ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Mallikarjun Kharge Archives » Page 2 of 2 » Dynamic Leader
October 18, 2024
Home Posts tagged Mallikarjun Kharge (Page 2)
ದೇಶ

“ಸತ್ಯ ನುಡಿದಿದ್ದಕ್ಕಾಗಿ ರಾಜನು ಶಿಕ್ಷೆಯೊಂದಿಗೆ ಉಡುಗೊರೆ ನೀಡುತ್ತಿದ್ದಾರೆ” ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಲೇವಡಿ!

ಕೇಂದ್ರ ರೈಲ್ವೆ ಇಲಾಖೆಯು ಮುಂಬೈ, ಪುಶಾವಲ್, ನಾಗ್ಪುರ, ಪುಣೆ ಮತ್ತು ಸೊಲ್ಲಾಪುರದ ಐದು ವಲಯಗಳಲ್ಲಿ ಸುಮಾರು 50 ರೈಲು ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಿದೆ. ಈ 50 ನಿಲ್ದಾಣಗಳಲ್ಲಿ 30 ಸ್ಥಳಗಳಲ್ಲಿ ತಾತ್ಕಾಲಿಕ ಸೆಲ್ಫಿ ಪಾಯಿಂಟ್‌ಗಳನ್ನು ಮತ್ತು 20 ನಿಲ್ದಾಣಗಳಲ್ಲಿ ಶಾಶ್ವತ ಸೆಲ್ಫಿ ಪಾಯಿಂಟ್‌ಗಳನ್ನು ಇರಿಸಲಾಗಿದೆ.

ಮಹಾರಾಷ್ಟ್ರದ ಅಜಯ್ ಬಸುದೇವ್ ಬೋಸ್ ಅವರು ಕೇಂದ್ರ ರೈಲ್ವೆ ವ್ಯಾಪ್ತಿಯ ವಿವಿಧ ರೈಲು ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ 3ಡಿ ಸೆಲ್ಫಿ ಬೂತ್‌ಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಶ್ನೆಗಳನ್ನು ಎತ್ತಿದ್ದರು.

ಅಜಯ್ ಬಸುದೇವ್ ಅವರ ಅರ್ಜಿಗೆ ಕಳೆದ ವರ್ಷ ಡಿಸೆಂಬರ್ 21 ರಂದು ಉತ್ತರ ನೀಡಲಾಗಿತ್ತು. ಅದರಲ್ಲಿ ಸೆಂಟ್ರಲ್ ರೈಲ್ವೆ ಅಡಿಯಲ್ಲಿ ಸ್ಥಾಪಿಸಲಾಗಿರುವ ಸೆಲ್ಫಿ ಬೂತ್‌ಗಳಲ್ಲಿ ತಾತ್ಕಾಲಿಕ ಬೂತ್‌ಗಳಿಗೆ ತಲಾ 1 ಲಕ್ಷ 25 ಸಾವಿರ ಹಾಗೂ ಶಾಶ್ವತ ಸೆಲ್ಫಿ ಪಾಯಿಂಟ್ ಗಳಿಗೆ ತಲಾ 6 ಲಕ್ಷ 25 ಸಾವಿರ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿತ್ತು.

ಈ ಬಗ್ಗೆ ಮಾಹಿತಿ ಹೊರಬಿದ್ದ ಬೆನ್ನಲ್ಲೇ “ಬಿಜೆಪಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ” ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ಈ ಕುರಿತು ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “ಮೋದಿ ಸರ್ಕಾರದ ಸ್ವಯಂ ಪ್ರಚಾರಕ್ಕೆ ಮಿತಿಯೇ ಇಲ್ಲದಂತಾಗಿದೆ. ಬರ ಮತ್ತು ಪ್ರವಾಹದಿಂದ ಹಾನಿಗೊಳಗಾದ ರಾಜ್ಯಗಳಿಗೆ ಯಾವುದೇ ಪರಿಹಾರವನ್ನು ನೀಡಲಾಗಿಲ್ಲ. ವಿರೋಧ ರಾಜ್ಯಗಳ ನಿಧಿಯೂ ಬಾಕಿ ಇದೆ. ಆದರೆ ಈ ರೀತಿಯ ಅನವಶ್ಯಕ ವಿಷಯಗಳಿಗೆ ಹಣ ಖರ್ಚು ಮಾಡುತ್ತಿದೆ. ಚುನಾವಣಾ ಲಾಭಕ್ಕಾಗಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, “ಪ್ರಾಮಾಣಿಕ ತೆರಿಗೆ ಪಾವತಿದಾರರ ಹಣದಲ್ಲಿ ಪ್ರಧಾನಿ ಮತ್ತು ಆಡಳಿತಾರೂಢ ಸರ್ಕಾರ ಸ್ವಯಂ ಪ್ರಚಾರ ನಡೆಸುತ್ತಿರುವುದು ಘೋರ ದುರ್ಬಳಕೆಯಾಗಿದೆ” ಎಂದು ಹೇಳಿದರು.

ಈ ಹಿನ್ನಲೆಯಲ್ಲಿ, ವಿರೋಧ ಪಕ್ಷಗಳು ಈ ಬಗ್ಗೆ ಪ್ರಶ್ನೆ ಎತ್ತಿದ್ದು, ಸಂಬಂಧಪಟ್ಟ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಕಾರ್ಯಾಚರಣೆಯ ಕಾರಣಕ್ಕಾಗಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ, “ಸತ್ಯ ನುಡಿದಿದ್ದಕ್ಕಾಗಿ ರಾಜನು ಶಿಕ್ಷೆಯೊಂದಿಗೆ ಉಡುಗೊರೆ ನೀಡುತ್ತಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ, ರೈಲ್ವೆ ಇಲಾಖೆ ಆರ್‌ಟಿಐ ಅಡಿಯಲ್ಲಿ ಮಾಹಿತಿ ಬಹಿರಂಗಪಡಿಸುವ ನಿಯಮಗಳನ್ನು ಬಿಗಿಗೊಳಿಸಿದೆ. ಹೊಸ ನಿಯಮಗಳ ಪ್ರಕಾರ, ಎಲ್ಲಾ ಪ್ರತಿಕ್ರಿಯೆಗಳನ್ನು ವಲಯ ರೈಲ್ವೆ ಮುಖ್ಯ ವ್ಯವಸ್ಥಾಪಕರು ಅಥವಾ ವಲಯ ರೈಲ್ವೆ ವ್ಯವಸ್ಥಾಪಕರು ಅನುಮೋದಿಸಬೇಕು ಎಂದು ಹೇಳಲಾಗಿದೆ.

ರೈಲ್ವೆ ಮಂಡಳಿಯು ಮುಖ್ಯ ವ್ಯವಸ್ಥಾಪಕರುಗಳಿಗೆ ಸೂಚಿಸಿರುವ ಸಲಹೆಯಲ್ಲಿ, “ವಲಯ ರೈಲ್ವೆ ಮತ್ತು ಇತರ ಇಲಾಖೆಗಳು ನಿರ್ವಹಿಸುವ ಆರ್‌ಟಿಐ ಅರ್ಜಿಗಳ ಪ್ರತಿಕ್ರಿಯೆಗಳ ಗುಣಮಟ್ಟ ಇತ್ತೀಚೆಗೆ ಹದಗೆಟ್ಟಿದೆ” ಎಂದು “ಹಿಂದೂ” ಪತ್ರಿಕೆ ವರದಿ ಮಾಡಿದೆ.

ಎಲ್ಲಾ ಪ್ರತಿಕ್ರಿಯೆಗಳನ್ನು ವಲಯ ರೈಲ್ವೆ ಮುಖ್ಯ ವ್ಯವಸ್ಥಾಪಕರು ಅಥವಾ ವಲಯ ರೈಲ್ವೆ ವ್ಯವಸ್ಥಾಪಕರು ಅನುಮೋದಿಸಬೇಕು ಎಂದು ಹೇಳಲಾಗಿದೆ. ಆದರೆ, ಆರ್‌ಟಿಐ ಮಾಹಿತಿ ಬಿಡುಗಡೆಗೂ ನಿಯಮಾವಳಿ ಬಿಗಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜಕೀಯ

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷದ ನಾಯಕರಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂದಿನ ಮೂರು ತಿಂಗಳ ಕಾಲ ಪಕ್ಷದ ಗೆಲುವಿಗೆ ಮುಡಿಪಾಗಿಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ಹಗಲಿರುಳು ಶ್ರಮಿಸಿದರೆ ಲೋಕಸಭೆ ಚುನಾವಣೆಯ ನಂತರ ಪರ್ಯಾಯ ಸರ್ಕಾರವನ್ನು ನೀಡಬಹುದು ಎಂದು ದೇಶಾದ್ಯಂತದ ಪಕ್ಷದ ನಾಯಕರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಖಂಡರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಆಂತರಿಕ ವಿಚಾರಗಳನ್ನು ಮಾಧ್ಯಮಗಳಿಗೆ ಬಿತ್ತರಿಸದೇ ತಂಡೋಪತಂಡವಾಗಿ ಪಕ್ಷದ ಯಶಸ್ಸಿಗೆ ಶ್ರಮಿಸುವಂತೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.

