ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Manipur Archives » Page 2 of 2 » Dynamic Leader
October 23, 2024
Home Posts tagged Manipur (Page 2)
ದೇಶ

ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯದಿಂದಾಗಿ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಸಂಸದ ಪಿ.ಚಿದಂಬರಂ ಹೇಳಿದ್ದಾರೆ.

ಮಣಿಪುರದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಕಳೆದ 2 ತಿಂಗಳಿಂದ ಸಂಘರ್ಷ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ, ಇತ್ತೀಚೆಗೆ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಅತ್ಯಾಚಾರ ನಡೆಸಿದ ವಿಡಿಯೋವೊಂದು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮಣಿಪುರದ ಪರಿಸ್ಥಿತಿಯನ್ನು ಖಂಡಿಸಿದೆ. ಪ್ರಧಾನಿ ವಿವರಣೆಗೆ ಆಗ್ರಹಿಸಿ ಪ್ರತಿಪಕ್ಷಗಳು ಸಂಸತ್ತಿನ ಕಲಾಪವನ್ನು ಸ್ಥಗಿತಗೊಳಿಸಿವೆ.

ಈ ಹಿನ್ನಲೆಯಲ್ಲಿ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಸಂಸದ ಪಿ.ಚಿದಂಬರಂ ಹೇಳಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ, ಮಣಿಪುರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನ ಆರೋಪಗಳು ದೆಹಲಿಯ PMO (ಪ್ರಧಾನಿ ಕಚೇರಿ) ಮತ್ತು ಇಂಫಾಲ್‌ನಲ್ಲಿರುವ CMO (ಮುಖ್ಯಮಂತ್ರಿ ಕಚೇರಿ) ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಇದನ್ನೂ ಓದಿ: ಆ್ಯಂಟಿ ಕಮ್ಯುನಲ್ ವಿಂಗ್‌ಗೆ ಶಕ್ತಿ ತುಂಬಿ ಸಕ್ರಿಯಗೊಳಿಸಿ; ಕರ್ನಾಟಕ ಮುಸ್ಲಿಮ್ ಯೂನಿಟಿಯ ಖಾಸಿಂ ಸಾಬ್ ಆಗ್ರಹ!

ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರಿಗೆ ಸಾಂವಿಧಾನಿಕ ತತ್ವಗಳ ಬಗ್ಗೆ ತಿಳುವಳಿಕೆ ಇದ್ದರೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ರಾಜಧರ್ಮವನ್ನು ಪಾಲಿಸುವವರು ಮಾತ್ರ  ಅದನ್ನು ಬೋಧಿಸಲು ಸಾಧ್ಯ. ಅವಮಾನಕ್ಕೊಳಗಾದ ಮಹಿಳೆಯರ ಬಳಿ “ಕೀ ಇಲ್ಲ” ಎಂದು ಹೇಳಿದ ಪೊಲೀಸ್ ಜೀಪ್ ಡ್ರೈವರ್ ನಂತಾಗಿದೆ ಕೇಂದ್ರ ಸರ್ಕಾರ!

ಕೇಂದ್ರ ಸರ್ಕಾರವು ಸಾಂವಿಧಾನಿಕ ಜವಾಬ್ದಾರಿಯ ಯಂತ್ರವನ್ನು ಆಫ್ ಮಾಡಿ ಕೀಲಿಯನ್ನು ಎಸೆದಿದೆ (ಲೇಖನ 355 ಮತ್ತು 356) ಎಂದು ಪಿ.ಚಿದಂಬರಂ ಪೋಸ್ಟ್ ಮಾಡಿದ್ದಾರೆ.

ದೇಶ

ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಯು ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಬಿಜೆಪಿಯನ್ನು ಅಳಿಸಿಹಾಕಲಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, “ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಯನ್ನು ಕಂಡು ಬಿಜೆಪಿ ಆತಂಕಕ್ಕೆ ಒಳಗಾಗಿದೆ. 2014ರಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿಯನ್ನು 2024ರಲ್ಲಿ ಕಿತ್ತೊಗೆಯಲಾಗುವುದು. ಬಿಜೆಪಿ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ಇಡೀ ದೇಶದಿಂದಲೇ ಕಿತ್ತೊಗೆಯಲಾಗುವುದು. ಹೀಗಾಗಿ ಸಂವಿಧಾನವನ್ನು ಹಾಳುಗೆಡವಲು ಪ್ರಯತ್ನಿಸಿದವರು ಹೆದರುತ್ತಿದ್ದಾರೆ.

ಆರ್‌ಎಸ್‌ಎಸ್‌ ಹರಡಿದ ದ್ವೇಷ ಮತ್ತು ಬಿಜೆಪಿಯ ವೋಟ್ ಬ್ಯಾಂಕ್ ರಾಜಕಾರಣವೇ ಮಣಿಪುರದ ಇಂದಿನ ಪರಿಸ್ಥಿತಿಗೆ ಕಾರಣ. ಗುಪ್ತಚರ ಸಂಸ್ಥೆಗಳಿಗೆ ಇದೆಲ್ಲ ತಿಳಿಯದೇ ಇರಲು ಸಾಧ್ಯವಿಲ್ಲ. ಅಲ್ಲಿ ಏನು ನಡೆಯುತ್ತಿದೆ ಎಂದು ಅವರಿಗೆ ತಿಳಿದಿರಬೇಕು.

ಸರ್ಕಾರ ಇದನ್ನೆಲ್ಲ ಸುಮ್ಮನೆ ನೋಡುತ್ತಿರುವುದಾದರೆ, ಅವರು ಅಧಿಕಾರದಲ್ಲಿ ಮುಂದುವರಿಯಬಾರದು. ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಯ ಬಗ್ಗೆ ಮಾತನಾಡುವ ಮೊದಲು, ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿದ ಬಗ್ಗೆ ಬಿಜೆಪಿ ಮಾತನಾಡಬೇಕು” ಎಂದು ಹೇಳಿದ್ದಾರೆ.

ದೇಶ ರಾಜ್ಯ

ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಎರಡನೇ ಸಭೆಯಲ್ಲಿ ಒಕ್ಕೂಟಕ್ಕೆ ಇಂಡಿಯಾ (I.N.D.I.A) ಎಂದು ಹೆಸರಿಡಲಾಗಿತ್ತು. ಇದು ವೈರಲ್ ಆಗಿದ್ದು, ಈಗ ದೇಶಾದ್ಯಂತ ಇಂಡಿಯಾ VS ಎನ್ ಡಿಎ ಎಂದು ರಾಜಕೀಯ ಮಾಡಲಾಗುತ್ತಿದೆ.

ಈ ಹಿನ್ನಲೆಯಲ್ಲಿ,  ವಿರೋಧ ಪಕ್ಷಗಳ ಮೈತ್ರಿಯನ್ನು ‘ಇಂಡಿಯನ್ ಮುಜಾಹಿದ್ದೀನ್, ಈಸ್ಟ್ ಇಂಡಿಯಾ ಕಂಪನಿ, ಪಿಎಫ್‌ಐ ಕೂಡ ಇಂಡಿಯಾವನ್ನು ಹೊಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, “ನಮ್ಮ ಪಾಸ್‌ಪೋರ್ಟ್ ಕೂಡ ರಿಪಬ್ಲಿಕ್ ಆಫ್ ಇಂಡಿಯಾ ಎಂದು ಬರೆಯುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.  

“ಮೋದಿಜಿಯವರ ಮುದ್ದಿನ ಯೋಜನೆಗಳಾದ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಖೇಲೋ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ ಅವರ ಪ್ರಮುಖ ಚಿಂತಕರ ಚಾವಡಿ (ನೀತಿ ಆಯೋಗ) ಕೂಡ ಟೀಮ್ ಇಂಡಿಯಾ ಎಂದು ಕರೆಯಲ್ಪಡುತ್ತದೆ.

