ಜೀನ್-ಆಂಟೊಯಿನ್ ಡುಬೊಯಿಸ್ (Jean-Antoine Dubois) ಅವರು 1792 ಮತ್ತು 1823ರ ನಡುವೆ ಭಾರತದಲ್ಲಿ ಕೆಲಸ ಮಾಡಿದ ಫ್ರೆಂಚ್ ಮಿಷನರಿ. ಅವರು ಸಮುದಾಯದ ಹೆಸರನ್ನು ‘ಪರಿಯಾ’ ಎಂದು ನೋಂದಾಯಿಸಿದರು. ಹಿಂದೂ ಧರ್ಮದಿಂದ ಸೂಚಿಸಲ್ಪಟ್ಟ ನೈತಿಕ ವ್ಯವಸ್ಥೆಯ ಹೊರಗೆ ಬದುಕಿದವರು.. ಅವರು ಜಾತಿರಹಿತ ಸ್ಥಾನಮಾನವನ್ನು ಒಪ್ಪಿಕೊಂಡವರು ಮತ್ತು ಕುಡಿತ, ನಾಚಿಕೆಯಿಲ್ಲದಿರುವಿಕೆ, ಕ್ರೌರ್ಯ, ಅಪ್ರಾಮಾಣಿಕತೆ, ಅಶುಚಿತ್ವ, ಅಸಹ್ಯಕರ ಆಹಾರ ಪದ್ಧತಿ ಮತ್ತು ವೈಯಕ್ತಿಕ ಗೌರವದ ಕೊರತೆಯಿಂದ ನಿರೂಪಿಸಲ್ಪಟ್ಟವರು ಎಂದೂ ಬಣ್ಣಿಸಿದ್ದರು. ಸಾಮಾಜಿಕವಾಗಿ ಹೊರಗಿಡಲ್ಪಟ್ಟ ಮತ್ತು ನೈತಿಕವಾಗಿ ಭ್ರಷ್ಟಗೊಂಡ ಪದಗಳಿಗೆ ಸಮಾನಾರ್ಥಕವಾಗಿ ‘ಪರಿಯಾ’ ಎಂಬ ಪದವು ಇಂಗ್ಲಿಷ್ ಭಾಷೆಗೆ ಪ್ರವೇಶಿಸಲು ಕಾರಣವಾಯಿತು ಎಂದು ರಾಬರ್ಟ್ ಮೊಫಾಟ್ (Robert Moffat) ಅಭಿಪ್ರಾಯಪಟ್ಟಿದ್ದಾರೆ.

‘ಪರೈಯರ್’ ಎಂಬುದು ‘ ಅವಮಾನಕರ’ ಎಂದು ದಕ್ಷಿಣ ಭಾರತದ ಮೊದಲ ಜಾತಿ ವಿರೋಧಿ ಹೋರಾಟಗಾರ ಮತ್ತು ದ್ರಾವಿಡ ಚಳವಳಿಗೆ ನಾಂದಿ ಹಾಡಿದ ಪ್ರವರ್ತಕರಲ್ಲಿ ಒಬ್ಬರಾಗಿದ್ದ ಅಯೋತಿದಾಸ್ (Iyothee Thass) ಭಾವಿಸಿದರು. ಮತ್ತು ಅದರ ಬಳಕೆಯ ವಿರುದ್ಧ ಎಲ್ಲೆಡೆ ಪ್ರಚಾರ ಮಾಡಿದರು. 1881ರ ಭಾರತದ ಜನಗಣತಿಯ ಸಮಯದಲ್ಲಿ, ಪರೈಯರ್ ಪದಕ್ಕೆ ಪರ್ಯಾಯ ಪದವಾಗಿ ‘ದ್ರಾವಿಡ’ ಪದವನ್ನು ಸೂಚಿಸಿ ನೋಂದಾಯಿಸುವಂತೆ ಸರ್ಕಾರವನ್ನು ವಿನಂತಿಸಿದರು.
