ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಮತಾಂತರ Archives » Dynamic Leader
October 17, 2024
Home Posts tagged ಮತಾಂತರ
ರಾಜಕೀಯ

ಡಿ.ಸಿ.ಪ್ರಕಾಶ್

ಬೆಂಗಳೂರು: ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬಾರದೆಂದು ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ವಿಚಾರಣಾ ಆಯೋಗದ ಮುಂದೆ ಮನವಿ ಸಲ್ಲಿಸಲು ರಾಜ್ಯದ ದಲಿತ ಸಂಘಟನೆಗಳು ಮುಂದಾಗಿವೆ ಎಂದು ಇಂದು ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ವರದಿಯಾಗಿದೆ.

ದಲಿತರು ಇಸ್ಲಾಂ-ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೂ ಅವರು ಇನ್ನೂ ದಲಿತರಾಗಿಯೇ ಕಾಲೋನಿಗಳಲ್ಲಿ, ಕೇರಿಗಳಲ್ಲಿ, ಹಟ್ಟಿಗಳಲ್ಲಿ, ಕೊಳಗೇರಿ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಅದುಮಾತ್ರವಲ್ಲ, ಇನ್ನೂ ಅವರೆಲ್ಲರೂ ಅಸ್ಪೃಶ್ಯರಾಗಿ ಬಡತನದಲ್ಲೇ ಉಳಿದಿದ್ದಾರೆ ಎಂಬುದನ್ನು ದಲಿತ ಸಂಘಟನೆಗಳು ಮರೆತಿದ್ದು ಏಕೆ ಎಂಬುದು ಅರ್ಥವಾಗುತ್ತಿಲ್ಲ.

‘ಪರಿಶಿಷ್ಟ ಜಾತಿ’ ಸ್ಥಾನ ನೀಡಿ ಮೀಸಲಾತಿ ಸೌಲಭ್ಯ ಕಲ್ಪಿಸಬಾರದೆಂಬ ಸ್ಪಷ್ಟ ನಿಲುವನ್ನು ತೆಗೆದುಕೊಂಡಿರುವ ರಾಜ್ಯದ ಕೆಲವೊಂದು ದಲಿತ ಸಂಘಟನೆಗಳ ನಾಯಕರಿಗೆ ಸನಾತನದ ಸೋಂಕು ತಗಲಿದೆ ಎಂದು ಭಾವಿಸುತ್ತೇನೆ. ಅಂಬೇಡ್ಕರ್, ಪೆರಿಯಾರ್ ಹೆಸರಿನಲ್ಲಿ ಸಾಮಾಜಿಕ ನ್ಯಾಯ ಮಾತನಾಡುವ ನಿಜವಾದ ಅಂಬೇಡ್ಕರ್ ವಾದಿಗಳು ಯಾರೂ ಕೂಡ ಇಂತಹ ಕುಲಗೇಡಿತನವನ್ನು ಮಾಡಲಾರರು. 

ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನೂ ಸೇರಿಸಿಕೊಂಡು ಮೀಸಲಾತಿಯನ್ನು ಹೆಚ್ಚಿಸಿ, ಸ್ವಜಾತಿಯ ಇಸ್ಲಾಂ ಮತ್ತು ಕ್ರೈಸ್ತ ಧರ್ಮದವರಿಗೂ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಕೊಡುವ ಕೆಲಸವನ್ನು ರಾಜ್ಯದ ಪ್ರಜ್ಞಾವಂತ ದಲಿತ, ಕ್ರೈಸ್ತ ಮತ್ತು ಮುಸ್ಲಿಂ ಸಂಘಟನೆಗಳು ಜಂಟಿಯಾಗಿ ಮಾಡಬೇಕೆಂಬುದು ನಮ್ಮೆಲ್ಲರ ಆಗ್ರಹವಾಗಿದೆ. 

ನಾಳೆ ಬೆಂಗಳೂರಿನ ಅಂಬೇಡ್ಕರ್ ಭವನಕ್ಕೆ ತೆರಳಿ, ಸ್ವಜಾತಿಯ ಇಸ್ಲಾಂ ಮತ್ತು ಕ್ರೈಸ್ತ ಧರ್ಮದವರಿಗೆ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬಾರದೆಂದು ಮನವಿ ಸಲ್ಲಿಸುವವರು ಖಂಡಿತವಾಗಿಯೂ ಸ್ಪರ್ಶಿಸಬಹುದಾದ (Touchable) ದಲಿತ ಜನಾಂಗದವರೇ ಆಗಿರುತ್ತಾರೆ. ಇವರೆಲ್ಲರೂ ‘ಕಾವಿ’ ಮನಸ್ಥಿತಿಯ ವ್ಯಸನಿಗಳು. ಇವರಿಗೆ ನಮ್ಮ ನೋವುಗಳು, ದುಃಖ ದುಮ್ಮಾನಗಳು, ಇತಿಹಾಸ ಯಾವುದೂ ಅರ್ಥವಾಗುವುದಿಲ್ಲ.

