ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ದಕ್ಷಿಣ ಭಾರತ Archives » Dynamic Leader
October 18, 2024
Home Posts tagged ದಕ್ಷಿಣ ಭಾರತ
ದೇಶ ರಾಜ್ಯ

ಜನಸಂಖ್ಯೆಯ ಆಧಾರದ ಮೇಲೆ, ಲೋಕಸಭೆ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಿದಾಗ, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತದೆ.

ಡಿ.ಸಿ.ಪ್ರಕಾಶ್ ಸಂಪಾದಕರು

ಜನಸಂಖ್ಯೆಯ ಆಧಾರದ ಮೇಲೆ 2026ರ ನಂತರ, ಲೋಕಸಭೆ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಿದಾಗ, ಕರ್ನಾಟಕ, ತಮಿಳುನಾಡು, ಕೇರಳ, ಮತ್ತು ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದ್ದು, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದಂತಹ ಉತ್ತರದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂಬ ಆಘಾತಕಾರಿ ವರದಿಯನ್ನು ಕಾರ್ನೆಗೀ ಸೆಂಟರ್ (Carnegie Report) ಪ್ರಕಟಿಸಿದೆ.

2026ರಲ್ಲಿ ಮತ್ತೊಮ್ಮೆ ಕ್ಷೇತ್ರದ ಮರುವಿಂಗಡಣೆ:
ಜನಸಂಖ್ಯೆಯ ಆಧಾರದ ಮೇಲೆಯೇ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ (Delimitation) ಮತ್ತು ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಆ ರೀತಿಯಲ್ಲಿ, ಪ್ರತಿ ಕ್ಷೇತ್ರವು ಸರಿಸುಮಾರು ಒಂದೇ ಸಂಖ್ಯೆಯ ಮತದಾರರನ್ನು ಹೊಂದಿದೆ ಎಂದು ಸರ್ಕಾರಗಳು ಖಚಿತಪಡಿಸುತ್ತವೆ. ಅಲ್ಲದೆ, ಜನಸಂಖ್ಯೆ ಹೆಚ್ಚಾದಂತೆ ಕ್ಷೇತ್ರಗಳನ್ನು ಸಹ ಮರುವಿಂಗಡಿಸಲಾಗುತ್ತದೆ. ಆದರೆ, ಕೇಂದ್ರ ಸರ್ಕಾರವು 1976 ರಿಂದ 2000 ರವರೆಗೆ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಅಲ್ಲದೆ, 2001ರಲ್ಲಿ, ನಿಷೇಧವನ್ನು 2026 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನಲೆಯಲ್ಲಿ, 2026ರ ನಂತರ, ಸಂಸತ್ತಿನ ಕ್ಷೇತ್ರಗಳನ್ನು ಮತ್ತೆ ಜನಸಂಖ್ಯೆಯ ಆಧಾರದ ಮೇಲೆ ಮರುವಿಂಗಡಣೆಗೊಳಿಸಲಾಗುವುದು.

ಆಘಾತಕಾರಿ ಸಂಶೋಧನಾ ವರದಿ:
ಈ ಹಿನ್ನಲೆಯಲ್ಲಿ, ಕಾರ್ನೆಗೀ ಸೆಂಟರ್ (Carnegie Report) ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ, “ದಕ್ಷಿಣ ಭಾರತದ ರಾಜ್ಯಗಳಿಗಿಂತ ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ತುಂಬಾ ವೇಗವಾಗಿದೆ. ಜನಗಣತಿಯ ಆಧಾರದ ಮೇಲೆ ಸಂಸತ್ತಿನ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಲಾಗುವುದರಿಂದ, ತುಲನಾತ್ಮಕವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಕ್ಷೇತ್ರಗಳ ಸಂಖ್ಯೆಯು ಹೆಚ್ಚಾಗುತ್ತದೆ. ಅದೇ ಸಂದರ್ಭದಲ್ಲಿ, ಜನಸಂಖ್ಯೆ ನಿಯಂತ್ರಣದಲ್ಲಿರುವ ದಕ್ಷಿಣ ರಾಜ್ಯಗಳ ಸಂಸದೀಯ ಕ್ಷೇತ್ರಗಳು ಗಣನೀಯವಾಗಿ ಕಡಿಮೆಯಾಗಲಿವೆ. ಅಂದರೆ ಈಗಿರುವ ಕ್ಷೇತ್ರಗಳಲ್ಲಿ ಭಾರಿ ನಷ್ಟವಾಗುತ್ತದೆ!” ಎಂಬ ಅಘಾತಕ್ಕಾರಿ ವರದಿಯನ್ನು ಪ್ರಕಟಿಸಿದೆ.

