ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
2024 » Page 6 of 61 » Dynamic Leader
October 23, 2024
Home 2024 (Page 6)
ದೇಶ ರಾಜಕೀಯ

ಒಂದು ದೇಶ ಒಂದು ಚುನಾವಣೆ ಅಪ್ರಾಯೋಗಿಕ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಂದು ದೇಶ ಒಂದು ಚುನಾವಣೆ ಯೋಜನೆಗೆ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ, ಒಂದು ದೇಶ ಒಂದು ಚುನಾವಣೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ಕಾಂಗ್ರೆಸ್ ಖಂಡಿಸಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, “ಒಂದು ದೇಶ ಒಂದು ಚುನಾವಣೆ ಯೋಜನೆಯನ್ನು ನಾವು ವಿರುಧಿಸುತ್ತೇವೆ. ಅಪ್ರಾಯೋಗಿಕವಾದದ್ದು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಂದು ದೇಶ ಒಂದು ಚುನಾವಣೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಅಗತ್ಯಕ್ಕೆ ತಕ್ಕಂತೆ ಚುನಾವಣೆ ನಡೆಯಬೇಕು” ಎಂದು ಹೇಳಿದರು.

ರಾಜ್ಯ

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಹಾವಳಿ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಇಲಾಖೆಗಳ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಿದರು.

ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ಡ್ರಗ್ಸ್ ಜಾಲದ ಬೇರುಗಳನ್ನೇ ಕತ್ತರಿಸಲು ತೀರ್ಮಾನ ಮಾಡಿದ್ದೇವೆ. ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ, ಇದಕ್ಕಾಗಿ ಇನ್ನಷ್ಟು ಕಠಿಣ, ನಿರ್ದಾಕ್ಷಿಣ್ಯವಾದ ಕ್ರಮಗಳನ್ನು ಕೈಗೊಳ್ಳಲು ಇಂದು ನಿರ್ಧರಿಸಲಾಗಿದೆ.

ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಮೇಲಿಂದ ಮೇಲೆ ಸಭೆಗಳನ್ನು ನಡೆಸಿ, ಅಗತ್ಯ ಕಾರ್ಯತಂತ್ರ ರೂಪಿಸಲು ಸೂಚನೆ ನೀಡಲಾಗಿದೆ. ಟಾಸ್ಕ್ ಫೋರ್ಸ್ ನಲ್ಲಿ ಆರೋಗ್ಯ ಸಚಿವರು, ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇರುತ್ತಾರೆ.

ಠಾಣಾಧಿಕಾರಿಗಳಿಗೆ ಗೊತ್ತಿಲ್ಲದೆ ಡ್ರಗ್ಸ್ ದಂಧೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಠಾಣಾಧಿಕಾರಿ ಡಿವೈಎಸ್‌ಪಿ, ಎಸಿಪಿ ಮತ್ತು ಎಸ್.ಪಿ ಗಳನ್ನು ಹೊಣೆ ಮಾಡಲು ತೀರ್ಮಾನಿಸಿದ್ದೇವೆ. ಕರ್ತವ್ಯಲೋಪವಾದಲ್ಲಿ ಇವರ ವಿರುದ್ಧ ಕ್ರಮ ಖಚಿತ.

ಪೆಡ್ಲರ್ ಗಳಿಗೆ ಜೀವಾವಧಿ ಶಿಕ್ಷೆಯವರೆಗೂ ಕಠಿಣ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿಗೆ ಕ್ರಮ ವಹಿಸಲಾಗುವುದು. ಈಗ ಜಾರಿ ಇರುವ ಕಾನೂನನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಮೊದಲು ಪ್ರಯತ್ನ ಮಾಡುತ್ತೇವೆ. ಇದರ ಬಳಿಕವೂ ಅಗತ್ಯಬಿದ್ದರೆ ಹೊಸ ಕಾನೂನು ಮಾಡುತ್ತೇವೆ.

ಎನ್.ಸಿ.ಸಿ, ಎನ್.ಜಿ.ಒ ಗಳನ್ನು ಬಲಗೊಳಿಸುವುದನ್ನು ಗುರಿಯಾಗಿಸಿಕೊಂಡಿದ್ದೇವೆ. ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಲು, ಸಮರ್ಪಕಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ.

ಡ್ರಗ್ಸ್ ಹಾವಳಿ ತೊಡೆದು ಹಾಕಲು ಕ್ಷಿಪ್ರ ಮತ್ತು ತೀಕ್ಷ್ಣ ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿ, ಯುವ ಜನರ ಮೇಲೆ, ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ತಡೆಯಲು ಕ್ರಮ ವಹಿಸಲಾಗುವುದು.

ಡ್ರಗ್ಸ್ ಸೇವಿಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳಿಗೆ ಬ್ರೇಕ್ ಹಾಕುತ್ತೇವೆ. ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ಕೊಡುವ ಜೊತೆಗೆ ಅವರನ್ನೇ ಹೊಣೆ ಮಾಡಿ ಕ್ರಮ ಕೂಡ ತೆಗೆದುಕೊಳ್ಳುತ್ತೇವೆ.

ಗೃಹ ಇಲಾಖೆ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ, ಸಮಾಜ‌ ಕಲ್ಯಾಣ ಇಲಾಖೆ ಸೇರಿ ಹಲವು ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿ ಹಲವು ಕ್ಷಿಪ್ರ ತೀರ್ಮಾನಗಳನ್ನು ಕೈಗೊಂಡಿದ್ದೇವೆ.

ವಿದ್ಯಾರ್ಥಿ-ಯುವ ಜನರ, ಪೋಷಕರ ಸಹಭಾಗಿತ್ವದಲ್ಲಿ ಮಾಹಿತಿ ಸಂಗ್ರಹಿಸಿ ಡ್ರಗ್ಸ್ ಹಾವಳಿಗೆ ಬ್ರೇಕ್ ಹಾಕುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದೇವೆ. ಈಗಾಗಲೇ ಇರುವ ರಾಜ್ಯ ಮಟ್ಟದ ಸಮಿತಿಯಿಂದ ಮಾಹಿತಿ, ಅಭಿಪ್ರಾಯ ಸಂಗ್ರಹಿಸಿದ್ದೇವೆ.

ಬೆಂಗಳೂರು EAST ವಿಭಾಗದಲ್ಲಿ ಡ್ರಗ್ಸ್ ಹಾವಳಿ ತೀವ್ರವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದಕ್ಕೆ ಬಲಿ‌ ಹಾಕಲು ನಿರ್ಣಯ ಮಾಡಿದ್ದೇವೆ. ಒರಿಸ್ಸಾ, ಆಂಧ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಂದ ಮಾದಕ ವಸ್ತು ರಾಜ್ಯಕ್ಕೆ ಪೂರೈಕೆ ಆಗುತ್ತಿದೆ. ಇದನ್ನು ತಡೆಯಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದೇವೆ.

