ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Supreme Court Archives » Dynamic Leader
October 19, 2024
Home Posts tagged Supreme Court
ದೇಶ

ನವದೆಹಲಿ: ಜೈಲುಗಳಲ್ಲಿ ಜಾತಿ ತಾರತಮ್ಯ ತೋರಿದರೆ ರಾಜ್ಯ ಸರ್ಕಾರಗಳೇ ಹೊಣೆಯಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಪರಾಧಿಗಳನ್ನು ಅವರ ಜಾತಿ ಹಿನ್ನೆಲೆಯ ಆಧಾರದ ಮೇಲೆ ವರ್ಗೀಕರಿಸುವುದು, ಜೈಲುಗಳಲ್ಲಿ ಕೆಟ್ಟದಾದ ಕೆಲಸಗಳನ್ನು ಮಾಡುವಂತೆ ಹೇಳುವುದು, ತಾರತಮ್ಯದಿಂದ ನಡೆಸಿಕೊಳ್ಳುವುದು ಮುಂತಾದವುಗಳೆಲ್ಲ ವಿವಿಧ ರಾಜ್ಯಗಳ ಜೈಲು ನಿಯಮಾವಳಿಗಳಲ್ಲಿಯೇ ಜಾರಿಯಲ್ಲಿರುವುದು ಕಂಡುಬಂದಿದೆ.

ತರುವಾಯ, 11 ರಾಜ್ಯಗಳ ಕಾರಾಗೃಹಗಳಲ್ಲಿನ ಜಾತಿ ಆಧಾರಿತ ಅನುಸಂಧಾನ ನಿಯಮಾವಳಿಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ನೀಡಿದೆ. ಅದರಲ್ಲಿ, “ಸರಣಿ ಅಪರಾಧಗಳಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಜಾತಿಯ ಆಧಾರದ ಮೇಲೆ ವರ್ಗೀಕರಿಸಬಾರದು. ಜಾತಿವಾರು ವರ್ಗೀಕೃತ ದಾಖಲೆಗಳು ಕಾನೂನು ಬಾಹಿರವಾದದ್ದು; ಅವುಗಳನ್ನು ನಾಶಗೊಳಿಸಬೇಕು.

ಕೆಲವು ರಾಜ್ಯಗಳು ಜಾರಿಗೊಳಿಸಿರುವ ಜೈಲು ನಿಯಮಾವಳಿಗಳು ಅಸಂವಿಧಾನಿಕ. ಪ್ರಸ್ತುತ ತೀರ್ಪಿನ ಪ್ರಕಾರ, ಜೈಲು ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲಾಗಿದೆ.

ಶಿಕ್ಷೆಯ ಕಡಿತ, ಜೈಲುಗಳನ್ನು ಸ್ವಚ್ಛಗೊಳಿಸುವುದು, ಅಡುಗೆ ಮಾಡುವುದು ಮುಂತಾದ ಕೆಲಸಗಳಲ್ಲಿ ಜಾತಿ ಭೇದ ಇರಬಾರದು. ಎಸ್‌ಸಿ, ಎಸ್‌ಟಿ ಸೇರಿದಂತೆ ಹಿಂದುಳಿದವರಿಗೆ ಜೈಲುಗಳಲ್ಲಿ ತಾರತಮ್ಯ ಮಾಡಬಾರದು. ಜೈಲುಗಳಲ್ಲಿ ಇಂತಹ ಜಾತಿ ತಾರತಮ್ಯ ತೋರಿದರೆ ಅದಕ್ಕೆ ರಾಜ್ಯ ಸರ್ಕಾರಗಳೇ ಹೊಣೆಯಾಗಬೇಕು” ಎಂದು ಹೇಳಿದೆ.

ದೇಶ

ಡಿ.ಸಿ.ಪ್ರಕಾಶ್

ನವದೆಹಲಿ: “ಪರಿಶಿಷ್ಟ ಜಾತಿಗಳಿಗೆ ಆಂತರಿಕ ಕೋಟಾ ನೀಡಲು ಯಾವುದೇ ಅಡ್ಡಿ ಇಲ್ಲ,” ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಇಂದು ಐತಿಹಾಸಿಕವಾದ ತೀರ್ಪು ನೀಡಿದೆ.

ಪಂಜಾಬ್ ಸರ್ಕಾರವು ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಕಾಯ್ದೆಯನ್ನು ಜಾರಿಗೆ ತಂದಿತು. ಪಂಜಾಬ್ ರಾಜ್ಯ ಸರ್ಕಾರವು ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯಲ್ಲಿ ವಾಲ್ಮೀಕಿ ಮತ್ತು ಮಜಾಬಿ ಸಿಖ್ ಸಮುದಾಯಗಳಿಗೆ 50% ಆಂತರಿಕ ಮೀಸಲಾತಿಯನ್ನು ಒದಗಿಸುವ ಕಾರ್ಯವಿಧಾನವನ್ನು ಪರಿಚಯಿಸಿತು.

ಅದೇ ರೀತಿ 2009ರಲ್ಲಿ ತಮಿಳುನಾಡು ಸರ್ಕಾರವು ಅರುಂಧತಿಯವರಿಗೆ ಮೀಸಲಾತಿ ನೀಡುವ ಕಾನೂನನ್ನು ಜಾರಿಗೆ ತಂದಿತು. ಈ ಸಂಬಂಧ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸೇರಿದಂತೆ ಆರು ನ್ಯಾಯಾಧೀಶರು ಪಂಜಾಬ್ ಸರ್ಕಾರದ ಪ್ರಕರಣದಲ್ಲಿ ಸರ್ವಾನುಮತದ ತೀರ್ಪು ನೀಡಿದರು. ಅದೇ ಸಮಯದಲ್ಲಿ, ಒಬ್ಬ ನ್ಯಾಯಾಧೀಶರು ಮಾತ್ರ ವಿಭಿನ್ನವಾಗಿ ತೀರ್ಪು ನೀಡಿದ್ದಾರೆ.

