ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Dynamic Leader Archives » Page 16 of 21 » Dynamic Leader
October 24, 2024
Home Posts tagged Dynamic Leader (Page 16)
ಸಿನಿಮಾ

ವರದಿ: ಅರುಣ್ ಜಿ.,

ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘45’ ಚಿತ್ರದ ಮುಹೂರ್ತ ಇತ್ತೀಚೆಗೆ ಮೈಸೂರಿನಲ್ಲಿ ನೆರವೇರಿತು. ದೇವರ ಮೇಲೆ ಚಿತ್ರೀಕರಿಸಲಾದ ಮೊದಲ ದೃಶ್ಯಕ್ಕೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು, ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.

‘45’ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದೊಂದು ಫಿಲಾಸಫಿಕಲ್ ಎಂಟರ್ ಟೈನರ್ ಎಂದು ಚಿತ್ರವನ್ನು ಬಣ್ಣಿಸುತ್ತಾರೆ. ಕಳೆದ ಒಂದು ವರ್ಷದಿಂದ ಈ ಚಿತ್ರದ  ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಕಥೆ ಹೇಳಿದಾಗ ತುಂಬಾ ಇಷ್ಟವಾಗಿತ್ತು. ಆ ನಂತರ ಅನಿಮೇಶನ್ ರೂಪದಲ್ಲಿ ಚಿತ್ರವನ್ನು ತೋರಿಸಿದ್ದಾರೆ. ಅವರೊಬ್ಬ ಪ್ರತಿಭಾವಂತ. ಈ ಸಿನಿಮಾದ ನಂತರ ಭಾರತದ ಟಾಪ್ ನಿರ್ದೇಶಕರ ಸಾಲಿನಲ್ಲಿ ಅರ್ಜುನ್ ಜನ್ಯ ಕೂಡ ಒಬ್ಬರಾಗುತ್ತಾರೆ ಎಂಬ ನಂಬಿಕೆಯಿದೆ. ತುಂಬಾ ಪ್ರಬುದ್ಧವಾಗಿರುವ ಪಾತ್ರ ಈ ಚಿತ್ರದಲ್ಲಿದೆ’ ಎಂದರು.

‘ಸಾಮಾನ್ಯವಾಗಿ ನಟರಿಗೆ ನಿರ್ದೇಶಕರು ಚಿತ್ರದ ಕಥೆ ಹೇಳಿದರೆ, ಅರ್ಜುನ್ ಜನ್ಯ ನನಗೆ ಚಿತ್ರವನ್ನೇ ತೋರಿಸಿದರು. ಒಂದು ಚಿತ್ರಕ್ಕೆ ನಾವು ಸಹ ಸಾಕಷ್ಟು ತಯಾರಿ ಮಾಡಿಕೊಳ್ಳುವುದರಿಂದ, ಮೊದಲು ನನ್ನ ತಂಡದ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ ಅರ್ಜುನ್ ಜನ್ಯ ಮತ್ತು ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಅವರು ಈ ಚಿತ್ರಕ್ಕೆ ಮಾಡಿಕೊಂಡ ತಯಾರಿ ಅದ್ಭುತ. ಒಬ್ಬ ನಟನಾಗಿ, ಪ್ರೇಕ್ಷಕನಾಗಿ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಯಿದೆ’ ಎಂದು ರಾಜ್ ಬಿ ಶೆಟ್ಟಿ ಹೇಳಿದರು.

‘ಮೊದಲ ಬಾರಿಗೆ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ.  ಬೋಲ್ಡ್ ಆಗಿರುವಂತ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಕೌಸ್ತುಭ ಮಣಿ.

ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಅರ್ಜುನ್ ಜನ್ಯ ಹೇಳಿದ ಕಥೆ ಬಹಳ ಇಷ್ಟವಾಯಿತಂತೆ. ‘ಚಿತ್ರದ ಘೋಷಣೆಯಾಗಿ ಹಲವು ತಿಂಗಳಾದರೂ ನಿಧಾನಕ್ಕೆ ಸಾಗುತ್ತಿತ್ತು. ಈ ಬಗ್ಗೆ ಅರ್ಜುನ್ ಜನ್ಯ ಅವರನ್ನು ಕೇಳಿದಾಗ, ಅವರು ಅನಿಮೇಶನ್ ಮೂಲಕ ಸಿನಿಮಾ ತೋರಿಸಿದರು. ಚಿತ್ರೀಕರಣ ಶುರುವಾಗುವುದಕ್ಕಿಂತ ಮೊದಲೇ, ಚಿತ್ರ ತೋರಿಸಿದರು. ನಾವು ಅಂದುಕೊಂಡಿರುವುದಕ್ಕಿಂತ ಸಿನಿಮಾ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯಿದೆ’ ಎಂದರು ರಮೇಶ್ ರೆಡ್ಡಿ.

ಕೊನೆಗೆ ಮಾತನಾಡಿದ ಅರ್ಜುನ್ ಜನ್ಯ, ‘ಚಿತ್ರೀಕರಣ ಈಗ ಶುರುವಾಗುತ್ತಿದ್ದರೂ, ಸುಮಾರು 9 ತಿಂಗಳ ಕಾಲ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಮಾಡಿ ಈಗ ಚಿತ್ರೀಕರಣಕ್ಕೆ ಹೊರಡುತ್ತಿದ್ದೇವೆ. ಮೊದಲು ಶಿವಣ್ಣ ಅವರಿಗೆ ಕಥೆ ಹೇಳಿದಾಗ, ನೀವೇ ಈ ಸಿನಿಮಾ ಮಾಡಿ ಎಂದು ಹುರುದಿಂಬಿಸಿದರು. ಈ ಚಿತ್ರದ ಮೂಲಕ ಒಂದು ದೊಡ್ಡ ಫಿಲಾಸಫಿಯನ್ನು ಸರಳ ರೀತಿಯಲ್ಲಿ, ಕ್ಲಾಸ್ ಮತ್ತು ಮಾಸ್ ಆಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು. 

‘45’ ಚಿತ್ರಕ್ಕೆ 80 ದಿನಗಳ ಕಾಲ ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಕನ್ನಡವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಮೂಡಿಬರುತ್ತಿರುವ ಈ ಚಿತ್ರವನ್ನು 2024ರಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ದೇಶ

ಕೇರಳದ ಮಸೀದಿ ಒಂದರಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಜೋಡಿಗೆ ನಡೆದಿರುವ ಮದುವೆಯ ಕುರಿತ ವೀಡಿಯೋವೊಂದನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೇರಳದ ಆಲಪ್ಪುಳ ಪ್ರದೇಶಕ್ಕೆ ಸೇರಿದ ಅಂಜು ಜೊತೆ. ಅದೇ ಭಾಗದ ಸರತ್ ಅವರೊಂದಿಗೆ ಮದುವೆಯ ನಿಶ್ಚಯವಾಗಿತ್ತು. ಮದುವೆಯ ಏರ್ಪಾಡುಗಳನ್ನು ಮಾಡಲು ಹಣವಿಲ್ಲದ ಕಾರಣ, ಅಂಜುವಿನ ತಾಯಿ, ಹತ್ತಿರದಲ್ಲಿರುವ ಮಸೀದಿಗೆ ಹೋಗಿ, ಅಲ್ಲಿ ಇದರ ಬಗ್ಗೆ ಹೇಳಿಕೊಂಡರು. ಮದುವೆಗೆ ಆಗುವ ಖರ್ಚುನ್ನು ನಾವೆ ಮಾಡಿ ಮದುವೆಯನ್ನು ನಡೆಸಿಕೊಡುವುದಾಗಿ ಜಮಾತ್ ನಿರ್ವಾಹಕರರು ಅಂಜುವಿನ ತಾಯಿಯ ಬಳಿ ತಿಳಿಸಿದರು. ಅದರಂತೆ, ಅಲ್ಲಿನ ಮಸೀದಿಯಲ್ಲಿ ಮದುವೆಗೆ ಏರ್ಪಾಡನ್ನು ಮಾಡಲಾಯಿತು.

ಮಸೀದಿಯ ಮುಖ ದ್ವಾರದಲ್ಲಿ ಬಾಳೆ ಮರವನ್ನು ಕಟ್ಟಿ ಅಲಂಕರಿಸಲಾಯಿತು. ಮಸೀದಿಯ ಒಳಗೆ ಅರ್ಚಕರು ವೇದ ಮಂತ್ರಗಳು ಪಠಿಸುವ ಮೂಲಕ ಶರತ್ – ಅಂಜು ಮದುವೆಯನ್ನು ಹಿಂದೂ ಸಂಪ್ರದಾಯದಂತೆ ನೆರೆವೇರಿಸಿಕೊಟ್ಟರು. ಈ ಮದುವೆಗೆ ಬಂದವರಿಗೆ ಮಸೀದಿಯ ಆವರಣದಲ್ಲೇ ಸಸ್ಯಾಹಾರಿ ಉಪಹಾರವನ್ನು ನೀಡಲಾಯಿತು.

ಎರಡು ವರ್ಷಗಳ ಹಿಂದೆ ನಡೆದ ಈ ಘಟನೆಯ ವಿಡಿಯೋವನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್, ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಅದರಲ್ಲಿ ‘ಇದು ಮತ್ತೊಂದು ಕೇರಳದ ಸ್ಟೋರಿ’ ಎಂಬ ಶೀರ್ಷಿಕೆಯಲ್ಲಿ ‘ಮನುಕುಲದ ಮೇಲಿನ ಪ್ರೀತಿ ಬೇಷರತ್ತಾಗಿರಬೇಕು ಮತ್ತು ಸಾಂತ್ವನವಾಗಿರಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

ಕೇರಳದ ಹಿಂದೂ ಮಹಿಳೆಯರನ್ನು ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ, ಅವರನ್ನು ಬ್ರೈನ್ ವಾಶ್ ಮಾಡಿ, ಭಯೋತ್ಪಾದಕ ಸಂಘಟನೆಗೆ ಸೇರಿಸುವುದೇ ‘ದಿ ಕೇರಳ ಸ್ಟೋರಿ’ ಚಿತ್ರದ ಕಥಾಹಂದರ. ಈ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ವಿಚಾರ ಕೇರಳ ರಾಜಕೀಯದಲ್ಲಿ ವಿವಾದವನ್ನು ಸೃಷ್ಠಿಸಿರುವ ಈ ಸಂದರ್ಭದಲ್ಲಿ, ರೆಹಮಾನ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ವೈರಲ್ ಆಗಿದೆ.

