ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
2024 » Page 19 of 61 » Dynamic Leader
October 24, 2024
Home 2024 (Page 19)
ಉದ್ಯೋಗ

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಉದ್ಯೋಗ ನೀಡುವ ನಿರ್ಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿರುವ ಕೈಗಾರಿಕೋದ್ಯಮಿಗಳನ್ನು ತಮ್ಮ ರಾಜ್ಯಕ್ಕೆ ಬರುವಂತೆ ಆಂಧ್ರಪ್ರದೇಶ ಆಹ್ವಾನಿಸಿದೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಕರ್ನಾಟಕದ ಎಲ್ಲಾ ಖಾಸಗಿ ವಲಯದ ಕಂಪನಿಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಶೇ.100 ರಷ್ಟು ಕನ್ನಡದವರನ್ನು ಕಡ್ಡಾಯವಾಗಿ ನೇಮಿಸುವ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕರ್ನಾಟಕದ ನಿರ್ಧಾರದಿಂದಾಗಿ ನೆರೆಯ ಆಂಧ್ರಪ್ರದೇಶ, ನಾಸ್ಕಾಮ್ ಸೇರಿದಂತೆ ಪ್ರಮುಖ ಐಟಿ ಕಂಪನಿಗಳಿಗೆ ಆಂಧ್ರ ಸಚಿವ ನಾರಾ ಲೋಕೇಶ್ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ.

ಉದ್ಯೋಗ

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಜಾರಿಯ ಐತಿಹಾಸಿಕ ನಿರ್ಣಯ ಕೈಗೊಂಡಿರುವ ಮುಖ್ಯಮಂತ್ರಿ ಅವರನ್ನು ಅಭಿನಂದಿಸಿ, ಸಮಸ್ತ ಕನ್ನಡಿಗರ ಪರವಾಗಿ ಅವರನ್ನು ಇಂದು ವಿಧಾನಸೌಧ ಕಛೇರಿಯಲ್ಲಿ ಭೇಟಿಯಾಗಿ ಧನ್ಯವಾದ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷರಾದ ಅಶ್ವಿನಿ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ಬಿಗೆರೆ ವಿನೋದ್ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸoಘದ ಅಧ್ಯಕ್ಷ ಷಡಕ್ಷರಿ ಅವರ ನೇತೃತ್ವದ ನಿಯೋಗದವರು ಮುಖ್ಯಮoತ್ರಿ ಸಿದ್ದರಾಮಯ್ಯ ಅವರನ್ನು ಇಂದು ವಿಧಾನಸೌಧದಲ್ಲಿ ಭೇಟಿಯಾಗಿ ಅಭಿನoದನೆ ಸಲ್ಲಿಸಿದರು.

ಆಗಸ್ಟ್‌ 1 ರಿಂದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವುದಾಗಿ ನಿರ್ಧರಿಸಲಾಗಿದೆ. ಈ ಮೂಲಕ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿದೆ. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ವರದಿ ಜಾರಿ ಕುರಿತು ಸಂಪುಟ ಒಪ್ಪಿಗೆ ಸೂಚಿಸಿತ್ತು.

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ರಚಿಸಲಾದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಸರ್ಕಾರ ಅoಗೀಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸoಘದ ಅಧ್ಯಕ್ಷ ಷಡಕ್ಷರಿ ಅವರ ನೇತೃತ್ವದ ನಿಯೋಗದವರು ಮುಖ್ಯಮoತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಭಿನoದನೆ ಸಲ್ಲಿಸಿದರು. ಉಪಮುಖ್ಯಮಂತ್ರಿಗಳಾದ  ಡಿ.ಕೆ.ಶಿವಕುಮಾರ್ ಹಾಗೂ ಸಂಘದ ಪದಾಧಿಕಾರಿಗಳು ಈ ವೇಳೆ ಹಾಜರಿದ್ದರು.

