ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
July 2024 » Page 2 of 8 » Dynamic Leader
October 23, 2024
Home 2024 July (Page 2)
ದೇಶ

ನವದೆಹಲಿ: ಕಳೆದ 5 ವರ್ಷಗಳಲ್ಲಿ 633 ಭಾರತೀಯ ವಿದ್ಯಾರ್ಥಿಗಳು ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದ ವಿದೇಶದಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಒಟ್ಟು 41 ದೇಶಗಳಲ್ಲಿ ವಿದ್ಯಾರ್ಥಿಗಳ ಸಾವಿನ ಘಟನೆಗಳು ನಡೆದಿವೆ. ಕೆನಡಾದಲ್ಲಿ ಗರಿಷ್ಠ 172 ಮತ್ತು ಅಮೆರಿಕದಲ್ಲಿ 108 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇದಲ್ಲದೆ, ದಾಳಿಯಲ್ಲಿ 19 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ, ಅದರಲ್ಲಿ 9 ಕೆನಡಾದಲ್ಲಿ ಮತ್ತು 6 ಅಮೆರಿಕದಲ್ಲಿ ಸಾವನ್ನಪ್ಪಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಕೊಡಿಕುನ್ನಿಲ್ ಸುರೇಶ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವಾಲಯ ಈ ಮಾಹಿತಿಯನ್ನು ಒದಗಿಸಿದೆ. ಈ ಕುರಿತು ಲೋಕಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ. “ಅಪಘಾತಗಳು, ವೈದ್ಯಕೀಯ ಚಿಕಿತ್ಸೆ ಮುಂತಾದ ವಿವಿಧ ಕಾರಣಗಳಿಂದ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಸಾವನ್ನಪ್ಪಿದ್ದಾರೆ. ಕೆನಡಾ ಮತ್ತು ಅಮೆರಿಕದಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.

ಇದರ ನಂತರ ಇಂಗ್ಲೆಂಡ್ 58 ವಿದ್ಯಾರ್ಥಿಗಳು, ಆಸ್ಟ್ರೇಲಿಯಾ 57 ವಿದ್ಯಾರ್ಥಿಗಳು ಮತ್ತು 37 ವಿದ್ಯಾರ್ಥಿಗಳೊಂದಿಗೆ ರಷ್ಯಾ ನಂತರದ ಸ್ಥಾನದಲ್ಲಿದೆ. ಏತನ್ಮಧ್ಯೆ, ಕಳೆದ ಮೂರು ವರ್ಷಗಳಲ್ಲಿ 48 ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಗಡಿಪಾರಿಗೆ ಕಾರಣಗಳನ್ನು ಅಮೆರಿಕ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಒದಗಿಸಿಲ್ಲ” ಎಂದು ಅವರು ಹೇಳಿದ್ದಾರೆ.

ದೇಶ

ಭಾರತ ಎದುರಿಸಿದ ಇತ್ತೀಚಿನ ಯುದ್ಧವೆಂದರೆ ಅದು ಕಾರ್ಗಿಲ್ ಯುದ್ಧವೇ. ಭಾರತದ ಭೂಭಾಗಕ್ಕೆ ನುಗ್ಗಿದ ಪಾಕಿಸ್ತಾನಿ ಪಡೆಗಳನ್ನು ಹಿಮ್ಮೆಟ್ಟಿಸಿ, ವಿಜಯ ಪತಾಕೆ ಹಾರಿಸಿದ ಇತಿಹಾಸಕ್ಕೆ ಇಂದಿಗೆ 25 ವರ್ಷ!

ಕಾಶ್ಮೀರದ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ 25ನೇ ವಿಜಯ ದಿನದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಲಡಾಖ್ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಯುದ್ಧ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ನಂತರ ಪ್ರಧಾನಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.

ಆಗ, “ಕಾರ್ಗಿಲ್ ಯುದ್ಧದ ನಂತರವೂ ಪಾಕಿಸ್ತಾನ ಪಾಠ ಕಲಿತಿಲ್ಲ; ಅದು ಭಯೋತ್ಪಾದನೆ ಮತ್ತು ರಹಸ್ಯ ಯುದ್ಧಗಳನ್ನು ಮುಂದುವರೆಸಿದೆ. ಸೈನಿಕರ ನಿಸ್ವಾರ್ಥ ಸೇವೆಗೆ ನಾಡಿನ ಸಮಸ್ತ ಜನತೆ ಋಣಿಯಾಗಿದ್ದಾರೆ. ಪಾಕಿಸ್ತಾನದ ದುಷ್ಟ ಉದ್ದೇಶಗಳು ಎಂದಿಗೂ ಯಶಸ್ವಿಯಾಗುವುದಿಲ್ಲ.

ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ನಮ್ಮ ದೇಶವು ಗೌರವ ಸಲ್ಲಿಸುತ್ತದೆ; ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಎಂದಿಗೂ ಸಾಯುವುದಿಲ್ಲ. ನಮ್ಮ ಸೈನಿಕರು ಸಂಪೂರ್ಣ ಶಕ್ತಿಯಿಂದ ಭಯೋತ್ಪಾದನೆ ವಿರುದ್ಧ ಹೋರಾಡುತ್ತಾರೆ” ಎಂದು ಪ್ರಧಾನಿ ಹೇಳಿದರು.

ದೇಶ

ಮಣಿಪುರ ರಾಜ್ಯದಲ್ಲಿ ಕುಕಿ ಮತ್ತು ಮೈತೇಯಿ ಜನಾಂಗಗಳ ನಡುವೆ ಕಳೆದ ವರ್ಷ ಮೇ ತಿಂಗಳಲ್ಲಿ ಆರಂಭವಾದ ಹಿಂಸಾತ್ಮಕ ಸಂಘರ್ಷ ಒಂದು ವರ್ಷದಿಂದ ನಡೆಯುತ್ತಿದೆ. ಎರಡೂ ಕಡೆಗಳಲ್ಲಿ 250ಕ್ಕೂ ಹೆಚ್ಚು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜಿರಿಬಾಮ್‌ನಂತಹ ಪ್ರದೇಶಗಳಲ್ಲಿ ಉದ್ವಿಗ್ನತೆ ಮುಂದುವರಿದಿರುವುದರಿಂದ ಅಮೆರಿಕ ವಿದೇಶಾಂಗ ಇಲಾಖೆಯು ಭಾರತಕ್ಕೆ ತನ್ನ ಪ್ರಯಾಣದ ಸಲಹೆಯನ್ನು ನವೀಕರಿಸಿದೆ.

ಅದರಂತೆ ಮಣಿಪುರ ರಾಜ್ಯದಲ್ಲಿ ‘ಪ್ರಯಾಣ ಮಾಡಬೇಡಿ, ತುಂಬಾ ಅಪಾಯವಿದೆ’ ಎಂದು 4ನೇ ಹಂತದ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ, ಪ್ರಯಾಣದ ಮರುಪರಿಶೀಲನೆಗಾಗಿ ಮೇಘಾಲಯಕ್ಕೆ 3ನೇ ಹಂತವನ್ನು ನೀಡಲಾಗಿದೆ.

ಅಸ್ಸಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರಾದಲ್ಲಿ ಹಿಂಸಾಚಾರ ಇಳಿಕೆಯಿಂದಾಗಿ ಈ ರಾಜ್ಯಗಳನ್ನು 2ನೇ ಹಂತದ ಪಟ್ಟಿಗೆ ವರ್ಗಾಯಿಸಲಾಗಿದೆ. ಅಂದರೆ ಹಂತ 2ರ ಪಟ್ಟಿಯಲ್ಲಿರುವ ರಾಜ್ಯಕ್ಕೆ ತೆರಳುವವರು ಸೂಕ್ತ ಭದ್ರತೆ ಹಾಗೂ ವಿದೇಶಾಂಗ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತೆರಳಬೇಕು ಎಂದು ಆದೇಶ ಹೊರಡಿಸಲಾಗಿದೆ.

ಮಣಿಪುರ ರಾಜ್ಯದ ಮಟ್ಟಿಗೆ ಹಿಂಸಾಚಾರ ತಗ್ಗಿಲ್ಲದ ಕಾರಣ ಕೊಲೆ, ಅಪಹರಣ, ಲೈಂಗಿಕ ದೌರ್ಜನ್ಯ ಇತ್ಯಾದಿ ಸಾಧ್ಯತೆಗಳಿರುವುದರಿಂದ 4ನೇ ಹಂತದ ಎಚ್ಚರಿಕೆ ನೀಡಲಾಗಿದೆ.

ಜನಾಂಗೀಯ ಆಧಾರಿತ ನಾಗರಿಕ ಕಲಹ ಮತ್ತು ಭಾರತ ಸರ್ಕಾರದ ಗುರಿಗಳ ವಿರುದ್ಧ ನಿಯಮಿತ ದಾಳಿಯ ಕಾರಣದಿಂದ ಯಾವುದೇ ಅಮೆರಿಕ ನಾಗರಿಕರು ಮುಂದಿನ ಆರು ತಿಂಗಳ ಕಾಲ ಮಣಿಪುರ ರಾಜ್ಯಕ್ಕೆ ಪ್ರಯಾಣಿಸಬಾರದು ಎಂದು ಅಮೆರಿಕ ವಿದೇಶಾಂಗ ಇಲಾಖೆ ಹೇಳಿದೆ.