ಸರ್ವೋಚ್ಚ ನಾಯಕ (ನರೇಂದ್ರ ಮೋದಿ) ಇಂಡಿಯಾ ಮೈತ್ರಿಯಿಂದ ವಿಚಲಿತರಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ನಮಗಿರುವ ಸಮಸ್ಯೆ ಏನೆಂದರೆ, ಪ್ರಧಾನಿ ಈಶಾನ್ಯಕ್ಕಿಂತ (ಮಣಿಪುರ) ಈಸ್ಟ್ ಇಂಡಿಯಾ ಕಂಪನಿಯ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ. ಮಣಿಪುರ ಟೂಲ್‌ಕಿಟ್‌ನ ದಿಕ್ಕು ತಪ್ಪಿಸುವ ಸಮಸ್ಯೆಗಳ ಕಿಟ್ ಅನ್ನು ಸಕ್ರಿಯಗೊಳಿಸಲಾಗಿದೆ” ಎಂದು ಹೇಳಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್

ಮಣಿಪುರವನ್ನು 1949ರಲ್ಲಿ ಭಾರತಕ್ಕೆ ಸೇರಿಸಲಾಯಿತು. ಇದನ್ನು 1956ರಲ್ಲಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ, 1972ರಲ್ಲಿ ರಾಜ್ಯ ಸ್ಥಾನಮಾನ ನೀಡಲಾಯಿತು. ಮಣಿಪುರವು ಭೌಗೋಳಿಕವಾಗಿ ಗುಡ್ಡಗಾಡು ಪ್ರದೇಶ. ಅಲ್ಲಿ ಬಯಲು ಪ್ರದೇಶವೆಂದರೆ ಅದು ಶೇ.10ರಷ್ಟಿರುವ ಕಣಿವೆ ಭೂಮಿ ಮಾತ್ರ. ಈ ಕಣಿವೆ ಪ್ರದೇಶದಲ್ಲಿ ಬಹುಪಾಲು ಅಂದರೆ ರಾಜ್ಯದ ಜನಸಂಖ್ಯೆಯ ಶೇ.53% ರಷ್ಟು ಮಣಿಪುರಿ ಮಾತನಾಡುವ ‘ಮೈತಿ’ ಜನರು ಇಲ್ಲಿ ವಾಸಿಸುತ್ತಾರೆ. ಶೇ.90 ರಷ್ಟಿರುವ ಗುಡ್ಡಗಾಡು ಪ್ರದೇಶಗಳಲ್ಲಿ ಕುಕಿ, ನಾಗಾ ಮತ್ತು ಸೋಮಿ ಸೇರಿದಂತೆ ಬುಡಕಟ್ಟು ಗುಂಪುಗಳು ವಾಸಿಸುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಣಿವೆಯ ಬಹುಪಾಲು ಜನರು ಹಿಂದೂಗಳು. ಗುಡ್ಡಗಾಡು ಜನಾಂಗದವರಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ನರು.

ಈ ಎರಡು ಸಾಮಾಜಿಕ-ಜನಾಂಗೀಯ ಗುಂಪುಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವರ ಆವಾಸಸ್ಥಾನ. ಸಂವಿಧಾನದ 371-ಸಿ ಪ್ರಕಾರ, ಬುಡಕಟ್ಟು ಜನರಲ್ಲದವರು ಗುಡ್ಡಗಾಡು ಪ್ರದೇಶಗಳಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ನಿಷೇಧಿಸುತ್ತದೆ. (ಆದರೆ ಬುಡಕಟ್ಟು ಜನರು ಬಯಲು ಮತ್ತು ಕಣಿವೆಗಳಲ್ಲಿ ಭೂಮಿಯನ್ನು ಪಡೆದುಕೊಳ್ಳಬಹುದು) ಈ ಕಾರಣದಿಂದ ಕಳೆದ 2013ರಲ್ಲಿ “ನಾವು ವಾಸಿಸುವ ಬಯಲು ಭೂಮಿ ನಮಗೆ ಸಾಕಾಗುತ್ತಿಲ್ಲ. ಬರ್ಮಾ ಮತ್ತು ಬಾಂಗ್ಲಾದೇಶದ ನಿರಾಶ್ರಿತರಿಂದ ನಮ್ಮ ಆವಾಸಸ್ಥಾನಕ್ಕೆ ಬೆದರಿಕೆ ಇದೆ. ಹೀಗಾಗಿ ನಮ್ಮನ್ನೂ ಬುಡಗಟ್ಟು ಜನರೆಂದು ಘೋಷಿಸಿ” ಎಂದು ಮೈತಿ ಹಿಂದೂಗಳಿಂದ ಆಗ್ರಹಿಸಲಾಯಿತು. ಇದು ಸಮಸ್ಯೆಯ ಮೊದಲ ಅಂಶವಾಗಿದೆ.

ಹತ್ತು ವರ್ಷಗಳ ನಂತರ, ಏಪ್ರಿಲ್ 19, 2023 ರಂದು ಮಣಿಪುರ ನ್ಯಾಯಾಲಯವು ಈ ಸಂಬಂಧ ಆದೇಶವೊಂದನ್ನು ನೀಡಿತ್ತು. ಅದರಲ್ಲಿ, ಮೈತಿ ಹಿಂದೂಗಳನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸುವ ಬಗ್ಗೆ ರಾಜ್ಯ ಸರ್ಕಾರ (ಬಿಜೆಪಿ) 4 ವಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ (ಬಿಜೆಪಿ) ಶಿಫಾರಸುಗಳನ್ನು ನೀಡಬೇಕು ಎಂದು ಉಲ್ಲೇಖಿಸಿತ್ತು.

ಈಶಾನ್ಯ ರಾಜ್ಯಗಳಲ್ಲಿ ಆರ್.ಎಸ್.ಎಸ್. ಸಂಘಟಣೆ

ಈಗಾಗಲೇ BC, SC, EWC ಯಂತಹ ಮೀಸಲಾತಿಗಳನ್ನು ಬಯಲು ಸೀಮೆಯಲ್ಲಿ ವಾಸಿಸುವ ಮೈತಿಗಳು ಅನುಭವಿಸುತ್ತಿದ್ದಾರೆ. ರಾಜ್ಯದ 60 ವಿಧಾನಸಭಾ ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳು ಕಣಿವೆಗಳಲ್ಲಿ ವಾಸಿಸುವ ಮೈತಿ ಹಿಂದೂಗಳ ಪಾಲಾಗಿವೆ. ಸರ್ಕಾರಿ ಇಲಾಖೆಗಳಲ್ಲಿ, ಶಿಕ್ಷಣ ಮತ್ತು ಆರ್ಥಿಕತೆಯಲ್ಲಿ ಅವರಿಗೆ ಆದ್ಯತೆ ನೀಡಲಾಗುತ್ತಿದೆ. ಈಗ ಅವರನ್ನೂ ಬುಡಕಟ್ಟು ಎಂದು ಘೋಷಿಸಿದರೆ, ಮಣಿಪುರದ ಬುಡಕಟ್ಟು ಗುಂಪುಗಳು ತಮ್ಮ ಭೂಮಿ ಮತ್ತು ಭವಿಷ್ಯವನ್ನು ಕಳೆದುಕೊಳ್ಳುತ್ತವೆ ಎಂದು ಪ್ರತಿಭಟಿಸಲು ಪ್ರಾರಂಭಿಸಿದವು.

ಇದಕ್ಕಾಗಿ ಮಣಿಪುರದ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ (ATSUM) ಏಪ್ರಿಲ್ 23 ರಂದು ಗುಡ್ಡಗಾಡು ಪ್ರದೇಶಗಳಲ್ಲಿ 12 ಗಂಟೆಗಳ ಮುಷ್ಕರವನ್ನು ನಡೆಸಿತು. ನಂತರ, ಮೇ 3 ರಂದು, ಮಣಿಪುರದ ರಾಜಧಾನಿ ಇಂಫಾಲ್ (ಬಯಲು ಪ್ರದೇಶ) ಸೇರಿದಂತೆ 10 ಸ್ಥಳಗಳಲ್ಲಿ ರ‍್ಯಾಲಿಯನ್ನು ಆಯೋಜಿಸಿತು. ಈ ವೇಳೆ 60 ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳು ಜಮಾಯಿಸಿ ಪ್ರತಿಭಟನೆ ದಾಖಲಿಸಿದರು. ಆ ರ‍್ಯಾಲಿಯಲ್ಲಿ ಮೊದಲ ಬಾರಿಗೆ ಯೋಜಿತ ದಾಳಿ ನಡೆಸಲಾಯಿತ್ತು.