ರಾಜಕೀಯ

“ಮಣಿಪುರ ಹೊತ್ತಿ ಉರಿಯುತ್ತಿದೆ! ಮಣಿಪುರದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ! ಪ್ರಧಾನಿ ಮತ್ತು ಗೃಹ ಸಚಿವರು ಕರ್ನಾಟಕದಲ್ಲಿ ರೋಡ್ ಷೋ ಮಾಡುತ್ತ ಬ್ಯುಸಿಯಾಗಿದ್ದಾರೆ”! ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.

“ಎಲ್ಲಾ ಗಲಭೆಗಳು ನಡೆಯೋದು ಬಿಜೆಪಿ ಆಡಳಿತದಲ್ಲೇ ಏಕೆ? ಗುಜರಾತ್ ಗಲಭೆ: ಬಿಜೆಪಿ ಸರ್ಕಾರ, ತ್ರಿಪುರ ಗಲಭೆ: ಬಿಜೆಪಿ ಸರ್ಕಾರ, ಬೆಂಗಳೂರು ಗಲಭೆ: ಬಿಜೆಪಿ ಸರ್ಕಾರ, ದೆಹಲಿ ಗಲಭೆ: ಬಿಜೆಪಿ ಸರ್ಕಾರ, ಈಗ ಮಣಿಪುರ ಗಲಭೆ: ಬಿಜೆಪಿ ಸರ್ಕಾರ. ಬಿಜೆಪಿ ಆಡಳಿತದಲ್ಲಿ ಜನರಿಗೆ ತಮ್ಮ ಸ್ವಂತ ಮನೆಯೊಳಗೇ ರಕ್ಷಣೆ ಇಲ್ಲವಾದಾಗ ದೇಶದ ರಕ್ಷಣೆ ಸಾಧ್ಯವೇ?

ನಿಜವಾದ ಭಜರಂಗಿಗಳು (ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ನೋವು ತಾಳದೆ ಪ್ರತಿಭಟಿಸುತ್ತಿದ್ದಾರೆ. ನರೇಂದ್ರ ಮೋದಿ ಅವರೇ, ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ. ಅಲ್ಲೂ “ಬಜರಂಗಿ ಪುನಿಯಾ” ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ. ನಿಮಗೆ ಆ ಅಸಲಿ ಬಜರಂಗಿಗಳ ಹಿತ ಬೇಡವೇ?

ಬಜರಂಗದಳ ಬಿಜೆಪಿಯ ಮುದ್ದಿನ ಕೂಸು ಎಂದಾದರೆ, ದಿನೇಶ್ ನಾಯ್ಕ ಎಂಬ ದಲಿತನ ಕೊಲೆಯ ಹೊಣೆಯನ್ನು ಬಿಜೆಪಿ ಹೊರಲಿ; ಮಂಗಳೂರಿನ ಪಬ್ ದಾಳಿಯ ಹೊಣೆಯನ್ನು ಬಿಜೆಪಿ ಹೊರಲಿ; ಸಮಾಜಘಾತುಕ ಕೃತ್ಯಗಳೆಲ್ಲದರ ಹೊಣೆಯನ್ನು ಬಿಜೆಪಿಯೇ ಹೊರಲಿ; ನಂತರ ಬಜರಂಗದಳವನ್ನು ಸಮರ್ಥಿಸಿಕೊಳ್ಳಲಿ.

ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವ ಬಜರಂಗದಳ, PFI ಸೇರಿದಂತೆ ಯಾವುದೇ ಸಂಘಟನೆಯ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರೆ ಉರಿದು ಬೀಳುವ ಬಿಜೆಪಿ ಸಂವಿಧಾನ ಬದಲಿಸುತ್ತೇವೆ ಎಂದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ನರೇಂದ್ರ ಮೋದಿ ಅವರೇ ಹಾಗೂ ಬಿಜೆಪಿಗೆ ಸಂವಿಧಾನ ಮುಖ್ಯವೇ, ಸಂವಿಧಾನ ವಿರೋಧಿ ಸಂಘಟನೆಗಳು ಮುಖ್ಯವೇ? ಸ್ಪಷ್ಟಪಡಿಸಿ ನಂತರ ಮಾತಾಡಲಿ.

ಬಜರಂಗದಳ ಬಿಜೆಪಿಯ ಅಂಗಸಂಘಟನೆಯೇ? ಇಷ್ಟೊಂದು ಮಮಕಾರ ತೋರುವ ಕರ್ನಾಟಕ ಬಿಜೆಪಿ, ಬಜರಂಗದಳದವರಿಗೆ ಎಷ್ಟು ಟಿಕೆಟ್ ನೀಡಿದೆ? ಹಿರಿಯರ ನಾಯಕತ್ವವನ್ನು ಮುಗಿಸಲು ಅವರ ಮಕ್ಕಳು, ಸೊಸೆಯಂದಿರು, ಪತ್ನಿಯರಿಗೆ ಟಿಕೆಟ್ ನೀಡುವ ಬದಲು ಬಜರಂಗದಳದವರಿಗೆ ಟಿಕೆಟ್ ನೀಡಿಲ್ಲವೇಕೆ? ಅಮಾಯಕ ಹುಡುಗರನ್ನು ಕಾನೂನು ವಿರೋಧಿ ಕೃತ್ಯಗಳಿಗೆ ಬಳಸಿ ಲಾಭ ಪಡೆಯುವುದು ಮಾತ್ರ ಬಿಜೆಪಿಯ ಕೆಲಸವೇ?

ಬಜರಂಗದಳ ಅತ್ಯತ್ತಮ ಸಂಘಟನೆಯಾಗಿದ್ದರೆ ಅಮಿತ್ ಶಾ ಅವರು ತಮ್ಮ ಮಗನನ್ನು BCCI ಹುದ್ದೆಯಿಂದ ಕಿತ್ತು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ನೇಮಿಸಲಿ. ಬೊಮ್ಮಾಯ್ ತಮ್ಮ ಮಗನ ಉದ್ಯಮವನ್ನು ಮುಚ್ಚಿಸಿ ರಾಜ್ಯಾಧ್ಯಕ್ಷನನ್ನಾಗಿ ಮಾಡಲಿ. ಬಿಜೆಪಿಗರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಡವರ, ದಲಿತ, ಹಿಂದುಳಿದವರ ಮಕ್ಕಳನ್ನು ಬಳಸಿ ಕೋರ್ಟು, ಕೇಸಿಗೆ ಅಲೆಯುವಂತೆ ಮಾಡುವುದನ್ನು ಬಿಡಲಿ.

ಬಜರಂಗದಳ ಬಗ್ಗೆ ಭಯಂಕರವಾಗಿ ಮಾತನಾಡುವ ಕರ್ನಾಟಕ ಬಿಜೆಪಿ ನಾಯಕರು ಉತ್ತರಿಸಲಿ. ಸಿ.ಟಿ.ರವಿ ಮಕ್ಕಳು, ಬಜರಂಗದಳದ ಯಾವ ಹುದ್ದೆಯಲ್ಲಿದ್ದಾರೆ? ಆರ್.ಅಶೋಕ್ ಮಗ ಬಜರಂಗದಳಲ್ಲಿ ಏನು ಕೆಲಸ ಮಾಡುತ್ತಿದ್ದಾರೆ? ತೇಜಶ್ವಿ ಸೂರ್ಯ ಏಕೆ ಬಜರಂಗದಳ ಸೇರಿಲ್ಲ? ಬೊಮ್ಮಾಯ್ ಮಗ ಬಜರಂಗದಳ ಸೇರಿ ಬೆಂಕಿ ಹಚ್ಚುವುದನ್ನು ಬಿಟ್ಟು ಉದ್ಯಮಿಯಾಗಿದ್ದೇಕೆ”? ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ಬಿಜೆಪಿಯ ವಿರುದ್ಧ ಕೆಂಡ ಕಾರಿದೆ.

ಸಿನಿಮಾ

ಡಿ.ಸಿ.ಪ್ರಕಾಶ್ ಸಂಪಾದಕರು

‘ದಿ ಕೇರಳ ಸ್ಟೋರಿ’ ಚಿತ್ರದ ಕಥೆಯು ಕೇರಳದ ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಗೊಳಿಸಿ ಐಸ್‌ಐಸ್ ಸಂಘಟನೆಗೆ ಸೇರಿಸುವುದಾಗಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾ ಕೇರಳ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಗಮನ ಸೆಳೆದಿದೆ. ಭಾರಿ ವಿವಾದವನ್ನು ಸೃಷ್ಠಿಸಿರುವ ಈ ಚಿತ್ರವು ಮೇ 5 ರಂದು ತೆರೆಗೆ ಬರಲಿದೆ. ಕೇರಳದ ಆಡಳಿತ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ, ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.

ಈ ಚಿತ್ರದ ಟೀಸರ್ ನವೆಂಬರ್ 2 ರಂದು ಬಿಡುಗಡೆಯಾಗಿದೆ. ಅದರಲ್ಲಿ ಕೇರಳದಲ್ಲಿ ಕಾಣೆಯಾಗಿರುವ 32,000 ಮಹಿಳೆಯರ ಹಿನ್ನೆಲೆಯನ್ನು ಚಿತ್ರ ಬಹಿರಂಗಪಡಿಸಲಿದೆ ಎಂದು ಹೇಳಲಾಗಿತ್ತು. ಸಾಮಾನ್ಯ ಮಹಿಳೆಯರನ್ನು ಭಯೋತ್ಪಾದಕರನ್ನಾಗಿಸುವ ಅಪಾಯಕಾರಿ ಆಟ ಕೇರಳದಲ್ಲಿ ಎಲ್ಲರ ಕಣ್ಮುಂದೆ ನಡೆಯುತ್ತಿದೆ ಎಂದೂ ಹೇಳಿದೆ.