ನಮ್ಮಿಂದ ಒಬ್ಬ ಮಾತಾಂತರಗೊಂಡು ಇಸ್ಲಾಂ ಧರ್ಮಕ್ಕೆ ಅಥವಾ ಕ್ರೈಸ್ತ ಧರ್ಮಕ್ಕೆ ಹೋದ ಮಾತ್ರಕ್ಕೆ ಅವನ ಮೀಸಲಾತಿಯ ಪಾಲನ್ನು ಸರ್ಕಾರ ಇತರರಿಗೆ ಹಂಚಿ ಕೊಡುವುದಿಲ್ಲ. ಅದು ಹಾಗೆಯೇ… ಅಲ್ಲಿಯೇ ಉಳಿದಿರುತ್ತದೆ. ಅದನ್ನು ಮತ್ತೆ ಅವನಿಗೆ ಕೊಡುವುದರಲ್ಲಿ ತಪ್ಪೇನಿದೆ. ಅದನ್ನು ಅವನು ಮತ್ತೆ ಕೇಳಿ ಪಡೆಯುವುದರಲ್ಲಿ ನಿಮಗೇನು ತೊಂದರೆ. ಇದನ್ನು ಸ್ವಜಾತಿ ವಿರೋಧಿ ಸಂಘಟನೆಗಳು ಅರ್ಥಮಾಡಿಕೊಂಡರೆ, ಅದುವೇ ನಿಜವಾದ ಸಾಮಾಜಿಕ ನ್ಯಾಯ; ಅಂಬೇಡ್ಕರ್ ವಾದ.  

ಪ್ರಗತಿಪರ, ಜಾತ್ಯತೀತ, ಸಾಮಾಜಿಕ ನ್ಯಾಯ ಮಾತನಾಡುವ ಸಮಾಜವಾದಿ ಹಿನ್ನೆಲೆಯ ನಾಯಕ, ನಮ್ಮೆಲ್ಲರ ನೆಚ್ಚಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ವಿಚಾರದಲ್ಲಿ ಗಮನಹರಿಸಿ, ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ ಮತ್ತೆ ಅದೇ ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂದು (ಮುಂದುವರಿಸಬೇಕೆಂದು) ಸಮುದಾಯದ ಪರವಾಗಿ ಮನವಿ ಮಾಡುತ್ತೇವೆ. 

ದೇಶ

ಅಲಹಾಬಾದ್: “ಮತಾಂತರ ನಡೆಯುವ ಧಾರ್ಮಿಕ ಸಭೆಗಳನ್ನು ತಡೆದು ನಿಲ್ಲಿಸಬೇಕು” ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್ “ಇದೇ ರೀತಿ ಮುಂದುವರಿದರೆ ದೇಶದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ” ಎಂದು ಹೇಳಿದೆ. ಇಂತಹ ಆದೇಶ ವಿವಾದ ಸೃಷ್ಟಿಸಿದೆ.

ಇತ್ತೀಚೆಗೆ ಉತ್ತರದ ರಾಜ್ಯಗಳಲ್ಲಿ ನ್ಯಾಯಾಲಯಗಳು ನೀಡುವ ತೀರ್ಪುಗಳು ಹಾಗೂ ಅವರು ವ್ಯಕ್ತಪಡಿಸುವ ಅಭಿಪ್ರಾಯಗಳು ವಿವಾದಕ್ಕೀಡಾಗುತ್ತಿವೆ. ಮತ್ತು ನ್ಯಾಯಾಧೀಶರು ವಿಜ್ಞಾನವನ್ನೇ ಪ್ರಶ್ನಿಸುವಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಅಚ್ಚರಿ ಮೂಡಿಸುತ್ತಿದಾರೆ.