‘ಮೈತಿ ಮಹಿಳೆಯನ್ನು ಕುಕಿ ಬುಡಕಟ್ಟು ಜನಾಂಗದವರು ಲೈಂಗಿಕ ದೌರ್ಜನ್ಯ ಎಸಗಿ ಕೊಂದಿದ್ದಾರೆ’ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದು, ದಾಳಿಗೆ ಪ್ರಮುಖ ಕಾರಣವಾಯಿತು, ಆ ದ್ವೇಷ ಪ್ರಚಾರದ ಬಿಸಿ, ಸರಣಿ ಹಿಂಸೆಯ ಜ್ವಾಲೆಯನ್ನು ಹೊತ್ತಿಸಿತು. ಆ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಬಹುಪಾಲರು ಬುಡಕಟ್ಟು ಕುಕಿ ಸಮುದಾಯಕ್ಕೆ ಸೇರಿದವರಾಗಿದ್ದರು. ಇವರು ಹೆಚ್ಚಾಗಿ ವಾಸಿಸುವ ಸುರಸಂದಪುರ ಜಿಲ್ಲೆ, ರಾಜಧಾನಿ ಇಂಫಾಲದಲ್ಲೂ ಕುಕಿ ಬುಡಕಟ್ಟು ಜನಾಂಗವನ್ನು ಗುರಿಯಾಗಿಸಿಕೊಂಡು ಮೈತಿಗಳು ದಾಳಿ ನಡೆಸಿದರು.

ಆರ್.ಎಸ್.ಎಸ್. ಪಥಸಂಚಲನ ಇಂಫಾಲ್, ಮಣಿಪುರ

ಹಿಂದೂ ಧಾರ್ಮಿಕ ಚಿಹ್ನೆಗಳು ಮತ್ತು ಧ್ವಜಗಳು ಇರುವ ಮನೆಗಳನ್ನು ಹೊರತುಪಡಿಸಿ, ಉಳಿಕೆ ಇರುವ ಕುಕಿ ಮನೆಗಳ ಮೇಲೆ ದಾಳಿಯನ್ನು ತೀವ್ರಗೊಳಿಸಲಾಯಿತು. ಈ ಹಿಂಸಾಚಾರದಲ್ಲಿ ಮನೆಗಳು, ಶಾಲೆಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಒಡೆದು ಹಾಕಲಾಗಿದೆ ಮತ್ತು ಬೆಂಕಿ ಹಚ್ಚಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಕುಕಿ ಬುಡಕಟ್ಟು ಜನಾಂಗದವರ ಸ್ಮಾರಕಗಳು ಮತ್ತು ಪೂಜಾ ಸ್ಥಳಗಳನ್ನು ಕೆಡವಲಾಗಿದೆ. ಮೇ 3 ರಂದು ನಡೆದ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಲವರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.

ಆ ರಾತ್ರಿ ಮಣಿಪುರದ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಯಿತು ಮತ್ತು ಇಂಟರ್ನೆಟ್ ಸೇವೆಗಳನ್ನು ಸಹ ಕಡಿತಗೊಳಿಸಲಾಯಿತು. ಸೇನೆಯನ್ನು ಕರೆಸಿ, ಪ್ರತಿಭಟನಾಕಾರರನ್ನು ಕಂಡರೆ ಗುಂಡಿಕ್ಕುವಂತೆ ಆದೇಶವನ್ನೂ ಹೊರಡಿಸಲಾಯಿತು. ಈ ಹಿನ್ನಲೆಯಲ್ಲಿ ಮಣಿಪುರ ರಾಜ್ಯದ ಕುಸ್ತಿಪಟು ಮೇರಿ ಕೋಮ್ ಅವರು ಟ್ವೀಟ್ ಮೂಲಕ ಪ್ರಧಾನಿಯವರಿಗೆ ‘ನಮ್ಮ ರಾಜ್ಯ ಹೊತ್ತಿ ಉರಿಯುತ್ತಿದೆ’ ಎಂದು ಮನವಿ ಮಾಡಿದರು. ಆದರೆ ಅಂದು ಕರ್ನಾಟಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಹೋದಯರು ಬ್ಯುಸಿಯಾಗಿದ್ದರು.

ಮಣಿಪುರದ ಎರಡು ಜನಾಂಗೀಯ ಗುಂಪುಗಳ ನಡುವೆ ಹರಡಿರುವ ಈ ದ್ವೇಷ ರಾಜಕೀಯ, ಹಿಂಸಾಚಾರ ಮತ್ತು ಗಲಭೆಗಳ ಹಿಂದೆ ನ್ಯಾಯಾಲಯದ ಆದೇಶಗಳು ಮಾತ್ರವಲ್ಲದೆ ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕ ಸಂಪನ್ಮೂಲಗಳ ಶೋಷಣೆಯನ್ನೂ ಒಳಗೊಂಡಿದೆ. 2022ರಲ್ಲಿ ಎರಡು ಹಂತಗಳಲ್ಲಿ ನಡೆದ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದಿತ್ತು. ಗೆದ್ದವರಲ್ಲಿ ಬಹುಪಾಲರು ಮೈತಿ ಸಮುದಾಯಕ್ಕೆ ಸೇರಿದ ಹಿಂದೂಗಳು.

ಆರ್.ಎಸ್.ಎಸ್ ಕಾರ್ಯಕ್ರಮದಲ್ಲಿ ಮೈತೇಯಿ ರಾಜಕುಮಾರ ಟಿಕೇಂದ್ರಜಿತ್, ರಾಜ ಕುಲಚಂದ್ರ ಭಾವಚಿತ್ರ.

ಸುಮಾರು 300 ವರ್ಷಗಳಷ್ಟು ಹಳೆಯದಾದ ಮೈತಿಗಳ ‘ಸನಾಮಹಿ’ ಸಂಸ್ಕೃತಿಯು ಅಲ್ಲಿನ ಹಿಂದೂ ಧರ್ಮದ ಆಚರಣೆಗಳೊಂದಿಗೆ ಹೆಣೆದುಕೊಂಡಿದೆ. ಹಾಗಾಗಿ, ಬಹುಸಂಖ್ಯಾತ ಮೈತಿ ಸಮುದಾಯದವರ ಮೇಲೆ ಕಾಳಜಿ ವಹಿಸುವುದಾಗಿ ಹೇಳಿಕೊಂಡಿರುವ ಬಿಜೆಪಿ, ಕ್ರಿಶ್ಚಿಯನ್ ಕುಕಿ ಬುಡಕಟ್ಟುಗಳ ವಿರುದ್ಧ ಮೈತಿ ಸಮುದಾಯವನ್ನು ಎತ್ತಿಕಟ್ಟಿ ರಾಜಕೀಯ ಲಾಭ ಪಡೆದುಕೊಂಡಿದೆ. ಇದಕ್ಕಾಗಿ, ಮಣಿಪುರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯೋಜನೆಯನ್ನು ಜಾರಿಗೆ ತರಬೇಕೆಂಬ ಮೈತಿಗಳ ಬೇಡಿಕೆಗೆ ಆದ್ಯತೆ ನೀಡಲಾಗುತ್ತಿದೆ. ಇದು ಕುಕಿ ಬುಡಕಟ್ಟುಗಳನ್ನು ಬಯಲು ಸೀಮೆಯಿಂದ ಓಡಿಸುವ ಕುತಂತ್ರವೂ ಇದರಲ್ಲಿ ಅಡಗಿದೆ.