ವಿದೇಶ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹತ್ಯೆಗೆ ಇರಾನ್ (Iran) ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಆರೋಪಿಸಿದೆ. ಹೀಗಾಗಿ ಟ್ರಂಪ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದಲ್ಲಿ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡುತ್ತಿದ್ದಾಗ, ಗುಂಪಿನಲ್ಲಿದ್ದ ಯುವಕನೊಬ್ಬ ಟ್ರಂಪ್ ಮೇಲೆ ಗನ್‌ನಿಂದ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಅವರು ಜೀವಂತವಾಗಿ ಪಾರಾಗಿದ್ದಾರೆ. ಕಿವಿಯ ಭಾಗದಲ್ಲಿ ಗಾಯವಾಗಿದೆ.

ಈ ಹಿನ್ನೆಲೆಯಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್ ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಆರೋಪಿಸಿದೆ. ಕಳೆದ 2020ರಲ್ಲಿ, ಅಮೆರಿಕ ಇರಾನ್‌ನ ಸೇನಾ ಮುಖ್ಯಸ್ಥ ಕಾಸ್ಸೆಮ್ ಸೊಲೈಮಾನಿಯನ್ನು (Qasem Soleimani) ಹತ್ಯೆ ಮಾಡಿತ್ತು. ಆಗ ಅಧ್ಯಕ್ಷರಾಗಿದ್ದ ಟ್ರಂಪ್ ಅವರು ಈ ಆದೇಶವನ್ನು ನೀಡಿದ್ದರು.

ಇದಕ್ಕಾಗಿಯೇ ಇರಾನ್ ಟ್ರಂಪ್ ಅವರನ್ನು ಕೊಲ್ಲಲು ಸಂಚು ರೂಪಿಸುತ್ತಿದೆ. ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ. ಹೀಗಾಗಿ ಟ್ರಂಪ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈ ಕುರಿತು ಮಾತನಾಡಿದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಆಡ್ರಿಯನ್ ವ್ಯಾಟ್ಸನ್ (Adrienne Watson), “ಟ್ರಂಪ್ ವಿರುದ್ಧ ಇರಾನ್‌ನ ಬೆದರಿಕೆಗಳನ್ನು ನಾವು ವರ್ಷಗಳಿಂದ ಗಮನಿಸುತ್ತಿದ್ದೇವೆ. ಕಾಸ್ಸೆಮ್ ಸೊಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್‌ನ ಪ್ರಯತ್ನಗಳಿಂದ ಬೆದರಿಕೆಗಳಿವೆ” ಎಂದು ಹೇಳಿದ್ದಾರೆ.

“ಟ್ರಂಪ್ ಮೇಲೆ ಗುಂಡು ಹಾರಿಸಿದವನಿಗೂ ನಮಗೂ ಯಾವ ಸಂಬಧವೂ ಇಲ್ಲ. ಅಮೆರಿಕದ ಆರೋಪ ನಿರಾಧಾರ” ಎಂದು ಇರಾನ್ ಹೇಳಿದೆ.

ವಿದೇಶ

ಡಿ.ಸಿ.ಪ್ರಕಾಶ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ 39 ವರ್ಷದ ಜೆ.ಡಿ.ವ್ಯಾನ್ಸ್ (James David Vance) ಆಯ್ಕೆಯಾಗಿದ್ದಾರೆ. ಅವರ ನಾಮನಿರ್ದೇಶನದ ನಂತರ ಸಂದರ್ಶನವೊಂದರಲ್ಲಿ, ಅವರ ಭಾರತೀಯ ಮೂಲದ ಪತ್ನಿ ಉಷಾ ಚಿಲುಕುರಿ (Usha Chilukuri) ಅವರು ತಮ್ಮ ವೈಯಕ್ತಿಕ ಮತ್ತು ಆಧ್ಯಾತ್ಮಿಕ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ನವೆಂಬರ್ 5 ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಪರವಾಗಿ ಹಾಲಿ ಅಧ್ಯಕ್ಷ 81 ವರ್ಷದ ಜೋ ಬೈಡನ್ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ (78) ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಅಮೆರಿಕದ ಅಧ್ಯಕ್ಷ ಸ್ಥಾನದಂತೆಯೇ, ಉಪಾಧ್ಯಕ್ಷ ಸ್ಥಾನವೂ ಮುಖ್ಯವಾದದ್ದು. ಬೈಡನ್ ಅವರು ಪ್ರಸ್ತುತ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್ ಅವರನ್ನೆ ಈ ಬಾರಿಯೂ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಟ್ರಂಪ್ ತಮ್ಮ ರಿಪಬ್ಲಿಕನ್ ಪಕ್ಷದ ಪರವಾಗಿ ಜೆ.ಡಿ.ವ್ಯಾನ್ಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ.