ಜಾಗೃತಿ ಮತ್ತು ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರವಾಗಿ ನಡೆಸಲು ಸ್ಪಷ್ಟ ಸೂಚನೆ ನೀಡಲಾಗಿದೆ” ಎಂದು ಹೇಳಿದರು.

ಸಿನಿಮಾ

ನವದೆಹಲಿ: ವಿವಾದಾತ್ಮಕ ಚಿತ್ರ ‘ಎಮರ್ಜೆನ್ಸಿ’ಗೆ ಸಂಬಂಧಿಸಿದಂತೆ ನಟಿ ಹಾಗೂ ಸಂಸದೆ ಕಂಗನಾ ರಣಾವತ್‌ಗೆ ಚಂಡೀಗಢ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಭಾರೀ ಕೋಲಾಹಲ ಉಂಟಾಗಿತ್ತು. ಆ ಇತಿಹಾಸವನ್ನು ಕೇಂದ್ರೀಕರಿಸಿ ಖ್ಯಾತ ನಟಿ ಕಂಗನಾ ರಣಾವತ್ ಎಮರ್ಜೆನ್ಸಿ (Emergency) ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವನ್ನು ಸೆಪ್ಟೆಂಬರ್ 6 ರಂದು ಘೋಷಿಸಲಾಗಿತ್ತು. ಆದರೆ, ಚಿತ್ರದಲ್ಲಿ ಸಿಖ್ ಸಮುದಾಯವನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂಬ ವಿವಾದದ ನಡುವೆ ಚಿತ್ರದ ಬಿಡುಗಡೆ ವಿಳಂಬವಾಗಿದೆ.

ಈ ಹಿನ್ನೆಲೆಯಲ್ಲಿ, ಸಿನಿಮಾ ಕಲಾವಿದರ ಸಂಘದ ಮಾಜಿ ಅಧ್ಯಕ್ಷ, ವಕೀಲ ರವೀಂದರ್ ಸಿಂಗ್ ಬಸ್ಸಿ (Ravinder Singh Bassi) ಚಿತ್ರದಲ್ಲಿ ಸಿಖ್ಖರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಲಾಗಿದೆ ಎಂದು ನ್ಯಾಯಲಯಕ್ಕೆ ಅರ್ಜಿ ಹಾಕಿದರು. ಚಿತ್ರದಲ್ಲಿ ಸಿಖ್ ಸಮುದಾಯದ ವಿರುದ್ಧ ಹಲವಾರು ಸುಳ್ಳು ಆರೋಪಗಳಿವೆ ಎಂದು ಆರೋಪಿಸಿ ರಣಾವತ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ವಕೀಲರು ಕೇಳಿಕೊಂಡರು. ಬಳಿಕ ಚಂಡೀಗಢ ನ್ಯಾಯಾಲಯವು ಕಂಗನಾ ರಣಾವತ್‌ಗೆ ನೋಟಿಸ್‌ ಜಾರಿ ಮಾಡಿದೆ. ನ್ಯಾಯಾಲಯವು ಡಿಸೆಂಬರ್ 5 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.

ಏತನ್ಮಧ್ಯೆ, ‘ಇಂದು ಸೆನ್ಸಾರ್ ಮಂಡಳಿ ಅನಗತ್ಯ ವ್ಯವಸ್ಥೆಯಾಗಿದೆ. ಈ ಚಿತ್ರ ಥಿಯೇಟರ್‌ಗೆ ಬರಲು ನನ್ನ ವೈಯಕ್ತಿಕ ಸಂಪತ್ತನ್ನು ಪಣಕ್ಕಿಟ್ಟಿದ್ದೇನೆ. ಈಗ ಬಿಡುಗಡೆಯಾಗದ ಕಾರಣ ಆಸ್ತಿ ಮಾರಾಟ ಮಾಡಬೇಕಾಗಿದೆ’ ಎಂದು ಕಂಗನಾ ರಣಾವತ್‌ (Kangana Ranaut) ವಿಷಾದ ವ್ಯಕ್ತಪಡಿಸಿದ್ದಾರೆ.

ವಿದೇಶ

ವಿಶ್ವದ 27 ದೇಶಗಳಲ್ಲಿ ಹೊಸ ರೀತಿಯ ಕೊರೊನಾ ವೈರಸ್ ಹರಡಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.

ಕರೋನಾ ಪರಿಣಾಮ:
ಕಳೆದ 2019ರಲ್ಲಿ ಕೊರೊನಾ ವೈರಸ್ ವಿಶ್ವದ ದೇಶಗಳನ್ನು ಧ್ವಂಸಗೊಳಿಸಿತ್ತು. ಕೊರೊನಾ ವೈರಸ್‌ಗೆ ಬಲಿಯಾದವರ ಸಂಖ್ಯೆ ಒಂದು ಕೋಟಿ ದಾಟಿದೆ. ಕೊರೊನಾ ಇನ್ನೂ ಕೆಲವು ದೇಶಗಳನ್ನು ಬಾಧಿಸುತ್ತಿದೆ.

ಈ ಹಿನ್ನೆಲೆಯಲ್ಲಿ, ಮುಂದಿನ ಆಘಾತವಾಗಿ ಎಕ್ಸ್ಇಸಿ ರೂಪಾಂತರ (XEC Variant) ಎಂಬ ಹೊಸ ರೀತಿಯ ಕೊರೊನಾ ವೈರಸ್ ಪ್ರಪಂಚದ ದೇಶಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಬಹುತೇಕ ಬ್ರಿಟನ್, ಜರ್ಮನಿ, ಡೆನ್ಮಾರ್ಕ್, ಅಮೆರಿಕ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ 27 ದೇಶಗಳಲ್ಲಿ ಈ ಕೊರೊನಾ ಹರಡಿದೆ ಎಂದು ದೃಢಪಡಿಸಲಾಗಿದೆ. ಇದು ಪೋಲೆಂಡ್, ನಾರ್ವೆ, ಚೀನಾ, ಉಕ್ರೇನ್ ಮತ್ತು ಪೋರ್ಚುಗಲ್‌ನಲ್ಲಿಯೂ ಹರಡಿದೆ.

