ಬೆಂಗಳೂರು: “ಒನ್ ನೇಶನ್, ಒನ್ ಲಾಂಗ್ವೇಜ್” ಎಂಬ ಅಜೆಂಡಾ ಇದೆಯೇ? ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿ ಸಂಸದರು ಸ್ಪಷ್ಟಪಡಿಸಬೇಕು ಎಂದು ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
“ಬದುಕಿಗೆ, ಉದ್ಯೋಗಕ್ಕೆ, ಜ್ಞಾನಾರ್ಜನೆಗೆ ಬೇಕಿರುವ ಮತ್ತು ವ್ಯಾಪಕ ಬಳಕೆಯಲ್ಲಿರುವ ಶಾಸ್ತ್ರೀಯ ಭಾಷೆ ಹಾಗೂ ಪುರಾತನ ಭಾಷೆಯಾದ ಕನ್ನಡಕ್ಕೆ ಚಿಲ್ಲರೆ ಹಣವನ್ನು ನೀಡುವ ಮೂಲಕ ಕನ್ನಡವನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ” ಎಂದು ಹೇಳಿದ್ದಾರೆ.
“ಕಳೆದ 11 ವರ್ಷಗಳಲ್ಲಿ, ಕೇಂದ್ರ ಸರ್ಕಾರವು ಸಂಸ್ಕೃತವನ್ನು ಉತ್ತೇಜಿಸಲು ಮಾಡಿದ ಖರ್ಚು ರೂ.2,532 ಕೋಟಿ! ಹಾಗೆಯೇ, ಹಿಂದಿಗೆ ರೂ.427 ಕೋಟಿ, ತಮಿಳಿಗೆ ರೂ.113 ಕೋಟಿ, ಕನ್ನಡಕ್ಕೆ ರೂ.12 ಕೋಟಿ, ತೆಲುಗಿಗೆ ರೂ.12 ಕೋಟಿ, ಒಡಿಯಾ ಮತ್ತು ಮಲಯಾಳಂಗೆ ತಲಾ ರೂ.4.5 ಕೋಟಿ. ಜನರ ದೈನಂದಿನ ಬದುಕಿನಲ್ಲಿ ಬಳಕೆಯಲ್ಲಿ ಇಲ್ಲದ, ಬದುಕು ರೂಪಿಸಿಕೊಳ್ಳಲು ಸಾಧ್ಯವಾಗದ ಸಂಸ್ಕೃತ ಭಾಷೆಗೆ ಕೊಟ್ಟಷ್ಟು ಮನ್ನಣೆ ಕನ್ನಡಕ್ಕೆ ಏಕಿಲ್ಲ”? ಎಂದು ಕೇಂದ್ರ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
“ಎನ್ಡಿಎ ಸರ್ಕಾರವು ಕರ್ನಾಟಕದಿಂದ 19 ಲೋಕಸಭಾ ಸದಸ್ಯರನ್ನು ಮತ್ತು 7 ರಾಜ್ಯಸಭಾ ಸದಸ್ಯರನ್ನು ಹೊಂದಿದ್ದರೂ, ಕನ್ನಡಕ್ಕೆ ಇಂತಹ ತಿರಸ್ಕಾರ ತೋರಿದ್ದೇಕೆ? ಕರ್ನಾಟಕದ ಸಂಸದರು ಈ ಬಗ್ಗೆ ಪ್ರತಿರೋಧ ತೋರದಿರುವುದೇಕೆ? ಕನ್ನಡ, ಕರ್ನಾಟಕ, ಕನ್ನಡಿಗರ ಬಗೆಗಿನ ಕಾಳಜಿಗಿಂತ ತಮ್ಮ ರಾಜಕೀಯ ಹಿತಾಸಕ್ತಿಯೇ ಮುಖ್ಯವಾಯಿತೇ”? ಎಂದು ಕಿಡಿಕಾರಿದ್ದಾರೆ.
“ಅನುಪಯುಕ್ತ ಭಾಷೆಯಾದ ಸಂಸ್ಕೃತಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಿದ ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿಸಬಲ್ಲ, ಆರ್ಥಿಕತೆಗೆ ಕೊಡುಗೆ ನೀಡಬಲ್ಲ ಸ್ಟಾರ್ಟ್ಅಪ್ಗಳಿಗೆ, ಸ್ಟಾರ್ಟ್ಅಪ್ ಇಂಡಿಯಾದಡಿಯಲ್ಲಿ ನೀಡಿದ ಅನುದಾನ ಕೇವಲ ರೂ.454 ಕೋಟಿ ಮಾತ್ರ. ಯುವ ಸಮುದಾಯದ ಭವಿಷ್ಯ ಕೇಂದ್ರ ಸರ್ಕಾರದ ಆದ್ಯತೆಯಾಗಿರದಿರುವುದು ದೇಶದ ದುರಂತ” ಎಂದಿದ್ದಾರೆ.
“ಸಂಸ್ಕೃತದ ಉತ್ತೇಜನಕ್ಕೆ ನೀಡಿದ ಬಜೆಟ್ನಲ್ಲಿ ಅರ್ಧದಷ್ಟಾದರೂ ನಮ್ಮ ಯುವಕರನ್ನು ಕೌಶಲ್ಯಭರಿತರನ್ನಾಗಿಸಲು, ಉದ್ಯೋಗಸ್ಥರನ್ನಾಗಿಸಲು ಹಾಗೂ ನವೋಧ್ಯಮಗಳನ್ನು ಪ್ರೋತ್ಸಾಹಿಸಲು ವಿನಿಯೋಗಿಸಿದ್ದರೆ ಭಾರತದ ಭವಿಷ್ಯ ಬೆಳಗುತ್ತಿತ್ತು. ಆದರೆ ಬಿಜೆಪಿಗೆ ಯುವಜನರ ಹಿತ ಬೇಕಿಲ್ಲ; ರಾಜ್ಯದ ಬಿಜೆಪಿ ನಾಯಕರಿಗೆ ಕನ್ನಡದ ಹಿತ ಅಗತ್ಯವಿಲ್ಲ” ಎಂದು ಅಸಮಾಧಾನ ಹೊರಹಾಕಿದ್ದಾರೆ.