ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Varuna Archives » Dynamic Leader
October 23, 2024
Home Posts tagged Varuna
ರಾಜಕೀಯ

ಮೈಸೂರು: ಇಂದು ವರುಣಾ ವಿಧಾನಸಭಾ ಕ್ಷೇತ್ರದ ಸುತ್ತೂರಿನಲ್ಲಿ ಕೃತಜ್ಞತಾ ಸಮರ್ಪಣಾ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಭ್ರಷ್ಟಚಾರ, ದುರಾಡಳಿತ, ಅಭಿವೃದ್ಧಿಹೀನ ಮತ್ತು ಸಮಾಜವನ್ನು ಒಡೆಯುವ ದುಷ್ಟ ರಾಜಕಾರಣವನ್ನು ರಾಜ್ಯದ ಜನತೆ ಸೋಲಿಸಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ನಾಡಿನ ಜನತೆಗೆ ನಾನು ಕೃತಜ್ಞ.

ಇದು ನನ್ನ ಕೊನೆಯ ಚುನಾವಣೆ. ಆದರೆ ನಾನು ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿದ್ದು ಜನರ ಸೇವೆಯನ್ನು ಮುಂದುವರೆಸುತ್ತೇನೆ. 2013ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ನುಡಿದಂತೆ ನಡೆದು ಸಮಾಜದ ಎಲ್ಲಾ ಜಾತಿ, ಧರ್ಮ ಮತ್ತು ಎಲ್ಲಾ ವರ್ಗಗಳ ಪರವಾಗಿ ಕಲ್ಯಾಣ ಕಾರ್ಯಕ್ರಮ ರೂಪಿಸಿದ್ದೆ. ಈ ಬಾರಿ ಇನ್ನಷ್ಟು ಪರಿಣಾಮಕಾರಿಯಾದ ಕಲ್ಯಾಣ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ನಾಡಿಗೆ ನೀಡಲಿದೆ.

ಬಸವಾದಿ ಶರಣರು ನುಡಿದಂತೆ ನಡೆದಿದ್ದರು. ಅದನ್ನೇ ಮಾದರಿಯನ್ನಾಗಿ ಇಟ್ಟುಕೊಂಡು, ನಾನು ಮೊದಲ ಬಾರಿ ಬಸವ ಜಯಂತಿ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನುಡಿದಂತೆ ನಡೆದಿದ್ದೆ. ಮುಖ್ಯಮಂತ್ರಿ ಕುರ್ಚಿ ಎಂದರೆ ಸುಖದ ಸುಪ್ಪತ್ತಿಗೆ ಅಲ್ಲ, ಜನರ ಬದುಕನ್ನು ಸುಧಾರಿಸಲು ಸಿಗುವ ಅವಕಾಶ ಎಂಬುದು ನನ್ನ ಭಾವನೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಗ್ಯಾರಂಟಿಗಳು ಜಾರಿ ಆಗುವುದಿಲ್ಲ, ರಾಜ್ಯ ದಿವಾಳಿ ಆಗುತ್ತದೆ ಎಂದಿದ್ದರು. ನಾವು ಈಗ ಐದನ್ನೂ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಬಡವರ-ಮಧ್ಯಮ ವರ್ಗದವರ ಪರವಾದ ಯೋಜನೆ ಘೋಷಿಸಿದಾಗ ಪ್ರಧಾನ ಮಂತ್ರಿ ಮೋದಿಯವರು ಜನರಿಗೆ ಅನುಕೂಲ ಮಾಡುವ ನಮ್ಮ ಯೋಜನೆಗೆ ತಮ್ಮ ಸಹಕಾರ ನೀಡಬೇಕಿತ್ತು. ಆದರೆ ಮೋದಿ ಅವರಿಗೆ ಬಡವರ-ಮಧ್ಯಮ ವರ್ಗದವರ ಪ್ರಗತಿ, ಅಭಿವೃದ್ಧಿ ಬೇಕಾಗಿಲ್ಲ. ಅದಕ್ಕೇ ಬಿಜೆಪಿಯವರು ಜನರಲ್ಲಿ ತಮ್ಮ ಸಂಪ್ರದಾಯದಂತೆ ಸುಳ್ಳುಗಳನ್ನು ಎರಚಾಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ” ಎಂದರು.

ರಾಜಕೀಯ

ಇಂದು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಸತಿ ಸಚಿವ ವಿ.ಸೋಮಣ್ಣ ರವರ ಚುನಾವಣಾ ಪ್ರಚಾರಕ್ಕೆ ಕೆಲವರು ಅಡ್ಡಿಪಡಿಸಿರುವುದಾಗಿ ವರದಿಯಾಗಿದೆ. ಬಿಜೆಪಿಯ ಪ್ರಚಾರ ವಾಹನವನ್ನು ಕಂಡ ವರುಣಾ ಕ್ಷೇತ್ರದ ಸಾರ್ವಜನಿಕರು ಕಲ್ಲುಗಳಿಂದ ಹೊಡೆದು ವಾಹನವನ್ನು ಓಡಿಸಿರುವ ವಿಡಿಯೋ ವೈರಲ್ ಆಗಿದೆ.

