ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ರಾಹುಲ್ ಗಾಂಧಿ Archives » Dynamic Leader
October 19, 2024
Home Posts tagged ರಾಹುಲ್ ಗಾಂಧಿ
ದೇಶ

ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಅವರ ಜನ್ಮದಿನದ ಅಂಗವಾಗಿ ದೆಹಲಿಯ ರಾಜ್‌ಗಾಟ್‌ನಲ್ಲಿರುವ ಅವರ ಸ್ಮಾರಕದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಪುಷ್ಪ ನಮನ ಸಲ್ಲಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ದೇಶ ರಾಜಕೀಯ

ಮುಂಬೈ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಲ ದಿನಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ವಾಷಿಂಗ್ಟನ್ ಪ್ರಾಂತ್ಯದ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ವೇಳೆ, ನಿರೂಪಕರು ಭಾರತದಲ್ಲಿ ಮೀಸಲಾತಿ ಕುರಿತು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದರು. ಆ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, “ಭಾರತದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರೆತಾಗ ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತದೆ” ಎಂದು ಹೇಳಿದರು.

ಏತನ್ಮಧ್ಯೆ, ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಲು ರಾಹುಲ್ ಗಾಂಧಿ ಬಯಸುತ್ತಿದ್ದಾರೆ ಎಂಬ ತಪ್ಪು ಕಲ್ಪನೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಯಿತು.

ಈ ಹಿನ್ನೆಲೆಯಲ್ಲಿ, ಮೀಸಲಾತಿ ರದ್ದು ಮಾಡುವುದಾಗಿ ಹೇಳಿದ ರಾಹುಲ್ ಗಾಂಧಿಯ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಶಿವಸೇನೆ (ಏಕನಾಥ್ ಶಿಂಧೆ ಕಡೆಯವರು) ಶಾಸಕ ಸಂಜಯ್ ಗಾಯಕ್ವಾಡ್ (Sanjay Gaikwad) ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ, ಶಾಸಕ ಸಂಜಯ ಗಾಯಕ್ವಾಡ್ ಮಾತನಾಡಿ, “ರಾಹುಲ್ ಗಾಂಧಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆ ರದ್ದು ಮಾಡಬೇಕೆಂದು ವಿದೇಶದಲ್ಲಿ ಮಾತನಾಡಿದ್ದಾರೆ. ಇದು ಕಾಂಗ್ರೆಸ್‌ನ ನಿಜವಾದ ಮುಖವನ್ನು ತೋರಿಸುತ್ತದೆ. ಮೀಸಲಾತಿ ರದ್ದು ಮಾಡುತ್ತೇನೆ ಎಂದು ಹೇಳಿರುವ ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸುವವರಿಗೆ 11 ಲಕ್ಷ ರೂಪಾಯಿ ನೀಡುತ್ತೇನೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಜಕೀಯ ವಿದೇಶ

ಭಾರತ ಎಲ್ಲರಿಗೂ ಸೇರಿದ್ದು ಎಂಬುದು ಬಿಜೆಪಿಗೆ ಅರ್ಥವಾಗುತ್ತಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಹೇಳಿದ್ದಾರೆ.

ಅಮೆರಿಕದಲ್ಲಿ ನೆಲಸಿರುವ ಭಾರತೀಯ ಮೂಲದವರ ನಡುವೆ ಮಾತನಾಡಿದ ರಾಹುಲ್ ಗಾಂಧಿ, “ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ಬಿಜೆಪಿ ಮತ್ತು ಭಾರತದ ಪ್ರಧಾನಿ ಮೋದಿ ಬಗ್ಗೆ ಜನರಲ್ಲಿ ಇದ್ದ ಭಯ ಮಾಯವಾಗಿದೆ. ಈ ಭಯದ ವಾತಾವರಣವನ್ನು ಹುಟ್ಟುಹಾಕಲು ಅವರಿಗೆ ವರ್ಷಗಳೇ ಬೇಕಾಯಿತು. ಆದರೆ ಇದು ಕೆಲವೇ ಸೆಕೆಂಡುಗಳಲ್ಲಿ ಕಣ್ಮರೆಯಾಯಿತು.

ಕೆಲವು ರಾಜ್ಯಗಳು ಇತರ ರಾಜ್ಯಗಳಿಗಿಂತ ಕೀಳು ಎಂದು ಆರ್‌ಎಸ್‌ಎಸ್ ಹೇಳುತ್ತಿದೆ. ಕೆಲವು ಭಾಷೆಗಳು ಇತರ ಭಾಷೆಗಳಿಗಿಂತ ಕೀಳು.. ಕೆಲವು ಧರ್ಮಗಳು ಇತರ ಧರ್ಮಗಳಿಗಿಂತ ಕೀಳು.. ಕೆಲವು ಸಮುದಾಯಗಳು ಇತರ ಸಮುದಾಯಗಳಿಗಿಂತ ಕೀಳು.. ಪ್ರತಿಯೊಂದು ರಾಜ್ಯವು ತನ್ನದೇ ಆದ ಇತಿಹಾಸ ಮತ್ತು ಸಂಪ್ರದಾಯವನ್ನು ಹೊಂದಿದೆ. ಮರಾಠಿ, ತಮಿಳು, ಬಂಗಾಳಿ ಮತ್ತು ಮಣಿಪುರಿ ಇವೆಲ್ಲವೂ ಕೀಳು ಭಾಷೆಗಳು ಎಂಬುದು ಆರ್‌ಎಸ್‌ಎಸ್ ಸಿದ್ಧಾಂತ.

ಭಾರತ ಎಲ್ಲರಿಗೂ ಸೇರಿದ್ದು ಎಂಬುದು ಬಿಜೆಪಿಗೆ ಅರ್ಥವಾಗುತ್ತಿಲ್ಲ. ನಮ್ಮ ಸಂವಿಧಾನವು ಭಾರತವನ್ನು ಒಕ್ಕೂಟ ಎಂದು ಒತ್ತಿಹೇಳುತ್ತದೆ. ಲೋಕಸಭೆ ಚುನಾವಣೆಗೆ 3 ತಿಂಗಳ ಮೊದಲು ನಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತ ಗೊಳಿಸಲಾಯಿತು. ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು. ಆದರೆ ನಾವು ಧೈರ್ಯದಿಂದ ಚುನಾವಣೆ ಎದುರಿಸಿದ್ದೇವೆ. ಎಂದು ಹೇಳಿದ್ದಾರೆ.

ರಾಜಕೀಯ

ನವದೆಹಲಿ: ‘ರಾಹುಲ್ ಹೆಡ್‌ಲೈನ್ಸ್‌ (Headlines)ನಲ್ಲಿ ಸ್ಥಾನ ಪಡೆಯಲು ರಣತಂತ್ರ ರೂಪಿಸಿ ಮಾತನಾಡುತ್ತಿದ್ದಾರೆ’ ಎಂದು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.

