ಡಿ.ಸಿ.ಪ್ರಕಾಶ್
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ (IPL) ಟ್ರೋಫಿ ಗೆದ್ದಿದ್ದು, ಆ ಮೂಲಕ ಕೋಟ್ಯಾಂತರ ಆರ್ಸಿಬಿ (RCB) ಅಭಿಮಾನಿಗಳ ಕನಸನ್ನು ನನಸು ಮಾಡಿದೆ.
ಐಪಿಎಲ್ 2025ರ ಟೂರ್ನಿಯಲ್ಲಿ ಚಾಂಪಿಯನ್ ಆದ ಬಳಿಕ ಇಂದು ಬೆಂಗಳೂರಿನಲ್ಲಿ ನಡೆದ RCB ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 33 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಲ್ತುಳಿತ ದುರಂತದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ವಿಧಾನಸೌಧದ ಬಳಿ ಯಾವುದೇ ದುರಂತ ಸಂಭವಿಸಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ದುರಂತ ಸಂಭವಿಸಿದೆ. ಇಂತಹ ದೊಡ್ಡ ದುರಂತ ಸಂಭವಿಸಬಾರದಿತ್ತು. ಇದರಿಂದ ತುಂಬ ದುಃಖವಾಗುತ್ತಿದೆ” ಎಂದು ಹೇಳಿದರು.
“35 ಸಾವಿರ ಜನ ಕುಳಿತುಕೊಳ್ಳುವ ಸಾಮರ್ಥ್ಯವಿರುವ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸುಮಾರು ಎರಡು, ಮೂರು ಲಕ್ಷ ಅಭಿಮಾನಿಗಳು ಏಕಾ ಏಕಿ ಜಮಾಯಿಸಿದ ಕಾರಣದಿಂದ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿದೆ. ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇದರಲ್ಲಿ 11 ಜನ ಸಾವನ್ನಪ್ಪಿದ್ದಾರೆ. 33 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂಬ ಮಾಹಿತಿಯನ್ನು ನೀಡಿದರು.
“ಮೃತರೆಲ್ಲರೂ ಯುವಕರು ಮತ್ತು ಯುವತಿಯರಾಗಿರುವುದರಿಂದ ಅವರೆಲ್ಲರಿಗೂ ತಲಾ 10 ಲಕ್ಷ ರೂ.ಗಳು ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ವೆಚ್ಚೆಗಳನ್ನು ಸರ್ಕಾರವೇ ಭರಿಸಲಿದೆ. ಈ ಸಂಭ್ರಮಾಚರಣೆಗೆ ಬಂದೋಬಸ್ತ್ ನೀಡುವುದಷ್ಟೇ ನಮ್ಮ ಕೆಲಸವಾಗಿತ್ತು. ಈ ದುರ್ಘಟನೆಯ ಹೊಣೆಯನ್ನು ಕ್ರಿಕೆಟ್ ಅಸೋಸಿಯೇಷನ್ ಅವರೇ ಹೊರಬೇಕು” ಎಂದ ಅವರು, “ಈ ದುರ್ಘಟನೆಗೆ ಕಾರಣರಾದವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ಏರ್ಪಡಿಸಲಾಗಿದೆ” ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ, ವಿರೋಧಪಕ್ಷವಾದ ಬಿಜೆಪಿ ಈ ದುರಂತ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಂಡು ಸರ್ಕಾರವನ್ನು ನಿಂದಿಸುತ್ತಿರುವುದು ನಾಚಿಕೆಗೇಡು. ಎಂದಿನಂತೆ ಸಾವಿನ ಮೇಲೆ ರಾಜಕಾರಣ ಮಾಡುವ ಬಿಜೆಪಿ ನಾಯಕರಿಗೆ ಇದು ಶೋಭೆ ತರುವುದಿಲ್ಲ. ಈ ವಿಚಾರದಲ್ಲಿ ಸರ್ಕಾರವನ್ನು ನಿಂದಿಸುವುದನ್ನು ಬಿಟ್ಟು, ಅಂದ ಕ್ರಿಕೆಟ್ ಅಭಿಮಾನಿಗಳಿಗೆ ಬುದ್ಧಿವಾದ ಹೇಳುವ ಮೂಲಕ ವಿರೋಧಪಕ್ಷಗಳು ಜವಾಬ್ದಾರಿಯಿಂದ ವರ್ತಿಸುವ ಕೆಲಸವನ್ನು ಮಾಡಬೇಕು.
ಅಭಿಮಾನಿಗಳು ಆಟವನ್ನು ಆಟದಂತೆ ನೋಡಬೇಕೆ ವಿನಃ ಹುಚ್ಚರಂತೆ ವರ್ತಿಸಿಬಾರದು. ಈ ಘಟನೆಯಿಂದ ಎಲ್ಲರಿಗೂ ನೋವಾಗಿದೆ. ಅಭಿಮಾನ ಎಂಬುದು ಬೇರೆ, ಶಿಸ್ತು ಎಂಬುದು ಬೇರೆ. ಕ್ರೀಡಾಭಿಮಾನಿಗಳು ಯಾವಾಗಲೂ ಶಿಸ್ತುಬದ್ಧವಾಗಿರಬೇಕು. ಈ ದುರಂತಕ್ಕೆ ಯಾರೂ ಹೊಣೆಯಲ್ಲ. ಆರ್ಸಿಬಿ ಕ್ರಿಕೆಟ್ ಅಭಿಮಾನಿಗಳಿಗಳ ಅಂಧ ಭಕ್ತಿ ಮತ್ತು ಅಶಿಸ್ತುವೇ ಕಾರಣ.