ಹೆಚ್ಚು ಪರಿಣಾಮ ಬೀರುವ ಈ ಹೊಸ ತಳಿಯ ಬಗ್ಗೆ ಬ್ರಿಟನ್‌ನ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಈ ತಳಿಯನ್ನು ಮೊದಲು ಜರ್ಮನಿಯಲ್ಲೇ ಕಂಡುಹಿಡಿಯಲಾಯಿತು. ಪ್ರಸ್ತುತ 3 ಖಂಡಗಳಲ್ಲಿ 27 ದೇಶಗಳಲ್ಲಿ ಹರಡಿದೆ. ಇನ್ನು ವಿಶ್ವದ ಇತರ ಭಾಗಗಳಿಗೂ ಹರಡುವ ಸಾಧ್ಯತೆ ಇದ್ದು, ಹೊಸ ಅಲೆ ಎಬ್ಬಿಸುವ ಸಾಧ್ಯತೆ ಇದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

XEC ಕೊರೊನಾ ತಳಿ ಮಾನವ ದೇಹಕ್ಕೆ ತಗುಲಿದರೆ ಅದರ ಲಕ್ಷಣಗಳು ಹೇಗಿರುತ್ತವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇತರ ರೀತಿಯ ಕೊರೊನಾ ಸೋಂಕಿನಲ್ಲಿ ಕಂಡುಬಂದ ಜ್ವರ, ಗಂಟಲು ನೋವು, ನಿರಂತರ ಕೆಮ್ಮು, ವಾಸನೆಯ ಅರಿವಿನ ನಷ್ಟ ಮತ್ತು ದೇಹದ ನೋವು ಮುಂತಾದವುಗಳು ಕಾಣುತ್ತವೆ. ಹೊಸ ರೀತಿಯ ಕೊರೊನಾ ತಳಿಯ ಸ್ವರೂಪ ಮತ್ತು ಚಟುವಟಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಿದ್ದಾರೆ.

ವಿದೇಶ

ಡಿ.ಸಿ.ಪ್ರಕಾಶ್

ಲೆಬನಾನ್‌ನಲ್ಲಿ ಪೇಜರ್‌ಗಳ ಸ್ಫೋಟದ ಬಗ್ಗೆ ವಿವಿಧ ಹೊಸ ಮಾಹಿತಿಗಳು ಹೊರಬೀಳುತ್ತಿವೆ. ಲೆಬನಾನ್‌ನಿಂದ ಇಸ್ರೇಲ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಹಿಜ್ಬುಲ್ಲಾ ಉಗ್ರಗಾಮಿ ಗುಂಪು ತಮ್ಮ ಸಂವಹನಕ್ಕಾಗಿ ಪೇಜರ್‌ಗಳನ್ನು ಪೋರ್ಟಬಲ್ ಸಾಧನವಾಗಿ ಬಳಸುತ್ತಿದೆ. ಈ ಎಲ್ಲಾ ಸಾಧನಗಳು ನಿನ್ನೆ ರಾತ್ರಿ ಒಂದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿವೆ. ಇದರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. 2,800 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಹಿಜ್ಬುಲ್ಲಾ ಸಂಘಟನೆಗೆ ಬಂದ ಪೇಜರ್‌ಗಳನ್ನು ಮುಂಚಿತವಾಗಿಯೇ ತಡೆಗಟ್ಟಿ, ಪಾರ್ಸೆಲ್‌ಗಳನ್ನು ಇಸ್ರೇಲಿ ಗುಪ್ತಚರ ಇಲಾಖೆ ಪಡೆದುಕೊಂಡಿದ್ದು, ನಂತರ ಪೇಜರ್‌ಗಳ ಒಳಗೆ ಸ್ಫೋಟಕಗಳನ್ನು ಇರಿಸಿ, ಸಂದೇಶವನ್ನು ಸ್ವೀಕರಿಸಿದಾಗ ಅವು ಸ್ಫೋಟಗೊಳ್ಳುವ ಹಾಗೆ ಮಾಡಲಾಗಿದೆ. ಇದೆಲ್ಲವೂ ಐದು ತಿಂಗಳ ಹಿಂದೆಯೆ ನಡೆದಿತ್ತು ಎಂದು ಹೇಳಲಾಗುತ್ತಿದೆ.

ನಂತರ ಆ ಪೇಜರ್ ಪಾರ್ಸೆಲ್‌ಗಳನ್ನು ಹಿಜ್ಬುಲ್ಲಾ ಸಂಘಟನೆ ಕೈ ಸೇರುವ ಹಾಗೆ ಮಾಡಿದ್ದು, ಅವುಗಳಲ್ಲಿ ಸ್ಫೋಟಕಗಳಿವೆ ಎಂದು ತಿಳಿಯದೆ ಅದನ್ನು ಅವರು ಬಳಸುತ್ತಿದ್ದರು. ಇಸ್ರೇಲಿ ಗುಪ್ತಚರ ಸಂಸ್ಥೆಗಳು ನಿಗದಿತ ಸಮಯದಲ್ಲಿ ಸಂದೇಶಗಳನ್ನು ಕಳುಹಿಸಿ ನಿನ್ನೆ ಸ್ಫೋಟಿಸಿದ್ದಾರೆ. ಈ ರೀತಿ ಪೇಜರ್‌ಗಳ ಮೂಲಕ ದಾಳಿ ನಡೆಸುತ್ತಿರುವುದು ವಿಶ್ವದಲ್ಲಿ ಇದೇ ಮೊದಲಬಾರಿ ಆಗಿರುವುದರಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ.

ಪೇಜರ್ ಎಂದರೇನು?
ಪೇಜರ್‌ಗಳು 20ನೇ ಶತಮಾನದ ಕೊನೆಯಲ್ಲಿ ಅಭಿವೃದ್ಧಿಪಡಿಸಲಾದ ಜನಪ್ರಿಯ ಸಂವಹನ ಸಾಧನವಾಗಿದೆ. ಇದು ನಿಸ್ತಂತು ಸಂವಹನ ಸಾಧನವಾಗಿದೆ. ಏಕಮುಖ ಸಂವಹನಕ್ಕೆ ಅನುಕೂಲಕರವಾದದ್ದು. ಸಂದೇಶವನ್ನು ಸ್ವೀಕರಿಸುವವರು ಪ್ರತ್ಯುತ್ತರಿಸಲು ಸಾಧ್ಯವಿಲ್ಲ. ಭಾರತದಲ್ಲಿಯೂ 20ನೇ ಶತಮಾನದ ಕೊನೆಯ ದಶಕದಲ್ಲಿ ಚಲಾವಣೆಯಲ್ಲಿತ್ತು. ಕಾಲಾನಂತರದಲ್ಲಿ ಮಾರುಕಟ್ಟೆಯಿಂದ ಕಣ್ಮರೆಯಾಯಿತು.