ಅಮೆರಿಕ ಸರ್ಕಾರಿ ನೌಕರರು ಹೆಚ್ಚಿನ ಅಪಾಯದ ಪ್ರದೇಶಗಳಿಗೆ ಪ್ರಯಾಣಿಸಲು ವಿಶೇಷ ಅಧಿಕಾರದ ಅಗತ್ಯವಿರುವ ಕಾರಣದಿಂದ ವಿದೇಶದಲ್ಲಿ ಹಿಂಸಾತ್ಮಕ ಸಂಘರ್ಷದ ಪ್ರದೇಶಗಳಲ್ಲಿ ಹಂತ ಹಂತವಾಗಿ ಎಚ್ಚರಿಕೆಗಳನ್ನು ನೀಡಲಾಗುತ್ತದೆ.

ಇದರಲ್ಲಿ 4ನೇ ಹಂತವು, ನಾಗರಿಕರು ಮತ್ತು ಅಮೆರಿಕ ವಿದೇಶಾಂಗ ವ್ಯವಹಾರಗಳ ಇಲಾಖೆ ಉದ್ಯೋಗಿಗಳಿಗೆ ನೀಡಲಾಗುವ ಅತ್ಯುನ್ನತ ಮಟ್ಟದ ಎಚ್ಚರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಭಾರತದ ಈಶಾನ್ಯ ರಾಜ್ಯಗಳಿಗೆ ಅಮೆರಿಕದ ನಾಗರಿಕರ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ನವೀಕರಿಸಲಾಗಿದೆ.

ದೇಶ

ನವದೆಹಲಿ: ನೀಟ್ ಪ್ರವೇಶ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಗ್ಯಾಂಗ್ ಶಾಮೀಲಾಗಿರುವುದು ಹೇಗೆ ಎಂಬ ಹೊಸ ಮಾಹಿತಿಯನ್ನು ಸಿಬಿಐ ಬಿಡುಗಡೆ ಮಾಡಿದೆ.

ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಈ ಬಾರಿಯ ನೀಟ್ (NEET) ಪ್ರವೇಶ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಹಗರಣಗಳ ಆರೋಪ ಕೇಳಿಬಂದಿತ್ತು. ಈ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಈ ಹಗರಣ ನಡೆದಿರುವುದು ದೃಢಪಟ್ಟಿದೆ.

ಈ ಕುರಿತು ಸಿಬಿಐ ನಿನ್ನೆ ಪ್ರಕಟಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ‘ಪರೀಕ್ಷೆ ನಡೆದ ಓಯಸಿಸ್ ಶಾಲೆಯ ಮುಖ್ಯೋಪಾಧ್ಯಾಯ ಇಶಾನುಲ್ ಹಕ್ ನಗರದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಸಂಯೋಜಕರಾಗಿದ್ದರು. ಇವರನ್ನು ಮತ್ತು ಶಾಲೆಯ ಉಪ ಮುಖ್ಯೋಪಾಧ್ಯಾಯ ಇಮ್ತಿಯಾಜ್ ಆಲಂ ಅವರನ್ನು ಹಗರಣದ ಮಾಸ್ಟರ್ ಮೈಂಡ್ ಪಂಕಜ್ ಕುಮಾರ್ ಸಂಪರ್ಕಿಸಿದ್ದಾರೆ. ಈ ಮೂವರೂ ಸೇರಿ, ಪರೀಕ್ಷೆ ನಡೆಯುವ ಮೇ 5 ರಂದು ಬೆಳಗ್ಗೆ ಸೆಕ್ಯೂರಿಟಿ ಬಾಕ್ಸ್‌ನಿಂದ ಪ್ರಶ್ನೆಪತ್ರಿಕೆ ತೆಗೆದು ಫೋಟೋ ತೆಗೆದಿದ್ದಾರೆ.

ಏತನ್ಮಧ್ಯೆ, ಬಿಹಾರದ ಕೆಲವು ಪ್ರಸಿದ್ಧ ವೈದ್ಯಕೀಯ ಕಾಲೇಜಿನ ಕೆಲವು ವಿದ್ಯಾರ್ಥಿಗಳನ್ನು ಕರೆತಂದು ಹಜಾರಿಬಾಗ್‌ನಲ್ಲಿ ವಸತಿ ಕಲ್ಪಿಸಿಕೊಡಲಾಗಿತ್ತು. ಹಣ ಪಾವಿತಿಸಿದ್ದ ಆ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ ಕೆಲವು ವ್ಯಕ್ತಿಗಳು ಅವುಗಳನ್ನುಅವರಿಗೆ ವಿತರಿಸಿದ್ದಾರೆ. ವಿದ್ಯಾರ್ಥಿಗಳು ಆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ನೀಡಿದ್ದಾರೆ.

ಈ ಹಗರಣದಲ್ಲಿ ಭಾಗಿಯಾಗಿರುವ ಪಂಕಜ್ ಕುಮಾರ್, ಪರೀಕ್ಷೆ ನಡೆದ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಪ್ರಶ್ನೆಗಳಿಗೆ ಉತ್ತರ ಬರೆದ ವಿದ್ಯಾರ್ಥಿಗಳು, ಖರೀದಿಸಿದ ವಿದ್ಯಾರ್ಥಿಗಳು ಸೇರಿ 35ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶ

ಚೆನ್ನೈ: ಕರ್ನಾಟಕ ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದ ನಾಮಕ್ಕಲ್ ಮತ್ತು ಕೃಷ್ಣಗಿರಿ ಜಿಲ್ಲೆಗಳ ಇಬ್ಬರು ಲಾರಿ ಚಾಲಕರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಮೃತರ ಕುಟುಂಬಗಳಿಗೆ 3 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಆದೇಶಿಸಿದ್ದಾರೆ.

ಈ ಕುರಿತು ತಮಿಳುನಾಡು ಮುಖ್ಯಮಂತ್ರಿ ಸಂತಾಪ ಸೂಚಿಸಿ ಹೊರಡಿಸಿರುವ ಸಂದೇಶದಲ್ಲಿ, “ನಾಮಕ್ಕಲ್ ಜಿಲ್ಲೆಯ ಪುದುಚತ್ರಂ ವೃತ್ತದ ತಾತಯ್ಯಂಗಾರಪಟ್ಟಿ ಗ್ರಾಮದ ಚಿನ್ನನ್ ಮತ್ತು ಕೃಷ್ಣಗಿರಿ ಜಿಲ್ಲೆಯ ಊತ್ತಂಗರೈ ಒಳ ವೃತ್ತದ ಎಂ.ವೆಲ್ಲಾಪಟ್ಟಿ ಗ್ರಾಮದ ಮುರುಗನ್ ಇಬ್ಬರೂ, ಕಳೆದ ಜುಲೈ 16 ರಂದು ಎಲ್‌ಪಿಜಿ ಟ್ಯಾಂಕರ್ ಲಾರಿಯಲ್ಲಿ ಚಾಲಕರಾಗಿ ಹೋಗಿದ್ದಾಗ, ಕರ್ನಾಟಕ ರಾಜ್ಯ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವೃತ್ತದ ಶಿರೂರು ಪ್ರದೇಶದಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಿಂದ ಕೊಚ್ಚಿ ಹೋಗಿದ್ದರು ಎಂಬ ದುಃಖದ ಸುದ್ದಿಯನ್ನು ಕೇಳಿ ನನಗೆ ಅತೀವ ದುಃಖ ಮತ್ತು ನೋವಾಗಿದೆ” ಎಂದು ಹೇಳಿದ್ದಾರೆ.

ಅಲ್ಲದೆ, ಅಪಘಾತದಲ್ಲಿ ಸಾವನ್ನಪ್ಪಿದ ಟ್ರಕ್ ಚಾಲಕರ ಕುಟುಂಬಗಳಿಗೆ ಮತ್ತು ಅವರ ಸಂಬಂಧಿಕರಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುವದರ ಜೊತೆಗೆ ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂಪಾಯಿಗಳನ್ನು ನೀಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.

ದೇಶ

ನವದೆಹಲಿ: ಖನಿಜ ಸಂಪನ್ಮೂಲಗಳ ಮೇಲೆ ತೆರಿಗೆ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 8 ನ್ಯಾಯಾಧೀಶರು ಸರ್ವಾನುಮತದ ತೀರ್ಪು ನೀಡಿದ್ದು, ಒಬ್ಬ ನ್ಯಾಯಾಧೀಶರು ಮಾತ್ರ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಗಣಿ ಮತ್ತು ಖನಿಜಗಳ ಮೇಲೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ವಿಧಿಸಿರುವ ತೆರಿಗೆಯನ್ನು ವಸೂಲಿ ಮಾಡುವ ಕುರಿತು ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟನೆ ಕೇಳಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ 9 ನ್ಯಾಯಾಧೀಶರ ಪೀಠ ಈ ಬಗ್ಗೆ ತನಿಖೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಅದರಲ್ಲಿ ಡಿ.ವೈ.ಚಂದ್ರಚೂಡ್ ಸೇರಿದಂತೆ 8 ನ್ಯಾಯಾಧೀಶರು ಒಂದೇ ರೀತಿಯ ತೀರ್ಪು ನೀಡಿದ್ದಾರೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನಾಭಿಪ್ರಾಯದ ತೀರ್ಪು ನೀಡಿದ್ದಾರೆ.

