧ ಕಾರಣಗಳಿಂದ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಸಾವನ್ನಪ್ಪಿದ್ದಾರೆ. ಕೆನಡಾ ಮತ್ತು ಅಮೆರಿಕದಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.

ಇದರ ನಂತರ ಇಂಗ್ಲೆಂಡ್ 58 ವಿದ್ಯಾರ್ಥಿಗಳು, ಆಸ್ಟ್ರೇಲಿಯಾ 57 ವಿದ್ಯಾರ್ಥಿಗಳು ಮತ್ತು 37 ವಿದ್ಯಾರ್ಥಿಗಳೊಂದಿಗೆ ರಷ್ಯಾ ನಂತರದ ಸ್ಥಾನದಲ್ಲಿದೆ. ಏತನ್ಮಧ್ಯೆ, ಕಳೆದ ಮೂರು ವರ್ಷಗಳಲ್ಲಿ 48 ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಗಡಿಪಾರಿಗೆ ಕಾರಣಗಳನ್ನು ಅಮೆರಿಕ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಒದಗಿಸಿಲ್ಲ” ಎಂದು ಅವರು ಹೇಳಿದ್ದಾರೆ.

ದೇಶ

ಭಾರತ ಎದುರಿಸಿದ ಇತ್ತೀಚಿನ ಯುದ್ಧವೆಂದರೆ ಅದು ಕಾರ್ಗಿಲ್ ಯುದ್ಧವೇ. ಭಾರತದ ಭೂಭಾಗಕ್ಕೆ ನುಗ್ಗಿದ ಪಾಕಿಸ್ತಾನಿ ಪಡೆಗಳನ್ನು ಹಿಮ್ಮೆಟ್ಟಿಸಿ, ವಿಜಯ ಪತಾಕೆ ಹಾರಿಸಿದ ಇತಿಹಾಸಕ್ಕೆ ಇಂದಿಗೆ 25 ವರ್ಷ!

ಕಾಶ್ಮೀರದ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ 25ನೇ ವಿಜಯ ದಿನದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಲಡಾಖ್ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಯುದ್ಧ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ನಂತರ ಪ್ರಧಾನಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.

ಆಗ, “ಕಾರ್ಗಿಲ್ ಯುದ್ಧದ ನಂತರವೂ ಪಾಕಿಸ್ತಾನ ಪಾಠ ಕಲಿತಿಲ್ಲ; ಅದು ಭಯೋತ್ಪಾದನೆ ಮತ್ತು ರಹಸ್ಯ ಯುದ್ಧಗಳನ್ನು ಮುಂದುವರೆಸಿದೆ. ಸೈನಿಕರ ನಿಸ್ವಾರ್ಥ ಸೇವೆಗೆ ನಾಡಿನ ಸಮಸ್ತ ಜನತೆ ಋಣಿಯಾಗಿದ್ದಾರೆ. ಪಾಕಿಸ್ತಾನದ ದುಷ್ಟ ಉದ್ದೇಶಗಳು ಎಂದಿಗೂ ಯಶಸ್ವಿಯಾಗುವುದಿಲ್ಲ.

ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ನಮ್ಮ ದೇಶವು ಗೌರವ ಸಲ್ಲಿಸುತ್ತದೆ; ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಎಂದಿಗೂ ಸಾಯುವುದಿಲ್ಲ. ನಮ್ಮ ಸೈನಿಕರು ಸಂಪೂರ್ಣ ಶಕ್ತಿಯಿಂದ ಭಯೋತ್ಪಾದನೆ ವಿರುದ್ಧ ಹೋರಾಡುತ್ತಾರೆ” ಎಂದು ಪ್ರಧಾನಿ ಹೇಳಿದರು.

