ಪರಿಶಿಷ್ಟ ಜಾತಿ ಸಮುದಾಯದಲ್ಲಿ ಪ್ರಭಾವಿ ನಾಯಕರುಗಳನ್ನು ಹುಟ್ಟುಹಾಕಲು ಆರ್‌ಎಸ್‌ಎಸ್ ಚಿಂತನೆ! » Dynamic Leader
October 21, 2024
ರಾಜಕೀಯ

ಪರಿಶಿಷ್ಟ ಜಾತಿ ಸಮುದಾಯದಲ್ಲಿ ಪ್ರಭಾವಿ ನಾಯಕರುಗಳನ್ನು ಹುಟ್ಟುಹಾಕಲು ಆರ್‌ಎಸ್‌ಎಸ್ ಚಿಂತನೆ!

ಡಿ.ಸಿ.ಪ್ರಕಾಶ್ ಸಂಪಾದಕರು

ಪರಿಶಿಷ್ಟ ಜಾತಿ ಸಮುದಾಯದ ಬೆಂಬಲವಿಲ್ಲದಿದ್ದರೆ ಸತತ ಚುನಾವಣೆ ಗೆಲ್ಲುವುದು ಕಷ್ಟ ಎಂದು, ಆರ್‌ಎಸ್‌ಎಸ್-ಬಿಜೆಪಿಗೆ ಈಗ ಮನವರಿಕೆಯಾಗಿದೆ ಎಂದು ತಿಳಿದು ಬಂದಿದೆ.

ಸಂಘ ಪರಿವಾರ ಸಂಘಟನೆಗಳಿಗೆ ಮಾರ್ಗದರ್ಶನ ನೀಡಲು, ಪ್ರತಿ ಸಂಘಟನೆಗೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಪದಾಧಿಕಾರಿಗಳನ್ನು ಆರ್‌ಎಸ್‌ಎಸ್ ನೇಮಕ ಮಾಡಿರುತ್ತದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯವರೊಂದಿಗೆ ಮಾಸಿಕ ಸಮಾಲೋಚನೆ ನಡೆಸುವುದು ವಾಡಿಕೆ. ಅದರಂತೆ ಕೆಲ ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜೊತೆಯಲ್ಲಿ ಆರ್‌ಎಸ್‌ಎಸ್ ಪದಾಧಿಕಾರಿಗಳು ಸಭೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಆಗ ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸೋಲಿಗೆ ಹಲವು ಕಾರಣಗಳಿದ್ದರೂ ಪರಿಶಿಷ್ಟ ಜಾತಿಯ ಮತಗಳು ಸಿಗದಿರುವುದು ಪ್ರಮುಖ ಕಾರಣವಾಗಿದೆ ಎಂದು ಪದಾಧಿಕಾರಿಗಳು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಿಜೆಪಿಯ ಹಿರಿಯ ಮುಖಂಡರೊಬ್ಬರು ನಮ್ಮಲ್ಲಿ ಮಾತನಾಡುತ್ತಾ,

‘ರಾಜ್ಯಗಳಲ್ಲಿ ಹಿಂದುಳಿದ ಸಮಾಜದ ನಾಯಕರುಗಳನ್ನು ಸೃಷ್ಟಿಸಿದ ನಂತರವೇ, ಬಿಜೆಪಿ ಚುನಾವಣೆ ಗೆಲ್ಲಲು ಆರಂಭಿಸಿತು. ಕಳೆದ 10 ವರ್ಷಗಳಲ್ಲಿ ಹೆಚ್ಚಿನ ರಾಜ್ಯಗಳಲ್ಲಿ, ಪರಿಶಿಷ್ಟರ ಜನಸಂಖ್ಯೆ ಎರಡರಿಂದ ಐದು ಪರ್ಸೆಂಟ್ ಹೆಚ್ಚಳವಾಗಿದೆ. ಇದನ್ನು ಬಿಜೆಪಿ ನಾಯಕರಿಗೆ ಸೂಚಿಸಿ ಪರಿಶಿಷ್ಟ ಜಾತಿಯ ಬೆಂಬಲವಿದ್ದರೆ ಮಾತ್ರ, ಸತತ ಗೆಲುವು ಸಾಧಿಸಬಹುದು ಎಂದು ಆರ್‌ಎಸ್‌ಎಸ್ ಮನವರಿಕೆ ಮಾಡಿ ಕೊಟ್ಟಿದೆ.