ಅಲ್ಲದೆ, “2026ರ ನಂತರ ಜನಸಂಖ್ಯೆಯನ್ನು ಅಂದಾಜಿಸಿ, ಅದರ ಆಧಾರದ ಮೇಲೆ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಉತ್ತರದ ರಾಜ್ಯಗಳಿಗೆ ಹೆಚ್ಚುವರಿ ಸ್ಥಾನಗಳು ಸಿಗಲಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತದ ಅತಿದೊಡ್ಡ ರಾಜ್ಯವಾದ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶವು ಪ್ರಸ್ತುತ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಆದರೆ, ಕ್ಷೇತ್ರಗಳ ಮರು ವಿಂಗಡಣೆ ನಂತರ 11 ಹೆಚ್ಚುವರಿ ಕ್ಷೇತ್ರಗಳು ಪಡೆದು, ಒಟ್ಟು ಕ್ಷೇತ್ರಗಳ ಸಂಖ್ಯೆ 91ಕ್ಕೆ ಏರುವ ನಿರೀಕ್ಷೆಯಿದೆ. ಅಂತೆಯೇ, ಕ್ಷೇತ್ರಗಳ ಮರು ವಿಂಗಡಣೆ ನಂತರ ಅಸ್ತಿತ್ವದಲ್ಲಿರುವ ಕ್ಷೇತ್ರಗಳಿಗಿಂತ ಬಿಹಾರ ರಾಜ್ಯ 10, ರಾಜಸ್ಥಾನ 6 ಮತ್ತು ಮಧ್ಯಪ್ರದೇಶ 4 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಪಡೆಯಲಿದೆ. ಅದೇ ರೀತಿ ಗುಜರಾತ್, ಹರಿಯಾಣ, ಜಾರ್ಖಂಡ್, ದೆಹಲಿ (ಕೇಂದ್ರಾಡಳಿತ ಪ್ರದೇಶ), ಛತ್ತೀಸ್‌ಗಢ ಸೇರಿದಂತೆ ಉತ್ತರದ ರಾಜ್ಯಗಳು ತಲಾ 1 ಲೋಕಸಭಾ ಸ್ಥಾನವನ್ನು ಹೆಚ್ಚುವರಿಯಾಗಿ ಪಡೆಯಲಿವೆ!

ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ:
ಅದೇ ಸಮಯದಲ್ಲಿ “ನಾವಿಬ್ಬರು ನಮಗಿಬ್ಬರು” ಎಂದು ಜನಸಂಖ್ಯಾ ನಿಯಂತ್ರಣವನ್ನು ಜವಾಬ್ದಾರಿಯುತವಾಗಿ ಜಾರಿಗೆ ತಂದ ದಕ್ಷಿಣದ ರಾಜ್ಯಗಳು ಆ ಹೊಣೆಗಾರಿಕೆಗಾಗಿಯೇ ತಕ್ಕ ಶಿಕ್ಷೆಯನ್ನು ಅನಿಭವಿಸಲಿದೆ. ಅಂದರೆ ಅಸ್ತಿತ್ವದಲ್ಲಿರುವ ಕ್ಷೇತ್ರಗಳು ಗಮನಾರ್ಹವಾಗಿ ಕಳೆದುಕೊಳ್ಳಲಿವೆ. ಅದರಲ್ಲೂ ತಮಿಳುನಾಡು ರಾಜ್ಯವು ಪ್ರಸ್ತುತ 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಆದರೆ 2026ರ ನಂತರ ಕೇಂದ್ರ ಸರ್ಕಾರದ ಕ್ಷೇತ್ರದ ಪುನರ್ ವಿಂಗಡಣೆಯಿಂದಾಗಿ ಸುಮಾರು 8 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕೇವಲ 31ಕ್ಕೆ ಇಳಿಯಲಿದೆ. ತಮಿಳುನಾಡಿನಂತೆ ಮತ್ತೊಂದು ದಕ್ಷಿಣದ ರಾಜ್ಯವಾದ ಕೇರಳವು ಪ್ರಸ್ತುತ 20 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ 12ಕ್ಕೆ ಕುಗ್ಗಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡು ರಾಜ್ಯಗಳು ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಅದು 34ಕ್ಕೆ ಇಳಿಯಲಿದೆ. ಕರ್ನಾಟಕವೂ ಈಗಿನ 28 ರಿಂದ 2 ಸ್ಥಾನ ಕಳೆದುಕೊಂಡು 26ಕ್ಕೆ ಕುಗ್ಗುವುದೆಂದು ಊಹಿಸಲಾಗಿದೆ!” ಎಂದು ಕಾರ್ನೆಗೀ ವರದಿಯಲ್ಲಿ ಹೇಳಲಾಗಿದೆ.