ಈ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ‘ದಿ ಕೇರಳ ಸ್ಟೋರಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು. ಅದರಲ್ಲಿ ಕೇರಳದ ಕಾಲೇಜು ಹಾಸ್ಟೆಲ್‌ ಒಂದರ ಕೊಠಡಿಯಲ್ಲಿ ನಾಲ್ವರು ಮಹಿಳೆಯರು ತಂಗಿರುತ್ತಾರೆ. ಅವರಲ್ಲಿ ಒಬ್ಬ ಮುಸ್ಲಿಂ ಮಹಿಳೆಯು ಇರುತ್ತಾಳೆ. ಆ ಮುಸ್ಲಿಂ ಮಹಿಳೆಯನ್ನು ಅನುಸರಿಸುವ ಉಳಿದ ಮಹಿಳೆಯರು ಸಹ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ನಂತರ ಐಸ್‌ಐಸ್ ಭಯೋತ್ಪಾದಕ ಸಂಘಟನೆಗೆ ಕೆಲಸ ಮಾಡಲು ಗಡಿಪಾರು ಮಾಡುವ ದೃಶ್ಯಗಳಿವೆ.

ಅದಾ ಶರ್ಮಾ ಹಿಂದೂ ಹುಡುಗಿ ಶಾಲಿನಿ ಉನ್ನಿಕೃಷ್ಣನ್ ಪಾತ್ರದಲ್ಲಿ ನಟಿಸಿದ್ದಾರೆ. ‘ಲವ್ ಜಿಹಾದ್’ ಮೂಲಕ ಆಕೆಯನ್ನು ಪ್ರೇಮದ ಬಲೆಗೆ ಬೀಳಿಸಿ, ಮುಸ್ಲಿಂ ಹುಡುಗಿ ಫಾತಿಮಾಳಾಗಿ ಪರಿವರ್ತಿಸಲಾಗುತ್ತದೆ. ನಂತರ ಶಾಲಿನಿ ಸೇರಿದಂತೆ 48 ಜನರನ್ನು ಐಸ್‌ಐಸ್ ಗಾಗಿ ಕೆಲಸ ಮಾಡಲು ವಿದೇಶಕ್ಕೆ ಕರೆದೊಯ್ಯುವ ದೃಶ್ಯಗಳು ಬರುತ್ತವೆ.

ಮತ್ತೊಂದು ದೃಶ್ಯದಲ್ಲಿ, ಇತರ ಮಹಿಳೆಯರೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿರುವ ಮುಸ್ಲಿಂ ರೂಪದ ಕೆಲವು ಯುವಕರು,  ಮಹಿಳೆಯರನ್ನು ತಮ್ಮ ಬಳಿಗೆ ಒಪ್ಪಿಸುವಂತೆ ಹೇಳುತ್ತಾರೆ. ನಂತರ ಶಾಲಿನಿ ಉನ್ನಿಕೃಷ್ಣನ್ ಅವರನ್ನು ಮತಾಂತರಗೊಳಿಸಿ, ಮದುವೆಯಾಗಿ, ಪಾಕಿಸ್ತಾನಕ್ಕೆ ಕಳ್ಳಸಾಗಣೆ ಮಾಡುವ ದೃಶ್ಯಗಳಿವೆ. ಇನ್ನು 20 ವರ್ಷಗಳಲ್ಲಿ ಕೇರಳ ಇಸ್ಲಾಮಿಕ್ ರಾಜ್ಯವಾಗಲಿದೆ ಎಂದು ಕೇರಳದ ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳಿರುವ ಒಂದು ಸಾಲು ಟ್ರೈಲರ್ ನಲ್ಲಿದೆ. ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಎಂಬ ನಾಲ್ಕು ಭಾಷೆಗಳಲ್ಲಿ ಮೇ 5 ರಂದು ಬಿಡುಗಡೆಯಾಗಲಿದೆ.

ಇಂತಹ ಚಿತ್ರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ. “ದಿ ಕೇರಳ ಸ್ಟೋರಿ’ ಚಿತ್ರದ ಟ್ರೇಲರ್ ಜಾತ್ಯತೀತತೆಯ ನೆಲೆಗಟ್ಟಿನ ಕೇರಳವನ್ನು ಧಾರ್ಮಿಕ ಉಗ್ರವಾದದ ಕೇಂದ್ರವೆಂದು ಬಿಂಬಿಸಲು ಸಂಘಪರಿವಾರ ಹೊರಟಿದೆ. ಸಂಘಪರಿವಾರವು ನಕಲಿ ಕಥೆಗಳೊಂದಿಗೆ ಚಿತ್ರಗಳ ಮೂಲಕ ಪ್ರತ್ಯೇಕತಾವಾದಿ ರಾಜಕೀಯವನ್ನು ಹರಡಲು ಪ್ರಯತ್ನಿಸುತ್ತಿದೆ. ಅವರು ಯಾವುದೇ ಸತ್ಯ ಅಥವಾ ಪುರಾವೆಗಳಿಲ್ಲದೆ ಪುರಾಣಗಳನ್ನು ಹರಡುತ್ತಿದ್ದಾರೆ.

ಈ ಚಿತ್ರವು ಸುಳ್ಳನ್ನು ಹಬ್ಬಿಸುತ್ತಿರುವ ಸಂಘಪರಿವಾರದ ಕಾರ್ಖಾನೆಯ ಉತ್ಪನ್ನವಾಗಿದೆ. ಕೇರಳದಲ್ಲಿ ಚುನಾವಣಾ ರಾಜಕೀಯದಲ್ಲಿ ಲಾಭ ಗಳಿಸಲು ಸಂಘಪರಿವಾರವು ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ `ದಿ ಕೇರಳ ಸ್ಟೋರಿ’ ಸಿನಿಮಾ ಕೂಡ ಒಂದು” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ.

ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಿರುವನಂತಪುರಂ ಸಂಸದ ಶಶಿ ತರೂರ್, “ಇದು ನಿಮ್ಮ ಕೇರಳದ ಕಥೆಯಾಗಿರಬಹುದು. ಆದರೆ ಇದು ನಮ್ಮ ಕೇರಳದ ಕಥೆಯಲ್ಲ” ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕೇರಳ ವಿಧಾನಸಭೆಯ ವಿರೋಧಪಕ್ಷದ ನಾಯಕ ವಿ.ಡಿ.ಸತೀಶನ್ ಮಾತನಾಡಿ, “ಈ ಚಿತ್ರವು ಸುಳ್ಳಿನಿಂದ ಕೂಡಿದೆ. ಇದರಲ್ಲಿ ಮುಸ್ಲಿಮರನ್ನು ಬಹಳ ತಪ್ಪಾಗಿ ನಿರೂಪಿಸಲಾಗಿದೆ. ಸುಳ್ಳಿನ ಕಂತೆಯಾಗಿರುವ ಈ ಚಿತ್ರದಲ್ಲಿ ಕೇರಳದ 32,000 ಮಹಿಳೆಯರನ್ನು ಮತಾಂತರ ಮಾಡಿ ಐಸ್‌ಐಸ್ ಭಯೋತ್ಪಾದನಾ ಸಂಘಟನೆಗಳು ಇರುವ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿದೆ.

ದ್ವೇಷದ ಬೀಜಗಳನ್ನು ಬಿತ್ತಿ, ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ. ಕೇರಳದ ಕೀರ್ತಿಯನ್ನು ಕೆಡಿಸುವುದು ಅವರ ಉದ್ದೇಶವಾಗಿದೆ. ಇದರ ಹಿಂದೆ ಸಂಘಪರಿವಾರದ ಕೈವಾಡವಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಬಾರದು” ಎಂದು ಹೇಳಿದ್ದಾರೆ.

ಇತ್ತೀಚೆಗೆ ‘ಲವ್ ಜಿಹಾದ್’ ಎಂಬ ಪದವನ್ನು ಕೇರಳದಲ್ಲೂ ಸೃಷ್ಟಿಸಲಾಗಿದೆ. ‘ಹಿಂದೂ ಯುವತಿಯರನ್ನು ಪ್ರೀತಿಸಿ, ಮತಾಂತರಕ್ಕೆ ಒತ್ತಾಯಿಸುವ ಮುಸ್ಲಿಂ ಯುವಕರು ಆ ಮಹಿಳೆಯರನ್ನು ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾದಂತಹ ದೇಶಗಳಿಗೆ ಕಳ್ಳಸಾಗಣೆ ಮಾಡಿ, ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗೆ ಬಳಸಿಕೊಳ್ಳುತ್ತಾರೆ’ ಎನ್ನುವುದು ‘ಲವ್ ಜಿಹಾದ್’ ಅರ್ಥ ಎನ್ನಲಾಗುತ್ತಿದೆ.

ಕೇರಳದಲ್ಲಿ ಲವ್ ಜಿಹಾದ್ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಿರುವಾಗಲೇ, ‘‘ನಮ್ಮ ಕಾನೂನಿನಲ್ಲಿ ಲವ್ ಜಿಹಾದ್ ಎಂಬುದೇ ಇಲ್ಲ. ಅಂತಹ ಯಾವುದೇ ಪ್ರಕರಣ ಎಲ್ಲಿಯೂ ವರದಿಯಾಗಿಲ್ಲ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಹೇಳಿವೆ” ಎಂದು 2020ರಲ್ಲಿ ಸಂಸತ್ತಿನಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿದರು.

ಈ ನಡುವೆ, ಕೇರಳದಲ್ಲಿ 32,000 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ಮತ್ತು ಹಿಂದೂ ಮಹಿಳೆಯರನ್ನು ಪ್ರೀತಿಸಿ, ಬಲವಂತವಾಗಿ ಮತಾಂತರಗೊಳಿಸಿ, ಅವರನ್ನು ಇಸ್ಲಾಮಿಕ್ ರಾಷ್ತ್ರಗಳಿಗೆ ಅಪಹರಣ ಮಾಡಲಾಗುತ್ತಿದೆ ಎಂದು ಚಲನಚಿತ್ರ ನಿರ್ಮಿಸಲಾಗಿದೆ. ಚಿತ್ರದ ನಿರ್ದೇಶಕರು, ನಾಲ್ಕು ವರ್ಷಗಳ ಕಾಲ ಕೇರಳದಲ್ಲಿ ಫೀಲ್ಡ್ ರಿಸರ್ಚ್ ಮಾಡಿ, ವಾಸ್ತವ ಮಾಹಿತಿ ಆಧರಿಸಿ ‘ದಿ ಕೇರಳ ಸ್ಟೋರಿ’ ಮಾಡಿದ್ದಾರೆ ಎಂದು ಚಿತ್ರತಂಡದವರು ಹೇಳುತ್ತಿದ್ದಾರೆ. ಇದನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳು ಸಂಸತ್ತಿನಲ್ಲಿ ಕೇಂದ್ರ ಸಚಿವರೇ ನಿರಾಕರಿಸಿರುವಾಗ ನಕಲಿ ಮಾಹಿತಿ ಬಳಸಿ ಸಿನಿಮಾ ಮಾಡುವುದು ಹೇಗೆ ಎಂದು ಪ್ರಶ್ನಿಸುತ್ತಿವೆ.