ಅದರಂತೆ 6 ನ್ಯಾಯಾಧೀಶರು ನೀಡಿರುವ ತೀರ್ಪಿನಲ್ಲಿ, “ಪರಿಶಿಷ್ಟ ಜಾತಿಯವರಿಗೆ ಆಂತರಿಕ ಮೀಸಲಾತಿ ನೀಡಲು ಯಾವುದೇ ನಿರ್ಬಂಧವಿಲ್ಲ. ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದವರಿಗೆ ಒಳ ಮೀಸಲಾತಿ ಒದಗಿಸಲು ಪಂಜಾಬ್ ಸರ್ಕಾರ ತಂದಿರುವ ಕಾನೂನಿಗೆ ತಡೆಯಿಲ್ಲ.

ಒಳ ಮೀಸಲಾತಿಯು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ. ಪರಿಶಿಷ್ಟ ವರ್ಗದ ವ್ಯಾಖ್ಯಾನದಿಂದ ಯಾವುದೇ ಪರಿಶಿಷ್ಟ ಉಪವಿಭಾಗಗಳನ್ನು ಹೊರಗಿಡದ ಕಾರಣ ಒಳ ಮೀಸಲಾತಿಯನ್ನು ಒದಗಿಸಬಹುದು. ಆದಾಗ್ಯೂ, ರಾಜ್ಯಗಳು ತಮ್ಮ ಸ್ವಂತ ಇಚ್ಛೆಯಿಂದ ಅಥವಾ ರಾಜಕೀಯ ಅಗತ್ಯದಿಂದ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ರಾಜ್ಯಗಳ ನಿರ್ಧಾರವು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ.

ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಳ ಮೀಸಲಾತಿಯನ್ನು ಒದಗಿಸಬಹುದು. ಒಳ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ತಂದಿರುವ ಕಾನೂನುಗಳು ಸರಿಯಿದೆ” ಎಂದು ಅವರು ಸರ್ವಾನುಮತದಿಂದ ತೀರ್ಪು ನೀಡಿದ್ದಾರೆ.

ಇದೇ ವೇಳೆ, ಆಂಧ್ರದ ಇ.ವಿ.ಚಿನ್ನಯ್ಯ ಎಂಬುವರು, “ರಾಜ್ಯ ಸರ್ಕಾರಗಳು ಒಳಮೀಸಲಾತಿ ನೀಡಬಾರದು. ಒಳ ಮೀಸಲಾತಿಯನ್ನು ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲ” ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ, “ಒಳ ಮೀಸಲಾತಿಯನ್ನು ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿಲ್ಲ” ಎಂದು 2005ರಲ್ಲಿ ತೀರ್ಪು ನೀಡಿತ್ತು.

ಈ ಹಿನ್ನೆಲೆಯಲ್ಲಿ, ಇಂದಿನ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಂವಿಧಾನ ಪೀಠವು ಸುಪ್ರೀಂ ಕೋರ್ಟ್ 2005ರ ತೀರ್ಪನ್ನು ರದ್ದುಗೊಳಿಸಿದೆ. ಸದರಿ ಪ್ರಕರಣದಲ್ಲಿ ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ ಮಾತ್ರ ಭಿನ್ನವಾದ ತೀರ್ಪು ನೀಡಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಫೆಬ್ರವರಿ 8, 2024 ರಂದು ಈ ಕುರಿತು ತಮ್ಮ ತೀರ್ಪನ್ನು ಕಾಯ್ದಿರಿಸಿತ್ತು. ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್.ಗವಿ, ವಿಕ್ರಮ್ ನಾಥ್, ಬೇಲಾ ಎಂ. ತ್ರಿವೇದಿ, ಪಂಕಜ್ ಮಿತ್ತಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೂ ಒಳಗೊಂಡಿದೆ.

“ಐತಿಹಾಸಿಕ ಮತ್ತು ಪ್ರಾಯೋಗಿಕ ಪುರಾವೆಗಳು ಪರಿಶಿಷ್ಟ ಜಾತಿಗಳು ಏಕರೂಪದ ವರ್ಗವಲ್ಲ ಎಂದು ಸೂಚಿಸುತ್ತವೆ” ಎಂದು ತೀರ್ಪನ್ನು ಓದುವಾಗ ಸಿಜೆಐ ಹೇಳಿದರು.

ದೇಶ

ನವದೆಹಲಿ: ಖನಿಜ ಸಂಪನ್ಮೂಲಗಳ ಮೇಲೆ ತೆರಿಗೆ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 8 ನ್ಯಾಯಾಧೀಶರು ಸರ್ವಾನುಮತದ ತೀರ್ಪು ನೀಡಿದ್ದು, ಒಬ್ಬ ನ್ಯಾಯಾಧೀಶರು ಮಾತ್ರ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಗಣಿ ಮತ್ತು ಖನಿಜಗಳ ಮೇಲೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ವಿಧಿಸಿರುವ ತೆರಿಗೆಯನ್ನು ವಸೂಲಿ ಮಾಡುವ ಕುರಿತು ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟನೆ ಕೇಳಿತ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ 9 ನ್ಯಾಯಾಧೀಶರ ಪೀಠ ಈ ಬಗ್ಗೆ ತನಿಖೆ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಅದರಲ್ಲಿ ಡಿ.ವೈ.ಚಂದ್ರಚೂಡ್ ಸೇರಿದಂತೆ 8 ನ್ಯಾಯಾಧೀಶರು ಒಂದೇ ರೀತಿಯ ತೀರ್ಪು ನೀಡಿದ್ದಾರೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನಾಭಿಪ್ರಾಯದ ತೀರ್ಪು ನೀಡಿದ್ದಾರೆ.

