ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಏಕನಾಥ್ ಶಿಂಧೆ Archives » Dynamic Leader
October 16, 2024
Home Posts tagged ಏಕನಾಥ್ ಶಿಂಧೆ
ದೇಶ

ಮಹಾರಾಷ್ಟ್ರದಲ್ಲಿ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿಂದೂ ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 ಪ್ರಕರಣಗಳು ದಾಖಲಾಗಿವೆ.

ರಾಮಗಿರಿ ಮಹಾರಾಜರು ಹಂಚಿಕೊಂಡಿರುವ ವಿವಾದಾತ್ಮಕ ಮಾನಹಾನಿಕರ ಅಭಿಪ್ರಾಯಗಳು ಮತ್ತು ಮಾಹಿತಿಗಳನ್ನು ಅಂತರ್ಜಾಲದಿಂದ ತೆಗೆದುಹಾಕುತ್ತಿದ್ದೇವೆ ಎಂದು ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿದ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ ರಾಜ್ಯಾದ್ಯಂತ ಇದುವರೆಗೆ 67 ಪ್ರಕರಣಗಳು ದಾಖಲಾಗಿವೆ.

‘ರಾಮಗಿರಿ ಮಹಾರಾಜ್ ವಿರುದ್ಧ ಹಲವು ಪ್ರಕರಣಗಳು ದಾಖಲಾದ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಎಂಬ ಕಾರಣಕ್ಕಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂಬ ಮನವಿಯನ್ನು ವಿರೋಧಿಸಿ, ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ವೀರೇಂದ್ರ ಸರಾಫ್ ಅವರು,  ಸಲ್ಲಿಸಿದ ಅರ್ಜಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ವಕೀಲ ವಾಸಿ ಸೈಯದ್ ಮತ್ತು ಇತರರು ಸಲ್ಲಿಸಿದ ಅರ್ಜಿಯಲ್ಲಿ, ‘2014 ರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರವು ಮುಸ್ಲಿಮರ ವಿರುದ್ಧ ಕೋಮುವಾದಿ ಕ್ರಮಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದೆ. ಮುಸ್ಲಿಮರನ್ನು ಕಡೆಗಣಿಸುವುದು, ಸಾಮೂಹಿಕ ಹತ್ಯೆಗಳನ್ನು ಮಾಡುವುದು, ಗಲಭೆಗಳನ್ನು ಮಾಡುವುದು ಮುಂತಾದ ಹಲವು ವಿಷಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಉಲ್ಲೇಖಿಸಲಾಗಿತ್ತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಇಜಾಜ್ ನಖ್ವಿ, ‘ರಾಮಗಿರಿ ಮಹಾರಾಜ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಶಿಂಧೆ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಮತ್ತು ರಾಜ್ಯದ ಧರ್ಮ ಪ್ರಚಾರಕರನ್ನು ರಕ್ಷಿಸುತ್ತಿದ್ದಾರೆ’ ಎಂದು ವಾದಿಸಿದರು. ‘ಅದೇ ರೀತಿ ಬಿಜೆಪಿ ಶಾಸಕ ನಿತೇಶ್ ರಾಣೆ ಅವರ ಅವಹೇಳನಕಾರಿ ಭಾಷಣದ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನಖ್ವಿ ಉಲ್ಲೇಖಿಸಿದರು.