ಇಂಗ್ಲಿಷ್ ಸುದ್ದಿ ವಾಹಿನಿಯೊಂದಕ್ಕೆ ಸ್ಮೃತಿ ಇರಾನಿ ನೀಡಿದ ಸಂದರ್ಶನ: ಚುನಾವಣೆ ಸಂದರ್ಭದಲ್ಲಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯಲು ರಾಹುಲ್ ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಅದೊಂದು ಪ್ರಹಸನವಾಯಿತು. ಆ ತಂತ್ರ ಫಲಿಸದ ಕಾರಣ ಈಗ ಜಾತಿ ಸಮಸ್ಯೆ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ರುಚಿ ಕಂಡಿದ್ದೇವೆ ಎಂದು ಭಾವಿಸಿರುವ ರಾಹುಲ್ ಈಗ ವಿಭಿನ್ನ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಮಿಸ್ ಇಂಡಿಯಾ:
ಅವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಾರೆ. ರಾಹುಲ್ ಅವರ ಜಾತಿ ರಾಜಕಾರಣ ಹೊಸ ತಂತ್ರ. ಮಿಸ್ ಇಂಡಿಯಾ ಸ್ಪರ್ಧೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರಿಗೆ ತಿಳಿದಿದೆ. ಆದರೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಮಾತುಗಳನ್ನು ಹೇಳುತ್ತಿದ್ದಾರೆ. ಏಕೆಂದರೆ ಇದು ಮುಖ್ಯಾಂಶಗಳನ್ನು (Headlines) ಪಡೆಯುತ್ತದೆ. ಇದೆಲ್ಲ ಗೊತ್ತಿದ್ದರೂ ಪ್ಲಾನ್ ಮಾಡಿ ಮಾಡುತ್ತಿದ್ದಾರೆ. ಈ ರೀತಿ ಸ್ಮೃತಿ ಇರಾನಿ ಹೇಳಿದ್ದಾರೆ.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ ಸ್ಮೃತಿ ಇರಾನಿ ಸೋತಿದ್ದರು. ಇದರಿಂದ ಮತ್ತೊಮ್ಮೆ ಸಚಿವೆಯಾಗುವ ಅವಕಾಶವನ್ನು ಕಳೆದುಕೊಂಡರು. 2019ರ ಚುನಾವಣೆಯಲ್ಲಿ ಸ್ಮೃತಿ ಇರಾನಿ ರಾಹುಲ್‌ ಗಾಂಧಿಯನ್ನು ಸೋಲಿಸಿ, ಜಯಗಳಿಸುವುದರ ಮೂಲಕ ಕೇಂದ್ರ ಸಚಿವೆಯಾದವರು ಎಂಬುದು ಗಮನಾರ್ಹ.

ಲೇಖನ

ಡಿ.ಸಿ.ಪ್ರಕಾಶ್

ಮತದಾರರು ಈ ಬಾರಿ ಸರ್ಕಾರ ರಚಿಸುವಷ್ಟು ಬಹುಮತವನ್ನು ಬಿಜೆಪಿಗೆ ನೀಡಲಿಲ್ಲ. ಕೆಲವು ಪಕ್ಷಗಳ ಬೆಂಬಲದೊಂದಿಗೆ ನರೇಂದ್ರ ಮೋದಿ ಅವರು ಪ್ರಧಾನಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಈ ಪಕ್ಷಗಳು ಮೋದಿ ಹೇಳಿದ್ದನೆಲ್ಲ ಹಾಗೆಯೇ ಒಪ್ಪಿಕೊಳ್ಳುವ ಪಕ್ಷಗಳಲ್ಲ. ಬದಲಾಗಿ, ಬಿಜೆಪಿಯ ವಿಚಾರಗಳಿಗೆ ವಿರುದ್ಧವಾಗಿರುವ ಮತ್ತು ಅದನ್ನು ವಿರೋಧಿಸುವ ಪಕ್ಷಗಳಾಗಿವೆ.

ಇಂತಹ ‘ನೀತಿ ವೈರಿ’ಗಳ ಕರುಣೆಯಿಂದಲೇ ನರೇಂದ್ರ ಮೋದಿಯವರು ಪ್ರಧಾನಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಜಾತಿವಾರು ಜನಗಣತಿಯ ತತ್ವವು ಭಾರತದಾದ್ಯಂತ ಬೇಡಿಕೆಯಾಗಿ ಪ್ರತಿಧ್ವನಿಸುತ್ತಿದೆ. ಇದು ಕಾಂಗ್ರೆಸ್, ಡಿಎಂಕೆ ಸೇರಿದಂತೆ ‘ಇಂಡಿಯಾ’ ಮೈತ್ರಿ ಪಕ್ಷಗಳ ಬೇಡಿಕೆ ಮಾತ್ರವಲ್ಲ, ಬಹುಮತದ ಪಕ್ಷಗಳ ಬೇಡಿಕೆಯೂ ಆಗಿದೆ. “ಪ್ರಧಾನಿ ಮೋದಿಯವರು ಜಾತಿವಾರು ಜನಗಣತಿ ನಿಲ್ಲಿಸುವ ಕನಸು ಕಾಣುತ್ತಿದ್ದಾರೆ. ಆದರೆ ಜಾತಿವಾರು ಜನಗಣತಿಯನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ.

ಶೀಘ್ರದಲ್ಲೇ 90 ಪ್ರತಿಶತ ಭಾರತೀಯರು ಜಾತಿ ಆಧಾರಿತ ಜನಗಣತಿಯನ್ನು ಬೆಂಬಲಿಸಿ ಹೋರಾಡುತ್ತಾರೆ. ಪ್ರಸ್ತುತ ಕೇಂದ್ರ ಸರ್ಕಾರವು ಜಾತಿವಾರು ಜನಗಣತಿಗೆ ಆದೇಶಿಸದಿದ್ದರೆ, ನರೇಂದ್ರ ಮೋದಿಯವರು ಮುಂದಿನ ಪ್ರಧಾನಿ ಮಾಡುವುದನ್ನು ನೋಡುತ್ತಾರೆ” ಎಂದು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ. ಇದು ಬಿಜೆಪಿಯ ಮೈತಿ ಪಕ್ಷಗಳಿಗೂ ನಡುಕವನ್ನು ಹುಟ್ಟಿಸಿದೆ.

ಬಿಜೆಪಿಯ ಮಿತ್ರ ಪಕ್ಷ ಲೋಕ ಜನಶಕ್ತಿ ಪಕ್ಷ ಕೂಡ ಜಾತಿವಾರು ಜನಗಣತಿಗೆ ಬೆಂಬಲ ವ್ಯಕ್ತಪಡಿಸಿದೆ. “ದೇಶಾದ್ಯಂತ ಜಾತಿವಾರು ಜನಗಣತಿ ನಡೆಸುವುದು ಅಗತ್ಯವಾಗಿದೆ” ಎಂದು ಲೋಕ ಜನಶಕ್ತಿ ಪಕ್ಷದ ನಾಯಕ ಹಾಗೂ ಪ್ರಧಾನಿ ಮೋದಿ ಸಂಪುಟದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿರುವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ. “ಸರ್ಕಾರವು ಜಾರಿಗೊಳಿಸುವ ಯೋಜನೆಗಳು ವಿವಿಧ ವರ್ಗಗಳನ್ನು ಆಧರಿಸಿವೆ.