8 ನ್ಯಾಯಾಧೀಶರು ನೀಡಿದ ತೀರ್ಪನ್ನು ಓದಿ ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, “ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ಖನಿಜ ಸಂಪನ್ಮೂಲಗಳಿಗೆ ತೆರಿಗೆ ವಿಧಿಸಲು ಸಂಸತ್ತಿಗೆ ಯಾವುದೇ ಅಧಿಕಾರವಿಲ್ಲ. 1989ರಲ್ಲಿ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠವು ಖನಿಜ ಸಂಪನ್ಮೂಲಗಳ ಮೇಲಿನ ರಾಯಧನವು ತೆರಿಗೆ ಎಂದು ಹೇಳಿದ್ದ ತೀರ್ಪು ತಪ್ಪಾಗಿದೆ. ಖನಿಜ ಸಂಪನ್ಮೂಲಗಳು ಮತ್ತು ಖನಿಜ ಸಮೃದ್ಧ ಭೂಮಿಗಾಗಿ ಕೇಂದ್ರ ಸರ್ಕಾರದಿಂದ ಪಡೆಯುವ ರಾಯಧನವನ್ನು ತೆರಿಗೆ ಎಂದು ಪರಿಗಣಿಸಲಾಗದು.

ರಾಜ್ಯ ಸರ್ಕಾರಗಳಿಗೆ ತೆರಿಗೆ ವಿಧಿಸುವ ಹಕ್ಕಿದೆ. ರಾಜ್ಯಗಳಲ್ಲಿರುವ ಖನಿಜ ಸಂಪನ್ಮೂಲಗಳಿಗಾಗಿ ಕೇಂದ್ರ ಸರ್ಕಾರದಿಂದ ಪಡೆಯುವ ರಾಯಧನವನ್ನು ತೆರಿಗೆ ಎಂದು ಪರಿಗಣಿಸಲಾಗದು. ಇದು ಗುತ್ತಿಗೆ ಹಣವೇ. ಗಣಿ, ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆಗಳು ರಾಜ್ಯಗಳ ಹಕ್ಕುಗಳನ್ನು ನಿರ್ಬಂಧಿಸುವ ಯಾವುದೇ ಷರತ್ತುಗಳನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ನೀಡಿರುವ ತಮ್ಮ ತೀರ್ಪಿನಲ್ಲಿ, “ಖನಿಜ ಸಂಪನ್ಮೂಲಗಳು ಮತ್ತು ಅವು ಇರುವ ಭೂಮಿಗೆ ತೆರಿಗೆ ವಿಧಿಸುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇಲ್ಲ” ಎಂದು ಹೇಳಿದ್ದಾರೆ.

ರಾಜ್ಯ

ಬೆಂಗಳೂರು: ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಕೋಮುವಾದ, ಭ್ರಷ್ಟಾಚಾರದಿಂದ ಬೇಸತ್ತ ಜನರು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಬಹುಮತ ನೀಡಿ ಅಧಿಕಾರದಲ್ಲಿ ಕೂರಿಸಿದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರನ್ನು ವಂಚಿಸಿ ಭ್ರಷ್ಟಾಚಾರದಲ್ಲಿ ಭಾಗಿಯಾದ ವರದಿಗಳು ಬಹಿರಂಗವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಕೋಮುವಾದದಷ್ಟೇ ಅಪಾಯಕಾರಿ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಅವರು ಮಾತನಾಡುತ್ತಾ, “ಕೋಮುವಾದದಂತೆ ಭೃಷ್ಟಾಚಾರವು ರಾಜ್ಯದ ಹಿತ ದೃಷ್ಟಿಯಿಂದ ಕೊನೆಗಾಣಬೇಕಾಗಿದೆ. ಮತ ನೀಡಿ ಚುನಾಯಿಸಿದ ಜನರ ಹಿತಕ್ಕಿಂತ ಪಕ್ಷದ ಹಿತಾಸಕ್ತಿ ಮತ್ತು ಸ್ವಾರ್ಥಹಿತಾಸಕ್ತಿಯೇ ಮುಖ್ಯ ಎಂಬುದು ಎದ್ದು ಕಾಣುತ್ತಿದೆ. ಇಲ್ಲಿ ಯಾರೂ ಸುಭಗರಲ್ಲ ಎಂದು ಮಾಧ್ಯಮಗಳ ವರದಿಗಳು ಬಹಿರಂಗ ಪಡಿಸುತ್ತದೆ. ಸಮುದಾಯದ ಅಭಿವೃದ್ಧಿ ನಿಗಮಗಳು ಸೇರಿದಂತೆ ಇನ್ನಿತರ ಮಂಡಳಿಗಳಲ್ಲಿ ಕಳೆದ ವರ್ಷಗಳಲ್ಲಿಯೇ ಸುಮಾರು ನಾಲ್ಕು ನೂರು ಕೋಟಿ ರೂಪಾಯಿಗೂ ಅಧಿಕವಾದ ಮೊತ್ತವನ್ನು ಅಕ್ರಮವಾಗಿ ಅನಧಿಕೃತ ಖಾತೆಗಳಿಗೆ ಜಮೆ ಮಾಡಿ, ಫಲಾನುಭವಿಗಳಿಗೆ ಸಲ್ಲಬೇಕಾದ ಹಣವನ್ನು ದುರುಪಯೋಗ ಪಡಿಸಲಾಗಿದೆ.

ಈ ಅವಧಿಯಲ್ಲಿ, ಸಿದ್ದರಾಮಯ್ಯರ ಅವಧಿಯೂ ಸೇರಿದಂತೆ ಜಗದೀಶ್ ಶೆಟ್ಟರ್, ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಕೂಡಾ ಮುಖ್ಯ ಮಂತ್ರಿಯಾಗಿದ್ದರು. ಈ ಬಗ್ಗೆಯೂ ತನಿಖೆ ನಡೆಯಬೇಕು” ಎಂದು ಹೇಳಿದ ತಾಹೇರ್ ಹುಸೇನ್, “ಈಗ ವಿಧಾನ ಸಭೆಯಲ್ಲಿ ಭೃಷ್ಟಾಚಾರ, ಅಕ್ರಮ ತಡೆಯುವ ಮಾತನಾಡುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಂದಾಯ ಸಚಿವರಾಗಿದ್ದಾಗ ಬೆಳೆ ನಷ್ಟ ಪರಿಹಾರದಲ್ಲೂ ಅಕ್ರಮ ನಡೆದಿದೆ. ಸಂಬಂಧವೇ ಇಲ್ಲದ ಅನ್ಯ ಖಾತೆದಾರರ ಖಾತೆಗೆ ಕೋಟ್ಯಾಂತರ ರೂಪಾಯಿ ಪಾವತಿಯಾದ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಸ್ಪರ ಸೇಡಿನ ರಾಜಕೀಯ ಮಾಡಿ ಜನರನ್ನು ವಂಚಿಸಬೇಡಿ. ವಾಲ್ಮೀಕಿ ನಿಗಮದ ಹಗರಣ ಬೆಳಕಿಗೆ ಬಂದ ಮೇಲೆ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಪರಿಶೀಲನೆಗೆ ಸರ್ಕಾರ ಸಿದ್ಧವಾಗಿದೆ.

ಬಿಜೆಪಿ ವಿರುದ್ಧ ಆರೋಪ ಕೇಳಿ ಬಂದಾಗ ಕೇಂದ್ರದಿಂದ ಇಡಿ ಓಡೋಡಿ ರಾಜ್ಯಕ್ಕೆ ಬಂತು. ಈ ಎರಡೂ ನಡೆಯನ್ನು ಪರಸ್ಪರ ಟೀಕಿಸುತ್ತಿದ್ದಾರೆ. ಈಗ ಇಡಿ ಯ ಮೇಲೆ ಕೇಸನ್ನೂ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಇದು ಸಭ್ಯ ರಾಜಕಾರಣವಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ. ಭ್ರಷ್ಟಾಚಾರವನ್ನು ತೊಡೆದು ಹಾಕಲು, ಅಪರಾಧಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡದೆ, ಪ್ರಾಮಾಣಿಕ ರೀತಿಯ ಪ್ರಯತ್ನ ಮಾಡಿ, ರಾಜ್ಯದ ಜನರ ಅಭಿವೃದ್ದಿಯತ್ತ ಗಮನಹರಿಸಲು ಆಡಳಿತ ಮತ್ತು ವಿರೋಧಪಕ್ಷ ಗಮನ ಹರಿಸಲಿ” ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯ ಶಿಕ್ಷಣ

ಭಾಗ:2

ಕಾಂ.ನವೀನ್ ಸೂರಿಂಜೆ ಅವರೇ, ನೀವು ಅಥವಾ ಈಗಿನ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ – ಮದರಸಗಳಲ್ಲಿ ಕನ್ನಡಕಲಿಕೆ’  ನಿಲುವನ್ನು ಒಪ್ಪದಿರುವ ಎಡಪಂತಿಯ ಅಥವಾ ಜಾತ್ಯತೀತ ಕಾಂಗ್ರೆಸ್ಸಿಗರ ಗಮನಕ್ಕೆ ಈ ಒಂದು ಪ್ರತಿಕ್ರಿಯೆ!

