ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ವಾಲ್ಮಿಕಿ ಅಭಿವೃದ್ಧಿ ನಿಗಮ Archives » Dynamic Leader
October 18, 2024
Home Posts tagged ವಾಲ್ಮಿಕಿ ಅಭಿವೃದ್ಧಿ ನಿಗಮ
ರಾಜ್ಯ

ಬೆಂಗಳೂರು: ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಕೋಮುವಾದ, ಭ್ರಷ್ಟಾಚಾರದಿಂದ ಬೇಸತ್ತ ಜನರು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಬಹುಮತ ನೀಡಿ ಅಧಿಕಾರದಲ್ಲಿ ಕೂರಿಸಿದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರನ್ನು ವಂಚಿಸಿ ಭ್ರಷ್ಟಾಚಾರದಲ್ಲಿ ಭಾಗಿಯಾದ ವರದಿಗಳು ಬಹಿರಂಗವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಕೋಮುವಾದದಷ್ಟೇ ಅಪಾಯಕಾರಿ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಅವರು ಮಾತನಾಡುತ್ತಾ, “ಕೋಮುವಾದದಂತೆ ಭೃಷ್ಟಾಚಾರವು ರಾಜ್ಯದ ಹಿತ ದೃಷ್ಟಿಯಿಂದ ಕೊನೆಗಾಣಬೇಕಾಗಿದೆ. ಮತ ನೀಡಿ ಚುನಾಯಿಸಿದ ಜನರ ಹಿತಕ್ಕಿಂತ ಪಕ್ಷದ ಹಿತಾಸಕ್ತಿ ಮತ್ತು ಸ್ವಾರ್ಥಹಿತಾಸಕ್ತಿಯೇ ಮುಖ್ಯ ಎಂಬುದು ಎದ್ದು ಕಾಣುತ್ತಿದೆ. ಇಲ್ಲಿ ಯಾರೂ ಸುಭಗರಲ್ಲ ಎಂದು ಮಾಧ್ಯಮಗಳ ವರದಿಗಳು ಬಹಿರಂಗ ಪಡಿಸುತ್ತದೆ. ಸಮುದಾಯದ ಅಭಿವೃದ್ಧಿ ನಿಗಮಗಳು ಸೇರಿದಂತೆ ಇನ್ನಿತರ ಮಂಡಳಿಗಳಲ್ಲಿ ಕಳೆದ ವರ್ಷಗಳಲ್ಲಿಯೇ ಸುಮಾರು ನಾಲ್ಕು ನೂರು ಕೋಟಿ ರೂಪಾಯಿಗೂ ಅಧಿಕವಾದ ಮೊತ್ತವನ್ನು ಅಕ್ರಮವಾಗಿ ಅನಧಿಕೃತ ಖಾತೆಗಳಿಗೆ ಜಮೆ ಮಾಡಿ, ಫಲಾನುಭವಿಗಳಿಗೆ ಸಲ್ಲಬೇಕಾದ ಹಣವನ್ನು ದುರುಪಯೋಗ ಪಡಿಸಲಾಗಿದೆ.

ಈ ಅವಧಿಯಲ್ಲಿ, ಸಿದ್ದರಾಮಯ್ಯರ ಅವಧಿಯೂ ಸೇರಿದಂತೆ ಜಗದೀಶ್ ಶೆಟ್ಟರ್, ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಕೂಡಾ ಮುಖ್ಯ ಮಂತ್ರಿಯಾಗಿದ್ದರು. ಈ ಬಗ್ಗೆಯೂ ತನಿಖೆ ನಡೆಯಬೇಕು” ಎಂದು ಹೇಳಿದ ತಾಹೇರ್ ಹುಸೇನ್, “ಈಗ ವಿಧಾನ ಸಭೆಯಲ್ಲಿ ಭೃಷ್ಟಾಚಾರ, ಅಕ್ರಮ ತಡೆಯುವ ಮಾತನಾಡುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಂದಾಯ ಸಚಿವರಾಗಿದ್ದಾಗ ಬೆಳೆ ನಷ್ಟ ಪರಿಹಾರದಲ್ಲೂ ಅಕ್ರಮ ನಡೆದಿದೆ. ಸಂಬಂಧವೇ ಇಲ್ಲದ ಅನ್ಯ ಖಾತೆದಾರರ ಖಾತೆಗೆ ಕೋಟ್ಯಾಂತರ ರೂಪಾಯಿ ಪಾವತಿಯಾದ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಸ್ಪರ ಸೇಡಿನ ರಾಜಕೀಯ ಮಾಡಿ ಜನರನ್ನು ವಂಚಿಸಬೇಡಿ. ವಾಲ್ಮೀಕಿ ನಿಗಮದ ಹಗರಣ ಬೆಳಕಿಗೆ ಬಂದ ಮೇಲೆ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಪರಿಶೀಲನೆಗೆ ಸರ್ಕಾರ ಸಿದ್ಧವಾಗಿದೆ.