“ಕಳೆದ 10 ವರ್ಷಗಳ ತನ್ನ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಬಿಜೆಪಿ ಸೂಕ್ಷ್ಮ ವಿಷಯಗಳನ್ನು ಎತ್ತುತ್ತಿದೆ. ಪ್ರತಿಯೊಂದು ಸಂದರ್ಭದಲ್ಲೂ ಅವರು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಅನ್ನು ಎಳೆಯುತ್ತಿದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನರೇಂದ್ರ ಮೋದಿ ಸರ್ಕಾರ “ಆಧುನಿಕ ಭಾರತ ನಿರ್ಮಾಣದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ನಿರ್ಲಕ್ಷಿಸುತ್ತಲೇ ಇದೆ” ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಹಾಗಾಗಿ “ಅವರಿಗೆ ತಕ್ಕ ಉತ್ತರ ನೀಡಬೇಕು” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ದೇಶ

ನವದೆಹಲಿ: ಕಾಂಗ್ರೆಸ್ ಪಕ್ಷದ 138ನೇ ಸಂಸ್ಥಾಪನಾ ದಿನವನ್ನು ನಾಳೆ (ಡಿಸೆಂಬರ್ 28) ಆಚರಿಸಲಾಗುತ್ತಿದೆ. ಇದಕ್ಕಾಗಿ ನಾಗ್ಪುರದಲ್ಲಿ ಬೃಹತ್ ಸಾರ್ವಜನಿಕ ಸಭೆ ಹಾಗೂ ರ‍್ಯಾಲಿ ನಡೆಸಲು ಪಕ್ಷ ಮುಂದಾಗಿದೆ. ಇದರ ಬೆನ್ನಲ್ಲೇ ಜನವರಿ 14ರಿಂದ ಮಾರ್ಚ್ 20 ರವರೆಗೆ ಮಣಿಪುರದಿಂದ ಮುಂಬೈಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮುಂದಿನ ಹಂತದ ಯಾತ್ರೆ ಆರಂಭಿಸಲಿದ್ದಾರೆ ಎಂದು ಘೋಷಿಸಲಾಗಿದೆ.

ಕಾಂಗ್ರೆಸ್ ಪಕ್ಷವನ್ನು 28 ಡಿಸೆಂಬರ್ 1885 ರಂದು ಸ್ಥಾಪಿಸಲಾಯಿತು. ಆರಂಭದಲ್ಲಿ ವಿದ್ಯಾವಂತ ಭಾರತೀಯರಿಗೆ ರಾಜಕೀಯ ಸಬಲೀಕರಣವನ್ನು ಒದಗಿಸುವ ಗುರಿಯನ್ನು ಹೊಂದಿದ್ದ ಕಾಂಗ್ರೆಸ್ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಯಿತು. ಭಾರತದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಂಗ್ರೆಸ್ ತನ್ನ 138ನೇ ಸಂಸ್ಥಾಪನಾ ದಿನವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ. ಇದಕ್ಕಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಿದೆ.

ಕಾಂಗ್ರೆಸ್ ಪಕ್ಷವನ್ನು 28 ಡಿಸೆಂಬರ್ 1885 ರಂದು ಸ್ಥಾಪಿಸಲಾಯಿತು.

ಈ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಮತ್ತು ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಈ ಕುರಿತು ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಕೆ.ಸಿ.ವೇಣುಗೋಪಾಲ್ ಅವರು, “ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನವಾದ ನಾಳೆ ನಾಗ್ಪುರದಲ್ಲಿ ‘ನಾವು ಸಿದ್ಧರಿದ್ದೇವೆ’ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಎಲ್ಲಾ ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಇದರಲ್ಲಿ ಭಾಗವಹಿಸುತ್ತಿದ್ದಾರೆ.

ರಾಹುಲ್ ಯಾತ್ರೆ:
2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಕೆಲಸಗಳೂ ನಡೆಯುತ್ತಿವೆ. ಜನವರಿ 14 ರಂದು ರಾಹುಲ್ ಮಣಿಪುರದಿಂದ ಮುಂಬೈಗೆ ಬಸ್ ಮೂಲಕ 6,200 ಕಿ.ಮೀ ದೂರದ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ‘ಭಾರತ್ ನ್ಯಾಯ ಯಾತ್ರ’ ಎಂಬ ಈ ಯಾತ್ರೆ ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳಲ್ಲಿ 66 ದಿನಗಳ ಕಾಲ (ಮಾರ್ಚ್ 20) ರಾಹುಲ್ ಗಾಂಧಿ ಬಸ್ಸಿನಲ್ಲಿ ಪ್ರಯಾಣ ಮಾಡಲಿದ್ದಾರೆ” ಎಂದು ಅವರು ಹೇಳಿದರು.

ರಾಜ್ಯ

ಖಾಸಿಂ ಸಾಬ್ ಎ.

ಸಾವಿರಾರು ವರ್ಷಗಳ ಕಾಲದಿಂದ ವರ್ಣ ಜಾತಿಯ ಕಾರಣಕ್ಕಾಗಿ ಸಾಮಾಜಿಕ ನ್ಯಾಯ ಹಾಗೂ ಅಧಿಕಾರದ ಎಲ್ಲಾ ಅವಕಾಶಗಳಿಂದ ವಂಚಿತರಾಗಿರುವ ದಲಿತರು, ನಾಗರಿಕ ಹಕ್ಕುಗಳು ಮತ್ತು ಹಳ್ಳಿಯಿಂದ ದಿಲ್ಲಿಯವರೆಗಿನ ಎಲ್ಲಾ ರಾಜಕೀಯ ಅವಕಾಶಗಳಿಂದ ಇಂದಿಗೂ ವಂಚಿತರಾಗಿದ್ದಾರೆ.

ಡಾ.ಬಾಬಾಸಾಹೇಬ್ ಅಂಬೇಡ್ಕರರ ಸಂಸದೀಯ ಪ್ರಜಾಪ್ರಭುತ್ವದ ಸಂವಿಧಾನದ ಮೂಲಕವೇ ದಲಿತ, ಶೋಷಿತರ ಸಾಮಾಜಿಕ ನ್ಯಾಯ ಸಾಧ್ಯ. ಈ ಮೂಲಕವೇ ರಾಜಕೀಯ ಪಾಲುದಾರಿಕೆ, ಹಂಚಿಕೆ ಸಾಧ್ಯ ಎಂಬ ಕಲ್ಪನೆಗೆ ಭಾರತಕ್ಕೆ ದಲಿತ ಪ್ರಧಾನಿ ಎಂಬ ಕೂಗು ಹಿಂಬು ನೀಡುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಫಲವಾಗಿ ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯವನ್ನು ಪಡೆದರೂ, ಅದು ರಾಜಕೀಯ ಹಸ್ತಾಂತರವಾಗಿಯೇ ಉಳಿದಿದೆಯೆ ಹೊರತು ದೇಶದ ದಲಿತರ, ಮಹಿಳೆಯರ, ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಮರ, ಶೋಷಿತ ಸಮುದಾಯಗಳ ಪಾಲಿಗೆ ಈ ಸ್ವತಂತ್ರ ಇನ್ನು ಸಾಧ್ಯವಾಗಿಲ್ಲ. ಅಸಮಾನತೆಯ ಸಿದ್ಧಾಂತಗಳಲ್ಲಿಯೇ ಇಂದಿಗೂ ಜೀವಿಸುತ್ತಿರುವ ದೇಶದ ಜಾತಿಗ್ರಸ್ಥ, ಧರ್ಮಗ್ರಸ್ಥ ಹಾಗೂ ಪಾಳೆಗಾರಿಕೆಯ ವ್ಯವಸ್ಥೆಯಿಂದ  ಭಾರತೀಯ ರಾಜಕಾರಣ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಲಿಲ್ಲ.