ಒಂದೆಡೆ ಆಡಳಿತಾರೂಢ ಬಿಜೆಪಿ ಸರ್ಕಾರ ಅರಣ್ಯ ರಕ್ಷಣೆಯ ಹೆಸರಿನಲ್ಲಿ ಕುಕಿ ಬುಡಕಟ್ಟುಗಳನ್ನು ಗುಡ್ಡಗಾಡು ಪ್ರದೇಶಗಳಿಂದ ಹೊರದಬ್ಬಿ ಮನೆ, ಕಟ್ಟಡಗಳನ್ನು ನೆಲಸಮ ಮಾಡುತ್ತಿದೆ. ಮತ್ತೊಂದೆಡೆ ಗುಡ್ಡಗಾಡು ಪ್ರದೇಶದಲ್ಲಿ ಬುಡಕಟ್ಟುಗಳಲ್ಲದವರ ಅತಿಕ್ರಮಣಗಳೂ ಹೆಚ್ಚುವಂತೆ ನೋಡಿಕೊಳ್ಳುತ್ತಿವೆ. ಏತನ್ಮಧ್ಯೆ, ‘ನೆರೆಯ ದೇಶಗಳಿಂದ ಕುಕಿ ಬುಡಕಟ್ಟು ಜನಾಂಗದವರು ಮಣಿಪುರಕ್ಕೆ ನುಸುಳಿದ್ದಾರೆ ಮತ್ತು ಸ್ಥಳೀಯ ಕುಕಿ ಜನರು ಅವರನ್ನು ಬೆಂಬಲಿಸುತ್ತಿದ್ದಾರೆ’ ಎಂದು ವ್ಯವಸ್ಥಿತವಾಗಿ ದ್ವೇಷದ ಅಭಿಯಾನವನ್ನು ಮೈತೇಯಿ ಸಮುದಾಯ ಮತ್ತು ಸಂಘಪರಿವಾರದ ಕೃಪಾ ಫೋಸಿತ ಸಂಘಟನೆಗಳು ಮಾಡುತ್ತಿವೆ.

ಧಾರ್ಮಿಕ ನಿಂದನೆಗಳು ಇವುಗಳಿಂದ ಹೊರತಾಗಿಲ್ಲ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಅಸಂಖ್ಯಾತ ಕ್ರೈಸ್ತ ಚರ್ಚುಗಳನ್ನು ರಾಜ್ಯ ಸರ್ಕಾರದ ಒಡೆತನದ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿ ಬಿಜೆಪಿ ಸರ್ಕಾರ ಕೆಡವುತ್ತಿದೆ. ಪ್ರಸ್ತುತ ಹಿಂಸಾಚಾರದಲ್ಲಿ ಕ್ಯಾಥೋಲಿಕ್ ಚರ್ಚ್, ಲುಥೆರನ್ ಚರ್ಚ್ ಮತ್ತು ಬ್ಯಾಪ್ಟಿಸ್ಟ್ ಕನ್ವೆನ್ಷನ್ ಚರ್ಚ್ ಸೇರಿದಂತೆ ನೂರಾರು ಚರ್ಚುಗಳು ಸುಟ್ಟು ಹೋಗಿವೆ ಎಂದು ವರದಿಯಾಗಿವೆ. ಇದೆಲ್ಲವೂ 1983ರಲ್ಲಿ ಅಸ್ಸಾಂನಲ್ಲಿ ನಡೆದ ಹಿಂಸಾತ್ಮಕ ನೆಲ್ಲಿ ಹತ್ಯಾಕಾಂಡದ ನಂತರದ ಘಟನೆಗಳನ್ನು ನೆನಪಿಸುತ್ತದೆ. ಈ ಕೃತ್ಯದ ಹಿಂದೆಯೂ ಆರೆಸ್ಸೆಸ್ ಸಂಘಟನೆಯ ಕೈವಾಡವಿತ್ತು ಎನ್ನುತ್ತಾರೆ ಅಸ್ಸಾಂನ ಬುಡಕಟ್ಟು ಜನರು.

ಸನಾಮಹಿ ಧರ್ಮದ ಪವಿತ್ರ ಚಿನ್ಹೆ

ಕರ್ನಾಟಕದಲ್ಲಿ ನಮಗೆ ತಿಳಿದ ಹಿಂದೂ ಸಂಘಟನೆಗಳಂತೆಯೆ ಮಣಿಪುರದಲ್ಲೂ ಅರಂಬೈ ತೆಂಗೋಲ್, ಮೈತಿ-ಲೀಪನ್ ಸೇರಿದಂತೆ ಬಿಜೆಪಿಯ ಆಶೀರ್ವಾದ ಪಡೆದ ಕೆಲವು ಹಿಂದೂ ಫ್ಯಾಸಿಸ್ಟ್ ಸಂಘಟನೆಗಳು ಈ ಹಿಂಸಾಚಾರದಲ್ಲಿ ತೊಡಗಿಕೊಂಡಿವೆ ಎಂದು ಹೇಳಲಾಗುತ್ತಿದೆ. ಆಧುನಿಕ ಬಂದೂಕುಗಳನ್ನು ಹಿಡಿದುಕೊಂಡು ದ್ವಿಚಕ್ರ ವಾಹನಗಳಲ್ಲಿ ಗುಂಪು ಗುಂಪಾಗಿ ತೆರಳಿ, ಪೊಲೀಸ್ ಠಾಣೆಗಳನ್ನು ಲೂಟಿ ಮಾಡಿ, ಕುಕಿ ಆದಿವಾಸಿಗಳ ಹಳ್ಳಿಗಳಿಗೆ ನುಗ್ಗಿ, ಅವರ ಮನೆ, ಸಾಮಾಗ್ರಿ, ಹೆಂಗಸರು ಮತ್ತು ಪುರುಷರನ್ನು ಧ್ವಂಸಗೊಳಿಸಿ ಹತ್ಯೆಯಲ್ಲಿ ತೊಡಗುತ್ತಾರೆ. ಮಣಿಪುರದ ರಾಜಪ್ರಭುತ್ವದ ಸಂಸ್ಕೃತಿಯಾದ ‘ಸನಾಮಹಿ’ ಸಾಮ್ರಾಜ್ಯವನ್ನು ಮರಳಿ ತರುವುದು ಈ ಹಿಂದೂ ಸಂಘಟನೆಗಳ ಮುಖ್ಯ ಗುರಿಯಾಗಿದೆ. ಮಣಿಪುರದ ಆರ್‌ಎಸ್ಎಸ್ ಪ್ರಧಾನ ಕಛೇರಿಯಲ್ಲಿ ಅವರ ಸನಾಮಹಿ ಧ್ವಜವೇ ಹಾರುತ್ತಿದೆ ಎಂದು ಹೇಳಲಾಗುತ್ತಿದೆ.

ಆರ್ಥಿಕವಾಗಿ, ಕುಕಿ ಬುಡಕಟ್ಟು ಜನಾಂಗದವರ ಭೂಮಿಯೇ, ಬಯಲು ಸೀಮೆಯಲ್ಲಿ ವಾಸಿಸುವ ಮೈತಿಗಳ ಗುರಿಯಾಗಿದೆ. ಬುಡಕಟ್ಟು ಜನಾಂಗದವರೆಂದು ಘೋಷಿಸಿಕೊಂಡರೆ ಗುಡ್ಡಗಾಡು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು. ಆದರೆ, ಇದು ಮೈತಿಗಳ ಒಟ್ಟಾರೆ ಮನಸ್ಥಿತಿಯಲ್ಲ. ಅದೇ ಸಮಾಜದ ಹಣವಂತ ಆಡಳಿತ ವರ್ಗದ ಬೇಡಿಕೆ. ಬಿಜೆಪಿ ಸರ್ಕಾರದ ರಾಷ್ಟ್ರೀಯ ಖಾದ್ಯ ತೈಲ ಯೋಜನೆಗಾಗಿ National Mission on Edible Oils-Oil Palm (NMEO-OP) ಈಶಾನ್ಯ ರಾಜ್ಯಗಳಲ್ಲಿ 2.5 ಲಕ್ಷ ಹೆಕ್ಟೇರ್ ಭೂಮಿ ಬೇಕು. ಅದರ ಬೃಹತ್ ಜಲ ಸಂಪನ್ಮೂಲ ಬೇಕು. ಪತಂಜಲಿ, ಗೋದ್ರೇಜ್, ರುಚಿ, ಸಂಜೀವ್ ಗೋಯೆಂಕಾ ಅವರಂತಹ ದೊಡ್ಡ ಬಂಡವಾಳಶಾಹಿಗಳು ತಮ್ಮ ತೈಲ ವ್ಯವಹಾರವು ಅಭಿವೃದ್ಧಿ ಹೊಂದಲು ಯಾವುದೇ ತೊಂದರೆಯಿಲ್ಲದೆ ಆದಿವಾಸಿಗಳ ಭೂಮಿಯನ್ನು ಪಡೆಯಬೇಕಾಗಿದೆ. ಅವರು ವಾಸಿಸುವ ಜೌಗು ಭೂಮಿಯಿಂದ ಮತ್ತು ಜಲಮೂಲಗಳಿಂದ ಅವರನ್ನು ಓಡಿಸಬೇಕು.

