ಕೊಳೆಗೇರಿ ನಿವಾಸಿಗಳಿಂದಲೂ 18% ಜಿಎಸ್‌‌ಟಿ ಸುಲಿಗೆ ಮಾಡುವ ಮೋದಿ ಸರ್ಕಾರ: ಸಿದ್ದರಾಮಯ್ಯ » Dynamic Leader
October 23, 2024
ರಾಜ್ಯ

ಕೊಳೆಗೇರಿ ನಿವಾಸಿಗಳಿಂದಲೂ 18% ಜಿಎಸ್‌‌ಟಿ ಸುಲಿಗೆ ಮಾಡುವ ಮೋದಿ ಸರ್ಕಾರ: ಸಿದ್ದರಾಮಯ್ಯ

ಬೆಂಗಳೂರು: ನರೇಂದ್ರ ಮೋದಿ ಸರ್ಕಾರ ಜುಜುಬಿ ರೂ.12,000 ಕೊಟ್ಟು ಅದಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಹೆಸರಿಟ್ಟಿರುವುದೇ ನಾಚಿಕೆಗೇಡು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪ್ರತಿ ಫಲಾನುಭವಿಗೆ ಒಂದೂವರೆ ಲಕ್ಷ ರೂಪಾಯಿ ಕೊಡುತ್ತದೆ. ರಾಜ್ಯ ಸರ್ಕಾರ 1 ಲಕ್ಷದ 28 ಸಾವಿರ ಕೊಡುತ್ತಿತ್ತು. ಉಳಿದ 3.80 ಲಕ್ಷ ರೂಪಾಯಿಯನ್ನು ಫಲಾನುಭವಿ ಕೊಡಬೇಕಿತ್ತು.

ಕೇಂದ್ರ ಸರ್ಕಾರ ಈ ಯೋಜನೆಯಡಿ ನೀಡಲಾದ ಪ್ರತಿ ಮನೆಗೆ 18% ರಂತೆ ಜಿಎಸ್‌ಟಿ ವಸೂಲಿ ಮಾಡುತ್ತದೆ. ಅಂದರೆ ಪ್ರತಿ ಕೊಳೆಗೇರಿ ಮನೆಗೆ 1 ಲಕ್ಷದ 38 ಸಾವಿರ ರೂಪಾಯಿಯನ್ನು ಜಿಎಸ್‌ಟಿ ಹೆಸರಲ್ಲಿ ಸಂಗ್ರಹಿಸುತ್ತದೆ. ಒಂದೂವರೆ ಲಕ್ಷ ರೂಪಾಯಿ ಸಹಾಯಧನ ಕೊಟ್ಟು, ಅದರಲ್ಲಿ 1 ಲಕ್ಷದ 38 ಸಾವಿರ ರೂಪಾಯಿ ವಾಪಾಸ್ ವಸೂಲಿ ಮಾಡಿದರೆ ಕೊಟ್ಟಿದ್ದು 12 ಸಾವಿರ ರೂಪಾಯಿ ಮಾತ್ರ.

ಕೊಳೆಗೇರಿ ನಿವಾಸಿಗಳಿಂದಲೂ 18% ಜಿಎಸ್‌‌ಟಿ ಸುಲಿಗೆ ಮಾಡುವ ಕ್ರಮ ಬಹಳ ಬೇಸರ ತಂದಿತು. ಹೀಗಾಗಿ ಪ್ರತಿಯೊಬ್ಬ ಫಲಾನುಭವಿ ಕಟ್ಟಬೇಕಿದ್ದ ಅವರ ಪಾಲಿನ 3 ಲಕ್ಷ 80 ಸಾವಿರ ರೂಪಾಯಿಯಲ್ಲಿ 1 ಲಕ್ಷ ಮಾತ್ರ ಅವರಿಂದ ಕಟ್ಟಿಸಿಕೊಂಡು ಉಳಿದ ಹಣವನ್ನು ನಮ್ಮ ಸರ್ಕಾರದಿಂದಲೇ ಕಟ್ಟಲು ನಿರ್ಧರಿಸಿದೆ. ಹೀಗಾಗಿ ಪ್ರತಿ ಕೊಳೆಗೇರಿ ಮನೆಗೆ 4 ಲಕ್ಷ ರೂಪಾಯಿಗೂ ಹೆಚ್ಚಿನ ಹಣವನ್ನು ನಮ್ಮ ರಾಜ್ಯ ಸರ್ಕಾರ ಕಟ್ಟುತ್ತಿದೆ.

ನರೇಂದ್ರ ಮೋದಿ ಸರ್ಕಾರ ಜುಜುಬಿ ರೂ.12,000 ಕೊಟ್ಟು ಅದಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಹೆಸರಿಟ್ಟಿರುವುದೇ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.

Related Posts