ಕಳೆದ ವರ್ಷ ಅಲಹಾಬಾದ್ ಹೈಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯವೊಂದು ಎಲ್ಲರಿಗೂ ಆಘಾತವನ್ನು ಉಂಟುಮಾಡಿತ್ತು. ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಿ, ಗೋಮಾಂಸ ವ್ಯಾಪಾರಿ ಒಬ್ಬರನ್ನು ಬಂಧಿಸಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಗೋವು ನಮ್ಮ ಭೂಮಿಗೆ ತಾಯಿ ಇದ್ದಂತೆ; ಗೋವಿನ ರಕ್ತವು ಭೂಮಿಯ ಮೇಲೆ ಚೆಲ್ಲಿದರೆ ಅದು ಈ ಜಗತ್ತಿಗೆ ಒಳ್ಳೆಯದಲ್ಲ.

ಗೋವು ದೇವರ ಅದ್ಭುತ ಸೃಷ್ಟಿ. ಹಸುವಿನ ಮೂತ್ರ (ಗೋಮೂತ್ರ) ಎಲ್ಲಾ ರೋಗಗಳನ್ನು ಗುಣಪಡಿಸುತ್ತದೆ. ಹಸುವಿನ ಸಗಣಿಯಿಂದ ಮನೆಯನ್ನು ಸಾರಿಸಿದರೆ ಅಣು ವಿಕಿರಣವೂ ಮನೆಯೊಳಗೆ ಪ್ರವೇಶಿಸುವುದಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ವೈದ್ಯರು ಮತ್ತು ವಿಜ್ಞಾನಿಗಳು ನ್ಯಾಯಾಧೀಶರ ಅಭಿಪ್ರಾಯಗಳು ಯಾವುದೇ ವೈಜ್ಞಾನಿಕ ಸತ್ಯವನ್ನು ಹೊಂದಿಲ್ಲ ಎಂದು ಟೀಕಿಸಿದರು.

ಈ ಹಿನ್ನೆಲೆಯಲ್ಲಿ, ಉತ್ತರಪ್ರದೇಶದ ನಿವಾಸಿ ರಾಮ್ ಕಾಲಿ ಪ್ರಜಾಪತಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, “ನನ್ನ ಸಹೋದರ ರಾಂಪಾಲ್ ಮಾನಸಿಕ ಅಸ್ವಸ್ಥ. ಅವರನ್ನು ಕೈಲಾಶ್ ಎಂಬುವರು ದೆಹಲಿಗೆ ಕರೆದೊಯ್ದರು. ಸಹೋದರ ಮನೆಗೆ ಹಿಂತಿರುಗಲಿಲ್ಲ. ಕೈಲಾಶ್ ಅವರನ್ನು ಕೇಳಿದಾಗ ಅವರು ಸರಿಯಾಗಿ ಉತ್ತರ ನೀಡಲಿಲ್ಲ.

ಕೈಲಾಶ್ ಅವರು ನಮ್ಮ ಹಳ್ಳಿಯಿಂದ ದೆಹಲಿಗೆ ಅನೇಕ ಜನರನ್ನು ಕರೆದೊಯ್ದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ” ಎಂದು ಹೇಳಿದ್ದಾರೆ. ಇದರ ನಂತರ, ಕೈಲಾಶ್ ಅವರನ್ನು ಕಳ್ಳಸಾಗಣೆ ಮತ್ತು ಮತಾಂತರ ನಿಷೇಧ ಕಾಯ್ದೆಯಡಿ ಬಂಧಿಸಲಾಯಿತು.

ಕೈಲಾಶ್ ಜಾಮೀನು ಕೋರಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಕೈಲಾಶ್ ಅವರ ಜಾಮೀನು ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿದರು. ರಾಜ್ಯದ ಪರ ವಾದ ಮಂಡಿಸಿದ ವಕೀಲರು, ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವ ಅನೇಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ. ಇದಕ್ಕಾಗಿ ಕೈಲಾಶ್ ಹಣ ಪಡೆಯುತ್ತಿದ್ದಾರೆ ಎಂದರು.

ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರು, “ಸಂವಿಧಾನದ 25ನೇ ವಿಧಿಯು ತನ್ನ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಒದಗಿಸುತ್ತದೆ. ಆದರೆ, ಒಂದು ಧಾರ್ಮಿಕ ನಂಬಿಕೆಯಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗುವ ಹಕ್ಕನ್ನು ನೀಡಿಲ್ಲ. ‘ಪ್ರೊಪಗೇಶನ್ ‘ (Propagation) ಎಂಬ ಪದಕ್ಕೆ ಪ್ರೋತ್ಸಾಹಿಸಬಹುದು ಎಂದು ಅರ್ಥ ಹೇಳಬಹುದು.