ಖಾಲಿ ಕುರ್ಚಿಗಳ ಸಮಾವೇಶ ನಡೆಸುತ್ತಿದ್ದ ಬಿಜೆಪಿಗೆ ಜನಾಕ್ರೋಶ ದರ್ಶನ ಮುಂದುವರೆದಿದೆ. ಬಿಜೆಪಿ ಅಭ್ಯರ್ಥಿಗಳಷ್ಟೇ ಅಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ಕಂಡರೂ ಜನರಿಗೆ ಅಸಹ್ಯ, ಆಕ್ರೋಶ ಹುಟ್ಟುವಂತಾಗಿದೆ. ವಾಹನಕ್ಕೆ ಬಿದ್ದ ಒಂದೊಂದು ಕಲ್ಲೆಟುಗಳೂ ಬಿಜೆಪಿಯ ಬೆಲೆ ಏರಿಕೆ, ಭ್ರಷ್ಟಾಚಾರ, ವಂಚನೆ, ದುರಾಡಳಿತಕ್ಕೆ ಸಿಕ್ಕ ಉತ್ತರಗಳು ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿ ತಮ್ಮ ಆಕ್ರೊಶವನ್ನು ವ್ಯಕ್ತ ಪಡಿಸಿದೆ.

ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರು ಟ್ವೀಟ್ ಮಾಡಿ, “ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಚುನಾವಣಾ ಪ್ರಚಾರಕ್ಕೆ ಕೆಲವರು ಅಡ್ಡಿಪಡಿಸುತ್ತಿರುವುದು ವರದಿಯಾಗಿದೆ. ಇದನ್ನು ನಮ್ಮ‌ ಪಕ್ಷದ ಕಾರ್ಯಕರ್ತರು ಇಲ್ಲವೇ ಬೇರೆಯವರು ಮಾಡಿದ್ದರೆ ಅದು ಸರಿ ಅಲ್ಲ. ಎಲ್ಲ ಅಭ್ಯರ್ಥಿಗಳಿಗೂ ಮುಕ್ತ ಪ್ರಚಾರಕ್ಕೆ ಅವಕಾಶ ಮಾಡಿಕೊಡಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರಚಾರ ಮಾಡಲು ಅವಕಾಶ ಇದೆ. ಅದಕ್ಕೆ ಅಡ್ಡಿ ಪಡಿಸಬಾರದು. ಅಂತಿಮವಾಗಿ ಮತದಾರರು ತಮ್ಮ ಆಯ್ಕೆಯನ್ನು ತಾವೇ ನಿರ್ಧರಿಸುತ್ತಾರೆ” ಎಂದು ಹೇಳಿದ್ದಾರೆ. ಇದುವೇ ಒಬ್ಬ  ಜನನಾಯಕನಿಗೆ ಇರುವ ಗುಣಲಕ್ಷಣ; ಇದುವೇ ಪ್ರಜಾಪ್ರಭುತ್ವ; ಇದುವೇ ಸಂವಿಧಾನದ ಆಶಯ.

ರಾಜಕೀಯ

ಹೋಳಾಗಲಿಲ್ಲ ದೇವರ ಮುಂದೆ ಒಡೆದ ಈಡುಗಾಯಿ: ಸೋಮಣ್ಣಗೆ ಆಶೀರ್ವಾದ ಮಾಡಲಿಲ್ವಾ ಶ್ರೀ.ಚಾಮುಂಡೇಶ್ವರಿ ತಾಯಿ?

ಮೈಸೂರು: ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಸತಿ ಸಚಿವ ವಿ.ಸೋಮಣ್ಣ ಇಂದು ಮೈಸೂರಿನ ಶ್ರೀ.ಚಾಮುಂಡೇಶ್ವರಿ ದೇವಾಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಚಾಮುಂಡಿ ಬೆಟ್ಟದ ಮೇಲಿರುವ ಶ್ರೀ.ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆಯಲು ಯತ್ನಿಸಿದ ವಿ.ಸೋಮಣ್ಣ ಅವರಿಗೆ ಮುಜುಗರದ ಪರಿಸ್ಥಿತಿ ಎದುರಾಯಿತು. ಸೋಮಣ್ಣ ಹಾಕಿದ ಇಡುಗಾಯಿ ಒಡೆಯಲಿಲ್ಲ. ತೆಂಗಿನಕಾಯಿಯು ವ್ಯಕ್ತಿಯನ್ನು ದುಷ್ಟರಿಂದ ರಕ್ಷಿಸುತ್ತದೆ ಎಂದು ನಂಬಲಾಗುತ್ತಿದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವಾಗ ತೆಂಗಿನಕಾಯಿ ಒಡೆಯುವುದು ಹಿಂದೂ ಧರ್ಮದ ಪ್ರಮುಖ ಆಚರಣೆ. ತೆಂಗಿನಕಾಯಿ ಒಡೆಯದ ಕಾರಣ ಅಲ್ಲಿ ಸೇರಿದ್ದವರು ಅಶುಭ ಸೂಚನೆ ಎಂದು ಹೇಳಿಕೋಂಡರು.

ಇದರಿಂದ ಮುಜುಗರಕ್ಕೆ ಒಳಗಾದ ಸೋಮಣ್ಣ ಪೂಜೆಯನ್ನು ಸಲ್ಲಿಸಿ ಅಲ್ಲಿಂದ ಹೊರನಡೆದರು. ಅವರ ಜೊತೆಯಲ್ಲಿದ್ದ ಅವರ ಪತ್ನಿ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಇದಕ್ಕೆ ಸಾಕ್ಷಿಯಾದರು.