ಚಿತ್ರ ಮೇ 5 ರಂದು ಬಿಡುಗಡೆಯಾಗುತ್ತಿದೆ. ಆಡಳಿತಾರೂಢ ಮಾರ್ಕ್ಸ್‌ವಾದಿ ಪಕ್ಷದ ವಿರೋಧದಿಂದಾಗಿ ಕೇರಳದಲ್ಲಿ ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಬೇರೆ ರಾಜ್ಯಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ಶಾಂತಿ, ಧಾರ್ಮಿಕ ಸೌಹಾರ್ದತೆ ಕದಡುವ ಸಿನಿಮಾ ಮಾಡುವುದು ಸರಿಯಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.

ಹಿಂದಿ ಚಲನಚಿತ್ರ ದಿ ಕೇರಳ ಸ್ಟೋರಿ ಬಿಡುಗಡೆಯನ್ನು ತಡೆಯುವ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವುದು ಗಮನಾರ್ಹ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

2014ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ಪ್ರತಿ ತಿಂಗಳ ಕೊನೆಯ ಭಾನುವಾರದಂದು `ಮನ್ ಕಿ ಬಾತ್’ (ಮನಸ್ಸಿನ ಧ್ವನಿ) ಹೆಸರಿನಲ್ಲಿ ರೇಡಿಯೋ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.

ಪ್ರಧಾನಿ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ತಮ್ಮ 100ನೇ ಮನ್ ಕಿ ಬಾತ್ ಭಾಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 2014ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ಪ್ರತಿ ತಿಂಗಳ ಕೊನೆಯ ಭಾನುವಾರದಂದು `ಮನ್ ಕಿ ಬಾತ್’ ಹೆಸರಿನಲ್ಲಿ ರೇಡಿಯೋ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಇದರ 100ನೇ ಭಾಷಣವನ್ನು ಏಪ್ರಿಲ್ 30 ರಂದು ವಿಶ್ವಸಂಸ್ಥೆಯಿಂದ ಹಿಡಿದು ಅಮೆರಿಕ, ಲಂಡನ್ ಮತ್ತು ಆಸ್ಟ್ರೇಲಿಯಾದವರೆಗೆ ಆಚರಿಸಲಾಯಿತು. ಭಾರತವೊಂದರಲ್ಲೇ ಪ್ರಧಾನಿ ಮೋದಿಯವರ 100ನೇ ಭಾಷಣ ಸಾವಿರಾರು ಸ್ಥಳಗಳಲ್ಲಿ ಪ್ರಸಾರವಾಯಿತು.

ಹೀಗಿರುವಾಗ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ಭಾಷಣದಿಂದ ಜನರಲ್ಲಿ ಆಗುವ ಪರಿಣಾಮಗಳೇನು? ಇದರಿಂದ ಪ್ರಧಾನಿ ಮೋದಿ ಏನನ್ನು ಸಾಧಿಸುತ್ತಿದ್ದಾರೆ? ಇದರ ಬಗ್ಗೆ ಕೆಲವು ಹಿರಿಯ ಬಿಜೆಪಿ ನಾಯಕರೊಂದಿಗೆ ಮಾತನಾಡಿದಾಗ,

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಅಮೆರಿಕಾದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಮತ್ತು ಭಾರತೀಯ ಸಮುದಾಯದ ಸದಸ್ಯರು ಯುಎಸ್‌ನ ನ್ಯೂಜೆರ್ಸಿಯಲ್ಲಿ ಪ್ರಧಾನ ಮಂತ್ರಿಯವರ ‘ಮನ್ ಕಿ ಬಾತ್’ ನ 100 ನೇ ಸಂಚಿಕೆಯನ್ನು ಆಲಿಸಿದರು. ಪಿಟಿಐ

“ಈಶಾನ್ಯ ರಾಜ್ಯಗಳಿಂದ ಥಾರ್ ಮರುಭೂಮಿಯವರೆಗೆ, ಕಾರ್ಗಿಲ್ ಹಿಮ ಪ್ರದೇಶದಿಂದ ಕನ್ಯಾಕುಮಾರಿ ಸಮುದ್ರದ ಮೀನುಗಾರರವರೆಗೆ, ಪ್ರಧಾನಿ ಮೋದಿ ರೇಡಿಯೊ ಮೂಲಕ ಎಲ್ಲಾ ಪ್ರದೇಶಗಳ ಜನರನ್ನು ತಲುಪಿದ್ದಾರೆ. ಈ ಭಾಷಣದ ಮೂಲಕ ಸಮಾಜದ ಕಟ್ಟಕಡೆಯ ಜನರು ಮಾಡುವ ಒಳ್ಳೆಯ ಕೆಲಸಗಳನ್ನೂ ಸಾರ್ವಜನಿಕವಾಗಿ ಹೊಗಳಿದ್ದಾರೆ. ಸಾಮಾನ್ಯವಾಗಿ ನಾವು ರಾಷ್ಟ್ರದ ಹೆಮ್ಮೆಯನ್ನು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರಿಗೆ ಹೋಲಿಕೆ ಮಾಡಿ ಹೆಚ್ಚು ಮಾತನಾಡುತ್ತೆವೆ. ಆದರೆ ಸಾಮಾಜಿಕವಾಗಿ ಕೆಳ ಹಂತದಲ್ಲಿರುವ ಜನರು ಹೇಗೆ ಅತ್ಯುತ್ತಮವಾಗಿದ್ದರೆ ಎಂಬುದರ ಕುರಿತು ಪ್ರಧಾನಿ ಮೋದಿ ಮಾತನಾಡುತ್ತಾರೆ.

ಕುಂಬಾರ, ಕ್ಷೌರಿಕ, ಮರವನ್ನು ನೆಟ್ಟ ಮುದುಕಿ, ಬಾಳೆಲೆಯಲ್ಲಿ ಕರಕುಶಲ ಮಾಡುವ ಮಹಿಳೆಯಂತೆ ಸರಳ ಜನರ ಬಗ್ಗೆ ಮಾತನಾಡುತ್ತಾರೆ. ಪ್ರಜಾಪ್ರಭುತ್ವದ ಅಭಿವೃದ್ಧಿ ಎಂದರೆ ತಪ್ಪು ಮಾಡಿದವರನ್ನು ಶಿಕ್ಷಿಸುವುದು ಮಾತ್ರವಲ್ಲ; ಒಳ್ಳೆಯವರನ್ನು ಪ್ರಶಂಶಿಸುವುದು ಕೂಡ. ಒಳ್ಳೆಯದನ್ನು ಮಾಡುವ ಸಾಮಾನ್ಯ ಜನರನ್ನು ಪ್ರಧಾನಿ ಮೋದಿ ಬಡಿದೆಬ್ಬಿಸುತ್ತಿದ್ದಾರೆ. ಇದು ಆ ಜನರಲ್ಲಿ ಭಾರೀ ಪ್ರಭಾವ ಮತ್ತು ಉತ್ಸಾಹವನ್ನು ಸೃಷ್ಟಿಸುತ್ತಿದೆ. ಪ್ರಧಾನಿಯವರ ವ್ಯಕ್ತಿತ್ವದ ಮೋಡಿ ಜನರನ್ನು ಆಕರ್ಷಿಸಿದೆ. ಇದೆಲ್ಲದಕ್ಕೂ ಮನ್ ಕಿ ಬಾತ್ ಭಾಷಣದ ಮೂಲಕ ಅವಕಾಶ ಕಲ್ಪಿಸಲಾಗಿದೆ” ಎಂದು ಹೇಳುತ್ತಾರೆ.

ದೆಹಲಿಯಲ್ಲಿ ರೈತರ ಹೋರಾಟ

ಪ್ರಧಾನಿಯಾಗಿ ದೇಶದ ಜನರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಹಾಗೂ ಒಳ್ಳೆಯ ವಿಷಯಗಳನ್ನು ಪ್ರಶಂಶಿಸಲು ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ ಮೂಲಕ ರೇಡಿಯೋ ಭಾಷಣ ಮಾಡುತ್ತಿರುವುದು ಒಂದು ಸಾಧನೆಯೇ; ಅದರಲ್ಲಿ ಎರಡು ಮಾತಿಲ್ಲ. ಆದರೆ, ಅವರ ಮಾತಿಗೂ ನಡವಳಿಕೆಗೂ ಯಾವುದೇ ಸಂಬಂಧವಿಲ್ಲ. ಅವರು ಜನರಿಗಾಗಿ ಮಾತನಾಡುತ್ತಿದ್ದಾರೆ ಎಂದರೆ, ರೈತರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ದೆಹಲಿಯಲ್ಲಿ ಒಂದು ವರ್ಷಕ್ಕೂ ಮೇಲಾಗಿ ಹೋರಾಟ ನಡೆಸುತ್ತಿದ್ದಾಗ ಅವರನ್ನು ಭೇಟಿ ಮಾಡಲಿಲ್ಲ. ಅವರ ಸಮಸ್ಯೆಯನ್ನೂ ಕೇಳಲಿಲ್ಲ. ಕನಿಷ್ಠ ಕೃಷಿ ಸಚಿವರನ್ನಾದರೂ ಅಲ್ಲಿಗೆ ಕಳುಹಿಸಿಕೊಡುವ ಆಲೋಚನೆ ಮಾಡಲಿಲ್ಲ.

ಕುಸ್ತಿ ಪಟುಗಳೊಂದಿಗೆ ಪ್ರಿಯಾಂಕಾ ಗಾಂಧಿ

ಈಗಲೂ ದೆಹಲಿಯಲ್ಲಿ ಮಹಿಳಾ ಕುಸ್ತಿಪಟುಗಳು ಪರದಾಡುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಲು ಕೂಡ ಪ್ರಧಾನಿ ಮೋದಿ ಸಿದ್ಧರಿಲ್ಲ! ಆದರೆ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೇಳಿದರು. ಅವರ ಜೊತೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿ ಸಾಂತ್ವನ ಹೇಳಿದರು.

