ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಡಿಎಂಕೆ Archives » Dynamic Leader
October 16, 2024
Home Posts tagged ಡಿಎಂಕೆ
ದೇಶ

ಬೆಂಗಳೂರು: ಸನಾತನ ಧರ್ಮ ಭಾಷಣದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇಂದು ಬೆಂಗಳೂರಿನ ಮೆಟ್ರೋಪಾಲಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸನಾತನ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಭಾರತದಾದ್ಯಂತ ಸಂಚಲನ ಮೂಡಿಸಿದ್ದರು. ‘ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಹಾಗಾಗಿ ಸನಾತನ ಧರ್ಮವನ್ನು ತೊಲಗಿಸಬೇಕು’ ಎಂದು ಉದಯನಿಧಿ ಸ್ಟಾಲಿನ್ ಮಾಡಿದ ಭಾಷಣವನ್ನು ಬಿಜೆಪಿ ಮತ್ತು ಬಲಪಂಥೀಯರು ತೀವ್ರವಾಗಿ ಖಂಡಿಸಿದ್ದರು ಮತ್ತು ಪ್ರತಿಭಟನೆಗಳನ್ನು ಸಹ ನಡೆಸಿದ್ದರು. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಸಂಪುಟದ ಸಚಿವರೊಂದಿಗೆ ಮಾತನಾಡಿದ್ದರು.

ಅಲ್ಲದೆ, ಸನಾತನ ಧರ್ಮದ ಕುರಿತು ಉದಯನಿಧಿ ಅವರ ಭಾಷಣದ ವಿರುದ್ಧ ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಆ ಮೂಲಕ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ನ್ಯಾಯಾಲಯ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ ಉದಯನಿಧಿ, ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾದರು.

ಉದಯನಿಧಿ ಕಡೆಯಿಂದ ಸನಾತನ ಭಾಷಣಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕ್ರೋಢೀಕರಿಸಿ ಒಂದೇ ಸ್ಥಳದಲ್ಲಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಪ್ರಕರಣದ ವಿಚಾರಣೆ ಬಾಕಿ ಇದೆ. ಈ ಬಗ್ಗೆ ದೂರುದಾರರು ಉತ್ತರ ನೀಡಬೇಕಾಗಿದೆ ಹೀಗಾಗಿ ವಿಚಾರಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು.

ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಿದರು. ಈ ಪ್ರಕರಣದಲ್ಲಿ ಉದಯನಿಧಿ ಸ್ಟಾಲಿನ್‌ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರು 1 ಲಕ್ಷ ರೂಪಾಯಿ ಬಾಂಡ್ ಪಾವತಿಸುವಂತೆ ಆದೇಶಿಸಿದ್ದಾರೆ.

ದೇಶ

ಬೆಂಗಳೂರು: ಕೇಂದ್ರ ಸರ್ಕಾರ  ಬರ ಪರಿಹಾರ ಕೊಡುತ್ತಿಲ್ಲ. ಕೇಂದ್ರ ಮಲತಾಯಿ ಧೋರಣೆ ಮಾಡುತ್ತಿದ್ದು, ಮಧ್ಯಪ್ರವೇಶಿಸಿ ಬರ ಪರಿಹಾರ ಬಿಡುಗಡೆ ಮಾಡಿಸುವಂತೆ ಸುಪ್ರೀಂ ಕೋರ್ಟ್​ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಕೆ ಮಾಡಿದೆ.

ಕೇಂದ್ರ ಸರ್ಕಾರ ಅತಿವೃಷ್ಟಿ, ಅನಾವೃಷ್ಟಿ ಆದಾಗ ರಾಜ್ಯ ಸರ್ಕಾರಕ್ಕೆ ಸ್ಪಂದಿಸಬೇಕು. ಅದಕ್ಕಾಗಿ ವಿಪತ್ತು ನಿರ್ವಹಣೆ ಕಾಯ್ದೆ ತರಲಾಗಿದೆ. ಈ ಕಾಯ್ದೆ ಕೂಡ ಅದನ್ನೇ ಹೇಳುತ್ತದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, 223 ತಾಲೂಕನ್ನು‌ ಬರಪೀಡಿತ ಅಂತ ಘೋಷಣೆ‌ ಮಾಡಲಾಗಿದೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ‌ ಕೃಷಿ, ತೋಟಗಾರಿಕಾ ಬೆಳೆ ನಷ್ಟವಾಗಿದೆ ಎಂದು ಮುಖ್ಯಮಂತ್ರಿ  ಹೇಳಿದ್ದರು.