ನವೀನ್ ಸೂರಿಂಜೆಯ ಅಭಿಪ್ರಾಯ: ಮದರಸಾದಲ್ಲಿ ‘ಕನ್ನಡ ಕಲಿಕೆ’ ಎಂಬ ಸರ್ಕಾರಿ ಕಾರ್ಯಕ್ರಮ ಯೋಜನೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಏಕೆ ಕೈಬಿಟ್ಟಿತ್ತು ಎಂಬುದನ್ನು ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಸ್ಪಷ್ಟವಾಗಿ ಹೇಳಬೇಕಿತ್ತು.

ಖಾಸಿಂ ಸಾಬ್ ಅವರ ಪ್ರತಿಕ್ರಿಯೆ: ಕೈ ಬಿಟ್ಟಿದ್ದಕ್ಕೆ ಕಾರಣ ಹಾಳಾಗಿ ಹೋಗಲಿ. ಮದರಸಾದಲ್ಲಿ ‘ಕನ್ನಡ ಕಲಿಕೆ’ ಎಂಬ ಸರ್ಕಾರಿ ಕಾರ್ಯಕ್ರಮ ಯೋಜನೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಯಾಕೆ ಕೈಗೆತ್ತಿಕೊಂಡಿತು. ಈ ಕಾನ್ಸೆಪ್ಟ್, ಪ್ಲಾನ್ ಯೋಜನೆ ಪ್ರಾಧಿಕಾರಕ್ಕೆ ಬಂದಿದ್ದಾದರು ಯಾವಾಗ? ಹೇಗೆ? ಯಾರು ಈ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಅಲ್ಲದೆ, ಈ ಯೋಜನೆಯನ್ನು ಕೈಬಿಡುವ ಮೊದಲು ಇದರ ಕುರಿತು ಸೌಜನ್ಯಕ್ಕಾದರೂ ಒಂದಷ್ಟು ಮುಸ್ಲಿಂ ಸಮುದಾಯದ ಪ್ರತಿನಿದಿಗಳ ಜೊತೆ ಚರ್ಚೆ, ಸಂವಾದ ನಡೆಸಬಹುಗಾಗಿತ್ತು. ಇದನ್ನು ಪ್ರಾಧಿಕಾರ ಮಾಡಲಿಲ್ಲ. ಇದು ತಪ್ಪಲ್ಲವೇ?

ನಿಮ್ಮ ಅಭಿಪ್ರಾಯ: “ವಿರೋಧ ಪ್ರಕಟವಾದ್ದರಿಂದ ಆ ವಿಷಯವನ್ನು ಕೈ ಬಿಡಲಾಗಿದೆ.”

ನಮ್ಮ ಪ್ರತಿಕ್ರಿಯೆ: ಇಂತಹ ಆರ್ಥ ಪೂರ್ಣ, ಮುಸ್ಲಿಂ ಸಮುದಾಯಕ್ಕೆ ಕನಿಷ್ಠ ಈ ಒಂದು ಕ್ಷೇತ್ರದಲ್ಲಾದರೂ ನ್ಯಾಯ, ಅವಕಾಶ ಸಿಗಬಹುದಾದ ಈ  ಯೋಜನೆಯನ್ನು ಖಂಡಿತವಾಗಿಯೂ ‘ಸಾಮಾಜಿಕ ನ್ಯಾಯ’ ಬಯಸುವ ಮುಸ್ಲಿಮರು ವಿರೋಧಿಸುತ್ತಿರಲಿಲ್ಲ. ಅಂದಹಾಗೆ ನಿಜವಾಗಿಯೂ ಇದಕ್ಕೆ ವಿರೋಧ ಪ್ರಕಟವಾಯಿತ? ಇದನ್ನು ವಿರೋಧಿಸಿದ ಒಂದಷ್ಟು ಮುಸ್ಲಿಂ ಸಂಘ / ಸಂಸ್ಥೆ / ಜಮಾಮ್ / ಗುಂಪು/ ಬರಹಗಾರರ / ಬುದ್ಧಿಜೀವಿಗಳ ಹೆಸರುಗಳನ್ನು ಹೇಳಿ? ಏಕೆಂದರೆ, ನಾನು ಸಹ ಒಬ್ಬ ಕರ್ನಾಟಕದ ಮುಸ್ಲಿಂ ಸೋಶಿಯಲ್ ಆಕ್ಟಿವಿಸ್ಟ್, ನಾನು ವಿರೋಧ ಮಾಡಲಿಲ್ಲ. ನನ್ನಂತಹ ನೂರಾರು ಕನ್ನಡಿಗ ಮುಸ್ಲಿಂ ಸುಮುದಾಯ ಪ್ರತಿನಿಧಿಗಳು ಈ ಪ್ರಾಧಿಕಾರದ ನಿಲುವಿನ ಪರವಾಗಿದ್ದೆವು. ಕೊನೆಗೂ ಇಂತಹ ಒಂದು ಮುಸ್ಲಿಮರ ಸಾಮಾಜಿಕ ನ್ಯಾಯದ ಸಣ್ಣ ಮಟ್ಟದ ಆಪರ್ಚೂನಿಟಿಯನ್ನು ಪ್ರಾಧಿಕಾರ ಮಿಸ್ ಮಾಡಿದೆ.

ನಿಮ್ಮ ಅಭಿಪ್ರಾಯ: “ಇದು ಅತಿಯಾಯ್ತು. ಕನ್ನಡ ಕಲಿಯುವುದಕ್ಕೂ ಮುಸ್ಲೀಮರ ವಿರೋಧವೇ?” ಎಂಬ ಪ್ರಶ್ನೆ / ಹೊಸ ಆರೋಪವನ್ನು ಮುಸ್ಲಿಮರು ಎದುರಿಸಬೇಕಾಗುತ್ತದೆ.

ನಮ್ಮ ಪ್ರತಿಕ್ರಿಯೆ: ಇದು ಒಂದು ಭೂತ. ಇಂತಹ ನೂರಾರು ಭೂತ, ಬೊಂಬೆಗಳನ್ನು ಕರ್ನಾಟಕದ ಜಾತ್ಯತೀತ / ಜನಪರ / ಪ್ರಗತಿಪರ / ಕ್ರಾಂತಿಕಾರಿ ಸಂಘಟನೆಗಳು ಮುಸ್ಲಿಮರಿಗೆ ನೀಡಿವೆ. ಇಲ್ಲೂ ಕೂಡು ಅದೇ ಮತ್ತೆ ಪರಿವರ್ತನೆಯಾಗಿದೆ. ಇಂತಹವುಗಳು ಬೇಡ. ಇಂತಹ ನಾಡಪರ ಯೋಜನೆಗಳಿಗೂ “ಮುಸ್ಲಿಮರ ವಿರೋಧವೇ?” ಅನ್ನುವ ಕೋಮುವಾದಿಗಳ ಪ್ರಶ್ನೆಗೆ ನಿಮ್ಮ ಈ ಗುಮಾನಿ ಸರಿಯಾಗಿದೆ. ಇದರ ನಡುವೆ ಒಂದಷ್ಟು ತಾಳ್ಮೆಯಿಂದ ಜಾತ್ಯತೀತ ಮನಸ್ಥರು ಒಂದನ್ನು ಯೋಚಿಸಬೇಕಿತ್ತು. ಮುಸ್ಲಿಮರ ಸ್ವಂತ ಅಭಿಪ್ರಾಯಗಳನ್ನು ಪಡೆಯದೆ ಇದರ ಸಾದಕ – ಬಾದಕಗಳ ನಿರ್ಣಯ, ಅಂಗಿಕಾರ, ತಿರಸ್ಕಾರಗಳನ್ನು ಮಾಡುವುದು ‘ಆರೋಗ್ಯಕರ ಸಮಾಜದ ಬುದ್ದಿಜೀವಿ’ಗಳ ಲಕ್ಷಣವಲ್ಲ. ಜೊತೆಗೆ, ಇಂತಹ ‘ಹೊಸ ಆರೋಪ’ಗಳು ಅಥವಾ ‘ಹಳೆಯ ಆರೋಪ’ಗಳು ಕರ್ನಾಟಕದ ಮುಸ್ಲಿಮರಿಗೆ ಹೊಸದಲ್ಲ. ಇಂತಹ ಕಲ್ಪಿತ ವಿರೋಧಿ – ಶತೃತ್ವಗಳು ಹೊರತಾಗಿಯೂ ನಾಡಿನ ಮುಸ್ಲಿಮರು ಅಭಿವೃದ್ಧಿ, ಸಮಾನ ಪಾಲು, ಸಮಾನ ಭಾಗವಹಿಸುವಿಕೆಗಳ ಕುರಿತು ಹೆಚ್ಚು ಚಿಂತಿತರಾಗಿದ್ದಾರೆ.

ನಿಮ್ಮ ಅಭಿಪ್ರಾಯ: ಮದರಸದಲ್ಲಿ ಸರ್ಕಾರಿ ಪ್ರಾಯೋಜಿತ ಕನ್ನಡ ಕಲಿಕಾ ಕಾರ್ಯಕ್ರಮವು ಈ ಕೆಳಕಂಡ ಅಪಾಯ / ಅಪ್ರಸ್ತುತೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪ್ರಾಧಿಕಾರವು ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ನಾವು ಭಾವಿಸುತ್ತೇವೆ.

