ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
1 Robbery Kathe Film Archives » Dynamic Leader
October 23, 2024
Home Posts tagged 1 Robbery Kathe Film
ದೇಶ ರಾಜ್ಯ

ವರದಿ: ಅರುಣ್ ಜಿ,.

ಬಂಗಾರದ ಬಿಸ್ಕೆಟ್ ಇದ್ದ ಬ್ಯಾಗನ್ನು ಪಡೆದುಕೊಳ್ಳಲು ಒಬ್ಬ ಯುವಕ ಹಾಗೂ ಶಾಸಕನೊಬ್ಬ ಪ್ರಯತ್ನಿಸುವಾಗ ನಡೆಯುವ ಘಟನೆಗಳನ್ನಿಟ್ಟುಕೊಂಡು ಮಾಡಿರುವ ಚಿತ್ರ ಒನ್ ರಾಬರಿ ಕಥೆ. 

ಖೈದಿ ಕೃಷ್ಣ (ರಣಧೀರ್ ಗೌಡ) ಪೊಲೀಸರಿಂದ ತಪ್ಪಿಸಿಕೊಂಡು ಬರುತ್ತಿರುವಾಗ ಹಾದಿಯಲ್ಲಿ ಕಾರೊಂದು  ಕಾಣಿಸುತ್ತದೆ. ಗೋಲ್ಡ್ ಬಿಸ್ಕಿಟ್ ಡೀಲ್ ಮಾಡಲು ಬಂದಿದ್ದ ಶಾಸಕನ ಕಾರದು. ಕೃಷ್ಣ ಬಚಾವಾಗಲೆಂದು ಅ ಕಾರಲ್ಲಿ ಕುಳಿತುಕೊಳ್ಳುತ್ತಾನೆ. ಶಾಸಕ (ಸುಂದರರಾಜ್) ಡೀಲ್ ಮುಗಿಸಿಕೊಂಡು ಕೋಟಿಗಟ್ಟಲೆ ಬೆಲೆಬಾಳುವ ಬಂಗಾರದ ಗಟ್ಟಿಗಳಿದ್ದ ಬ್ಯಾಗನ್ನು ತನ್ನ ಕಾರಿನ ಡಿಕ್ಕಿಯಲ್ಲಿಟ್ಟು ಮುಂದೆ ಬಂದು ಹತ್ತಬೇಕೆನ್ನುವಷ್ಟರಲ್ಲಿ ಕಾರು ಮುಂದೆ ಹೊರಟೇಬಿಡುತ್ತದೆ. ಕಕ್ಕಾಬಿಕ್ಕಿಯಾದ ಆ ಶಾಸಕ ಪೋಲೀಸರಿಗೆ ಕಾಲ್ ಮಾಡುತ್ತಾನೆ. ಆಗ ಕೃಷ್ಣ ಬಂಗಾರದ ಗಟ್ಟಿಯಿದ್ದ ಬ್ಯಾಗನ್ನು ರಾವ್‌ಗಡ ಎಂಬ ಹಳ್ಳಿಯ ಸಮೀಪದ ಬಯಲು ಜಾಗದಲ್ಲಿ ಗುಂಡಿ ತೆಗೆದು ಹೂತು ಅದರಮೇಲೆ ದೊಡ್ಡ ಕಲ್ಲನ್ನು ನೆಟ್ಟು ಬರುವಾಗ ಪೋಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಕೃಷ್ಣನ ಕೈಯಿಂದ ಬಂದ ರಕ್ತ ಆ ಕಲ್ಲಮೇಲೆ ಬಿದ್ದು ಅದೊಂಥರಾ ದೇವರಹಾಗೆ ಕಾಣಿಸುತ್ತದೆ. ಬೆಳಗಾದಮೇಲೆ ಊರಜನರಿಗೆ ಅದು ನೆಲದಲ್ಲೇ ಒಡಮೂಡಿದ ಕಲ್ಲು ದೇವರ ಹಾಗೆ ಗೋಚರಿಸುತ್ತದೆ.