ಈ ಹಿನ್ನೆಲೆಯಲ್ಲಿ, ಕರ್ನಾಟಕ ಮಾದರಿಯಲ್ಲೇ ತಮಿಳುನಾಡು ಕೂಡ ಇದೀಗ ಮಧ್ಯಂತರ ಪ್ರವಾಹ ಪರಿಹಾರವಾಗಿ 2,000 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅರ್ಜಿ ಸಲ್ಲಿಸಿದೆ.

ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ದಕ್ಷಿಣದ ಜಿಲ್ಲೆಗಳು ಮತ್ತು ಚೆನ್ನೈಗೆ ಮಧ್ಯಂತರ ಪರಿಹಾರವಾಗಿ 2,000 ಕೋಟಿ ರೂಪಾಯಿಗಳನ್ನು ನೀಡುಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಪ್ರವಾಹ ಪರಿಹಾರ ಕೋರಿ ಪತ್ರ ಬರೆದಿರುವುದು ಗಮನಾರ್ಹ.

ವೆಲ್ಲೂರು ಜಿಲ್ಲೆಯ ಕೋಟೆ (Fort) ಮೈದಾನದಲ್ಲಿ ನಿನ್ನೆ ಡಿಎಂಕೆ ಮೈತ್ರಿ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆ ನಡೆಯಿತು. ಇದರಲ್ಲಿ ಮಾತನಾಡಿದ ಎಂ.ಕೆ.ಸ್ಟಾಲಿನ್, “ನಾವೂ ಕೂಡ ಪ್ರವಾಹ ಪರಿಹಾರ ಕೇಳಿದ್ದೇವೆ; ಸಿಕ್ಕಿಲ್ಲ. ನಾಳೆ (ಇಂದು) ಬೆಳಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಹಾಕಲಿದ್ದೇವೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ರಾಜಕೀಯ

ನವದೆಹಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಚುನಾವಣಾಧಿಕಾರಿಗೆ ಭಾರತ ಚುನಾವಣಾ ಆಯೋಗ ಸೂಚಿಸಿದೆ.

ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ತಮಿಳರನ್ನು ಉಲ್ಲೇಖಿಸಿ, ತಮಿಳರು ಮತ್ತು ಕನ್ನಡಿಗರ ನಡುವೆ ಗಲಭೆ ಉಂಟು ಮಾಡುವ ರೀತಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ವಿರುದ್ಧ ಡಿಎಂಕೆ ಪರವಾಗಿ ಭಾರತ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಚುನಾವಣಾಧಿಕಾರಿಗೆ ಭಾರತ ಚುನಾವಣಾ ಆಯೋಗ ಆದೇಶಿಸಿದೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್

“ನಾವು ಗೋಮೂತ್ರ ರಾಜ್ಯಗಳು ಎಂದು ಕರೆಯುವ ಹಿಂದಿ ಮಾತನಾಡುವ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಪ್ರಬಲವಾಗಿ ಗೆಲ್ಲುತ್ತಿದೆ” ಎಂದು ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಧರ್ಮಪುರಿ ಡಿಎಂಕೆ ಸಂಸದ ಸೆಂಥಿಲ್‌ಕುಮಾರ್ ಅವರ ಈ ಮಾತು ಬಿಜೆಪಿಯೊಳಗೆ ಮಾತ್ರವಲ್ಲದೆ ‘ಇಂಡಿಯಾ’ ಮೈತ್ರಿಕೂಟದಲ್ಲೂ ಭಾರೀ ಕೋಲಾಹಲ ಉಂಟು ಮಾಡಿದೆ.

ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಎಂಬ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ವಶದಲ್ಲಿದ್ದ ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳನ್ನು ಬಿಜೆಪಿ ತಮ್ಮದಾಗಿಸಿಕೊಂಡಿದೆ. ತೆಲಂಗಾಣ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

2024ರ ಸಂಸತ್ ಚುನಾವಣೆಗೆ ಮುನ್ನೋಟ ಎಂದೇ ಪರಿಗಣಿಸಲಾಗಿರುವ ಈ ಚುನಾವಣೆಯ ಫಲಿತಾಂಶ, ಕಾಂಗ್ರೆಸ್ ಪಕ್ಷ ಹಾಗೂ ‘ಇಂಡಿಯಾ’ ಮೈತ್ರಿಕೂಟಕ್ಕೆ ಹಿನ್ನಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ, ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಐದು ರಾಜ್ಯಗಳ ಚುನಾವಣೆ ಫಲಿತಾಂಶದ ಕುರಿತು ಮಾತಡಿದ ಡಿಎಂಕೆ ಸಂಸದ ಸೆಂಥಿಲ್‌ಕುಮಾರ್,