ಸರ್ಕಾರದ ಯೋಜನೆಗಳು ಸರಿಯಾದ ಜನರಿಗೆ ತಲುಪಲು ಜಾತಿವಾರು ಜನಗಣತಿಯ ಅಗತ್ಯವಿದೆ” ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ. “ಕೇಂದ್ರ ಸರ್ಕಾರವು ದೇಶಾದ್ಯಂತ ಜಾತಿವಾರು ಜನಗಣತಿ ನಡೆಸಬೇಕು” ಎಂದು ಲೋಕ ಜನಶಕ್ತಿ ಪಕ್ಷ ಸಂಕಲ್ಪ ಮಾಡಿದೆ. ಜನರನ್ನು ಸುಧಾರಿಸಲು ಸರ್ಕಾರಕ್ಕೆ ಜಾತಿ ಆಧಾರಿತ ಜನಸಂಖ್ಯೆಯ ಮಾಹಿತಿ ಅಗತ್ಯವಿದೆ” ಎಂಬುದನ್ನು ಚಿರಾಗ್ ಪಾಸ್ವಾನ್ ಒತ್ತಿ ಹೇಳುತ್ತಿದ್ದಾರೆ.

ಮೀಸಲಾತಿ ಎಂದು ಕರೆಯಲ್ಪಡುವ ಸಾಮಾಜಿಕ ನ್ಯಾಯವನ್ನು ತೊಡೆದುಹಾಕಲು ನೇರ ನೇಮಕಾತಿ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿತು. ಡಿಎಂಕೆ, ಶಿವಸೇನೆ (ಉದ್ಧವ್ ಠಾಕ್ರೆ) ಸೇರಿದಂತೆ ಪಕ್ಷಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಅದನ್ನು ಹಿಂಪಡೆಯಿತು. ಅದರ ಮಿತ್ರ ಪಕ್ಷ ಲೋಕ ಜನಶಕ್ತಿ ಕೂಡ ಇದನ್ನು ವಿರೋಧಿಸಿತ್ತು. ‘ಇದರಿಂದ ನನಗೆ ತುಂಬಾ ಚಿಂತೆಯಾಗಿದೆ’ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದರು. ಮೈತ್ರಿ ಪಕ್ಷಗಳೇ ವಿರೋಧಿಸಿದಾಗ ಬಿಜೆಪಿಗೆ ಬೇರೆ ದಾರಿಯಿಲ್ಲದೆ ಹಿಂದಕ್ಕೆ ಸರಿಯಿತು.

ವಕ್ಫ್ ಬೋರ್ಡ್ ಕಾಯ್ದೆಯ ವಿಷಯದಲ್ಲೂ ಇದೇ ಆಗಿದೆ. ವಕ್ಫ್ ಬೋರ್ಡ್ ಆಕ್ಟ್-1995 ಅನ್ನು ವಕ್ಫ್ (ತಿದ್ದುಪಡಿ) ಮಸೂದೆ, 2024 ಎಂದು ಮರುನಾಮಕರಣ ಮಾಡಿದ್ದಾರೆ. ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯ ಪ್ರಕಾರ, ಆಸ್ತಿಗಳನ್ನು ನಿರ್ಧರಿಸುವ ವಕ್ಫ್ ಮಂಡಳಿಯ ಅಧಿಕಾರವನ್ನು ಬದಲಾಯಿಸಲಾಗಿದೆ. ಈ ಕಾಯಿದೆಯ ಸೆಕ್ಷನ್ 40 ಅನ್ನು ತೆಗೆದು ಹಾಕಲಾಗಿದೆ.

ಕೇಂದ್ರೀಯ ವಕ್ಫ್ ಕೌನ್ಸಿಲ್ ಎಂಬುದನ್ನು ರಚಿಸಿದ್ದಾರೆ. ಅದರಲ್ಲಿ ಮುಸ್ಲಿಮರು ಮಾತ್ರವಲ್ಲದೆ ಮುಸ್ಲಿಮೇತರರೂ ಇರುತ್ತಾರೆ. ವಕ್ಫ್ ಬೋರ್ಡ್ ಜಮೀನುಗಳನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಬೇಕು. ಈ ಜಾಗ ವಕ್ಫ್ ಆಗಿದೆಯೇ ಇಲ್ಲವೇ ಎಂಬುದನ್ನು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರಂತೆ.

ಸಂವಿಧಾನದ 30ನೇ ವಿಧಿಯು ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮ ಆಸ್ತಿಯನ್ನು ನಿರ್ವಹಿಸಲು ಅಧಿಕಾರ ನೀಡುತ್ತದೆ. ಅದನ್ನೇ ತೆಗೆದುಕೊಂಡು ಹೋಗಿ ಜಿಲ್ಲಾಧಿಕಾರಿಗಳಿಗೆ ನೀಡುವ ಕಾನೂನು ಬಾಹಿರ ಕಾನೂನು ಇದಾಗಿದೆ. ಇದಕ್ಕೆ ‘ಇಂಡಿಯಾ’ ಮೈತ್ರಿ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಮೈತ್ರಿಕೂಟದ ಭಾಗವಾಗಿರುವ, ಮೋದಿ ಸ್ಥಾನವನ್ನು ಉಳಿಸುವ ಇಬ್ಬರು ಪ್ರಮುಖರಲ್ಲಿ ಒಬ್ಬರಾಗಿರುವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.

ಇಬ್ಬರಲ್ಲಿ ಮತ್ತೊಬ್ಬರಾದ ನಿತೀಶ್ ಕುಮಾರ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. “ಈ ಕಾನೂನು ಮುಸ್ಲಿಮರಿಗೆ ಭಯ ಹುಟ್ಟಿಸುತ್ತದೆ” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಬಿಹಾರದಲ್ಲಿ ಶೇ.18ರಷ್ಟು ಮುಸ್ಲಿಮರಿದ್ದಾರೆ. ಅದಕ್ಕಾಗಿಯೇ ನಿತೀಶ್ ಭಯ ಪಡುತ್ತಿದ್ದಾರೆ. ನಿತೀಶ್ ಕುಮಾರ್ ಅವರ ಪಕ್ಷವು ಆರಂಭದಲ್ಲಿ ವಕ್ಫ್ ಕಾಯ್ದೆಯನ್ನು ಬೆಂಬಲಿಸಿತ್ತು. ಆ ಪಕ್ಷದ ಸಂಸದ ರಾಜೀವ್ ರಂಜನ್ ಸಂಸತ್ತಿನಲ್ಲಿ ಬೆಂಬಲಿಸಿ ಮಾತನಾಡಿದರು. ಇದು ಬಿಹಾರ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತು.

ನಿತೀಶ್ ಸಂಪುಟದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿರುವ ಮೊಹದ್ ಜಮಾ ಖಾನ್ (Mohd Zama Khan) ತಮ್ಮದೇ ಪಕ್ಷವನ್ನು ವಿರೋಧಿಸಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಿಹಾರದ ಜಲಸಂಪನ್ಮೂಲ ಸಚಿವ ವಿಜಯಕುಮಾರ್ ಚೌಧರಿ ಕೂಡ ವಕ್ಫ್ ಕಾಯ್ದೆ ವಿರುದ್ಧ ವಾಗ್ದಾಳಿ ನಡೆಸಿದರು.

ನಿತೀಶ್ ಪಕ್ಷದ ಕೆಲ ಶಾಸಕರೂ ಕೈಜೋಡಿಸಿದರು. ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳದ ಕಾರ್ಯಾಧ್ಯಕ್ಷ ಸಂಜಯ್ ಝಾ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮೊಹದ್ ಜಮಾ ಖಾನ್ ಅವರು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಈ ರೀತಿ ಗೊಂದಲದ ಉತ್ತುಂಗದಲ್ಲಿದೆ ಕೇಂದ್ರ ಬಿಜೆಪಿ ಸಮ್ಮಿಶ್ರ ಸರ್ಕಾರ.