ವ್ಯಾನ್ಸ್ ಪ್ರಸ್ತುತ ಓಹಿಯೋ ರಾಜ್ಯದ ಸೆನೆಟರ್ (Senator) ಆಗಿದ್ದಾರೆ. ಅವರ ಪತ್ನಿ ಭಾರತೀಯ ಮೂಲದ ಉಷಾ ಚಿಲುಕುರಿ ಅವರು ಯೇಲ್ (Yale) ಕಾನೂನು ಶಾಲೆಯಲ್ಲಿ ಓದುತ್ತಿದ್ದಾಗ ಪರಿಚಯವಾಗಿದ್ದರು. ನಂತರ ಅವರು ಪ್ರೀತಿಸಿ 2014ರಲ್ಲಿ ವಿವಾಹವಾದರು. ಅವರ ಮದುವೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿತು. ಅವರಿಗೆ ಐವಾನ್ (6), ವಿವೇಕ್ (4) ಮತ್ತು ಮಿರಾಬೆಲ್ (2) ಎಂಬ ಮೂವರು ಮಕ್ಕಳಿದ್ದಾರೆ.

ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ವ್ಯಾನ್ಸ್ ಅವರ ಸಂದರ್ಶನ:
“ನಾನು ಕ್ರಿಶ್ಚಿಯನ್ ಆಗಿ ಬೆಳೆದರೂ, ನಾನು ದೀಕ್ಷಾಸ್ನಾನ (Baptism) ಪಡೆದಿರಲಿಲ್ಲ. ನಾನು ಕಥೋಲಿಕ (Catholic) ನಂಬಿಕೆಗಳಿಗೆ ಬದ್ಧನಾಗಿರಲಿಲ್ಲ. ನನ್ನ ಭಾರತೀಯ ಮೂಲದ ಹೆಂಡತಿಯ ಹಿಂದೂ ಧರ್ಮವು ಸವಾಲುಗಳನ್ನು ಎದುರಿಸಲು ನನಗೆ ಸಹಾಯ ಮಾಡಿತು. ಅಲ್ಲದೆ, ಕಥೋಲಿಕ ನಂಬಿಕೆಗಳನ್ನು ಒಪ್ಪಿಕೊಳ್ಳುವಲ್ಲಿ ಇದು ಸಹಕಾರಿಯಾಗಿತ್ತು.

ಹಾಗಾಗಿ ಮದುವೆಯ ನಂತರ ನಾನು ಮೊದಲ ಬಾರಿಗೆ ದೀಕ್ಷಾಸ್ನಾನ ಪಡೆದುಕೊಂಡೆ. ಉಷಾ ನಿಜವಾಗಿಯೂ ಕ್ರಿಶ್ಚಿಯನ್ ಅಲ್ಲದಿದ್ದರೂ, ನಾನು ಕಥೋಲಿಕ ನಂಬಿಕೆಯಲ್ಲಿ ಮತ್ತೆ ತೊಡಗಿಸಿಕೊಳ್ಳಲು ಪ್ರಾರಂಭಿಸಿದಾಗ ನನಗೆ ಉಷಾ ಬೆಂಬಲವಾಗಿ ನಿಂತಿದ್ದರು” ಎಂದು ಹೇಳಿದ್ದಾರೆ.