ನಮ್ಮ ಪ್ರತಿಕ್ರಿಯೆ: ಅಪಾಯ / ಅಪ್ರಸ್ತುತೆಗಳನ್ನು ಎದುರಿಸಬೇಕಾಗುತ್ತದೆ ಅಂತ ಹೇಳಿದ್ದೀರಿ. ಯಾರಿಗೆ ಆಪಾಯ? ಹೇಗೆ?  ಮದರಸಗಳಲ್ಲಿ ಕನ್ನಡಕಲಿಕೆಯಿಂದ ಮುಸ್ಲಿಂ ಸಮುದಾಯಕ್ಕೆ, ಈ ಮಕ್ಕಳ ಭವಿಷ್ಯದಲ್ಲಿ ಆಗಬಹುದಾದ ಬದಲಾವಣೆ, ಸಿಗಬಹುದಾದ ಅವಕಾಶಗಳ ಕುರಿತು ನಿಮಗೂ ಜೊತೆಗೆ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೂ ಇಲ್ಲ ಅಂತ ಕಾಣುತ್ತೆ. ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಸಬಾರದೆ…!? ಇದು ಸಹ ಒಂದು ರೀತಿಯ ಸರ್ಕಾರದ ಪಾಲಿದಾರಿಕೆಯಲ್ಲಿನ ವಂಚನೆಯಲ್ಲವೇ?

ಇದನ್ನೂ ಓದಿ: Part-1: ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಸಬಾರದೆ..!? – ಖಾಸಿಂ ಸಾಬ್ ಎ.

ನವೀನ್ ಸೂರಿಂಜೆ.., ನಾನು ಇಷ್ಟು ಹೇಳಿದ ನಂತರ ನೀವು ನೀಡಿದ ಎಂಟು ಕಾರಣ – ಸಮರ್ಥನೆಗಳಿಗೆ ನಾನು ಉತ್ತರಿಸುವುದು ಅಪ್ರಸ್ತುತ ಎಂಬುದು ನನ್ನ ಭಾವನೆ. ಅಲ್ಲದೆ, ಕರ್ನಾಟಕದ ಮದರಸಗಳು ಮೊದಲು ಅಧಿಕೃತವಾಗಿ ದಾಖಲಾಗಬೇಕು(ನೋಂದಣಿ ). ಅಲ್ಲಿ ಓದಿದ ವಿದ್ಯಾರ್ಥಿಗಳ ಅಂಕ ಪಟ್ಟಿ (Marks Card) ಎಲ್ಲಾ ಸರ್ಕಾರಿ ಉದ್ಯೋಗಗಳಿಗೆ ಅನ್ವಯವಾಗಬೇಕು. ಕರ್ನಾಟಕ ಮದರಸಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಮದರಸಗಳ ಆಧುನೀಕರಣದ ಜೊತೆಗೆ ಪಠ್ಯ ಪುಸ್ತಕಗಳನ್ನು ಸರ್ಕಾರವೇ ನಿರ್ಧರಿಸಬೇಕು ಎಂಬುದು ನನ್ನ ಅಭಿಪ್ರಾಯ.

ಮುಸ್ಲಿಂ ವಿರೋಧಿ ಕೋಮುಶಕ್ತಿಗಳು ಮದರಸ ಮೇಲೆ ಸವಾರಿ ಮಾಡುವುದು ಇದು ಮೊದಲಲ್ಲ; ಕೊನೆಯೂ ಅಲ್ಲ. ಕೋಮುವಾದಿ ಬುದ್ದಿಗೆ ತನ್ನ ಅಜೆಂಡ ಜಾರಿಗೊಳಿಸಲು ನೆಪಗಳೇ ಬೇಕಾಗಿಲ್ಲ. 2b ಮುಸ್ಲಿಂ ಒಬಿಸಿ ಮೀಸಲಾತಿಯನ್ನು ಯಾವುದೆ ಪೂರ್ವ ಯೋಜನೆ ಇಲ್ಲದೆಯೆ ಒಂದೇ ದಿನದಲ್ಲಿ ಕಿತ್ತುಕೊಂಡವರಿಗೆ ಮದರಸ ಒಂದು ಲೆಕ್ಕವಲ್ಲ. ಕೋಮುವಾದಿಗಳು ಮುಂದೊಂದುದಿನ ಇದನ್ನು ದುರ್ಬಳಕೆಮಾಡಿ ಕೊಂಡಿಯಾರು ಎಂಬ ಗುಮಾನಿಗಳಿಗೆ ಯಡೆಮಾಡಿಕೊಟ್ಟರೆ ಬಹುಶಃ ಮುಸ್ಲಿಂ ಸಮುದಾಯ ನಾಡಿನಲ್ಲಿ ಸಾಮಾಜಿಕ ನ್ಯಾಯ – ಸಮಪಾಲು ವಡೆಯುವುದು ಅಸಾಧ್ಯ. ಕೋಮುವಾದಿಗಳು ಸಹ ಇದನ್ನೇ ಬಯಸುತ್ತಿದ್ದಾರೆ, ಸರ್ಕಾರದ ನಿಗಮ / ಮಂಡಳಿ / ಪ್ರಾಧಿಕಾರಗಳು ಸಹ ಪರೋಕ್ಷವಾಗಿ ಈ ನೀತಿಗಳ ಜಾರಿಯಲ್ಲಿಯೇ ಇವೆ.

ಸಾಧ್ಯವಾದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ತಂಡವು ಕರ್ನಾಟಕದ ಮದರಸಗಳ ಕುರಿತು ಸಮೀಕ್ಷೆ ನಡೆಸಿ ಕನ್ನಡ ಕಲಿಕೆಯ ಅಗತ್ಯ, ಭವಿಷ್ಯದ ಉದ್ಯೋಗಗಳ ಆದ್ಯತೆ, ಸಾಧ್ಯತೆ, ಈ ಮೂಲಕ ಅವಕಾಶಗಳ ಕುರಿತು ಒಂದು ಸಮಗ್ರ ಅಧ್ಯಯನ ನಡೆಸಲಿ. ಆ ಬಳಿಕ ನಿರ್ಧಾರ ಕೈಗೊಳ್ಳಲಿ. ಅದು ಬಿಟ್ಟು ಏಕಾ-ಏಕಿ ಮದರಸಗಳಲ್ಲಿ ಕಡ್ಡಾಯ ಕನ್ನಡ ಕಲಿಕೆ ಆದೇಶ ಜಾರಿ, ಇದರ ಬೆನ್ನಲ್ಲೆ ಈ ಆದೇಶವನ್ನು ಹಿಂಪಡೆದದ್ದು, ಇಂತಹ ಊಹಾ-ಪೋಹ ಚಲ್ಲಾಟಗಳು, ಕಲ್ಪಿತ ಸತ್ಯ-ಸುಳ್ಳುಗಳ ಆಧಾರದ ಯೋಜನೆಗಳನ್ನು ಹಮ್ಮಿಕೊಳ್ಳುವುದು ಬೇಡ.

ಮೊದಲು ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ಮದರಸಗಳಲ್ಲಿ ಕನ್ನಡ ಕಲಿಕೆಯ ಅಗತ್ಯವೋ, ಬೇಡವೋ ಎಂಬುದನ್ನು ನಿರ್ಧರಿಸಬೇಕು. ಸಂಸ್ಕೃತ, ಕ್ರಿಶ್ಚಿಯನ್, ಬುದ್ಧಿಸ್ಟ್ ಇತರೆ ಧಾರ್ಮಿಕ ಶಾಲೆಗಳಲ್ಲಿ  ಕನ್ನಡವನ್ನು ಕಲಿಸಲಾಗುತ್ತಿದೆಯೇ? ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ಕನ್ನಡ ಕಲಿಸ್ತಾರಾ? ಎಂಬ ವಿಷಯಗಳು, ಮದರಸದಲ್ಲಿ ಕನ್ನಡ ಕಲಿಸಬಾರದು ಎಂಬುದಕ್ಕೆ ಆಧಾರವಾಗಬಾರದು. ಇಲ್ಲೆಲ್ಲಾ ಕನ್ನಡ ಕಲಿಸಲಾಗುತ್ತೋ ಇಲ್ಲವೋ ಎಂಬುದನ್ನು ನೋಡಿಕೊಂಡು ಮದರಸದಲ್ಲಿ ಕಲಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವುದು ಸರಿಯಲ್ಲ.