‘ಸೆಂಟ್ರಲ್ ವಿಸ್ಟಾ’ ನಿರ್ಮಾಣದ ಸಮಯದಲ್ಲೇ ಎದ್ದ ವಿವಾದ:
ಇತ್ತೀಚೆಗಷ್ಟೇ `ಸೆಂಟ್ರಲ್ ವಿಸ್ಟಾ’ ಹೆಸರಿನ ನೂತನ ಸಂಸತ್ ಭವನವನ್ನು ನಿರ್ಮಿಸಿ ಪ್ರಧಾನಿ ಮೋದಿ ಉದ್ಘಾಟಿಸಿದರು. ನೂತನ ಸಂಸತ್ ಭವನ ನಿರ್ಮಾಣದ ವೇಳೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಫೋಟೋಗಳು, ವೀಡಿಯೊಗಳ ವಿವರಗಳು ವಿವಾದವನ್ನು ಹುಟ್ಟುಹಾಕಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಲೋಕಸಭಾ ಮತ್ತು ರಾಜ್ಯಸಭಾ ಕಲಾಪಗಳು ನಡೆಯುವ ಸಭಾಂಗಣದ ಆಸನಗಳು ಈಗಿರುವ ಹಳೆಯ ಸಂಸತ್ ಕಟ್ಟಡಕ್ಕಿಂತ ಎರಡು ಪಟ್ಟು ಹೆಚ್ಚಿಸಲಾಗಿದೆ. ಉದಾಹರಣೆಗೆ, ಪ್ರಸ್ತುತ ಲೋಕಸಭೆಯು 543 ಸದಸ್ಯರನ್ನು ಮತ್ತು ರಾಜ್ಯಸಭೆಯು 245 ಸದಸ್ಯರನ್ನು ಹೊಂದಿದೆ. ಅದರಂತೆಯೇ ಹಳೆಯ ಸಂಸತ್ ಭವನದ ಉಭಯ ಸದನಗಳ ಆಸನಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಈ ಹೊಸ ಸಂಸತ್ ಕಟ್ಟಡದ ಲೋಕಸಭೆಯಲ್ಲಿ 888 ಸ್ಥಾನಗಳು, ರಾಜ್ಯಸಭೆಯಲ್ಲಿ 384 ಸ್ಥಾನಗಳಂತೆ ಒಟ್ಟು 1272 ಹೆಚ್ಚುವರಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನು ಅಂದೇ ಎತ್ತಿ ತೋರಿಸಿದ ವಿರೋಧ ಪಕ್ಷಗಳು, ಸಂಸತ್ತಿನ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಿರುವುದರಿಂದ ಬಿಜೆಪಿ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಪುನರ್ ವಿಂಗಡಿಸಲು ಹೊರಟಿದೆ ಎಂದು ಅನುಮಾನ ವ್ಯಕ್ತಪಡಿಸಿತು. ನಿರ್ದಿಷ್ಟವಾಗಿ, ಕ್ಷೇತ್ರಗಳ ಮರು ವಿಂಗಡಣೆಯಿಂದ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ಕ್ಷೇತ್ರಗಳ ಸಂಖ್ಯೆಯಲ್ಲಿ ಹಿನ್ನಡೆ ಎದುರಿಸಬೇಕಾಗುತ್ತದೆ. ಬಿಜೆಪಿ ಪ್ರಾಬಲ್ಯವಿರುವ ಉತ್ತರ ಪ್ರದೇಶದಂತಹ ಉತ್ತರದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ದಕ್ಷಿಣ ರಾಜ್ಯದ ನಾಯಕರು ಆತಂಕಗೊಂಡಿದ್ದರು. ಈ ಹಿನ್ನಲೆಯಲ್ಲಿ ಕಾರ್ನೆಗೀ ವರದಿಯೂ ಇದನ್ನು ದೃಢಪಡಿಸಿದೆ.