ದೇಶ

“ದೇಶದ ಸಂವಿಧಾನ ಶೇ.10ರಷ್ಟು ಮಂದಿಗೆ ಮಾತ್ರವಲ್ಲ. ಜಾತಿವಾರು ಸಮೀಕ್ಷೆ ನಡೆಸದೆ ಭಾರತದ ವಾಸ್ತವದಲ್ಲಿ ನೀತಿಗಳನ್ನು ರೂಪಿಸಲು ಸಾಧ್ಯವಿಲ್ಲ” – ರಾಹುಲ್ ಗಾಂಧಿ

ಪ್ರಯಾಗ್‌ರಾಜ್‌,
ದೇಶದಾದ್ಯಂತ ಜಾತಿವಾರು ಜನಗಣತಿ ನಡೆಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸುತ್ತ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಿನ್ನೆ ನಡೆದ ಸಾಂವಿಧಾನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಗ್ಗೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

“ದೇಶದ ಶೇ.90ರಷ್ಟು ಜನ ವ್ಯವಸ್ಥೆಯಿಂದ ಹೊರಗಿದ್ದಾರೆ. ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವ ಅವರಿಗೂ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ. ಅದಕ್ಕಾಗಿಯೇ ನಾವು ಜಾತಿವಾರು ಜನಗಣತಿಗೆ ಬೇಡಿಕೆಯನ್ನು ಎತ್ತುತ್ತಿದ್ದೇವೆ. ದೇಶದ ಸಂವಿಧಾನ ಶೇ.10ರಷ್ಟು ಮಂದಿಗೆ ಮಾತ್ರವಲ್ಲ. ಜಾತಿವಾರು ಸಮೀಕ್ಷೆ ನಡೆಸದೆ ಭಾರತದ ವಾಸ್ತವದಲ್ಲಿ ನೀತಿಗಳನ್ನು ರೂಪಿಸಲು ಸಾಧ್ಯವಿಲ್ಲ.

ಸಂವಿಧಾನದಂತೆಯೇ ಜಾತಿವಾರು ಎಣಿಕೆ ಕೂಡ ಕಾಂಗ್ರೆಸ್‌ನ ನೀತಿಯ ಚೌಕಟ್ಟಾಗಿಯೂ, ಮಾರ್ಗದರ್ಶಿಯೂ ಆಗಿದೆ. ಈ ಜಾತಿವಾರು ಜನಗಣತಿ ಬೇಡಿಕೆಯಿಂದ ನಾವು ಸಂವಿಧಾನವನ್ನು ರಕ್ಷಿಸಲು ಬಯಸುತ್ತೇವೆ” ಎಂದು ಹೇಳಿದ್ದಾರೆ.

ದೇಶ

ನವದೆಹಲಿ: ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಅವರ ಅಚ್ಚುಮೆಚ್ಚಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ.

ಸೋನಿಯಾ ಅವರು ನಾಯಿಯೊಂದನ್ನು ಬೆನ್ನ ಮೇಲೆ ಹಿಡಿದಿರುವ ಫೋಟೋವನ್ನು ಪೋಸ್ಟ್ ಮಾಡಿರುವ ರಾಹುಲ್, ಅಮ್ಮನ ಅಚ್ಚುಮೆಚ್ಚಿನವರು ಯಾರು? ಅದು ಖಂಡಿತವಾಗಿಯೂ ನೂರಿ (ನಾಯಿಯ ಹೆಸರು) ಎಂದು ಹೇಳಿದ್ದಾರೆ. ಮುಂದಿನ 24 ಗಂಟೆಗಳಲ್ಲಿ, 5,968 ಜನರು ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. 8.6 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ‘ಲೈಕ್’ ಮಾಡಿದ್ದಾರೆ.

ಕಳೆದ ವರ್ಷ ರಾಹುಲ್ ಗೋವಾದ ಮಾಪುಸಾದಲ್ಲಿ ನೂರಿಯನ್ನು ಖರೀದಿಸಿ, ವಿಶ್ವ ಪ್ರಾಣಿ ದಿನದಂದು ಸೋನಿಯಾಗೆ ಉಡುಗೊರೆಯಾಗಿ ನೀಡಿದ್ದರು. ಅದರ ಬಗ್ಗೆ ವಿಡಿಯೊವೊಂದನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು ಎಂಬುದು ಗಮನಾರ್ಹ.

ಉದ್ಯೋಗ ದೇಶ ಶಿಕ್ಷಣ

ಚೆನ್ನೈ: ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯವನ್ನು ದುರ್ಬಲಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಅಲ್ಲದೇ ಸರ್ಕಾರದ ಆಡಳಿತವನ್ನು ಆರ್‌ಎಸ್‌ಎಸ್‌ ಅಧೀನಕ್ಕೆ ನೀಡವ ಬಿಜೆಪಿ ಸರ್ಕಾರದ ಷಡ್ಯಂತ್ರವನ್ನು ವಿಫಲಗೊಳಿಸಬೇಕು” ಎಂದು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಹೇಳಿದ್ದಾರೆ.

ಈ ಕುರಿತು, ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ, ಸಾಮಾಜಿಕ ನ್ಯಾಯವನ್ನು ದುರ್ಬಲಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಸರ್ಕಾರಿ ಆಡಳಿತದಲ್ಲಿ ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದ ಖಾಸಗಿ ಕಂಪನಿಗಳ ಉನ್ನತ ಅಧಿಕಾರಿಗಳನ್ನು ಸರ್ಕಾರಿ ಕಾರ್ಯದರ್ಶಿಗಳಾಗಿ, ಮತ್ತು ಉನ್ನತ ಅಧಿಕಾರಿಗಳಾಗಿ ನೇಮಕ ಮಾಡಿಕೊಳ್ಳುವ ಯೋಜನೆಯನ್ನು ಜಾರಿಗೊಳಿಸುತ್ತಿದೆ.

ಖಾಸಗಿ ವಲಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು (CEO) ನೇರವಾಗಿ ಐಎಎಸ್ ಅಧಿಕಾರಿಗಳಾಗಿ ನೇಮಿಸಿಕೊಳ್ಳುವ ಯೋಜನೆಯನ್ನು 2018ರಲ್ಲಿ ಪರಿಚಯಿಸಲಾಯಿತು. ಈ ಯೋಜನೆಯಲ್ಲಿ ಇದುವರೆಗೆ 63 ಜನರನ್ನು ನೇಮಿಸಲಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇತ್ತೀಚೆಗೆ ಇದೇ ಯೋಜನೆಯಡಿಯಲ್ಲಿ ಇನ್ನೂ 45 ಜನರನ್ನು ನೇಮಿಸಿಕೊಳ್ಳಲು ಜಾಹೀರಾತನ್ನು ಬಿಡುಗಡೆ ಮಾಡಿದೆ.