ಆದರೆ, ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ಮತ್ತು ಪೃಥ್ವಿರಾಜ್ ಚವಾಣ್ ಅವರನ್ನೊಳಗೊಂಡ ಪೀಠವು, ‘ರಾಮಗಿರಿ ಮಹಾರಾಜ್ ಅವರ ವೀಡಿಯೊಗಳನ್ನು ತೆಗೆದುಹಾಕಲು ಮತ್ತು ರಾಣೆ ಅವರು ಮಾಡಿರುವ ಮಾನಹಾನಿ ಭಾಷಣಕ್ಕೆ ಸಂಬಂಧಿಸಿದ ಆರೋಪಗಳಿಗೆ, ಕಾನೂನು ಕ್ರಮಗಳಿಗೆ ಸಂಬಂಧಿಸಿದ ಅರ್ಜಿಗಳ ಮೇಲೆ ಈಗಾಗಲೇ ತಡಮಾಡದೆ ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ದ್ವೇಷದ ಭಾಷಣದ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ನಾವು ಮಾತನಾಡುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ, ಈ ಬಗ್ಗೆ ಪೊಲೀಸರು ಎಲ್ಲಿ ಬೇಕಾದರೂ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸುತ್ತಾರೆ. ಏಕನಾಥ್ ಶಿಂಧೆ ಮತ್ತು ರಾಮಗಿರಿ ಒಂದೇ ವೇದಿಕೆಯಲ್ಲಿದ್ದರು ಎಂದ ಮಾತ್ರಕ್ಕೆ ಎಫ್‌ಐಆರ್ ದಾಖಲಿಸಬೇಕು ಎಂದಲ್ಲ. ನೀವು ತಪ್ಪು ಉದ್ದೇಶಗಳನ್ನು ಸಾಬೀತು ಪಡಿಸಬೇಕು. ತಪ್ಪು ಕಂಡುಬಂದಲ್ಲಿ ಎಫ್‌ಐಆರ್ ದಾಖಲಿಸಲಾಗುವುದು. ನೀವು (ನಖ್ವಿ) ಇದನ್ನು ರಾಜಕೀಯ ವಿಷಯವಾಗಿ ಪರಿವರ್ತಿಸುತ್ತಿದ್ದೀರಿ. ನೀವು ಮುಖ್ಯ ವಿಷಯದಿಂದ ಹೊರಗುಳಿದರೆ ಅದು ತಪ್ಪಾಗುತ್ತದೆ. ನಿಮ್ಮ ಮುಖ್ಯ ಸಮಸ್ಯೆ ವಿಡಿಯೋಗಳನ್ನು ತೆಗೆದುಹಾಕುವುದು ಅಷ್ಟೇ ಆಗಿದೆ’ ಎಂದು ಹೇಳಿದರು.

ರಾಮಗಿರಿ ಮಹಾರಾಜರ ವಿರುದ್ಧ ಈಗಾಗಲೇ ಸೆಪ್ಟೆಂಬರ್ 19 ರವರೆಗೆ 67 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದ ಅಡ್ವೊಕೇಟ್ ಜನರಲ್ ವೀರೇಂದ್ರ ಸರಾಫ್, ಅರ್ಜಿದಾರರ ಮನವಿಗೆ ವಿರೋಧ ವ್ಯಕ್ತಪಸಿದರು. ಪ್ರಕರಣದಿಂದ ಮುಖ್ಯಮಂತ್ರಿ ಹೆಸರನ್ನು ತೆಗೆದುಹಾಕಬೇಕು ಎಂಬ ವಕೀಲ ಸರಾಫ್ ಅವರ ಮನವಿಗೆ ಸಮ್ಮತಿಸಿದ ಪೀಠ, ಅರ್ಜಿದಾರರಿಗೆ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿತು. ಅಕ್ಟೋಬರ್ 17 ರಂದು ಮತ್ತೊಮ್ಮೆ ಈ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್

ಬಿಜೆಪಿ ಆಡಳಿತದಲ್ಲಿ ನಿರ್ಮಾಣ ದೋಷಗಳಿಗೆ ಕೊರತೆ ಇಲ್ಲ ಎಂಬುದು ದಿನದಿಂದ ದಿನಕ್ಕೆ ಸಾಬೀತಾಗುತ್ತಿದೆ. ಅದರಲ್ಲೂ ವಿಶೇಷಚಾಗಿ ನಿರ್ಮಾಣ ಪೂರ್ಣಗೊಂಡು ವರ್ಷ ಕಳೆಯುವುದರೊಳಗೆ ಕಟ್ಟಡಗಳು ಕುಸಿದು ಬೀಳುವುದು, ನಿರ್ಮಾಣದಲ್ಲಿ ಲೋಪಗಳು ಕಂಡುಬರುವುದೆಲ್ಲ ತೀರಾ ಸಾಮಾನ್ಯ ಸುದ್ದಿಗಳಾಗಿವೆ.

