ಪ್ರಾಜ್ಞರಾದ ಬೊಮ್ಮಾಯಿಯವರು ಬಿಜೆಪಿಯ ಟೂಲ್‌ಕಿಟ್‌ನ ಭಾಗವಾಗಬಾರದು! » Dynamic Leader
October 21, 2024
ರಾಜಕೀಯ

ಪ್ರಾಜ್ಞರಾದ ಬೊಮ್ಮಾಯಿಯವರು ಬಿಜೆಪಿಯ ಟೂಲ್‌ಕಿಟ್‌ನ ಭಾಗವಾಗಬಾರದು!

ಉಡುಪಿ ವೀಡಿಯೊ ಪ್ರಕರಣವನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ವೀಡಿಯೊ ಹರಿದಾಡಿಲ್ಲ. ಹರಿದಾಡುತ್ತಿರುವ ವೀಡಿಯೊ ಕೂಡ ನಕಲಿ. ಪೊಲೀಸರು ವಿದ್ಯಾರ್ಥಿನಿಯರ ಮೊಬೈಲ್ ರಿಟ್ರೀವ್ ಮಾಡಿದ್ದಾರೆ. ಅಲ್ಲಿ ಯಾವುದೇ ವೀಡಿಯೊಗಳಿಲ್ಲ. ಮತ್ಯಾಕೆ ಈ ರಾದ್ಧಾಂತ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಪ್ರಶ್ನಿಸಿದ್ದಾರೆ.

ಬೊಮ್ಮಾಯಿ, ಸೇರಿದಂತೆ ರಾಜ್ಯ ಬಿಜೆಪಿ ನಾಯಕರು, ಉಡುಪಿ ಪ್ರಕರಣದಲ್ಲಿ ಇಲಿ ಹೋಗಿದನ್ನೇ ಹುಲಿ ಹೋದಂತೆ ಬಿಂಬಿಸುತ್ತಿದ್ದಾರೆ. ಬೊಮ್ಮಾಯಿಯವರಿಗೊಂದು ಪ್ರಶ್ನೆ. ಉಡುಪಿ ಪ್ರಕರಣದಲ್ಲಿ ಇಷ್ಟು ಬಟ್ಟೆ ಹರಿದುಕೊಳ್ಳುತ್ತಿರುವ ನೀವು, ಪ್ರತೀಕ್ ಗೌಡ ಎಂಬ ತೀರ್ಥಹಳ್ಳಿಯ ಎಬಿವಿಪಿ ಘಟಕದ ಅಧ್ಯಕ್ಷ ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಬಿಟ್ಟಾಗ ಎಲ್ಲಿದ್ದಿರೀ?

ಪ್ರತೀಕ್ ಗೌಡ ಎಂಬ ಎಬಿವಿಪಿ ಯವನೊಬ್ಬ ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಹರಿಬಿಟ್ಟಾಗ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರ ನವರಂದ್ರಗಳೂ ಬಂದ್ ಆಗಿತ್ತು. ಈಗ ಧರ್ಮರಕ್ಷಕರ ಮುಖವಾಡ ತೊಟ್ಟು ಅಖಾಡಕ್ಕಿಳಿದಿದ್ದಾರೆ‌. ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಹರಿಬಿಟ್ಟ ‘ಪ್ರತೀಕ್’ನ ಸ್ಥಾನದಲ್ಲಿ ‘ಅತೀಕ್’ ಇದ್ದರೆ ಮಾತ್ರ ಇವರ ಹೋರಾಟವೇ?

ಬೊಮ್ಮಾಯಿಯವರೇ, ಪೊಲೀಸರು ನಿಮ್ಮ ಆಡಳಿತದಲ್ಲಿ ರಾಜಕೀಯದ ಒತ್ತಡಕ್ಕೆ ಮಣಿದಿರಬಹುದು. ಆದರೆ ನಾವು ಪೋಲಿಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಹರಿಬಿಟ್ಟ ಪ್ರತೀಕ್ ಗೌಡ ಎಂಬಾತನನ್ನು ನಮ್ಮ ಪೊಲೀಸರು ಒದ್ದು ಒಳಗಾಕ್ಕಿದ್ದಾರೆ. ಬಹುಶಃ ಧರ್ಮ ರಕ್ಷಣೆಯ ಗ್ರಾಫ್ ನಿಮಗಿಂತ ನಮ್ಮದ್ದೇ ಜಾಸ್ತಿ ಇದೆಯಲ್ಲವೇ?

ಪ್ರಾಜ್ಞರಾದ ಬೊಮ್ಮಾಯಿಯವರು ಬಿಜೆಪಿಯ ಟೂಲ್‌ಕಿಟ್‌ನ ಭಾಗವಾಗಬಾರದು. ಉಡುಪಿ ಪ್ರಕರಣ ವಯೋಸಹಜ ಚೇಷ್ಟೆ ಮತ್ತು ಹುಡುಗಾಟ ಎಂದು ಬೊಮ್ಮಾಯಿಯವರಿಗೂ ಕೂಡ ತಿಳಿದಿದೆ. ಆದರೂ ಪಾಪ ಬಿಜೆಪಿಯಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಬೊಮ್ಮಾಯಿಯವರು ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಕುತೂಹಲವೆಂದರೆ ಸಿಎಂ ಆದವರು ವಿಪಕ್ಷ ಸ್ಥಾನ ಪಡೆಯಲು ಇಷ್ಟೆಲ್ಲಾ ಮಾಡಬೇಕೆ? ಎಂದು ಟೀಕಿಸಿದ್ದಾರೆ

Related Posts