ಭಾರತ ಸ್ವಾತಂತ್ರ್ಯದ ಎಂಟುವರೆ ದಶಕಗಳ ನಂತರದ ರಾಷ್ಟ್ರ ರಾಜಕಾರಣದ ಪ್ರಬಲ ಕೂಗು, ದೇಶಕ್ಕೆ ಒಬ್ಬ ದಲಿತ ಪ್ರಧಾನ ಮಂತ್ರಿ ಏಕೆ ಆಗಬಾರದು? ಅಥವಾ ಆಗಬೇಕು ಎಂಬುದಾಗಿದೆ. ಈ ಧ್ವನಿಯ ಹಿಂದೆಯೇ ಇದುವರೆಗೂ ಭಾರತ ಒಬ್ಬ ದಲಿತ ಅಸ್ಪೃಶ್ಯ ವ್ಯಕ್ತಿ ಅಥವಾ ಪ್ರತಿನಿಧಿ ದೇಶದ ಪ್ರಧಾನಿಯ ಹುದ್ದೆಗೇರಲಿಲ್ಲ ಅಥವಾ ಈ ಸ್ಥಾನಪಡೆಯಲು ಬಿಟ್ಟಿಲ್ಲ ಅಥವಾ ಈ ಹುದ್ದೆ ಅಲಂಕರಿಸಲು ಭಾರತೀಯ ಜಾತಿ ಕೇಂದ್ರೀತ ರಾಜಕಾರಣ ಒಪ್ಪಿಲ್ಲ ಎಂಬ ಕಟು ಸತ್ಯವೂ ಅಡಗಿದೆ. ಈ ನಗ್ನ ಸತ್ಯ ಕಾಂಗ್ರೆಸ್ ಪಕ್ಷವೂ ಸೇರಿ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೂ ಅನ್ವಯವಾದ ರಾಜಕೀಯ ನೀತಿಯೆ ಆಗಿದೆ.

ಭಾರತೀಯ ಸಾಮಾಜವು ಮೂಲತಃ ವರ್ಣ, ವರ್ಗ, ಜಾತಿಯಾದಾರಿತ ಮನಸ್ಥಿತಿಯುಳ್ಳದ್ದೆ ಆಗಿದ್ದು ಇಂತಹ ಸಾಮಾಜಿಕ ಸಂರಚನೆಯಿಂದ ಹುಟ್ಟಿದ ಎಲ್ಲಾ ರಾಷ್ಟೀಯ ಪ್ರಾದೇಶಿಕ ಪಕ್ಷಗಳೂ ಸಹ ದಲಿತ ಪ್ರಧಾನಿಯ ಕಲ್ಪನೆಯನ್ನು ಅಷ್ಟು ಸಹಜವಾಗಿ ಇದುವರೆಗೂ ಸ್ವೀಕರಿಸಲು, ಬೆಂಬಲಿಸಲು ಸಾಧ್ಯವಾಗಲಿಲ್ಲ. ಭಾರತದ ವರ್ತಮಾನದ ಅಸ್ಪೃಶ್ಯರ ರಾಜಕೀಯ ನಿರಾಳವೆಂಬಂತೆ ಇಂದು ದಲಿತ ಪ್ರಧಾನಿ ಎಂಬ ಮಾತು ಮುನ್ನೆಲೆಗೆ ಬಂದಿದೆ. ಅದೂ ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಒಕ್ಕೂಟವಾದ “ಇಂಡಿಯಾ” ಮೈತ್ರಿಕೂಟದಲ್ಲಿ ಪ್ರಸ್ತಾಪವಾಗಿದೆ.

ಖರ್ಗೆ ಹೆಸರಿನ ಮೂಲಕ ಇತಿಹಾಸದ ರಾಷ್ಟ ರಾಜಕಾರಣದಲ್ಲಿ ಇಂದು ಎರಡನೇಯ ಬಾರಿ ಒಬ್ಬ ದಲಿತ ರಾಜಕಾರಣಿಯ ಹೆಸರು ಪ್ರಧಾನಿ ಹುದ್ದೆಗಾಗಿ ಮುನ್ನಲೆಗೆ ಬಂದಿದೆ. ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಲ್ಲಿ 8 ಬಾರಿ ಚುಣಾವಣೆಯಲ್ಲಿ ಗೆದ್ದಿದ್ದ ಪ್ರಭಾವಿ ರಾಜಕೀಯ ಮುತ್ಸದ್ದಿ ಬಾಬು ಜಗಜೀವನ್ ರಾಮ್ ಅವರ ಹೆಸರು ಕೇಳಿ ಬಂದಿತ್ತು. 1977 ಮತ್ತು 1979ರಲ್ಲಿ ಎರಡು ಬಾರಿಯೂ ಇವರು ಪ್ರಧಾನಿಯಾಗುವ ಅವಕಾಶಗಳಿದ್ದರೂ ಕಾಂಗ್ರೆಸ್ ಪಕ್ಷದಲ್ಲಿದ್ದ ಜಾತಿಗ್ರಸ್ಥ ಮೇಲ್ಜಾತಿ ಮುಖಂಡರೇ ಅಡ್ಡಗಾಲಾದ ಪರಿಣಾಮ ಮೊದಲ ದಲಿತ ಪ್ರಧಾನಿಯಾಗುವ ಅವಕಾಶ ತಪ್ಪಿತ್ತು. ಇದರಿಂದ ಬೇಸತ್ತ ಜಗಜೀವನ್ ರಾಮ್ ಕೊನೆಗೆ ಪಕ್ಷದಿಂದ ಹೊರಬಂದು Congress for Democracy (CFD) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಆನಂತರ ಇವರ ಪಕ್ಷವನ್ನು ಜನತಾ ಸರ್ಕಾರದೊಂದಿಗೆ ವಿಲೀನಗೊಳಿಸಿ ಕೊನೆಗೆ ಉಪ ಪ್ರಧಾನಿಯಾದರು.

ಜಗತ್ತಿನ ರಾಜಕೀಯ ಇತಿಹಾಸ ಕಂಡಾಗ, ವರ್ಣ ಶ್ರೇಷ್ಠತೆಯ ಗೀಳಿನಲ್ಲಿಯೇ ನೂರಾರು ವರ್ಷಗಳು ಅಧಿಕಾರನಡೆಸಿದ ಜೊತೆಗೆ ನೂರು ವರ್ಷಗಳು ಜಗತ್ತಿನ ದೊಡ್ಡಣ್ಣನಾಗಿ ಆಳಿದ ಅಮೇರಿಕಾದಂತ ದೇಶವೂ ಸಹ ಬರಾಕ್ ಒಬಾಮರಂತ ಕರಿಯರನ್ನು ತನ್ನ ದೇಶದ ಅತ್ಯುನ್ನತ ಸ್ಥಾನವಾದ ಅಧ್ಯಕ್ಷ ಸ್ಥಾನವನ್ನು ನೀಡಿ, ಕಪ್ಪು ಜಜಾಂಗದ ಒಬ್ಬರಿಗೆ ಆಳುವ ಅವಕಾಶವನ್ನು ನೀಡಿತು. ಹಾಗೆಯೇ ಸೂರ್ಯ ಮುಳುಗದ ಸಾಮ್ರಾಜ್ಯವಾಗಿ, ಒಂದು ಕಾಲದಲ್ಲಿ ಭಾರತವನ್ನು ತನ್ನ ವಸಾಹತು ದೇಶವಾಗಿಸಿಕೊಂಡು ತನ್ನ ಆಡಳಿತಾವಧಿಯಲ್ಲಿ ತಮ್ಮ ಹೋಟಲ್ ಮತ್ತು ಕ್ಲಬ್ ಗಳಲ್ಲಿ ಭಾರತೀಯರು ಮತ್ತು ನಾಯಿಗಳಿಗೆ ಪ್ರವೇಶವಿಲ್ಲ ಎಂದು ನಾಮಫಲಕಗಳನ್ನು ಹಾಕಿ ತಮ್ಮ ವರ್ಣ ಶ್ರೇಷ್ಠತೆಯನ್ನು ಪ್ರದರ್ಶಿಸಿದ ಬ್ರಿಟಿಷರ ಬ್ರಿಟನ್ ದೇಶ ಕೂಡ ಇಂದು ಭಾರತೀಯನಾದ ರಿಷಿ ಸುನಕ್ ಅವರನ್ನು ತಮ್ಮ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿಕೊಂಡಿದೆ. ಆದರೆ ಭಾರತದಲ್ಲಿ ಮಾತ್ರ ಸ್ವಾತಂತ್ರ್ಯನಂತರವೂ ಕೂಡ ಬಹುಪಕ್ಷಿಯ ಸಂಸದಿಯ ಪ್ರಜಾಪ್ರಭುತ್ವದಲ್ಲಿ ಇಂದಿಗೂ ದಲಿತ ಪ್ರಧಾನಿಯನ್ನು ನೋಡಲು ಸಾಧ್ಯವಾಗಲಿಲ್ಲ. ಅಲ್ಲದೆ, ಸಮಾಜವಾದ, ಮಾರ್ಕ್ಸ್ ವಾದ, ಅಂಬೇಡ್ಕರ್ ವಾದ, ಪೆರಿಯಾರ್ ವಾದ, ಸಮ ಸಮಾಜವಾದ ಬಯಸುವ ಅನೇಕ ಪಕ್ಷಗಳು ಹಲವಾರು ರಾಜ್ಯಗಳಲ್ಲಿ ಅಧಿಕಾರ ಸ್ಥಾಪಿಸಿ ಆಡಳಿತ ನಡೆಸಲು ಸಾಧ್ಯವಾಗಿದ್ದರೂ ಇಂದಿನವರೆಗೂ ಯಾವುದೇ ಪಕ್ಷವು ತನ್ನದೆ ದೇಶದ ದಲಿತ, ಮುಸ್ಲಿಂ, ಮಹಿಳೆಯರಿಗೆ ದೇಶದ ಪ್ರಧಾನಿಯಾಗಲು ಬಿಟ್ಟಿಲ್ಲ.