ದೇಶ

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಜಾಪುರ ಗ್ರಾಮದಲ್ಲಿರುವ ಮಸೀದಿಯನ್ನು ಧ್ವಂಸ ಮಾಡಿರುವ ಚಿತ್ರ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಆ ವೀಡಿಯೋದಲ್ಲಿ ಮಸೀದಿಯ ಗೋಡೆಗಳನ್ನು ಹತ್ತಿ, ಕೇಸರಿ ಧ್ವಜವನ್ನು ನೆಟ್ಟು, ಸುತ್ತಿಗೆಯಿಂದ ಮಿನಾರ್‌ಗೆ ಹೊಡೆಯುತ್ತಿದ್ದಾರೆ. ಅಲ್ಲದೆ, ಆ ಗುಂಪು ‘ಜೈ ಶ್ರೀ ರಾಮ್’ ಎಂದು ಘೋಷಣೆ ಮಾಡುತ್ತಾ ಮಸೀದಿಯೊಳಗೆ ಪ್ರವೇಶಿಸಿ ಒಳಗಿರುವ ಎಲ್ಲವನ್ನೂ ಒಡೆದು ಹಾಕುತ್ತದೆ. ಮಸೀದಿಯ ಕೆಲವು ಭಾಗಗಳಿಗೆ ಹಾನಿಯಾಗಿದ್ದು, ಅಲ್ಲಿ ಇರಿಸಲಾಗಿದ್ದ ಪುಸ್ತಕಗಳು ಮತ್ತು ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಮಸೀದಿಯ ಹೊರಗೆ ನಿಲ್ಲಿಸಿದ್ದ ವಾಹನವನ್ನು ಧ್ವಂಸಗೊಳಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಈ ದಾಳಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಇಮ್ರಾನ್ ಸನದಿ ಆಗ್ರಹಿಸಿದ್ದಾರೆ. ಈ ಕುರಿತು ಅವರು, “ಮಸೀದಿಯನ್ನು ಧ್ವಂಸ ಗೊಳಿಸುವುದರ ಜೊತೆಗೆ ಮುಸ್ಲಿಂ ಜನರ ಮೇಲೂ ದಾಳಿ ಮಾಡಲಾಗಿದೆ. ಇದರಲ್ಲಿ 40 ಮುಸ್ಲಿಮರು ಮತ್ತು 6 ವರ್ಷದ ಮಗು ಬಾಧಿತವಾಗಿದೆ. ಆದರೆ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಸಾಮಾನ್ಯವಾಗಿ ಈ ದಾಳಿಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗಿತ್ತು” ಎಂದು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಮುಸ್ಲಿಂ ಸಂಘಟನೆಗಳು ಜಮಾಯಿಸಿ ಪ್ರತಿಭಟನೆ ನಡೆಸಿವೆ. ಅದರಂತೆ ಸದರಿ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ಕುರಿತು ಕೊಲ್ಹಾಪುರ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ ಮಾತನಾಡಿ, “ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಪೊಲೀಸ್ ಪಡೆಗಳನ್ನು ಕೇಂದ್ರೀಕರಿಸಲಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಗಜಾಪುರ ಗ್ರಾಮದಿಂದ ವಿಶಾಲಗಡ ಕೋಟೆಯವರೆಗೆ ಮತು ಕೋಟೆಯ ತಪ್ಪಲಿನಲ್ಲಿರುವ ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಹಾಗೂ ಪ್ರಾಣಿ ಹಿಂಸೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಹಿಂದುತ್ವ ಸಂಘಟನೆಗಳು ಅಲ್ಲಿ ಪ್ರತಿಭಟನೆ ನಡೆಸಿವೆ. ಇದಾದ ಬಳಿಕವೇ ಆ ಗುಂಪು ಮಸೀದಿ ಮೇಲೆ ದಾಳಿ ನಡೆಸಿವೆ ಎಂದು ಮುಸ್ಲಿಂ ಜನರು ದೂರಿದ್ದಾರೆ. ಇದರ ಹಿಂದೆ ರಾಜ್ಯಸಭಾ ಮಾಜಿ ಸಂಸದ ಸಂಭಾಜಿರಾಜೇ ಛತ್ರಪತಿ ಕೂಡ ಇದ್ದಾರೆ ಎನ್ನಲಾಗುತ್ತಿದೆ.

ಹೈದರಾಬಾದ್ ಸಂಸದ ಓವೈಸಿ ಈ ಮಸೀದಿ ಧ್ವಂಸದ ವಿಡಿಯೋವನ್ನು ತಮ್ಮ ಎಕ್ಸ್ ಪೇಜ್ ನಲ್ಲಿ ಶೇರ್ ಮಾಡಿ ಖಂಡಿಸಿದ್ದಾರೆ. ದಾಳಿಕೋರರ ವಿರುದ್ಧ ಮಹಾರಾಷ್ಟ್ರ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸದಂತಹ ಘಟನೆ ಮತ್ತೆ ಸಂಭವಿಸಿದೆ” ಎಂದು ಅವರು ಹೇಳಿದ್ದಾರೆ.