ರಾಜಕೀಯ

ಬೆಂಗಳೂರು: ಪುದುಚೇರಿ ಒಳಗೊಂಡಂತೆ 6 ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಯಿರುವ ಏಕೈಕ ರಾಜ್ಯವೆಂದರೆ ಅದು ಕರ್ನಾಟಕ. ಬಹುಶಃ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸೋತರೆ ಆ ಪಕ್ಷಕ್ಕೆ ದಕ್ಷಿಣ ಭಾರತದ ಬಾಗಿಲು ಸಂಪೂರ್ಣವಾಗಿ ಮುಚ್ಚಲಿದೆ. ಒಂದು ದೇಶವನ್ನು ಆಳುವ ಪಕ್ಷ; ವಿಶ್ವದ ಅತಿ ದೊಡ್ಡ ಸದಸ್ಯತ್ವ ಹೊಂದಿರುವ ಪಕ್ಷ; ದೇಶದ ಒಂದು ದೊಡ್ಡ ಭೂಪ್ರದೇಶದಲ್ಲಿ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವುದು ಆ ಪಕ್ಷಕ್ಕೆ ಕಹಿ ದುಃಸ್ವಪ್ನವಾಗಿ ಇರುತ್ತದೆ.

ಲಿಂಗಾಯತ ಸೇರಿದಂತೆ ಪ್ರಮುಖ ವೋಟ್ ಬ್ಯಾಂಕ್ ಸಮುದಾಯಗಳು ಬಿಜೆಪಿಯಿಂದ ದೂರ ಸರಿಯುತ್ತಿರುವುದು, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಪ್ರಮುಖ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಿರುವುದು, ನಂದಿನಿ ಹಾಲಿನ ವಿಚಾರ, ಮುಸ್ಲಿಮರಿಗೆ ಶೇಕಡಾ 4% ಮೀಸಲಾತಿ ರದ್ದು ಮುಂತಾದ ವಿಷಯಗಳು ಬಿಜೆಪಿಗೆ ಚುನಾವಣೆಯ ಸಂದರ್ಭದಲ್ಲಿ ಬಾರಿ ಬಿಕ್ಕಟ್ಟನ್ನು ನೀಡುತ್ತವೆ ಎಂದು ನಿರೀಕ್ಷೆ ಮಾಡುತ್ತಿರುವ ಸಂದರ್ಭದಲ್ಲಿ, ಇವುಗಳನ್ನು ಹತ್ತಿಕ್ಕಲು ಬಿಜೆಪಿಯೂ ಪರ್ಯಾಯ ಚಿಂತನೆಗಳನ್ನು ಮುಂದಿಟ್ಟಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಸರಿ ಒಂದುವೇಳೆ ಚುನಾವಣೆಯಲ್ಲಿ ಸೋತರೆ ಕೆಲವು ಕ್ರಿಯಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ದೆಹಲಿ ಬಿಜೆಪಿ ಮೂಲಗಳು ಹೇಳುತ್ತವೆ. ಒಟ್ಟಾರೆಯಾಗಿ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಜೀವನ್ಮರಣ ಪರಿಸ್ಥಿತಿಯೇ?