8 ನ್ಯಾಯಾಧೀಶರು ನೀಡಿದ ತೀರ್ಪನ್ನು ಓದಿ ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, “ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ಖನಿಜ ಸಂಪನ್ಮೂಲಗಳಿಗೆ ತೆರಿಗೆ ವಿಧಿಸಲು ಸಂಸತ್ತಿಗೆ ಯಾವುದೇ ಅಧಿಕಾರವಿಲ್ಲ. 1989ರಲ್ಲಿ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠವು ಖನಿಜ ಸಂಪನ್ಮೂಲಗಳ ಮೇಲಿನ ರಾಯಧನವು ತೆರಿಗೆ ಎಂದು ಹೇಳಿದ್ದ ತೀರ್ಪು ತಪ್ಪಾಗಿದೆ. ಖನಿಜ ಸಂಪನ್ಮೂಲಗಳು ಮತ್ತು ಖನಿಜ ಸಮೃದ್ಧ ಭೂಮಿಗಾಗಿ ಕೇಂದ್ರ ಸರ್ಕಾರದಿಂದ ಪಡೆಯುವ ರಾಯಧನವನ್ನು ತೆರಿಗೆ ಎಂದು ಪರಿಗಣಿಸಲಾಗದು.

ರಾಜ್ಯ ಸರ್ಕಾರಗಳಿಗೆ ತೆರಿಗೆ ವಿಧಿಸುವ ಹಕ್ಕಿದೆ. ರಾಜ್ಯಗಳಲ್ಲಿರುವ ಖನಿಜ ಸಂಪನ್ಮೂಲಗಳಿಗಾಗಿ ಕೇಂದ್ರ ಸರ್ಕಾರದಿಂದ ಪಡೆಯುವ ರಾಯಧನವನ್ನು ತೆರಿಗೆ ಎಂದು ಪರಿಗಣಿಸಲಾಗದು. ಇದು ಗುತ್ತಿಗೆ ಹಣವೇ. ಗಣಿ, ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆಗಳು ರಾಜ್ಯಗಳ ಹಕ್ಕುಗಳನ್ನು ನಿರ್ಬಂಧಿಸುವ ಯಾವುದೇ ಷರತ್ತುಗಳನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ನೀಡಿರುವ ತಮ್ಮ ತೀರ್ಪಿನಲ್ಲಿ, “ಖನಿಜ ಸಂಪನ್ಮೂಲಗಳು ಮತ್ತು ಅವು ಇರುವ ಭೂಮಿಗೆ ತೆರಿಗೆ ವಿಧಿಸುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇಲ್ಲ” ಎಂದು ಹೇಳಿದ್ದಾರೆ.

ದೇಶ

ನವದೆಹಲಿ: ಮದ್ಯ ನೀತಿ ಉಲ್ಲಂಘನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಬಂಧನ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆದರೆ, ಕೇಜ್ರಿವಾಲ್ ಅವರನ್ನು ಸಿಬಿಐ ಪ್ರತ್ಯೇಕವಾಗಿ ಬಂಧಿಸಿದ್ದು, ಅದರಿಂದಲೂ ಜಾಮೀನು ಸಿಕ್ಕಿದ ನಂತರವೇ ಅವರಿಂದ ಹೊರಬರಲು ಸಾಧ್ಯ.

ದೆಹಲಿ ಸರ್ಕಾರದ ಮದ್ಯ ನೀತಿಗೆ ಸಂಬಂಧಿಸಿದ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಮೊದಲು ಜಾರಿ ಇಲಾಖೆ ಅವರನ್ನು ಬಂಧಿಸಿತ್ತು, ನಂತರ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಅವರು ಸಿಬಿಐ ಕಸ್ಟಡಿಯಲ್ಲಿದ್ದಾರೆ.

ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ದೆಹಲಿ ಹೈಕೋರ್ಟ್ ನಿಷೇಧಿಸಿತ್ತು. ಇದರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಅವರ ಪೀಠ, ಜಾಮೀನಿನ ಮೇಲೆ ಹೊರಗಿರುವುದಕ್ಕೂ ತನಿಖೆ ನಡೆಸುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದು, ಅವರು 90 ದಿನಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ ಎಂದು ಸೂಚಿಸಿದ ಅವರು, ಜಾರಿ ನಿರ್ದೇಶನಾಲಯದ ಬಂಧನ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿ ಆದೇಶಿಸಿದ್ದಾರೆ. ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿರುವುದರಿಂದ ಜಾಮೀನು ಸಿಗದೆ ಹೊರಬರಲು ಸಾಧ್ಯವಾಗುತ್ತಿಲ್ಲ.

ದೇಶ

ನವದೆಹಲಿ: ಇನ್ನು 7 ದಿನಗಳ ಕಾಲ ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ದೆಹಲಿಯ ಹೊಸ ಮದ್ಯ ನೀತಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಆಮ್ ಆದ್ಮಿ ಲೋಕಸಭಾ ಸದಸ್ಯ ಸಂಜಯ್ ಸಿಂಗ್, ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಪುತ್ರಿ ಮತ್ತು ಹಿರಿಯ ಬಿಆರ್‌ಎಸ್ ನಾಯಕಿ ಕವಿತಾ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.

ಇದರ ಬೆನ್ನಲ್ಲೇ, ಹೊಸ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ಇಲಾಖೆಯ ಬಂಧನವನ್ನು ಅಕ್ರಮ ಎಂದು ಘೋಷಿಸುವಂತೆ ಮತ್ತು ಮಧ್ಯಂತರ ಜಾಮೀನು ಕೋರಿ ಮುಖ್ಯಮಂತ್ರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಗಳನ್ನು ದೆಹಲಿ ಸಿಬಿಐ ವಿಶೇಷ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು.

ಕೇಜ್ರಿವಾಲ್ ಅವರು ಮೇಲಿನ ವಿಷಯದಲ್ಲಿ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು ಮತ್ತು ಜಾರಿ ಇಲಾಖೆಯ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿತು.