ಇಂಗ್ಲಿಷ್ ಮಾಧ್ಯಮಗಳ ಹಾವಳಿಯಿಂದ ಕನ್ನಡ ಕಲಿಕೆ ದುಸ್ತರವಾಗಿರುವ ಈ ಕಾಲಘಟ್ಟದಲ್ಲಿ, ಮುಸ್ಲಿಂ ಸಮುದಾಯದ ಮಕ್ಕಳಿಗೆ ಕನ್ನಡ ದಕ್ಕುವುದರಿಂದ ಲಾಭ ಹೆಚ್ಚು. ಈ ಮಕ್ಕಳು ಇಂಗ್ಲಿಷ್ ಅಥವಾ ಉರ್ದು ಮೀಡಿಯಂ ಶಾಲೆಗೆ ಹೋದರೂ ಕನ್ನಡ ಪ್ಲಸ್ ಆಗಿ ಅವರಿಗೆ ದಕ್ಕುತ್ತದೆ. ಮದರಸದಲ್ಲಿ ಕನ್ನಡ ಕಲಿಸಬೇಡಿ ಎನ್ನುವುದಕ್ಕಿಂತ ಕನ್ನಡ ಮೀಡಿಯಂನಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗುವಂತೆ, ಮದರಸದಲ್ಲಿ ಕನ್ನಡ ಕಲಿತ ಮಕ್ಕಳಿಗೆ ಉದ್ಯೋಗಗಳಲ್ಲಿ ಆದ್ಯತೆಗಳನ್ನು ಕಲ್ಪಿಸಲು ಸಾಧ್ಯವೆ ಎಂಬ ನಿಟ್ಟಿನ ಆರೋಗ್ಯಕರ ಚಿಂತನೆ ಹೆಚ್ಚು ಉತ್ತಮ ವಾಗಬಹುದು.

ಮದರಸದಲ್ಲಿ ಕನ್ನಡ ಕಲಿಯುವುದರಿಂದ ಮುಸ್ಲಿಮರಿಗೆ ಕನ್ನಡ ಬರುವುದಿಲ್ಲ ಎಂಬ ಸಂದೇಹ ಹೋಗುತ್ತದೆ ಅಂತಲೋ ಅಥವಾ ಮುಂದೆ ಕೋಮುವಾದಿ ಪಕ್ಷಗಳು ಅಧಿಕಾರಕ್ಕೆ ಬಂದರೆ ಮದರಸಗಳ ಮೇಲೆ ಸವಾರಿ ಮಾಡಲು ಅವಕಾಶ ನೀಡಿದಂತ್ತಾಗುತ್ತದೆ ಎಂದು ಊಹಿಸಿಕೊಂಡು ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಕೆ ವಿರೋಧಿಸುವುದು ಸೂಕ್ತವಲ್ಲ. ಅಲ್ಲದೆ ಇಂತಹ ಭಯದ ಗುಮಾನಿಗಳಿಂದ ಮುಸ್ಲಿಮರಿಗೆ ಸಿಗಬಹುದಾದ ಇಂತಹ ಕಿಂಚಿತ್ತು ಅವಕಾಶಗಳನ್ನು ಸಹ ಕಸಿದು ಕೊಳ್ಳುವುದು ಬೇಡ.

• ಖಾಸಿಂ ಸಾಬ್, ಬೆಂಗಳೂರು.

ರಾಜ್ಯ ಶಿಕ್ಷಣ

ನವೀನ್ ಸೂರಿಂಜೆ., ಕರ್ನಾಟಕದ ಮದರಸ – ಕನ್ನಡ ಕಲಿಕೆ – ಕೋಮುವ್ಯಾದಿ ನುಸುಳುವಿಕೆ ಕುರಿತು ನಿಮ್ಮ ನೀಲುವನ್ನು ಬದಲಾವಣೆ ಮಾಡಿಕೊಳ್ಳಲು, ನೀವು ಇತ್ತೀಚೆಗೆ ಪ್ರಕಟಿಸಿದ ಎರಡು ಲೇಖನಗಳ ಎರಡು ಭಾಗಗಳಿಗೆ ನನ್ನ ಪ್ರಶ್ನೆ – ಪ್ರತಿಕ್ರಿಯೆಗಳು!

 ‘ಮದರಸಗಳಲ್ಲಿ ಕನ್ನಡ ಜಾರಿ’  ಸುತ್ತೋಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.

 ‘ವಿರೋಧ ಪ್ರಕಟವಾದ್ದರಿಂದ ಈ ವಿಷಯನ್ನು ಕೈ ಬಿಡಲಾಗಿದೆ’ ಕನ್ನಡ ಅಭಿವೃದ್ಧಿ ಪ್ರಾಧಿಕಾರ,  ಅಧ್ಯಕ್ಷರು, ಪುರುಷೋತ್ತಮ ಬಿಳಿಮಲೆ.

ಈ ಪ್ರಾಧಿಕಾರಕ್ಕೆ ಮನವಿಸಲ್ಲಿಸಿದ್ದು ಯಾರು? ಇದಕ್ಕೆ ವಿರೋಧವ್ಯಕ್ತ ಪಡಿಸಿದ್ದು ಯಾರು?

ನವೀನ್ ಸೂರಿಂಜೆ: ‘ಮದರಸದಲ್ಲಿ ಕನ್ನಡ ಜಾರಿ’ ಇದು ಸರ್ಕಾರವೊಂದು ಮಾಡಬೇಕಾದ ಆಧ್ಯತೆಯ ಕೆಲಸವಲ್ಲ. ಮದರಸ ಮಾತ್ರವಲ್ಲ, ಸಂಸ್ಕೃತ ವೇದ ಪಾಠ ಶಾಲೆ, ಕ್ರಿಶ್ಚಿಯನ್ನರ ಆರಾಧನೆ (Adoration) ಕೇಂದ್ರಗಳಲ್ಲೂ ಕನ್ನಡ ಕಡ್ಡಾಯ ಮಾಡುವುದು ಸರ್ಕಾರಿ ಪ್ರಾಧಿಕಾರದ ಕೆಲಸವಲ್ಲ.

ಖಾಸಿಂ ಸಾಬ್: ಮದರಸದಲ್ಲಿ, ಸಂಸ್ಕೃತ ವೇದ ಪಾಠ ಶಾಲೆ, ಕ್ರಿಶ್ಚಿಯನ್, ಬುದ್ಧಿಸ್ಟ್, ಪಾರ್ಸಿ, ಜೈನ್… ಇತರೆ ಧರ್ಮಗಳ ಆರಾಧನಾ ಧಾರ್ಮಿಕ ವಿದ್ಯಾಭ್ಯಾಸ ಕೇಂದ್ರಗಳಲ್ಲಿ ಕನ್ನಡ ಜಾರಿ ಏಕೆ ಆಗ ಬಾರದು?

ನವೀನ್ ಸೂರಿಂಜೆ: ಮುಸ್ಲೀಮರ ಮೇಲಿನ ಸಾವಿರಾರು ಆರೋಪಗಳಿಗೆ ಮದರಸ ಕಾರಣವಾಗಿರುವಂತೆ ಮುಸ್ಲೀಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸಾವೇ ಕಾರಣವಾಗಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಕಂಡಿದ್ದು ವಿಪರ್ಯಾಸ!

ಖಾಸಿಂ ಸಾಬ್: ಮುಸ್ಲೀಮರ ಮೇಲಿನ ಸಾವಿರಾರು ಆರೋಪಗಳಿಗೆ ಮದರಸಾ ಕಾರಣವಾಗಿದೆ ಎಂದು ಯಾವ ವರದಿಗಳು ಹೇಳಿವೆ? ಮುಸ್ಲೀಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸಾವೇ ಕಾರಣವಾಗಿ… ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರ ಯಾವಾಗ ಹೇಳಿದ್ದು , ಅದನ್ನು ಅಧಿಕೃತವಾಗಿ ಹೇಳಿದ್ದು ಯಾರು, ಯಾವ ಸರ್ಕಾರ, ಯಾವ ಆಯೋಗ, ಯಾವ ಸಮಿತಿ?

ನವೀನ್ ಸೂರಿಂಜೆ: ಕನ್ನಡ ಅಭಿವೃದ್ದಿ ಪ್ರಾಧಿಕಾರದ ಪುರುಷೋತ್ತಮ ಬಿಳಿಮಲೆಯವರು ಇಂದು ಮದರಸದೊಳಗೆ ಕಾಳಜಿಯಿಂದ ನುಗ್ಗಿ ಕೆಲಸ ಮಾಡುತ್ತಾರೆ ಎಂದಿಟ್ಟುಕೊಳ್ಳೊಣಾ. ಮುಂದೆ ಬರುವ ಬಿಜೆಪಿ ಸರ್ಕಾರಕ್ಕೆ ಇದು ರಹದಾರಿ ಆಗಿರುವುದಿಲ್ಲವೇ?

ಖಾಸಿಂ ಸಾಬ್: ನಿಮ್ಮ ಈ ಗುಮಾನಿ ‘ಮುಸ್ಲಿಮರ ಕಲ್ಯಾಣದ ಕುರಿತಾದ ಮುಸ್ಲಿಂ ಏತರ ಜಾತ್ಯತೀತ ಬುದ್ದಿಜೀವಿಗಳ’ ಗುಮಾನಿಯೆ ಆಗಿದೆ. ಇಂತಹ ಬುದ್ದಿಜೀವಿಗಳ ಗುಮಾನಿಗಳಿಂದ ಮುಸ್ಲಿಂ ಸಮುದಾಯಕ್ಕೆ ಆದ ಲಾಭಕ್ಕಿಂತ ನಷ್ಟವೇ ಹೆಚ್ಚು.