ಬಿಜೆಪಿ ವಿರುದ್ಧ ಆರೋಪ ಕೇಳಿ ಬಂದಾಗ ಕೇಂದ್ರದಿಂದ ಇಡಿ ಓಡೋಡಿ ರಾಜ್ಯಕ್ಕೆ ಬಂತು. ಈ ಎರಡೂ ನಡೆಯನ್ನು ಪರಸ್ಪರ ಟೀಕಿಸುತ್ತಿದ್ದಾರೆ. ಈಗ ಇಡಿ ಯ ಮೇಲೆ ಕೇಸನ್ನೂ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳ ಹೆಸರು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಇದು ಸಭ್ಯ ರಾಜಕಾರಣವಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ. ಭ್ರಷ್ಟಾಚಾರವನ್ನು ತೊಡೆದು ಹಾಕಲು, ಅಪರಾಧಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡದೆ, ಪ್ರಾಮಾಣಿಕ ರೀತಿಯ ಪ್ರಯತ್ನ ಮಾಡಿ, ರಾಜ್ಯದ ಜನರ ಅಭಿವೃದ್ದಿಯತ್ತ ಗಮನಹರಿಸಲು ಆಡಳಿತ ಮತ್ತು ವಿರೋಧಪಕ್ಷ ಗಮನ ಹರಿಸಲಿ” ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯ

ಬೆಂಗಳೂರು: ವಾಲ್ಮಿಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ಕುರಿತಾದ ನಿಯಮ‌ 69ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದರು.  

“ವಾಲ್ಮಿಕಿ ನಿಗಮದ ಪ್ರಕರಣದಲ್ಲಿ ಆರ್.ಅಶೋಕ್, ವಿಜಯೇಂದ್ರ ನನ್ನ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ವಿಶೇಷ ತನಿಖಾ ತಂಡವನ್ನು ಹಿಂದಕ್ಕೆ ಪಡೆಯಿರಿ ಎಂದು ಹೇಳಿದ್ದಾರೆ. ನೀವು ಗೃಹ ಮಂತ್ರಿ ಆಗಿದ್ದಾಗಲೂ ಎಸ್.ಐ.ಟಿ ಬಗ್ಗೆ ಹೀಗೆ ಹೇಳಿದ್ದೀರಾ? ಎಂಬುದನ್ನು ಅವರಲ್ಲಿ ಕೇಳಬಯಸುತ್ತೇನೆ” ಎಂದು ಹೇಳಿದರು.

“ಮೇ 26 ರಂದು ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡರು. ಇವರು ತಮಿಳುನಾಡಿನ ಬೋವಿ ಸಮುದಾಯದವರು. ವಿರೋಧ ಪಕ್ಷದವರು ಸಾವಿರ ಸಾರಿ ದಲಿತ, ದಲಿತ ಎಂದು ಮಾತನಾಡಿದ್ದಾರೆ” ಎಂದರು.

“ಸಂವಿಧಾನದಲ್ಲಿ ಪರಿಶಿಷ್ಟ ಜಾತಿ/ವರ್ಗ ಎನ್ನುವ ಉಲ್ಲೇಖ ಇದೆ. ಇಬ್ಬರೂ ಸೇರಿ 24.1% ಜನಸಂಖ್ಯೆ ಇದ್ದಾರೆ. ಇವರ ಅಭಿವೃದ್ಧಿ ಆದರೆ ಮಾತ್ರ ಸಮ ಸಮಾಜದ ಆಶಯ ಈಡೇರುತ್ತದೆ. ಈ ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ. ಅಸಮಾನತೆ ಇರುವವರೆಗೂ ಸಮಾನತೆ ಸಾಧ್ಯವಿಲ್ಲ. ಸಂವಿಧಾನ ಬಂದು 70 ವರ್ಷ ಆದರೂ ಸಮಾನತೆ ಸಿಕ್ಕಿಲ್ಲ. ಇದನ್ನು ಸರಿಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ವಾಲ್ಮಿಕಿ, ಬೋವಿ, ಆದಿಜಾಂಭವ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸೇರಿ ಹಲವು ಅಭಿವೃದ್ಧಿ ನಿಗಮಗಳನ್ನು ಆರಂಭಿಸಲಾಗಿದೆ. ಈ ಎಲ್ಲಾ ನಿಗಮಗಳ ಉದ್ದೇಶ ಆಯಾ ಸಮುದಾಯಗಳನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವುದೇ ಆಗಿದೆ” ಎಂದು ಹೇಳಿದರು.