ಮೊಬೈಲ್ ಫೋನ್‌ಗಳು, ಪಠ್ಯ ಸಂದೇಶ ಕಳುಹಿಸುವಿಕೆ ಇತ್ಯಾದಿಗಳ ಪ್ರಗತಿಯೊಂದಿಗೆ ಪೇಜರ್‌ಗಳ ಬಳಕೆ ನಿಂತುಹೋಯಿತು.

ಪೇಜರ್‌ಗಳು ಹೇಗೆ ಕೆಲಸ ಮಾಡುತ್ತವೆ?
ಅತ್ಯಾಧುನಿಕ ಸಾಧನಗಳ ಆಗಮನದ ಹೊರತಾಗಿಯೂ, ಕೆಲವು ಪ್ರಮುಖ ಪ್ರದೇಶಗಳಲ್ಲಿ ಪೇಜರ್ಗಳು ಇನ್ನೂ ಬಳಕೆಯಲ್ಲಿವೆ. ಇದಕ್ಕೆ ಅದರಲ್ಲಿರುವ ವಿಶಿಷ್ಟ ಅನುಕೂಲತೆಗಳೆ ಕಾರಣ. ಅದರ ಬಳಕೆಯನ್ನು ವಿಶ್ವಾಸಾರ್ಹವೆಂದು ಪರಿಗಣಿಸಲಾಗುತ್ತದೆ.

ಪೇಜರ್‌ಗಳಲ್ಲಿನ ಬ್ಯಾಟರಿಗಳು ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿವೆ. ಹೀಗಾಗಿ, ಸಿಗ್ನಲ್‌ಗಳು ಲಭ್ಯವಿಲ್ಲದ ಪ್ರದೇಶಗಳಲ್ಲಿ, ಆಸ್ಪತ್ರೆಗಳ ಒಳಗೆ ಇದನ್ನು ಬಳಸಲಾಗುತ್ತದೆ.

ಒಮ್ಮೆ ಚಾರ್ಜ್ ಮಾಡಿದರೆ ಒಂದು ವಾರದವರೆಗೆ ಬಳಸಬಹುದು. ಪೇಜರ್ಗಳ ಮೂಲಕ ಸಂವಹನ ನಡೆಸುವುದು ಹೆಚ್ಚು ಸುರಕ್ಷಿತ ಮತ್ತು ಖಾಸಗಿ ಎಂದು ಪರಿಗಣಿಸಲಾಗಿದೆ.

ಉದಾಹರಣೆಗೆ, ಆರೋಗ್ಯ ರಕ್ಷಣೆಯಲ್ಲಿ, ವೈದ್ಯಕೀಯ ಉಪಕರಣಗಳೊಂದಿಗೆ ಮಧ್ಯಪ್ರವೇಶಿಸುವ ಅಪಾಯದಿಂದಾಗಿ ಸೆಲ್ ಫೋನ್‌ಗಳನ್ನು ಬಳಸಲಾಗದ ಪರಿಸರದಲ್ಲಿ ತ್ವರಿತವಾಗಿ ಸಂವಹನ ನಡೆಸಬೇಕಾದ ವೈದ್ಯರು ಮತ್ತು ದಾದಿಯರಿಗೆ ಪೇಜರ್‌ಗಳು ಅತ್ಯಗತ್ಯವಾಗಿದೆ.

ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳು ಸೇರಿದಂತೆ ತುರ್ತು ಸೇವೆಗಳು ತ್ವರಿತ ಎಚ್ಚರಿಕೆಗಳಿಗಾಗಿ ಪೇಜರ್‌ಗಳನ್ನು ಅವಲಂಬಿಸಿವೆ.

ಲೇಖನ

ಪ್ರವಚನ: ಪೆರಿಯಾರ್
ಕನ್ನಡಕ್ಕೆ: ಡಿ.ಸಿ.ಪ್ರಕಾಶ್

‘ದಲಿತರ ಪ್ರಗತಿಗಾಗಿ ದುಡಿಯುತ್ತಿದ್ದೇವೆ’ ಎಂದು ಅಂದುಕೊಂಡು, ‘ಅವರಿಗಾಗಿ ದುಡಿಯುತ್ತಿದ್ದೇವೆ’ ಎಂದು ಹೇಳಿಕೊಂಡು ತಿರುಗಾಡುವುದೆಲ್ಲವೂ ಅವರನ್ನು ವಂಚಿಸಲಿಕ್ಕಾಗಿಯೇ ಎಂಬುದು ನನ್ನ ಅಭಿಪ್ರಾಯ. ಅಂದರೆ, ಯುರೋಪಿಯನ್ನರು ಭಾರತದ ಒಳಿತಿಗಾಗಿಯೇ ಭಾರತವನ್ನು ಆಳುತ್ತಿದ್ದಾರೆ ಎಂಬಂತಿದೆ. ಇದರಲ್ಲಿ ಬೇರೇನು ವಿಶೇಷತೆಯಿಲ್ಲ.

ನಮ್ಮ ದೇಶದಲ್ಲಿ ‘ದಲಿತ’ ಎಂಬ ಜಾತಿಯ ಹೆಸರು ಇರುವುದರಿಂದಲೇ ‘ಶೂದ್ರ’ ಎಂಬ ಜಾತಿಯ ಹಸರೂ ನಮ್ಮಲ್ಲಿದೆ. ‘ದಲಿತ’ ಎಂಬ ಜಾತಿ ಹೆಸರಿಗಿಂತ ‘ಶೂದ್ರ’ ಎಂಬ ಜಾತಿಯ ಹೆಸರೇ ಅವಹೇಳನಕಾರಿಯಾದದ್ದು. ಹಿಂದೂ ಶಾಸ್ತ್ರದ ಪ್ರಕಾರ, ದಲಿತ ಮಹಿಳೆಯರಲ್ಲಿ ಪತಿವ್ರತೆಯರೂ, ಪರಿಪೂರ್ಣ ತಾಯಿ, ತಂದೆಗೆ ಜನಿಸಿದವರೂ ಇರಬಹುದು. ಶೂದ್ರರಲ್ಲಿ ಹಾಗಿರಲು ಸಾಧ್ಯವಿಲ್ಲ. ಏಕೆಂದರೆ ‘ಶೂದ್ರಳು’ ಎಂದರೆ ದಾಸಿ, ವೇಶ್ಯೆಯ ಮಗಳು ಎಂಬುದು ಇದರರ್ಥ. ‘ಶೂದ್ರ’ ಎಂದರೆ ದಾಸಿಯ ಮಗ, ವೇಶ್ಯೆಯ ಮಗ ಎಂದರ್ಥ. ಇದನ್ನು ಒಪ್ಪದವನು ಹಿಂದೂ ಆಗಲಾರ ಎಂಬುದು ಶಾಸ್ತ್ರದ ನಿಯಮ.