ನಂತರ ಅಲ್ಲಿನ ಜನ ಅದಕ್ಕೊಂದು ಗುಡಿಯನ್ನೂ  ನಿರ್ಮಿಸುತ್ತಾರೆ. ಇತ್ತ ಪುನ: ಜೈಲುಸೇರಿದ ಕೃಷ್ಣ ಕೆಲ ವರ್ಷಗಳ ನಂತರ ಸೆರೆವಾಸ ಮುಗಿಸಿಕೊಂಡು ಹೊರಬರುತ್ತಾನೆ. ತಾನು ಬಚ್ಚಿಟ್ಟ ಬಂಗಾರ ಹುಡುಕಿಕೊಂಡು ಬರುವ ಆತನಿಗೆ ಅಲ್ಲಿ ಗುಡಿ ನಿರ್ಮಾಣವಾಗಿರುವುದು ಕಂಡು ದಿಗಿಲಾಗುತ್ತದೆ. ನಂತರ ಸರ್ವೇ ಆಫೀಸರ್ ವೇಶದಲ್ಲಿ ಆ ಊರನ್ನು ಸೇರಿಕೊಂಡ ಕೃಷ್ಣ ಬಂಗಾರವಿದ್ದ ಬ್ಯಾಗನ್ನು ಹೇಗೆ ಎಗರಿಸುವುದೆಂದು ಪ್ಲಾನ್ ಮಾಡುತ್ತಾನೆ. ತನ್ನ ಗೆಳೆಯ ಡೀಲ್ ಡಿಂಗ್ರಿ (ಶಿವರಾಜ್ ಕೆ.ಆರ್.ಪೇಟೆ) ಯನ್ನೂ ಅಲ್ಲಿಗೆ ಕರೆಸಿಕೊಳ್ಳುತ್ತಾನೆ. ಇದೇ ಸಮಯದಲ್ಲಿ ಆ ಊರಿನ ಟೀಚರ್ ರಾಧಾಳ (ರಿಷ್ವಿ ಭಟ್) ಪರಿಚಯವಾಗುತ್ತದೆ. ಕೃಷ್ಣನ ರೂಪಕ್ಕೆ ಟೀಚರ್ ರಾಧಾ ಮನಸೋಲುತ್ತಾಳೆ. ಹೀಗೇ ಸಾಗುವ ಕಥೆಯಲ್ಲಿ  ಮಧ್ಯಂತರದ ನಂತರ ಎದುರಾಗೋ ಒಂದಷ್ಟು ಟ್ವಿಸ್ಟ್ಗಳು ನೋಡುಗರಲ್ಲಿ  ಕುತೂಹಲ ಕೆರಳಿಸುತ್ತ ಸಾಗುತ್ತವೆ. ಇತ್ತ ಶಾಸಕ ತನ್ನ ಬಂಗಾರವನ್ನು ಕದ್ದೊಯ್ದವನನ್ನು ಹಿಡಿದೇ ತೀರಬೇಕೆಂದು ಸಾಕಷ್ಟು ಪ್ರಯತ್ನ ಮಾಡುತ್ತಾನೆ. ನಕಲಿ ಸರ್ವೇಯರ್ ಒಬ್ಬನನ್ನು ಊರಿಗೆ ಕಳಿಸುತ್ತಾನೆ.