ಪಂಡಿತ್ ಅಯೋತಿದಾಸ್ ಅವರು ‘ಪರೈಯರ್’ ಪದದ ವಿರುದ್ಧ ತಮ್ಮ ಅಭಿಯಾನವನ್ನು ಮುಂದುವರೆಸಿ, ಈ ಪದವನ್ನು ಬಳಸುವವರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ, ಅದರ ಬಳಕೆಯನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ನಂತರ ಅಯೋತಿದಾಸ್ ಸಮುದಾಯವನ್ನು ವಿವರಿಸಲು ‘ಆದಿ ದ್ರಾವಿಡ’ ಎಂಬ ಪದವನ್ನು ಪ್ರತಿಪಾದಿಸಿದರು. ಇದಕ್ಕಾಗಿ 1891ರಲ್ಲಿ ದ್ರಾವಿಡರ ಮಹಾಜನ ಸಭೆಯನ್ನು ಸ್ಥಾಪಿಸಿದರು.

ಅಂದಿನ ಮದ್ರಾಸ್ ಕೌನ್ಸಿಲರ್ ಆಗಿದ್ದ ಮತ್ತೊಬ್ಬ ಪರೈಯರ್ ಸಮುದಾಯದ ನಾಯಕ ಎಂ.ಸಿ.ರಾಜಾ ಅವರು, ಸರ್ಕಾರಿ ದಾಖಲೆಗಳಲ್ಲಿ ‘ಆದಿ ದ್ರಾವಿಡ’ ಪದವನ್ನು ಅಂಗೀಕರಿಸಲು ಯಶಸ್ವಿ ಪ್ರಯತ್ನಗಳನ್ನು ಮಾಡಿದರು. 1914ರಲ್ಲಿ ಮದ್ರಾಸ್ ವಿಧಾನಸಭೆಯು ಒಂದು ನಿರ್ದಿಷ್ಟ ಸಮುದಾಯವನ್ನು ಉಲ್ಲೇಖಿಸಲು ‘ಪರೈಯರ್’ ಪದವನ್ನು ಬಳಸುವುದನ್ನು ಅಧಿಕೃತವಾಗಿ ಖಂಡಿಸುವ ನಿರ್ಣಯವನ್ನು ಅಂಗೀಕರಿಸಿತು. ಅಲ್ಲದೆ, ಪರ್ಯಾಯವಾಗಿ ‘ಆದಿ ದ್ರಾವಿಡ’ ಪದವನ್ನು ಸಹ ಶಿಫಾರಸು ಮಾಡಿತು. 1920 ಮತ್ತು 1930ರ ದಶಕಗಳಲ್ಲಿ, ಪೆರಿಯಾರ್ ಇ.ವಿ.ರಾಮಸಾಮಿ ಅವರು “ಆದಿ ದ್ರಾವಿಡ” ಎಂಬ ಪದದ ವ್ಯಾಪಕ ಪ್ರಸರಣವನ್ನು ಖಚಿತಪಡಿಸಿಕೊಂಡರು.
ಪರೈಯರ್ ಉಪ ಜಾತಿಗಳು:
1881ರಲ್ಲಿ ಪ್ರಕಟವಾದ “CENSUS OF BRITISH INDIA” ಎಂಬ ಪುಸ್ತಕವು ತಮಿಳು, ತೆಲುಗು ಮತ್ತು ಮಲಯಾಳಂ ಮಾತನಾಡುವ 84 ಪರೈಯರ್ ಉಪ ವಿಭಾಗಗಳನ್ನು ಉಲ್ಲೇಖಿಸುತ್ತದೆ. ಇದರಲ್ಲಿ ವೆಟ್ಟುವ ಪರೈಯರ್, ತಿಗಳ ಪರೈಯರ್, ಮೋಗಸ ಪರೈಯರ್, ಕುಡಿಮಿ ಪರೈಯರ್ ಮತ್ತು ಅದ್ವೈತ ಪರೈಯರ್ ಸೇರಿವೆ.
