ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Economy Archives » Dynamic Leader
October 23, 2024
Home Posts tagged Economy
ಬೆಂಗಳೂರು

ಬೆಂಗಳೂರು: ಅದಾನಿ ಸಮೂಹದ ನಿವ್ವಳ ಮೌಲ್ಯವು ಕಳೆದ ಕೆಲವು ವರ್ಷಗಳಿಂದ ದೈತ್ಯಾಕಾರವಾಗಿ ಬೆಳೆದಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದಾನಿ ಆಸ್ತಿ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಆದಾಗ್ಯೂ, ಅದಾನಿ ಗ್ರೂಪ್‌ನ ಆಸ್ತಿ ಹೆಚ್ಚಿದ ನಂತರ ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದರು. ಕಳೆದ ಕೆಲವು ದಿನಗಳಿಂದ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿದ್ದು, ಅಲ್ಪ ಅಂತರದಿಂದ ಎರಡನೇ ಸ್ಥಾನದಲ್ಲಿದ್ದ ಅದಾನಿ ಗ್ರೂಪ್ ಈಗ ಮೂರನೇ ಸ್ಥಾನಕ್ಕೆ ಬಂದಿಳಿದಿದೆ.

ಈ ಹಿನ್ನಲೆಯಲ್ಲಿ ಅಮೆರಿಕದ ಪ್ರಸಿದ್ಧ ಸಂಶೋಧನಾ ಸಂಸ್ಥೆಯಾದ ಹಿಂಡೆನ್‌ಬರ್ಗ್ (Hindenburg) 106 ಪುಟಗಳ ವರದಿಯನ್ನು ಪ್ರಕಟಿಸಿ, ‘ಭಾರತದ ಅದಾನಿ ಗ್ರೂಪ್ ಷೇರು ಮಾರುಕಟ್ಟೆಯಲ್ಲಿ ಹಲವಾರು ವಂಚನೆಗಳನ್ನು ಮಾಡಿದೆ ಮತ್ತು ಸಮೂಹವು ಭಾರಿ ಸಾಲದಲ್ಲಿದೆ’ ಎಂದು ಆರೋಪಿಸಿತು. ವರದಿ ಬಿಡುಗಡೆಯಾದ ನಂತರ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತ ಕಂಡಿತು. ಜನವರಿ 25 ರಂದು ಮಾತ್ರ ಅದಾನಿ ಸಮೂಹವು ಒಂದು ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿತು.

ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಸತತ ಮೂರನೇ ದಿನವೂ ನಿನ್ನೆ ಕುಸಿತವನ್ನು ಕಂಡವು. ಅದಾನಿ ಟೋಟಲ್ ಗ್ಯಾಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪವರ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ವಿಲ್ಮರ್ ಮುಂತಾದವುಗಳ ಷೇರುಗಳ ಬೆಲೆ ವಿಪರೀತ ಕುಸಿತವನ್ನು ಕಂಡಿತು.

ಈ ಹಿನ್ನಲೆಯಲ್ಲಿ ಅದಾನಿಗೆ ಆರ್‌ಎಸ್‌ಎಸ್‌ನ ಆರ್ಥಿಕ ವಿಭಾಗ ಬೆಂಬಲ ನೀಡಿದೆ. ಆರ್‌ಎಸ್‌ಎಸ್‌ನ ಆರ್ಥಿಕ ವಿಭಾಗವಾದ ಸ್ವದೇಶಿ ಜಾಗರಣ ಮಂಚ್‌ ನೀಡಿರುವ ಹೇಳಿಕೆಯಲ್ಲಿ ‘ಅದಾನಿ ಹಣವನ್ನು ನಾಶ ಮಾಡುತ್ತಿಲ್ಲ, ಅವರು ಭಾರತದ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದಾರೆ; ಹಿಂಡೆನ್‌ಬರ್ಗ್ ವರದಿಯಿಂದ ಅಂತರಾಷ್ಟ್ರೀಯ ರಂಗದಲ್ಲಿ ಭಾರತದ ಹೆಸರಿಗೆ ಧಕ್ಕೆಯಾಗುವುದಿಲ್ಲ’ ಎಂದು ಹೇಳಿದೆ.