ನವೀನ್ ಸೂರಿಂಜೆ: ಉತ್ತರಾಖಂಡ ಸರ್ಕಾರ ಈಗಾಗಲೇ ಮದರಸಾದಲ್ಲಿ ಶ್ರೀರಾಮ ಕತೆ ಪಾಠ ಮಾಡಲು ವಕ್ಫ್ ಇಲಾಖೆಯ ಮೂಲಕ ಚಿಂತನೆ ನಡೆಸಿದೆ ಎಂಬ ಸುದ್ದಿ ಇದೆ. ಜನವರಿ 25, 2024 ರಂದು ಸುದ್ದಿಗೋಷ್ಠಿ ನಡೆಸಿರುವ ಉತ್ತರಾಖಂಡ ವಕ್ಫ್ ಅಧ್ಯಕ್ಷ ಶಾದಾಬ್ ಅವರು “ಮದರಸ ಆಧುನೀಕರಣ ಕಾರ್ಯಕ್ರಮದ ಭಾಗವಾಗಿ ಉತ್ತರಾಖಂಡ ವಕ್ಫ್ ಮಂಡಳಿಗೆ ಸಂಯೋಜಿತವಾಗಿರುವ ಮದರಸಗಳಿಗೆ ಭಗವಾನ್ ಶ್ರೀರಾಮನ ಅಧ್ಯಯನವನ್ನು ಹೊಸ ಪಠ್ಯಕ್ರಮದಲ್ಲಿ ಪರಿಚಯಿಸಲಾಗುವುದು” ಎಂದು ತಿಳಿಸಿದ್ದಾರೆ.

ಖಾಸಿಂ ಸಾಬ್: ಅಲ್ಲಿನ ರಾಜ್ಯ ಸರಕಾರ ಶ್ರೀರಾಮ ಕತೆ, ಹನುಮಾನ್ ಚಾಲೀಸಾ, ಸಂವಿಧಾನದ ಪೂರ್ವ ಪೀಠಿಕೆ, ಅಂಬೇಡ್ಕರ್ ಅವರ ಜೀವನ ಚರಿತ್ರೆ, ಟಿಪ್ಪುವಿನ ಹುತಾತ್ಮ ಕಥೆಗಳನ್ನು ಭೋದಿಸುತ್ತಿದೆಯೇ ಎಂಬುದು ಸಮಸ್ಯೆಯಲ್ಲ. ಅಲ್ಲಿ ಕಲಿತ ಮಕ್ಕಳಿಗೆ ಅವರು ಕಲಿಯುತ್ತಿರುರ ಅರೇಬಿಕ್ ಭಾಷೆಯಲ್ಲಿ ಆದುನಿಕ, ಕಾಂಪಿಟೇಟಿವ್ ವಿದ್ಯಾಭ್ಯಾಸದ ಜೊತೆಗೆ ನೇಟಿವ್ ಅಧಿಕೃತ ನಾಡ ಭಾಷೆ ಕಲಿಸಲಾಗುತ್ತಿದೆಯೇ ಎಂಬುದು ಮುಖ್ಯವಾಗಬೇಕು.

ನವೀನ್ ಸೂರಿಂಜೆ: ಕರ್ನಾಟಕ ಸರ್ಕಾರವೂ ಭವಿಷ್ಯದಲ್ಲಿ ಇಂತದ್ದೊಂದು ಕೃತ್ಯಕ್ಕೆ ಈಗಲೇ ಅಡಿಪಾಯ ಹಾಕಿಕೊಡುತ್ತದೆಯೇ?

ಖಾಸಿಂ ಸಾಬ್: ಇಲ್ಲಿ ಮುಖ್ಯವಾಗಬೇಕಾದದ್ದು ಕರ್ನಾಟಕದಲ್ಲಿ ಕೋಮುವಾದ ತಡೆಯುವ, ಅದು ನುಸುಳಲು ಅವಕಾಶವಿರುವ ಎಲ್ಲಾ ತೊರೆಗಳನ್ನು ಮುಚ್ಚುವ ಜವಾಬ್ದಾರಿ. ಅವಕಾಶಗಳಿಗಿಂತ, ಮದರಸಗಳಲ್ಲಿ ಓದಿ ಶಿಕ್ಷಣ / ಸರ್ಟಿಫಿಕೇಟ್ ಪಡೆದ ಮಕ್ಕಳ ಭವಿಷ್ಯ ಮುಖ್ಯವಾಗಬೇಕಿದೆ.

ನವೀನ್ ಸೂರಿಂಜೆ: ಮದರಸಾದಲ್ಲಿ ಕನ್ನಡ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಬಿಳಿಮಲೆ ಸಿದ್ದಗೊಳಿಸಿದ್ದಾರೆ?

ಖಾಸಿಂ ಸಾಬ್: ದಯವಿಟ್ಟು ಈ ನೀತಿಯ ಕರಡು ಪ್ರತಿಯನ್ನು ಬಹಿರಂಗ ಪಡಿಸಲಿ; ಇದರ ಆಗು-ಹೋಗುಗಳ ಕುರಿತು ಸಾರ್ವಜನಿಕ ಚರ್ಚೆಯಾಗಲಿ. ಪ್ರಮುಖವಾಗಿ ಮುಸ್ಲಿಂ ಏತರ ಜಾತ್ಯತೀತ ಬುದ್ದಿಜೀವಿಗಳು ಇದರಲ್ಲಿ ಹೆಚ್ಚು ಪಾತ್ರ ವಹಿಸುವುದು ಬೇಡ. ಒಟ್ಟಾರೆ ಸಮಗ್ರ ಮುಸ್ಲಿಂ ಸಮುದಾಯದ ನಡುವೆ ಚರ್ಚೆ, ಅಭಿಪ್ರಾಯಕ್ಕೆ ಬಿಡಿ.

ನವೀನ್ ಸೂರಿಂಜೆ: ನೀತಿಯ ಕರಡು ಪ್ರತಿಯ ಮದರಸ ಧಾರ್ಮಿಕ ಶಿಕ್ಷಣದಲ್ಲಿ ಕಡ್ಡಾಯ ಕಲಿಕೆ ಎನ್ನುವುದು ಸರ್ಕಾರಿ ನೀತಿಯಾದರೆ ಮುಂದೊಂದು ದಿನ ಬಿಜೆಪಿ ಸರ್ಕಾರ ಬಂದಾಗ ‘ಮದರಸಾ ಕೇಸರಿಕರಣದ ವಿರುದ್ದ ಹೋರಾಟ’ ಎಂದು ಮುಸ್ಲಿಂ ಮಕ್ಕಳು ಹೊಸ ಸಂಘರ್ಷ ಎದುರಿಸಲು ಸಿದ್ದರಾಗಬೇಕು.

ಖಾಸಿಂ ಸಾಬ್: ಹೊಸ ಸಂಘರ್ಷ ಹುಟ್ಟುತ್ತದೆ ಎಂಬ ಕಾರಣಕ್ಕೆ ಅವಕಾಶ, ಸವಲತ್ತು, ನ್ಯಾಯಗಳನ್ನು ಕಳೆದು ಕೊಳ್ಳಲು ಸಾಧ್ಯವಿಲ್ಲ. ಹೋರಾಟ ಮಾಡೋಣ ಇದನ್ನು ಎದುರಿಸಲು ನಿಮ್ಮಂತ ಜಾತ್ಯತೀತ ವ್ಯಕ್ತಿಗಳು ಹೇಗೂ ಇರುತ್ತಿರಿ.

ನವೀನ್ ಸೂರಿಂಜೆ: ಮುಸ್ಲೀಮರಿಗೆ ಕನ್ನಡ ಬರಲ್ಲ ಎನ್ನುವುದಕ್ಕೂ ಮದರಸಕ್ಕೂ ಏನು ಸಂಬಂಧ? ಕನ್ನಡ ಬಾರದೇ ಇರುವ ಮುಸ್ಲಿಮರು ಇದ್ದಾರೆ ಎಂದರೆ ಅದಕ್ಕೆ ಕಾರಣ ಶಿಕ್ಷಣದ ಕೊರತೆಯೇ ಹೊರತು ಮದರಸಾವಲ್ಲ. ಕನ್ನಡ ಬಾರದ ತುಳುವರೂ, ಹಿಂದೂಗಳೂ, ಕ್ರಿಶ್ಚಿಯನ್ನರೂ ಅಷ್ಟೇ ಸಂಖ್ಯೆಯಲ್ಲಿ ಇದ್ದಾರೆ. ಭಯೋತ್ಪಾದನೆ, ಹವಾಲ ಹಣ, ಲವ್ ಜಿಹಾದ್, ಆಯುಧ ಸಂಗ್ರಹ, ಕೋಮುಗಲಭೆ ಹೀಗೆ ಎಲ್ಲದಕ್ಕೂ ಮದರಸ ಕಾರಣ ಎಂಬ ಆರೋಪದ ಬಳಿಕ ಈಗ ಮುಸ್ಲಿಮರಿಗೆ ಕನ್ನಡ ಬರಲ್ಲ ಎಂಬ ಆರೋಪಕ್ಕೂ ಮದರಸವೇ ಕಾರಣ ಎಂದು ಪ್ರಾಧಿಕಾರ ಘೋಷಿಸಿದಂತಿದೆ.

ಖಾಸಿಂ ಸಾಬ್: ನಿಜಕ್ಕೂ ಇದನ್ನು ಪ್ರಧಿಕಾರ ಘೋಷಣೆ ಮಾಡಿದೆಯೇ…!?