ಆದ್ದರಿಂದ, ‘ಶೂದ್ರ’ ಎಂದು ಕರೆಯಲ್ಪಡುವ ನನ್ನಂತವರು, ‘ದಲಿತ’ ಎಂದು ಕರೆಸಿಕೊಳ್ಳುವವರ ಪ್ರಗತಿಗಾಗಿ ದುಡಿಯುತ್ತಿದ್ದೇನೆ ಎಂದು ಹೇಳಿಕೊಳ್ಳುವುದೆಲ್ಲವೂ ನಮ್ಮನ್ನು ‘ಶೂದ್ರ’ ಎಂದು ಯಾರೂ ಭಾವಿಸಬಾರದು ಎಂಬುದಕ್ಕಾಗಿಯೇ ಹೊರತು ಇದರಲ್ಲಿ ಬೇರೇನೂ ಇಲ್ಲ. ಹಾಗಾಗಿ, ನಾನು ನನಗಾಗಿ ಶ್ರಮಿಸುತ್ತಿರುವುದು ನಿಮ್ಮ ದೃಷ್ಟಿಯಲ್ಲಿ ನಿಮಗಾಗಿ ಶ್ರಮಿಸುತ್ತಿರುವುದಾಗಿ ತೋರುತ್ತದೆ. ನಿನ್ನನ್ನು ಕೀಳಾಗಿ ಕಾಣುವ ಮಹಿಳೆಯರು ಮತ್ತು ಪುರುಷರು, ತಮ್ಮನ್ನು ಇತರರು ನಿಮಗಿಂತ ಕೀಳಾಗಿ ಕಾಣುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇತರರನ್ನು ಕೀಳಾಗಿ ಭಾವಿಸುವ ಅಜ್ಞಾನದಿಂದಾಗಿ, ತಮ್ಮನ್ನು ಮತ್ತವರು ಕೀಳಾಗಿ ಭಾವಿಸುವುದು ತಮಗೆ ಹೀನವಾಗಿ ಕಾಣುವುದಿಲ್ಲ.

ಈ ಹಿನ್ನೆಲೆಯಲ್ಲಿ, ನಿಮ್ಮಲ್ಲಿನ ತಪ್ಪುಗಳನ್ನು ಪತ್ತೆಹಚ್ಚಿ, “ನಿಮ್ಮ ದೇಹದಲ್ಲಿ ದುರ್ವಾಸನೆ ಬೀಸುತ್ತಿದೆ; ನೀವು ಸ್ನಾನ ಮಾಡುವುದಿಲ್ಲ; ಬಟ್ಟೆ ಒಗೆಯುವುದಿಲ್ಲ; ನೀವು ಗೋಮಾಂಸ ತಿನ್ನುತ್ತೀರಿ; ನೀವು ಮದ್ಯಪಾನ ಮಾಡುತ್ತೀರಿ; ಇದನ್ನು ಬಿಟ್ಟುಬಿಡಿ” ಎಂದು ಉಪದೇಶ ಮಾಡುತ್ತಾರೆ.

ನೀವು ಬಟ್ಟೆ ಒಗೆಯದೆ, ಸ್ನಾನ ಮಾಡದೆ ಇರುವುದಕ್ಕೆ ಯಾರು ಹೊಣೆ ಎಂದು ಅವರು ಭಾವಿಸುತ್ತಿಲ್ಲ. ನಿಮಗೆ ಕುಡಿಯಲು ನೀರೇ ಇಲ್ಲದಿರುವಾಗ ಸ್ನಾನ ಮಾಡುವುದಾದರೂ ಹೇಗೆ! ಕೊಳಕು ಮತ್ತು ವಾಸನೆ ನಿಮ್ಮ ಜೊತೆಯಲ್ಲಿ ಹುಟ್ಟಿದ್ದೇ ಎಂದು ನಾನು ನಿಮ್ಮನ್ನು ಕೇಳುತ್ತೇನೆ.

ಸ್ನಾನ ಮಾಡಲು, ಬಟ್ಟೆ ಒಗೆಯಲು, ಹಲ್ಲುಜ್ಜಲು ನೀರು ಕೊಡದೆ, ಮಠಾಧೀಶರುಗಳನ್ನು, ಶಂಕರಾಚಾರ್ಯರನ್ನು ತಂದು ಮನೆಯಲ್ಲಿ ಕೂಡಿಹಾಕಿದರೆ ಅವರ ಬಟ್ಟೆ ಶುಚಿಯಾಗಿರುತ್ತದೆಯೇ! ಅವರ ಬಟ್ಟೆ ಸ್ವಚ್ಛವಾಗಿರುತ್ತದೆಯೇ? ಅವರ ದೇಹ ಮತ್ತು ಬಾಯಿ ದುರ್ವಾಸನೆ ಹೊಡೆಯುವುದಿಲ್ಲವೇ? ಯೋಚಿಸಿ ನೋಡಿ. ನೀವು ಒಬ್ಬರನ್ನು ಹಸಿವಿಗೆ ದೂಡಿ, ಅವನು ಸತ್ತ ಮೇಲೆ, “ಅವನು ಹಸಿವಿನಿಂದ ಸತ್ತಿದ್ದಾನೆ ಪಾಪಿ” ಎಂದು ಹೇಳಿದರೆ, ಆ ಪಾಪಿ ಯಾರೆಂದು ಯೋಚಿಸಿ ನೋಡಿ!

ಅಲ್ಲದೆ, ಗೋಮಾಂಸ ತಿಂದು ಮದ್ಯಪಾನ ಮಾಡುತ್ತಿರುವುದೇ ನೀವು ದಲಿತರಾಗಿರಲು ಕಾರಣ ಎಂದು ಹೇಳುವುದು ಸಮಂಜಸವಲ್ಲ. ಗೋಮಾಂಸ ತಿಂದು ಮದ್ಯ ಸೇವಿಸುವವರೆ ಇಂದು ಜಗತ್ತನ್ನು ಆಳುತ್ತಿದ್ದಾರೆ. ಅಲ್ಲದೆ, ನೀವು ಗೋಮಾಂಸ ತಿನ್ನುತ್ತಿರುವುದು ನಿಮ್ಮ ತಪ್ಪಲ್ಲ. ನಿಮಗೆ, ಇತರರಂತೆ ಸರಿಯಾಗಿ ಸಂಪಾದಿಸುವ, ಉದಾರವಾಗಿ ತಿನ್ನುವ, ಬೀದಿಯಲ್ಲಿ ನಡೆಯುವ, ಸ್ವತಂತ್ರವಾಗಿ ಎಲ್ಲಿಯಾದರೂ ಹೋಗಿ ದುಡಿದು ಸಂಪಾದಿಸುವ ಅವಕಾಶವನ್ನು ನೀಡದಿರುವುದರಿಂದ, ಸ್ವಲ್ಪ ಹಣಕ್ಕೆ ಹೆಚ್ಚು ಆಹಾರವಾಗಬಹುದಾದ ಗೋಮಾಂಸವನ್ನು ತಿನ್ನಬೇಕಾಯಿತು.