1977ರಲ್ಲಿ ಬಿಹಾರದ ಬೆಲ್ಚಿಯಲ್ಲಿ ಇಂದಿರಾಗಾಂಧಿ

1977ರಲ್ಲಿ ಬಿಹಾರದ ಬೆಲ್ಚಿಯಲ್ಲಿ 10ಕ್ಕೂ ಹೆಚ್ಚು ದಲಿತರನ್ನು ಜಾತಿ ಭೂಮಾಲೀಕರ ಗುಂಪು ಗುಂಡಿಕ್ಕಿ ಕೊಂದಿತು. ಅಂದು ಇಂದಿರಾಗಾಂಧಿಯವರು ಅತಿವೃಷ್ಟಿ, ನದಿಯಲ್ಲಿನ ಪ್ರವಾಹ, ಕೆಸರುಮಯವಾದ ರಸ್ತೆ ಹೀಗೆ ನಾನಾ ಅಡೆತಡೆಗಳನ್ನು ದಾಟಿ 10 ಕಿ.ಮೀ.ಗೂ ಹೆಚ್ಚು ದೂರ ಆನೆಯ ಮೇಲೆ ಕುಳಿತು ಸಂತ್ರಸ್ತರ ಕುಟುಂಬದವರನ್ನು ಖುದ್ದಾಗಿ ಭೇಟಿ ಮಾಡಿ ಸಾಂತ್ವನ ಹೇಳಿದರು! ಅವರು ಆ ಜನರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಿದರು. ರಾಜೀವ್ ಗಾಂಧಿ ಕೂಡ ಅದನ್ನೇ ಮಾಡಿದರು.

ರಾಹುಲ್ ಗಾಂಧಿ

ಆ ಸಾಲಿನಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಮೂಲಕ ದೇಶದ ಜನರನ್ನು ಖುದ್ದು ಭೇಟಿಯಾದರು. ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. “ಎಲ್ಲೆಲ್ಲಿ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೋ ಅಲ್ಲಲ್ಲೇ ಅವರ ಅಹವಾಲನ್ನು ಆಲಿಸಬೇಕು” ಎಂಬ ನೆಹರೂ ಕುಟುಂಬದ ಪರಂಪರೆಯೇ ಇದಕ್ಕೆಲ್ಲ ಮೂಲ ಕಾರಣ.

ಆದರೆ ಪ್ರಧಾನಿ ಮೋದಿಯವರು ಟಿವಿ ಮತ್ತು ಮನ್ ಕಿ ಬಾತ್ ರೇಡಿಯೊದಲ್ಲಿ ಮಾತ್ರ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಆದರೆ, ಅವರು ಜನರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಲು ಸಿದ್ಧರಿಲ್ಲ. ದೇಶದ ಚುನಾಯಿತ ಪ್ರಧಾನಿಗೆ ಪ್ರಜಾಪ್ರಭುತ್ವದ ಪ್ರಜ್ಞೆ ಇರಬೇಕು. ಸಂಸತ್ತಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಸಂಸದರನ್ನು ಹೊಂದಿದ್ದಾರೆ. ಆದರೆ, ಅವರು ಸಂಸದೀಯ ಪ್ರಜಾಪ್ರಭುತ್ವವಾದಿಯಾಗಿಲ್ಲ! ಜನರಿಗೆ ಮೋದಿ ಮೇಲೆ ನಂಬಿಕೆ ಇಲ್ಲ. ಯಾಕೆಂದರೆ ಮೋದಿ ಪ್ರಜಾಪ್ರಭುತ್ವವಾದಿಯಲ್ಲ! ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ವಾಧಿಕಾರಿ!

ಸಿನಿಮಾ

ವರದಿ: ಅರುಣ್ ಜಿ.,

ವಿದ್ಯಾ ಶ್ರೀಮುರಳಿ ಅರ್ಪಿಸುತ್ತಿರುವ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಶುಭಕೋರಿದ ನಟ ಶ್ರೀಮುರಳಿ.

ವಿದ್ಯಾ ಶ್ರೀಮುರಳಿ ಅರ್ಪಿಸುವ, F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ “ಮ್ಯಾಟ್ನಿ” ಚಿತ್ರ ಜೂನ್‌ನಲ್ಲಿ ಬಿಡುಗಡೆಯಾಗಲಿದೆ‌. ಈಗ ಅದೇ ಸಂಸ್ಥೆಯ ಲಾಂಛನದಲ್ಲಿ “ಎಲ್ಲಾ ನಿನಗಾಗಿ” ಎಂಬ ನೂತನ ಚಿತ್ರ ಆರಂಭವಾಗಿದೆ‌. ವಿದ್ಯಾ ಶ್ರೀಮುರಳಿ ಅವರೆ ಈ ಚಿತ್ರವನ್ನೂ ಅರ್ಪಿಸುತ್ತಿದ್ದಾರೆ‌. ರಾಹುಲ್ ಆರ್ಕಾಟ್ ಹಾಗೂ ಧನ್ಯ ರಾಮಕುಮಾರ್ ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕಾಶಿ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ನೂತನ ಚಿತ್ರದ‌ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣ ಮಹಾಲಕ್ಷ್ಮಿ ಲೇಔಟ್‌ನ ಪಂಚಮುಖಿ ದೇವಸ್ಥಾನದಲ್ಲಿ ನೆರವೇರಿತು. ಖ್ಯಾತ ನಟ ಶ್ರೀಮುರಳಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ “ಎಲ್ಲಾ ನಿನಗಾಗಿ” ಎಂದು ಹೆಸರಿಡಲಾಗಿದೆ. ಮೇ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ರಾಜಕೀಯ

ತುಮಕೂರು: “ಕಳೆದ 3 ವರ್ಷಗಳಿಂದ ಬಿಜೆಪಿ ಮಾಡುತ್ತಿರುವ ಏಕೈಕ ಕೆಲಸವೆಂದರೆ ಅದು ಭ್ರಷ್ಟಾಚಾರ ಮಾತ್ರ. ಇದರಿಂದಾಗಿ ಕರ್ನಾಟಕದ ಜನತೆ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆಯುತ್ತಾರೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ  .

ತುಮಕೂರುನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುತ್ತಾರೆ, ಬಂದು ತಮ್ಮ ಬಗ್ಗೆ ಮಾತ್ರವೇ ಮಾತನಾಡುತ್ತಾರೆ. ಕರ್ನಾಟಕ ಚುನಾವಣೆ ತನ್ನ ಬಗ್ಗೆ ಅಲ್ಲ ಎಂಬುದನ್ನು ನರೇಂದ್ರ ಮೋದಿ ಅರ್ಥಮಾಡಿಕೊಳ್ಳಬೇಕು ಎಂದು ಲೇವಡಿ ಮಾಡಿದರು. ತಮ್ಮ ಬಗ್ಗೆ ಮಾತನಾಡುವ ಬದಲು ಬಿಜೆಪಿ ಸರ್ಕಾರದ ಕಾರ್ಯಗಳು ಮತ್ತು ಕರ್ನಾಟಕದ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಮಾತನಾಡುವಂತೆ ಪ್ರಧಾನಿಯನ್ನು ಕೋರಿದ ಅವರು, ನೀವು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೀರಿ, ಆದರೆ ಕರ್ನಾಟಕದ ಬಗ್ಗೆ ಮಾತನಾಡದೇ ನೀವು ನಿಮ್ಮ ಬಗ್ಗೆ ಮಾತ್ರವೇ ಮಾತನಾಡುತ್ತೀರಿ.

ಮುಂದಿನ ಐದು ವರ್ಷಗಳಲ್ಲಿ ನೀವು ಏನು ಮಾಡುತ್ತೀರಿ, ಯುವಕರು, ಶಿಕ್ಷಣ, ಆರೋಗ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಏನು ಮಾಡುತ್ತೀರಿ ಎಂಬುದರ ಕುರಿತು ನಿಮ್ಮ ಭಾಷಣಗಳಲ್ಲಿ ನೀವು ಮಾತನಾಡಬೇಕು. ಈ ಚುನಾವಣೆ ನಿಮ್ಮದಲ್ಲ, ಕರ್ನಾಟಕದ ಜನರು ಮತ್ತು ಭವಿಷ್ಯದ ಬಗ್ಗೆ ಆಗಿದೆ. ಕಳೆದ ಮೂರು ವರ್ಷಗಳಿಂದ ಬಿಜೆಪಿಯವರು ಭ್ರಷ್ಟಾಚಾರ ಮಾತ್ರ ಮಾಡುತ್ತಿದ್ದಾರೆ. ಇದರ ಫಲವಾಗಿ ಕರ್ನಾಟಕದ ಜನ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆಯುತ್ತಾರೆ. ಅಂದರೆ ಬಿಜೆಪಿಯವರು ಸಾರ್ವಜನಿಕರಿಗೆ ಮಾಡುವ ಎಲ್ಲಾ ಕೆಲಸಗಳಿಗೆ ಜನರಿಂದ ಶೇಕಡಾ 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ ಎಂಬುದಕ್ಕಾಗಿ. ಇದು ಪ್ರಧಾನಿಗೂ ಗೊತ್ತಿದೆ. ಆದರೆ ಅವರು ಏಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ?

ಕಾಂಗ್ರೆಸ್ 91 ಬಾರಿ ನಿಮ್ಮನ್ನು ನಿಂದಿಸಿದೆ ಎಂದು ನೀವು ಹೇಳುತ್ತೀರಿ, ಆದರೆ ನೀವು ಕರ್ನಾಟಕಕ್ಕಾಗಿ ಏನು ಮಾಡಿದ್ದೀರಿ ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಮುಂದಿನ ಭಾಷಣದಲ್ಲಿ ನೀವು ಏನು ಮಾಡಿದ್ದೀರಿ ಮತ್ತು ಮುಂದಿನ ಐದು ವರ್ಷಗಳಲ್ಲಿ ನೀವು ಏನು ಮಾಡುತ್ತೀರಿ ಎಂಬುದರ ಕುರಿತು ಮಾತನಾಡಿ” ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಕಿಡಿ ಕಾರಿದರು.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಬಿಜೆಪಿಯವರು ಪದೇ ಪದೇ ‘ಡಬಲ್ ಎಂಜಿನ್ ಸರ್ಕಾರ; ಡಬಲ್ ಎಂಜಿನ್ ಸರ್ಕಾರ’ ಎಂದು ಹೇಳುತ್ತಿರುವುದನ್ನು ನಾವೆಲ್ಲರು ಕೇಳಿದ್ದೇವೆ. “ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ; ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ; ಅದರಿಂದ ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದ್ದರಿಂದ ‘ಡಬಲ್ ಎಂಜಿನ್ ಸರ್ಕಾರ’ ಮುಂದುವರಿಯಲು ಬಿಜೆಪಿಯನ್ನು ಬೆಂಬಲಿಸಿ” ಎಂದು ಅದರ ನಾಯಕರು ಹೇಳುತ್ತೀದ್ದಾರೆ.