1.ಅಚ್ಚಕ್ಕಾಸಿನಿಯೂರ್ ಪರೈಯನ್, 2.ಅದ್ವೈತ ಪರೈಯನ್, 3.ಅಯ್ಯಾ ಪರೈಯನ್, 4.ಅಳ್ಹಗ ಕಾಟ್ಟು ಪರೈಯನ್, 5.ಅಮ್ಮಕ್ಕಾರ ಪರೈಯನ್, 6.ಅಂಗಲ ಪರೈಯನ್, 7.ಅಂಗೈಯನ್ ಪರೈಯನ್, 8.ಪೂಪು ಪರೈಯನ್, 9.ಸುನ್ನಾಂಬು ಪರೈಯನ್, 10.ದೇಸಾದಿ ಪರೈಯನ್, 11.ಇಸೈ ಪರೈಯನ್, 12.ಕಗಿಮಲ ಪರೈಯನ್, 13.ಕಳತ್ತು ಪರೈಯನ್, 14.ಕಿಳಕತ್ತು ಪರೈಯನ್, 15.ಕಿಳಕತ್ತಿ ಪರೈಯನ್, 16.ಸೋಳಿಯ ಪರೈಯನ್, 17.ಕೀರ್ತಿರ ಪರೈಯನ್, 18.ಕೊಡಗ ಪರೈಯನ್, 19.ಕೊಂಗು ಪರೈಯನ್, 20.ಕೊಡಿಕ್ಕಾರ ಪರೈಯನ್, 21.ಕೊರಸ ಪರೈಯನ್, 22.ಕುಡಿಕಟ್ಟು ಪರೈಯನ್, 23.ಕುಡಿಮಿ ಪರೈಯನ್, 24.ಕುಳತ್ತೂರ್ ಪರೈಯನ್, 25.ಮಗು ಮಡಿ ಪರೈಯನ್, 26.ಮಾ ಪರೈಯನ್, 27.ಮರವೇದಿ ಪರೈಯನ್, 28.ಮಿಂಗ ಪರೈಯನ್, 29.ಮೊಗಸ ಪರೈಯನ್, 30.ಮುಂಗನಾಟ್ಟು ಪರೈಯನ್, 31.ನರ್ಮಯಕ್ಕ ಪರೈಯನ್, 32.ನೆಸವುಕ್ಕಾರ ಪರೈಯನ್, 33.ಪಚ್ಚವನ್ ಪರೈಯನ್, 34.ಪಂಜಿ ಪರೈಯನ್, 35.ಪರಮಲೈ ಪರೈಯನ್, 36.ಪರೈಯನ್, 37.ಪರೈಯಕ್ಕಾರನ್, 38.ಪರೈಯಾಂಡಿ, 39.ಪಸತವೈ ಪರೈಯನ್, 40.ಪೆರುಸಿಗ ಪರೈಯನ್, 41.ಪೊಯ್ಕಾರ ಪರೈಯನ್, 42.ಪೊರಗ ಪರೈಯನ್, 43.ಪೊಕ್ಕಿ ಪರೈಯನ್ ಕೂಲಾರ್, 44.ಪಿರಟ್ಟುಕ್ಕಾರ ಪರೈಯನ್, 45.ರೆಗು ಪರೈಯನ್, 46.ಸಮ್ಮಲ ಪರೈಯನ್, 47.ಸರ್ಕಾರ್ ಪರೈಯನ್, 48.ಸೆಮ್ಮಣ್ ಪರೈಯನ್, 49.ಸಂಗೂದಿ ಪರೈಯನ್, 50.ಸೇರಿ ಪರೈಯನ್, 51.ಸಿದಿಕರಿ ಪರೈಯನ್, 52.ಸುಡು ಪರೈಯನ್, 53.ತಂಗಮನ್ ಕೋಲ ಪರೈಯನ್, 54.ತಂಗಂ ಪರೈಯನ್, 55.ತಂಗಿನಿಪತ್ತ ಪರೈಯನ್, 56.ತಟ್ಟುಕಟ್ಟು ಪರೈಯನ್, 57.