ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ 2022 ಮತ್ತು 2023ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಹಾಗೂ 2023ರ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
“ಉತ್ತಮ ತರಬೇತಿ, ತರಬೇತುದಾರರು ಹಾಗೂ ಸೌಲಭ್ಯಗಳಿದ್ದರೆ ಒಲಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವುದು ಕಷ್ಟವೇನಲ್ಲ. ಕ್ರೀಡಾಪಟುಗಳು ತಮ್ಮ ಗುರಿಸಾಧನೆಗೆ ಹಗಲಿರುಳು ಶ್ರಮಿಸಬೇಕು. ಏಳು ಕೋಟಿ ಕನ್ನಡಿಗರಿರುವ ಕರ್ನಾಟಕದಿಂದ ಪದಕ ಗೆಲ್ಲುವುದು ಅಸಾಧ್ಯವೇನಲ್ಲ” ಎಂದು ಹೇಳಿದರು.
“ಕ್ರೀಡೆಗಳ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಒಲಂಪಿಕ್ಸ್ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ. ನಗದು ಬಹುಮಾನ, ಶ್ರೇಣಿ 1 ಅಥವಾ 2ರಲ್ಲಿ ಸರ್ಕಾರಿ ಉದ್ಯೋಗ, ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂ., ಕಂಚು ಪದಕ ವಿಜೇತರಿಗೆ 3 ಕೋಟಿ ರೂ. ನಗದು ಬಹುಮಾನ ನೀಡಲಾಗುತ್ತಿದೆ” ಎಂದು ಹೇಳಿದರು.
“ಎರಡು ಸಾಲಿನ ಏಕಲವ್ಯ ಪ್ರಶಸ್ತಿಗಳನ್ನು ಒಟ್ಟು 30 ಜನರಿಗೆ ನೀಡಲಾಗಿದ್ದು, 4 ಲಕ್ಷಗಳ ನಗದು ಬಹುಮಾನವನ್ನು ಪ್ರಶಸ್ತಿ ಒಳಗೊಂಡಿದೆ. ನಗದು ಬಹುಮಾನದ ಮೊತ್ತವನ್ನು ನನ್ನ ಅವಧಿಯಲ್ಲಿಯೇ ಹೆಚ್ಚಿಸಲಾಗಿದೆ. ಮುಂದಿನ ವರ್ಷದಿಂದ ಆಯಾ ವರ್ಷದ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉತ್ತಮ ಕ್ರೀಡಾಪಟುಗಳನ್ನು ರಾಜ್ಯಕ್ಕೆ ನೀಡುವ ತರಬೇತುದಾರರಿಗೆ ಒಟ್ಟು 9 ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದ್ದು, 3 ಲಕ್ಷ ರೂ.ಗಳ ನಗದು ಬಹುಮಾನವನ್ನು ಒಳಗೊಂಡಿದೆ” ಎಂದರು.
“ಗ್ರಾಮೀಣ ಮತ್ತು ಪಾರಂಪರಿಕ ಕ್ರೀಡೆಗಳ ಸಾಧಕರನ್ನು ಗುರುತಿಸಿ ಒಟ್ಟು 15 ಕ್ರೀಡಾರತ್ನ ಪ್ರಶಸ್ತಿಗಳನ್ನು ನೀಡಲಾಗಿದ್ದು, ರೂ.2 ಲಕ್ಷಗಳ ನಗದು ಬಹುಮಾನವನ್ನು ಒಳಗೊಂಡಿದೆ. ರಾಜ್ಯದ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಖಾಸಗಿ ಕ್ಷೇತ್ರದ ಸಂಸ್ಥಗಳನ್ನು ಗೌರವಿಸಲು ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಯನ್ನು ನೀಡಲಾಗಿದೆ” ಎಂದು ಹೇಳಿದರು.
“ಕರ್ನಾಟಕದ ಕ್ರೀಡಾಪಟುಗಳಿಗೆ ಗೆಲ್ಲುವ ಸಾಧ್ಯತೆಗಳಿವೆ, ಪ್ರಯತ್ನ ಮಾಡಬೇಕಷ್ಟೆ. 2028ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ 60 ಜನರನ್ನು ಗುರುತಿಸಲಾಗಿದ್ದು, ಪ್ರತಿ ವರ್ಷ 10 ಲಕ್ಷ ರೂ.ಗಳನ್ನು ತರಬೇತಿಯ ಅವಧಿಯಲ್ಲಿಯೇ ನೀಡಲಾಗುತ್ತದೆ” ಎಂದು ಹೇಳಿದರು.
“ಕ್ರೀಡಾಪಟುಗಳು ಯಾವುದಾದರೂ ಒಂದು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿಯೇ ಸಂಪೂರ್ಣ ಏಕಾಗ್ರತೆ, ಗುರಿಯಿಟ್ಟುಕೊಂಡು ಸಾಧನೆ ಮಾಡಬೇಕು” ಎಂಬ ಕಿವಿಮಾತು ಹೇಳಿದರು.
“ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಿದೆ. ಒಲಂಪಿಕ್ಸ್ ಹಾಗೂ ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಗೆದ್ದವರಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಕರ್ನಾಟಕ ಉತ್ತಮ ಕ್ರೀಡಾಪಟುಗಳನ್ನು ಈವರೆಗೆ ರೂಪಿಸಿದೆ. ಹಾಕಿಯಂತಹ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು ಇದ್ದಾರೆ. ಅಥ್ಲೆಟಿಕ್ಸ್ ನಲ್ಲಿಯೂ ಸಾಧನೆ ಮಾಡಬೇಕು” ಎಂದು ಹೇಳಿದರು.
“ಬೇಡರ ಜಾತಿಗೆ ಸೇರಿದ ಏಕಲವ್ಯ ಗುರುವಿಲ್ಲದೆ ವಿದ್ಯೆಯನ್ನು ಕಲಿತವನು. ಅರ್ಜುನನಿಗಿಂತ ಮೀರಿ ಬಿಲ್ಲುವಿದ್ಯೆಯಲ್ಲಿ ಪರಿಣಿತಿ ಸಾಧಿಸಿದ್ದರಿಂದ ಅವನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ದ್ರೋಣಾಚಾರ್ಯರು ಪಡೆಯುತ್ತಾರೆ. ಆ ಕಾಲದಲ್ಲಿಯೂ ಜಾತಿ ವ್ಯವಸ್ಥೆಯಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಏಕಲವ್ಯ ಪ್ರಶಸ್ತಿ ಪಡೆದವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸುತ್ತೇನೆ. ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು. ನಿಮ್ಮ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿ” ಎಂದು ಶುಭ ಹಾರೈಸಿದರು.