“ನಾವು ಸಾಮಾನ್ಯವಾಗಿ ಗೋಮೂತ್ರ ರಾಜ್ಯಗಳೆಂದು (Gaumutra States) ಕರೆಯುವ ಹಿಂದಿ ಭಾಷಿಕ ಉತ್ತರದ ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವುದರಲ್ಲಿಯೇ ಬಿಜೆಪಿಯ ಶಕ್ತಿ ಅಡಗಿದೆ ಎಂಬುದನ್ನು ದೇಶದ ಜನತೆ ಅರಿಯಬೇಕು!” ಎಂದು ಟೀಕಿಸಿದ್ದರು. ಆಗ ಬಿಜೆಪಿ ಸಂಸದರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಅದನ್ನು ಅನುಸರಿಸಿ, ಡಿಎಂಕೆ ಸದಸ್ಯರಾಗಿರುವ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಕೂಡ ಸೆಂಥಿಲ್‌ಕುಮಾರ್ ಭಾಷಣಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, “ಇದು ಬಹಳ ಅಗೌರವದ ಮಾತು. ಅವರು ಕೂಡಲೇ ಕ್ಷಮೆಯಾಚಿಸಬೇಕು. ಅವರು ಮಾಡಿರುವ ಟೀಕೆಗಳನ್ನು ವಾಪಸ್ ಪಡೆಯಬೇಕು!” ಎಂದರು.

ಅದೇ ರೀತಿ ಮತ್ತೊಬ್ಬ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, “ಸಂಸತ್ತಿನಲ್ಲಿ ಅವರ ಭಾಷಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅದು ಅವರ ಸ್ವಂತ ಅಭಿಪ್ರಾಯ” ಎಂದು ಜಾರಿಕೊಂಡರು.

ಅಲ್ಲದೆ, ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ, “ಡಿಎಂಕೆ ರಾಜಕೀಯವೇ ಬೇರೆ; ಕಾಂಗ್ರೆಸ್ ರಾಜಕಾರಣವೇ ಬೇರೆ. ಈ ರಾಜಕೀಯವನ್ನು ಕಾಂಗ್ರೆಸ್ ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷವು ಸನಾತನ ಧರ್ಮ ಮತ್ತು ಗೋಮಾತೆಯನ್ನು ನಂಬುತ್ತದೆ. ನಾವೂ ಸಹ ನಂಬುತ್ತೇವೆ. ಎಲ್ಲ ಧರ್ಮದವರನ್ನು ಒಗ್ಗೂಡಿಸಿ ಮುನ್ನಡೆಯೋಣ” ಎಂದು ಹೇಳಿದರು.

ಇದೇ ವೇಳೆ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ವೈಕೊ ಅವರು, “ಅವರು ಹೇಳಿದ್ದು ಸರಿಯಿದೆ; ಅವರ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ” ಎಂದು ಹೇಳುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ, ಬಿಜೆಪಿ ಸರ್ಕಾರ ಈ ವಿಷಯವನ್ನು ಪ್ರಮುಖ ಚರ್ಚೆಯ ವಿಷಯವಾಗಿ ತೆಗೆದುಕೊಂಡು ಕಾಂಗ್ರೆಸ್-ಡಿಎಂಕೆ ವಿರುದ್ಧ ಪ್ರಚಾರವನ್ನು ಆರಂಭಿಸಿದೆ.