ಮಣಿಪುರದ ಬುಡಕಟ್ಟು ಮಹಿಳೆಯರನ್ನು ವಿವಸ್ತ್ರಗೊಳಿಸಿ, ನಡುರಸ್ತೆಯಲ್ಲಿ ಎಳೆದೊಯ್ದು ತಂದೆ, ಸಹೋದರನನ್ನು ಕೊಂದ ಕ್ರೌರ್ಯ ವಿಡಿಯೋ ಹೊರಬಿದ್ದ ಬಳಿಕ, ಎರಡೂವರೆ ತಿಂಗಳಿಂದ ಬಾಯಿ ಬಿಡದ ಪ್ರಧಾನಿ, ‘ಇದು 140 ಕೋಟಿ ಭಾರತೀಯರಿಗೆ ನಾಚಿಕೆಗೇಡಿನ ಸಂಗತಿ’ ಎಂದಿದ್ದಾರೆ.

ಹೌದು, ದಲ್ಲಾಳಿ ಬಂಡವಾಳಶಾಹಿಗಳ ಗುಲಾಮರು, ಮತಾಂಧತೆ, ವರ್ಣಭೇದ ನೀತಿಯನ್ನು ಪ್ರಚೋದಿಸುವ, ಫ್ಯಾಸಿಸ್ಟ್ ನೀತಿಗಳ ಮೂಲಕ ಜನರನ್ನು ವಿಭಜಿಸುವ, ಮಹಿಳೆಯರನ್ನು ವಿವಸ್ತ್ರಗೊಳಿಸುವ, ಹೆಣ್ಣುಮಕ್ಕಳನ್ನು ಸುಟ್ಟುಹಾಕುವ, ರೈತರನ್ನು ಸಾಯಿಸುವ, ಆದಿವಾಸಿಗಳನ್ನು ಅವರ ಭೂಮಿಯಿಂದ ಓಡಿಸುವ ದ್ವೇಷದ ಜನಸಮೂಹವನ್ನು ಅಧಿಕಾರದಲ್ಲಿ ಇಟ್ಟುಕೊಂಡಿದ್ದಕ್ಕಾಗಿ ನಾವು ನಾಚಿಕೆ ಪಡಲೇಬೇಕು.

ದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

“ಮೋದಿಯವರೇ ಮಣಿಪುರ ಹೊತ್ತಿ ಉರಿಯುತ್ತಿದೆ; ಕೂಡಲೇ ಅಲ್ಲಿಗೆ ಹೋಗಿ” ಎಂದು ವಿರೋಧ ಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಪ್ರಧಾನಿ ಮೋದಿಯವರು ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತುಂಬಾ ಬ್ಯುಸಿಯಾಗಿದ್ದರು. ಒಂದು ರಾಜ್ಯ ಹಿಂಸಾಚಾರದಿಂದ ನಲುಗಿದಾಗ ಕೇಂದ್ರ ಗೃಹ ಕಾರ್ಯದರ್ಶಿ ಅಮಿತ್ ಶಾ ತಕ್ಷಣವೇ ಅಲ್ಲಿಗೆ ಹೋಗಬೇಕಿತ್ತು. ಆದರೆ, ಅವರೂ ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು.

“ಪ್ರಧಾನಿ.. ಮಣಿಪುರದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಹಿಂಸಾಚಾರ ನಡೆಯುತ್ತಿದೆ. ಅದರ ಬಗ್ಗೆ ಮಾತನಾಡದೆ ಬಾಯಿ ಮುಚ್ಚಿಕೊಂಡಿದ್ದೀರಾ?” ಎಂದು ವಿರೋಧ ಪಕ್ಷ ಸೇರಿದಂತೆ ಎಲ್ಲರೂ ಕಿಡಿಕಾರಿದರು. ದೆಹಲಿಯಲ್ಲಿ ಬ್ಯುಸಿಯಾಗಿದ್ದ ಪ್ರಧಾನಿಗೆ ಮಣಿಪುರದ ಹಿಂಸಾಚಾರದಿಂದ ಸಂತ್ರಸ್ತರಾದ ಜನರ ಕೂಗು ಕೇಳಿಸಲಿಲ್ಲವೇನೊ, ಹಾಗಾಗಿ ಮಣಿಪುರ ವಿಚಾರದಲ್ಲಿ ಪ್ರಧಾನಿ ಮಾತನಾಡಲೇ ಇಲ್ಲ.

ಮೇ 4 ರಂದು ಮಣಿಪುರದಲ್ಲಿ ಎರಡು ಜನಾಂಗೀಯ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಎರಡು ತಿಂಗಳಿಗೂ ಹೆಚ್ಚು ಕಾಲ ಸಮಸ್ಯೆ ಮುಂದುವರಿದಿದೆ. ಈ ಅವಧಿಯಲ್ಲಿ, ಅನೇಕ ಚರ್ಚುಗಳು ಮತ್ತು ದೇವಾಲಯಗಳನ್ನು ಸುಟ್ಟು ಬೂದಿ ಮಾಡಲಾಗಿದೆ. ಸಾವಿರಾರು ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ, ಮತ್ತು ಬೆಂಕಿ ಹಚ್ಚಲಾಗಿದೆ. ಎರಡು ಕಡೆಯ ಘರ್ಷಣೆಯಲ್ಲಿ ಸುಮಾರು 150 ಜನರು ಸಾವನ್ನಪ್ಪಿದ್ದಾರೆ.

ಈ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಜಪಾನ್, ಆಸ್ಟ್ರೇಲಿಯಾ, ಪಪುವಾ ನ್ಯೂಗಿನಿಯಾ, ಅಮೆರಿಕ, ಫ್ರಾನ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್ ಎಂದು ವಿಶ್ವದಾದ್ಯಂತ ಪ್ರವಾಸ ಮಾಡಿದ್ದಾರೆ. ಹಾಗಾಗಿ, ಮಣಿಪುರದ ಬಗ್ಗೆ ಯೋಚಿಸಲು ಅವರಿಗೆ ಸಮಯವಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಆದರೆ ಇದೀಗ ಮಣಿಪುರ ವಿಚಾರದಲ್ಲಿ ಮೌನ ಮುರಿದಿದ್ದಾರೆ.

