ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಬೆಲ್ಟ್ ಅಂಡ್ ರೋಡ್ Archives » Dynamic Leader
October 23, 2024
Home Posts tagged ಬೆಲ್ಟ್ ಅಂಡ್ ರೋಡ್
ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಸು ಐದು ದಿನಗಳ ಚೀನಾ ಪ್ರವಾಸದಲ್ಲಿದ್ದಾರೆ. ಪ್ರವಾಸೋದ್ಯಮ ವಲಯದಲ್ಲಿ ಸಹಕಾರ ಸೇರಿದಂತೆ 20 ಪ್ರಮುಖ ಒಪ್ಪಂದಗಳಿಗೆ ಮಾಲ್ಡೀವ್ಸ್ ಮತ್ತು ಚೀನಾ ಸಹಿ ಹಾಕಿವೆ ಎಂಬ ಮಾಹಿತಿ ಬಂದಿದೆ. ಚೀನಾ ಸರ್ಕಾರ ಮಾಲ್ಡೀವ್ಸ್ ಅಧ್ಯಕ್ಷರಿಗೆ 21 ಗನ್ ಸಲ್ಯೂಟ್‌ನೊಂದಿಗೆ ರೆಡ್ ಕಾರ್ಪೆಟ್ ಸ್ವಾಗತವನ್ನು ನೀಡಿತು.

ಮಾಲ್ಡೀವ್ಸ್ ಹಿಂದೂ ಮಹಾಸಾಗರದಲ್ಲಿರುವ ಒಂದು ಪುಟ್ಟ ದೇಶ. ಆದರೆ ಚೀನಾ ಅದನ್ನು ಚಿಕ್ಕ ದೇಶ ಎಂದು ಪರಿಗಣಿಸುವ ಬದಲು ತನಗೆ ಸಮಾನವಾದ ಸಾರ್ವಭೌಮ ರಾಷ್ಟ್ರ ಎಂಬ ಗೌರವವನ್ನು ನೀಡಿದೆ. ಇಂತಹ ವಿಷಯಗಳಿಂದಲೇ ಚೀನಾ ಗೆಲ್ಲುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಅವರ ಪ್ರವಾಸವನ್ನು ಮಾಲ್ಡೀವ್ಸ್ ನ ಮೂವರು ಮಂತ್ರಿಗಳು ಟೀಕಿಸಿದ್ದರು. ಇದು ಸಂಪೂರ್ಣವಾಗಿ ಖಂಡನೀಯ. ಭಾರತದ ಪ್ರಧಾನಿ, ಭಾರತದ ಲಕ್ಷದ್ವೀಪ ಭೇಟಿಯನ್ನು ಟೀಕಿಸುವ ಹಕ್ಕು ಮಾಲ್ಡೀವ್ಸ್ ಎಂಬ ಇನ್ನೊಂದು ದೇಶದ ಮಂತ್ರಿಗಳಿಗೆ ಇಲ್ಲ. ಈ ಹಿನ್ನೆಲೆಯಲ್ಲಿ, ಆ ಮೂರು ಸಚಿವರನ್ನು ಆ ದೇಶದ ಅಧ್ಯಕ್ಷರು ಸಂಪುಟದಿಂದ ಅಮಾನತುಗೊಳಿಸಿದರು. ಆ ತ್ವರಿತ ಕ್ರಮ ಶ್ಲಾಘನೀಯ.

ಏತನ್ಮಧ್ಯೆ, ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ತೀರ ಹದಗೆಟ್ಟಿವೆ; ಅತ್ಯಂತ ನಿಕಟ ನೆರೆಯ ಮಾಲ್ಡೀವ್ಸ್, ಭಾರತದ ಪ್ರಭಾವದ ವಲಯದಿಂದ ಹೊರ ಹೋಗುವ ಹಂತಕ್ಕೆ ತಲುಪಿದೆ. ಇದು ಸಂಪೂರ್ಣವಾಗಿ ದಕ್ಷಿಣ ಏಷ್ಯಾ ಪ್ರದೇಶದ ಬಗ್ಗೆ ಮೋದಿ ನೇತೃತ್ವದ ಸರ್ಕಾರದ ಪ್ರತಿಕೂಲ ವಿದೇಶಾಂಗ ನೀತಿಯೇ ಕಾರಣವಾಗಿದೆ.

ಮೋದಿಯವರು ಅಧಿಕಾರಕ್ಕೆ ಬಂದ ನಂತರ, ಕಳೆದ ಕೆಲವು ವರ್ಷಗಳಿಂದ ತನ್ನ ಹತ್ತಿರದ ನೆರೆಹೊರೆಯ ದೇಶಗಳಾದ ಮಾಲ್ಡೀವ್ಸ್, ಶ್ರೀಲಂಕಾ, ಭೂತಾನ್, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಜೊತೆಗಿನ ಉತ್ತಮ ಬಾಂಧವ್ಯಕ್ಕಿಂತ ಕಹಿಯೇ ಹೆಚ್ಚಾಗಿದೆ.

ಈ ಎಲ್ಲಾ ದೇಶಗಳಲ್ಲಿ, ಕೆಲವು ವರ್ಷಗಳ ಹಿಂದೆ ಅಮೆರಿಕ ಹೆಚ್ಚಿನ ಪ್ರಭಾವವನ್ನು ಹೊಂದಿತ್ತು. ಕಳೆದೆರಡು ವರ್ಷಗಳಲ್ಲಿ ಆ ಪ್ರಭಾವ ಕೊಂಚ ಪಲ್ಲಟಗೊಂಡು, ಚೀನಾದತ್ತ ಮುಖಮಾಡಿದೆ. ಅದಕ್ಕೆ ಮುಖ್ಯ ಕಾರಣ, ಅತ್ಯಂತ ಹಿಂದುಳಿದ ದೇಶಗಳೊಂದಿಗೆ “ಬೆಲ್ಟ್ ಅಂಡ್ ರೋಡ್” ಎಂದು ಕರೆಯಲ್ಪಡುವ ಜಾಗತಿಕ ಕಾರಿಡಾರ್ ಯೋಜನೆಯೊಂದಿಗೆ ಚೀನಾ ವ್ಯಾಪಾರ ಸಂಬಂಧವನ್ನು ಹೊಂದಿದ್ದು, ಅದರ ಮೂಲಕ ಆ ದೇಶಗಳ ಮೂಲಸೌಕರ್ಯಕ್ಕೆ ನೆರವು ನೀಡುತ್ತಿದ್ದೆ.

ಇದರಲ್ಲಿ ಸೇರ್ಪಡೆಯಾಗದ ಏಕೈಕ ದಕ್ಷಿಣ ಏಷ್ಯಾದ ದೇಶವೆಂದರೆ ಅದು ಭಾರತ. ಭಾರತವು ಅಮೆರಿಕ ಪಾಲುದಾರರಾಗಿ ಕಾರ್ಯನಿರ್ವಹಿಸುವುದರಿಂದ ತಮಗೆ ಪ್ರಯೋಜನವಿಲ್ಲ ಎಂದು ನೆರೆಯ ದೇಶಗಳು ದೂರ ಸರಿಯುತ್ತಿವೆ. ಭಾರತ, ನೆರೆಹೊರೆ ಸ್ನೇಹಿತರನ್ನು ಕಳೆದುಕೊಂಡು ಮಾಡುವುದಾದರು ಏನು? ಎಂಬುದು ಎಲ್ಲರ ಪ್ರಶ್ನೆಯಾಗಿದೆ.