ಅದಲ್ಲದೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಅನುಮತಿಯನ್ನೂ ನೀಡಿತ್ತು. ಆದರೆ ಮುಖ್ಯಮಂತ್ರಿಗಳು ಸರ್ಕಾರಿ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಅಥವಾ ಸರ್ಕಾರಿ ಕಡತಗಳಿಗೆ ಸಹಿ ಹಾಕಲು ಆ ಅಧಿಕಾರವನ್ನು ಬಳಸಬಾರದು ಮತ್ತು ಎಲ್ಲಾ ಚುನಾವಣಾ ಪ್ರಚಾರಗಳು ಮುಗಿದ ನಂತರ ಅರವಿಂದ್ ಕೇಜ್ರಿವಾಲ್ ಜೂನ್ 2 ರಂದು ತಿಹಾರ್ ಜೈಲಿನಲ್ಲಿ ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಹಿನ್ನೆಲೆಯಲ್ಲಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಧ್ಯಂತರ ಜಾಮೀನು ವಿಸ್ತರಣೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಕೇಜ್ರಿವಾಲ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಪಿಇಟಿ-ಸಿಟಿ ಸ್ಕ್ಯಾನ್ ಮಾಡಬೇಕಾಗಿರುವುದರಿಂದ ಮಧ್ಯಂತರ ಜಾಮೀನನ್ನು ಇನ್ನೂ 7 ದಿನಗಳವರೆಗೆ ವಿಸ್ತರಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದರು.

ಈ ಅರ್ಜಿಯು, ನಿನ್ನೆ ಸುಪ್ರೀಂ ಕೋರ್ಟ್‌ನ ಬೇಸಿಗೆ ರಜೆ ಕಾಲದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆಗ ಮಧ್ಯಂತರ ಜಾಮೀನು ವಿಸ್ತರಣೆಗೆ ಕೋರಿ ಕೇಜ್ರಿವಾಲ್ ಮಾಡಿದ ಮನವಿಯನ್ನು ನ್ಯಾಯಮೂರ್ತಿಗಳು ತಿರಸ್ಕರಿಸಿದರು. ಮತ್ತು ಈ ಪ್ರಕರಣದ ತೀರ್ಪು ಮುಂದೂಡಲ್ಪಟ್ಟಿರುವುದರಿಂದ ಈ ಹಂತದಲ್ಲಿ ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಮತ್ತು ಮುಖ್ಯ ನ್ಯಾಯಮೂರ್ತಿಗಳ ಪೀಠವು ಜಾಮೀನು ವಿಸ್ತರಣೆಯ ಬಗ್ಗೆ ನಿರ್ಧರಿಸಬಹುದು ಎಂದು ಹೇಳಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಯಿತು.

ಈ ಹಿನ್ನೆಲೆಯಲ್ಲಿ, ಇನ್ನು 7 ದಿನಗಳ ಕಾಲ ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಲ್ಲದೇ ವಿಶೇಷ ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತೆಯೂ ಸುಪ್ರೀಂಕೋರ್ಟ್ ಸೂಚಿಸಿದೆ. ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದ್ದರಿಂದ ಜೂನ್ 2 ರಂದು ಕೇಜ್ರಿವಾಲ್ ಮತ್ತೆ ಜೈಲು ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೇಶ

ನವದೆಹಲಿ: ಬಾಬಾ ರಾಮ್‌ದೇವ್ ಪತಂಜಲಿಯ ಸ್ಥಾಪಕರು. ಅವರ ಕಂಪನಿಯ ಔಷಧಗಳ ಜಾಹೀರಾತಿನಲ್ಲಿ ಸುಳ್ಳು ಮಾಹಿತಿ ಇದೆ ಎಂದು ಆರೋಪಿಸಿ ಅದನ್ನು ನಿಷೇಧಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, “ಜಾಹೀರಾತುಗಳಲ್ಲಿ ಸುಳ್ಳು ಮಾಹಿತಿಯನ್ನು ಪ್ರಕಟಿಸಬೇಡಿ; ಪತಂಜಲಿಯ ಸುಳ್ಳು ಮತ್ತು ದಾರಿತಪ್ಪಿಸುವ ಜಾಹೀರಾತುಗಳನ್ನು ಕೂಡಲೇ ನಿಲ್ಲಿಸಬೇಕು.

ಇಂತಹ ಉಲ್ಲಂಘನೆಗಳನ್ನು ಈ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸುತ್ತದೆ. ಪ್ರತಿ ಉತ್ಪನ್ನದ ಜಾಹೀರಾತಿನ ಮೇಲೆ 1 ಕೋಟಿ ರೂ.ವರೆಗಿನ ದಂಡವನ್ನು ಪರಿಗಣಿಸಬಹುದು. ಈ ನಿಟ್ಟಿನಲ್ಲಿ ಬಾಬಾ ರಾಮ್‌ದೇವ್‌ ಉತ್ತರ ನೀಡಬೇಕು” ಎಂದು ಎಚ್ಚರಿಸಿದರು. ಆದರೂ ಸುಪ್ರೀಂ ಕೋರ್ಟ್ ನೋಟಿಸ್‌ಗೆ ಬಾಬಾ ರಾಮ್‌ದೇವ್‌ ಯಾವುದೇ ಉತ್ತರ ನೀಡಲಿಲ್ಲ. ಏತನ್ಮಧ್ಯೆ, ಪ್ರಕರಣವು ಸುಪ್ರೀಂ ಕೋರ್ಟ್‌ನ ಪೀಠದ ಮುಂದೆ ಕಳೆದ ತಿಂಗಳು 19 ರಂದು ಮತ್ತೆ ವಿಚಾರಣೆಗೆ ಬಂದಿತು.

ಸುಪ್ರೀಂ ಕೋರ್ಟ್ ನೋಟಿಸ್‌ಗೆ ಬಾಬಾ ರಾಮ್‌ದೇವ್ ಯಾವುದೇ ವಿವರಣೆಯನ್ನು ನೀಡಿಲ್ಲ ಮತ್ತು ಪ್ರಕರಣದ ವಿಚಾರಣೆಯ ಮೊದಲ ದಿನವೇ ಉತ್ತರವನ್ನು ಸಲ್ಲಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಬಾಬಾ ರಾಮ್‌ದೇವ್ ಅವರ ಈ ಕ್ರಮಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದರೆ ಹೇಗೆ? ಈ ಪ್ರಕರಣದ ಮುಂದಿನ ತನಿಖೆಗೆ ಪತಂಜಲಿ ಸಂಸ್ಥಾಪಕ ಬಾಬಾ ರಾಮ್‌ದೇವ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಖುದ್ದು ಹಾಜರಾಗಬೇಕು” ಎಂದು ಕಟ್ಟಾಜ್ಞೆ ಮಾಡಿದರು.

ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಏಪ್ರಿಲ್ 2 ರಂದು ಖುದ್ದು ಹಾಜರಾದ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆಯಾಚಿಸದರು. ಆಗ ನ್ಯಾಯಾಧೀಶರು, “ಪತಂಜಲಿ ಪ್ರಕರಣದಲ್ಲಿ ನಿಮ್ಮ ಕ್ಷಮಾಪಣೆಯನ್ನು ಒಪ್ಪಲು ಸಾಧ್ಯವಿಲ್ಲ. ನ್ಯಾಯಾಲಯದ ಎಲ್ಲಾ ಆದೇಶಗಳನ್ನು ಉಲ್ಲಂಘಿಸಿ, ನೀವು ವಕೀಲರ ಮೂಲಕ ಕ್ಷಮೆಯಾಚಿಸಿದರೆ ಹೇಗೆ ಒಪ್ಪುವುದು?

ಯಾವ ಆಧಾರದ ಮೇಲೆ ನಿಮ್ಮ ಔಷಧವು ಇತರ ಔಷಧಿಗಳಿಗೆ ಪರ್ಯಾಯವಾಗಿದೆ ಎಂದು ನೀವು ಹೇಳುತ್ತಿದ್ದೀರಾ? ಇದು ವೈಜ್ಞಾನಿಕವಾಗಿ ಸಾಬೀತಾಗಿದೆಯೇ? ಅಥವಾ ಸಂಬಂಧಪಟ್ಟ ಸಚಿವಾಲಯಕ್ಕೆ ಯಾವುದಾದರೂ ಮನವಿ ಮಾಡಿದ್ದೀರಾ? ಈ ಪ್ರಕರಣದಲ್ಲಿ ಏಪ್ರಿಲ್ 10ರೊಳಗೆ ಸೂಕ್ತ ವಿವರಣೆ ನೀಡಬೇಕು” ಎಂದು ಹೇಳಿ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿದರು.

ಈ ಹಿನ್ನೆಲೆಯಲ್ಲಿ ಇಂದು ಮತ್ತೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಅಹ್ಸಾನುದ್ದೀನ್ ಅಮಾನುಲ್ಲಾ ಪೀಠವು, “ಈ ಪ್ರಕರಣದಲ್ಲಿ ನಾವು ದಯ ತೋರಿಸಲು ಬಯಸುವುದಿಲ್ಲ. ವಿವಾದಾತ್ಮಕ ಜಾಹೀರಾತುಗಳನ್ನು ಬಿಡುಗಡೆ ಮಾಡಿದರೂ ಪತಂಜಲಿ ವಿರುದ್ಧ ಉತ್ತರಾಖಂಡ ಸರ್ಕಾರ ಕ್ರಮ ಕೈಗೊಳ್ಳದಿರುವುದು ಖಂಡನೀಯ.

ಕ್ಷಮಾಪಣೆಯ ಅಫಿಡವಿಟ್ ಸಲ್ಲಿಸಿರುವುದು ನಮಗೆ ತೃಪ್ತಿ ತಂದಿಲ್ಲ. ನಾವು ಯಾವುದನ್ನೂ ಗಮನಿಸದೇ ಇಲ್ಲ. ಈ ಕ್ಷಮೆಯನ್ನು ಒಪ್ಪಲು ಸಾಧ್ಯವಿಲ್ಲ. ಕ್ಷಮೆ ಕೇವಲ ಕಾಗದದಲ್ಲಿ ಮಾತ್ರ ಇದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ನಮಗೆ ತೃಪ್ತಿ ತಂದಿಲ್ಲ. ಬಾಬಾ ರಾಮದೇವ್ ಅವರು ನ್ಯಾಯಾಂಗ ನಿಂದನೆಯನ್ನು ಲಘುವಾಗಿ ಪರಿಗಣಿಸಿದ್ದಾರೆ” ಎಂದು ಕಿಡಿಕಾರಿ ವಿಚಾರಣೆಯನ್ನು ಮುಂದೂಡಿದ್ದಾರೆ.  

ದೇಶ

ಬೆಂಗಳೂರು: ಕೇಂದ್ರ ಸರ್ಕಾರ  ಬರ ಪರಿಹಾರ ಕೊಡುತ್ತಿಲ್ಲ. ಕೇಂದ್ರ ಮಲತಾಯಿ ಧೋರಣೆ ಮಾಡುತ್ತಿದ್ದು, ಮಧ್ಯಪ್ರವೇಶಿಸಿ ಬರ ಪರಿಹಾರ ಬಿಡುಗಡೆ ಮಾಡಿಸುವಂತೆ ಸುಪ್ರೀಂ ಕೋರ್ಟ್​ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಕೆ ಮಾಡಿದೆ.

ಕೇಂದ್ರ ಸರ್ಕಾರ ಅತಿವೃಷ್ಟಿ, ಅನಾವೃಷ್ಟಿ ಆದಾಗ ರಾಜ್ಯ ಸರ್ಕಾರಕ್ಕೆ ಸ್ಪಂದಿಸಬೇಕು. ಅದಕ್ಕಾಗಿ ವಿಪತ್ತು ನಿರ್ವಹಣೆ ಕಾಯ್ದೆ ತರಲಾಗಿದೆ. ಈ ಕಾಯ್ದೆ ಕೂಡ ಅದನ್ನೇ ಹೇಳುತ್ತದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, 223 ತಾಲೂಕನ್ನು‌ ಬರಪೀಡಿತ ಅಂತ ಘೋಷಣೆ‌ ಮಾಡಲಾಗಿದೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ‌ ಕೃಷಿ, ತೋಟಗಾರಿಕಾ ಬೆಳೆ ನಷ್ಟವಾಗಿದೆ ಎಂದು ಮುಖ್ಯಮಂತ್ರಿ  ಹೇಳಿದ್ದರು.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಮಾದರಿಯಲ್ಲೇ ತಮಿಳುನಾಡು ಕೂಡ ಇದೀಗ ಮಧ್ಯಂತರ ಪ್ರವಾಹ ಪರಿಹಾರವಾಗಿ 2,000 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅರ್ಜಿ ಸಲ್ಲಿಸಿದೆ.

ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ದಕ್ಷಿಣದ ಜಿಲ್ಲೆಗಳು ಮತ್ತು ಚೆನ್ನೈಗೆ ಮಧ್ಯಂತರ ಪರಿಹಾರವಾಗಿ 2,000 ಕೋಟಿ ರೂಪಾಯಿಗಳನ್ನು ನೀಡುಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಪ್ರವಾಹ ಪರಿಹಾರ ಕೋರಿ ಪತ್ರ ಬರೆದಿರುವುದು ಗಮನಾರ್ಹ.

ವೆಲ್ಲೂರು ಜಿಲ್ಲೆಯ ಕೋಟೆ (Fort) ಮೈದಾನದಲ್ಲಿ ನಿನ್ನೆ ಡಿಎಂಕೆ ಮೈತ್ರಿ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆ ನಡೆಯಿತು. ಇದರಲ್ಲಿ ಮಾತನಾಡಿದ ಎಂ.ಕೆ.ಸ್ಟಾಲಿನ್, “ನಾವೂ ಕೂಡ ಪ್ರವಾಹ ಪರಿಹಾರ ಕೇಳಿದ್ದೇವೆ; ಸಿಕ್ಕಿಲ್ಲ. ನಾಳೆ (ಇಂದು) ಬೆಳಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಹಾಕಲಿದ್ದೇವೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ದೇಶ

ಚುನಾವಣಾ ಬಾಂಡ್‌ಗಳ ಯೋಜನೆಗೆ ಸುಪ್ರೀಂ ಕೋರ್ಟ್ ನಿಷೇಧ ಹೇರುವ ಮೂರು ದಿನಗಳ ಮೊದಲು, ರೂ.10,000 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಮುದ್ರಿಸಲು ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಗೆ (SPMCIL) ಹಣಕಾಸು ಸಚಿವಾಲಯ ಅನುಮೋದನೆ ನೀಡಿತ್ತು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ತಲಾ ರೂ.1 ಕೋಟಿ ರೂಪಾಯಿಯ 10,000 ಚುನಾವಣಾ ಬಾಂಡ್‌ಗಳನ್ನು ಮುದ್ರಿಸಲು ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿತ್ತು ಎಂಬ ಮಾಹಿತಿಯು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಯಿಂದ ಬಹಿರಂಗಗೊಂಡಿದೆ. 10,000 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳ ಮುದ್ರಣವನ್ನು ನಿಲ್ಲಿಸುವಂತೆ ಹಣಕಾಸು ಸಚಿವಾಲಯ ಕಳೆದ ತಿಂಗಳು 28 ರಂದು ಆದೇಶ ನೀಡಿತ್ತು.

ಚುನಾವಣಾ ಬಾಂಡ್‌ಗಳನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್‌ನ ಆದೇಶ ಹೊರಬಿದ್ದ 2 ವಾರಗಳ ನಂತರ, ಮುದ್ರಣವನ್ನು ಸ್ಥಗಿತಗೊಳಿಸುವಂತೆ ಎಸ್‌ಬಿಐ ಹಣಕಾಸು ಸಚಿವಾಲಯವನ್ನು ಕೋರಿದ ನಂತರ ಈ ಆದೇಶ ಹೊರಡಿಸಲಾಗಿದೆ. ಆದರೆ, ಅಷ್ಟರೊಳಗೆ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ  10,000 ಚುನಾವಣಾ ಬಾಂಡ್‌ಗಳಲ್ಲಿ ತಲಾ ರೂ.1 ಕೋಟಿಯ 8,350 ಚುನಾವಣಾ ಬಾಂಡ್‌ಗಳನ್ನು ಸಿದ್ಧಪಡಿಸಿ ಎಸ್‌ಬಿಐಗೆ ಕಳುಹಿಸಿಕೊಟ್ಟಿತ್ತು. ಹಾಗಾಗಿ ಉಳಿದ 1,650 ಚುನಾವಣಾ ಪತ್ರಿಕೆಗಳ ಮುದ್ರಣವನ್ನು ಮಾತ್ರ ತಡೆಹಿಡಿಯಲಾಗಿದೆ.

ವ್ಯಕ್ತಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ರೂ.1,000, ರೂ.10,000, ರೂ.1 ಲಕ್ಷ, ರೂ.10 ಲಕ್ಷ ಮತ್ತು 1 ಕೋಟಿ ರೂ.ಗಳ ಬಾಂಡ್‌ಗಳನ್ನು ವಿತರಿಸಲು ಅವಕಾಶ ನೀಡುವ ಸಲುವಾಗಿ ಎಲೆಕ್ಟೋರಲ್ ಬಾಂಡ್ ಯೋಜನೆ ಪರಿಚಯಿಸಲಾಯಿತು. ರಾಜಕೀಯ ಪಕ್ಷದಿಂದ 15 ದಿನಗಳೊಳಗೆ ಬಾಂಡ್‌ಗಳಿಂದ ಹಣವನ್ನು ಪಡೆಯಬಹುದು. ಆದರೆ, ಯಾವ್ಯಾವ ರಾಜಕೀಯ ಪಕ್ಷಗಳಿಗೆ ಯಾರು ಹಣ ನೀಡಿದ್ದಾರೆ ಎಂಬ ಮಾಹಿತಿಯನ್ನು ಇದರಲ್ಲಿ ಸೂಚ್ಯವಾಗಿ ರಕ್ಷಿಸಲಾಗುತ್ತದೆ ಎಂಬುದು ಗಮನಾರ್ಹ.

