ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Gulihatti Shekar Archives » Dynamic Leader
October 23, 2024
Home Posts tagged Gulihatti Shekar
ರಾಜಕೀಯ

ಡಿ.ಸಿ.ಪ್ರಕಾಶ್

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ‘ತಮ್ಮ ಕ್ಷೇತ್ರದಲ್ಲಿ ಕ್ರೈಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ’ ಎಂದು ವಿಧಾನಮಂಡಲ ಅಧಿವೇಶನದಲ್ಲಿ ಸಂಘಪರಿವಾರದ ತುತ್ತೂರಿಯಂತೆ ಮೊಳಗಿದರು. ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಬಿಜೆಪಿ ಸರ್ಕಾರಕ್ಕೆ ಅನುವುಮಾಡಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಮತಾಂತರ ನಿಷೇಧ ಕಾಯ್ದೆಯ ಪಿತಾಮಹ.

ಈಗ “ತಮಗೆ ಪರಿಶಿಷ್ಟ ಜಾತಿ ಎಂಬ ಕಾರಣಕ್ಕೆ ಮಹಾರಾಷ್ಟ್ರದ ನಾಗಪುರದ ಹೆಗಡೇವಾರ್ ಸ್ಮಾರಕ ಕಟ್ಟಡದಲ್ಲಿ ಪ್ರವೇಶ ನಿರಾಕರಿಸಲಾಯಿತು” ಎಂದು ಆರೋಪಿಸಿ ಸಂಚಲನ ಮೂಡಿಸಿದ್ದಾರೆ. ಇದರ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರಿಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಅವರು, “ಇದೊಂದು ನಿರಾಧಾರ ಹಾಗೂ ಹುರುಳಿಲ್ಲದ ಆರೋಪ” ಎಂದು ಹೇಳಿದ್ದಾರೆ.

“ರಾಜ್ಯ ವಿಧಾನಸಭೆ ಚುನಾವಣೆಗೆ 4 ತಿಂಗಳ ಮೊದಲು ಈ ಘಟನೆ ನಡೆದಿತ್ತು ಎನ್ನುವ ಗೂಳಿಹಟ್ಟಿ ಶೇಖರ್ ಅವರು, ಆ ನಂತರ ಸಂಘದ ಅನೇಕ ಪ್ರಮುಖರನ್ನು ಭೇಟಿಯಾದರೂ ಎಲ್ಲಿಯೂ ತಮಗಾದ ಈ ಅವಮಾನದ ಬಗ್ಗೆ ಹೇಳಿರಲಿಲ್ಲ. ಹತ್ತು ತಿಂಗಳ ನಂತರ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರ” ಎಂದು ವಿವರಣೆ ನೀಡಿದ್ದಾರೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರು, ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿ ರಾಜಕೀಯ ಮೀಸಲಾತಿ ಕಲ್ಪಿಸಿಕೊಟ್ಟರು. ಅದರ ಪರಿಣಾಮದಿಂದಲೇ ಇವರೆಲ್ಲರು ಶಾಸಕರು, ಸಚಿವರುಗಳು ಆಗಿದ್ದಾರೆ. ಅಂಬೇಡ್ಕರ್ ಅವರು ಶೋಷಿತರನ್ನು ಬಡಿದೆಬ್ಬಿಸಿ ಸ್ವಾಭೀಮಾನದ ಉಣಬಡಿಸಿದರೆ, ಇವರೆಲ್ಲ ನವ ಬ್ರಾಹ್ಮಣರಾಗಿ ಎಲ್ಲರಿಗೂ ಕುಂಕುಮ, ನಾಮ ಹಚ್ಚಿದರು.   

ಮೇಲ್ಜಾತಿಗಳ ದೌರ್ಜನ್ಯಕ್ಕೆ ಹೆದರಿಯೇ ನಮ್ಮ ಪೂರ್ವಜರು ಮತ್ತು ನಮ್ಮ ತಲಮಾರಿನ ಶೋಷಿತರು ತಮಗಿಷ್ಟವಾದ ಕ್ರೈಸ್ತ, ಇಸ್ಲಾಂ ಮತ್ತು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಆದರೆ, ಶಾಸಕರಾಗಿದ್ದ ಗೂಳಿಹಟ್ಟಿ ಶೇಖರ್ ಅವರು ಸಂಘಪರಿವಾರದ ಕಾರ್ಯಕರ್ತರೊಂದಿಗೆ ಸೇರಿಕೊಂಡು ಮೂಲನಿವಾಸಿಗಳಾದ ದಲಿತ ಆದಿವಾಸಿ ಬುಡಕಟ್ಟು ಸಮುದಾಯದ ಜನರನ್ನು ಬೆದರಿಸಿ ಹಿಂದೂ ಧರ್ಮದಲ್ಲೇ ಇರಿಸಿಕೊಂಡರು. ಅದರ ಪರಿಣಾಮವನ್ನು ಇಂದು ಅನುಭವಿಸುತ್ತಿದ್ದಾರೆ.

ಗೂಳಿಹಟ್ಟಿ ಶೇಖರ್ ಅವರು ಬಿಜೆಪಿಯಲ್ಲಿದ್ದಾಗ ಹಿಂದುತ್ವಾವನ್ನು ಹಚ್ಚಿಕೊಂಡು ಕ್ರೈಸ್ತರ ವಿರುದ್ಧ ಕುತಂತ್ರ ಮಾಡಿದರು. ಈಗ ಆರ್‌ಎಸ್‌ಎಸ್ ಪರಿವಾರದವರು ಅಪಮಾನಗೊಳಿಸಿ ಹೊರಹಾಕಿದ ಮೇಲೆ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಅಪ್ರಾಮಾಣಿಕ ರಾಜಕಾರಣಿಗಳಿಂದ ಸಮುದಾಯಕ್ಕೆ ಏನೂ ಪ್ರಯೋಜನವಿಲ್ಲ. ಆದ್ದರಿಂದ ರಾಜಕೀಯ ಪಕ್ಷಗಳು ಅವರಿಂದ ದೂರವಿರುವುದೇ ಲೇಸು.