ಉದಾಹರಣೆಗೆ: ನೀವೆ ಹೇಳಿ, ಜೋಡೆತ್ತಿನ ಬಂಡಿಯಲ್ಲಿ ಎರಡು ಎತ್ತುಗಳು ಸಮಾನವಾದ ತೂಕದಲ್ಲಿರಬೇಕು. ಒಂದು ಗಟ್ಟಿಯಾಗಿ ಮತ್ತೊಂದು ಸಡಿಲವಾಗಿದ್ದರೆ ಅಥವಾ ಒಂದು ಎತ್ತು ಎತ್ತರಕ್ಕೆ ಮತ್ತೊಂದು ಕುಳ್ಳಗೆ ಇದ್ದರೆ ಬಂಡಿ ಓಡುತ್ತೆ? ಕೇಂದ್ರ ಸರ್ಕಾರದ ಎಂಜಿನ್ ಬೇರೆ; ರಾಜ್ಯ ಸರ್ಕಾರಗಳ ಎಂಜಿನೇ ಬೇರೆ. ಕೇಂದ್ರಾಡಳಿತ ಪ್ರದೇಶಗಳ ಎಂಜಿನ್‌ಗಳು ಇದಕ್ಕಿಂತ ಬಿನ್ನವಾದದ್ದು. ಕೇಂದ್ರ ಸರ್ಕಾರದ ಎಂಜಿನ್ 500 ಸಿಸಿ ಆದರೆ, ರಾಜ್ಯ ಸರ್ಕಾರಗಳ ಇಂಜಿನ್ 200 ಸಿಸಿ. ಕೇಂದ್ರಾಡಳಿತ ಪ್ರದೇಶಗಳ ಎಂಜಿನ್ ಬರೀ 100 ಸಿಸಿ ಮಾತ್ರ. ಎಲ್ಲವೂ ಗಾಡಿಗಳೇ ಎಲ್ಲಾ ಗಾಡಿಗಳಿಗೂ ಎಂಜಿನ್ ಇದೆ. ಆದರೆ ಒಂದಕ್ಕೊಂದು ಹೊಲಿಕೆಯಾಗುವುದಿಲ್ಲ. ಅದರದ್ದೇ ಆದ ವಿಶೇಷತೆಗಳು ಇರುತ್ತದೆ. ಒಂದು ಗಾಡಿ ರಿಪೇರಿ ಆದಾಗ, ಮತ್ತೊಂದು ಗಾಡಿಯಿಂದ ಅದನ್ನು ಎಳೆದುಕೊಂಡು ಅಥವಾ ತಳ್ಳಿಕೊಂಡು ಹೋಗಿ ನಿರ್ದಿಷ್ಟವಾದ ಜಾಗಕ್ಕೆ ಸೇರಿಸಬಹುದು. ಆದರೆ ವಿಭಿನ್ನವಾದ ಎರಡು ಗಾಡಿಗಳನ್ನು ಒಂದಾಗಿ ಜೋಡಿಸಿ, ಅದರ ಮೇಲೆ ಕೇಂದ್ರವು ಸವಾರಿ ಮಾಡುತ್ತದೆ ಎಂದರೆ ಅದು ಸಾದ್ಯವಿಲ್ಲ. ಅದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ; ಪ್ರಜಾಪ್ರಭುತ್ವ ಅದನ್ನು ಒಪ್ಪುವುದೂ ಇಲ್ಲ.

ನೆನೆಪಿರಲಿ: ಬಿಜೆಪಿಯ ‘ಒಂದು ದೇಶ ಒಂದೇ ಧರ್ಮ’, ‘ಒಂದು ದೇಶ ಒಂದೇ ಭಾಷೆ’, ಒಂದು ದೇಶ ಒಂದೇ ಚುನಾವಣೆ’ ಮಾದರಿಯಲ್ಲಿ ‘ಒಂದು ದೇಶ ಒಂದೇ ಪಕ್ಷ’ ವೆಂಬ ರಾಜಕೀಯ ಘೋಷನೆಗೆ ಮತ್ತೊಂದು ಅಡ್ಡ ಹೆಸರೇ ‘ಡಬಲ್ ಎಂಜಿನ್ ಸರ್ಕಾರ’. ಈ ಡಬಲ್ ಎಂಜಿನ್ ಸರ್ಕಾರದ ಅಂತಿಮ ಗುರಿಯೇ ಏಕ ನಾಯಕತ್ವದ ಹಿಂದೂ ಬಿಜೆಪಿ ಸರ್ವಾಧಿಕಾರ ಆಡಳಿತ. ಅದರ ಉದ್ದೇಶ ಅಖಂಡ ಭಾರತವೆಂಬ ಹಿಂದೂ ರಾಷ್ಟ್ರ. ಭಾರತವು ಅನೇಕ ರಾಜ್ಯಗಳ ರಾಷ್ಟ್ರವಾಗಿದೆ. ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂಬ ತತ್ವವನ್ನು ತರಲು ಇಲ್ಲಿ ಸಾಧ್ಯವಿಲ್ಲ. 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ಹಾಗೂ ವೈವಿಧ್ಯಮಯ ಸಾಮಾಜಿಕ ಸಂಸ್ಕೃತಿಗಳನ್ನು ಹೊಂದಿರುವ ಭಾರತದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫೆಡರಲ್ ರಚನೆಯ ಆಧಾರದ ಮೇಲೆ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡಬೇಕು. ಅದನ್ನು ಬಿಟ್ಟು, ಡಬಲ್ ಎಂಜಿನ್ ಸರ್ಕಾರದ ಹೆಸರಿನಲ್ಲಿ ಒಂದು ದೇಶ ಒಂದೇ ಪಕ್ಷವನ್ನು ಜಾರಿಗೊಳಿಸಲು ಮುದಾಗುವುದು ಸಮಯ ವ್ಯರ್ಥ. “ರಾಜ್ಯದಲ್ಲಿ ಸ್ವಾಯತ್ತ ಸರ್ಕಾರ ಕೇಂದ್ರದಲ್ಲಿ ಸಂಯುಕ್ತ ಸರ್ಕಾರ” ಎಂಬುದೇ ನಮ್ಮ ಘೋಷಣೆಯಾಗಬೇಕು; ಅದುವೇ ನಮಗೆ ಶ್ರೀರಕ್ಷೆ.

ಡಬಲ್ ಎಂಜಿನ್ ಸರ್ಕಾರಕ್ಕೆ ಮತ್ತೊಂದು ಅರ್ಥವಿದೆ: ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಸರ್ಕಾರ ಇದ್ದರೆ ಅದಕ್ಕೆ ಡಬಲ್ ಎಂಜಿನ್ ಸರ್ಕಾರ ಎಂದು ಕರೆಯಾಲಾಗುತ್ತದೆ. ಆದರೆ, ಅದಕ್ಕೆ ಮತ್ತೊಂದು ಅರ್ಥವಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಎರಡು ವಿಧದ ಮೂರ್ತಿಗಳು ಇರುತ್ತವೆ. ಒಂದು ‘ಮೂಲವರ್ ಮೂರ್ತಿ’ ಎಂದರೆ, ಗರ್ಭ ಗೃಹದಲ್ಲಿ ಯಾವಾಗಲೂ ಇರುವ ವಿಗ್ರಹ. ಮತ್ತು ‘ಉತ್ಸವ ಮೂರ್ತಿ’ ಎಂದರೆ, ಉತ್ಸವಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯುವ ವಿಗ್ರಹ. ಗರ್ಭ ಗೃಹದಲ್ಲೇ ಇರುವ ‘ಮೂಲವರ್ ಮೂರ್ತಿ’ ಗೃಹ ಸಚಿವ ಅಮಿತ್ ಶಾ ಅವರು ದೇಶವನ್ನು ಬಿಟ್ಟು ಎಲ್ಲೂ ಹೋಗದೆ, 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಕಾರ್ಯವೈಕರಿಯನ್ನು ನೋಡಿಕೊಂಡು, ಪಕ್ಷ ಬಲವರ್ಧನೆಗಾಗಿ ಮತ್ತು ಶತ್ರುಗಳನ್ನು ಹಾಗೂ ವಿರೋಧ ಪಕ್ಷಗಳ ನಾಯಕರುಗಳನ್ನು ಮಟ್ಟ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಸದಾ ಪ್ರವಾಸ ಮತ್ತು ಉತ್ಸವಗಳಲ್ಲೇ ಇರುವ ‘ಉತ್ಸವ ಮೂರ್ತಿ’ ಪ್ರಧಾನಿ ನರೇಂದ್ರ ಮೋದಿಯವರು, ದೇಶ, ವಿದೇಶ ಪ್ರವಾಸ, ಅಂತಾರಾಷ್ಟ್ರೀಯ ನಾಯಕರುಗಳ ಭೇಟಿ ಮತ್ತು ಮಾತುಕತೆ, ವರ್ಚುವಲ್ ಮೀಟಿಂಗ್, ಚುನಾವಣೆ ಪ್ರಚಾರ, ಉದ್ಘಾಟನೆ, ರೋಡ್ ಶೋ ಹಾಗೂ ಫೋಟೋ ಸೆಷನ್‌ಗಳಲ್ಲಿಯೇ ಬಿಸಿಯಾಗಿದ್ದಾರೆ. ಒಬ್ಬರು ಪಿಎಂ ಮತ್ತೊಬ್ಬರು ಸೂಪರ್ ಪಿಎಂ. ಒಬ್ಬರು ಪ್ರಜಾಪ್ರಭುತ್ವವಾದಿ  ಮತ್ತೊಬ್ಬರು ಸರ್ವಾಧಿಕಾರಿ. ಇವರಿಬ್ಬರೇ ಕೇಂದ್ರ ಸರ್ಕಾರದ ಡಬಲ್ ಎಂಜಿನ್. ಕೇಂದ್ರ ಸರ್ಕಾರವೇ ಡಬಲ್ ಎಂಜಿನ್ ಸರ್ಕಾರ.