ದೇಶ

ನವದೆಹಲಿ: ದೆಹಲಿ ಮದ್ಯಪಾನ ನೀತಿ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತರಾಗಿರುವ ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೆಹಲಿ ಆಮ್ ಆದ್ಮಿ ಸರ್ಕಾರದ ಹೊಸ ಮದ್ಯ ನೀತಿಯಲ್ಲಿನ ಅಕ್ರಮಗಳ ಕುರಿತು ಸಿಬಿಐ, ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಸಂಬಂಧ ತೆಲಂಗಾಣದ ಭಾರತೀಯ ರಾಷ್ಟ್ರೀಯ ಸಮಿತಿ ಪಕ್ಷದ ಕವಿತಾ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಸಿಬಿಐ ಕೂಡ ಪ್ರಕರಣ ದಾಖಲಿಸಿಕೊಂಡಿದೆ.

ಈ ಎರಡು ಪ್ರಕರಣಗಳಲ್ಲಿ ಮಾರ್ಚ್ 15 ರಂದು ಜಾರಿ ಇಲಾಖೆ ಕವಿತಾ ಅವರನ್ನು ಬಂಧಿಸಿತ್ತು. ಅವರು ತಿಹಾರ್ ಜೈಲಿನಲ್ಲಿದ್ದಾರೆ. ಏಪ್ರಿಲ್ 11 ರಂದು ಸಿಬಿಐ ಅವರನ್ನು ತಿಹಾರ್ ಜೈಲಿನಲ್ಲಿ ಬಂಧಿಸಿತ್ತು. ಅವರ ವಿರುದ್ಧ ದೆಹಲಿ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ, ಕವಿತಾ ಇಂದು ತಿಹಾರ್ ಜೈಲಿನಲ್ಲಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ. ಕೂಡಲೇ ಅವರನ್ನು ದೆಹಲಿಯ ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೇಶ

ಡಿ.ಸಿ.ಪ್ರಕಾಶ್

ತಮಿಳುನಾಡಿನಲ್ಲಿ ‘ಚಂಡಾಲ’ ಎಂಬ ಜಾತಿ ಹೆಸರನ್ನು ಬಳಸಬಾರದು ಎಂದು  ತಮಿಳುನಾಡು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ವಿಕ್ರವಾಂಡಿ ಉಪಚುನಾವಣೆ ವೇಳೆ ‘ನಾಮ್ ತಮಿಳರ್’ ಪಕ್ಷದ ಸಾಟ್ಟೈ ದುರೈಮುರುಗನ್ (Sattai Durai Murugan), ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಬಗ್ಗೆ ವಿವಾದಾತ್ಮಕ ಹಾಡನ್ನು ಹಾಡುವ ಮೂಲಕ ಪ್ರಚಾರ ನಡೆಸಿದ್ದರು. ಆ ಹಾಡಿನಲ್ಲಿ ಕಾಣಿಸಿಕೊಂಡ ‘ಚಂಡಾಲ’ (Sandalar) ಪದವು ಅಸ್ಪೃಶ್ಯರನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಈ ಪದವನ್ನು ಬಳಸಿದ್ದಕ್ಕಾಗಿ ಸಾಟ್ಟೈ ದುರೈಮುರುಗನ್ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.

ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ‘ನಾಮ್ ತಮಿಳರ್’ ಪಕ್ಷದ ಸಂಯೋಜಕ ಸೀಮಾನ್ (Seeman), “ಚಂಡಾಲ ಎಂಬ ಪದವು ಚಲನಚಿತ್ರ ಹಾಡುಗಳಲ್ಲಿ ಕಂಡುಬರುತ್ತದೆ. ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರು ಕೂಡಾ ಈ ಪದವನ್ನು ಹೆಚ್ಚಾಗಿ ಬಳಸಿದ್ದಾರೆ. ಎಐಎಡಿಎಂಕೆ ಪಕ್ಷದ ಹಾಡನ್ನು ಹಾಡಿದ ಸಾಟ್ಟೈ ದುರೈಮುರುಗನ್ ವಿರುದ್ಧ ಬಂಧನ ಕ್ರಮ ಕೈಗೊಂಡವರು, ಎಐಎಡಿಎಂಕೆ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ? ‘ಚಂಡಾಲ’ ಎಂಬ ಸಮುದಾಯವಿದೆ ಎಂದು ನನಗೆ ತಿಳಿದಿರಲಿಲ್ಲ.