ಇತ್ತೀಚೆಗೆ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ ಹಾಗೂ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ರವರು ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸುವ ಮೂಲಕ  ದಲಿತ ಪ್ರಧಾನಿ ಎಂಬ ಐತಿಹಾಸಿಕ ಕಲ್ಪನೆಗೆ ಮರು ಹುಟ್ಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಸಹ ಸದಸ್ಯ ಪಕ್ಷಗಳೇ  ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವ ಮಾತುಗಳನ್ನು ಆ ಒಕ್ಕೂಟದ ವೇದಿಕೆಯ ನಾಯಕರಿಂದಲೇ ವ್ಯಕ್ತವಾಗಿವೆ. ದೇಶದ ರಾಜಕೀಯದ ಮಟ್ಟಿಗೆ ಇದು ಪ್ರಮುಖ ಹಾಗೂ ಮಹತ್ವದ ಬೆಳವಣಿಯಾಗಿದೆ. ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪಗೊಂಡದ್ದು ಕಾಂಗ್ರೆಸೇತರ ಹಾಗೂ ಬಹುಜನ ಸಮಾಜ ಪಾರ್ಟಿ, ಲೋಕ ಜನಶಕ್ತಿ ಪಾರ್ಟಿ, ರೀ ಪಬ್ಲಿಕನ್ ಪಾರ್ಟಿ, ದಲಿತ್ ಪ್ಯಾಂಥರ್ಸ್ ನಂತಹ ದಲಿತ ಮುಂದಾಳತ್ವದ ಪಕ್ಷಗಳಿಂದಲ್ಲ. ದಲಿತೇತರ ಪಕ್ಷ ಹಾಗೂ ನಾಯಕರಿಂದ ಎಂಬುದು ಗಮನರ್ಹ.

ಅನಿರೀಕ್ಷಿತವಾದರೂ, ಇದು ಒಂದು ರೀತಿಯಲ್ಲಿ ಬಿಜೆಪಿ ವಿರೋಧಿ ಒಕ್ಕೂಟಕ್ಕೆ ಅನಿವಾರ್ಯವೂ ಕೂಡ. ‘ಇಂಡಿಯಾ’ ಒಕ್ಕೂಟದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ಬಿಜೆಪಿಯ ಮಟ್ಟಿಗೆ ಪ್ರಮುಖ ಪ್ರತಿಪಕ್ಷವೂ ಆಗಿದೆ. ದೇಶದಲ್ಲಿ ಈಗಾಗಲೇ ಸುಮಾರು 150 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಕಾಂಗ್ರೆಸ್‌ ನೇರಾ ನೇರ ಪ್ರತಿರೋಧ ಒಡ್ಡುತ್ತಿದೆ. ಯಾವುದೇ ಒಕ್ಕೂಟದಲ್ಲಿ ದೊಡ್ಡ ಪಕ್ಷದವರೇ ಪ್ರಧಾನಿ ಅಭ್ಯರ್ಥಿಯಾಗುವುದು ಸ್ವಾಭಾವಿಕ. ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೂಡ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪುವ ಎಲ್ಲಾ ಸಾಧ್ಯತೆ-ಕಾರಣಗಳು ದಟ್ಟವಾಗಿವೆ. ಇನ್ನು ಕಾಂಗ್ರೆಸ್ ಒಳಗಿನ ಮೇಲ್ಜಾತಿ ಬಲಿಷ್ಠ ನಾಯಕರ ಒಪ್ಪಿಗೆ ಅಷ್ಟು ಸುಲಭವಲ್ಲದಿದ್ದರೂ ರಾಹುಲ್ ಗಾಂಧಿಯ ಶೃಜನಶೀಲ, ಪ್ರಗತಿಪರ ನಿಲುವುಗಳೇ ಮುಂದಿನ ಕಾಂಗ್ರೆಸ್ ಪಕ್ಷದ ಭವಿಷ್ಯವಾಗುತ್ತಿರುವುದರಿಂದ ಪಕ್ಷದ ಖರ್ಗೆ ವಿರೋಧಿ ಒಳಗುದಿ ತಾತ್ಕಾಲಿಕವಾಗಿ ತಣ್ಣಗಾಗಬಹುದು. ಖರ್ಗೆ ಅವರಂತಹ ಹಿರಿಯ ರಾಜಕೀಯ ಮುತ್ಸದ್ದಿ, ಪ್ರಖರ ವಾಗ್ಮಿಯನ್ನು ಸಹಜವಾಗಿಯೇ ಲೋಹಿಯ ಸಮಾಜವಾದದ ಸಿದ್ಧಾಂತಗಳನ್ನು ನಂಬಿರುವ ನಿತೀಶ್ ಕುಮಾರ್, ಅಖಿಲೇಶ್ ಯಾದವ್, ಲಾಲು ಪ್ರಸಾದ್ ಯಾದವ್ ರವರು ಒಪ್ಪಿಕೊಳ್ಳಬೇಕಿದೆ.