ಭಾರತದ ನೂತನ ಸಂಸತ್ತಿನ ಮೇಲ್ಛಾವಣಿಯಲ್ಲಿ ನೀರಿನ ಸೋರಿಕೆ, ಉತ್ತರ ಪ್ರದೇಶದ ರಾಮಮಂದಿರದ ಮೇಲ್ಛಾವಣಿಯಲ್ಲಿ ನೀರು ಸೋರಿಕೆ, ದೆಹಲಿಯ ಸುರಂಗದಲ್ಲಿ ನೀರಿನ ಸೋರಿಕೆ, ಮಹಾರಾಷ್ಟ್ರ ಮೇಲ್ಸೇತುವೆಯಲ್ಲಿ ಬಿರುಕುಗಳು, ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ ಮುಂತಾದ ಘಟನೆಗಳು ಇದಕ್ಕೆ ಉದಾಹರಣೆಗಳಾಗಿ ಹೇಳಬಹುದು.

ಮೇಲಿನ ಪ್ರತಿ ನಿರ್ಮಾಣಕ್ಕೂ ನೂರಾರು ಕೋಟಿ ಖರ್ಚು ಮಾಡಲಾಗಿದೆ. ಇದುವೇ ಬಿಜೆಪಿ ಪ್ರಸ್ತಾಪಿಸುತ್ತಿರುವ ನಿರ್ಮಾಣ ಅಭಿವೃದ್ಧಿ ಆಗಿದೆ. ಈ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ನಿರ್ಮಾಣ ದೋಷವೆಂದರೆ ಅದು ಮಳೆ, ಗಾಳಿಯನ್ನೂ ಸಹ ತಡೆದುಕೊಳ್ಳಲು ಸಾಧ್ಯವಿಲ್ಲದ ಮಹಾರಾಷ್ಟ್ರದಲ್ಲಿ ನಿರ್ಮಾನಗೊಂಡಿರುವ ಛತ್ರಪತಿ ಶಿವಾಜಿಯ ಪ್ರತಿಮೆಯಾಗಿದೆ.

35 ಅಡಿ ಎತ್ತರದ ಪ್ರತಿಮೆಗೆ ಸರ್ಕಾರ ಸುಮಾರು 3,600 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಸರ್ಕಾರ ಖರ್ಚು ಮಾಡಿದೆ ಎಂದರೆ ಜನ ತೆರಿಗೆಯಾಗಿ ಕೊಟ್ಟ ಹಣವನ್ನು ಖರ್ಚು ಮಾಡಿದೆ ಎಂದರ್ಥ. ಈ ಮೂಲಕ 8 ತಿಂಗಳ ಹಿಂದೆ 3,600 ಕೋಟಿ ರೂ.ಗಳ ಜನರ ಹಣದಲ್ಲಿ ನಿರ್ಮಿಸಲಾದ ಈ ಪ್ರತಿಮೆಯನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಎನ್‌ಡಿಎ ಮೈತ್ರಿಕೂಟದಲ್ಲಿರುವ ಶಿವಸೇನೆ (ಶಿಂಧೆ) ಪಕ್ಷದ ನಾಯಕ ಏಕನಾಥ್ ಶಿಂಧೆ ಅವರ ಒತ್ತಾಯದ ಮೇರೆಗೆ ಪ್ರತಿಮೆ ನಿರ್ಮಾಣದ ಟೆಂಡರ್ ಕಾರ್ಯವನ್ನು ಜೈದೀಪ್ ಆಪ್ತೆ (Jaideep Apte) ಅವರಿಗೆ ನೀಡಲಾಯಿತು.