ನವೀನ್ ಸೂರಿಂಜೆ: ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಅನಗತ್ಯ ಮೂಗು ತೂರಿಸಿ ರಾಡಿ ಎಬ್ಬಿಸಬಾರದು.

ಖಾಸಿಂ ಸಾಬ್: ಮದರಸ (.. ಅಥವಾ ಸಂಸ್ಕೃತ ವೇದ ಪಾಠ ಶಾಲೆ, ಕ್ರಿಶ್ಚಿಯನ್ ಧಾರ್ಮಿಕ ಪಾಠ ಶಾಲೆ) ಗಳ ಶೈಕ್ಷಣಿಕ ವ್ಯವಸ್ಥೆ, ವಿದ್ಯಾರ್ಥಿಗಳ ಭವಿಷ್ಯ, ಸ್ಕಿಲ್ ಡೆವಲಪ್ಮೆಂಟ್, ಮಾಡ್ರನ್ ಎಜುಕೇಶನ್ ಸಿಸ್ಟಮ್, ಕನ್ನಡ, ಇಂಗ್ಲಿಷ್ ಕಲಿಕೆ ಮುಂತಾದ ಮೂಲ ಭೂತ ವಿಶೇಷಗಳಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದರಲ್ಲಿ ತಪ್ಪೇನು.

ನವೀನ್ ಸೂರಿಂಜೆ: ಧಾರ್ಮಿಕ ಸಂಸ್ಥೆಗಳು ಸಂವಿಧಾನ ಬದ್ದವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳುವುದಷ್ಟೇ ಸರ್ಕಾರದ ಕೆಲಸವೇ ಹೊರತು ಅವರ ಮೂಲಭೂತ ಹಕ್ಕುಗಳನ್ನು ಕಸಿಯುವುದಲ್ಲ.

ಖಾಸಿಂ ಸಾಬ್: ಮದರಸ ಎಂಬುದು ಒಂದು ಸಂಪೂರ್ಣ ಧಾರ್ಮಿಕ ಸಂಸ್ಥೆಯಲ್ಲ; ಅದು ಧಾರ್ಮಿಕ ಸಂಸ್ಥೆಯ ಒಂದು ಭಾಗವಾದ ಕಲಿಕಾ ಅಂಗ. ಎಜುಕೇಶನಲ್ ವಿಂಗ್ ಅಷ್ಟೇ. ಮದರಸವೇ ಮುಸ್ಲಿಮರ ಎಲ್ಲವನ್ನೂ ತೀರ್ಮಾನಿಸುವ ಕೇಂದ್ರವಲ್ಲ. ಖಾತ್ರಿ – ಗ್ಯಾರಂಟಿ ಪಡಿಸಿಕೊಳ್ಳುವುದಷ್ಟೇ ಸರ್ಕಾರದ ಕೆಲಸವೇ… ಇವುಗಳ ಪ್ರಗತಿ – ಅಭಿವೃದ್ಧಿ – ಆದುನಿಕರಣಗಳು ಬೇಡವೇ. ಇದು ಸರ್ಕಾರದ ಹೊಣೆಗಾರಿಕೆ ಅಲ್ಲವೇ?

ನವೀನ್ ಸೂರಿಂಜೆ: ಸಂಸ್ಕೃತ ವೇದ ಪಾಠ ಶಾಲೆಯನ್ನು ಬಿಟ್ಟು ಮದರಸಾವನ್ನೇ ಗುರಿ ಮಾಡಿರುವ ಹಿಂದೆ ‘ಅವರು ಲೆಫ್ಟಿಸ್ಟ್, ಕಾಂಗ್ರೆಸ್ ಆದರೂ ಮುಸ್ಲೀಮರನ್ನೂ ಬಿಟ್ಟಿಲ್ಲ ಮಾರಾಯ್ರೆ’ ಎಂದು ಅನ್ನಿಸಿಕೊಳ್ಳುವ ಇರಾದೆಗಳು ಮುಸ್ಲೀಮರನ್ನು ಭವಿಷ್ಯದಲ್ಲಿ ಅಪಾಯಕ್ಕೆ ದೂಡುತ್ತದೆ.

ಖಾಸಿಂ ಸಾಬ್: ಕರ್ನಾಟಕ ರಾಜ್ಯ ಸರ್ಕಾರದ ಈ ನಿಲುವಿನಿಂದ ರಾಜ್ಯ ಮದರಸಗಳಿಗೆ ಯಾವುದೇ ಇರಾದೆಗಳು, ಗುಮಾನಿಗಳು ಇಲ್ಲ ಮಾರಾಯ್ರೆ.

ನವೀನ್ ಸೂರಿಂಜೆ: ಮದರಸಾಗಳು ಕನ್ನಡ ಸೇರಿದಂತೆ ಯಾವ ಭಾಷೆಯನ್ನಾದರೂ ಕಲಿಸಲಿ. ಪ್ರಾಧಿಕಾರಕ್ಕೆ ಆಸಕ್ತಿ ಇದ್ದರೆ ಅಂತಹ ಮದರಸಾಗಳಿಗೆ ಅನುದಾನ, ಪ್ರೋತ್ಸಾಹ, ಪ್ರಶಸ್ತಿ ನೀಡಲಿ. ಬದಲಾಗಿ, ಸರ್ಕಾರವೇ ನೀತಿಯ ಮೂಲಕವಾಗಿ ಮದರಸ ಪ್ರವೇಶ ಮಾಡುವುದು ಮುಸ್ಲೀಮರ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ.

ಖಾಸಿಂ ಸಾಬ್: ಇದು ಹೇಗೆ ಮುಸ್ಲಿಮರ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯೋ,..ಅರ್ಥವಾಗುತ್ತಿಲ್ಲ.

ಈ ಚರ್ಚೆಯ ಸಾರಾಂಶ: ಕರ್ನಾಟಕ ರಾಜ್ಯದಲ್ಲಿನ ಎಲ್ಲ ಮದರಸಗಳಲ್ಲಿ ಕನ್ನಡ ಕಲಿಕೆ ಜಾರಿಯಾಗಲಿ ಎಂಬುದಷ್ಟೇ ಆಗಿದೆ!

ಖಾಸಿಂ ಸಾಬ್ ಎ. ಬೆಂಗಳೂರು.

ರಾಜ್ಯ ಶಿಕ್ಷಣ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಜೀಂ ಪ್ರೇಮ್‌ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವಾರದಲ್ಲಿ ಉಚಿತ 6 ದಿನ ಪೂರಕ ಪೌಷ್ಠಿಕ ಆಹಾರ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಮಾನಸಿಕ ಆರೋಗ್ಯ ಮತ್ತು ಉತ್ತಮ‌ ಶಿಕ್ಷಣಕ್ಕೆ ಗುಣಮಟ್ಟದ ಆಹಾರ ಮುಖ್ಯ. ಉಪಹಾರ ಇಲ್ಲದೆ ಶಾಲೆಗೆ ಬಂದು, ಊಟ ಇಲ್ಲದೆ ಮಧ್ಯಾಹ್ನದವರೆಗೂ ಶಾಲೆಯಲ್ಲಿರುವ ಮಕ್ಕಳನ್ನು ನಾನು ನೋಡಿದ್ದೇನೆ. ಹೀಗಾಗಿ ವಾರದಲ್ಲಿ ಎರಡು ದಿನ ಊಟ ಮತ್ತು ಮೊಟ್ಟೆ ಕೊಡಲು ಮುಂದಾದೆವು. ಈಗ ಅಜೀಂ ಪ್ರೇಮ್‌ಜಿ ಫೌಂಡೇಷನ್ ಅವರು ವಾರದಲ್ಲಿ ನಾಲ್ಕು ದಿನ ಮಕ್ಕಳಿಗೆ ಮೊಟ್ಟೆ ನೀಡಲು ಮತ್ತು ಪೂರಕ ಪೌಷ್ಠಿಕ ಆಹಾರ ಒದಗಿಸುವ ಪುಣ್ಯದ ಕಾರ್ಯಕ್ಕೆ ಸರ್ಕಾರದ ಜೊತೆಗೆ ಕೈಜೋಡಿಸಿದ್ದಾರೆ. ಅವರಿಗೆ ಧನ್ಯವಾದಗಳು” ಎಂದು ಹೇಳಿದರು.

“ವೈಜ್ಞಾನಿಕವಾಗಿ, ವೈಚಾರಿಕವಾಗಿ ಮಕ್ಕಳು ವಿಕಾಸ ಹೊಂದಬೇಕು. ಆಗ ಮಾತ್ರ ಸಮಾಜಮುಖಿ ಆಗಲು ಸಾಧ್ಯ. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆಶಯ. ಈ ಕಾರಣಕ್ಕೆ ಸಮವಸ್ತ್ರ, ಶೂ, ಸಾಕ್ಸ್ ಕೊಡುವ ಜೊತೆಗೆ ಹೆಚ್ಚೆಚ್ಚು ವಸತಿ ಶಾಲೆಗಳನ್ನು ತೆರೆಯುತ್ತಿದ್ದೇವೆ” ಎಂದು ಹೇಳಿದರು.

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ವಿಪ್ರೋ ಮುಖ್ಯಸ್ಥರಾದ ಅಜೀಂ ಪ್ರೇಮ್ ಜಿ ದಂಪತಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಮೆಹರೂಜ್ ಖಾನ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.