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಮತಗಳು ಸಿಗದೇ ಇರಲು, ಬಿಜೆಪಿಗೆ ಪರಿಶಿಷ್ಟ ಜಾತಿಯ ಪ್ರಭಾವಿ ನಾಯಕರ ಕೊರೆತೆಯೇ ಕಾರಣ. ಇದನ್ನು ಗಮನದಲ್ಲಿಟ್ಟು ಮುಂದಿನ ದಿನಗಳಲ್ಲಿ ದೇಶಾದ್ಯಂತ ಪರಿಶಿಷ್ಟ ಜಾತಿಯ ಬೆಂಬಲವನ್ನು ಪಡೆಯಬೇಕಾಗಿದೆ. ಅದಕ್ಕಾಗಿ ಪ್ರತಿ ರಾಜ್ಯದಲ್ಲಿ, ಪರಿಶಿಷ್ಟ ಜಾತಿಯ ಪ್ರಭಾವಿ ನಾಯಕರುಗಳನ್ನು ಕಟ್ಟಿ ಬೆಳಸಬೇಕಾಗಿದೆ. ಪ್ರಧಾನಿ ಮೋದಿಯ ನಂತರ ಪ್ರಧಾನಿ ಅಭ್ಯರ್ಥಿಯಾಗುವ ಮಟ್ಟಕ್ಕೆ, ಪರಿಶಿಷ್ಟ ಜಾತಿ ನಾಯಕರುಗಳನ್ನು ಬೆಳೆಸುವುದು ಕಾಲದ ಅನಿವಾರ್ಯತೆ ಎಂದು ಆರ್‌ಎಸ್‌ಎಸ್ ಹೇಳಿದೆ’ ಎಂದು ಹೇಳಿದರು.

ಭವಿಷ್ಯದ ರಾಜಕೀಯ ಪರಿಸ್ಥಿತಿಯನ್ನು ಅರಿತೇ ಕೇಂದ್ರ ಸಚಿವ ಸಂಪುಟದಲ್ಲಿ 12 ಜನ ಪರಿಶಿಷ್ಟರು, 8 ಜನ ಪರಿಶಿಷ್ಟ ಪಂಗಡದವರು, 27 ಜನ ಹಿಂದುಳಿದ ವರ್ಗದವರು ಮತ್ತು 11 ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅವಕಾಶವನ್ನು ನೀಡಿದ್ದಾರೆ. ಕೊನೆಯದಾಗಿ, ತಮಿಳುನಾಡಿನ ಪರಿಶಿಷ್ಟ ಜಾತಿಗೆ ಸೇರಿದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರನ್ನು ರಾಜ್ಯಸಭೆ ಸಂಸದರನ್ನಾಗಿ ನೇಮಕ ಮಾಡಿತು. ಐದು ಸ್ಥಳಗಳಲ್ಲಿ ಸ್ಮಾರಕಗಳ ನಿರ್ಮಾಣದಂತಹ ಕ್ರಮಗಳನ್ನೂ ಮೋದಿ ಕೈಗೊಂಡರು.

ಪರಿಶಿಷ್ಟ ಜಾತಿಯ ನಾಯಕರನ್ನು ಬೆಳೆಸಲು ಆರ್‌ಎಸ್‌ಎಸ್ ಸೂಚನೆ ನೀಡಿರುವುದರಿಂದ, ಬಿಜೆಪಿಯ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಆ ದಿಕ್ಕಿನಲ್ಲಿ ಸಾಗುತ್ತವೆ’ ಎಂದು ಪಕ್ಷದವರು ಹೇಳುತ್ತಿದ್ದಾರೆ.

Related Posts