ಈ ಯೋಜನೆಯು ಕಾನೂನು ಉಲ್ಲಂಘನೆ ಮಾತ್ರವಲ್ಲ, ಸಂವಿಧಾನದ ಮೇಲಿನ ಕ್ರೂರ ದಾಳಿಯೂ ಆಗಿದೆ. ಈ ಮೂಲಕ ಸರ್ಕಾರದ ಆಡಳಿತವನ್ನು ಸಂಪೂರ್ಣವಾಗಿ ಆರ್‌ಎಸ್‌ಎಸ್‌ ಅಧೀನಕ್ಕೆ ಕೊಡಲು ಸಂಚು ರೂಪಿಸುತ್ತಿರುವುದು ಅತ್ಯಂತ ಖಂಡನೀಯವಾದದ್ದು. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿನ ಪ್ರಮುಖ ಹುದ್ದೆಗಳಿಗೆ ‘ಲ್ಯಾಟರಲ್ ಎಂಟ್ರಿ’ ಮೂಲಕ ಮಾಡುತ್ತಿರುವ ನೇಮಕಾತಿಯಿಂದ SC, ST, OBC ಪಂಗಡದ ಮೀಸಲಾತಿಯನ್ನು ಕೇಂದ್ರ ಸರ್ಕಾರ ಬಹಿರಂಗವಾಗಿ ಕಿತ್ತುಕೊಳ್ಳುತ್ತಿದೆ.

ದೇಶದ ಅತ್ಯುನ್ನತ ಅಧಿಕಾರ ಸೇರಿದಂತೆ ಎಲ್ಲ ಉನ್ನತ ಹುದ್ದೆಗಳಲ್ಲಿ ಪರಿಶಿಷ್ಟ ವರ್ಗದವರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಹೇಳುತ್ತಲೇ ಬಂದಿದ್ದೇನೆ. ಇದನ್ನು ಸುಧಾರಿಸುವ ಬದಲು, ‘ಲ್ಯಾಟರಲ್ ಎಂಟ್ರಿ’ ಮೂಲಕ ಪರಿಶಿಷ್ಟ ವರ್ಗದವರನ್ನು ಉನ್ನತ ಸ್ಥಾನಗಳಿಂದ ಇನ್ನಷ್ಟು ದೂರ ತಳ್ಳಲಾಗುತ್ತಿದೆ.

ಈ ಕಾರ್ಯವು UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪ್ರತಿಭಾವಂತ ಯುವಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಕಾರ್ಯವಾಗಿದೆ. ಮತ್ತು ‘ಇದು ತುಳಿತಕ್ಕೊಳಗಾದವರ ಸಾಮಾಜಿಕ ನ್ಯಾಯದ ಮೇಲೆ ಕೇಂದ್ರ ಸರ್ಕಾರದ ದಾಳಿಯಾಗಿದೆ’ ಎಂದು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿರುವುದು ಗಮನಿಸಬೇಕಾದ ಸಂಗತಿ.

“ಇಂಡಿಯಾ ಮೈತ್ರಿಕೂಟ”ದ ಪಕ್ಷಗಳು ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು, ಒಗ್ಗಟ್ಟಿನಿಂದ ಹೋರಾಡುವ ಮೂಲಕ, ಸರ್ಕಾರದ ಆಡಳಿತವನ್ನು ಆರ್‌ಎಸ್‌ಎಸ್‌ ಅಧೀನಕ್ಕೆ ನೀಡಲು ಮುಂದಾಗುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಷಡ್ಯಂತ್ರವನ್ನು ವಿಫಲಗೊಳಿಸಬೇಕು” ಎಂದು ಹೇಳಿದ್ದಾರೆ.

ದೇಶ ರಾಜಕೀಯ

 ಡಿ.ಸಿ.ಪ್ರಕಾಶ್

ಬಿಹಾರದಲ್ಲಿ, 2022 ರ ದ್ವಿತೀಯಾರ್ಧದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ನಿತೀಶ್ ಕುಮಾರ್, ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅದೇ ವರ್ಷದ ಅಕ್ಟೋಬರ್‌ನಲ್ಲಿ ರಾಜ್ಯ ಮಟ್ಟದ ಜಾತಿವಾರು ಸಮೀಕ್ಷೆಯನ್ನು ಬಿಡುಗಡೆ ಮಾಡಿದರು.

ಜೊತೆಗೆ, ರಾಜ್ಯ ಸರ್ಕಾರಿ ಮೀಸಲಾತಿಯನ್ನು ಶೇ.65ಕ್ಕೆ ಹೆಚ್ಚಿಸುವುದಾಗಿಯೂ ಭರವಸೆ ನೀಡಿದರು. ಅಂದಿನಿಂದ, ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ ಮೈತ್ರಿಕೂಟ’ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಜಾತಿವಾರು ಜನಗಣತಿ ನಡೆಸುವಂತೆ ಬಿಜೆಪಿ ಸರ್ಕಾರವನ್ನು ಒತ್ತಾಯಿಸುತ್ತಿವೆ.

ಆದರೆ, ಈ ಬಗ್ಗೆ ಮೌನ ವಹಿಸಿದ್ದ ಬಿಜೆಪಿ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಎಸ್.ಸಿ, ಎಸ್.ಟಿ ಮೀಸಲಾತಿಯನ್ನು ಕಸಿಯಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಪ್ರಚಾರ ಮಾಡಿತ್ತು. ಜಾತಿವಾರು ಗಣತಿಯನ್ನು ಬೆಂಬಲಿಸುವ ನಿತೀಶ್ ಕುಮಾರ್ ಮತ್ತು ಇತರರ ಬೆಂಬಲದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರವೂ ಬಿಜೆಪಿ ಈ ವಿಷಯದಲ್ಲಿ ಮೌನವಾಗಿದೆ.

ಆದರೂ, ಸರ್ಕಾರದ ಎಲ್ಲಾ ಯೋಜನೆಗಳು ಹಿಂದುಳಿದ, ಪರಿಶಿಷ್ಟ ಮತ್ತು ಬುಡಕಟ್ಟು ಜನರಿಗೆ ಸರಿಯಾಗಿ ಸಿಗುವಂತೆ ಮಾಡಲು ರಾಷ್ಟ್ರಮಟ್ಟದಲ್ಲಿ ಜಾತಿವಾರು ಜನಗಣತಿ ನಡೆಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಈ ಹಿನ್ನೆಲೆಯಲ್ಲಿ, 2024-25ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಕಳೆದ ವಾರ ಮಂಡಿಸಲಾಗಿತ್ತು. ಈ ಕುರಿತು ಲೋಕಸಭೆಯಲ್ಲಿ ಸೋಮವಾರ (ಜುಲೈ 29) ರಂದು ದಿನ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಕೇಂದ್ರ ಬಜೆಟ್‌ ತಯಾರಿಸುವಲ್ಲಿ 20 ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಆದರೆ ಹಿಂದುಳಿದ, ಪರಿಶಿಷ್ಟ ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇರಿದ ಒಬ್ಬ ವ್ಯಕ್ತಿಯನ್ನೂ ಅದರಲ್ಲಿ ಸೇರಿಸಲಾಗಿಲ್ಲ.

