ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
RTI Act Archives » Dynamic Leader
October 23, 2024
Home Posts tagged RTI Act
ದೇಶ

ಚೆನ್ನೈ: ಸನಾತನ ಧರ್ಮದ ಕುರಿತು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರ ಹೇಳಿಕೆಗೆ ಸಂಬಂಧಿಸಿದಂತೆ, ಮಾಹಿತಿ ಹಕ್ಕು ಕಾಯ್ದೆಯಡಿ ವಿವರಗಳನ್ನು ಕೋರಿ ಸಲ್ಲಿಸಿದ ಅರ್ಜಿಗೆ 8 ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಭಾಗವಹಿಸುತ್ತಿದ್ದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಸನಾತನ ಧರ್ಮದ ಶ್ರೇಯಸ್ಸನ್ನು ವಿವರಿಸುತ್ತಾ, ಅದನ್ನು ಅನುಸರಿಸುವುದು ಮುಖ್ಯ ಎಂದು ನಿರಂತರವಾಗಿ ಹೇಳುತ್ತಿದ್ದರು. ಸನಾತನ ಧರ್ಮದ ಉಲ್ಲೇಖಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ, ಚೆನ್ನೈ ಮೂಲದ ಹಿರಿಯ ವಕೀಲ ಎಸ್.ದುರೈಸ್ವಾಮಿ ಅವರು ರಾಜ್ಯಪಾಲ ಆರ್.ಎನ್.ರವಿ ಅವರಿಗೆ ಅರ್ಜಿ ಸಲ್ಲಿಸಿ, ಸನಾತನ ಧರ್ಮದ ಬಗ್ಗೆ ಮಾಹಿತಿ ಒದಗಿಸುವಂತೆ ಕೋರಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ತಮಿಳುನಾಡು ರಾಜಭವನ ಕಚೇರಿಯ ಮಾಹಿತಿ ಅಧಿಕಾರಿ, ‘ವಕೀಲರು ಎತ್ತಿರುವ ಪ್ರಶ್ನೆಗಳು ಆರ್‌ಟಿಐ ಕಾಯ್ದೆಯಡಿ ಬರುವುದಿಲ್ಲ. ಅದಕ್ಕೆ ಸಂಬಂಧಪಟ್ಟ ಮಾಹಿತಿ ತಮ್ಮ ಕಛೇರಿಯಲ್ಲಿ ಲಭ್ಯವಿಲ್ಲ’ ಎಂಬ ಮಾಹಿತಿಯನ್ನು ಒದಗಿಸಿದ್ದರು.

ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿದ ಅಪೂರ್ಣವಾದ ಮಾಹಿತಿಯ ವಿರುದ್ಧ, ವಕೀಲ ಎಸ್.ದುರೈಸ್ವಾಮಿ ಅವರು ಕಳೆದ ವರ್ಷ ನವೆಂಬರ್ 3 ರಂದು ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿಗೆ ಸಕ್ಷನ್ 19(1) ರಡಿಯಲ್ಲಿ ಮೇಲ್ಮನವಿ ಸಲ್ಲಿಸಿದರು.

ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ

 ಅರ್ಜಿಯಲ್ಲಿ, ‘ರಾಜಕೀಯ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಸೂಕ್ತ ಉತ್ತರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅವರು ಸನಾತನ ಧರ್ಮದ ಬಗ್ಗೆ ಮಾತನಾಡಲು ಆಧಾರವೇನು ಎಂಬುದನ್ನು ತಿಳಿಸಬೇಕು’ ಎಂದು ಕೋರಿದ್ದರು.

ಈ ಮೇಲ್ಮನವಿಯ ಮೇಲೆ ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿ ಕ್ರಮ ಕೈಗೊಳ್ಳದ ಕಾರಣ, ವಕೀಲ ದುರೈಸ್ವಾಮಿ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದರು. ನ್ಯಾಯಮೂರ್ತಿ ಎಂ.ತಂಡಪಾಣಿ ಅವರ ಮುಂದೆ ಪ್ರಕರಣ ವಿಚಾರಣೆಗೆ ಬಂದಿತ್ತು.ಅರ್ಜಿದಾರರ ಪರವಾಗಿ ವಕೀಲ ಇಳಂಗೋವನ್ ವಾದ ಮಂಡಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ‘ವಕೀಲ ದುರೈಸ್ವಾಮಿ ಅವರ ಮೇಲ್ಮನವಿ ಕುರಿತು ರಾಜಭವನದ ಸಾರ್ವಜನಿಕ ಮಾಹಿತಿ ಮೇಲ್ಮನವಿ ಅಧಿಕಾರಿ 8 ವಾರಗಳಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎಂದು ಆದೇಶಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.

The Madras High Court has directed the appellant authority of Tamil Nadu Raj Bhavan to take action against the RTI application seeking an explanation about the Sanatan Dharma quotes used by the Governor during his speeches, within 8 weeks.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಪಿಎಂ ಕೇರ್ಸ್ ನಿಧಿ (PM Cares) ವಿವಾದವನ್ನು ಸೃಷ್ಟಿಸುತ್ತಲೇ ಇದೆ. ಈಗಾಗಲೇ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ಇರುವಾಗ ಹೊಸ ನಿಧಿಯನ್ನು ಏಕೆ ರಚಿಸಬೇಕು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗುತ್ತಿಲ್ಲ. ಅಲ್ಲದೆ, ಪಿಎಂ ಕೇರ್ಸ್ ನಿಧಿ ನಿಧಿಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿಗೆ ಮಾಹಿತಿ ಹಕ್ಕು ಕಾಯಿದೆ ಅಡಿ ಉತ್ತರ ಸಿಗುತ್ತಿಲ್ಲ. ಸರ್ಕಾರ ಪ್ರತಿಕ್ರಿಯಿಸಲು ನಿರಾಕರಿಸುತ್ತಲೇ ಇದೆ.

ಈ ಹಿನ್ನಲೆಯಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳು ಪಿಎಂ ಕೇರ್ಸ್ ನಿಧಿಗೆ 2,900 ಕೋಟಿ ರೂಪಾಯಿ ದೇಣಿಗೆ ನೀಡಿವೆ ಎಂದು ವರದಿಯಾಗಿದೆ. ಇದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 2020ರಲ್ಲಿ ಪಿಎಂ ಕೇರ್ಸ್ ನಿಧಿಯನ್ನು ಪ್ರಾರಂಭಿಸಿದರು. ಈ ನಿಧಿಯನ್ನು ಕೊರೊನಾದಿಂದ ಜನರನ್ನು ರಕ್ಷಿಸಲು ಮತ್ತು ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಲಾಗುವುದು ಎಂದು ಘೋಷಿಸಲಾಯಿತು.

ಪ್ರಧಾನಿ ಮೋದಿ ಈ ಪಿಎಂ ಕೇರ್ಸ್ ನಿಧಿಯ ಮುಖ್ಯಸ್ಥರಾಗಿದ್ದು, ಈ ಸಂಸ್ಥೆಯ ಟ್ರಸ್ಟಿಗಳಾಗಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಂತಾದವರು ಇದ್ದಾರೆ. ಇವರಷ್ಟೇ ಅಲ್ಲದೇ ಪ್ರಮುಖ ಸಿನಿಮಾ ಸೆಲೆಬ್ರಿಟಿಗಳೂ ಈ ನಿಧಿಯ ಟ್ರಸ್ಟಿಗಳಾಗಿ ಕಾಣಿಸಿಕೊಂಡಿದ್ದಾರೆ. ಪಿಎಂ ಕೇರ್ಸ್ ನಿಧಿ ಸಂಗ್ರಹಿಸುವ ಜಾಹೀರಾತುಗಳಲ್ಲಿ ಅನೇಕ ಸಿನಿಮಾ ಸೆಲೆಬ್ರಿಟಿಗಳು ಸಹ ಅಭಿನಯಿಸಿದ್ದಾರೆ. ಇದಲ್ಲದೆ, ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳ ವೆಬ್‌ಸೈಟ್‌ಗಳಲ್ಲೂ ಪಿಎಂ ಕೇರ್ಸ್ ನಿಧಿಯ ಜಾಹೀರತನ್ನು ಬಿತ್ತರಿಸಿ ದೇಣಿಗೆ ಸಂಗ್ರಹಿಸಲು ಮುಂದಾದರು.