ಈ ಹಿನ್ನಲೆಯಲ್ಲಿ, ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ, “ಧರ್ಮಪುರಿ ಸಂಸದ ಸೆಂಥಿಲ್‌ಕುಮಾರ್ ತಪ್ಪಾಗಿ ಅರ್ಥೈಸಬಹುದಾದ ಪದ ಬಳಸಿದ್ದಾರೆ. ಇದನ್ನು ತಿಳಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೆಂಥಿಲ್‌ಕುಮಾರ್ ಅವರನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವಾಗ ಸಭ್ಯತೆ ಮತ್ತು ಸಂಸ್ಕೃತಿಯನ್ನು ಕಾಪಾಡುವ ರೀತಿಯಲ್ಲಿ ಎಲ್ಲರೂ ನಡೆದುಕೊಳ್ಳಬೇಕು. ಅಖಿಲ ಭಾರತ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವಾಗ ದಯವಿಟ್ಟು ವೈಯಕ್ತಿಕ ಅಭಿಪ್ರಾಯಗಳನ್ನು ತಪ್ಪಿಸುವಂತೆ ಕೇಳಿಕೊಳ್ಳುತ್ತಿದ್ದೇನೆ!” ಎಂದು ಅವರು ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿರುವ ಧರ್ಮಪುರಿ ಸಂಸದ ಸೆಂಥಿಲ್‌ಕುಮಾರ್ ತಮ್ಮ ‘ಎಕ್ಸ್’ ಸೈಟ್‌ನಲ್ಲಿ, “ನಾನು ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯಿಸುವಾಗ ತಪ್ಪು ಅರ್ಥವನ್ನು ನೀಡುವ ಪದವನ್ನು ಬಳಸಿದ್ದೇನೆ. ಆ ಪದವನ್ನು ಯಾವುದೇ ಒಳ ಉದ್ದೇಶದಿಂದ ಬಳಸಲಿಲ್ಲ. ಅದು ತಪ್ಪು ಅರ್ಥವನ್ನು ನೀಡಿದೆ ಎಂಬುದಕ್ಕಾಗಿ ಬಹಿರಂಗವಾಗಿ ಕ್ಷಮೆಯಾಚಿಸುತ್ತಿದ್ದೇನೆ!” ಎಂದು ಹೇಳಿ, ಕ್ಷಮೆಯಾಚಿಸಿದರು. ಅಲ್ಲದೇ ನೆನ್ನೆಯ ಸಂಸದೀಯ ಸಭೆಯಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.

ದೇಶ

ಚೆನ್ನೈ: ಸನಾತನ ಕುರಿತು ಸಚಿವ ಉದಯನಿಧಿ ಸ್ಟಾಲಿನ್ ಮಾತನಾಡಿರುವುದು ವಿವಾದಕ್ಕೀಡಾಗಿದ್ದು ಇದಕ್ಕೆ ಸಂಬಂಧಿಸಿದ ಪ್ರಕರಣ ಚೆನ್ನೈ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅದರಂತೆ ಇಂದು ಪ್ರಕರಣದ ವಿಚಾರಣೆ ನಡೆದಾಗ ಉದಯನಿಧಿ ಪರವಾಗಿ ವಾದ ಮಂಡಿಸಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸನಾತನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸನಾತನ ಭಾಷಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಕ್ವೋ ವಾರಾಂಟೊ (Quo Warranto) ಪ್ರಕರಣವನ್ನು ವಜಾಗೊಳಿಸಬೇಕು. ಆರೋಪಿಗಳನ್ನು ಸಾಕ್ಷ್ಯ ಕೇಳುವುದು ಸಂವಿಧಾನ ಬಾಹಿರ.

ಆರೋಪ ಸಾಬೀತುಪಡಿಸಲು ಅರ್ಜಿದಾರರೇ ಸಾಕ್ಷ್ಯ ಸಲ್ಲಿಸಬೇಕು ಎಂದು ಸಚಿವ ಉದಯನಿಧಿ ಸ್ಟಾಲಿನ್ ಪರವಾಗಿ ವಾದಿಸಲಾಯಿತು. ಆದ್ದರಿಂದ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ವಿಫಲವಾಗಿರುವ ಪ್ರಕರಣವನ್ನು ವಜಾಗೊಳಿಸುವಂತೆ ಮನವಿ ಮಾಡಲಾಗಿತ್ತು.

ನಂತರ, ಮದ್ರಾಸ್ ಹೈಕೋರ್ಟ್ ಸಚಿವರಾದ ಉದಯನಿಧಿ ಸ್ಟಾಲಿನ್, ಶೇಖರ್ ಬಾಬು ಮತ್ತು ಇತರರ ವಿರುದ್ಧದ ಪ್ರಕರಣವನ್ನು ನವೆಂಬರ್ 7 ಕ್ಕೆ ಮುಂದೂಡಿತು.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ತಮಿಳುನಾಡಿನಲ್ಲಿ ಬಿಜೆಪಿ ನಾಯಕರು ಮಾಧ್ಯಮಗಳ ಗಮನವನ್ನು ಬಿಜೆಪಿಯತ್ತ ತಿರುಗಿಸಲು ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಪ್ರಮುಖ ಪಕ್ಷವಾಗಿ ಬೆಳೆದಿದೆ ಎಂದು ತೋರಿಸಿ, ಡಿಎಂಕೆಗೆ ಬಿಜೆಪಿಯೇ ಪರ್ಯಾಯ ಎಂಬ ಭ್ರಮೆಯನ್ನು ಮೂಡಿಸಲು ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಧ್ಯಕ್ಷರಾದ ಮೇಲೆ ಇದು ಮಿತಿಮೀರಿ ಹೋಗಿದೆ.