ನಾನು ಇದನ್ನು ಹಾಡು ಭಾಷೆಯಾಗಿ ಮಾತನಾಡಿದ್ದೆ. ಈ ಪದವು ಸ್ಕಂದ ಷಷ್ಠಿ ಕವಚದಲ್ಲಿರುವುದರಿಂದ ಇದನ್ನು ಬರೆದವರ ವಿರುದ್ಧವೂ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ. ಈ ಸಮಸ್ಯೆಯನ್ನು ಕೊನೆಗೊಳಿಸಲು, ತಮಿಳುನಾಡು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ‘ಚಂಡಾಲ’ ಎಂಬ ಜಾತಿ ಹೆಸರನ್ನು ಬಳಸದಂತೆ ಸಲಹೆ ನೀಡಿದೆ.

ಈ ಕುರಿತು ಪ್ರಕಟವಾಗಿರುವ ಪತ್ರಿಕಾ ಪ್ರಕಟಣೆಯಲ್ಲಿ, “ಮಾನವನ ಉಳಿವಿಗೆ ಅಗತ್ಯವಾದ ಮೂಲಭೂತ ವಸ್ತುಗಳನ್ನು ಉತ್ಪಾದಿಸುವುದು ಮತ್ತು ಶವಗಳನ್ನು ಹೂಳುವುದು ಮುಂತಾದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಸಮಾಜದ ಬಾಂಧವರನ್ನು ಅವಹೇಳನಕಾರಿ ಹೆಸರುಗಳಿಂದ ಕರೆಯುವುದು, ರಾಜಕೀಯ ವೇದಿಕೆಗಳನ್ನು ಬಳಸಿಕೊಂಡು ಇತರರನ್ನು ದೂಷಿಸುವುದು, ಕಲಾ ಸಾಹಿತ್ಯದಲ್ಲೂ, ಚಲನಚಿತ್ರ ಹಾಸ್ಯ ದೃಶ್ಯಗಳು ಮತ್ತು ಹಾಡುಗಳಲ್ಲಿ ಕೂಡ ಜಾತಿಯ ಅಡ್ಡಹೆಸರುಗಳನ್ನು ಬಳಕೆ ಮಾಡುವುದು ವ್ಯಾಪಕವಾಗಿ ಹರಡಿವೆ.

ಇದು ಆ ಹೆಸರುಗಳಲ್ಲಿರುವ ಜನರನ್ನು ಹಾಗೂ ಅವರಂತಹವರಿಗೆ ನೋವುಂಟು ಮಾಡುವ ಕೃತ್ಯವಾಗಿದೆ. ಇದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಎಂಬ ಕಲ್ಪನೆ ಸಾಮಾನ್ಯ ಸಮಾಜಕ್ಕೆ ಇಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ, 1989ರ ಪ್ರಕಾರ, ಸಾರ್ವಜನಿಕವಾಗಿ ಪರಿಶಿಷ್ಟ ಜಾತಿಯ ಹೆಸರನ್ನು ಅವಹೇಳನಕಾರಿಯಾಗಿ ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ. ತಮಿಳುನಾಡಿನ ಕೆಲವು ಭಾಗಗಳಲ್ಲಿ ಮತ್ತು ಭಾರತದಲ್ಲಿ ‘ಚಂಡಾಲ’ ಎಂಬ ಹೆಸರಿನ ಜನರಿದ್ದಾರೆ.