ದೇಶದ ಶೇ.73ರಷ್ಟು ಜನಸಂಖ್ಯೆ ಹೊಂದಿರುವ ಈ ಮೂರು ಸಮುದಾಯಗಳಿಗೆ ಬಜೆಟ್ ನಲ್ಲಿ ಏನೂ ಸಿಗಲಿಲ್ಲ. ಇಂದಿನ ಭಾರತದಲ್ಲಿ ಕಮಲ ಆಕಾರದ ಚಕ್ರವ್ಯೂಹ ಇದೆ. ಯುವಕರು, ರೈತರು, ಮಹಿಳೆಯರು, ಸಣ್ಣ ಮತ್ತು ಮಧ್ಯಮ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. ಇದನ್ನು ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಮುಂತಾದ ಆರು ಜನರು ನಿಯಂತ್ರಿಸುತ್ತಾರೆ” ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ, ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿ ವಿರುದ್ಧ ಜಾತಿ, ಧರ್ಮದ ಆಧಾರದಲ್ಲಿ ಪರೋಕ್ಷ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿ ಇದನ್ನು ಹೊಗಳಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ನಿನ್ನೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಅನುರಾಗ್ ಠಾಕೂರ್, “ತನ್ನ ಜಾತಿ ಗೊತ್ತಿಲ್ಲದ ವ್ಯಕ್ತಿ ಜಾತಿವಾರು ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲದೆ, ಕೆಲವರು ಆಕಸ್ಮಿಕವಾಗಿ ಹಿಂದೂಗಳಾಗಿದ್ದಾರೆ. ಆದ್ದರಿಂದ, ಮಹಾಭಾರತದ ಬಗ್ಗೆ ಅವರ ಜ್ಞಾನವು ಹಾಗೆ ಆಗಿರುತ್ತದೆ” ಎಂದು ವಾಗ್ದಾಳಿ ನಡೆಸಿದರು.

ಅನುರಾಗ್ ಠಾಕೂರ್

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, “ಆದಿವಾಸಿ, ದಲಿತ ಮತ್ತು ಹಿಂದುಳಿದವರ ಸಮಸ್ಯೆಗಳನ್ನು ಯಾರೇ ಎತ್ತಿದರೂ ಅವರನ್ನು ನಿಂದಿಸಲಾಗುತ್ತದೆ. ಆದಾಗ್ಯೂ, ನಾನು ಇದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಅನುರಾಗ್ ಠಾಕೂರ್ ನನ್ನನ್ನು ನಿಂದಿಸಿ ಅವಮಾನ ಮಾಡಿದ್ದಾರೆ.

ಆದರೆ, ನಾನು ಅವರಿಂದ ಯಾವುದೇ ಕ್ಷಮೆಯನ್ನು ಬಯಸುವುದಿಲ್ಲ. ನೀವು ನನ್ನನ್ನು ಎಷ್ಟು ಬೇಕಾದರೂ ಅವಮಾನಿಸಬಹುದು. ಸಂಸತ್ತಿನಲ್ಲಿ ಜಾತಿವಾರು ಜನಗಣತಿಯನ್ನು ನಾವು ಅಂಗೀಕರಿಸುತ್ತೇವೆ” ಎಂದರು. ಮತ್ತೊಂದೆಡೆ, ಸಮಾಜವಾದಿ ನಾಯಕ ಅಖಿಲೇಶ್ ಯಾದವ್, “ಅದು ಹೇಗೆ ಒಬ್ಬರ ಜಾತಿಯನ್ನು ಕೇಳುವುದು?” ಎಂದು ಅನುರಾಗ್ ಠಾಕೂರ್ ಅವರನ್ನು ಪ್ರಶ್ನಿಸಿದರು.

ಅಲ್ಲದೆ, ಅನೇಕ ವಿರೋಧ ಪಕ್ಷದ ಸಂಸದರು ಸಹ ಅನುರಾಗ್ ಠಾಕೂರ್ ಅವರ ಇಂತಹ ಭಾಷಣವನ್ನು ವಿರೋಧಿಸಿದರು. ಆದರೆ, ಸದನದಲ್ಲಿ ನಡೆದ ಈ ಘಟನೆಗೆ ಇನ್ನಷ್ಟು ತುಪ್ಪ ಸುರಿಯುವ ಸಲುವಾಗಿ ಪ್ರಧಾನಿ ಮೋದಿ, ನನ್ನ ಯುವ ಮತ್ತು ಶಕ್ತಿಯುತ ಸಹೋದ್ಯೋಗಿ ಅನುರಾಗ್ ಠಾಕೂರ್ ಅವರ ಈ ಭಾಷಣ, ಕೇಳಲೇಬೇಕು. ಸತ್ಯ ಮತ್ತು ಹಾಸ್ಯದ ಈ ಪರಿಪೂರ್ಣ ಮಿಶ್ರಣವು ಇಂಡಿಯಾ ಮೈತ್ರಿಕೂಟದ ಕೊಳಕು ರಾಜಕೀಯವನ್ನು ಬಹಿರಂಗಪಡಿಸುತ್ತದೆ” ಎಂದು ಟ್ವೀಟ್ ಮಾಡಿ, ಅನುರಾಗ್ ಠಾಕೂರ್ ಅವರು ಸದನದಲ್ಲಿ ಮಾಡಿದ ಭಾಷಣದ ವೀಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಪುಟ X ನಲ್ಲಿ ಹಂಚಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಅನುರಾಗ್ ಠಾಕೂರ್ ಅವರು ಅಖಿಲೇಶ್ ಯಾದವ್ ಅವರ ಹಳೆಯ ವಿಡಿಯೋವನ್ನು ಕಟ್ ಮಾಡಿ, “ನೀವು ಜಾತಿಯ ಬಗ್ಗೆ ಅದು ಹೇಗೆ ಕೇಳಬಹುದು ಅಖಿಲೇಶ್ ಯಾದವ್?” ಎಂದು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ, ಕಮ್ಯುನಿಸ್ಟ್ ಪಕ್ಷದ ಸಂಸದ ಸಿ.ವೆಂಕಟೇಶನ್ ಅವರು ತಮ್ಮ ಎಕ್ಸ್ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ, “ನಿನ್ನೆ ಸಂಸತ್ತಿನಲ್ಲಿ, ‘ತನ್ನ ಜಾತಿ ಗೊತ್ತಿಲ್ಲದ ವ್ಯಕ್ತಿ ಜಾತಿವಾರು ಗಣತಿ ಬಗ್ಗೆ ಮಾತನಾಡಬಹುದಾ?’ ಎಂದು ರಾಹುಲ್ ಗಾಂಧಿ ಬಗ್ಗೆ ಅನುರಾಗ್ ಠಾಕೂರ್ ಮಾತನಾಡಿದರು.

ಈ ಭಾಷಣವನ್ನು ಎಲ್ಲರೂ ಕೇಳಲೇಬೇಕಾದ ಅತ್ಯುತ್ತಮ ಭಾಷಣ ಎಂದು ಪ್ರಧಾನಿ ತಮ್ಮ ‘ಎಕ್ಸ್’ ಸೈಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇಶದ ಅತ್ಯುನ್ನತ ಸದನಗಳಲ್ಲಿ ಬಿಜೆಪಿಯ ಧ್ವನಿ ಎಷ್ಟು ನೋವಿನಿಂದ ಹೊರಹೊಮ್ಮುತ್ತಿದೆ ಎಂಬುದನ್ನು ನೋಡಿ” ಎಂದು ಟೀಕಿಸಿದ್ದಾರೆ. ಅವರನ್ನು ಅನುಸರಿಸಿ ಹಲವು ವಿರೋಧ ಪಕ್ಷಗಳ ನಾಯಕರು, ಅನುರಾಗ್ ಠಾಕೂರ್ ಅವರ ಕ್ರಮವನ್ನು ಖಂಡಿಸುತ್ತಾ, ಮೋದಿಯವರ ಹೊಗಳಿಕೆಯನ್ನು ಟೀಕಿಸುತ್ತಿದ್ದಾರೆ.