ದೇಶ

ನವದೆಹಲಿ: ಮುಂದಿನ ವರ್ಷ ಸಂಸತ್ತಿಗೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ ಎದುರಿಸಲು ಎಲ್ಲ ಪಕ್ಷಗಳು ಈಗಾಗಲೆ ಸಿದ್ದತೆಗಳನ್ನು ನಡೆಸಿಕೊಂಡು ಬರುತ್ತಿವೆ. ಸದ್ಯ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು ಕೂಡ 3ನೇ ಅವಧಿಗೆ ಅಧಿಕಾರ ಹಿಡಿಯಲು ತಂತ್ರಗಳನ್ನು ರೂಪಿಸುತ್ತಿದೆ.

ಭಾರತೀಯ ಜನತಾ ಪಾರ್ಟಿ ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಯ ಪರವಾಗಿ ಹೆಚ್ಚುವರಿ ಕ್ಷೇತ್ರಗಳನ್ನು ಗೆಲ್ಲಲು ಮುಂದಾಗಿದೆ. ಇದಕ್ಕಾಗಿ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ. ಅದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ಧಿಯನ್ನು ಹರಿಯಬಿಟ್ಟಿದ್ದಾರೆ.

ಪ್ರಧಾನಿ ಮೋದಿ ಉತ್ತರದಲ್ಲಿ ಒಂದು ಹಾಗೂ ದಕ್ಷಿಣ ರಾಜ್ಯದಲ್ಲಿ ಒಂದು ಕ್ಷೇತ್ರಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದು, ದಕ್ಷಿಣ ರಾಜ್ಯದ ತಮಿಳುನಾಡಿನಿಂದಲೇ ಅವರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸುವುದಾದರೆ ರಾಮನಾಥಪುರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಭಾರತೀಯ ಜನತಾ ಪಕ್ಷದ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಅವರನ್ನು ಕೇಳಿದಾಗ, ‘ಪ್ರಧಾನಿ ನರೇಂದ್ರ ಮೋದಿ ವಿದೇಶಿಯಲ್ಲ; ಆತ ಭಾರತೀಯ. ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ನಾಡಿನ ಜನ ಅವರ ಮೇಲೆ ಪ್ರೀತಿ, ಮಮತೆ ಹೊಂದಿದ್ದಾರೆ. ಅಷ್ಟೇ ಅಲ್ಲ ಮುಂದಿನ ಸಂಸತ್ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದು ನಿಜವೇ ಎಂದು ಅನೇಕರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಕಳೆದ 2 ದಿನಗಳ ಹಿಂದೆ ನಾನು ತೂತ್ತುಕುಡಿಗೆ ಹೋಗಿದ್ದೆ. ಅಲ್ಲಿನ ಅಂಗಡಿಯೊಂದರಲ್ಲಿ ಟೀ ಕುಡಿಯಲು ಹೋಗಿದ್ದಾಗ, ನನ್ನನ್ನು ನೋಡಿದ ಅಲ್ಲಿನ ಜನರು, ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸುತ್ತಾರೆಯೇ? ಎಂದು ಕೇಳಿದರು.

ಇದನ್ನು ತಿಳಿದುಕೊಳ್ಳಲು ಜನರು ತುಂಬಾ ಆಸಕ್ತಿ ಹೊಂದಿದ್ದಾರೆ. ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಬಲಿಷ್ಠಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ.

ತಮಿಳುನಾಡಿನ ಜನರು ಪ್ರಧಾನಿ ಮೋದಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದಾರೆ. ಅವರ ಚಟುವಟಿಕೆಗಳನ್ನು ಮೆಚ್ಚುತ್ತಾರೆ. ತಮಿಳುನಾಡಿನಲ್ಲೂ ಪ್ರಧಾನಿ ಮೋದಿಯ ಅಲೆ ಎದ್ದಿದೆ. ತಮಿಳುನಾಡಿನಲ್ಲೂ ಭಾರತೀಯ ಜನತಾ ಪಕ್ಷಕ್ಕೆ ಪ್ರತ್ಯೇಕ ಗುರುತು ಸಿಗಬೇಕು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇದನ್ನು ನಾವು ಸಾಬೀತು ಮಾಡುತ್ತೇವೆ’ ಎಂದರು.