ಆದರೆ ನೀವು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳಬಹುದು ಎಂದು ಅರ್ಥವಲ್ಲ. ರಾಂಪಾಲ್ ಮನೆಗೆ ಹಿಂತಿರುಗಲಿಲ್ಲ. ಹಲವರನ್ನು ಮತಾಂತರಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದನ್ನು ಮುಂದುವರೆಸಿದರೆ ದೇಶದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ. ಮತಾಂತರಕ್ಕೆ ಕಾರಣವಾಗುವ ಧಾರ್ಮಿಕ ಸಭೆಗಳನ್ನು ಕೂಡಲೇ ನಿಲ್ಲಿಸಬೇಕು. ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ದೇಶ

ಇಂದೋರ್: ಮಧ್ಯಪ್ರದೇಶದಲ್ಲಿ 14 ಮಹಿಳೆಯರು ಸೇರಿದಂತೆ 30 ಜನರು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಕಾನೂನುಬದ್ಧವಾಗಿ ಮತಾಂತರಗೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಅಧಿಕಾರದಲ್ಲಿದೆ.

ಇಲ್ಲಿ ‘ಸಜಾ ಸಂಸ್ಕೃತಿ ಮಂಚ್’ (Sajha Sanskriti Manch)ಎಂಬ ಹಿಂದೂ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ವತಿಯಿಂದ ನಿನ್ನೆ ಅಲ್ಲಿನ ವಿನಾಯಕ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಿತು. ಇದರಲ್ಲಿ 14 ಮುಸ್ಲಿಂ ಮಹಿಳೆಯರು ಸೇರಿದಂತೆ 30 ಜನರು ವೇದ ಮಂತ್ರಗಳನ್ನು ಪಠಿಸುವ ಮೂಲಕ ಕಾನೂನುಬದ್ಧವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಘಟನೆಯ ಅಧ್ಯಕ್ಷ ಸ್ಯಾಮ್ ಪಾವ್ರಿ (Sam Pawri), “ಮಧ್ಯಪ್ರದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021ರ ಪ್ರಕಾರ, 30 ಮುಸ್ಲಿಮರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರೆಲ್ಲರೂ, ಜಿಲ್ಲಾಡಳಿತಕ್ಕೆ ಔಪಚಾರಿಕವಾಗಿ ಇದಕ್ಕಾದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಲೀ, ಬಲವಂತದ ಮತಾಂತರವಾಗಲೀ ನಡೆದಿಲ್ಲ” ಎಂದು ಹೇಳಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧದ ಪ್ರಕರಣದಲ್ಲಿ ಕೇಂದ್ರ ಸರ್ಕಾರಿ ವಕೀಲರ ಮೇಲೆ ಗಂಭೀರವಾದ ಪ್ರಶ್ನೆಗಳನ್ನು ಮಾಡಿದ ತಮಿಳುನಾಡು ಸರ್ಕಾರಿ ಹಿರಿಯ ವಕೀಲ ವಿಲ್ಸನ್.

‘ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣವು ರಾಜಕೀಯ ಪ್ರೇರಿತವಾದದ್ದು’ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದೆ.

ಬಿಜೆಪಿ ವಕೀಲ ಅಶ್ವಿನಿ ಉಪಾಧ್ಯಾಯ ಅವರು ದೇಶಾದ್ಯಂತ ಬಲವಂತದ ಮತಾಂತರದ ವಿರುದ್ಧ ಬಲವಾದ ಕಾನೂನು ಜಾರಿಗೆ ಒತ್ತಾಯಿಸಿ ಸಲ್ಲಿಸಿದ ಅರ್ಜಿಯು ನೆನ್ನೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಡಿ.ರವಿಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.

ಆಗ ತಮಿಳುನಾಡು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ವಿಲ್ಸನ್ ಮತ್ತು ವಕೀಲ ಕುಮನನ್ ತಮ್ಮ ವಾದವನ್ನು ಮಂಡಿಸಿದರು.

‘ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ದೇಶದ್ರೋಹದ ಆರೋಪಕ್ಕೆ ಸಂಬಂಧಿಸಿದಂತೆ ಈ ವಿಷಯವನ್ನು ಸಂಪರ್ಕಿಸುತ್ತಿದ್ದಾರೆ ಮತ್ತು ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ಬಿಜೆಪಿಯ ಹಿರಿಯ ವಕ್ತಾರರಾಗಿರುವುದರಿಂದ ಈ ಪ್ರಕರಣವು ರಾಜಕೀಯ ಪ್ರೇರಿತವಾದದ್ದು’ ಎಂದು ವಾದವನ್ನು ಮುಂದಿಟ್ಟರು.