ಮಣಿಪುರದಲ್ಲಿ ಕುಕಿ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಎಳೆದೊಯ್ದ ವಿಡಿಯೋ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೇ ಸಂದರ್ಭದಲ್ಲಿ ಮಣಿಪುರದ ಬಗ್ಗೆ ಪ್ರಧಾನಿ ಮೋದಿ ಮೊಟ್ಟಮೊದಲ ಬಾರಿಗೆ ಮಾತನಾಡಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನ ನಿನ್ನೆ (ಜುಲೈ 20) ಆರಂಭವಾಗಿದೆ. ಸಭೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ,

“ಮಣಿಪುರದಲ್ಲಿ ನಡೆದ ಘಟನೆಯ ಬಗ್ಗೆ ತಿಳಿದು ಆಘಾತವಾಯಿತು. ಯಾವ ಅಪರಾಧಿಯೂ ತಪ್ಪಿಸಿಕೊಳ್ಳುಲು ಬಿಡುವುದಿಲ್ಲ ಎಂದು ನಾನು ಈ ದೇಶಕ್ಕೆ ಭರವಸೆ ನೀಡುತ್ತೇನೆ. ಕಾನೂನು ತನ್ನ ಎಲ್ಲಾ ಶಕ್ತಿಯೊಂದಿಗೆ ನಿರ್ಧರಿಸುತ್ತದೆ. ಮಣಿಪುರದ ಹೆಣ್ಣುಮಕ್ಕಳಿಗೆ ನಡೆದಿರುವುದನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ಅಲ್ಲದೆ, ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಕಾನೂನನ್ನು ಬಲಪಡಿಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.

“38 ಪಕ್ಷಗಳೊಂದಿಗೆ ಮಾತನಾಡಲು ಸಮಯವಿದೆ. ಆದರೆ ಪ್ರಧಾನಿಗೆ ಮಣಿಪುರಕ್ಕೆ ಹೋಗಲು ಸಮಯವಿಲ್ಲ” ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. “ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರಧಾನಿಗೆ ನಾಚಿಕೆಯಾಗಬೇಕು” ಎಂದು ಸಿಪಿಎಂ ನಾಯಕರಲ್ಲಿ ಒಬ್ಬರಾದ ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸುಪ್ರೀಂ ಕೋರ್ಟ್ ಹಿಂಸಾಚಾರವನ್ನು ಖಂಡಿಸಿದ ನಂತರವೇ ಮೋದಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ” ಎಂದು ಸಂಸದ ಕಪಿಲ್ ಸಿಬಲ್ ಹೇಳಿದ್ದಾರೆ. ಮಣಿಪುರ ವಿಷಯ ಸಂಸತ್ತಿನಲ್ಲಿ ದಿನವಿಡೀ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರ ಮೇಲಿನ ಕ್ರೌರ್ಯ, ಕಳೆದ ಮೇ ತಿಂಗಳಲ್ಲಿ ನಡೆದಿದ್ದು ಎನ್ನಲಾಗಿದೆ. ಆ ರಾಜ್ಯದಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿದ್ದರಿಂದ ತಕ್ಷಣ ಪತ್ತೆಯಾಗಿರಲಿಲ್ಲ. ಆ ದೌರ್ಜನ್ಯ ಬೆಳಕಿಗೆ ಬಂದ ನಂತರ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳುತ್ತಿದೆ ಅಲ್ಲಿನ ಅಧಿಕಾರ ವರ್ಗ. ಬಹುಶಃ ಅದು ಹೊರಬರದಿದ್ದರೆ, ಯಾವುದೇ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಇಷ್ಟು ದೊಡ್ಡ ಘಟನೆ ನಡೆದಿದ್ದು, ಸರ್ಕಾರಕ್ಕೆ ಅದರ ಬಗ್ಗೆ ತಿಳಿಯದೇ ಇರಲು ಸಾಧ್ಯವೇ ಇಲ್ಲ. ಆಗ ಏಕೆ ಕ್ರಮ ಕೈಗೊಂಡಿಲ್ಲ?

ಮಣಿಪುರದಲ್ಲಿ ಅನೇಕ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದರು. ಅವರನ್ನು ಹತ್ತಿಕ್ಕಲು ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯದ ತಂತ್ರವನ್ನು ಅನುಸರಿಸಿದ್ದಾರೆ. ಗಲಭೆಗಳ ಸಮಯದಲ್ಲಿ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದು ಒಂದು ಮಾದರಿ (Pattern) ಆಗಿದೆ. ಇದು ಗುಜರಾತ್ ಮತ್ತು ಮುಜಫರಾಬಾದ್‌ನಂತಹ ಎಲ್ಲೆಡೆ ನಡೆದಿದೆ.

ಮೇಲುಗೈ ಸಾಧಿಸಬಲ್ಲ ಗುಂಪು… ಅದು ಜಾತಿವಾದಿ ಗುಂಪು ಇರಬಹುದು, ಧಾರ್ಮಿಕ ಗುಂಪು ಇರಬಹುದು ಅಥವಾ ಜನಾಂಗೀಯ ಗುಂಪು ಇರಬಹುದು. ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವೆ ಸಮಸ್ಯೆಗಳು ಎದುರಾದಾಗ, ಬಹುಸಂಖ್ಯಾತರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ವಿಧಾನವನ್ನು ಅನುಸರಿಸುತ್ತಾರೆ. ಮಣಿಪುರದ ಇಬ್ಬರು ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅದನ್ನು ವಿಡಿಯೋದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಶಕ್ತಿಯನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಅವರು ಅದನ್ನು ಅಧಿಕಾರವನ್ನು ಉಳಿಸಿಕೊಳ್ಳುವ ವಿಷಯವಾಗಿ ನೋಡುತ್ತಾರೆ.

ಮಣಿಪುರ ಘಟನೆಯನ್ನು ಪ್ರತ್ಯೇಕ ವಿಷಯವಾಗಿ ನೋಡಬಾರದು. ಮಹಿಳೆಯರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡುವುದೇ ಇಲ್ಲ. ಮಣಿಪುರದಲ್ಲಿ ಕಳೆದ ಎರಡು ತಿಂಗಳಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಇಂದಿನವರೆಗೂ ಚರ್ಚೆಯ ವಿಷಯವಾಗಿರಲಿಲ್ಲ. ಮಣಿಪುರದ ಆಚೆಗಿನ ಮಾಧ್ಯಮಗಳೂ ಅದಕ್ಕೆ ಪ್ರಾಮುಖ್ಯತೆ ನೀಡಲಿಲ್ಲ. ಆದರೆ ಈ ವಿಡಿಯೋ ಬಹಿರಂಗವಾದ ನಂತರ ಈ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ದರಿಂದ, ನಾವು ನಮ್ಮ ಮೌನವನ್ನು ಪ್ರಶ್ನಿಸುವ ಸಮಯ ಎಂದು ಇದನ್ನು ನೋಡಬೇಕು.

ಮಣಿಪುರ ಹೊತ್ತಿ ಉರಿಯುತ್ತಿರುವ ಈ ಹೊತ್ತಿನಲ್ಲಿ ಪ್ರಧಾನಿ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ. ಅವುಕ್ಕೆಲ್ಲ ಅವರಿಗೆ ಸಮಯವಿದೆ. ವೀಡಿಯೊ ಬಿಡುಗಡೆಯಾಗಿ ದೇಶವೇ ಅಲ್ಲೋಲಕಲ್ಲೋಲವಾದ ಬಳಿಕವೇ ಮಣಿಪುರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. “ಹೃದಯ ಭಾರವಾಗಿದೆ” ಎಂದು ಪ್ರಧಾನಿ ಹೇಳುತ್ತಾರೆ. ಅಧಿಕಾರವಿಲ್ಲದ ಸಾಮಾನ್ಯ ಜನರು ಹಾಗೆ ಹೇಳಬಹುದು. ಆದರೆ ದೇಶದ ಪ್ರಜೆಗಳ ರಕ್ಷಣೆಯ ಹೊಣೆ ಹೊತ್ತಿರುವ ಮತ್ತು ಎಲ್ಲ ಅಧಿಕಾರ ಹೊಂದಿರುವ ಪ್ರಧಾನಿ ಸಾಮಾನ್ಯರಂತೆ ಮಾತನಾಡುತ್ತಿದ್ದಾರೆ.