ಇದು ತಮಿಳುನಾಡಿನ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ 48ನೇ ಸ್ಥಾನದಲ್ಲಿದೆ. ಇತ್ತೀಚೆಗೆ ಈ ಹೆಸರನ್ನು ಸಾರ್ವಜನಿಕವಾಗಿ ಇತರರನ್ನು ಅವಹೇಳನ ಮಾಡಲು ಬಳಸಲಾಗುತ್ತಿದೆ. ಆದ್ದರಿಂದ ಇನ್ನು ಮುಂದೆ ‘ಚಂಡಾಲ’ ಎಂಬ ಪದವನ್ನು ಬಳಸಬಾರದು ಎಂದು ತಮಿಳುನಾಡು ರಾಜ್ಯ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗಗಳ ಆಯೋಗ ಸಲಹೆ ನೀಡಿದೆ. ಉಲ್ಲಂಘನೆಯಾದಲ್ಲಿ ದೌರ್ಜನ್ಯ ತಡೆ ಕಾಯ್ದೆ 1989ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ರಾಜ್ಯ

ಬೆಂಗಳೂರು: “ಸರಣಿ ಭ್ರಷ್ಟಾಚಾರದ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕರ್ಮಕಾಂಡ ಅಗೆದಷ್ಟು ಆಳವಾಗಿದೆ; ಬಗೆದಷ್ಟು ಹೊರಬರುತ್ತಿದೆ” ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

“ಸಹಕಾರ ಇಲಾಖೆಯ ಅಪೆಕ್ಸ್ ಬ್ಯಾಂಕ್ ಗಳಲ್ಲಿ ಬಹುಕೋಟಿ ರೂಪಾಯಿ ಮೊತ್ತದ ಬೃಹತ್ ಹಗರಣ ಬೆಳಕಿಗೆ ಬಂದಿದ್ದು, ಹಗರಣದ ತನಿಖೆ ನಡೆಸುವಂತೆ ಮಾನ್ಯ ಹೈಕೋರ್ಟ್ ತಾಕೀತು ಮಾಡಿದೆ” ಎಂದು ಹೇಳಿರುವ ಆರ್.ಅಶೋಕ್,

“ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ತಮ್ಮ ಸರ್ಕಾರದಲ್ಲಿ ಹಣಗರಣವಿಲ್ಲದ ಇಲಾಖೆ ಇಲ್ಲ ಎಂಬ ನಾಚಿಕೆಗೇಡು ಪರಿಸ್ಥಿತಿ ಇದೆ. ಇನ್ನಾದರೂ ರಾಜೀನಾಮೆ ಕೊಟ್ಟು ಕರ್ನಾಟಕದ ಮರ್ಯಾದೆ ಉಳಿಸಿ” ಎಂದು ಕಿಡಿಕಾರಿದ್ದಾರೆ.

ಕ್ರೈಂ ರಿಪೋರ್ಟ್ಸ್

ಡಿ.ಸಿ.ಪ್ರಕಾಶ್

ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಲಾಗಿದ್ದ 11 ಮಂದಿಯಲ್ಲಿ ಒಬ್ಬನಾಗಿದ್ದ ರೌಡಿ ತಿರುವೆಂಗಟಂ ಎಂಬಾತನನ್ನು ಇಂದು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಬಹುಜನ ಸಮಾಜ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅನ್ನು ಜುಲೈ 5ರ ರಾತ್ರಿ ಪೆರಂಬೂರಿನ ಅವರ ನಿವಾಸದ ಬಳಿ ಆರು ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆ ಮಾಡಲಾಗಿತ್ತು. ಆ ನಂತರ, ಈ ಘಟನೆಗೆ ಸಂಬಂಧಿಸಿದಂತೆ ಸೆಂಬಿಯಂ ಪೊಲೀಸರು 11 ಜನರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ 11 ಮಂದಿಯಲ್ಲಿ ಒಬ್ಬನಾಗಿದ್ದ ರೌಡಿಯೇ 33 ವರ್ಷದ ತಿರುವೆಂಕಟಂ.

ಆರ್ಮ್ ಸ್ಟ್ರಾಂಗ್

ಏತನ್ಮಧ್ಯೆ, ತಿರುವೆಂಗಟಂನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು, ಪರಂಗಿಮಲೈ ಸಶಸ್ತ್ರ ಪಡೆಗಳ ಸಂಕೀರ್ಣದಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಕೊಡುಂಗೈಯೂರ್ ಕಾನೂನು ಸುವ್ಯವಸ್ಥೆ ಇನ್ಸ್‌ಪೆಕ್ಟರ್ ಸರವಣನ್ ಅವರು ಇಂದು ಬೆಳಗ್ಗೆ ಮಾಧವರಂ ಅಡುತೊಟ್ಟಿ ಬಳಿ ತನಿಖೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗ ರೌಡಿ ತಿರುವೆಂಗಟಂ ಪರಾರಿಯಾಗಿದ್ದನು ಎನ್ನಲಾಗುತ್ತಿದೆ.