ದೇಶ ಸಂಪಾದಕೀಯ

ನವದೆಹಲಿ: ಕಳೆದ ತಿಂಗಳು, ಅನಾಮಧೇಯ ರಾಜಕೀಯ ಹಣವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು, ಇದನ್ನು “ಅಸಂವಿಧಾನಿಕ” ಎಂದು ಕರೆದಿತ್ತು.

ಈ ಹಿನ್ನಲೆಯಲ್ಲಿ, ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಕಾಲಾವಕಾಶವನ್ನು ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ಎಸ್‌ಬಿಐ ಅನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಮಾರ್ಚ್ 12 ರಂದು (ನಾಳೆ ಸಂಜೆಯೊಳಗೆ) ವ್ಯವಹಾರ ಮುಗಿಯುವ ಮೊದಲು ವಿವರಗಳನ್ನು ಬಹಿರಂಗಪಡಿಸುವಂತೆ ಬ್ಯಾಂಕ್‌ಗೆ ಆದೇಶಿಸಿದೆ.

ಎಸ್‌ಬಿಐ, ಮೊಹರು ಮಾಡಿದ ಲಕೋಟೆಯನ್ನು ತೆರೆದು, ವಿವರಗಳನ್ನು ಕ್ರೋಢೀಕರಿಸಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ.

ಕಳೆದ ತಿಂಗಳು, ಸುಪ್ರೀಂ ಕೋರ್ಟ್ ಅನಾಮಧೇಯ ರಾಜಕೀಯ ಹಣವನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು “ಅಸಂವಿಧಾನಿಕ” ಎಂದು ಕರೆದು ರದ್ದುಗೊಳಿಸಿತು ಮತ್ತು ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಏಪ್ರಿಲ್ 12, 2019 ರಿಂದ ಖರೀದಿಸಿದ ಬಾಂಡ್‌ಗಳ ವಿವರಗಳನ್ನು ಸಲ್ಲಿಸುವಂತೆ ಎಸ್‌ಬಿಐಗೆ ನಿರ್ದೇಶನ ನೀಡಿತ್ತು.

ಚುನಾವಣಾ ಬಾಂಡ್‌ಗಳನ್ನು ನೀಡುವ ಬ್ಯಾಂಕ್ ಆಗಿದ್ದ ಎಸ್‌ಬಿಐ, ರಾಜಕೀಯ ಪಕ್ಷಗಳು ಎನ್‌ಕ್ಯಾಶ್ ಮಾಡಿದ ಪ್ರತಿ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ವಿಸ್ತರಣೆಯನ್ನು ಕೋರಿತ್ತು.

ಚುನಾವಣಾ ಬಾಂಡ್‌ಗಳ ಪ್ರಕರಣ: ಸುಪ್ರೀಂ ಕೋರ್ಟ್ನ ಕೆಲವು ಉಲ್ಲೇಖಗಳು:
• ಎಸ್‌ಬಿಐನ ಸಲ್ಲಿಕೆಗಳು ಕೇಳಿದ ಮಾಹಿತಿಯು ಸುಲಭವಾಗಿ ಲಭ್ಯವಿದೆ ಎಂದು ಸೂಚಿಸುತ್ತದೆ. ಹೀಗಾಗಿ ಜೂನ್ 30ರ ವರೆಗೆ ಕಾಲಾವಕಾಶವನ್ನು ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಮಾರ್ಚ್ 12, 2024 ರ (ನಾಳೆ ಸಂಜೆಯೊಳಗೆ) ಕೆಲಸದ ಸಮಯದ ಮುಕ್ತಾಯದೊಳಗೆ ವಿವರಗಳನ್ನು ಬಹಿರಂಗಪಡಿಸಲು SBI ಗೆ ನಿರ್ದೇಶಿಸಲಾಗಿದೆ.

• ಕಳೆದ 26 ದಿನಗಳಲ್ಲಿ, ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನಿಮ್ಮ ಅರ್ಜಿಯು ಅದರ ಬಗ್ಗೆ ಮೌನವಾಗಿದೆ.

• ನೀವು ಈ ರೀತಿಯ ವಿಸ್ತರಣೆಯೊಂದಿಗೆ ಬಂದಾಗ ಇದು ಗಂಭೀರ ವಿಷಯವಾಗಿದೆ. ನಮ್ಮ ತೀರ್ಪು ಕ್ರಿಸ್ಟಲ್ ಕ್ಲಿಯರ್ ಆಗಿದೆ.

• SBI ಕೇವಲ ಮುಚ್ಚಿದ ಕವರ್ ತೆರೆಯಬೇಕು, ವಿವರಗಳನ್ನು ಕೊಲೇಟ್ ಮಾಡಿ ಮತ್ತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು.

• ನೀವು ದೇಶದ ನಂಬರ್ 1 ಬ್ಯಾಂಕ್ ಆಗಿದ್ದೀರಿ, ಎಸ್‌ಬಿಐ ಮುಂದೆ ಬಂದು ವಿವರಗಳನ್ನು ಹಂಚಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ದೇಶ

“ಸರ್ಕಾರದ ಪ್ರತಿ ಟೀಕೆಯನ್ನು ಅಪರಾಧವೆಂದು ಪರಿಗಣಿಸಿದರೆ ಭಾರತೀಯ ಸಂವಿಧಾನದ ಅತ್ಯಗತ್ಯ ಲಕ್ಷಣವಾದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ” – ಸುಪ್ರೀಂ ಕೋರ್ಟ್