ಗೋಮಾಂಸವನ್ನು ಅನುಮತಿಸುವ ಧರ್ಮಗಳಿಗೆ ಸೇರಿದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಲ್ಲಿಯೂ ಕೆಲವರು ಸ್ವಲ್ಪ ಧಾರಾಳವಾಗಿ ಹಣ ಸಂಪಾದಿಸಲು ತೊಡಗಿದ ಕೂಡಲೇ “ನಮ್ಮಲ್ಲಿ ಗೋಮಾಂಸ ತಿನ್ನುವ ಪದ್ಧತಿ ಇಲ್ಲ” ಎಂದು ಹೇಳುತ್ತಾರೆ. ಆದ್ದರಿಂದ, ನಮ್ಮ ದೇಶದಲ್ಲಿ ದನದ ಮಾಂಸ ತಿನ್ನಲು ಬಡತನವೇ ಮುಖ್ಯ ಕಾರಣವಾಗಿದೆ. ಅಲ್ಲದೆ, ಮೇಕೆ, ಕೋಳಿ, ಮೀನು ಮತ್ತು ಹಂದಿ ಮಾಂಸಕ್ಕಿಂತ ದನದ ಮಾಂಸ ತಿನ್ನುವುದು ಅಷ್ಟುದೊಡ್ಡ ಪಾಪವಾಗಿದೆಯೇ?

ಕೋಳಿ, ಮೀನು ಮತ್ತು ಹಂದಿಗಳು ಲಾಲಾರಸ, ಹುಳುಗಳು, ಕೊಳಕು ಮತ್ತು ಮಲವನ್ನು ತಿನ್ನುತ್ತವೆ. ಹಾಗಿರುವಾಗ, ಇದನ್ನು ತಿನ್ನುವ ಉತ್ತರದ ಬ್ರಾಹ್ಮಣರಿಂದ ದಕ್ಷಿಣದ ಶೂದ್ರರವರೆಗೂ ಒಳ್ಳೆಯ ಜಾತಿ ಮತ್ತು ಸ್ಪರ್ಶಕ್ಕೆ ಅರ್ಹರಾಗಿರುವಾಗ! ಹುಲ್ಲು, ಹತ್ತಿ, ಹೊಟ್ಟು ತಿನ್ನುವ ಹಸುವಿನ ಮಾಂಸ ತಿಂದ ಮಾತ್ರಕ್ಕೆ ಮನುಷ್ಯ ಹೇಗೆ ಕೀಳಾಗುತ್ತಾನೆ? ಬದಲಾಗಿ, ದನದ ಮಾಂಸ ತಿನ್ನುವವರನ್ನು “ಮುಟ್ಟಬೇಡ; ಬೀದಿಯಲ್ಲಿ ನಡೆಯಬೇಡ; ಹೊಂಡದಲ್ಲಿ ನೀರು ಕುಡಿಯಬೇಡ; ಊರಿನೊಳಗೆ ಇರಬೇಡ” ಎನ್ನುತ್ತಾರ! ಇದು ನಿಜವಾದ ಕಾರಣವೇ ಅಲ್ಲ. ಇದು ಉದ್ದೇಶಪೂರ್ವಕವಾಗಿ, ಬೇಕೆಂದೇ ನಿಮ್ಮನ್ನು ಶೋಷಿಸಲು ಯೋಗ್ಯ ಬೇಜವಾಬ್ದಾರಿಯ ಕಾರಣವಾಗಿದೆ ಎಂಬುದು ನನ್ನ ಅಭಿಪ್ರಾಯ.

ಮದ್ಯಪಾನ ಮತ್ತು ಗೋಮಾಂಸವನ್ನು ತಿರಸ್ಕರಿಸುವುದನ್ನು ನಾನು ವಿರೋಧಿಸುತ್ತಿಲ್ಲ. ಮದ್ಯಪಾನ ಮತ್ತು ಗೋಮಾಂಸವನ್ನು ತ್ಯಜಿಸುವುದರಿಂದ ನಿಮ್ಮ ಜಾತಿ  ಮೇಲೇರುತ್ತದೆ ಎಂದು ಕೆಲವರು ಹೇಳುವ ಅಸಂಬದ್ಧ ಕಾರಣವನ್ನು ನಾನು ಒಪ್ಪಲಾರೆ. ನಿಮ್ಮ ಜಾತಿ ಮೇಲೇರಲು ಮದ್ಯ ಮತ್ತು ಗೋಮಾಂಸವನ್ನು ತ್ಯಜಿಸಿ ಎಂದು ನಾನು ಕೇಳುವುದಿಲ್ಲ. ಅದಕ್ಕಾಗಿ ನೀವು ತ್ಯಜಿಸುವ ಅಗತ್ಯವೂ ಇಲ್ಲ.

ನಮ್ಮ ದೇಶದಲ್ಲಿ, ತೆಂಗಿನಮರ ಮತ್ತು ತಾಳೆ ಮರಗಳಿಂದ ಸಿಗುವ ಸೇಂದಿ, ತಯಾರಿಸುವ ಸಾರಾಯಿ ಮತ್ತು ವಿದೇಶಗಳಿಂದ ಬರುವ ಮದ್ಯಪಾನಗಳು, ಚೆನ್ನೈ ಪ್ರಾಂತ್ಯದ 15.20 ಕೋಟಿ ರೂ.ಗಳ ವಹಿವಾಟಿನ ಎಲ್ಲ ರೀತಿಯ ಮದ್ಯಪಾನಗಳನ್ನು ನೀವೇ ಕುಡಿಯುತ್ತಿದ್ದಿರಾ? ಇದನ್ನು ಯಾರಾದರೂ ನಂಬುತ್ತಾರೆಯೇ? ಯಾರೂ ನಂಬುವುದಿಲ್ಲ. ಆದ್ದರಿಂದ ನೀವು, ಜಾತಿಯ ಉನ್ನತಿಯ ಉದ್ದೇಶದಿಂದ ಇವುಗಳನ್ನು ಬಿಡಲು ಬಯಸಿದರೆ, ಮೊದಲು ಇತರರು ಬಿಡಲಿ.