‘ಈ ಪ್ರಕರಣದ ಮನವಿಯ ಸಾರದಲ್ಲಿ, ಅಶ್ವಿನಿ ಉಪಾಧ್ಯಾಯ ಹೆಚ್ಚಾಗಿ ತಮಿಳುನಾಡಿನತ್ತ ಗಮನಸೆಳೆದಿದ್ದಾರೆ ಆದ್ದರಿಂದ ನಮ್ಮ ವಾದಗಳನ್ನು ಆಲಿಸದೆಯೇ ನ್ಯಾಯಾಲಯವು ಈ ಪ್ರಕರಣವನ್ನು ಹೇಗೆ ಮುಂದುವರಿಸಾಲು ಸಾಧ್ಯ? ಎಂಬ ಪ್ರಶ್ನೆಯನ್ನೂ ಪೀಠದ ಮುಂದಿಟ್ಟರು. 

ನ್ಯಾಯಮೂರ್ತಿ ಎಂ.ಆರ್.ಶಾ ಮಧ್ಯಪ್ರವೇಶಿಸಿ, ‘ಈ ಪ್ರಕರಣದಲ್ಲಿ ರಾಜಕೀಯವನ್ನು ತರಬಾರದು ಮತ್ತು ಅರ್ಜಿದಾರರು ರಾಜಕೀಯ ಪಕ್ಷಕ್ಕೆ ಸೇರಿದವರಾಗಿರುವುದರಿಂದ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ವಕೀಲ ವಿಲ್ಸನ್, ‘ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ಸಂಪೂರ್ಣ ರಾಜಕೀಯ ಉದ್ದೇಶದಿಂದ ಈ ಪ್ರಕರಣವನ್ನು ಮುಂದುವರಿಸಿದ್ದಾರೆ. ಆದ್ದರಿಂದಲೇ ತಮಿಳುನಾಡು ಸರಕಾರ ಈ ವಿಷಯವನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತಿದೆ’ ಎಂದರು.

‘ತಮಿಳುನಾಡಿನಲ್ಲಿ 2002ರಲ್ಲಿ ಧಾರ್ಮಿಕ ಮತಾಂತರ ತಡೆಗೆ ಕಾನೂನನ್ನು ತಂದರೂ 2006ರಲ್ಲಿ ರಾಜ್ಯ ವಿಧಾನಸಭೆ ಅದನ್ನು ರದ್ದುಗೊಳಿಸಿತ್ತು’ ಎಂದು ವಾದವನ್ನು ಮುಂದುವರಿಸಿದರು.

‘ಈ ವಿಚಾರದಲ್ಲಿ ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ತಮಿಳುನಾಡು ಕುರಿತು ಹೇಳಿದ್ದೆಲ್ಲವೂ ಹಸಿ ಸುಳ್ಳು. ಕಡ್ಡಾಯ ಧಾರ್ಮಿಕ ಮತಾಂತರದ ಬಗ್ಗೆ ನಿರ್ಧರಿಸಲು ರಾಜ್ಯ ಶಾಸಕಾಂಗಕ್ಕೆ ಸಂಪೂರ್ಣ ಅಧಿಕಾರವಿದೆ. ಕಾನೂನು ರೂಪಿಸಲು ರಾಜ್ಯ ಶಾಸಕಾಂಗಕ್ಕೆ ಸುಪ್ರೀಂ ಕೋರ್ಟ್ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ರಾಜ್ಯದ ಹಕ್ಕನ್ನು ಪುನರುಚ್ಚರಿಸಿದರು.

ಮುಂದುವರಿದು ಮಾತನಾಡಿದ ವಿಲ್ಸನ್, ‘ತಮಿಳುನಾಡಿಗೆ ಯಾವ ಯಾವ ಕಾನೂನುಗಳು ಸೂಕ್ತ ಎಂಬುದು ಸರಕಾರಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಜನರ ಅಗತ್ಯತೆಗಳು ಶಾಸಕಾಂಗದಲ್ಲಿ ತಿಳಿದುಕೊಂಡು ಪ್ರತಿಫಲಿಸುತ್ತದೆ. ಮತ್ತು ಇಂತಹ ಚಟುವಟಿಕೆಗಳ ಮೂಲಕ ರಾಜ್ಯದ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಮನಗಾಣಬೇಕು’ ಎಂದು ಅವರು ಒತ್ತಿ ಹೇಳಿದರು.