ರಾಜಕೀಯ

“ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ! ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ! ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ! ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ! – ನರೇಂದ್ರ ಮೋದಿ ಅವರೇ ನಿಮ್ಮ ಇಂದಿನ ಭಾಷಣ ಕೇಳಿ ಬಸವಣ್ಣನವರ ಈ ವಚನ ನೆನಪಾಯಿತು. ಇದು ನಿಮ್ಮ ನಡೆ-ನುಡಿಗೆ ಹೇಳಿ ಮಾಡಿಸಿದಂತಿದೆ”. ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸರಣಿ ಟ್ವೀಟ್‌ಗಳನ್ನು ಹಾಕಿ ಪ್ರಧಾನಿ ನರೇಂದ್ರ ಮೋದಿಗೆ ಸರಿಯಾದ ಟಕ್ಕರ್ ನೀಡಿದ್ದಾರೆ.

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಕಾಲ, ಬಿಜೆಪಿ ಎಂದರೆ ಅಮೃತ ಕಾಲ ಎನ್ನುವ ಮೊದಲು ನಿಮ್ಮ ಅಂತರಂಗವನ್ನು ಒಮ್ಮೆ ಇಣುಕಿ ನೋಡಿ, ಅಲ್ಲಿರುವ ಅದಾನಿ, ಅಂಬಾನಿಗಳು ಕಾಣಲಿಲ್ಲವೇ? ನಿಮ್ಮ ಅಕ್ಕಪಕ್ಕದಲ್ಲಿರುವ ಮುಖ್ಯಮಂತ್ರಿಗಳು ಮತ್ತು ಸಚಿವರ ಭ್ರಷ್ಟ ಮುಖಗಳೂ ಕಾಣಲಿಲ್ಲವೇ ನರೇಂದ್ರ ಮೋದಿ?

ಅದಾನಿ

ರಾಜ್ಯದ ಬಿಜೆಪಿ ಸಚಿವರ 40% ಕಮಿಷನ್ ಕಿರುಕಳದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ನಿಮ್ಮ ಕಾರ್ಯಾಲಯಕ್ಕೆ ಬರೆದ ಪತ್ರವೂ ನಿಮಗೆ ನೆನಪಾಗಲಿಲ್ಲವೇ? ನಿಮ್ಮದೇ ಸಚಿವರ ಕಿರುಕಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬದ ನೆನಪೂ ನಿಮಗೆ ಆಗಲಿಲ್ಲವೇ? ಕಳೆದ ಮೂರುವರೆ ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿಗಳನ್ನು ಲೂಟಿ ಹೊಡೆದಿರುವ ರಾಜ್ಯದ ಬಿಜೆಪಿ ಸಚಿವರಿಗೆ ಖಂಡಿತ ಇದು ಅಮೃತ ಕಾಲ. ಆದರೆ ನಿಮ್ಮಂತಹ ಭ್ರಷ್ಟರ ಸರ್ಕಾರ ಪಡೆದ ರಾಜ್ಯದ ಜನತೆಗೆ ಇದು ವಿಷಕಾಲ ನರೆಂದ್ರ ಮೋದಿ ಅವರೇ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ರಾಜ್ಯದ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡುವ ನಿಮ್ಮ ಕುತಂತ್ರಿ ಬುದ್ದಿಯನ್ನು ರಾಜ್ಯದ ಲಿಂಗಾಯತರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ನಿಮ್ಮ ಇಡೀ ಭಾಷದಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿ.ಎಸ್.ಯಡಿಯೂರಪ್ಪನವರ ಹೆಸರನ್ನು ಒಮ್ಮೆಯೂ ಎತ್ತಲಿಲ್ಲ ಯಾಕೆ? ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕಾಲದಲ್ಲಿಯೇ ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದಿರಿ, ಅವರನ್ನು ಎರಡೆರಡು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದಿರಿ, ಅವರ ಮಗನಿಗೆ ಕನಿಷ್ಠ ಶಾಸಕನನ್ನಾಗಿ ಮಾಡಲಿಲ್ಲ, ಸಚಿವರನ್ನಾಗಿ ಮಾಡಲಿಲ್ಲ. ಈಗ ಐಟಿ, ಇಡಿ, ಸಿಬಿಐ ಮೂಲಕ ಬಾಯಿಮುಚ್ಚಿಸಿ ಕೂರಿಸಿರುವವರು ನೀವೇ ಅಲ್ಲವೇ ನರೇಂದ್ರ ಮೋದಿ ಅವರೇ?

ಬಿ.ಎಸ್.ಯಡಿಯೂರಪ್ಪ

ಲಿಂಗಾಯತ ಸಮುದಾಯದಲ್ಲಿ ಎರಡನೇ ತಲೆಮಾರಿನ ನಾಯಕರೇ ಇರಬಾರದೆಂದು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಸಂಜಯ ಪಾಟೀಲ್, ಸೊಗಡು ಶಿವಣ್ಣ ಹೀಗೆ ಸಾಲು ಸಾಲು ನಾಯಕರಿಗೆ ಈ ಬಾರಿ ಟಿಕೆಟ್ ನೀಡದೆ ಅವರ ರಾಜಕೀಯ ಜೀವನವನ್ನೇ ಮುಗಿಸುವ ಹುನ್ನಾರ ಮಾಡಿರುವವರು ನೀವೇ ಅಲ್ಲವೇ ನರೇಂದ್ರ ಮೋದಿ ಜೀ?

ಲಕ್ಷ್ಮಣ ಸವದಿ

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಲಿಂಗಾಯತರ ಪ್ರಮುಖ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಯಾವ ಕಾರಣಕ್ಕೆ ಈ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದಿರಿ? ಅವರ ಮೇಲೆ ಭ್ರಷ್ಟಾಚಾರದ ಆರೋಪಗಳಿತ್ತಾ? ಸಿಡಿ ಹಗರಣ ಇತ್ತೇ? ಅವರು ಒಳ್ಳೆಯ ಆಡಳಿತಗಾರರರಾಗಿರಲಿಲ್ಲವೇ? ಯಾಕೆ ಅವರನ್ನು ಮೂಲೆಗೆ ತಳ್ಳಿದ್ದೀರಿ? ಅವರ ಈ ಪ್ರಶ್ನೆಗಳು ರಾಜ್ಯದ ಲಿಂಗಾಯತರ ಪ್ರಶ್ನೆಯೂ ಹೌದು. ಧಮ್-ತಾಕತ್ ಇದ್ದರೆ ಇದಕ್ಕೆ ಉತ್ತರ ಕೊಡಿ ನರೇಂದ್ರ ಮೋದಿ ಜೀ.

ಜಗದೀಶ್ ಶೆಟ್ಟರ್

ಬಂಜಾರ ಸಮುದಾಯ ಮತ್ತು ಕಾಂಗ್ರೆಸ್ ಸಂಬಂಧಕ್ಕೆ ಹುಳಿ ಹಿಂಡುವ ನಿಮ್ಮ ಕುತಂತ್ರ ಫಲ ನೀಡಲಾರದು. ಬಂಜಾರರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡಿದ್ದು ಕಾಂಗ್ರೆಸ್ ಪಕ್ಷ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಭೂ ಸುಧಾರಣೆ ಕಾಯ್ದೆಗೆ ಕ್ರಾಂತಿಕಾರಿ ತಿದ್ದುಪಡಿಯನ್ನು ತಂದಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರ ಎನ್ನುವುದು ನಿಮಗೆ ತಿಳಿದಿಲ್ಲವೇ ನರೇಂದ್ರ ಮೋದಿ ಅವರೇ?

ಲಂಬಾಣಿ ತಾಂಡಾ

ನರೇಂದ್ರ ಮೋದಿಯವರೇ ನಿಮ್ಮ ಇಡೀ ರಾಜಕೀಯ ಬದುಕೇ ಒಂದು ಸುಳ್ಳಿನ ಕೋಟೆ. ಅದು ಮುರಿದು ಬೀಳುವ ಕಾಲ ಬಂದಿದೆ. ಕಾಂಗ್ರೆಸ್ ನಿಮ್ಮನ್ನು 91 ಬಾರಿ ನಿಂದಿಸಿದೆ ಎನ್ನುವುದು ನಿಮ್ಮ ಇತ್ತೀಚಿನ ಸುಳ್ಳು. ನಮ್ಮ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ನಿಂದಿಸುವುದೇ ನಿಮ್ಮ ಮತ್ತು ನಿಮ್ಮ ಪಕ್ಷದ ನಾಯಕರ ದಿನಚರಿ ಅಲ್ಲವೇ ನರೇಂದ್ರ ಮೋದಿ ಜೀ?

ಸೋನಿಯಾ ಗಾಂಧಿಯವರನ್ನು ಜರ್ಸಿ ಕೌ, ಬಾರ್ ಡಾನ್ಸರ್, ಕಾಂಗ್ರೆಸ್ ಕಿ ವಿಧವಾ ಇನ್ನೂ ಏನೇನೋ ಅಂದವರು ನೀವೇ ಅಲ್ಲವೇ? ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆ ತಾನೆ ಸೋನಿಯಾಗಾಂಧಿಯವರನ್ನು ವಿಷಕನ್ಯೆ ಎಂದು ಹೇಳಿಲ್ಲವೇ? ನಿಮ್ಮ ರಕ್ತದ ಕಣಕಣದಲ್ಲಿಯೂ ದ್ವೇಷಾಸೂಯ ವಿಷ ಇಲ್ಲವೇ ನರೇಂದ್ರ ಮೋದಿ?

ಸೋನಿಯಾ ಗಾಂಧಿ

ರಾಜ್ಯದ ಬಿಜೆಪಿ ಸರ್ಕಾರ 9 ಲಕ್ಷ ಮನೆಗಳನ್ನು ಕಟ್ಟಿದೆ ಎಂಬ ಹಸಿ ಹಸಿ ಸುಳ್ಳು ಹೇಳಿದ್ದಿರಲ್ಲಾ, ನಾವು ಕಟ್ಟಿರುವ ಮನೆಗಳ ಲೆಕ್ಕವನ್ನು ನಿಮಗೆ ಕೊಟ್ಟು ನಿಮ್ಮಿಂದ ಸುಳ್ಳು ಹೇಳಿಸಿದ ವಸತಿ ಸಚಿವರನ್ನು ಒಮ್ಮೆ ಜನರ ಮಧ್ಯೆ ಬಹಿರಂಗ ಚರ್ಚೆಗೆ ಕರೆತನ್ನಿ. ಇದು ನನ್ನ ಸವಾಲು ನರೇಂದ್ರ ಮೋದಿ.