ಮದ್ಯವು ಮಾನವ ನೈತಿಕತೆಗೆ ವಿರುದ್ಧವಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಮದ್ಯಪಾನ ನಿಷಧಕ್ಕಾಗಿ ನಾನೂ ಒಂದಿಷ್ಟು ಸೇವೆ ಸಲ್ಲಿಸಿದ್ದೇನೆ. ಆದರೆ ಜಾತಿ ಉನ್ನತಿಗಾಗಿ ಎಲ್ಲ ಜಾತಿಯವರು ಸೇವಿಸುವ ಮದ್ಯಕ್ಕೆ ಯಾವುದೇ ನಿಷೇಧವಿರುವುದಿಲ್ಲ. ಆದ್ದರಿಂದ, ಜಾತಿ ಔನ್ನತ್ಯಕ್ಕೆ ಮದ್ಯಪಾನ ನಿಶೇಧ, ಮಾಂಸಾಹಾರ ವರ್ಜನೆ ಅಗತ್ಯ ಎಂದು ಹೇಳುತ್ತಿರುವುದು ಉದ್ದೇಶಪೂರ್ವಕವಾಗಿ ಹೇಳುತ್ತಿರುವ ಸುಳ್ಳು.

ಆದರೂ, ನಿಮ್ಮಲ್ಲಿರುವ ಕೆಲವು ತಪ್ಪುಗಳನ್ನು ಹೇಳದೆ ಇರಲು ಆಗುತ್ತಿಲ್ಲ. ಅಂದರೆ, ನಿಮ್ಮ ಜಾತಿಗೆ ನೀವೇ ಅವಮಾನವನ್ನು ತಂದುಕೊಳ್ಳುತ್ತಿದ್ದೀರಿ. ಅನಗತ್ಯವಾಗಿ ಯಾರನ್ನು ಕಂಡರೂ ‘ಸ್ವಾಮಿ’ ಎಂದು ನಮಸ್ಕರಿಸುತ್ತೀರಿ. ನೀವು ಕೀಳು ಎಂಬ ಭಾವನೆ ನಿಮ್ಮ ರಕ್ತದಲ್ಲಿದೆ. ಅದು ಬದಲಾಗಬೇಕು. ನೀವು ಒಬ್ಬರನ್ನು ಕಂಡಾಗ, ಅವರ ಮತ್ತು ನಿಮ್ಮ ನಡುವಿನ ವ್ಯತ್ಯಾಸವೇನು ಎಂಬುದು ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬೇಕು. ಸ್ವಾಭಿಮಾನದ ಬಗ್ಗೆ ಎಚ್ಚರವಿರದ ಜಾತಿಗಳನ್ನು ಬೆಳೆಸಿದರೂ ಮೇಲೇಳುವುದಿಲ್ಲ. ಅವನಿಗೆ ತಾನೊಬ್ಬ ಮನುಷ್ಯ ಎಂಬ ಭಾವನೆ ಮೊದಲು ಬರಬೇಕು.

ನೀವು ಇನ್ನು ಮುಂದೆ ಯಾರನ್ನೂ ‘ಸ್ವಾಮಿ’ ಎಂದು ಕರೆಯಬಾರದು. ಬೇಕಿದ್ದರೆ ‘ಸರ್’ ಎಂದು ಕರೆಯಿರಿ. ನೀವಾಗಿಯೇ ನುಸುಳಿಕೊಳ್ಳುವುದು, ದೂರವಾಗುವುದು ಮುಂತಾದ ದುರ್ಗುಣಗಳು ನಿಮ್ಮನ್ನು ಬಿಟ್ಟು ದೂರವಾಗಬೇಕು. ಆಗ ಮಾತ್ರ ನಿಮ್ಮನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.

Source: Thoughts of Periyar E.V.R-1
ತಮಿಳುನಾಡಿನ ಶಿವಗಂಗೈ ಜಿಲ್ಲೆ, ಸಿರಾವಯಲ್ ನಲ್ಲಿ ದಿನಾಂಕ: 07.04.1926 ರಂದು ಪೆರಿಯಾರ್ ಮಾಡಿದ ಪ್ರವಚನ: ದಿನಾಂಕ: 25.04.1926 ರಂದು ‘ಕುಡಿ ಅರಸು’ (Republic) ಪತ್ರಿಕೆಯಲ್ಲಿ ಪ್ರಕಟವಾಗಿದೆ.

ದೇಶ

ಛತ್ತಿಸಗಢ,

ಛತ್ತಿಸಗಢದ ಭಿಲಾಯ್ ಉಕ್ಕು ಕಾರ್ಖಾನೆ (Bhilai Steel Plant)ಗೆ ಭೇಟಿ ನೀಡಲು ಬಂದಿದ್ದ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ‘ಭಿಲಾಯ್ ಕನ್ನಡ ಸಂಘ’ದ ಸದಸ್ಯರು ಭೇಟಿಯಾಗಿ ಆತ್ಮೀಯವಾಗಿ ಅಭಿನಂದಿಸಿರುವುದಕ್ಕೆ ಸಚಿವರು ಧನ್ಯವಾದಗಳನ್ನು ತಿಳಿಸಿದ್ದಾರೆ.

“ಅವರ ಕನ್ನಡತನ, ಮಾತೃಭಾಷಾ ಪ್ರೇಮ, ತಾಯ್ನಾಡಿನ ಬಗೆಗಿನ ಅಕ್ಕರೆಯನ್ನು ಕಂಡು ನನ್ನ ಮನಸ್ಸು ತುಂಬಿ ಬಂದಿದೆ. ಅವರೆಲ್ಲರಿಗೂ ನನ್ನ ಅನಂತ ಧನ್ಯವಾದಗಳು” ಎಂದು ಹೇಳಿದ್ದಾರೆ.