ಕೇವಲ 24 ವರ್ಷ ವಯಸ್ಸಿನ ಜೈದೀಪ್ ಆಪ್ತೆ, ಏಕನಾಥ್ ಶಿಂಧೆ ಅವರ ಆಪ್ತ ಗೆಳೆಯನ ಅರ್ಹತೆ ಹೊಂದಿರುವುದನ್ನು ಬಿಟ್ಟರೆ ಅವರಿಗೆ ಮೂರ್ತಿ ತಯಾರಿಕೆಯಲ್ಲಿ ಪೂರ್ವಾನುಭವವಿಲ್ಲ ಎಂಬ ಆರೋಪ ಬಲವಾಗಿ ಕೇಳ ತೊಡಗಿದೆ.

ಹೀಗೆ ಸ್ನೇಹಿತರು, ಪರಿಚಿತರು, ದಾನಿಗಳು ಎಂಬ ಕಾರಣಕ್ಕೆಲ್ಲ ಟೆಂಡರ್ ನೀಡಿ, ಪೂರ್ವಾನುಭವವಿಲ್ಲದ ವ್ಯಕ್ತಿಗಳು ನಿರ್ಮಿಸುವ ನಿರ್ಮಾಣಗಳು ವರ್ಷ ಕಳೆಯುವುದರೊಳಗೆ ಕುಸಿದು ಬೀಳುತ್ತಿರುವುದು ಕೇಂದ್ರ ಬಿಜೆಪಿ ಸರ್ಕಾರದ ನಿರ್ಮಾಣ ವೈಫಲ್ಯವನ್ನು ತೋರಿಸುತ್ತಿದೆ.

ಹಾಗಾಗಿ ಸುಮಾರು 3,600 ಕೋಟಿ ರೂ.ಗಳನ್ನು ವ್ಯರ್ಥಮಾಡಿ, ಛತ್ರಪತಿ ಶಿವಾಜಿ ಪ್ರತಿಮೆ ನಿರ್ಮಿಸಿದ NDA ಸರ್ಕಾರವೇ ಪ್ರತಿಮೆಯ ಧ್ವಂಸಕ್ಕೆ ಹೊಣೆಯಾಗಬೇಕು.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಭಾರತದ ಉದ್ಯಮಿ ಅದಾನಿಯು ವಂಚನೆ ಮತ್ತು ಅವ್ಯವಹಾರದ ಆರೋಪಕ್ಕೆ ಒಳಗಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಏಕೆ ಭೇಟಿಯಾದರು?

‘ಇನ್ನು 15 ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಎರಡು ಬಾಂಬ್‌ಗಳು ಸ್ಫೋಟಗೊಳ್ಳಲಿದೆ’ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಉದ್ಯಮಿ ಅಧಾನಿ, ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ. ಗೌತಮ್ ಅದಾನಿಯು ಮುಂಬೈನಲ್ಲಿರುವ ಶರದ್ ಪವಾರ್ ಅವರ ‘ಸಿಲ್ವರ್ ಓಕ್’ ನಿವಾಸಕ್ಕೆ ಏಪ್ರಿಲ್ 20 ರಂದು ಭೇಟಿ ನೀಡಿದರು. ಅಲ್ಲಿ ಶರದ್ ಪವಾರ್ ಮತ್ತು ಅದಾನಿ ಭೇಟಿ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು ಎಂದು ವರದಿಗಳು ಹೇಳುತ್ತವೆ.