2013-18ರ ಅವಧಿಯಲ್ಲಿ ರೈತರಿಗೆ ಕೊಟ್ಟ ಮಾತಿನಂತೆ 50 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೀರಾವರಿಗೆ ಖರ್ಚು ಮಾಡಿ ರೈತರ ಹೊಲಕ್ಕೆ ನೀರು ಹರಿಸಿದ ಹೆಮ್ಮೆ ನಮ್ಮದು. ಮೇಕೆದಾಟು, ಕಳಸ-ಬಂಡೂರಿ ಮತ್ತು ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳೆರಡೂ ನಿರ್ಲಕ್ಷಿಸುತ್ತಾ ಬಂದಿದೆ ಎನ್ನುವುದನ್ನು ರಾಜ್ಯದ ರೈತರಿಗೆ ಗೊತ್ತಿದೆ ನರೇಂದ್ರ ಮೋದಿ.

ಕಳಸ-ಬಂಡೂರಿ

ಕಮಿಷನ್ ನುಂಗುವ ಕರ್ನಾಟಕ ಬಿಜೆಪಿ ಸರ್ಕಾರದ ಚಾಳಿ ಮಠ-ಮಂದಿರಗಳನ್ನೂ ಬಿಟ್ಟಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕದ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದರೆ ಅದು ತಲುಪುವಾಗ ಕಡ್ಡಿ ಮಾತ್ರ ಉಳಿಯುತ್ತದೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿಗಳ ಆಕ್ರೋಶ ನಿಮಗೆ ಕೇಳಿಸಿಲ್ಲವೇ ನರೇಂದ್ರ ಮೋದಿ?

ವಿರೂಪಾಕ್ಷಪ್ಪ ಮಾಡಾಳ್

ನಿಮ್ಮದೇ ಪಕ್ಷದ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮತ್ತು ಅವರ ಮಗ ಈಗ ಜೈಲಲ್ಲಿರುವುದು ಯಾವ ದೇಶ ಸೇವೆ ಮಾಡಿದ್ದಕ್ಕಾಗಿ ಮೋದಿಯವರೇ? ಪ್ರತಿಷ್ಠಿತ ಕೆಎಸ್ ಡಿಸಿಎಎಲ್ ಕಚೇರಿಯಲ್ಲಿಯೇ ಈ ಶಾಸಕರ ಮಗ ಲಂಚ ತಿನ್ನುವಾಗ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದನ್ನಲ್ಲಾ? ವಿರೂಪಾಕ್ಷಪ್ಪ ಮಾಡಾಳ್ ಮನೆಯಲ್ಲಿ ಎಂಟುವರೆ ಕೋಟಿ ಹಣವನ್ನು ಲೋಕಾಯುಕ್ತರು ವಶಪಡಿಸಿಕೊಂಡಿದ್ದರಲ್ಲಾ ಅದೇನು ಅವರು ಬೆಳೆದ ಅಡಿಕೆ ಮಾರಾಟದ ದುಡ್ಡೇ ಮೋದಿ? ಎಂದು ಪ್ರಶ್ನೆಗಳನ್ನು ಕೇಳುವ ಮೂಲಕ ಬಿಜೆಪಿಯ ಭ್ರಷ್ಟಾಚಾರ, ಆಡಳಿತ ವೈಫಲ್ಯ, ದ್ವೇಷಾಸೂಯ ರಾಜಕಾರಣದ ಬಗ್ಗೆ ಕಿಡಿ ಕಾರಿದ್ದಾರೆ.

ರಾಜಕೀಯ

ನವದೆಹಲಿ: ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮೇ 4 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಮುಂದಿನ ವರ್ಷ ಸಂಸತ್ ಚುನಾವಣೆ ನಡೆಯಲಿರುವ ಕಾರಣ ಉತ್ತರ ಪ್ರದೇಶದಲ್ಲಿ ಈ ಚುನಾವಣೆ ಮಹತ್ವ ಪಡೆದುಕೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತಿವೆ.

ಉತ್ತರಪ್ರದೇಶ ಆಡಳಿತಾರೂಢ ಬಿಜೆಪಿಯಲ್ಲಿ ದೊಡ್ಡ ಬದಲಾವಣೆ ಆರಂಭವಾಗಿದೆ. ಸಂಸತ್ತು ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರಿಗೆ ಪ್ರಾಮುಖ್ಯತೆ ನೀಡದ ಪಕ್ಷವೆಂಬ ಹಣೆಪಟ್ಟಿ ಬಿಜೆಪಿಗಿತ್ತು. ಉತ್ತರ ಪ್ರದೇಶದಲ್ಲಿ ಕಳೆದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ 57 ಮುಸ್ಲಿಮರಿಗೆ ಮಾತ್ರ ಅವಕಾಶ ನೀಡಿತ್ತು. ಆದರೆ ಈ ಬಾರಿ ಈ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಹೈದರಾಬಾದ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಅಲ್ಪಸಂಖ್ಯಾತರನ್ನು ವಿಸ್ವಾಸಕ್ಕೆ ತೆಗೆದುಕೊಳ್ಳಬೇಕು ಮತ್ತು ಬಿಜೆಪಿ ಅವರನ್ನು ಟೀಕಿಸುವುದನ್ನು ತಪ್ಪಿಸಬೇಕು” ಎಂದು ಕರೆ ನೀಡಿದ್ದರು.

ಪಸ್ಮಾಂಡ ಮುಸ್ಲಿಮರು

ಉತ್ತರ ಪ್ರದೇಶವು ಇತರ ಯಾವುದೇ ರಾಜ್ಯಗಳಿಗಿಂತ ಹೆಚ್ಚು ಮುಸ್ಲಿಮರನ್ನು (ಶೇಕಡಾ 24) ಹೊಂದಿದೆ. ಅವರಲ್ಲಿ ಸುಮಾರು 85% ಪಸ್ಮಾಂಡ ಮುಸ್ಲಿಮರು ಇದ್ದಾರೆ. ಬಿಜೆಪಿಯವರು ಇವರ ಮತಗಳ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಮೊದಲ ಹಂತದ ಚುನಾವಣೆಯಲ್ಲಿ 200, ಎರಡನೇ ಹಂತದ ಚುನಾವಣೆಯಲ್ಲಿ 167 ಮುಸ್ಲಿಮರಿಗೆ ಬಿಜೆಪಿಗೆ ಅವಕಾಶ ನೀಡಿದೆ. ಬಿಜೆಪಿ ಇತಿಹಾಸದಲ್ಲಿ ಇಷ್ಟೊಂದು ಮುಸ್ಲಿಮರಿಗೆ ಇಂತಹ ಅವಕಾಶವನ್ನು ನೀಡಿರಲ್ಲಿಲ್ಲ. ಈ 367 ಅಭ್ಯರ್ಥಿಗಳಲ್ಲಿ ಅರ್ಧದಷ್ಟು ಅಭ್ಯರ್ಥಿಗಳು ಗೆದ್ದರೂ ಮುಸ್ಲಿಮರಲ್ಲಿ ತನ್ನ ಪ್ರಭಾವ ಹೆಚ್ಚುತ್ತದೆ ಎಂದು ಬಿಜೆಪಿ ನಂಬಿದೆ. ಇದು ಮುಂದಿನ ಚುನಾವಣೆಗಳಲ್ಲಿ ಫಲ ನೀಡುವ ನಿರೀಕ್ಷೆಯೂ ಇದೆ. ಏಕೆಂದರೆ ಉತ್ತರ ಪ್ರದೇಶದ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳೇ ಸೋಲು-ಗೆಲುವನ್ನು ನಿರ್ಧರಿಸುತ್ತವೆ.

ಇದರ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯ್ ಬಹದ್ದೂರ್ ಪಾಠಕ್, “ಉತ್ತರ ಪ್ರದೇಶ ವಿಧಾನ ಪರಿಷತ್ತಿನಲ್ಲಿ, ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಸೇರಿದಂತೆ 4 ಮುಸ್ಲಿಮರು ಸದಸ್ಯರಾಗಿದ್ದಾರೆ. ಆದರೆ ಮುಸ್ಲಿಮರ ರಕ್ಷಕ ಎಂದು ಹೇಳಿಕೊಳ್ಳುವ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಾರ್ಟಿ ಹಾಗೂ ಕಾಂಗ್ರೆಸ್ ಪಕ್ಷವು ಮೇಲ್ಮನೆಯಲ್ಲಿ ಮುಸ್ಲಿಮರಿಗೆ ಇಷ್ಟೊಂದು ಅವಕಾಶ ನೀಡಿರಲಿಲ್ಲ. ಸಬ್‌ಕಾ ಸಾತ್‌, ಸಬ್‌ಕಾ ವಿಕಾಸ್ ಎಂಬ ಪ್ರಧಾನಿಯವರ ಘೋಷಣೆಗೆ ತಕ್ಕಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅದನ್ನು ಅನುಷ್ಠಾನ ಗೊಳಿಸುತ್ತಿದೆ” ಎಂದು ಹೇಳಿದ್ದಾರೆ.

ಕಳೆದ ಎರಡು ಸಂಸತ್ ಚುನಾವಣೆಗಳಲ್ಲಿ ಸಿಕ್ಕ ಬೆಂಬಲ 2024ರ ಚುನಾವಣೆಯಲ್ಲಿ ಕಡಿಮೆಯಾಗಲಿದೆ ಎಂಬ ಭಯ ಬಿಜೆಪಿಗಿದೆ. ಈ ನಷ್ಟವನ್ನು ನೀಗಿಸಲು ಬಿಜೆಪಿ ಮುಸ್ಲಿಮರ ಬೆಂಬಲ ಪಡೆಯಲು ಮುಂದಾಗಿದೆ. ಮುಸ್ಲಿಮರನ್ನು ಸೆಳೆಯಲು ಬಿಜೆಪಿ ನೇರವಾಗಿ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವುದು ಗಮನಾರ್ಹ.