ದಕ್ಷಿಣದ  ಎಡಪಂತಿಯರ ಅಧಿಕಾರವುಳ್ಳ ಕೇರಳ, ಪೆರಿಯಾರ್ ವಿಚಾರ ಪ್ರೇರಿತ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಅಧಿಕಾರಸ್ಥ ಪಕ್ಷಗಳು ಈಗಲೇ ‘ಇಂಡಿಯಾ’ ಮೈತ್ರಿಕೂಟದ ಸಹಭಾಗಿ ಪಕ್ಷಗಳಾಗಿವೆ. ಮುಖ್ಯವಾಗಿ ಈ ದಕ್ಷಿಣ ಭಾರತದ ರಾಜ್ಯಗಳು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿದ್ದು ಸುಮಾರು 200 ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ. ದಕ್ಷಿಣ ಭಾರತದ ಕರ್ನಾಟಕದ ಖರ್ಗೆ ಪ್ರಧಾನಿ ಎಂದು ಬಿಂಬಿಸುವ ಮೂಲಕ, ದಲಿತ ಪ್ರಧಾನಿ ಎಂಬ ಪ್ರಚಾರದಿಂದ ರಾಷ್ಟ್ರಾದ್ಯಂತ ದಲಿತ ಮತಗಳ ಕ್ರೋಢೀಕರಣ ಜೊತೆಗೆ ಸೆಕ್ಯುಲರ್ ಅಜಂಡಾದೊಂದಿಗೆ ಮುಸ್ಲಿಮರ ಮತಗಳನ್ನು ಪಡೆಯುವ ಮೂಲಕ ಬಿಜೆಪಿಯನ್ನು ಸೋಲಿಸುವ ರಾಜಕೀಯ ಲೆಕ್ಕಾಚಾರವನ್ನು ‘ಇಂಡಿಯಾ’ ಮೈತ್ರಿಕೂಟವು ಒಳಗೊಂಡಿದೆ. ಅಲ್ಲದೆ, ಇಪ್ಪತ್ತೆಂಟಕ್ಕೂ ಹೆಚ್ಚು ಪಕ್ಷಗಳ ವೇದಿಕೆಯಾದ ಈ ಮೈತ್ರಿಕೂಟವನ್ನು ಸಮಾಧಾನಿಸಿ, ಸಮನ್ವಯಗೊಳಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಇದರ ಜೊತೆಗೆ ಸಂಘಪರಿವಾರದ ಹಿಂದುತ್ವದ ಸಾಂಸ್ಕೃತಿಕ ರಾಜಕಾರಣ ಹಾಗೂ ಮುಸ್ಲಿಂ ವಿರೋಧಿ ಅಜಂಡಾವನ್ನೇ ವೋಟ್ ಬ್ಯಾಂಕ್ ಆಗಿಸಿಕೊಂಡು ಎರಡು ಬಾರಿ ಗೆದ್ದು, ಅಧಿಕಾರ ಹಿಡಿದಿರುವ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಸೋಲಿಸುವಂತಹ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವ ಹಿರಿತನ ಮತ್ತು ಅರ್ಹ ವ್ಯಕ್ತಿತ್ವ ಖರ್ಗೆಯವರಿಗಿದೆ ಎಂಬ ಕಾರಣಕ್ಕಾಗಿಯೆ ಕಾಂಗ್ರೆಸಲ್ಲದ ಹಾಗೂ ದಲಿತೇತರ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿಯವರು ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆಯವರ ಹೆಸರನ್ನು ಸೂಚಿಸಿದ್ದಾರೆ.

‘ಇಂಡಿಯಾ’ ಮೈತ್ರಿಕೂಟ ಪಕ್ಷಗಳ ದಲಿತ ಪ್ರಧಾನಿ ಎಂಬ ರಾಜಕಾರಣದ ಹಿಂದೆ ಏನೇ ರಾಜಕೀಯವಿದ್ದರೂ, ವಿದ್ಯಾರ್ಥಿ ದೇಸೆಯಲ್ಲಿಯೇ ರಾಜಕಾರಣದ ಆಸಕ್ತಿಯುಳ್ಳ ಖರ್ಗೆಯವರು ಕಾನೂನು ಪದವೀಧರರು. 1969ರಲ್ಲಿ ಪಕ್ಷ ಸೇರಿ ಕಲಬುರಗಿ ನಗರ ಕಾಂಗ್ರೆಸ್‌ನ ಅಧ್ಯಕ್ಷರಾದರು. 1972ರಲ್ಲಿ ಗುರುಮಿಠಕಲ್‌ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಅಂದಿನಿಂದ ಸತತ ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾದ ಖರ್ಗೆ, 2008ರ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಚಿತ್ತಾಪುರಕ್ಕೆ ಬಂದು, ಅಲ್ಲಿಂದ ಸ್ಪರ್ಧಿಸಿ ಸತತ ಒಂಬತ್ತನೇ ಬಾರಿಗೆ ಶಾಸಕರಾದರು.

ಖರ್ಗೆಯವರು ಕರ್ನಾಟಕ ಸರ್ಕಾರದ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಪ್ರಮುಖ ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. 1976ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ, 1978ರ ದೇವರಾಜ ಅರಸುರವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ ರಾಜ್ ರಾಜ್ಯ ಸಚಿವ, 1980ರಲ್ಲಿ ಗುಂಡೂರಾವ್ ರವರ ಸಂಪುಟದಲ್ಲಿ ಕಂದಾಯ ಸಚಿವ,  1990ರಲ್ಲಿ ಬಂಗಾರಪ್ಪ ಸಂಪುಟದಲ್ಲಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ,  1992ರ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಹಕಾರ ಮತ್ತು ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಸಚಿವ, 1999ರಲ್ಲಿ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಮಲ್ಲಿಕಾರ್ಜುನ ಖರ್ಗೆ ಜವಾಬ್ದಾರಿ ನಿರ್ವಹಿಸಿದ್ದಾರೆ. ಅಲ್ಲದೆ, 2004ರ ಧರ್ಮಸಿಂಗ್ ಸಂಪುಟದಲ್ಲಿ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವರೂಸಹ ಆಗಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವಾರು ಬಾರಿ ಮುಖ್ಯಮಂತ್ರಿ ಗಾದಿಯ ಸನಿಹ ಬಂದಿದ್ದ ಖರ್ಗೆಯವರು ಕೊನೆ ಗಳಿಗೆಯಲ್ಲಿ ಜಾತಿ ರಾಜಕೀಯ ಲೆಕ್ಕಾಚಾರಗಳಿಂದ ವಂಚಿತರಾಗಿದ್ದರು.

1994 ಹಾಗೂ 2008ರಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದ ಖರ್ಗೆ 2005ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಆ ನಂತರ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿ, ಮನಮೋಹನ್‌ ಸಿಂಗ್ ಸಂಪುಟದಲ್ಲಿ ರೈಲ್ವೆ ಸಚಿವ, ಕಾರ್ಮಿಕ ಮತ್ತು ಉದ್ಯೋಗ ಸಚಿವ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು. 2014-19ರವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದರು. ಜೊತೆಗೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರೂ ಆಗಿದ್ದರು. ನಂತರ 2019ರ ಲೋಕಸಭಾ ಚುನಾವಣೆಯಲ್ಲಿ ಸೋತರು. ಅದು ಅವರ ಐದು ದಶಕಗಳ ಚುನಾವಣಾ ರಾಜಕಾರಣದಲ್ಲಿನ ಮೊದಲ ಸೋಲು.

ಖರ್ಗೆ ಕೂಡ ದೇವೇಗೌಡರಂತೆಯೇ ಪ್ರಬುದ್ಧ ರಾಜಕಾರಣಿ. ಸಾಧ್ಯವಾದರೆ ಎರಡನೇ ಕನ್ನಡಿಗ ಪ್ರಧಾನಿ. ಶೂದ್ರ ಹಾಗೂ ದಲಿತ ಪ್ರಧಾನಿಗಳನ್ನು ದೇಶಕ್ಕೆ ಕೊಡುಗೆ ಕೊಟ್ಟ ರಾಜ್ಯ ಕರ್ನಾಟಕವಾಗಬಹುದು. ಇವರು ಅಧ್ಯಕ್ಷರಾದಾಗಿನಿಂದ ಕಾಂಗ್ರೆಸ್ ಪಕ್ಷ ಜನರಿಗೆ ಹಾಗೂ ಕಾರ್ಯಕರ್ತರಿಗೆ ಹೆಚ್ಚು ಹತ್ತಿರವಾಗುತ್ತಿದೆ. ಒಂದಷ್ಟು ಪಕ್ಷದ ನಾಯಕರು ಜಾತ್ಯತೀತ ತತ್ವಗಳಪರ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿ ತಾವು ಕೂಡ ಜನಪದ, ಪ್ರಗತಿಪರ ಎಂದು ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದಾರೆ; ಎನ್ನುವುದು ಕೂಡ ಸತ್ಯ. ಕರ್ನಾಟಕದ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ಸಹ ದಶಕಗಳ ಹಿಂದಿನ ಒತ್ತಾಯವಾಗಿದೆ. ಇದರ ಮೊದಲ ಸಾಲಿನಲ್ಲಿ ಇದ್ದ ಹೆಸರು ಖರ್ಗೆಯವರದ್ದೇ ಆಗಿದೆ. ದಲಿತರೊಳಗಿನ ಎಡ-ಬಲ ಒಳಮೀಸಲಾತಿಗಳ ನಡುವೆಯೂ ಖರ್ಗೆ ಹೆಸರೇ ರಾಜ್ಯದ ಬಹುತೇಕ ಎಸ್ಸಿ-ಎಸ್ಟಿ ಸಮುದಾಯಗಳ ಆಯ್ಕೆ ಆಗಿತ್ತು.