ನಂತರ ನ್ಯಾಯಾಧೀಶರು, ‘ಈ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ಅಭಿಪ್ರಾಯ ಮತ್ತು ನಿಲುವು ಏನು?’ ಎಂದು ತಮಿಳುನಾಡು ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ವಿಲ್ಸನ್ ಅವರನ್ನು ಪ್ರಶ್ನಿಸಿದರು.

ಅದಕ್ಕೆ ತಮಿಳುನಾಡು ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಹಿರಿಯ ವಕೀಲ ವಿಲ್ಸನ್, ‘ಈ ವಿಚಾರದಲ್ಲಿ ಜನರಿಗೆ ಏನು ಬೇಕು ಎಂಬುದನ್ನು ಜನರೇ ತೀರ್ಮಾನಿಸಲಿ ಎಂಬುದೇ ನಮ್ಮ ನಿಲುವು’ ಎಂದರು. ಈ ಪ್ರಕರಣದಲ್ಲಿ ನ್ಯಾಯಾಲಯವು ತಮ್ಮ ಅಭಿಪ್ರಾಯವನ್ನು ಕೇಳ ಬೇಕು ಎಂದೂ ಅವರು ಒತ್ತಿ ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು, ‘ಈ ವಿಷಯವು ತುಂಬಾ ಗಂಭೀರವಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದ ಅಡ್ವೊಕೇಟ್ ಜನರಲ್ ಅವರ ಮಾರ್ಗದರ್ಶನವೂ ಬೇಕು’ ಎಂದು ತಿಳಿಸಿದರು.

ಆ ಸಮಯದಲ್ಲಿ ಕೇಂದ್ರ ಸರ್ಕಾರದ ಮುಖ್ಯ ವಕೀಲ ವೆಂಕಟರಮಣಿ ಅವರು ಸದರಿ ಪ್ರಕರಣಕ್ಕೆ ಹಾಜರಾಗಿ ಸಹಾಯ ಮಾಡಬೇಕೆಂದು ನ್ಯಾಯಮೂರ್ತಿಗಳು ಕೇಳಿಕೊಂಡರು.

ಈ ಸಂದರ್ಭದಲ್ಲಿ ಹಿರಿಯ ವಕೀಲ ವಿಲ್ಸನ್ ಮಾತನಾಡಿ, ‘ಪ್ರಕರಣದ ಶೀರ್ಷಿಕೆಯನ್ನು ಬದಲಾಯಿಸಬೇಕು’ ಎಂಬ ಯೋಚನೆಯನ್ನು ನ್ಯಾಯ ಪೀಠದ ಮುಂದಿಟ್ಟರು. 

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧದ ಪ್ರಕರಣದಿಂದ ‘ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ’ ಎಂಬುದಾಗಿ ಪ್ರಕರಣದ ಶೀರ್ಷಿಕೆಯನ್ನು ಬದಲಾಯಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.

ಮುಂದುವರಿದ ನ್ಯಾಯಮೂರ್ತಿಗಳು, ‘ಒಬ್ಬರು ತಾನು ಯಾವ ಧರ್ಮವನ್ನು ಅನುಸರಿಸಬೇಕೆಂಬುದು ಅವರವರ ಮೂಲಭೂತ ಹಕ್ಕು. ಅದೇ ಸಂದರ್ಭದಲ್ಲಿ ಬಲವಂತದಿಂದ ಒಬ್ಬರನ್ನು ಮತಾಂತರ ಗೊಳಿಸುವುದು ಬೇರೆಯದಾಗಿದೆ. ಹೀಗಿರುವಾಗ ಒಬ್ಬರನ್ನು ಬಲವಂತವಾಗಿ ಮತಾಂತರಗೊಳಿಸುತ್ತಿದ್ದಾರೆ ಎಂದರೆ ಏನು ಮಾಡಬಹುದು? ಹೀಗಾಗದಂತೆ ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು?’ ಎಂದು ನ್ಯಾಯಮೂರ್ತಿಗಳು ಕೇಂದ್ರ ಸರಕಾರದ ಮುಖ್ಯ ವಕೀಲರನ್ನು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಅಭಿಯೋಜಕರು, ಪ್ರಕರಣದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಂತರ ಪ್ರತಿಕ್ರಿಯೆ ನೀಡುವುದಾಗಿ ಕೋರ್ಟಿಗೆ ತಿಳಿಸಿದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಲಾಯಿತು.