ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Parliament Archives » Dynamic Leader
October 16, 2024
Home Posts tagged Parliament
ದೇಶ

ಸಂಸತ್ತಿನ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಕೇಂದ್ರ ಬಿಂದುವಾಗಿದೆ. ಕೇಂದ್ರ ಗೃಹ ಸಚಿವಾಲಯವು ಸ್ಪೀಕರ್ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ!

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯನ್ನು ಒಳಗೊಂಡಿರುವ ಸಂಸತ್ತಿನ ಭದ್ರತೆಯನ್ನು ಲೋಕಸಭೆಯ ಸ್ಪೀಕರ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ಸಲಹೆಯಂತೆ ನಿರ್ವಹಿಸಲಾಗುತ್ತದೆ. ಈ ಪದ್ಧತಿಯನ್ನು 1929 ರಿಂದ ಅನುಸರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು, ಈ ಪದ್ಧತಿಯನ್ನು ಬದಲಿಸುವ ರೀತಿಯಲ್ಲಿ ಮೇ 3 ರಂದು ಆದೇಶವೊಂದನ್ನು ಹೊರಡಿಸಿದೆ. ಅದರಲ್ಲಿ ಸಂಸತ್ತಿನ ಭದ್ರತೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದ್ದು, ಭದ್ರತೆಗಾಗಿ ಹೆಚ್ಚುವರಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು ನೇಮಿಸಲಾಗುವುದು ಎಂದು ಹೇಳಿದೆ.

ಆದೇಶದ ಪ್ರಕಾರ, ಸಂಸತ್ತಿನ ಭದ್ರತೆಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನಿರ್ದೇಶಕ ಅಜಯ್ ಕುಮಾರ್ ಅವರು ಆದೇಶಿಸಿದ್ದಾರೆ. ಈ ಆದೇಶವೇ ಸದ್ಯ ವಿವಾದಕ್ಕೆ ಕಾರಣವಾಗಿದೆ.

ಸಂಸತ್ತಿನ ಭದ್ರತೆಯು ಸ್ಪೀಕರ್ ನಿಯಂತ್ರಣದಲ್ಲೇ ಇರಬೇಕು ಎಂದು ಲೋಕಸಭೆಯ ಮಾಜಿ ಕಾರ್ಯದರ್ಶಿ ಆಚಾರಿ ಹೇಳಿದ್ದಾರೆ. “ಸಂಸತ್ತು ವಿಮಾನ ನಿಲ್ದಾಣಗಳಂತೆ ಸಾರ್ವಜನಿಕ ವಲಯದ ಸಂಸ್ಥೆ ಅಲ್ಲ. ದೇಶಾದ್ಯಂತ ಚುನಾಯಿತ ಸಂಸದರ ಭದ್ರತೆಯನ್ನು ಖಾತ್ರಿಪಡಿಸುವುದು ಸ್ಪೀಕರ್ ಮತ್ತು ಲೋಕಸಭೆ ಸಚಿವಾಲಯದ ಅಧಿಕಾರಕ್ಕೆ ಒಳಪಟ್ಟಿರುತ್ತದೆ” ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸಂಸದ ಜಾನ್ ಬ್ರಿಟಾಸ್, ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಅದರಲ್ಲಿ, “ಸಂಸತ್ತಿನ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಕೇಂದ್ರ ಬಿಂದುವಾಗಿದೆ. ಕೇಂದ್ರ ಗೃಹ ಸಚಿವಾಲಯವು ಸ್ಪೀಕರ್ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಸಂಸತ್ತಿನ ಭದ್ರತೆಯು ಗೃಹ ಸಚಿವಾಲಯದ ನಿಯಂತ್ರಣಕ್ಕೆ ಹೋದರೆ, ಸಂಸತ್ತಿನ ಉಭಯ ಸದನಗಳಲ್ಲಿ ಭದ್ರತಾ ಸಿಬ್ಬಂದಿ ನೇಮಕ, ಸಂಸದರು, ಅವರ ಸಹಾಯಕರು, ಪತ್ರಕರ್ತರು ಮತ್ತು ಸಂದರ್ಶಕರ ಪ್ರವೇಶ ಸೇರಿದಂತೆ ಎಲ್ಲಾ ನಿರ್ಧಾರಗಳನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ ಪಾಲಾಗುತ್ತವೆ ಎಂಬುದು ಗಮನಾರ್ಹ.

ದೇಶ

“ಈ ನಾಚಿಕೆಗೇಡಿನ ಭದ್ರತಾ ಲೋಪಕ್ಕಾಗಿ ಉನ್ನತ ಅಧಿಕಾರಿಗಳನ್ನು ಶಿಕ್ಷಿಸದೆ, ಸಂಸದರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದು, ಆ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ”

“ಪ್ರಧಾನಿ ಮತ್ತು ಅವರ ಪಕ್ಷವು ದೇಶದಲ್ಲಿ ಏಕಪಕ್ಷೀಯ ಆಡಳಿತವನ್ನು ಸ್ಥಾಪಿಸಲು ಬಯಸುತ್ತಿದ್ದಾರೆ” ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ‘ಎಕ್ಸ್’ ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಭದ್ರತೆ ಕೊರತೆ ಕುರಿತು ಗೃಹ ಸಚಿವರಿಂದ ವರದಿ ಕೇಳಿದ ಕಾರಣಕ್ಕಾಗಿ 141 ಸಂಸದರನ್ನು ಅಮಾನತು ಮಾಡಲಾಗಿದೆ. 6 ಅತಿಕ್ರಮಣ ಪ್ರವೇಶ ಮಾಡಿದವ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತಿಕ್ರಮಣ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಸಂಸದರು ಮುಕ್ತರಾಗಿದ್ದಾರೆ. ಅವರನ್ನು ಇನ್ನೂ ವಿಚಾರಣೆ ಮಾಡಿಲ್ಲ.

ಇದು ಯಾವ ರೀತಿಯ ವಿಚಾರಣೆ? ಸಂಸತ್ತಿನ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಹಿರಿಯ ಅಧಿಕಾರಿಗಳು ಏಕೆ ಇದರ ಹೊಣೆಯನ್ನು ವಹಿಸಿಕೊಂಡಿಲ್ಲ? ನಿಸ್ಸಂಶಯವಾಗಿ ಅತಿಕ್ರಮಣಕಾರರು ತಿಂಗಳಿನಿಂದ ಈ ಯೋಜನೆ ರೂಪಿಸಿರುತ್ತಾರೆ. ಈ ಗುಪ್ತಚರ ವೈಫಲ್ಯಕ್ಕೆ ಯಾರು ಹೊಣೆ? ಸಂಸತ್ತಿನ ಬಹು-ಪದರದ ಭದ್ರತೆಯನ್ನು ಗಮನಿಸಿ, ಇಬ್ಬರು ಅತಿಕ್ರಮಣ ಪ್ರವೇಶ ಮಾಡಿದವರು ತಮ್ಮ ಶೂಗಳಲ್ಲಿ ಹಳದಿ ಅನಿಲ ಡಬ್ಬಿಗಳನ್ನು ಮರೆಮಾಡಿ ಕಟ್ಟಡದೊಳಗೆ ನುಸುಳಿ, ಭಾರತೀಯ ಪ್ರಜಾಪ್ರಭುತ್ವದ ತೊಟ್ಟಿಲನ್ನು ಹೇಗೆ ತಲುಪಿದರು?

ಪ್ರಧಾನಿ ಮತ್ತು ಅವರ ಪಕ್ಷವು ದೇಶದಲ್ಲಿ “ಏಕಪಕ್ಷೀಯ ಆಡಳಿತ” ಸ್ಥಾಪಿಸಲು ಬಯಸುತ್ತಿದ್ದಾರೆ. ಅವರು “ಏಕ್ ಅಕೇಲಾ” ಎಂದು ಹೇಳುತ್ತಾರೆ. ಇದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವುದಕ್ಕೆ ಸಮ. ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ಮೂಲಕ ಅವರು ನಿಖರವಾಗಿ ಇದನ್ನೇ ಮಾಡಿದ್ದಾರೆ. ಈ ನಾಚಿಕೆಗೇಡಿನ ಭದ್ರತಾ ಲೋಪಕ್ಕಾಗಿ ಉನ್ನತ ಅಧಿಕಾರಿಗಳನ್ನು ಶಿಕ್ಷಿಸದೆ, ಸಂಸದರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದು, ಆ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

ಸಂಪಾದಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು
dynamicleaderdesk@gmail.com

ಭಾರತದ ಸಂಸತ್ತಿನಿಂದ 92 ಸಂಸದರನ್ನು ಅಮಾನತು ಮಾಡಲಾಗಿದೆ. ಬಿಜೆಪಿಯ ಪ್ರಜಾಸತ್ತಾತ್ಮಕ ಸಾಧನೆಗಳಲ್ಲಿ ಇದೂ ಒಂದಾಗಿದೆ!

ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡುವುದು ಹೊಸದಲ್ಲ. ಕಳೆದ 5 ವರ್ಷಗಳಲ್ಲಿ ದೇಶದ ಪ್ರಮುಖ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಅನುಮತಿ ನೀಡುವಂತೆ ಧ್ವನಿ ಎತ್ತಿದ್ದಕ್ಕಾಗಿ 71 ಬಾರಿ ಸಂಸತ್ತಿನ 57 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಬೆಲೆ ಏರಿಕೆ, ಜಿಎಸ್‌ಟಿ ತೆರಿಗೆ ಹೆಚ್ಚಳ, ಮಹಾರಾಷ್ಟ್ರ ಕುದುರೆ ವ್ಯಾಪಾರ, ಮಣಿಪುರ ಗಲಭೆ, ರಫೇಲ್ ಸಮಸ್ಯೆ, ಟೆಲಿಫೋನ್ ಕದ್ದಾಲಿಕೆ, ಅದಾನಿ ಸಮಸ್ಯೆಯಂತಹ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ 2019 ರಿಂದ 57 ಸಂಸತ್ ಸದಸ್ಯರನ್ನು ಸಂಸತ್ತಿನಲ್ಲಿ 71 ಬಾರಿ ಅಮಾನತುಗೊಳಿಸಲಾಗಿದೆ.

2022ರ ಮುಂಗಾರು ಅಧಿವೇಶನದಲ್ಲಿ ಜಿಎಸ್‌ಟಿ ತೆರಿಗೆ ಹೆಚ್ಚಳದ ವಿರುದ್ಧ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿತು. ಆದರೆ ಚರ್ಚೆಗೆ ಅನುಮತಿ ನಿರಾಕರಿಸಲಾಯಿತು. ಆ ಸಮಯದಲ್ಲಿ ಸಂಸತ್ತಿನಲ್ಲಿ ಘೋಷಣೆ ಕೂಗಿದ 23 ಸಂಸದರನ್ನು ಅಮಾನತುಗೊಳಿಸಲಾಗಿದೆ. ಡಿಎಂಕೆ ಪಕ್ಷದ ಐವರು ಸಂಸದರು ಸೇರಿದಂತೆ ರಾಜ್ಯಸಭೆಯಲ್ಲಿ 19 ಸಂಸದರನ್ನು ಅಮಾನತುಗೊಳಿಸಲಾಯಿತು. ಇದೇ ವಿಚಾರವಾಗಿ ಲೋಕಸಭೆಯಲ್ಲಿ ನಾಲ್ವರು ಸಂಸದರನ್ನು ಅಮಾನತುಗೊಳಿಸಲಾಗಿತ್ತು.

2021ರ ಚಳಿಗಾಲದ ಅಧಿವೇಶನದಲ್ಲಿ ರೈತರ ಸಮಸ್ಯೆ ಮತ್ತು ರೈತರ ಆಂದೋಲನದ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿದ 12 ಸಂಸದರನ್ನು ರಾಜ್ಯಸಭೆಯಲ್ಲಿ ಅಮಾನತುಗೊಳಿಸಲಾಯಿತು. ಇಂತಹ ಸಮಸ್ಯೆಗಳಿಂದಾಗಿ ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳ 57 ಸಂಸದರನ್ನು 71 ಬಾರಿ ಅಮಾನತುಗೊಳಿಸಿರುವುದು ಬಹಿರಂಗವಾಗಿದೆ. ಪ್ರಶ್ನಿಸುವವರನ್ನು ಅಮಾನತು ಗೊಳಿಸುವುದೇ ಬಿಜೆಪಿ ನಾಯಕತ್ವದ ರಾಜಕೀಯ ಶೈಲಿ.

ರಾಹುಲ್ ಗಾಂಧಿ ಮತ್ತು ಮಹುವಾ ಮೊಯಿತ್ರಾ ಅವರನ್ನು ಪದಚ್ಯುತಿ ಮಾಡಿದ ಹಾಗೇ ಮಾಡಲು ಸಾಧ್ಯವಾಗದ ಕಾರಣ ‘ಅಮಾನತು’ ಎಂಬ ಅಸ್ತ್ರವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಈಗಲೂ ಅದನ್ನೇ ಮಾಡಿದ್ದಾರೆ. 13 ರಂದು ಸಂಸತ್ತಿನ ಮೇಲೆ ಸ್ಮೋಕ್ ಬಾಂಬ್ ಎಸೆಯಲಾಯಿತು. ಈ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದ ಕನಿಮೋಳಿ ಕರುಣಾನಿಧಿ ಸೇರಿದಂತೆ 13 ಲೋಕಸಭಾ ಸದಸ್ಯರುಗಳೊಂದಿಗೆ ಒಬ್ಬ ರಾಜ್ಯಸಭಾ ಸದಸ್ಯರೊಬ್ಬರನ್ನೂ ಅಮಾನತುಗೊಳಿಸಲಾಯಿತು. ಅದರ ನಂತರ, 33 ಲೋಕಸಭಾ ಸದಸ್ಯರು ಮತ್ತು 45 ರಾಜ್ಯಸಭಾ ಸದಸ್ಯರು ಸೇರಿದಂತೆ 78 ಸಂಸದರನ್ನು ನಿನ್ನೆ ಅಮಾನತುಗೊಳಿಸಲಾಗಿದೆ. ಹಾಗಾಗಿ ಒಟ್ಟು 92 ಸದಸ್ಯರನ್ನು ಅಮಾನತು ಮಾಡಲಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಭೇಟಿ ನೀಡಿ ಸಂಸತ್ ಸದಸ್ಯರಿಗೆ ಸಾಂತ್ವನ ಹೇಳಲಿಲ್ಲ? ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಬಂದು ವಿವರಣೆಯನ್ನೂ ನೀಡುತ್ತಿಲ್ಲ? ವಿವರಿಸುವಲ್ಲಿ ಇವರಿಗೆ ಸಮಸ್ಯೆ ಏನಿದೆ?

ಈ ಹಿನ್ನಲೆಯಲ್ಲಿ, ಪ್ರಧಾನಿ ಮೋದಿ ಅವರು ಹಿಂದಿ ದಿನಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ‘ಸಂಸತ್ತಿನ ಭದ್ರತಾ ಲೋಪದ ಘಟನೆಯು ನೋವುಂಟುಮಾಡಿದೆ. ಈ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಅವ್ಯವಹಾರದ ಹಿಂದಿನ ವ್ಯಕ್ತಿಗಳು ಮತ್ತು ಅವರ ಉದ್ದೇಶವನ್ನು ಆಳವಾಗಿ ತನಿಖೆ ಮಾಡುವುದು ಅವಶ್ಯಕವಾಗಿದೆ. ಸಂಸತ್ತಿನ ಘಟನೆಯ ಗಂಭೀರತೆಯನ್ನು ಸುಲುಭವಾಗಿ ಅಂದಾಜಿಸಲು ಸಾಧ್ಯವಿಲ್ಲ. ಅದೇ ತೀವ್ರತೆಯಿಂದ ಲೋಕಸಭೆಯ ಸ್ಪೀಕರ್ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಮೂಹಿಕ ಮನೋಭಾವದಿಂದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಇಂತಹ ವಿಷಯಗಳ ಮೇಲೆ ನಿರರ್ಥಕ ವಿವಾದಗಳನ್ನು ಎಲ್ಲರೂ ತಪ್ಪಿಸಬೇಕು’ ಎಂದು ಪ್ರಧಾನಿ ಹೇಳಿರುವುದಾಗಿ ವರದಿಯಾಗಿದೆ.

ಅದನ್ನೇ ಸಂಸತ್ತಿನಲ್ಲಿ ಹೇಳಿದರೆ ಕಡಿಮೆಯಾಗುವುದೇನು? ಸಂಸತ್ತಿನ ಸದಸ್ಯರಿಗೆ ಯಾವುದೇ ಸ್ಥಳದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ಆ ವಿಷಯವನ್ನು ಸಂಸತ್ತಿನಲ್ಲಿ “ಹಕ್ಕುಗಳ ಉಲ್ಲಂಘನೆ” ಎಂಬ ಅರ್ಥದಲ್ಲಿ ಪ್ರಸ್ತಾಪಿಸಿ ಚರ್ಚೆಗಳನ್ನು ನಡೆಸಲಾಗುತ್ತದೆ. ಆದರೆ ಇಲ್ಲಿ ಎಲ್ಲಾ ಸದಸ್ಯರಿಗೆ ಬೆದರಿಕೆ ಇರುವುದಾಗಿ ಕಾಣುತ್ತಿದೆ. ಬಿಜೆಪಿ ಸದಸ್ಯರೂ ಗಾಬರಿಯಾಗಿದ್ದಾರೆ. ಇದು ದೊಡ್ಡ ಬೆದರಿಕೆ ಅಲ್ಲವೇ? ಅದನ್ನು ಚರ್ಚಿಸಬೇಕಲ್ಲವೇ?

ಇದನ್ನು ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿಲ್ಲ. “ಗೃಹ ಸಚಿವರು ಉತ್ತರಿಸಬೇಕು” ಎಂದು ಕೇಳುತ್ತಿದ್ದಾರೆ. ಸಂಸತ್ ನಲ್ಲಿ ಗೃಹ ಸಚಿವರು, ಪ್ರಧಾನಿಯ ಬದಲು ಪುಟಗಟ್ಟಲೆ ಭಾಷಣ ಮಾಡುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಈಗ ಅವರು ಉತ್ತರಿಸಬೇಕಾದ ಉತ್ತರವನ್ನು ಏಕೆ ನಿರಾಕರಿಸುತ್ತಿದ್ದಾರೆ? “ಸಂಸತ್ತಿಗೆ ಬರಲು ನಮಗೆ ಯಾವ ರಕ್ಷಣೆ ಇದೆ?” ಎಂದು ಕೇಳುವ ಹಕ್ಕು ಸಂಸತ್ತಿನ ಸದಸ್ಯರಿಗಿಲ್ಲವೇ?

ದೇಶ

ಕೋಲ್ಕತ್ತಾ: ಸಂಸತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಮೋದಿ ಮತ್ತು ಅದಾನಿ ವಿರುದ್ಧ ಪ್ರಬಲವಾಗಿ ವಾದ ಮಂಡಿಸುತ್ತಿರುವವರಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಪ್ರಮುಖರು. ಇವರು, ಸಂಸತ್ತಿನಲ್ಲಿ ಅದಾನಿಯ ಕುರಿತು ಪ್ರಶ್ನಿಸಲು ಉದ್ಯಮಿ ಹಿರಾನಂದಾನಿಯಿಂದ ಹಣ ಮತ್ತು ಉಡುಗೊರೆಗಳನ್ನು ಲಂಚವಾಗಿ ಪಡೆದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ.

ಅಲ್ಲದೆ, ಹಿರಾನಂದಾನಿ ಮತ್ತು ಅವರ ರಿಯಲ್ ಎಸ್ಟೇಟ್ ಕಂಪನಿ ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳಲು ಲೋಕಸಭೆಯ ವೆಬ್‌ಸೈಟ್ ಮತ್ತು ತಮ್ಮ ಲಾಗಿನ್ ಐಡಿಯನ್ನು ಮಹುವಾ ಮೊಯಿತ್ರಾ ನೀಡಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ಈ ಬಗ್ಗೆ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಪತ್ರ ಬರೆದ ನಂತರ, ಈ ವಿಚಾರದಲ್ಲಿ ಕ್ರಮ ಕೈಗೊಂಡಿರುವ ಸಂಸದೀಯ ನೈತಿಕ ಸಮಿತಿ, ನವೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಮಹುವಾ ಮೊಯಿತ್ರಾ ಅವರಿಗೆ ಆದೇಶ ಮಾಡಿತು.

ಈ ಹಿನ್ನಲೆಯಲ್ಲಿ, ನನ್ನನ್ನು ಸಂಸತ್ತಿನಿಂದ ಹೊರಹಾಕಲು ಬಯಸುವವರು ನನ್ನ ತಲೆ ಕೂದಲನ್ನೂ ಮುಟ್ಟಲಾಗದು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಹೇಳಿದ್ದಾರೆ. ಸಂಸತ್ತಿನಲ್ಲಿ ಅದಾನಿಯ ಕುರಿತು ಪ್ರಶ್ನಿಸಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚವಾಗಿ ಉಡುಗೊರೆ ಪಡೆದಿರುವ ಆರೋಪಕ್ಕೆ ಮೇಲಿನಂತೆ ಮಹುವಾ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.

ದೇಶ ರಾಜಕೀಯ

ನವದೆಹಲಿ: ದ್ವೇಷ ಭಾಷಣದಿಂದ ಪ್ರಭಾವಿತರಾದ ಬಹುಜನ ಸಾಮಾಜ ಪಾರ್ಟಿಯ ಸಂಸದ ಕುನ್ವರ್ ಡ್ಯಾನಿಶ್ ಅಲಿ ಅವರನ್ನು ಕಾಂಗ್ರೆಸ್ ಸಂಸದ ರಾಹುಲ್ ಭೇಟಿ ಮಾಡಿದ್ದಾರೆ.

ಸಂಸತ್ತಿನಲ್ಲಿ ಚರ್ಚೆಯ ಸಂದರ್ಭದಲ್ಲಿ ದೆಹಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಚಂದ್ರಯಾನ-3 ವಿಚಾರವಾಗಿ ಮಾತನಾಡುತ್ತಿದ್ದರು. ಆಗ ಮಾಯಾವತಿ ಅವರ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಅಡ್ಡಿಪಡಿಸುತ್ತಿದ್ದಂತೆ, ಇದರಿಂದ ಕೆರಳಿದ ರಮೇಶ್ ಬಿಧುರಿ, ಡ್ಯಾನಿಶ್ ಅವರನ್ನು ‘ಭಯೋತ್ಪಾದಕ’ ಎಂದು ಸಂಭೋಧಿಸಿದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್‌ನಿಂದ ಸಿಗ್ನಲ್ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ: ಇಸ್ರೋ

ಈ ವಿಚಾರ, ವಿವಾದ ಸೃಷ್ಟಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡ್ಯಾನಿಶ್ ಅಲಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ರಾಹುಲ್ ಜೊತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.

ಇಂಡಿಯಾ ಮೈತ್ರಿಕೂಟದ ಪರವಾಗಿ ಲೋಕಸಭೆಯ ಸ್ಪೀಕರ್‌ಗೆ ಕಳುಹಿಸಿರುವ ಪತ್ರದಲ್ಲಿ, ದ್ವೇಷ ಭಾಷಣ ಮಾಡಿದ ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ.  

ದೇಶ ರಾಜ್ಯ

ಜನಸಂಖ್ಯೆಯ ಆಧಾರದ ಮೇಲೆ, ಲೋಕಸಭೆ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಿದಾಗ, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತದೆ.

ಡಿ.ಸಿ.ಪ್ರಕಾಶ್ ಸಂಪಾದಕರು

ಜನಸಂಖ್ಯೆಯ ಆಧಾರದ ಮೇಲೆ 2026ರ ನಂತರ, ಲೋಕಸಭೆ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಿದಾಗ, ಕರ್ನಾಟಕ, ತಮಿಳುನಾಡು, ಕೇರಳ, ಮತ್ತು ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದ್ದು, ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದಂತಹ ಉತ್ತರದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂಬ ಆಘಾತಕಾರಿ ವರದಿಯನ್ನು ಕಾರ್ನೆಗೀ ಸೆಂಟರ್ (Carnegie Report) ಪ್ರಕಟಿಸಿದೆ.

2026ರಲ್ಲಿ ಮತ್ತೊಮ್ಮೆ ಕ್ಷೇತ್ರದ ಮರುವಿಂಗಡಣೆ:
ಜನಸಂಖ್ಯೆಯ ಆಧಾರದ ಮೇಲೆಯೇ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ (Delimitation) ಮತ್ತು ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಆ ರೀತಿಯಲ್ಲಿ, ಪ್ರತಿ ಕ್ಷೇತ್ರವು ಸರಿಸುಮಾರು ಒಂದೇ ಸಂಖ್ಯೆಯ ಮತದಾರರನ್ನು ಹೊಂದಿದೆ ಎಂದು ಸರ್ಕಾರಗಳು ಖಚಿತಪಡಿಸುತ್ತವೆ. ಅಲ್ಲದೆ, ಜನಸಂಖ್ಯೆ ಹೆಚ್ಚಾದಂತೆ ಕ್ಷೇತ್ರಗಳನ್ನು ಸಹ ಮರುವಿಂಗಡಿಸಲಾಗುತ್ತದೆ. ಆದರೆ, ಕೇಂದ್ರ ಸರ್ಕಾರವು 1976 ರಿಂದ 2000 ರವರೆಗೆ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಅಲ್ಲದೆ, 2001ರಲ್ಲಿ, ನಿಷೇಧವನ್ನು 2026 ರವರೆಗೆ ವಿಸ್ತರಿಸಲಾಯಿತು. ಈ ಹಿನ್ನಲೆಯಲ್ಲಿ, 2026ರ ನಂತರ, ಸಂಸತ್ತಿನ ಕ್ಷೇತ್ರಗಳನ್ನು ಮತ್ತೆ ಜನಸಂಖ್ಯೆಯ ಆಧಾರದ ಮೇಲೆ ಮರುವಿಂಗಡಣೆಗೊಳಿಸಲಾಗುವುದು.

ಆಘಾತಕಾರಿ ಸಂಶೋಧನಾ ವರದಿ:
ಈ ಹಿನ್ನಲೆಯಲ್ಲಿ, ಕಾರ್ನೆಗೀ ಸೆಂಟರ್ (Carnegie Report) ಪ್ರಕಟಿಸಿದ ಸಂಶೋಧನಾ ವರದಿಯಲ್ಲಿ, “ದಕ್ಷಿಣ ಭಾರತದ ರಾಜ್ಯಗಳಿಗಿಂತ ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ತುಂಬಾ ವೇಗವಾಗಿದೆ. ಜನಗಣತಿಯ ಆಧಾರದ ಮೇಲೆ ಸಂಸತ್ತಿನ ಕ್ಷೇತ್ರಗಳನ್ನು ಮರುವಿಂಗಡಣೆಗೊಳಿಸಲಾಗುವುದರಿಂದ, ತುಲನಾತ್ಮಕವಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಕ್ಷೇತ್ರಗಳ ಸಂಖ್ಯೆಯು ಹೆಚ್ಚಾಗುತ್ತದೆ. ಅದೇ ಸಂದರ್ಭದಲ್ಲಿ, ಜನಸಂಖ್ಯೆ ನಿಯಂತ್ರಣದಲ್ಲಿರುವ ದಕ್ಷಿಣ ರಾಜ್ಯಗಳ ಸಂಸದೀಯ ಕ್ಷೇತ್ರಗಳು ಗಣನೀಯವಾಗಿ ಕಡಿಮೆಯಾಗಲಿವೆ. ಅಂದರೆ ಈಗಿರುವ ಕ್ಷೇತ್ರಗಳಲ್ಲಿ ಭಾರಿ ನಷ್ಟವಾಗುತ್ತದೆ!” ಎಂಬ ಅಘಾತಕ್ಕಾರಿ ವರದಿಯನ್ನು ಪ್ರಕಟಿಸಿದೆ.

ಅಲ್ಲದೆ, “2026ರ ನಂತರ ಜನಸಂಖ್ಯೆಯನ್ನು ಅಂದಾಜಿಸಿ, ಅದರ ಆಧಾರದ ಮೇಲೆ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಉತ್ತರದ ರಾಜ್ಯಗಳಿಗೆ ಹೆಚ್ಚುವರಿ ಸ್ಥಾನಗಳು ಸಿಗಲಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತದ ಅತಿದೊಡ್ಡ ರಾಜ್ಯವಾದ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶವು ಪ್ರಸ್ತುತ 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಆದರೆ, ಕ್ಷೇತ್ರಗಳ ಮರು ವಿಂಗಡಣೆ ನಂತರ 11 ಹೆಚ್ಚುವರಿ ಕ್ಷೇತ್ರಗಳು ಪಡೆದು, ಒಟ್ಟು ಕ್ಷೇತ್ರಗಳ ಸಂಖ್ಯೆ 91ಕ್ಕೆ ಏರುವ ನಿರೀಕ್ಷೆಯಿದೆ. ಅಂತೆಯೇ, ಕ್ಷೇತ್ರಗಳ ಮರು ವಿಂಗಡಣೆ ನಂತರ ಅಸ್ತಿತ್ವದಲ್ಲಿರುವ ಕ್ಷೇತ್ರಗಳಿಗಿಂತ ಬಿಹಾರ ರಾಜ್ಯ 10, ರಾಜಸ್ಥಾನ 6 ಮತ್ತು ಮಧ್ಯಪ್ರದೇಶ 4 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಪಡೆಯಲಿದೆ. ಅದೇ ರೀತಿ ಗುಜರಾತ್, ಹರಿಯಾಣ, ಜಾರ್ಖಂಡ್, ದೆಹಲಿ (ಕೇಂದ್ರಾಡಳಿತ ಪ್ರದೇಶ), ಛತ್ತೀಸ್‌ಗಢ ಸೇರಿದಂತೆ ಉತ್ತರದ ರಾಜ್ಯಗಳು ತಲಾ 1 ಲೋಕಸಭಾ ಸ್ಥಾನವನ್ನು ಹೆಚ್ಚುವರಿಯಾಗಿ ಪಡೆಯಲಿವೆ!

ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ:
ಅದೇ ಸಮಯದಲ್ಲಿ “ನಾವಿಬ್ಬರು ನಮಗಿಬ್ಬರು” ಎಂದು ಜನಸಂಖ್ಯಾ ನಿಯಂತ್ರಣವನ್ನು ಜವಾಬ್ದಾರಿಯುತವಾಗಿ ಜಾರಿಗೆ ತಂದ ದಕ್ಷಿಣದ ರಾಜ್ಯಗಳು ಆ ಹೊಣೆಗಾರಿಕೆಗಾಗಿಯೇ ತಕ್ಕ ಶಿಕ್ಷೆಯನ್ನು ಅನಿಭವಿಸಲಿದೆ. ಅಂದರೆ ಅಸ್ತಿತ್ವದಲ್ಲಿರುವ ಕ್ಷೇತ್ರಗಳು ಗಮನಾರ್ಹವಾಗಿ ಕಳೆದುಕೊಳ್ಳಲಿವೆ. ಅದರಲ್ಲೂ ತಮಿಳುನಾಡು ರಾಜ್ಯವು ಪ್ರಸ್ತುತ 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಆದರೆ 2026ರ ನಂತರ ಕೇಂದ್ರ ಸರ್ಕಾರದ ಕ್ಷೇತ್ರದ ಪುನರ್ ವಿಂಗಡಣೆಯಿಂದಾಗಿ ಸುಮಾರು 8 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ತಮಿಳುನಾಡಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕೇವಲ 31ಕ್ಕೆ ಇಳಿಯಲಿದೆ. ತಮಿಳುನಾಡಿನಂತೆ ಮತ್ತೊಂದು ದಕ್ಷಿಣದ ರಾಜ್ಯವಾದ ಕೇರಳವು ಪ್ರಸ್ತುತ 20 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಕಳೆದುಕೊಳ್ಳುವ ಮೂಲಕ 12ಕ್ಕೆ ಕುಗ್ಗಲಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡು ರಾಜ್ಯಗಳು ಒಟ್ಟು 42 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಅದು 34ಕ್ಕೆ ಇಳಿಯಲಿದೆ. ಕರ್ನಾಟಕವೂ ಈಗಿನ 28 ರಿಂದ 2 ಸ್ಥಾನ ಕಳೆದುಕೊಂಡು 26ಕ್ಕೆ ಕುಗ್ಗುವುದೆಂದು ಊಹಿಸಲಾಗಿದೆ!” ಎಂದು ಕಾರ್ನೆಗೀ ವರದಿಯಲ್ಲಿ ಹೇಳಲಾಗಿದೆ.

‘ಸೆಂಟ್ರಲ್ ವಿಸ್ಟಾ’ ನಿರ್ಮಾಣದ ಸಮಯದಲ್ಲೇ ಎದ್ದ ವಿವಾದ:
ಇತ್ತೀಚೆಗಷ್ಟೇ `ಸೆಂಟ್ರಲ್ ವಿಸ್ಟಾ’ ಹೆಸರಿನ ನೂತನ ಸಂಸತ್ ಭವನವನ್ನು ನಿರ್ಮಿಸಿ ಪ್ರಧಾನಿ ಮೋದಿ ಉದ್ಘಾಟಿಸಿದರು. ನೂತನ ಸಂಸತ್ ಭವನ ನಿರ್ಮಾಣದ ವೇಳೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಫೋಟೋಗಳು, ವೀಡಿಯೊಗಳ ವಿವರಗಳು ವಿವಾದವನ್ನು ಹುಟ್ಟುಹಾಕಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಲೋಕಸಭಾ ಮತ್ತು ರಾಜ್ಯಸಭಾ ಕಲಾಪಗಳು ನಡೆಯುವ ಸಭಾಂಗಣದ ಆಸನಗಳು ಈಗಿರುವ ಹಳೆಯ ಸಂಸತ್ ಕಟ್ಟಡಕ್ಕಿಂತ ಎರಡು ಪಟ್ಟು ಹೆಚ್ಚಿಸಲಾಗಿದೆ. ಉದಾಹರಣೆಗೆ, ಪ್ರಸ್ತುತ ಲೋಕಸಭೆಯು 543 ಸದಸ್ಯರನ್ನು ಮತ್ತು ರಾಜ್ಯಸಭೆಯು 245 ಸದಸ್ಯರನ್ನು ಹೊಂದಿದೆ. ಅದರಂತೆಯೇ ಹಳೆಯ ಸಂಸತ್ ಭವನದ ಉಭಯ ಸದನಗಳ ಆಸನಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಈ ಹೊಸ ಸಂಸತ್ ಕಟ್ಟಡದ ಲೋಕಸಭೆಯಲ್ಲಿ 888 ಸ್ಥಾನಗಳು, ರಾಜ್ಯಸಭೆಯಲ್ಲಿ 384 ಸ್ಥಾನಗಳಂತೆ ಒಟ್ಟು 1272 ಹೆಚ್ಚುವರಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನು ಅಂದೇ ಎತ್ತಿ ತೋರಿಸಿದ ವಿರೋಧ ಪಕ್ಷಗಳು, ಸಂಸತ್ತಿನ ಸದಸ್ಯರ ಸ್ಥಾನಗಳನ್ನು ಹೆಚ್ಚಿಸಿರುವುದರಿಂದ ಬಿಜೆಪಿ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಪುನರ್ ವಿಂಗಡಿಸಲು ಹೊರಟಿದೆ ಎಂದು ಅನುಮಾನ ವ್ಯಕ್ತಪಡಿಸಿತು. ನಿರ್ದಿಷ್ಟವಾಗಿ, ಕ್ಷೇತ್ರಗಳ ಮರು ವಿಂಗಡಣೆಯಿಂದ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ಕ್ಷೇತ್ರಗಳ ಸಂಖ್ಯೆಯಲ್ಲಿ ಹಿನ್ನಡೆ ಎದುರಿಸಬೇಕಾಗುತ್ತದೆ. ಬಿಜೆಪಿ ಪ್ರಾಬಲ್ಯವಿರುವ ಉತ್ತರ ಪ್ರದೇಶದಂತಹ ಉತ್ತರದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ದಕ್ಷಿಣ ರಾಜ್ಯದ ನಾಯಕರು ಆತಂಕಗೊಂಡಿದ್ದರು. ಈ ಹಿನ್ನಲೆಯಲ್ಲಿ ಕಾರ್ನೆಗೀ ವರದಿಯೂ ಇದನ್ನು ದೃಢಪಡಿಸಿದೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನ ನಾಳೆಯಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಾಳೆ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. 5 ರಾಜ್ಯಗಳ ಚುನಾವಣೆ, ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಈ ವಿಶೇಷ ಅಧಿವೇಶನದಿಂದ ಕುತೂಹಲ ಮೂಡಿಸಿದೆ. ಇನ್ನು ಕೆಲವೇ ವಾರಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಘೋಷಣೆಗಳು ಹೊರಬೀಳಲಿವೆ.

ಮುಂದಿನ ವರ್ಷದ ಆರಂಭದಲ್ಲಿ ಸಂಸತ್ತಿನ ಚುನಾವಣೆಯ ಅಧಿಸೂಚನೆಗಳನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ವಿರೋಧ ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟದ ಹೆಸರಿನಲ್ಲಿ ಒಗ್ಗೂಡಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.  ಈ ಹಿನ್ನಲೆಯಲ್ಲಿ ಸೆಪ್ಟಂಬರ್ 18 ರಿಂದ 22 ರವರೆಗೆ 5 ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ. ಮೊದಲ ದಿನದ ಕಾರ್ಯಕ್ರಮಗಳು ಎಂದಿನಂತೆ ಹಳೆಯ ಕಟ್ಟಡದಲ್ಲಿ ನಡೆಯಲಿವೆ. ಮರುದಿನ (ಸೆ.19) ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ನಡೆಯಲಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನು ‘ಇಂಡಿಯಾ’ ಮೈತ್ರಿಯೊಂದಿಗೆ ಒಗ್ಗೂಡಿಸಿ ಬಿಜೆಪಿ ವಿರುದ್ಧ ಹೋರಾಡಿ: ಸೋನಿಯಾ ಗಾಂಧಿ

ಈ ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ಪ್ರಕಟಿಸದಿರುವುದನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಖಂಡಿಸಿದವು. ಈ ನಡುವೆ ನಾಳೆ (ಸೆ.17) ಸರ್ವಪಕ್ಷ ಸಭೆ ನಡೆಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಸಂಸದೀಯ ಸುದ್ದಿ ಪತ್ರಿಕೆಯಲ್ಲಿ ಈ ವಿಶೇಷ ಸಭೆಯ ಬಗ್ಗೆ ವಿವರಣೆ ನೀಡಲಾಗಿದೆ. ಅದರಲ್ಲಿ, ‘ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನ ಸಂವಿಧಾನ ರಚನಾ ಸಭೆ ಸ್ಥಾಪನೆಯಾದ ನಂತರ ಸಂಸತ್ತಿನ 75 ವರ್ಷಗಳ ಪಯಣದ ಕುರಿತು ಚರ್ಚೆ ನಡೆಯಲಿದೆ. ಅದರಲ್ಲೂ ಸಂಸದೀಯ ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಪಾಠಗಳನ್ನು ವಿವರವಾಗಿ ಚರ್ಚಿಸಲಾಗುವುದು’ ಎಂದು ಹೇಳಲಾಗಿದೆ.

ಇದಲ್ಲದೇ ಹೊಸ ವಿವಾದ ಸೃಷ್ಟಿಸಿರುವ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮಗಳು, ಅಧಿಕಾರಾವಧಿ) ಮಸೂದೆಯನ್ನು ಈ ಅಧಿವೇಶನದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಪತ್ರಿಕೆ ತಿಳಿಸಿದೆ. ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ಕೇಂದ್ರ ಸರ್ಕಾರವು ಪ್ರಸ್ತುತ ವಿಶೇಷ ಅಧಿವೇಶನದಲ್ಲಿ ಅದನ್ನು ಅಂಗೀಕರಿಸಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ್: ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಿದ ಅಪರಾಧಕ್ಕಾಗಿ ಒಬ್ಬ ಅಮೇರಿಕನ್ ಸೇರಿದಂತೆ 18 ಸಿಬ್ಬಂದಿಯನ್ನು ಬಂಧಿಸಲಾಗಿದೆ!

ಕೆಲವು ವಾರಗಳ ಹಿಂದೆ ಕೇಂದ್ರ ಸರ್ಕಾರವು ‘ಒಂದು ದೇಶ; ಒಂದು ಚುನಾವಣೆ’ ಯೋಜನೆಯ ಅಧ್ಯಯನಕ್ಕಾಗಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಹೀಗಾಗಿ ಈ ವಿಶೇಷ ಅಧಿವೇಶನದಲ್ಲಿ ಅದರ ಬಗ್ಗೆ ಚರ್ಚೆಯಾಗಬಹುದು ಎಂಬ ಮಾಹಿತಿ ಹೊರಬಿದ್ದಿರುವುದರಿಂದ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರನ್ನು ಒತ್ತಾಯಿಸಿ ವಿಪ್ ಆದೇಶ ಹೊರಡಿಸಲಾಗಿದೆ.

ದೇಶ

ನವದೆಹಲಿ: ಕಳೆದ 5 ವರ್ಷಗಳಲ್ಲಿ ಜಾಹೀರಾತಿಗೆ 2,700 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಬಹಿರಂಗಪಡಿಸಿದೆ. ಸಂಸತ್ತಿನ ಮುಂಗಾರು ಅಧಿವೇಶನ ನಿನ್ನೆ (ಜುಲೈ 20) ಆರಂಭವಾಗಿದೆ. ಇಂದಿನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದ ಸೈಯದ್ ನಸೀರ್ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ಜಾಹೀರಾತು ವೆಚ್ಚದ ಬಗ್ಗೆ ಪ್ರಶ್ನೆ ಎತ್ತಿದರು.