ದೇಶ

ಮಣಿಪುರ ರಾಜ್ಯದಲ್ಲಿ ಕುಕಿ ಮತ್ತು ಮೈತೇಯಿ ಜನಾಂಗಗಳ ನಡುವೆ ಕಳೆದ ವರ್ಷ ಮೇ ತಿಂಗಳಲ್ಲಿ ಆರಂಭವಾದ ಹಿಂಸಾತ್ಮಕ ಸಂಘರ್ಷ ಒಂದು ವರ್ಷದಿಂದ ನಡೆಯುತ್ತಿದೆ. ಎರಡೂ ಕಡೆಗಳಲ್ಲಿ 250ಕ್ಕೂ ಹೆಚ್ಚು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜಿರಿಬಾಮ್‌ನಂತಹ ಪ್ರದೇಶಗಳಲ್ಲಿ ಉದ್ವಿಗ್ನತೆ ಮುಂದುವರಿದಿರುವುದರಿಂದ ಅಮೆರಿಕ ವಿದೇಶಾಂಗ ಇಲಾಖೆಯು ಭಾರತಕ್ಕೆ ತನ್ನ ಪ್ರಯಾಣದ ಸಲಹೆಯನ್ನು ನವೀಕರಿಸಿದೆ.

ಅದರಂತೆ ಮಣಿಪುರ ರಾಜ್ಯದಲ್ಲಿ ‘ಪ್ರಯಾಣ ಮಾಡಬೇಡಿ, ತುಂಬಾ ಅಪಾಯವಿದೆ’ ಎಂದು 4ನೇ ಹಂತದ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ, ಪ್ರಯಾಣದ ಮರುಪರಿಶೀಲನೆಗಾಗಿ ಮೇಘಾಲಯಕ್ಕೆ 3ನೇ ಹಂತವನ್ನು ನೀಡಲಾಗಿದೆ.

ಅಸ್ಸಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾದಲ್ಲಿ ಹಿಂಸಾಚಾರ ಇಳಿಕೆಯಿಂದಾಗಿ ಈ ರಾಜ್ಯಗಳನ್ನು 2ನೇ ಹಂತದ ಪಟ್ಟಿಗೆ ವರ್ಗಾಯಿಸಲಾಗಿದೆ. ಅಂದರೆ ಹಂತ 2ರ ಪಟ್ಟಿಯಲ್ಲಿರುವ ರಾಜ್ಯಕ್ಕೆ ತೆರಳುವವರು ಸೂಕ್ತ ಭದ್ರತೆ ಹಾಗೂ ವಿದೇಶಾಂಗ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತೆರಳಬೇಕು ಎಂದು ಆದೇಶ ಹೊರಡಿಸಲಾಗಿದೆ.

ಮಣಿಪುರ ರಾಜ್ಯದ ಮಟ್ಟಿಗೆ ಹಿಂಸಾಚಾರ ತಗ್ಗಿಲ್ಲದ ಕಾರಣ ಕೊಲೆ, ಅಪಹರಣ, ಲೈಂಗಿಕ ದೌರ್ಜನ್ಯ ಇತ್ಯಾದಿ ಸಾಧ್ಯತೆಗಳಿರುವುದರಿಂದ 4ನೇ ಹಂತದ ಎಚ್ಚರಿಕೆ ನೀಡಲಾಗಿದೆ.

ಜನಾಂಗೀಯ ಆಧಾರಿತ ನಾಗರಿಕ ಕಲಹ ಮತ್ತು ಭಾರತ ಸರ್ಕಾರದ ಗುರಿಗಳ ವಿರುದ್ಧ ನಿಯಮಿತ ದಾಳಿಯ ಕಾರಣದಿಂದ ಯಾವುದೇ ಅಮೆರಿಕ ನಾಗರಿಕರು ಮುಂದಿನ ಆರು ತಿಂಗಳ ಕಾಲ ಮಣಿಪುರ ರಾಜ್ಯಕ್ಕೆ ಪ್ರಯಾಣಿಸಬಾರದು ಎಂದು ಅಮೆರಿಕ ವಿದೇಶಾಂಗ ಇಲಾಖೆ ಹೇಳಿದೆ.