ತರುವಾಯ, ತಂಡೈಯಾರ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಮುಹಮ್ಮದ್ ಬುಖಾರಿ ಮಾಧವರಂ ಆಡುತೊಟ್ಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ನಂತರ ರೌಡಿ ತಿರುವೆಂಗಟಂ ಪುಳಲ್ ವೆಜಿಟೇರಿಯನ್ ವಿಲೇಜ್ ಪ್ರದೇಶದ ಖಾಲಿ ಜಾಗದಲ್ಲಿ ಟಿನ್ ಶೆಡ್‌ನಲ್ಲಿ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿತ್ತು.

ತಿರುವೆಂಗಟಂ ಎನ್‌ಕೌಂಟರ್ ಸ್ಪಾಟ್

ಇದಾದ ಬಳಿಕ ವಿಶೇಷ ಪಡೆ ಪೊಲೀಸರು ಟಿನ್ ಶೆಡ್ ಅನ್ನು ಸುತ್ತುವರಿದು ತಿರುವೆಂಗಟಂ ಅವರನ್ನು ಬಂಧಿಸಲು ಯತ್ನಿಸಿದ್ದಾರೆ. ಆಗ ತಿರುವೆಂಗಟಂ ತನ್ನ ಬಳಿಯಿದ್ದ ನಾಡ ಪಿಸ್ತೂಲ್ ನಿಂದ ಪೊಲೀಸರತ್ತ ಗುಂಡು ಹಾರಿಸಿದ್ದ ಎನ್ನಲಾಗಿದೆ. ಆಗ ಆತ್ಮರಕ್ಷಣೆಗಾಗಿ ಇನ್ಸ್​ಪೆಕ್ಟರ್​ ಮುಹಮ್ಮದ್ ಬುಖಾರಿ ತಿರುವೆಂಗಟಂ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಆರೋಪಿಯ ಬಲ ಭಾಗದ ಹೊಟ್ಟೆ ಮತ್ತು ಎಡ ಭಾಗದ ಎದೆಗೆ ಗುಂಡುಗಳು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣ ಪೊಲೀಸರು ಆತನನ್ನು ರಕ್ಷಿಸಿ ಮಾಧವರಂನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೆ ಅಲ್ಲಿ ತಪಾಸಣೆ ನಡೆಸಿದ ವೈದ್ಯರು ತಿರುವೆಂಗಟಂ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನಂತರ ತಿರುವೆಂಗಟಂ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸದ್ಯ ಅಲ್ಲಿ ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ತಿರುವೆಂಗಟಂ

ಅಲ್ಲದೆ, ತಿರುವೆಂಗಟಂ ಅವರ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪೊಲೀಸರು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಆರ್ಮ್‌ಸ್ಟ್ರಾಂಗ್ ಆಪ್ತ ಬಾಮ್ ಸರವಣನ್ ಸಹೋದರ ತೆನ್ನರಸು ಹತ್ಯೆ ಪ್ರಕರಣದ ಮೊದಲ ಆರೋಪಿಯಾಗಿದ್ದಾನೆ. ಈತನ ವಿರುದ್ಧ 2014ರಲ್ಲಿ ಕುಂಡ್ರತ್ತೂರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆರ್ಮ್‌ಸ್ಟ್ರಾಂಗ್ ಘಟನೆಯಲ್ಲಿ ನೇರವಾಗಿ ಚಾಕುವಿನಿಂದ ಇರಿದ ಅಪರಾಧಿಯೂ ಇವನೇ ಆಗಿದ್ದಾನೆ. ಸದ್ಯ ಈತನ ವಿರುದ್ಧ ಅಪಹರಣ, ಕೊಲೆ ಯತ್ನ ಪ್ರಕರಣಗಳು ಬಾಕಿ ಇವೆ.