ಸುಪ್ರಿಯಾ ಸುಳೆ

ಶರದ್ ಪವಾರ್ ಅವರ ಸಂಬಂಧಿ ಅಜಿತ್ ಪವಾರ್, ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆ ಎಂಬ ಊಹಾಪೋಹದ ಸುದ್ಧಿಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಈ ವೇಳೆಯಲ್ಲಿ, ಇಂತಹ ಭೇಟಿ ನಡೆದಿರುವುದು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ, ಈ ಭೇಟಿ ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ.

ಶರದ್ ಪವಾರ್ ಮತ್ತು ಅದಾನಿ

ಅದಾನಿ ಸಮೂಹವು ವಿವಿಧ ಅಕ್ರಮಗಳಲ್ಲಿ ಭಾಗಿಯಾಗಿದೆ ಎಂದು ಹಿಂಡೆನ್‌ಬರ್ಗ್ ವರದಿಯು ಪುರಾವೆಗಳೊಂದಿಗೆ ಆರೋಪಿಸಿತ್ತು. ಈ ವಿಚಾರವಾಗಿ ಕಾಂಗ್ರೆಸ್ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಅದಾನಿಯನ್ನು ಕಟುವಾಗಿ ಟೀಕಿಸಿದವು. ಉದ್ಯಮಿ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸಂಪರ್ಕದ ಬಗ್ಗೆ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದರು. ಮೋದಿ ಮತ್ತು ಅದಾನಿ ಒಟ್ಟಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನೂ ರಾಹುಲ್ ಗಾಂಧಿ ಸಂಸತ್ತಿನಲ್ಲಿ ತೋರಿಸಿದರು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಅದಾನಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದರೂ ಶರದ್ ಪವಾರ್ ಅದಾನಿಯನ್ನು ಬೆಂಬಲಿಸಿಕೊಂಡು ಬಂದರು.

ರಾಹುಲ್ ಗಾಂಧಿ

ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂಬುದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಆದರೆ ‘ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಸಂಸದೀಯ ಜಂಟಿ ಸಮಿತಿಯ ತನಿಖೆ ಅಗತ್ಯವಿಲ್ಲ’ ಎಂದು ಶರದ್ ಪವಾರ್ ಹೇಳಿದರು. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶರದ್ ಪವಾರ್ ಹಾಗೂ ಗೌತಮ್ ಅದಾನಿ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಮಹುವಾ ಮೊಯಿತ್ರಾ

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಅದಾನಿ ವಿಚಾರವನ್ನು ತೀವ್ರವಾಗಿ ಟೀಕಿಸಿಕೊಂಡು ಬರುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ನೀಡಿದ ಮಾಹಿತಿಯೊಂದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತು. ಅದೇನೆಂದರೆ, ‘ಗೌತಮ್ ಅಧಾನಿ ನನ್ನನ್ನು ಮತ್ತು ಇತರ ಕೆಲವರನ್ನು ಸ್ನೇಹಿತರ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ಮಹುವಾ ಮೊಯಿತ್ರಾ ಹೇಳಿದರು.

ಆ ಕೆಲವರಲ್ಲಿ ಶರದ್ ಪವಾರ್ ಕೂಡ ಒಬ್ಬರು ಎಂಬುದು ಈ ಭೇಟಿಯ ಮೂಲಕ ಬಹಿರಂಗವಾಗಿದೆ. ಅವರ ಭೇಟಿಯ ನಂತರ ಪ್ರತಿಕ್ರಿಯಿಸಿದ ಮಹುವಾ ಮೊಯಿತ್ರಾ, ‘ಯಾವುದೇ ರಾಜಕಾರಣಿ ಉದ್ಯಮಿ ಅದಾನಿಯನ್ನು ಭೇಟಿ ಮಾಡಬಾರದು’ ಎಂದು ಹೇಳಿದರು. ‘ಅದಾನಿ ಜತೆ ಮುಖಾಮುಖಿಯಾಗಿ ಚರ್ಚಿಸಲು ಏನೂ ಇಲ್ಲ. ಹಿಂಡೆನ್‌ಬರ್ಗ್ ವರದಿಯ ಆರೋಪಗಳ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳೂವ ತನಕ ಯಾವುದೇ ರಾಜಕಾರಣಿ ಅದಾನಿಯನ್ನು ಭೇಟಿ ಮಾಡಬಾರದು’ ಎಂದು ಮಹುವಾ ಮೊಯಿತ್ರಾ ಹೇಳುತ್ತಾರೆ. ಮತ್ತು ಶರದ್ ಪವಾರ್ ಅವರು ಅದಾನಿಯನ್ನು ಭೇಟಿಯಾಗಿರುವುದನ್ನೂ ಟೀಕಿಸಿದ್ದಾರೆ.