ಅಮೆರಿಕ ಸರ್ಕಾರಿ ನೌಕರರು ಹೆಚ್ಚಿನ ಅಪಾಯದ ಪ್ರದೇಶಗಳಿಗೆ ಪ್ರಯಾಣಿಸಲು ವಿಶೇಷ ಅಧಿಕಾರದ ಅಗತ್ಯವಿರುವ ಕಾರಣದಿಂದ ವಿದೇಶದಲ್ಲಿ ಹಿಂಸಾತ್ಮಕ ಸಂಘರ್ಷದ ಪ್ರದೇಶಗಳಲ್ಲಿ ಹಂತ ಹಂತವಾಗಿ ಎಚ್ಚರಿಕೆಗಳನ್ನು ನೀಡಲಾಗುತ್ತದೆ.

ಇದರಲ್ಲಿ 4ನೇ ಹಂತವು, ನಾಗರಿಕರು ಮತ್ತು ಅಮೆರಿಕ ವಿದೇಶಾಂಗ ವ್ಯವಹಾರಗಳ ಇಲಾಖೆ ಉದ್ಯೋಗಿಗಳಿಗೆ ನೀಡಲಾಗುವ ಅತ್ಯುನ್ನತ ಮಟ್ಟದ ಎಚ್ಚರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಭಾರತದ ಈಶಾನ್ಯ ರಾಜ್ಯಗಳಿಗೆ ಅಮೆರಿಕದ ನಾಗರಿಕರ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ನವೀಕರಿಸಲಾಗಿದೆ.

ದೇಶ

ನವದೆಹಲಿ: ನೀಟ್ ಪ್ರವೇಶ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಗ್ಯಾಂಗ್ ಶಾಮೀಲಾಗಿರುವುದು ಹೇಗೆ ಎಂಬ ಹೊಸ ಮಾಹಿತಿಯನ್ನು ಸಿಬಿಐ ಬಿಡುಗಡೆ ಮಾಡಿದೆ.

ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಈ ಬಾರಿಯ ನೀಟ್ (NEET) ಪ್ರವೇಶ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಹಗರಣಗಳ ಆರೋಪ ಕೇಳಿಬಂದಿತ್ತು. ಈ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಈ ಹಗರಣ ನಡೆದಿರುವುದು ದೃಢಪಟ್ಟಿದೆ.

ಈ ಕುರಿತು ಸಿಬಿಐ ನಿನ್ನೆ ಪ್ರಕಟಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ‘ಪರೀಕ್ಷೆ ನಡೆದ ಓಯಸಿಸ್ ಶಾಲೆಯ ಮುಖ್ಯೋಪಾಧ್ಯಾಯ ಇಶಾನುಲ್ ಹಕ್ ನಗರದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಸಂಯೋಜಕರಾಗಿದ್ದರು. ಇವರನ್ನು ಮತ್ತು ಶಾಲೆಯ ಉಪ ಮುಖ್ಯೋಪಾಧ್ಯಾಯ ಇಮ್ತಿಯಾಜ್ ಆಲಂ ಅವರನ್ನು ಹಗರಣದ ಮಾಸ್ಟರ್ ಮೈಂಡ್ ಪಂಕಜ್ ಕುಮಾರ್ ಸಂಪರ್ಕಿಸಿದ್ದಾರೆ. ಈ ಮೂವರೂ ಸೇರಿ, ಪರೀಕ್ಷೆ ನಡೆಯುವ ಮೇ 5 ರಂದು ಬೆಳಗ್ಗೆ ಸೆಕ್ಯೂರಿಟಿ ಬಾಕ್ಸ್‌ನಿಂದ ಪ್ರಶ್ನೆಪತ್ರಿಕೆ ತೆಗೆದು ಫೋಟೋ ತೆಗೆದಿದ್ದಾರೆ.