ಆದರೆ, ಇಲ್ಲಿಯವರೆಗೆ ಪಿಎಂ ಕೇರ್ಸ್ ನಿಧಿಗೆ ಎಷ್ಟು ಹಣವನ್ನು ನೀಡಲಾಗಿದೆ ಮತ್ತು ಹಣವನ್ನು ಹೇಗೆ ಬಳಸಲಾಗಿದೆ ಎಂಬ ವಿವರಗಳನ್ನು ಎಲ್ಲಿಯೂ ಪ್ರಕಟಿಸಲಾಗಿಲ್ಲ. ಈ ಹಣಕಾಸು ಸಂಸ್ಥೆಯು ಆರ್‌ಟಿಐ ಕಾಯ್ದೆಯಡಿ ಬರುವುದಿಲ್ಲ ಎಂದು ಸರ್ಕಾರವು ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಆದರೆ ದೇಶದ ಪ್ರಧಾನಿ ನೇತೃತ್ವದ ಈ ನಿಧಿಯು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಂತೆ ಆರ್‌ಟಿಐ ಕಾಯ್ದೆಯಡಿ ಬರಬೇಕು ಎಂದು ಪದೇ ಪದೇ ಹೇಳಲಾಗುತ್ತಿದೆ. ಆದರೆ ಸರಕಾರ ಇದನ್ನು ಕೇಳಲೂ ನಿರಾಕರಿಸುತ್ತಿದೆ.

ಇದು ಪ್ರಧಾನ ಮಂತ್ರಿ ಮತ್ತು ಮಂತ್ರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ವೆಬ್‌ಸೈಟ್ gov.in ಡೊಮೇನ್ ಹೆಸರಿನಲ್ಲೇ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಸಂಬಂಧಿಸಿದ ಕಚೇರಿ ಕೂಡ ಪ್ರಧಾನಿ ಕಾರ್ಯಾಲಯದಲ್ಲಿದೆ. ಹಾಗಾದರೆ ಈ ಪಿಎಂ ಕೇರ್ಸ್ ನಿಧಿಯನ್ನು ಆರ್‌ಟಿಐ ಕಾಯ್ದೆಯಡಿ ತರಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಯಾವುದೇ ಪಾರದರ್ಶಕತೆ ಇಲ್ಲದೆ ದಾನ ಮಾಡಿದ ಹಣವನ್ನು ಏನು ಮಾಡಬೇಕೆಂದು ತಿಳಿಯದ ಈ ಪಿಎಂ ಕೇರ್ಸ್ ನಿಧಿಯನ್ನು ನಂಬಿ ದಾನ ಮಾಡುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಈ ಸಂದರ್ಭದಲ್ಲಿ, ಸಾರ್ವಜನಿಕ ವಲಯದ ಸಂಸ್ಥೆಗಳು ತಮ್ಮ ಸಿಎಸ್ಆರ್ ಹಣವನ್ನು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿರುವುದು ಹೆಚ್ಚು ಆಘಾತಕಾರಿಯಾಗಿದೆ. ಈಗಾಗಲೇ ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಇರುವಾಗ ಮತ್ತೊಂದು ನಿಧಿ ಏಕೆ? PMCares ನಿಧಿಯನ್ನು RTI ಕಾಯಿದೆಯಡಿ ತರಲು ಸರ್ಕಾರ ಏಕೆ ನಿರಾಕರಿಸುತ್ತಿದೆ? ಇಲ್ಲಿಯವರೆಗೆ ಪಡೆದ ದೇಣಿಗೆಯಲ್ಲಿ ಎಷ್ಟು ಬಳಸಲಾಗಿದೆ ಎಂಬ ವಿವರಗಳನ್ನು ಬಹಿರಂಗಪಡಿಸಲು ಏಕೆ ನಿರಾಕರಿಸುತ್ತದೆ? ಇಂತಹ ಪ್ರಶ್ನೆಗಳಿಗೆ ಸರ್ಕಾರ ಮತ್ತು ಪ್ರಧಾನಿ ಉತ್ತರಿಸುವುದು ಯಾವಾಗ?