ಅಲ್ಲದೆ, ಅನುರಾಗ್ ಠಾಕೂರ್ ಅವರ ವೀಡಿಯೊವನ್ನು ವೀಕ್ಷಿಸಲು ಮೋದಿಯವರ ಮನವಿಗೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷವು, ಇದು ಸಂಸತ್ತಿನ ವಿಶೇಷ ಹಕ್ಕುಗಳ ಉಲ್ಲಂಘನೆ ಮತ್ತು ಅಸಂವಿಧಾನಿಕ ಎಂದು ಲೋಕಸಭೆಯ ರೂಲ್ ಬುಕ್ ಚಾಪ್ಟರ್ 20ರ ರೂಲ್ ನಂಬರ್ 222ರ ಪ್ರಕಾರ ಮೋದಿಯವರ ವಿರುದ್ಧ ಹಕ್ಕುಚ್ಯುತಿ (Privilege Motion Notice) ಮಂಡಿಸಿದೆ.

ರಾಜಕೀಯ

 ಡಿ.ಸಿ.ಪ್ರಕಾಶ್

ನವದೆಹಲಿ: “ಪ್ರಧಾನಿ ಮೋದಿ ತಮ್ಮ ಶರ್ಟ್‌ನ ಮೇಲೆ ಧರಿಸಿರುವ ಕಮಲದ ಚಿಹ್ನೆಯಿಂದ ಪ್ರತಿನಿಧಿಸುವ ಚಕ್ರವ್ಯೂಹದಲ್ಲಿ ಭಾರತ ಸಿಲುಕಿಕೊಂಡಿದೆ. ಮಹಾಭಾರತದಲ್ಲಿ ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಂತೆ ಭಾರತವೂ ಮೋದಿ ಆಡಳಿತದಲ್ಲಿ ಸಿಕ್ಕಿಬಿದ್ದಿದೆ” ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಕುರಿತು ಮಾತನಾಡಿದರು. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, “ಭಾರತದಲ್ಲಿ ಭಯದ ವಾತಾವರಣವಿದೆ. ಆ ಭಯ ನಮ್ಮ ದೇಶದ ಎಲ್ಲ ಭಾಗಗಳಿಗೂ ಹಬ್ಬಿದೆ. ಬಿಜೆಪಿಯಲ್ಲಿ ಒಬ್ಬರಿಗೆ ಮಾತ್ರ ಪ್ರಧಾನಿ ಕನಸು ಕಾಣಲು ಅವಕಾಶವಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿಯಾಗಬೇಕಾದರೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಿಜೆಪಿ ಆಡಳಿತದಲ್ಲಿ ಕೇಂದ್ರ ಸಚಿವರು, ರೈತರು, ಕಾರ್ಮಿಕರು ಎಲ್ಲರೂ ಭಯದಲ್ಲಿದ್ದಾರೆ. ಈ ಭಯ ಭಾರತದಲ್ಲಿ ಏಕೆ ಆಳವಾಗಿದೆ ಎಂಬುದು ನನ್ನ ಒಂದೇ ಪ್ರಶ್ನೆಯಾಗಿದೆ. ನನ್ನ ಮಾತಿಗೆ ಬಿಜೆಪಿಯವರು ನಗುತ್ತಿದ್ದರೂ ಅವರಿಗೆ ಒಳಗೊಳಗೆ ಒಂದು ರೀತಿಯ ಭಯ ಕಾಡುತ್ತಿದೆ.

ಪ್ರಧಾನಿ ಮೋದಿ ತಮ್ಮ ಶರ್ಟ್‌ನ ಮೇಲೆ ಧರಿಸಿರುವ ಕಮಲದ ಚಿಹ್ನೆಯಿಂದ ಪ್ರತಿನಿಧಿಸುವ ಚಕ್ರವ್ಯೂಹದಲ್ಲಿ ಭಾರತ ಸಿಲುಕಿಕೊಂಡಿದೆ. ಮಹಾಭಾರತದಲ್ಲಿ ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಂತೆ ಭಾರತವೂ ಮೋದಿ ಆಡಳಿತದಲ್ಲಿ ಸಿಕ್ಕಿಬಿದ್ದಿದೆ. ಭಾರತವನ್ನು ವಶಪಡಿಸಿಕೊಂಡಿರುವ ಬಿಜೆಪಿಯ ಚಕ್ರವ್ಯೂಹದ ಹಿಂದೆ 3 ಶಕ್ತಿಗಳಿವೆ. ಅವುಗಳು ಯಾವುದೆಂದರೆ,

ಭಾರತದ ಎಲ್ಲಾ ಸಂಪನ್ಮೂಲಗಳ ಮೇಲೆ ಹಿಡಿತ ಹೊಂದಿರುವ ಇಬ್ಬರು ವ್ಯಕ್ತಿಗಳು, ಸಿಬಿಐ, ಜಾರಿ ನಿರ್ದೇಶನಾಲಯದಂತಹ ಕೇಂದ್ರ ಸರ್ಕಾರದ ಸಂಸ್ಥೆಗಳು, ರಾಜಕೀಯ ಅಧಿಕಾರದ ಆಸೆ. ಈ ಮೂರೂ ಸೇರಿ ಭಾರತವನ್ನು ಹಾಳು ಮಾಡಿದೆ. ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ಈ ಚಕ್ರವ್ಯೂಹದ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂಬುದು ನನ್ನ ಅನಿಸಿಕೆ.

ಕೇಂದ್ರ ಬಜೆಟ್ ಈ ದೇಶದ ರೈತರು, ಯುವಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಆದರೆ, ನನ್ನ ದೃಷ್ಟಿಯಲ್ಲಿ ಈ ಬಜೆಟ್‌ನ ಏಕೈಕ ಉದ್ದೇಶವೆಂದರೆ, ಏಕಸ್ವಾಮ್ಯ ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸುವ ಸರ್ಕಾರಿ ಸಂಸ್ಥೆಗಳ ರಚನೆಯನ್ನು ಬಲಪಡಿಸುವುದು. ಏಕೆಂದರೆ, ಸಣ್ಣ ಉದ್ದಿಮೆಗಳಿಗೆ ಭಾರಿ ಹೊಡೆತ ನೀಡಿರುವ ತೆರಿಗೆ ಭಯೋತ್ಪಾದನೆಗೂ ಬಜೆಟ್‌ಗೂ ಯಾವುದೇ ಸಂಬಂಧವಿಲ್ಲ. ಜಿಎಸ್‌ಟಿ ಒಂದು ತೆರಿಗೆ ಭಯೋತ್ಪಾದನೆ. ಜಿಎಸ್‌ಟಿಯಿಂದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಾಶವಾಗುತ್ತವೆ. ಕೇಂದ್ರ ಸರ್ಕಾರ ಜಿಎಸ್‌ಟಿ ಮೂಲಕ ತೆರಿಗೆ ಭಯೋತ್ಪಾದನೆಯನ್ನು ಹೇರಿದೆ.