ಏತನ್ಮಧ್ಯೆ, ಬಿಹಾರದ ಕೆಲವು ಪ್ರಸಿದ್ಧ ವೈದ್ಯಕೀಯ ಕಾಲೇಜಿನ ಕೆಲವು ವಿದ್ಯಾರ್ಥಿಗಳನ್ನು ಕರೆತಂದು ಹಜಾರಿಬಾಗ್‌ನಲ್ಲಿ ವಸತಿ ಕಲ್ಪಿಸಿಕೊಡಲಾಗಿತ್ತು. ಹಣ ಪಾವಿತಿಸಿದ್ದ ಆ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ ಕೆಲವು ವ್ಯಕ್ತಿಗಳು ಅವುಗಳನ್ನುಅವರಿಗೆ ವಿತರಿಸಿದ್ದಾರೆ. ವಿದ್ಯಾರ್ಥಿಗಳು ಆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ನೀಡಿದ್ದಾರೆ.

ಈ ಹಗರಣದಲ್ಲಿ ಭಾಗಿಯಾಗಿರುವ ಪಂಕಜ್ ಕುಮಾರ್, ಪರೀಕ್ಷೆ ನಡೆದ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಪ್ರಶ್ನೆಗಳಿಗೆ ಉತ್ತರ ಬರೆದ ವಿದ್ಯಾರ್ಥಿಗಳು, ಖರೀದಿಸಿದ ವಿದ್ಯಾರ್ಥಿಗಳು ಸೇರಿ 35ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶ

ಚೆನ್ನೈ: ಕರ್ನಾಟಕ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದ ನಾಮಕ್ಕಲ್ ಮತ್ತು ಕೃಷ್ಣಗಿರಿ ಜಿಲ್ಲೆಗಳ ಇಬ್ಬರು ಲಾರಿ ಚಾಲಕರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಮೃತರ ಕುಟುಂಬಗಳಿಗೆ 3 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಆದೇಶಿಸಿದ್ದಾರೆ.

ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಸಂತಾಪ ಸೂಚಿಸಿ ಹೊರಡಿಸಿರುವ ಸಂದೇಶದಲ್ಲಿ, “ನಾಮಕ್ಕಲ್ ಜಿಲ್ಲೆಯ ಪುದುಚತ್ರಂ ವೃತ್ತದ ತಾತಯ್ಯಂಗಾರಪಟ್ಟಿ ಗ್ರಾಮದ ಚಿನ್ನನ್ ಮತ್ತು ಕೃಷ್ಣಗಿರಿ ಜಿಲ್ಲೆಯ ಊತ್ತಂಗರೈ ಒಳ ವೃತ್ತದ ಎಂ.ವೆಲ್ಲಾಪಟ್ಟಿ ಗ್ರಾಮದ ಮುರುಗನ್ ಇಬ್ಬರೂ, ಕಳೆದ ಜುಲೈ 16 ರಂದು ಎಲ್‌ಪಿಜಿ ಟ್ಯಾಂಕರ್ ಲಾರಿಯಲ್ಲಿ ಚಾಲಕರಾಗಿ ಹೋಗಿದ್ದಾಗ, ಕರ್ನಾಟಕ ರಾಜ್ಯ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವೃತ್ತದ ಶಿರೂರು ಪ್ರದೇಶದಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದರು ಎಂಬ ದುಃಖದ ಸುದ್ದಿಯನ್ನು ಕೇಳಿ ನನಗೆ ಅತೀವ ದುಃಖ ಮತ್ತು ನೋವಾಗಿದೆ” ಎಂದು ಹೇಳಿದ್ದಾರೆ.

ಅಲ್ಲದೆ, ಅಪಘಾತದಲ್ಲಿ ಸಾವನ್ನಪ್ಪಿದ ಟ್ರಕ್ ಚಾಲಕರ ಕುಟುಂಬಗಳಿಗೆ ಮತ್ತು ಅವರ ಸಂಬಂಧಿಕರಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುವದರ ಜೊತೆಗೆ ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂಪಾಯಿಗಳನ್ನು ನೀಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.