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದತಿ ದಿನವನ್ನು ‘ಕರಾಳ ದಿನ’ ಎಂದು ವಾಟ್ಸಾಪ್ ನಲ್ಲಿ ಹೇಳಿದ್ದ ಪ್ರೊಫೆಸರ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಮಹಾರಾಷ್ಟ್ರದ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದ ಜಾವೇದ್ ಅಹಮದ್ ಹಜಾಮ್ ಎಂಬುವರು, ಆಗಸ್ಟ್ 13 ಮತ್ತು 15, 2022ರ ನಡುವೆ ಪೋಷಕರು-ಶಿಕ್ಷಕರ ವಾಟ್ಸಾಪ್ ಗುಂಪಿನಲ್ಲಿ ಎರಡು ಪಠ್ಯ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅದರಲ್ಲಿ, ‘ಆಗಸ್ಟ್ 5 ಜಮ್ಮು ಮತ್ತು ಕಾಶ್ಮೀರಕ್ಕೆ ಕರಾಳ ದಿನ’ ಎಂದು ಮತ್ತು ‘ಆಗಸ್ಟ್ 14 – ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ತಿಳಿಸಿದ್ದರು ಎಂದು ಹೇಳಲಾಗುತ್ತಿದೆ. ಹಾಗೆಯೇ ‘ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದತಿಯಿಂದ ನಾವು ಸಂತೋಷವಾಗಿಲ್ಲ’ ಎಂದು ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು ಎಂದೂ ಹೇಳಲಾಗುತ್ತಿದೆ.

ಇಂತಹ ಆರೋಪಗಳ ಆಧಾರದ ಮೇಲೆ ಮಹಾರಾಷ್ಟ್ರದ ಕೊಲ್ಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿವಿಧ ಜನಾಂಗೀಯ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಮತ್ತು ಸೌಹಾರ್ದತೆ ಕಾಪಾಡುವ ವಿರುದ್ಧ ಕೃತ್ಯಗಳನ್ನು ಎಸಗಿದ್ದಕ್ಕಾಗಿ ಸೆಕ್ಷನ್ 153-ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣಗಳನ್ನು ರದ್ದುಗೊಳಿಸುವಂತೆ ಪ್ರಾಧ್ಯಾಪಕರು ಬಾಂಬೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದರು. ಪ್ರಕರಣವು ವಿಚಾರಣೆಗೆ ಬಂದಾಗ, ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿತು ಮತ್ತು ಅವರ ಕಾಮೆಂಟ್‌ಗಳಿಗೆ ಪ್ರಾಧ್ಯಾಪಕರನ್ನು ಕ್ರಿಮಿನಲ್ (criminally liable) ಹೊಣೆಗಾರರನ್ನಾಗಿ ಮಾಡಬೇಕೆಂದು ತೀರ್ಪು ನೀಡಿತು.

ಇದರ ಬೆನ್ನಲ್ಲೇ ಪ್ರೊಫೆಸರ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

“ಸಂವಿಧಾನದ 370ನೇ ವಿಧಿಯ ರದ್ದತಿಗೆ ಅವರ ಪ್ರತಿಕ್ರಿಯೆ ಇದು. ವಿಶೇಷ ಸ್ಥಾನಮಾನ ರದ್ದತಿಯನ್ನು ಕರಾಳ ದಿನ ಎಂದು ಬಣ್ಣಿಸಿರುವುದು ಅವರ ಪ್ರತಿಭಟನೆ ಮತ್ತು ವೇದನೆಯ ಅಭಿವ್ಯಕ್ತಿಯಾಗಿದೆ. ಇದು ಸೆಕ್ಷನ್ 153-ಎ ಅಡಿಯಲ್ಲಿ ನಿಷೇಧಿತ ಕೆಲಸವನ್ನು ಮಾಡುವ ಯಾವುದೇ ಉದ್ದೇಶವನ್ನು ಪ್ರತಿಬಿಂಬಿಸುವುದಿಲ್ಲ.

ಆರ್ಟಿಕಲ್ 370 ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ರದ್ದತಿಯನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದೆ. ಇದು ಆರ್ಟಿಕಲ್ 19(1)(ಎ) ಮೂಲಕ ಖಾತರಿಪಡಿಸಿರುವ ಅವರ ವಾಕ್ ಸ್ವಾತಂತ್ರ್ಯದ ಭಾಗವಾಗಿದೆ.

ಸರ್ಕಾರದ ಪ್ರತಿ ಟೀಕೆಯನ್ನು ಅಪರಾಧವೆಂದು ಪರಿಗಣಿಸಿದರೆ ಭಾರತೀಯ ಸಂವಿಧಾನದ ಅತ್ಯಗತ್ಯ ಲಕ್ಷಣವಾದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಸರ್ಕಾರದ ನಿರ್ಧಾರಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ. ಬಳಸಿದ ಪದಗಳು ಅಥವಾ ಕ್ರಿಯೆಗಳ ಹಿಂದಿನ ಉದ್ದೇಶವನ್ನು ನ್ಯಾಯಾಲಯಗಳು ಪರಿಗಣಿಸಬೇಕು.

ಆಯಾ ಸ್ವಾತಂತ್ರ್ಯದ ದಿನಗಳಲ್ಲಿ ಇತರ ದೇಶಗಳ ನಾಗರಿಕರನ್ನು ಅಭಿನಂದಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಆಗಸ್ಟ್ 14ರ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನದ ಜನರಿಗೆ ಅಭಿನಂದನೆ ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ಸದ್ಭಾವನೆಯ ಅಭಿವ್ಯಕ್ತಿಯಾಗಿದೆ.

ಇಂತಹ ಕ್ರಮಗಳು ಜನರಲ್ಲಿ ಸಂಶಯ, ದ್ವೇಷ ಮತ್ತು ವಿರೋಧವನ್ನು ಹುಟ್ಟುಹಾಕುತ್ತದೆ ಎಂದು ಹೇಳಲಾಗದು. ಅವರು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎಂದ ಮಾತ್ರಕ್ಕೆ ಅವರ ಮೇಲೆ ಆಂತರಿಕ ಉದ್ದೇಶಗಳನ್ನು ಕಲಿಸಲು ಸಾಧ್ಯವಿಲ್ಲ.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿಯಂತ್ರಣದ ವ್ಯಾಪ್ತಿಯ ಬಗ್ಗೆ ಪೊಲೀಸರಿಗೆ ಕಲಿಸುವ ಸಮಯ ಇದು. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.