ಅಂಬೇಡ್ಕರರ ನೈಜ ಅನುಯಾಯಿ, ಸಮಾಜವಾದಿ, ಸಮ ಸಮಾಜದ ಕನಸುಳ್ಳ ಒಬ್ಬ ದಲಿತ ಪ್ರತಿನಿದಿಯಾಗಿ ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಯಾದರೇ ದೇಶದ ಮೊದಲ ದಲಿತ ಪ್ರಧಾನಮಂತ್ರಿ ಎನ್ನಿಸಿಕೊಳ್ಳಲಿದ್ದಾರೆ. ಅಲ್ಲದೆ, ಇಂದು ದೇಶದಲ್ಲಿ ತಾಂಡವವಾಡುತ್ತಿರುವ ಧರ್ಮದ್ವೇಷದ, ಜಾತಿ ಕೇಂದ್ರೀತ ರಾಜಕಾರಣದ ಬದಲಾಗಿ ಸೋಷಿತರ ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ಅವರು ಸಾಕ್ಷಿಯೂ ಆಗಬಹುದು.

ದೇಶ

“ಈ ನಾಚಿಕೆಗೇಡಿನ ಭದ್ರತಾ ಲೋಪಕ್ಕಾಗಿ ಉನ್ನತ ಅಧಿಕಾರಿಗಳನ್ನು ಶಿಕ್ಷಿಸದೆ, ಸಂಸದರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದು, ಆ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ”

“ಪ್ರಧಾನಿ ಮತ್ತು ಅವರ ಪಕ್ಷವು ದೇಶದಲ್ಲಿ ಏಕಪಕ್ಷೀಯ ಆಡಳಿತವನ್ನು ಸ್ಥಾಪಿಸಲು ಬಯಸುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ‘ಎಕ್ಸ್’ ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಭದ್ರತೆ ಕೊರತೆ ಕುರಿತು ಗೃಹ ಸಚಿವರಿಂದ ವರದಿ ಕೇಳಿದ ಕಾರಣಕ್ಕಾಗಿ 141 ಸಂಸದರನ್ನು ಅಮಾನತು ಮಾಡಲಾಗಿದೆ. 6 ಅತಿಕ್ರಮಣ ಪ್ರವೇಶ ಮಾಡಿದವ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತಿಕ್ರಮಣ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಸಂಸದರು ಮುಕ್ತರಾಗಿದ್ದಾರೆ. ಅವರನ್ನು ಇನ್ನೂ ವಿಚಾರಣೆ ಮಾಡಿಲ್ಲ.

ಇದು ಯಾವ ರೀತಿಯ ವಿಚಾರಣೆ? ಸಂಸತ್ತಿನ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಹಿರಿಯ ಅಧಿಕಾರಿಗಳು ಏಕೆ ಇದರ ಹೊಣೆಯನ್ನು ವಹಿಸಿಕೊಂಡಿಲ್ಲ? ನಿಸ್ಸಂಶಯವಾಗಿ ಅತಿಕ್ರಮಣಕಾರರು ತಿಂಗಳಿನಿಂದ ಈ ಯೋಜನೆ ರೂಪಿಸಿರುತ್ತಾರೆ. ಈ ಗುಪ್ತಚರ ವೈಫಲ್ಯಕ್ಕೆ ಯಾರು ಹೊಣೆ? ಸಂಸತ್ತಿನ ಬಹು-ಪದರದ ಭದ್ರತೆಯನ್ನು ಗಮನಿಸಿ, ಇಬ್ಬರು ಅತಿಕ್ರಮಣ ಪ್ರವೇಶ ಮಾಡಿದವರು ತಮ್ಮ ಶೂಗಳಲ್ಲಿ ಹಳದಿ ಅನಿಲ ಡಬ್ಬಿಗಳನ್ನು ಮರೆಮಾಡಿ ಕಟ್ಟಡದೊಳಗೆ ನುಸುಳಿ, ಭಾರತೀಯ ಪ್ರಜಾಪ್ರಭುತ್ವದ ತೊಟ್ಟಿಲನ್ನು ಹೇಗೆ ತಲುಪಿದರು?

ಪ್ರಧಾನಿ ಮತ್ತು ಅವರ ಪಕ್ಷವು ದೇಶದಲ್ಲಿ “ಏಕಪಕ್ಷೀಯ ಆಡಳಿತ” ಸ್ಥಾಪಿಸಲು ಬಯಸುತ್ತಿದ್ದಾರೆ. ಅವರು “ಏಕ್ ಅಕೇಲಾ” ಎಂದು ಹೇಳುತ್ತಾರೆ. ಇದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವುದಕ್ಕೆ ಸಮ. ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ಮೂಲಕ ಅವರು ನಿಖರವಾಗಿ ಇದನ್ನೇ ಮಾಡಿದ್ದಾರೆ. ಈ ನಾಚಿಕೆಗೇಡಿನ ಭದ್ರತಾ ಲೋಪಕ್ಕಾಗಿ ಉನ್ನತ ಅಧಿಕಾರಿಗಳನ್ನು ಶಿಕ್ಷಿಸದೆ, ಸಂಸದರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದು, ಆ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

ದೇಶ

ಗಂಗಾಜಲದ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸಿರುವ ಬಿಜೆಪಿ ಸರಕಾರವನ್ನು ಕಾಂಗ್ರೆಸ್ ಪಕ್ಷ ಖಂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಪ್ರವಾಸವಾಗಿ ಇಂದು ಉತ್ತರಾಖಂಡಕ್ಕೆ ತೆರಳಿದ್ದರು. ಅಲ್ಲಿ ಅವರು ಸಾಂಪ್ರದಾಯಿಕ ಬಿಳಿ ಬಟ್ಟೆಗಳನ್ನು ಧರಿಸಿ ಪವಿತ್ರ ಜೋಲಿಂಗ್‌ಕಾಂಗ್‌ ಪರ್ವತದ ಮುಂದೆ ಧ್ಯಾನ ಮಾಡಿದರು.

ಮತ್ತು ಗುಂಜಿ ಗ್ರಾಮಕ್ಕೆ ತೆರಳಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಜತೆಗೆ 4,200 ಕೋಟಿ ರೂ.ಗಳ ಕಲ್ಯಾಣ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಪ್ರಧಾನಿ ಮೋದಿ ಉತ್ತರಾಖಂಡ್ ನಲ್ಲಿದ್ದಾಗ ಗಂಗಾಜಲದ ಮೇಲೆ ಶೇ.18ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿರುವುದನ್ನು ಕಾಂಗ್ರೆಸ್ ಸೇರಿದಂತೆ ಪಕ್ಷಗಳು ತೀವ್ರವಾಗಿ ಖಂಡಿಸಿವೆ.

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ x ಜಾಲತಾಣದಲ್ಲಿ ಪ್ರಕಟಿಸಿರುವ ಪೋಸ್ಟ್‌ನಲ್ಲಿ, “ನೀವು ಇಂದು ಉತ್ತರಾಖಂಡದಲ್ಲಿ ಇರುವುದು ಉತ್ತಮ. ನಿಮ್ಮ ಸರ್ಕಾರ ಗಂಗಾಜಲಕ್ಕೆ 18% ಜಿಎಸ್‌ಟಿ ವಿಧಿಸಿದೆ. ಮನೆಯಿಂದ ಗಂಗಾಜಲವನ್ನು ಖರೀದಿಸುವವರಿಗೆ ಇದು ಎಂತಹ ಹೊರೆ ಎಂದು ಯೋಚಿಸಲೂ ನನಗೆ ಸಾಧ್ಯವಾಗುತ್ತಿಲ್ಲ.

ಇದು ಜನ ಸಾಮಾನ್ಯರ ಬಗ್ಗೆ ಯೋಚಿಸದ ಬಿಜೆಪಿ ಸರ್ಕಾರದ ಕಪಟತನದ ಪರಮಾವಧಿ” ಎಂದು ಟೀಕಿಸಿದ್ದಾರೆ. ಅಲ್ಲದೆ ಗಂಗಾಜಲದ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಹಲವು ರಾಜಕೀಯ ಪಕ್ಷಗಳು ತೀವ್ರವಾಗಿ ವಿರೋಧಿಸುತ್ತಿವೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಚುನಾವಣಾ ಆಯೋಗವು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ.

ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಂಬರುವ ಸಂಸತ್ತಿನ ಚುನಾವಣೆಯ ಮುನ್ನೋಟ ಎಂದು ಪರಿಗಣಿಸಲಾಗಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಐದು ರಾಜ್ಯಗಳ ಚುನಾವಣಾ ಕಾರ್ಯದಲ್ಲಿ ಕೆಲ ತಿಂಗಳ ಹಿಂದೆಯೇ ನಿರತವಾಗಿದ್ದು, ಇದೀಗ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ.

ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಇಂದು ಪ್ರಕಟಿಸಿದ್ದಾರೆ. ಅದರಂತೆ ಛತ್ತೀಸ್ ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 7 ರಂದು ಮಿಜೋರಾಂ, ನವೆಂಬರ್ 17 ರಂದು ಮಧ್ಯಪ್ರದೇಶ, ನವೆಂಬರ್ 23 ರಂದು ರಾಜಸ್ಥಾನ ಮತ್ತು ನವೆಂಬರ್ 30 ರಂದು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ ಎಂದು ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.

ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸುತ್ತಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ ಮತ್ತು ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಆಡಳಿತ ನಡೆಸುತ್ತಿದೆ. ರಾಜಸ್ಥಾನ 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಅಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಆಂತರಿಕ ಸಂಘರ್ಷ ಕಾಂಗ್ರೆಸ್ ಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ಆದರೆ, ಕಾಂಗ್ರೆಸ್ ವರಿಷ್ಠರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಸರಿಪಡಿಸಿದ ನಂತರ, ಪರಿಸ್ಥಿತಿ ಸ್ಥಿರವಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜಸ್ಥಾನದಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅಲ್ಲಿ ರೂ.7,000 ಕೋಟಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ರಾಜಸ್ಥಾನದಲ್ಲಿ ಕಾಂಗ್ರೆಸ್‌ನಂತೆಯೇ ಬಿಜೆಪಿಯಲ್ಲೂ ಗುಂಪು ಸಂಘರ್ಷಗಳಿವೆ. ಈ ಬಾರಿಯೂ ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೇ ಸಿಂಧಿಯಾ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿಲ್ಲ. ಇದರಿಂದ ಉದ್ಭವಿಸಿರುವ ಆಂತರಿಕ ಕಲಹಗಳನ್ನು ನಿಭಾಯಿಸಲು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ವಿಧಾನಸಭೆ ಚುನಾವಣೆ ನಡೆಸಲು ನಿರ್ಧರಿಸಿದೆ.

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. 230 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಒಂದು ವರ್ಷ ಆಡಳಿತ ನಡೆಸಿತು. ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ ಕೆಲವು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದರಿಂದ, ಬಿಜೆಪಿ ಅಧಿಕಾರ ಹಿಡಿಯಿತು.

ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಚುನಾವಣಾ ಭರವಸೆಗಳ ಘೋಷಣೆಯಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಮಹಿಳೆಯರಿಗೆ ತಿಂಗಳಿಗೆ ರೂ.1,000 ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ಆರಂಭಿಸಿತು. ಆದರೆ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ರೂ.1,500 ನೀಡಲಾಗುವುದು ಎಂದು ಹೇಳಿದೆ. ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ವರದಿಗಳು ತಿಳಿಸುತ್ತಿವೆ.

ತೆಲಂಗಾಣದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ನೇತೃತ್ವದಲ್ಲಿ ಭಾರತ್ ರಾಷ್ಟ್ರ ಸಮಿತಿ ಪಕ್ಷ ಆಡಳಿತ ನಡೆಸುತ್ತಿದೆ. ಹೇಗಾದರೂ ಮಾಡಿ ಅಲ್ಲಿ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ಕಳೆದ ಕೆಲವು ತಿಂಗಳುಗಳಿಂದ ಕಸರತ್ತು ನಡೆಸುತ್ತಿದೆ. ಅದೇ ಸಮಯದಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಭಾವ ಹೆಚ್ಚಾಗಿದೆ.

ಹೀಗಾಗಿ ಕಾಂಗ್ರೆಸ್ ಪಕ್ಷವೂ ಅಧಿಕಾರ ಹಿಡಿಯಲು ತೀವ್ರ ಪೈಪೋಟಿ ನಡೆಸುತ್ತಿದೆ. ಭಾರತ್ ರಾಷ್ಟ್ರ ಸಮಿತಿಯ 12 ಮಾಜಿ ಸಚಿವರು ಸೇರಿದಂತೆ 35 ಪ್ರಮುಖ ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಉತ್ತೇಜನ ನೀಡಿದೆ. ತೆಲಂಗಾಣ ಚುನಾವಣಾ ಕ್ಷೇತ್ರವು ಬಿಆರ್‌ಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ದೇಶ ರಾಜಕೀಯ

ಬಿಜೆಪಿ ವಿರುದ್ಧ ಮೈತ್ರಿಯೊಂದಿಗೆ ಇಂಡಿಯಾ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ ಮಾತನಾಡಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಕಾಂಗ್ರೆಸ್ ಪಕ್ಷದ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಿತಿಯಾಗಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಮಿತಿಯಲ್ಲಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ 39 ಸದಸ್ಯರಿದ್ದಾರೆ.

ಈ ಹಿನ್ನಲೆಯಲ್ಲಿ, ಈ ಸಮಿತಿಯು ಕಳೆದ ಆಗಸ್ಟ್ 20 ರಂದು ಪುನರ್ ರಚಿಸಲಾಯಿತು. ಸಚಿನ್ ಪೈಲಟ್ ಮತ್ತು ಶಶಿ ತರೂರ್ ಸಮಿತಿಯಲ್ಲಿ ಹೊಸ ಸೇರ್ಪಡೆಯಾದರು. ಈ ಸಮಿತಿಯು ಕಾಂಗ್ರೆಸ್ ಪಕ್ಷದಲ್ಲಿ ಅತ್ಯುನ್ನತ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಅದನ್ನು ಜಾರಿಗೊಳಿಸುವ ಅಧಿಕಾರವನ್ನು ಹೊಂದಿರುತ್ತದೆ.

ಇದನ್ನೂ ಓದಿ: ಅಫ್ಘಾನಿಸ್ತಾನ್: ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಿದ ಅಪರಾಧಕ್ಕಾಗಿ ಒಬ್ಬ ಅಮೇರಿಕನ್ ಸೇರಿದಂತೆ 18 ಸಿಬ್ಬಂದಿಯನ್ನು ಬಂಧಿಸಲಾಗಿದೆ!

ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿ ಪುನಾರಚನೆ ಬಳಿಕ ಇಂದು ಮೊದಲ ಸಭೆ ನಡೆಯಿತು. ಸಭೆಯಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಜನತೆಗೆ ಏಕತೆಯ ಸಂದೇಶ ಸಾರಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಕಾಂಗ್ರೆಸ್ ಪಕ್ಷವನ್ನು ‘ಇಂಡಿಯಾ’ ಮೈತ್ರಿಯೊಂದಿಗೆ ಒಗ್ಗೂಡಿಸಿ ಬಿಜೆಪಿ ವಿರುದ್ಧ ಹೋರಾಡುವಂತೆ ಕೇಳಿಕೊಂಡರು.

ವಿರೋಧ ಪಕ್ಷಗಳನ್ನು ಒಳಗೊಂಡ ‘ಇಂಡಿಯಾ’ ರ‍್ಯಾಲಿಯನ್ನು ಅಕ್ಟೋಬರ್ ಮೊದಲ ವಾರದಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ರ‍್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾದ ಕಮಲ್ ನಾಥ್ ಇಂದು ಹೇಳಿದ್ದಾರೆ.

ಪಕ್ಷದ ಅಧ್ಯಕ್ಷ ಖರ್ಗೆ ಮತ್ತು ಮೈತ್ರಿಕೂಟದ ಇತರ ಪಕ್ಷಗಳ ನಾಯಕರು ಸಮಾಲೋಚನೆ ನಡೆಸುತ್ತಿದ್ದು, ರ‍್ಯಾಲಿ ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎಂಬುದರ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ರಾಜಕೀಯ

ನವದೆಹಲಿ: ದೆಹಲಿಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ‘ಇಂಡಿಯಾ’ ಮೈತ್ರಿಕೂಟದ ವತಿಯಿಂದ ಸಮಾಲೋಚನಾ ಸಭೆ ನಡೆಯಿತು.

ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನಲ್ಲಿ ವಿಶೇಷ ಜಂಟಿ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ‘ಇಂಡಿಯಾ’ ಮೈತ್ರಿ ಪಕ್ಷಗಳ ಪರವಾಗಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ, ಅವರ ಮನೆಯಲ್ಲಿ ಸಮಾಲೋಚನಾ ಸಭೆ ನಡೆಯಿತು.

ಇದನ್ನೂ ಓದಿ: ಮಣಿಪುರ: ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ವಿಶ್ವಸಂಸ್ಥೆ; ತಿರಸ್ಕರಿಸಿದ ಭಾರತ!

ಸಭೆಯಲ್ಲಿ ಸಂಸತ್ತಿನ ವಿವಿಧ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ‘ಒಂದು ದೇಶ-ಒಂದು ಚುನಾವಣೆ’ ಯೋಜನೆ ವಿರುದ್ಧ ನಿರ್ಣಯವನ್ನು ತರಲು ನಿರ್ಧರಿಸಲಾಯಿತು. ಮತ್ತು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರ ಅನುಪಸ್ಥಿತಿಯ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ‘ಇಂಡಿಯಾ’ ಮೈತ್ರಿಯ ಹೆಸರನ್ನು ‘ಭಾರತ’ ಎಂದು ಬದಲಾಯಿಸಿದರೆ ಏನು ಮಾಡುತ್ತೀರಿ? ಕೇಜ್ರಿವಾಲ್ ಪ್ರಶ್ನೆ!

ರಾಜಕೀಯ

ಡಿ.ಸಿ.ಪ್ರಕಾಶ್

2014ರಲ್ಲಿ ಭಾರತದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಡುಗೆ ಸಿಲಿಂಡರ್ ಬೆಲೆ ರೂ.417 ಆಗಿತ್ತು. ಆದರೆ ಕ್ರಮೇಣ 1118 ರೂಪಾಯಿಗೆ ಏರಿಕೆಯಾಗಿದೆ. ಗಗನಕ್ಕೇರಿರುವ ಸಿಲಿಂಡರ್ ಬೆಲೆಯಿಂದಾಗಿ ಕುಟುಂಬದ ಮುಖ್ಯಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಕಡಿದಾದ ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು ಎಂದು ಕಾಂಗ್ರೆಸ್, ಡಿಎಂಕೆ, ಸಿಪಿಎಂ ಮತ್ತು ಇತರ ಪಕ್ಷಗಳು ನಿರಂತರವಾಗಿ ಒತ್ತಾಯಿಸುತ್ತಾ ಬಂದವು. ಆಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿದ್ದೆ ಸಿಲಿಂಡರ್ ಬೆಲೆ ಏರಿಕೆಗೆ ಕಾರಣ ಎಂದು ಮೋದಿ ಸರ್ಕಾರ ಹೇಳಿಕೊಂಡಿತ್ತು. ನಂತರ ಕಚ್ಚಾ ತೈಲ ಬೆಲೆ ಕುಸಿದರೂ ಮೋದಿ ಸರ್ಕಾರ ಸಿಲಿಂಡರ್ ಬೆಲೆ ಇಳಿಸಲಿಲ್ಲ.

ಈ ಹಿನ್ನಲೆಯಲ್ಲಿ 5 ರಾಜ್ಯಗಳಲ್ಲಿ ಚುನಾವಣೆ ಸಮೀಪಿಸುತ್ತಿರುವ ಕಾರಣ ಅಡುಗೆ ಸಿಲಿಂಡರ್ ಬೆಲೆಯನ್ನು 200 ರೂಪಾಯಿ ಕಡಿಮೆ ಮಾಡಿದೆ; ಕೇಂದ್ರ ಬಿಜೆಪಿ ಸರ್ಕಾರ. ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರೂ.200 ಸಬ್ಸಿಡಿ ನೀಡುವುದಾಗಿಯೂ ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರದ ಘೋಷಣೆ ಚುನಾವಣಾ ನಾಟಕ ಎಂದು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ.

ಈ ಹಿನ್ನಲೆಯಲ್ಲಿ “ಸಂಕಷ್ಟದಲ್ಲಿರುವ ನಾಡಿನ ಜನರ ಕೋಪವನ್ನು ರೂ.200 ಸಬ್ಸಿಡಿಯಿಂದ ಕಡಿಮೆ ಮಾಡಲು ಸಾಧ್ಯವಿಲ್ಲ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಈ ಬಗ್ಗೆ ಜಾಲತಾಣದಲ್ಲಿ ಹೇಳಿಕೆಯನ್ನು ಪ್ರಕಟಿಸಿರುವ ಅವರು, “ಯಾವಾಗ ಮತಗಳು ಕಡಿಮೆಯಾಗಲು ಪ್ರಾರಂಭಿಸುತ್ತದೆಯೋ, ಆಗ ಚುನಾವಣೆ ಉಡುಗೊರೆಗಳ ವಿತರಣೆ ಪ್ರಾರಂಭವಾಗುತ್ತದೆ!

ಜನರ ದುಡಿಮೆಯ ಹಣವನ್ನು ಲೂಟಿ ಮಾಡಿದ ನಿರ್ದಯಿ ಮೋದಿ ಸರ್ಕಾರ, ಪ್ರಸ್ತುತ ತಾಯಿ ಮತ್ತು ಸಹೋದರಿಯರ ಬಗ್ಗೆ ಸುಳ್ಳು ಅಭಿಮಾನ ತೋರಿಸುತ್ತಿದೆ. ಒಂಬತ್ತೂವರೆ ವರ್ಷಗಳ ಕಾಲ ಜನ ಸಾಮಾನ್ಯರ ಜೀವನವನ್ನು ಹಾಳುಮಾಡಿದ್ದಾರೆ. ಆಗ “ಪ್ರೀತಿಯ ಉಡುಗೊರೆ” ಏಕೆ ನೆನಪಿಗೆ ಬಂದಿಲ್ಲ?

ಒಂಬತ್ತೂವರೆ ವರ್ಷಗಳ ಕಾಲ 140 ಕೋಟಿ ಭಾರತೀಯರನ್ನು ಹಿಂಸಿಸಿದ ಬಿಜೆಪಿ ಸರ್ಕಾರ “ಚುನಾವಣಾ ಲಾಲಿಪಾಪ್‌ಗಳನ್ನು” ಹಂಚುವುದರಿಂದ ಏನೂ ಪ್ರಯೋಜವಾಗುವುದಿಲ್ಲ ಎಂದು ತಿಳಿದುಕೊಳ್ಳಬೇಕು. ನಿಮ್ಮ ಹತ್ತು ವರ್ಷಗಳ ಪಾಪಗಳು ತೊಳೆಯಲಾಗದು.

ಬಿಜೆಪಿಯಿಂದ ಜಾರಿಗೊಂಡ ಹಣದುಬ್ಬರವನ್ನು ಎದುರಿಸಲು ಹಲವು ರಾಜ್ಯಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಬಡವರಿಗೆ 500 ರೂಪಾಯಿ ಸಿಲಿಂಡರ್ ನೀಡಲು ಹೊರಟಿದೆ. ರಾಜಸ್ಥಾನದಂತಹ ಹಲವು ರಾಜ್ಯಗಳು ಇದನ್ನು ಈಗಾಗಲೇ ಜಾರಿಗೆ ತಂದಿವೆ.

ಸಂಕಷ್ಟದಲ್ಲಿರುವ ಜನರ ಸಿಟ್ಟು 200 ರೂಪಾಯಿಗಳ ಸಬ್ಸಿಡಿಯಿಂದ ಕಡಿಮೆಯಾಗುವುದಿಲ್ಲ ಎಂಬುದನ್ನು ಮೋದಿ ಸರ್ಕಾರ ಅರಿಯಬೇಕು. ಇಂಡಿಯಾದ ಭಯ ಒಳ್ಳೆಯದು, ಮೋದಿ ಅವರೇ! ಜನ ಸಾಮಾನ್ಯರು ನಿರ್ಧರಿಸಿದ್ದಾರೆ. ಹಣದುಬ್ಬರವನ್ನು ಸೋಲಿಸುವ ಏಕೈಕ ಮಾರ್ಗವೆಂದರೆ ಬಿಜೆಪಿಗೆ ನಿರ್ಗಮನದ ಬಾಗಿಲನ್ನು ತೋರಿಸುವುದೇ ಆಗಿದೆ” ಎಂದರು.