‘ಅಗ್ನಿಪಥ್’ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಪಿಂಚಣಿ ನೀಡಲು ಬಜೆಟ್‌ನಲ್ಲಿ ಯಾವುದೇ ಹಣಕಾಸಿನ ಹಂಚಿಕೆ ಇಲ್ಲ. ಯುವಕರನ್ನು ಬಾಧಿಸುವ ದೊಡ್ಡ ಸಮಸ್ಯೆ ಎಂದರೆ ಪ್ರಶ್ನೆ ಪತ್ರಿಕೆ ಸೋರಿಕೆ. ಆದರೆ ಹಣಕಾಸು ಸಚಿವರು ಬಜೆಟ್‌ನಲ್ಲಿ ಈ ಬಗ್ಗೆ ಏನನ್ನೂ ಪ್ರಸ್ತಾಪಿಸಿಲ್ಲ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ 70 ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಗಳು ನಡೆದಿವೆ. ಅಲ್ಲದೆ, ಕಳೆದ 10 ವರ್ಷಗಳಲ್ಲಿ ನಡೆದ ನೀಟ್ ಪರೀಕ್ಷೆಯ ಪತ್ರಿಕೆಗಳ ಸೋರಿಕೆ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪದವಿಲ್ಲ. ಮೋದಿ ಸರ್ಕಾರ ನಿರುದ್ಯೋಗ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಮಾನಾರ್ಥಕವಾಗಿದೆ. ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಕಳೆದ 20 ವರ್ಷಕ್ಕಿಂತ ಕಡಿಮೆ ಹಣ ಮೀಸಲಿಡಲಾಗಿದೆ.

ಅದೇ ರೀತಿ ಬಜೆಟ್‌ನಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಶಾಸನಬದ್ಧ ಖಾತರಿ ಇಲ್ಲ. ಎನ್‌ಡಿಎ ಸರ್ಕಾರ ಮಾಡದ ಕೆಲಸವನ್ನು ನಾವು ಮಾಡುತ್ತೇವೆ ಎಂದು ರೈತರಿಗೆ ಹೇಳಲು ಬಯಸುತ್ತೇನೆ. ಇದೇ ಸದನದಲ್ಲಿ, ನಾವು ಕನಿಷ್ಟ ಬೆಂಬಲ ಬೆಲೆಗೆ ಶಾಸನಬದ್ಧ ಖಾತರಿ ಮಸೂದೆಯನ್ನು ಅಂಗೀಕರಿಸುತ್ತೇವೆ. ಈ ಬಜೆಟ್‌ಗೂ ಮುನ್ನ ಮಧ್ಯಮ ವರ್ಗದವರು ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿದ್ದರು. ಈಗ ಈ ಬಜೆಟ್ ಮೂಲಕ ಬಿಜೆಪಿ ಸರ್ಕಾರ ಅದೇ ಮಧ್ಯಮ ವರ್ಗದ ಬೆನ್ನು ಮತ್ತು ಎದೆಗೆ ಚೂರಿ ಹಾಕಿದೆ.

ಭಾರತದ ಮೂಲಸೌಕರ್ಯ ಮತ್ತು ವ್ಯವಹಾರಗಳನ್ನು ಕೇವಲ ಇಬ್ಬರು ವ್ಯಕ್ತಿಗಳು ಮಾತ್ರ ನಿಯಂತ್ರಿಸುತ್ತಿದ್ದಾರೆ. ಅವರು ವಿಮಾನ ನಿಲ್ದಾಣಗಳು, ದೂರಸಂಪರ್ಕ ಕಂಪನಿಗಳು, ಬಂದರುಗಳು ಇತ್ಯಾದಿಗಳನ್ನು ಹೊಂದಿದ್ದಾರೆ. ಮುಂದೆ ರೈಲ್ವೆಗೂ ಕಾಲಿಡಲಿದ್ದಾರೆ. ಅವರಿಗೆ ಭಾರತದ ಸಂಪತ್ತನ್ನು ತೆಗೆದುಕೊಳ್ಳುವ ಏಕಸ್ವಾಮ್ಯ ಹಕ್ಕನ್ನು ನೀಡಲಾಗಿದೆ.

ಬಜೆಟ್ ಅಧಿವೇಶನಕ್ಕೂ ಮುನ್ನ ಹಣಕಾಸು ಸಚಿವಾಲಯದಲ್ಲಿ ನಡೆದ ಸಾಂಪ್ರದಾಯಿಕ ‘ಅಲ್ವಾ’ ಸಮಾರಂಭದಲ್ಲಿ ಒಬ್ಬನೇ ಒಬ್ಬ ಆದಿವಾಸಿ ಅಥವಾ ದಲಿತ ಅಧಿಕಾರಿಯೂ ಕಾಣಲಿಲ್ಲ. ಒಟ್ಟು 20 ಅಧಿಕಾರಿಗಳು ಕೇಂದ್ರ ಬಜೆಟ್ ಸಿದ್ಧಪಡಿಸಿದರು. ಅವರಲ್ಲಿ ಒಬ್ಬರೂ ಹಿಂದುಳಿದ, ದಲಿತ ಅಥವಾ ಬುಡಕಟ್ಟು ಸಮುದಾಯಕ್ಕೆ ಸೇರಿದವರಲ್ಲ. ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ಜನರು ಭಾರತದ ಜನಸಂಖ್ಯೆಯಲ್ಲಿ ಶೇ.73ರಷ್ಟು ಇದ್ದಾರೆ. ಆದರೆ ಕೇಂದ್ರ ಬಜೆಟ್‌ನಿಂದ ಅವರಿಗೆ ಏನೂ ಸಿಕ್ಕಿಲ್ಲ.

ಬಿಜೆಪಿಯ ಚಕ್ರವ್ಯೂಹ ಕೋಟ್ಯಂತರ ಜನರಿಗೆ ಹಾನಿ ಮಾಡುತ್ತದೆ. ನಾವು ಈ ಚಕ್ರವ್ಯೂಹವನ್ನು ಮುರಿಯಲಿದ್ದೇವೆ. ಇದನ್ನು ಮಾಡುವ ಮಾರ್ಗವೇನಂದರೆ, ನಿಮ್ಮನ್ನು ಹೆದರಿಸುವುವ ಜಾತಿವಾರು ಜನಗಣತಿಯೇ. ಇಂಡಿಯಾ ಮೈತ್ರಿಕೂಟವು ಈ ಸದನದಲ್ಲಿ ಕನಿಷ್ಠ ಬೆಂಬಲ ಬೆಲೆಯ ಶಾಸನಬದ್ಧ ಖಾತರಿ ಮಸೂದೆಯನ್ನು ಅಂಗೀಕರಿಸುತ್ತದೆ. ಅದೇ ರೀತಿ ಜಾತಿವಾರು ಜನಗಣತಿ ನಡೆಸುತ್ತೇವೆ. ನೀವು ಇಷ್ಟಪಡುತ್ತೀರೋ ಇಲ್ಲವೋ ಅದು ಸಂಭವಿಸುತ್ತದೆ.

ಭಾರತದ ಸ್ವರೂಪವೇ ಬೇರೆ. ಪ್ರತಿಯೊಂದು ಧರ್ಮವು ಚಕ್ರವ್ಯೂಹಕ್ಕೆ ವಿರೋಧಿ ತಂತ್ರವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿಯೂ ಸಹ ಇದೆ. ಹಸಿರು ಕ್ರಾಂತಿ, ಸ್ವಾತಂತ್ರ್ಯ, ಸಂವಿಧಾನದ ಮೂಲಕ ನೀವು ರಚಿಸಿದ ಚಕ್ರವ್ಯೂಹವನ್ನು ನಾವು ಮುರಿಯುತ್ತೇವೆ. ನಿಮ್ಮನ್ನು ನೀವು ಹಿಂದೂ ಎಂದು ಕರೆದುಕೊಳ್ಳುತ್ತೀರಿ. ಆದರೆ ನಿಮಗೆ ಹಿಂದೂ ಧರ್ಮ ಅರ್ಥವಾಗುತ್ತಿಲ್ಲ” ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು.