Ayahuasca: ಭಾರತದಲ್ಲಿ ಆಧ್ಯಾತ್ಮಿಕ ಭಾವಪರವಶತೆಯ ಹೆಸರಿನಲ್ಲಿ ಅಯಾಹುವಾಸ್ಕಾ ಡ್ರಗ್ಸ್ ಉತ್ಸವಗಳು! » Dynamic Leader
October 22, 2024
ಕ್ರೈಂ ರಿಪೋರ್ಟ್ಸ್

Ayahuasca: ಭಾರತದಲ್ಲಿ ಆಧ್ಯಾತ್ಮಿಕ ಭಾವಪರವಶತೆಯ ಹೆಸರಿನಲ್ಲಿ ಅಯಾಹುವಾಸ್ಕಾ ಡ್ರಗ್ಸ್ ಉತ್ಸವಗಳು!

ಡಿ.ಸಿ.ಪ್ರಕಾಶ್

ಅಯಾಹುವಾಸ್ಕಾ ಎಂಬುದು ಆಧ್ಯಾತ್ಮಿಕ ಭಾವಪರವಶತೆಯ ಹಬ್ಬವಾಗಿ ಪ್ರಪಂಚದಾದ್ಯಂತ ಕಂಡುಬರುವ ಒಂದು ಘಟನೆಯಾಗಿದೆ. ಅಯಾಹುವಾಸ್ಕಾ ಹಬ್ಬವು ಅಮೆಜಾನ್ ಕಾಡು ಮತ್ತು ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಸ್ಥಳೀಯ ಸಂಸ್ಕೃತಿಯೊಂದಿಗೆ ಸಂಬಂಧಿಸಿದ ಹಬ್ಬವಾಗಿದೆ.

ಅಯಾಹುವಾಸ್ಕಾ ಮೂಲಿಕೆಯಿಂದ ಮಾಡಿದ ಕಷಾಯ ತರಹದ ಪಾನೀಯವಾಗಿದೆ. ಮಾನಸಿಕ ಕಾಯಿಲೆಗಳನ್ನು ಗುಣಪಡಿಸಲು ಮತ್ತು ಆಧ್ಯಾತ್ಮಿಕ ಭಾವಪರವಶತೆಯನ್ನು ಉಂಟುಮಾಡಲು ಇದನ್ನು ಬಳಸಲಾಗುತ್ತಿದೆ. ಆದರೆ ಈಗ ಅದೊಂದು ವ್ಯಸನಕಾರಿ ವಸ್ತುವಾಗಿ ಬದಲಾಗಿರುವುದು ದುರಾದೃಷ್ಟ.

ಮನಸ್ಸಿನಲ್ಲಿ ಭ್ರಮೆಯನ್ನು ಉಂಟುಮಾಡುವ ಅಯಾಹುವಾಸ್ಕಾದ ಬಳಕೆಯನ್ನು ಭಾರತದಲ್ಲಿ ಮಾದಕ ದ್ರವ್ಯ ನಿಗ್ರಹ (NDPS Act) ಕಾಯ್ದೆಯಡಿ ನಿಷೇಧಿಸಲಾಗಿದೆ. ಆದರೂ ನಿಷೇಧವನ್ನು ಉಲ್ಲಂಘಿಸಿ ಈ ಮಾದಕ ದ್ರವ್ಯ (Narcotics) ಗಿಡಮೂಲಿಕೆ ಉತ್ಸವ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿ ಇಲ್ಲಿ ಸದ್ದು ಮಾಡುತ್ತಿದೆ.

ಜೂನ್ 15 ರಿಂದ 2 ದಿನಗಳ ಕಾಲ ಆಧ್ಯಾತ್ಮಿಕ ಭೂಮಿಯೆಂದು ಕರೆಯಲ್ಪಡುವ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಬಗ್ಗೆ ದೊರೆತ ಗುಪ್ತ ಮಾಹಿತಿ ಮೇರೆಗೆ ಕೇಂದ್ರ ಮಾದಕ ವಸ್ತು ನಿಯಂತ್ರಣ ದಳ, ವಿಶೇಷ ಪಡೆ ರಚಿಸಿ ಶೋಧ ನಡೆಸಿದೆ. ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ರಷ್ಯಾದ ಒಬ್ಬ ಪುರುಷ ಮತ್ತು ಮಹಿಳೆಯನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಅವರು ನೀಡಿದ ಹೇಳಿಕೆಗಳು ಅಧಿಕಾರಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ.

ಆಧ್ಯಾತ್ಮಿಕತೆ ಮತ್ತು ಪ್ರವಾಸೋದ್ಯಮದಲ್ಲಿ ಉತ್ಕೃಷ್ಟವಾಗಿರುವ ಮನಾಲಿಯ ರಿಷಿಕೇಶದಲ್ಲಿ ಅಯಾಹುವಾಸ್ಕಾ ಉತ್ಸವವನ್ನು ಆಯೋಜಿಸಲಾಗಿದ್ದು, ಅದರ ಯಶಸ್ಸನ್ನು ಆಚರಿಸಲು ಅವರು ತಿರುವಣ್ಣಾಮಲೈಗೆ ಬಂದಿದ್ದಾರೆ. 20 ರಿಂದ 35 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಅವರ ಗುರಿಯಾಗಿದ್ದಾರೆ. ಅಯಾಹುವಾಸ್ಕಾ ಕಷಾಯವನ್ನು ಕುಡಿದು, ದೇಹದಲ್ಲಿ ಸಣ್ಣ ರಂಧ್ರವನ್ನು ಏರ್ಪಡಿಸಿ, ಕಪ್ಪೆ ವಿಷವನ್ನು ಚುಚ್ಚುವುದರ ಮೂಲಕ ಅಮಲನ್ನು ಉಂಟು ಮಾಡುತ್ತಾರೆ.

ಅಮಲು ಉತ್ತುಂಗಕ್ಕೇರಿದಾಗ ಅಲ್ಲಿ ಅನಿಯಂತ್ರಿತ ಅತಿಕ್ರಮಣಗಳು ಮತ್ತು ಅಶ್ಲೀಲತೆಯನ್ನು ಪ್ರದರ್ಶಿಸಲಾಗುತ್ತದೆ. ಈ ಭ್ರಮೆಯು ಸುಮಾರು 6 ಗಂಟೆಗಳವರೆಗೆ ಇರುತ್ತದೆ. ಇದಕ್ಕಾಗಿ ಒಬ್ಬ ವ್ಯಕ್ತಿಗೆ ಒಂದು ಸಾವಿರ ಡಾಲರ್ ವರೆಗೆ ಅಂದರೆ ಭಾರತೀಯ ಕರೆನ್ಸಿಯಲ್ಲಿ 80 ಸಾವಿರ ರೂಪಾಯಿಗೂ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಬಂಧಿತ ರಷ್ಯನ್ನರಿಂದ ಅಯಾಹುವಾಸ್ಕಾ ಹೊರತುಪಡಿಸಿ, ಮ್ಯಾಜಿಕ್ ಅಣಬೆಗಳು ಮತ್ತು ಕಂಬೋ ಎಂದು ಕರೆಯಲ್ಪಡುವ ಕಪ್ಪೆ ವಿಷವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಅವರ ಬಳಿ 239 ಗ್ರಾಂ ಸೈಲೋಸಿಬಿನ್, ಟಿಎಂಡಿಯಂತಹ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ರಾಸಾಯನಿಕವಿರುವುದು ಪತ್ತೆಯಾಗಿದೆ. ತಮಿಳುನಾಡಿನ ಇತರ ಯಾವ ಪ್ರದೇಶಗಳಲ್ಲಿ ಇದೇ ರೀತಿಯ ಗಿಡಮೂಲಿಕೆ ಉತ್ಸವಗಳನ್ನು ನಡೆಸಲು ಯೋಜಿಸಲಾಗಿದೆ ಮತ್ತು ಯಾರೆಲ್ಲ ಭಾಗಿಯಾಗಿದ್ದಾರೆ ಎಂದು ಮಾದಕ ದ್ರವ್ಯ ನಿಗ್ರಹ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಭಾರತದಲ್ಲಿ ಅಧ್ಯಾತ್ಮದ ಹೆಸರಲ್ಲಿ ಇಂತಹ ಮಾನಸಿಕ ಗೊಂದಲ ಉಂಟು ಮಾಡುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.

Related Posts