ತೆನ್ಕಲಾರ್ ಪರೈಯನ್, 58.ದೆವಸಿ ಪರೈಯನ್,59. ತಂಗಲಾಲ ಪರೈಯನ್, 60.ತರಮಾಗಿಪ್ ಪರೈಯನ್, 61.ತಾಯಂಪಟ್ಟು ಪರೈಯನ್, 62.ತೀಯನ್ ಪರೈಯನ್, 63.ತೋಪ್ಪರೈಯನ್, 64.ತೊಪ್ಪಕ್ಕುಳಂ ಪರೈಯನ್, 65.ತೊವಂದಿ ಪರೈಯನ್, 66.ತಿಗಿಳ ಪರೈಯನ್, 67.ಉಳು ಪರೈಯನ್, 68.ವೈಪ್ಪಿಲಿ ಪರೈಯನ್, 69.ವಲಕರದಿ ಪರೈಯನ್, 70.ಉರುಮಿಕ್ಕಾರ ಪರೈಯನ್, 71.ಉರುಯಾದಿತದಂ ಪರೈಯನ್, 72.ವಲಂಗನಾಟ್ಟು ಪರೈಯನ್, 73.ವಾನು ಪರೈಯನ್, 74.ವೇಟ್ಟುವ ಪರೈಯನ್, 75.ವಿಲಳ ಪರೈಯನ್, 76.ಉಡುಮ ಪರೈಯನ್.
ತೆಲುಗು ಮಾತನಾಡುವ ಪರೈಯರು:
1. ಮುಗದ ಪರೈಯನ್, 2. ಪುಳ್ಳಿ ಪರೈಯನ್, 3. ವಡುಗ ಪರೈಯನ್.
ಮಲಯಾಳಂ ಮಾತನಾಡುವ ಪರೈಯರು:
1. ಏಟ್ಟು ಪರೈಯನ್, 2. ಮದರಾಸಿ ಪರೈಯನ್, 3. ಮುರಂಕುತ್ತಿ ಪರೈಯನ್, 4. ಪರೈಯಾಂಡಿ ಪಂಡಾರಂ, 5. ವರ ಪರೈಯನ್.
ಶತಮಾನಗಳ ಹಿಂದೆ ‘ಪರೈಯನ್’ ಎಂಬ ಜಾತಿ ಪದವು ‘ಅವಮಾನಕರ’ ಎಂದು ತೈಜಿಸಿ, ‘ಆದಿ ದ್ರಾವಿಡ’ ಎಂದು ದಾಖಲೆಗಳಲ್ಲಿ ನಮೂದಿಸಲಾಯಿತು. ಈ ಹಿನ್ನೆಲೆಯಲ್ಲಿ, ನಾಲ್ಕು ತಲೆಮಾರುಗಳು ಕಳೆದ ಮೇಲೆ ಈಗ ಉಪ ಜಾತಿ ಯಾವುದೆಂದು ಕೇಳಿದರೆ ಯಾವ ಉಪಜಾತಿಯನ್ನು ನಮೂದಿಸುವುದು. ಇಂದಿನ ಆದಿ ದ್ರಾವಿಡರಿಗೆ ಮೇಲಿನ 84 ಉಪ ಜಾತಿಗಳಲ್ಲಿ ತಮ್ಮ ಜಾತಿ ಯಾವುದೆಂದು ಹೇಳಲು ಹೇಗೆ ಸಾಧ್ಯ? ಭಾಷಾವಾರು ರಾಜ್ಯಗಳು ರಚನೆಯಾಗಿ, ಕರ್ನಾಟಕ ಏಕೀಕರಣವಾದ ಮೇಲೆ ಚೆನ್ನೈ ಪ್ರಾಂತ್ಯದ ಪ್ರಭಾವದಿಂದ ಕರ್ನಾಟಕದಲ್ಲೂ ಅದೇ ಪದ್ದತಿಯನ್ನು ಮುಂದುವರಿಸಲಾಯಿತು. ಕರ್ನಾಟಕದಲ್ಲೂ ‘ಪರೈಯರ್’ ಸಮುದಾಯವನ್ನು ಆದಿ ದ್ರಾವಿಡ ಎಂದೇ ನಮೂದಿಸಲಾಯಿತು.