ಕೇಂದ್ರ ಸರ್ಕಾರದ ಪರವಾಗಿ ನೀಡಿರುವ ಉತ್ತರದಲ್ಲಿ,  ಕಳೆದ 5 ವರ್ಷಗಳಲ್ಲಿ ಜಾಹೀರಾತಿಗಾಗಿ ರೂ.2,700 ಕೋಟಿ ವೆಚ್ಚ ಮಾಡಲಾಗಿದೆ. 2018-19ನೇ ಹಣಕಾಸು ವರ್ಷದಲ್ಲಿ ಗರಿಷ್ಠ ರೂ.1,106 ಕೋಟಿ ವೆಚ್ಚ ಮಾಡಲಾಗಿದೆ ಎಂದು ಉತ್ತರಿಸಲಾಗಿದೆ.

ಅದೇ ರೀತಿ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸಂಸದ ಶಿವದಾಸನ್ ಅವರು ಪ್ರಧಾನಿಯವರ ವಿದೇಶಿ ಪ್ರಯಾಣ ವೆಚ್ಚದ ಬಗ್ಗೆ ಲಿಖಿತ ರೂಪದಲ್ಲಿ ಪ್ರಶ್ನೆಯನ್ನು ಕೇಳಿದ್ದರು. ಈ ಪ್ರಶ್ನೆಗೆ ಕಳೆದ 2 ವರ್ಷಗಳಲ್ಲಿ ಪ್ರಧಾನಿಯವರ 12 ವಿದೇಶ ಪ್ರವಾಸಗಳಿಗೆ 30 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಖರ್ಚು ಮಾಡಿದೆ ಎಂದು ಉತ್ತರಿಸಿದ್ದಾರೆ.

ದೇಶ

ನವದೆಹಲಿ: ಮುಂದಿನ ವರ್ಷ ಸಂಸತ್ತಿಗೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ ಎದುರಿಸಲು ಎಲ್ಲ ಪಕ್ಷಗಳು ಈಗಾಗಲೆ ಸಿದ್ದತೆಗಳನ್ನು ನಡೆಸಿಕೊಂಡು ಬರುತ್ತಿವೆ. ಸದ್ಯ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು ಕೂಡ 3ನೇ ಅವಧಿಗೆ ಅಧಿಕಾರ ಹಿಡಿಯಲು ತಂತ್ರಗಳನ್ನು ರೂಪಿಸುತ್ತಿದೆ.

ಭಾರತೀಯ ಜನತಾ ಪಾರ್ಟಿ ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಯ ಪರವಾಗಿ ಹೆಚ್ಚುವರಿ ಕ್ಷೇತ್ರಗಳನ್ನು ಗೆಲ್ಲಲು ಮುಂದಾಗಿದೆ. ಇದಕ್ಕಾಗಿ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ. ಅದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ಧಿಯನ್ನು ಹರಿಯಬಿಟ್ಟಿದ್ದಾರೆ.

ಪ್ರಧಾನಿ ಮೋದಿ ಉತ್ತರದಲ್ಲಿ ಒಂದು ಹಾಗೂ ದಕ್ಷಿಣ ರಾಜ್ಯದಲ್ಲಿ ಒಂದು ಕ್ಷೇತ್ರಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದು, ದಕ್ಷಿಣ ರಾಜ್ಯದ ತಮಿಳುನಾಡಿನಿಂದಲೇ ಅವರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸುವುದಾದರೆ ರಾಮನಾಥಪುರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಭಾರತೀಯ ಜನತಾ ಪಕ್ಷದ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಅವರನ್ನು ಕೇಳಿದಾಗ, ‘ಪ್ರಧಾನಿ ನರೇಂದ್ರ ಮೋದಿ ವಿದೇಶಿಯಲ್ಲ; ಆತ ಭಾರತೀಯ. ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ನಾಡಿನ ಜನ ಅವರ ಮೇಲೆ ಪ್ರೀತಿ, ಮಮತೆ ಹೊಂದಿದ್ದಾರೆ. ಅಷ್ಟೇ ಅಲ್ಲ ಮುಂದಿನ ಸಂಸತ್ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದು ನಿಜವೇ ಎಂದು ಅನೇಕರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಕಳೆದ 2 ದಿನಗಳ ಹಿಂದೆ ನಾನು ತೂತ್ತುಕುಡಿಗೆ ಹೋಗಿದ್ದೆ. ಅಲ್ಲಿನ ಅಂಗಡಿಯೊಂದರಲ್ಲಿ ಟೀ ಕುಡಿಯಲು ಹೋಗಿದ್ದಾಗ, ನನ್ನನ್ನು ನೋಡಿದ ಅಲ್ಲಿನ ಜನರು, ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸುತ್ತಾರೆಯೇ? ಎಂದು ಕೇಳಿದರು.

ಇದನ್ನು ತಿಳಿದುಕೊಳ್ಳಲು ಜನರು ತುಂಬಾ ಆಸಕ್ತಿ ಹೊಂದಿದ್ದಾರೆ. ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಬಲಿಷ್ಠಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ.

ತಮಿಳುನಾಡಿನ ಜನರು ಪ್ರಧಾನಿ ಮೋದಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದಾರೆ. ಅವರ ಚಟುವಟಿಕೆಗಳನ್ನು ಮೆಚ್ಚುತ್ತಾರೆ. ತಮಿಳುನಾಡಿನಲ್ಲೂ ಪ್ರಧಾನಿ ಮೋದಿಯ ಅಲೆ ಎದ್ದಿದೆ. ತಮಿಳುನಾಡಿನಲ್ಲೂ ಭಾರತೀಯ ಜನತಾ ಪಕ್ಷಕ್ಕೆ ಪ್ರತ್ಯೇಕ ಗುರುತು ಸಿಗಬೇಕು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇದನ್ನು ನಾವು ಸಾಬೀತು ಮಾಡುತ್ತೇವೆ’ ಎಂದರು.