ಮಣಿಪುರದಲ್ಲಿ ಶಾಂತಿ ಮರಳಿದೆ ಎಂದು ಅವರು ಹೇಳುತ್ತಾರೆ. ಆದರೆ, ಮನೆಗಳಿಂದ ಹೊರಹಾಕಲ್ಪಟ್ಟ ಸುಮಾರು 50,000 ಜನರು ಇನ್ನೂ ತಮ್ಮ ಮನೆಗಳಿಗೆ ಮರಳಿಲ್ಲ. ಎರಡು ತಿಂಗಳಿಂದ ಸಮಸ್ಯೆ ನಡೆಯುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ಗೃಹ ಸಚಿವ ಅಮಿತ್ ಶಾ ಅವರು ಕಾಳಜಿ ವಹಿಸುತ್ತಿದ್ದಾರೆ ಎಂದು ಹೇಳುತ್ತಲೇ ಇದ್ದಾರೆ. ಅವರು ನಿಜವಾಗಿಯೂ ಸೂಕ್ತ ಕ್ರಮ ಕೈಗೊಂಡಿದ್ದರೆ ಹಿಂಸಾಚಾರ ನಿಯಂತ್ರಣಕ್ಕೆ ಬರುತ್ತಿತ್ತು.

ಡಬಲ್ ಇಂಜಿನ್ ಸರ್ಕಾರ (ಕೇಂದ್ರ ಮತ್ತು ರಾಜ್ಯದಲ್ಲಿ ಒಂದು ಪಕ್ಷದ ಆಡಳಿತ) ಇದ್ದರೆ ಯಾವುದೇ ಸಮಸ್ಯೆ ಇಲ್ಲ ಎಂದು ಮೋದಿ ಪ್ರಚಾರ ವೇದಿಕೆಗಳಲ್ಲಿ ಮಾತನಾಡುತ್ತಿದ್ದರು. ‘ಡಬಲ್ ಇಂಜಿನ್ ಸರ್ಕಾರ್’ ಇದ್ದರೂ ಮಣಿಪುರದಲ್ಲಿ ಏಕೆ ಇಷ್ಟೊಂದು ದೌರ್ಜನ್ಯಗಳು ನಡೆಯುತ್ತಿವೆ? ಇದಕ್ಕೆ ಪ್ರಧಾನಿ ಉತ್ತರಿಸುವರೇ?!

ರಾಜಕೀಯ

ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಯನ್ನು ಖಂಡಿಸಿ ಕೋಯಂಬತ್ತೂರಿನ ಉಕ್ಕಡಂ ಪ್ರದೇಶದಲ್ಲಿ ಎಸ್‌ಡಿಪಿಐ ಪಕ್ಷವು ಪ್ರತಿಭಟನೆಯನ್ನು ನಡೆಸಿತು.

ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಯನ್ನು ವಿರೋಧಿಸಿ ಎಸ್‌ಡಿಪಿಐ ಸದಸ್ಯರು ಕೊಯಮತ್ತೂರಿನಲ್ಲಿ ಮೇಣದಬತ್ತಿಯ ಪ್ರದರ್ಶನ ನಡೆಸಿದರು. ಇದರಲ್ಲಿ ಕ್ರೈಸ್ತರು, ಮುಸ್ಲಿಮರು, ವಿವಿಧ ಪಕ್ಷಗಳು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮಣಿಪುರದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಕುಕಿ-ಮೈತೇಯಿ ಎಂಬ ಎರಡು ಪಂಗಡಗಳ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ವಿವಿಧೆಡೆ ಬೆಂಕಿ ಹಚ್ಚಿದ ಘಟನೆಗಳೂ ನಡೆದಿವೆ. ಇದನ್ನು ತಡೆಯಲು ಸರ್ಕಾರ ಸೇನೆಯನ್ನು ನಿಯೋಜಿಸಿ ಹಲವು ಕಟ್ಟುನಿಟ್ಟಿನ ನಿರ್ಬಂಧ ಹಾಗೂ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕುಕಿ ಪಂಥದ ಚರ್ಚುಗಳನ್ನು ಗುರಿಯಾಗಿಸಿ ಮೈತೇಯ್ ಜನರು ನಡೆಸಿದ ಘಟನೆಗಳೂ ಈ ಗಲಭೆಯಲ್ಲಿ ನಡೆದಿವೆ. ವರದಿಗಳ ಪ್ರಕಾರ, ಇಲ್ಲಿಯವರೆಗೆ 25ಕ್ಕೂ ಹೆಚ್ಚು ಚರ್ಚ್‌ಗಳ ಮೇಲೆ ದಾಳಿ ನಡೆಸಲಾಗಿದೆ ಮತ್ತು ಮೂರು ಚರ್ಚ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

ಈ ಸಂದರ್ಭದಲ್ಲಿ, ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಿನ ದಾಳಿಯನ್ನು ಖಂಡಿಸಿ ಎಸ್‌ಡಿಪಿಐ ಪಕ್ಷವು ಕೊಯಂಬತ್ತೂರಿನ ಉಕ್ಕಡಂ ಪ್ರದೇಶದಲ್ಲಿ ಮೇಣದಬತ್ತಿಯ ಪ್ರದರ್ಶನವನ್ನು ನಡೆಸಿತು. ಇದರಲ್ಲಿ ಎಸ್‌ಡಿಪಿಐ, ಮುಸ್ಲಿಮರು, ಕ್ರಿಶ್ಚಿಯನ್ನರು, ವಿಡುದಲೈ ಚಿರುತ್ತೈಗಳ್ ಸೇರಿದಂತೆ ಪಕ್ಷಗಳು ಭಾಗವಹಿಸಿ ಮಣಿಪುರದ ಘಟನೆಯನ್ನು ಖಂಡಿಸಿ ಮತ್ತು ಅಲ್ಲಿ ನಡೆಯುತ್ತಿರುವ ಧಾರ್ಮಿಕ ಸಂಘರ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಡಿ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎ.ಮುಸ್ತಫಾ ವಹಿಸಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಎಂ.ಅಬು ತಾಹಿರ್, ರಾಜ್ಯ ಕಾರ್ಯದರ್ಶಿ ಹಾಗೂ ವ್ಯಾಪಾರಿಗಳ ಸಂಘದ ಮುಖಂಡ ಎ.ಅಬ್ದುಲ್ ಕರೀಂ, ಎನ್.ರಘುಪು ನಿಸ್ತಾರ್-ರಾಜ್ಯ ಪ್ರಧಾನ ಕಾರ್ಯದರ್ಶಿ (ಎಸ್‌ಡಿಪಿಐ ಟ್ರೇಡ್ ಯೂನಿಯನ್), ಕು.ರಾಮಕೃಷ್ಣನ್- ಪ್ರಧಾನ ಕಾರ್ಯದರ್ಶಿ, ತಂದೈ ಪೆರಿಯಾರ್ ದ್ರಾವಿಡರ್ ಕಳಗಂ, ಸುಸಿ ಕಲೈಯರಸನ್-ಅಧ್ಯಕ್ಷರು, ಕೊಯಮತ್ತೂರು ವಿಡುದಲೈ ಚಿರುತ್ತೈಗಳ್,  ಕಾಮ್ರೇಡ್ ಮು.ಇಲವೇನಿಲ್-ರಾಜ್ಯ ಕಾರ್ಯದರ್ಶಿ, ತಮಿಳು ಟೈಗರ್ಸ್ ಪಾರ್ಟಿ, ಮುಂತಾದವರು ಉಪಸ್ಥಿತರಿದ್ದರು.

ರಾಜಕೀಯ

“ಮಣಿಪುರ ಹೊತ್ತಿ ಉರಿಯುತ್ತಿದೆ! ಮಣಿಪುರದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ! ಪ್ರಧಾನಿ ಮತ್ತು ಗೃಹ ಸಚಿವರು ಕರ್ನಾಟಕದಲ್ಲಿ ರೋಡ್ ಷೋ ಮಾಡುತ್ತ ಬ್ಯುಸಿಯಾಗಿದ್ದಾರೆ”! ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.

“ಎಲ್ಲಾ ಗಲಭೆಗಳು ನಡೆಯೋದು ಬಿಜೆಪಿ ಆಡಳಿತದಲ್ಲೇ ಏಕೆ? ಗುಜರಾತ್ ಗಲಭೆ: ಬಿಜೆಪಿ ಸರ್ಕಾರ, ತ್ರಿಪುರ ಗಲಭೆ: ಬಿಜೆಪಿ ಸರ್ಕಾರ, ಬೆಂಗಳೂರು ಗಲಭೆ: ಬಿಜೆಪಿ ಸರ್ಕಾರ, ದೆಹಲಿ ಗಲಭೆ: ಬಿಜೆಪಿ ಸರ್ಕಾರ, ಈಗ ಮಣಿಪುರ ಗಲಭೆ: ಬಿಜೆಪಿ ಸರ್ಕಾರ. ಬಿಜೆಪಿ ಆಡಳಿತದಲ್ಲಿ ಜನರಿಗೆ ತಮ್ಮ ಸ್ವಂತ ಮನೆಯೊಳಗೇ ರಕ್ಷಣೆ ಇಲ್ಲವಾದಾಗ ದೇಶದ ರಕ್ಷಣೆ ಸಾಧ್ಯವೇ?

ನಿಜವಾದ ಭಜರಂಗಿಗಳು (ಕ್ರೀಡಾಪಟುಗಳು) ದೆಹಲಿಯ ಜಂತರ್ ಮಂಥರ್‌ನಲ್ಲಿ ತಮಗಾದ ಶೋಷಣೆಯ ನೋವು ತಾಳದೆ ಪ್ರತಿಭಟಿಸುತ್ತಿದ್ದಾರೆ. ನರೇಂದ್ರ ಮೋದಿ ಅವರೇ, ಇಲ್ಲಿನ ನಕಲಿ ಭಜರಂಗಿಗಳ ಓಲೈಕೆ ಬಿಟ್ಟು ಅಸಲಿ ಭಜರಂಗಿಗಳ ನೋವು ಆಲಿಸಿ. ಅಲ್ಲೂ “ಬಜರಂಗಿ ಪುನಿಯಾ” ಎಂಬ ಹೆಸರಿನ ಕ್ರೀಡಾಪಟು ನೋವಿನಲ್ಲಿದ್ದಾರೆ. ನಿಮಗೆ ಆ ಅಸಲಿ ಬಜರಂಗಿಗಳ ಹಿತ ಬೇಡವೇ?

ಬಜರಂಗದಳ ಬಿಜೆಪಿಯ ಮುದ್ದಿನ ಕೂಸು ಎಂದಾದರೆ, ದಿನೇಶ್ ನಾಯ್ಕ ಎಂಬ ದಲಿತನ ಕೊಲೆಯ ಹೊಣೆಯನ್ನು ಬಿಜೆಪಿ ಹೊರಲಿ; ಮಂಗಳೂರಿನ ಪಬ್ ದಾಳಿಯ ಹೊಣೆಯನ್ನು ಬಿಜೆಪಿ ಹೊರಲಿ; ಸಮಾಜಘಾತುಕ ಕೃತ್ಯಗಳೆಲ್ಲದರ ಹೊಣೆಯನ್ನು ಬಿಜೆಪಿಯೇ ಹೊರಲಿ; ನಂತರ ಬಜರಂಗದಳವನ್ನು ಸಮರ್ಥಿಸಿಕೊಳ್ಳಲಿ.

ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುವ ಬಜರಂಗದಳ, PFI ಸೇರಿದಂತೆ ಯಾವುದೇ ಸಂಘಟನೆಯ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರೆ ಉರಿದು ಬೀಳುವ ಬಿಜೆಪಿ ಸಂವಿಧಾನ ಬದಲಿಸುತ್ತೇವೆ ಎಂದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ನರೇಂದ್ರ ಮೋದಿ ಅವರೇ ಹಾಗೂ ಬಿಜೆಪಿಗೆ ಸಂವಿಧಾನ ಮುಖ್ಯವೇ, ಸಂವಿಧಾನ ವಿರೋಧಿ ಸಂಘಟನೆಗಳು ಮುಖ್ಯವೇ? ಸ್ಪಷ್ಟಪಡಿಸಿ ನಂತರ ಮಾತಾಡಲಿ.

ಬಜರಂಗದಳ ಬಿಜೆಪಿಯ ಅಂಗಸಂಘಟನೆಯೇ? ಇಷ್ಟೊಂದು ಮಮಕಾರ ತೋರುವ ಕರ್ನಾಟಕ ಬಿಜೆಪಿ, ಬಜರಂಗದಳದವರಿಗೆ ಎಷ್ಟು ಟಿಕೆಟ್ ನೀಡಿದೆ? ಹಿರಿಯರ ನಾಯಕತ್ವವನ್ನು ಮುಗಿಸಲು ಅವರ ಮಕ್ಕಳು, ಸೊಸೆಯಂದಿರು, ಪತ್ನಿಯರಿಗೆ ಟಿಕೆಟ್ ನೀಡುವ ಬದಲು ಬಜರಂಗದಳದವರಿಗೆ ಟಿಕೆಟ್ ನೀಡಿಲ್ಲವೇಕೆ? ಅಮಾಯಕ ಹುಡುಗರನ್ನು ಕಾನೂನು ವಿರೋಧಿ ಕೃತ್ಯಗಳಿಗೆ ಬಳಸಿ ಲಾಭ ಪಡೆಯುವುದು ಮಾತ್ರ ಬಿಜೆಪಿಯ ಕೆಲಸವೇ?

ಬಜರಂಗದಳ ಅತ್ಯತ್ತಮ ಸಂಘಟನೆಯಾಗಿದ್ದರೆ ಅಮಿತ್ ಶಾ ಅವರು ತಮ್ಮ ಮಗನನ್ನು BCCI ಹುದ್ದೆಯಿಂದ ಕಿತ್ತು ಬಜರಂಗದಳದ ರಾಷ್ಟ್ರಾಧ್ಯಕ್ಷನನ್ನಾಗಿ ನೇಮಿಸಲಿ. ಬೊಮ್ಮಾಯ್ ತಮ್ಮ ಮಗನ ಉದ್ಯಮವನ್ನು ಮುಚ್ಚಿಸಿ ರಾಜ್ಯಾಧ್ಯಕ್ಷನನ್ನಾಗಿ ಮಾಡಲಿ. ಬಿಜೆಪಿಗರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಡವರ, ದಲಿತ, ಹಿಂದುಳಿದವರ ಮಕ್ಕಳನ್ನು ಬಳಸಿ ಕೋರ್ಟು, ಕೇಸಿಗೆ ಅಲೆಯುವಂತೆ ಮಾಡುವುದನ್ನು ಬಿಡಲಿ.

ಬಜರಂಗದಳ ಬಗ್ಗೆ ಭಯಂಕರವಾಗಿ ಮಾತನಾಡುವ ಕರ್ನಾಟಕ ಬಿಜೆಪಿ ನಾಯಕರು ಉತ್ತರಿಸಲಿ. ಸಿ.ಟಿ.ರವಿ ಮಕ್ಕಳು, ಬಜರಂಗದಳದ ಯಾವ ಹುದ್ದೆಯಲ್ಲಿದ್ದಾರೆ? ಆರ್.ಅಶೋಕ್ ಮಗ ಬಜರಂಗದಳಲ್ಲಿ ಏನು ಕೆಲಸ ಮಾಡುತ್ತಿದ್ದಾರೆ? ತೇಜಶ್ವಿ ಸೂರ್ಯ ಏಕೆ ಬಜರಂಗದಳ ಸೇರಿಲ್ಲ? ಬೊಮ್ಮಾಯ್ ಮಗ ಬಜರಂಗದಳ ಸೇರಿ ಬೆಂಕಿ ಹಚ್ಚುವುದನ್ನು ಬಿಟ್ಟು ಉದ್ಯಮಿಯಾಗಿದ್ದೇಕೆ”? ಎಂದು ಕರ್ನಾಟಕ ಕಾಂಗ್ರೆಸ್ ಪಕ್ಷವು ಸರಣಿ ಟ್ವೀಟ್ ಮಾಡಿ ಬಿಜೆಪಿಯ ವಿರುದ್ಧ ಕೆಂಡ ಕಾರಿದೆ.