“2013ರ ಡಿಸೆಂಬರ್ ನಲ್ಲಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆ ಜಾರಿಗೆ ಕೊಟ್ಟಿದ್ದು ನಮ್ಮ‌ ಸರ್ಕಾರ. ಬಜೆಟ್‌ನ 24.1% ಅಭಿವೃದ್ಧಿ ಹಣ ಈ ಸಮುದಾಯದ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಕಡ್ಡಾಯ ಮಾಡಿದ್ದು ನಾನು. ವಿಪಕ್ಷಗಳು ಬರೀ ಮೊಸಳೆ ಕಣ್ಣೀರು ಹರಿಸುತ್ತಿವೆ” ಎಂದು ಹೇಳಿದರು.

“1949ರ ನವೆಂಬರ್ 25 ರಂದು ಸಂವಿಧಾನ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ‘ಜನವರಿ 26-1950ಕ್ಕೆ ಸಂವಿಧಾನ ಜಾರಿಗೆ ಬರುತ್ತಿದೆ. ನಾವೆಲ್ಲರೂ ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ’ ಎಂದು ಚರಿತ್ರಾರ್ಹವಾದ ಭಾಷಣದಲ್ಲಿ ಹೇಳಿದ್ದರು. ನಾವು ಪ್ರಜಾಪ್ರಭುತ್ವ ಒಪ್ಪಿಕೊಂಡಿದ್ದೇವೆ. ಇಲ್ಲಿ ಇನ್ನೂ ಆರ್ಥಿಕವಾಗಿ, ಸಾಮಾಜಿಕವಾಗಿ ಅಸಮಾನತೆ ಉಳಿದುಕೊಂಡಿರುವುದರಿಂದ ಅದನ್ನು ನಿವಾರಣೆ ಮಾಡದಿದ್ದರೆ ಜನರೇ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆಂಬ ಎಚ್ಚರಿಕೆ ಕೊಟ್ಟಿದ್ದರು” ಎಂದು ಹೇಳಿದರು.

“ಇಡೀ ದೇಶದಲ್ಲಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯ್ದೆ ತಂದವರು ನಾವು. ಪರಿಶಿಷ್ಠ ಸಮುದಾಯಗಳ ಬಗ್ಗೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಕೇಂದ್ರದ ಬಿಜೆಪಿಯಾಗಲಿ, ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಾಗಲಿ ಈ ಕಾಯ್ದೆಯನ್ನು ಏಕೆ ಜಾರಿಗೆ ತಂದಿಲ್ಲ? ಇಡೀ ದೇಶದಲ್ಲಿ ನಾವು ಮಾತ್ರ ಇಂಥಾ ಪರಿಣಾಮಕಾರಿ ಕಾಯ್ದೆಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಗಳಿಗಾಗಿ ಜಾರಿ ಮಾಡಿದ್ದೇವೆ.

ಗುತ್ತಿಗೆಯಲ್ಲೂ ಎಸ್.ಸಿ / ಎಸ್.ಟಿ ಸಮುದಾಯಗಳಿಗೆ ಮೀಸಲಾತಿ ಜಾರಿ ಮಾಡಿರುವುದು ನಾವು ಮಾತ್ರ. ಇಂಥದ್ದನ್ನು ಬಿಜೆಪಿಯವರು ಇದುವರೆಗೂ ಏಕೆ ಜಾರಿ ಮಾಡಿಲ್ಲ?” ಎಂದು ಪ್ರಶ್ನಿಸಿದರು.

“ಎಸ್.ಸಿ / ಎಸ್.ಟಿ ಉದ್ದಿಮೆಗಳಿಗೆ / ಉದ್ಯಮಗಳಿಗೆ ವಿಶೇಷ ಸಾಲದ ಸವಲತ್ತು , KIADB ಭೂಮಿ ವಿಚಾರದಲ್ಲಿ ಈ ಸಮುದಾಯಗಳಿಗೆ ಅನುಕೂಲ ಮಾಡಿ ಕಾನೂನು ತಂದವರು ನಾವು. ನಾವು ಎಸ್.ಸಿ / ಎಸ್.ಟಿ ಸಮುದಾಯದವರ ವಿರೋಧಿಯಾಗಿದ್ದರೆ ಇಷ್ಟೆಲ್ಲವನ್ನೂ ಜಾರಿ ಮಾಡುತ್ತಿದ್ದೆವಾ?

ಕಾಂಗ್ರೆಸ್ ಇರುವವರೆಗೂ, ನಾನು ಇರುವವರೆಗೂ ಸಾಮಾಜಿಕ ನ್ಯಾಯಕ್ಕೆ ನಾವು ಬದ್ಧರು. ವಿಪಕ್ಷಗಳಿಂದ ಸಾಮಾಜಿಕ ನ್ಯಾಯದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ” ಎಂದು ಕಿಡಿಕಾರಿದರು.