ಇಷ್ಟೆಲ್ಲ ನಡೆಯುತ್ತಿದ್ದರೂ ಊರಲ್ಲಿದ್ದ ಕಲ್ಲುದೇವರ ಗುಡಿಯಲ್ಲಿ ಚಿನ್ನದ ಬ್ಯಾಗ್ ಸುರಕ್ಷಿತವಾಗಿರುತ್ತದೆ, ಕೊನೆಗೆ ಆ ಬಂಗಾರದ ಗಟ್ಟಿಗಳಿದ್ದ ಬ್ಯಾಗ್ ಯಾರ ಪಾಲಾಯಿತು, ನಕಲಿ ಸರ್ವೇಯರ್ ಏನಾದ, ಕೃಷ್ಣ ಆ ನಿಧಿಯನ್ನು ಪಡೆದುಕೊಳ್ಳಲು ಸಾಧ್ಯವಾಯಿತೇ ಹೀಗೆ ನಿಮ್ಮ ಮನದಲ್ಲಿ ಏಳುವ ನೂರಾರು ಪ್ರಶ್ನೆಗಳಿಗೆ ಉತ್ತರ ಚಿತ್ರದಲ್ಲಿದೆ. ತಡಮಾಡದೆ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಕಳ್ಳ ಕೃಷ್ಣನ ರಾಬರಿ ಕಥೆಯನ್ನು ನೋಡಿಕೊಂಡು ಬನ್ನಿ. ಲಾಜಿಕ್ ಹುಡುಕದೆ ಒಂದು ಸಿನಿಮಾ ಆಗಿ ನೋಡುತ್ತ ಹೋದಂತೆ ಚಿತ್ರವು ಖಂಡಿತ ಒಳ್ಳೆಯ ಮನರಂಜನೆ ನೀಡುತ್ತದೆ. ಇಡೀ ಕಥೆಯನ್ನು ಎಂಟರ್‌ಟೈನಿಂಗ್ ಆಗಿ ನಿರ್ದೇಶಕ ಗೋಪಾಲ್ ಹಳ್ಳೇರ ಹೊನ್ನಾವರ ಅವರು ತೆಗೆದುಕೊಂಡು ಹೋಗಿದ್ದಾರೆ. ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಸಮನ್ವಿ ಕ್ರಿಯೇಷನ್ಸ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಾಯಕ ರಣದೀರ್‌ ಗೌಡ ಕಳ್ಳನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ನಾಯಕಿ ರಿಶ್ವಿ ಭಟ್ ಉತ್ತರ ಕರ್ನಾಟಕದ ಭಾಷೆಯನ್ನು ಕಷ್ಟಪಟ್ಟು ಮಾತಾಡಿದ್ದಾರೆ. ಶಿವರಾಜ್ ಕೆ.ಆರ್.ಪೇಟೆ ಅವರ ಪಾತ್ರಕ್ಕೆ ಹೆಚ್ಚಿನ ಸೀನ್ ನೀಡುವ ಅವಕಾಶವಿತ್ತು. ನಿರ್ಮಾಪಕ ಸಂತೋಷ್ ನಾಗೇನಹಳ್ಳಿ ಅವರು ಪೋಲೀಸ್ ಇನ್ಸ್ಪೆಕ್ಟರ್ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ಚಿತ್ರದಲ್ಲಿನ ಶ್ರೀವತ್ಸ ಸಂಗೀತ ಸಂಯೋಜನೆಯ ನಾಟಿ ಸ್ಟೈಲ್ ಹಾಡು ಸಖತ್ ಕ್ಯಾಚಿ ಆಗಿದೆ. ಉಳಿದಂತೆ ಬರುವ ಡ್ರೀಮ್ ಸಾಂಗ್ ಗಳು ಕಲರ್ ಫುಲ್ ಆಗಿ ಮೂಡಿಬಂದಿವೆ. ಚಿತ್ರದ ಕ್ಯಾಮೆರಾ ವರ್ಕ್ ಉತ್ತಮವಾಗಿದೆ.