ಸಂಘದ ಸದಸ್ಯರಾದ ಶಶಿಭೂಷಣ್, ವೆಂಕಟೇಶ್ ಕಾರಂತ್, ಶ್ರೀಧರ್, ನಾಗೇಂದ್ರ ಧನ, ಅನುರಾಧ ಧನ, ವೆಂಕಟೇಶ್ ಬಾಬು, ನಂದಕುಮಾರ್, ಸುಚಿತ್ರಾ, ರೀಟಾ, ಚಂದ್ರಲತಾ ಮುಂತಾದವರು ಉಪಸ್ಥಿತರಿದ್ದರು ಎಂದು ಸಚಿವರು ತಮ್ಮ ‘ಎಕ್ಸ್’ ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯ

ಕಲಬುರಗಿ: ಕಲಬುರಗಿ ತಾಲ್ಲೂಕಿನ‌ ಕವಲಗಿ (ಕೆ) ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನವರ ಜಯಂತ್ಸೋತ್ಸವವನ್ನು ಉದ್ಘಾಟಿಸಿ, ರಾಯಣ್ಣನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಿಕ ಸ್ವಾತಂತ್ರ್ಯ ಸೇನಾನಿಗೆ ಪುಷ್ಪನಮನ ಸಲ್ಲಿಸಿದರು.

ತಿಂಥಣಿ ಕಾಗಿನೆಲೆ ಪೀಠದ ಜಗದ್ಗುರು ಸಿದ್ದರಾಮಾನಂದಪುರಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ, ಶಾಸಕರಾದ ಎಂ.ವೈ.ಪಾಟೀಲರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ, ಸಚಿವರಾದ ಬೈರತಿ ಸುರೇಶ್, ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಬಿ.ಆರ್.ಪಾಟೀಲ್ ಸೇರಿದಂತೆ ಜಿಲ್ಲೆಯ ಶಾಸಕರು, ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

ರಾಜಕೀಯ

ಕಲಬುರಗಿ: ಕಲ್ಯಾಣ ಕರ್ನಾಟಕದ ಭಾಗವಾದ ಕಲಬುರಗಿಯಲ್ಲಿ ನಾಳೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ಭಾಗದ ಅಭಿವೃದ್ಧಿಗಾಗಿ ಪೂರಕ ಚರ್ಚೆ ಹಾಗೂ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

“ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗಾಗಿ ಆಯವ್ಯಯದಲ್ಲಿ ರೂಪಿಸಲಾಗಿರುವ ಯೋಜನೆಗಳು ಹಾಗೂ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಜನರಿಗೆ ಉದ್ಯೋಗಾವಕಾಶಗಳ ಬಗ್ಗೆ ಹಾಗೂ ಪ್ರತ್ಯೇಕ ಸಚಿವಾಲಯ ರಚನೆ ಬಗ್ಗೆಯೂ ಚರ್ಚಿಸಲಾಗುವುದು. ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ಪರವಾಗಿದೆ” ಎಂದು ಹೇಳಿದರು.

“ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ 371ಜೆ ಕಾನೂನು ತರಲಾಗಿದ್ದು, ಇದಕ್ಕಾಗಿ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರು ಶ್ರಮವಹಿಸಿದ್ದರು. 2013ರಲ್ಲಿ ಈ ಕಾನೂನನ್ನು ಕರ್ನಾಟಕದಲ್ಲಿ ಜಾರಿಗೆ ತರಲು ನಮ್ಮ ಸರ್ಕಾರವೇ ಪ್ರಯತ್ನಿಸಿದ್ದು ಹೊರತು ಬಿಜೆಪಿಯವರಲ್ಲ. ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಕಾನೂನನ್ನು ಜಾರಿಗೆ ತರಲು ತಿರಸ್ಕರಿಸಿತ್ತು” ಎಂದು ಆರೋಪಿಸಿದರು.

“ಬಡವರ ಪರವಾದ ಸರ್ಕಾರ ನಮ್ಮದು. ಆದ್ದರಿಂದ ಈ ಭಾಗದ ಅಭಿವೃದ್ಧಿಗಾಗಿ 5000 ಕೋಟಿ ರೂ.ಗಳನ್ನು ನೀಡಲಾಗಿದೆ” ಎಂದು ಹೇಳಿದರು.

“ನಾಗಮಂಗಲ ಶಾಂತವಾಗಿದೆ. ಗಲಭೆ ಪ್ರಕರಣಕ್ಕೆ ಪೊಲೀಸರ ಕರ್ತವ್ಯ ವೈಫಲ್ಯ ಕಾರಣವೆಂದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ, ಸಂಬಂಧಪಟ್ಟ ಉಪಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇನ್ಸ್‌ಪೆಕ್ಟರನ್ನು ಅಮಾನತ್ತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಹಾನಿಗೊಳಗಾದ ಅಂಗಡಿ ಮುಂಗಟ್ಟು, ವಾಹನಗಳಿಗೆ ಪರಿಹಾರ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು” ಎಂದು ಹೇಳಿದರು.

ದೇಶ ರಾಜಕೀಯ

ಮುಂಬೈ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಲ ದಿನಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ವಾಷಿಂಗ್ಟನ್ ಪ್ರಾಂತ್ಯದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ವೇಳೆ, ನಿರೂಪಕರು ಭಾರತದಲ್ಲಿ ಮೀಸಲಾತಿ ಕುರಿತು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದರು. ಆ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, “ಭಾರತದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರೆತಾಗ ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತದೆ” ಎಂದು ಹೇಳಿದರು.

ಏತನ್ಮಧ್ಯೆ, ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಲು ರಾಹುಲ್ ಗಾಂಧಿ ಬಯಸುತ್ತಿದ್ದಾರೆ ಎಂಬ ತಪ್ಪು ಕಲ್ಪನೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಯಿತು.

ಈ ಹಿನ್ನೆಲೆಯಲ್ಲಿ, ಮೀಸಲಾತಿ ರದ್ದು ಮಾಡುವುದಾಗಿ ಹೇಳಿದ ರಾಹುಲ್ ಗಾಂಧಿಯ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಶಿವಸೇನೆ (ಏಕನಾಥ್ ಶಿಂಧೆ ಕಡೆಯವರು) ಶಾಸಕ ಸಂಜಯ್ ಗಾಯಕ್ವಾಡ್ (Sanjay Gaikwad) ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ, ಶಾಸಕ ಸಂಜಯ ಗಾಯಕ್ವಾಡ್ ಮಾತನಾಡಿ, “ರಾಹುಲ್ ಗಾಂಧಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆ ರದ್ದು ಮಾಡಬೇಕೆಂದು ವಿದೇಶದಲ್ಲಿ ಮಾತನಾಡಿದ್ದಾರೆ. ಇದು ಕಾಂಗ್ರೆಸ್‌ನ ನಿಜವಾದ ಮುಖವನ್ನು ತೋರಿಸುತ್ತದೆ. ಮೀಸಲಾತಿ ರದ್ದು ಮಾಡುತ್ತೇನೆ ಎಂದು ಹೇಳಿರುವ ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸುವವರಿಗೆ 11 ಲಕ್ಷ ರೂಪಾಯಿ ನೀಡುತ್ತೇನೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.