ಉದ್ಧವ್ ಠಾಕ್ರೆ

ನವೆಂಬರ್ 2019ರಲ್ಲಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು. ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಸೇರಿದಂತೆ ಪಕ್ಷಗಳನ್ನು ಒಳಗೊಂಡ ಮಹಾ ವಿಕಾಸ್ ಅಗಾಡಿ ಸಮ್ಮಿಶ್ರ ಸರ್ಕಾರ ಅಲ್ಲಿ ನಡೆಯಿತು. ಇದ್ದಕ್ಕಿದ್ದಂತೆ ಶಿವಸೇನೆಯಿಂದ ಬೇರ್ಪಟ್ಟ ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿಯಾದರು. ಆಡಳಿತ ಬದಲಾವಣೆಗೂ ಮುನ್ನ ಅದಾನಿ ಮತ್ತು ಶರದ್ ಪವಾರ್ ಭೇಟಿ ನಡೆಯಿತು ಎಂಬುದು ಗಮನಾರ್ಹ.

ಅಜಿತ್ ಪವಾರ್

ಪ್ರಸ್ತುತ ಉದ್ಧವ್ ಠಾಕ್ರೆ ಹೂಡಿರುವ ಪ್ರಕರಣದಲ್ಲಿ ಏಕನಾಥ್ ಶಿಂಧೆ ಬೆಂಬಲಿಗ ಶಾಸಕರು ಅನರ್ಹಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದೆ ಯಾರು ಸರ್ಕಾರ ರಚಿಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಈ ಹಿನ್ನಲೆಯಲ್ಲೇ ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದಾರೆ ಎಂಬ ವರದಿಗಳು ಹೊರಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಅದಾನಿ ಹಾಗೂ ಶರದ್ ಪವಾರ್ ಭೇಟಿ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ.

ಏಕನಾಥ್ ಶಿಂಧೆ

ಶರದ್ ಪವಾರ್ ಮತ್ತು ಅದಾನಿ ಭೇಟಿಗೂ ಮಹಾರಾಷ್ಟ್ರ ರಾಜಕಾರಣದ ಮುಂದಿನ ನಡೆಗಳಿಗೂ ಸಂಬಂಧ ಇರುವ ಸಾಧ್ಯತೆಗಳು ಇದೆ ಎಂದೂ ಹೇಳಲಾಗುತ್ತಿದೆ. ಮತ್ತು ಈ ಸಭೆಯಲ್ಲಿ ಹಿಂಡೆನ್‌ಬರ್ಗ್ ವರದಿಯಿಂದ ಉಂಟಾದ ಬಿಕ್ಕಟ್ಟು ಮತ್ತು ವಿರೋಧ ಪಕ್ಷಗಳ ಹೋರಾಟದಿಂದ ಅದಾನಿ ಸಮೂಹಕ್ಕೆ ಉದ್ಭವಿಸಿರುವ ಒತ್ತಡದ ಬಗ್ಗೆಯೂ ಅವರು ಖಂಡಿತವಾಗಿ ಚರ್ಚಿಸಿರುತ್ತಾರೆ ಎಂದು ಹೇಳಲಾಗುತ್ತಿದೆ.