ದೇಶ

ನವದೆಹಲಿ: ಖನಿಜ ಸಂಪನ್ಮೂಲಗಳ ಮೇಲೆ ತೆರಿಗೆ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 8 ನ್ಯಾಯಾಧೀಶರು ಸರ್ವಾನುಮತದ ತೀರ್ಪು ನೀಡಿದ್ದು, ಒಬ್ಬ ನ್ಯಾಯಾಧೀಶರು ಮಾತ್ರ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಗಣಿ ಮತ್ತು ಖನಿಜಗಳ ಮೇಲೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ವಿಧಿಸಿರುವ ತೆರಿಗೆಯನ್ನು ವಸೂಲಿ ಮಾಡುವ ಕುರಿತು ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟನೆ ಕೇಳಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ 9 ನ್ಯಾಯಾಧೀಶರ ಪೀಠ ಈ ಬಗ್ಗೆ ತನಿಖೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಅದರಲ್ಲಿ ಡಿ.ವೈ.ಚಂದ್ರಚೂಡ್ ಸೇರಿದಂತೆ 8 ನ್ಯಾಯಾಧೀಶರು ಒಂದೇ ರೀತಿಯ ತೀರ್ಪು ನೀಡಿದ್ದಾರೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನಾಭಿಪ್ರಾಯದ ತೀರ್ಪು ನೀಡಿದ್ದಾರೆ.

8 ನ್ಯಾಯಾಧೀಶರು ನೀಡಿದ ತೀರ್ಪನ್ನು ಓದಿ ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, “ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ಖನಿಜ ಸಂಪನ್ಮೂಲಗಳಿಗೆ ತೆರಿಗೆ ವಿಧಿಸಲು ಸಂಸತ್ತಿಗೆ ಯಾವುದೇ ಅಧಿಕಾರವಿಲ್ಲ. 1989ರಲ್ಲಿ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠವು ಖನಿಜ ಸಂಪನ್ಮೂಲಗಳ ಮೇಲಿನ ರಾಯಧನವು ತೆರಿಗೆ ಎಂದು ಹೇಳಿದ್ದ ತೀರ್ಪು ತಪ್ಪಾಗಿದೆ. ಖನಿಜ ಸಂಪನ್ಮೂಲಗಳು ಮತ್ತು ಖನಿಜ ಸಮೃದ್ಧ ಭೂಮಿಗಾಗಿ ಕೇಂದ್ರ ಸರ್ಕಾರದಿಂದ ಪಡೆಯುವ ರಾಯಧನವನ್ನು ತೆರಿಗೆ ಎಂದು ಪರಿಗಣಿಸಲಾಗದು.

ರಾಜ್ಯ ಸರ್ಕಾರಗಳಿಗೆ ತೆರಿಗೆ ವಿಧಿಸುವ ಹಕ್ಕಿದೆ. ರಾಜ್ಯಗಳಲ್ಲಿರುವ ಖನಿಜ ಸಂಪನ್ಮೂಲಗಳಿಗಾಗಿ ಕೇಂದ್ರ ಸರ್ಕಾರದಿಂದ ಪಡೆಯುವ ರಾಯಧನವನ್ನು ತೆರಿಗೆ ಎಂದು ಪರಿಗಣಿಸಲಾಗದು. ಇದು ಗುತ್ತಿಗೆ ಹಣವೇ. ಗಣಿ, ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆಗಳು ರಾಜ್ಯಗಳ ಹಕ್ಕುಗಳನ್ನು ನಿರ್ಬಂಧಿಸುವ ಯಾವುದೇ ಷರತ್ತುಗಳನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ನೀಡಿರುವ ತಮ್ಮ ತೀರ್ಪಿನಲ್ಲಿ, “ಖನಿಜ ಸಂಪನ್ಮೂಲಗಳು ಮತ್ತು ಅವು ಇರುವ ಭೂಮಿಗೆ ತೆರಿಗೆ ವಿಧಿಸುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇಲ್ಲ” ಎಂದು ಹೇಳಿದ್ದಾರೆ.