ಆದರೆ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸಂಘಟನೆಗಳು ಮತ್ತು ರಾಜಕೀಯ ನಾಯಕರುಗಳು, ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಆದಿ ಆಂಧ್ರಗಳನ್ನು ಜಾತಿಗಳೆಂದು ಉಲ್ಲೇಖಿಸದೆ, ಅದರ ಉಪಜಾತಿಗಳನ್ನು ಆಲಿಸಿ ಉಲ್ಲೇಖಿಸಬೇಕೆಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗವನ್ನು ಮತ್ತು ಕರ್ನಾಟಕ ಸರ್ಕಾರವನ್ನು ಪದೇ ಪದೇ ಒತ್ತಾಯ ಮಾಡಿ ಬರುತ್ತಿದ್ದಾರೆ. ಆಯೋಗ ಮತ್ತು ಸರ್ಕಾರದ ನಿಲುವು ಕೂಡ ಇದೇ ಆಗಿದ್ದು, ಇದು ಆದಿ ದ್ರಾವಿಡರ ಅಸ್ತಿತ್ವವನ್ನೇ ನಿರ್ಮೂಲನೆ ಮಾಡುವ ಬಹುದೊಡ್ದ ಹುನ್ನಾರವಾಗಿದೆ.
ನಿರ್ದಿಷ್ಟ ಜಾತಿಯ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಆದಿ ದ್ರಾವಿಡರ ಬುಡಕ್ಕೆ ಕೈ ಹಾಕಲಾಗಿದೆ. ಆದಿ ದ್ರಾವಿಡರು ಸಣ್ಣ ಪ್ರಮಾಣದ ರೈತರಾಗಿ, ಕೃಷಿ ಕೂಲಿ ಕಾರ್ಮಿಕರಾಗಿ, ನಗರ ಪ್ರದೇಶಗಳಲ್ಲಿ ಗೃಹ ನಿರ್ಮಾಣ ಕಾರ್ಮಿಕರಾಗಿ, ತಮಟೆ ವಾದಕರಾಗಿ, ಕಾರ್ಖಾನೆಗಳಲ್ಲಿ ಕಠಿಣ ಕೆಲಸಗಾರರಾಗಿ ಮತ್ತು ಬೀದಿ ವ್ಯಾಪಾರಿಗಳಾಗಿದ್ದಾರೆ. ಒಟ್ಟಾರೆಯಾಗಿ ಶ್ರಮಿಕ ವರ್ಗದವರಾಗಿದ್ದಾರೆ.

ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರು ಮತ್ತು ಕೆಜಿಎಫ್ ನಲ್ಲಿ ಆದಿ ದ್ರಾವಿಡರ ಸಂಖ್ಯೆ ಬಹಳ ದೊಡ್ದದಿದೆ. ಬೆಂಗಳೂರಿನ ಕೊಳಗೇರಿ ಪ್ರದೇಶದ ನಿವಾಸಿಗಳ ಪೈಕಿ ಸುಮಾರು ಶೇ.60ರಷ್ಟು ಜನ ಆದಿ ದ್ರಾವಿಡ ಜನಾಂಗಕ್ಕೆ ಸೇರಿದವರು. ಕಂಟೋನ್ಮಂಟ್ (ಸಿವಿಲ್ ಏರಿಯ) ಪ್ರದೇಶದಲ್ಲೂ ಶೇ.60ರಷ್ಟು ಆದಿ ದ್ರಾವಿಡರಿದ್ದಾರೆ. ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ಸುಮಾರು 30 ಲಕ್ಷದವರೆಗೆ ಆದಿ ದ್ರಾವಿಡರು ಇದ್ದಾರೆ. ಇಷ್ಟುದೊಡ್ಡ ಜನಸಂಖ್ಯೆಯನ್ನು ಹೊಂದಿರುವ ‘ಆದಿ ದ್ರಾವಿಡ’ ಸಮುದಾಯವನ್ನು ಉಪ ಜಾತಿಯ ಹೆಸರಿನಲ್ಲಿ ಒಡೆದು, ಕಡಿತಗೊಳಿಸಿ, ನಿರ್ದಿಷ್ಟ ಜಾತಿಯ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಎಂದಿಗೂ ಫಲಕೊಡುವುದಿಲ್ಲ.

ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳ ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ ನಡೆಸುತ್ತಿರುವ ಗಣತಿದಾರರು ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಈಗಾಗಲೇ ವರದಿಗಳಾಗುತ್ತಿವೆ. ಆದಿ ದ್ರಾವಿಡರು ಗಣತಿಯ ಸಂದರ್ಭದಲ್ಲಿ ತಮ್ಮ ಉಪ ಜಾತಿ ‘ಆದಿ ದ್ರಾವಿಡ’ ಎಂದೇ ನಮೂದಿಸುತ್ತಿದ್ದಾರೆ. ಕೆಲವರು ಒತ್ತಾಯದ ಮೇರೆಗೆ ‘ಪರೈಯನ್’ ಅಥವಾ ‘ಪರಯ’ ಎಂದು ನಮೂದಿಸುತ್ತಿದ್ದಾರೆ. ಆದರೆ, ಇವರ ಬಳಿ ‘ಪರೈಯನ್’ ಅಥವಾ ‘ಪರಯ’ ಎಂದು ತೋರಿಸಿಕೊಳ್ಳಲು ಯಾವುದೇ ದಾಖಲೆಗಳು ಇಲ್ಲ. ಉಪಜಾತಿಯ ಕಾಲಂನಲ್ಲಿ ‘ಪರೈಯನ್’ ಅಥವಾ ‘ಪರಯ’ ಎಂದು ನಮೂದಿಸಿ, ಭವಿಷದಲ್ಲಿ ದಾಖಲೆ ತೋರಿಸು ಎಂದರೆ, ಯಾವ ದಾಖಲೆ ತೋರಿಸುವುದು. ಇದಕ್ಕೆ ಸರ್ಕಾರ ಮತ್ತು ಆಯೋಗ ಸ್ಪಷ್ಟ ಉತ್ತರ ನೀಡಬೇಕು.

‘ಪರೈಯನ್’ ಎಂಬ ಜಾತಿ ಪದವು ‘ಅವಮಾನಕರ’ ಎಂದು ಅದನ್ನು ತೈಜಿಸಿ ಶತಮಾನಗಳು ಕಳೆದಿದೆ. ಈಗ ಮತ್ತೆ ಆದಿ ದ್ರಾವಿಡರನ್ನು ‘ಪರೈಯನ್’ ಅಥವಾ ‘ಪರಯ’ ಎಂದು ನಮೂದಿಸುವುದು ಸೂಕ್ತವಲ್ಲ. ಜಾತಿ ಗಣತಿಯಲ್ಲಿ ‘ಪರೈಯನ್’ ಅಥವಾ ‘ಪರಯ’ ಎಂದು ನಮೂದಿಸಿದ್ದರೂ ‘ಆದಿ ದ್ರಾವಿಡ’ ಎಂದೇ ಗುರುತಿಸಬೇಕೆಂದು ಆದಿ ದ್ರಾವಿಡ ಸಮುದಾಯದ ಒತ್ತಾಯವಾಗಿದೆ.