ಸಿನಿಮಾ ರೇಟಿಂಗ್ 3/5

ಸಿನಿಮಾ

ಅರುಣ್ ಜಿ.,

ಬೇಲೂರಿನ ಸಂತೋಷ್ ನಾಗೇನಹಳ್ಳಿ ಅವರು ಸಮನ್ವಿ ಕ್ರಿಯೇಷನ್ಸ್ ಬೇಲೂರು ಸಂಸ್ಥೆಯಡಿ ನಿರ್ಮಿಸಿರುವ ಪ್ರಥಮ ಚಿತ್ರ “1 RAಬರಿ ಕಥೆ”. ಇತ್ತೀಚೆಗಷ್ಟೆ ತನ್ನ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿರುವ ಚಿತ್ರತಂಡ ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 

ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವಂಥ ಪಕ್ಕಾ ಮಾಸ್ ಕಮರ್ಷಿಯಲ್ ರೊಮ್ಯಾಂಟಿಕ್, ಕಾಮಿಡಿ, ಆಕ್ಷನ್, ಸಸ್ಪೆನ್ಸ್-ಥ್ರಿಲ್ಲರ್, ಸೆಂಟಿಮೆಂಟ್ ಕಥಾಹಂದರ ಒಳಗೊಂಡಿರುವ ‘ಒನ್ ರಾಬರಿ ಕಥೆ’ ಚಿತ್ರಕ್ಕೆ ಗೋಪಾಲ್ ಹಳ್ಳೇರ್ ಹೊನ್ನಾವರ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಬಹುತಾರಾಗಣ ಒಳಗೊಂಡ ಈ ಚಿತ್ರದಲ್ಲಿ ರಕ್ಕಂ ಖ್ಯಾತಿಯ ರಣಧೀರ್ ಗೌಡ ನಾಯಕನಾಗಿ ನಟಿಸಿದರೆ, ಹೊಸ ಪ್ರತಿಭೆ ರಿಷ್ವಿ ಭಟ್ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ನಿರ್ಮಾಪಕ  ಬೇಲೂರಿನ ಸಂತೋಷ್ ನಾಗೇನಹಳ್ಳಿ  ಅವರು ನಿರ್ಮಾಣದ ಜೊತೆಗೆ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಸುಂದರ್ ರಾಜ್, ಕರಿಸುಬ್ಬು, ಕಡ್ಡಿಪುಡಿ ಚಂದ್ರು, ಶಿವರಾಜ್ ಕೆ.ಆರ್.ಪೇಟೆ, ತಬಲಾನಾಣಿ, ಜಹಾಂಗೀರ್, ಗಿರೀಶ್ ಶಿವಣ್ಣ, ಮೂಗ್ ಸುರೇಶ್, ಎಂ.ಕೆ.ಮಠ್, ನವೀನ್ ಪಡೀಲ್, ಸಂಜು ಬಸಯ್ಯ ಮತ್ತು  ಕಿರುತೆರೆ ಹಾಗೂ ಮಜಾ ಟಾಕೀಸ್ ನ ಹಲವಾರು ಕಲಾವಿದರು ನಟಿಸಿದ್ದಾರೆ.

ಬೇಲೂರು, ಚಿಕ್ಕಮಗಳೂರು, ಸಕಲೇಶಪುರ, ಹೊನ್ನಾವರ ಮತ್ತು ಸಿಂದನೂರಿನ ರವಕುಂದದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಪ್ರಕಾಶ್ ಜಿ. ಅವರ ಸಂಭಾಷಣೆ, ಸಂತೋಷ್ ನಾಗೇನಹಳ್ಳಿ, ಪ್ರಕಾಶ್ ಅವರ ಸಾಹಿತ್ಯ, ಡಿರೆಂಟ್ ಡ್ಯಾನಿ ಅವರ ಸಾಹಸ, ಹರೀಶ್ ಜಿಂದೆ ಅವರ ಛಾಯಾಗ್ರಹಣ, ಸಂಜಿವರೆಡ್ಡಿ ಅವರ ಸಂಕಲನ, ಶ್ರೀವತ್ಸ ಅವರ  ಸಂಗೀತ ಮತ್ತು ಚಾಮರಾಜ್, ರೋಹಿತ್ ಅರುಣ್ ಕೊರಿಯೋಗ್ರಫಿ ಈ ಚಿತ್ರಕ್ಕಿದೆ.