ಪ್ರಚಾರದ ಗೀಳಿನಿಂದ ಸಮಾಜ ಸುಧಾರಣಾ ಚಳವಳಿಯ ಪಿತಾಮಹ ತಂದೆ ಪೆರಿಯಾರ್, ಡಿಎಂಕೆ ಸಂಸ್ಥಾಪಕರಾಗಿರುವ ದಿವಂಗತ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ಮತ್ತು ಎಂ.ಕರುಣಾನಿಧಿ ಮುಂತಾದವರ ಬಗ್ಗೆ ಮತ್ತು ಹಾಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಮತ್ತು ಕೀಳು ಅಭಿರುಚಿಯ ಭಾಷಣಗಳನ್ನು ಮಾಡುವುದು, ಪೋಸ್ಟರ್ ಅಂಟಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕವಾಗಿ ಬರೆಯುವುದು ಮುಂತಾದವುಗಳನ್ನು ಮಾಡುತ್ತಿದ್ದಾರೆ.

ಕೆಲವು ತಿಂಗಳ ಹಿಂದೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜೆಯಲಲಿತಾ ಅವರ ಬಗ್ಗೆಯೂ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಎಐಎಡಿಎಂಕೆ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆವಾಗಲೇ ಮೈತ್ರಿಯಿಂದ ಬಿಜೆಪಿಯನ್ನು ಹೊರಗಿಡುವ ಆಲೋಚನೆಯನ್ನು ಎಐಎಡಿಎಂಕೆ ನಾಯಕರು ಮಾಡಿದ್ದರು. ಆದರೆ, ಜಿಜೆಪಿ ಕೇಂದ್ರ ವರಿಷ್ಟರು ಮಾಡಿದ್ದ ಸಂಧಾನದಿಂದ ಸುಮ್ಮನಾದರು.

ಆದರೆ, ಅಣ್ಣಾಮಲೈ ಸುಮ್ಮನಾಗಲಿಲ್ಲ. ಮತ್ತೆ ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಲ್ಲದೇ ಎಐಎಡಿಎಂಕೆ ನಾಯಕರ ವಿರುದ್ಧವೇ ಆರೋಪಗಳನ್ನು ಮಾಡಿದರು. ಇದರಿಂದ ಕೆಂಡಾಮಂಡಲರಾದ ಎಐಎಡಿಎಂಕೆ ನಾಯಕರು ಬಿಜೆಪಿ ಮೈತ್ರಿಯನ್ನು ಮುರಿದುಕೊಂಡು, “ಮುಂಬರುವ 2024ರ ಸಂಸತ್ ಚುನಾವಣೆಯಲ್ಲಿ ಮಾತ್ರವಲ್ಲ, 2026ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಯೊಂದಿಗೆ ಮೈತ್ರಿ ಇಲ್ಲ” ಎಂದು ಘೋಷಿಸಿದರು.

ಬಿಜೆಪಿ ರಾಷ್ಟ್ರೀಯ ನಾಯಕರು ಈ ಬಾರಿ ಮಾಡಿದ ಯಾವ ಪ್ರಯತ್ನಗಳೂ ಕೈಕೊಡಲಿಲ್ಲ; ಮೈತ್ರಿ ಮುರಿದೇ ಹೋಯಿತು. ಮೈತ್ರಿ ಮುರಿಯಲು ಮತ್ತೊಂದು ಕಾರಣವೂ ಇದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದಲ್ಲೇ ಚುನಾವಣೆ ಮೈತ್ರಿ ರಚಣೆಯಾಗಿತ್ತು. ಆದರೆ, ಅದನ್ನು ಬಿಜೆಪಿಯವರು ‘ಬಿಜೆಪಿ ನೇತೃತ್ವದ ಮೈತ್ರಿಕೂಟ’ ಎಂದೇ ಹೇಳಿಕೊಂಡು ಬರುತ್ತಿದ್ದರು. ಮತ್ತು ಅದನ್ನೇ ನೆಪ ಮಾಡಿಕೊಂಡು, ‘ನಾವೇ ಸರಿಯಾದ ವಿರೋಧ ಪಕ್ಷ’ ಎಂದು ಎಐಎಡಿಎಂಕೆ ನಾಯಕರ ಬಳಿಯೇ ಹೇಳಿಕೊಂಡಿದ್ದರು.

ಅದುಮಾತ್ರವಲ್ಲ, ಮುಂದಿನ ಸಂಸತ್ ಮತ್ತು ವಿಧಾನಸಭೆ ಚುನಾವಣೆಯನ್ನು ಬಿಜೆಪಿ ನೇತೃತ್ವದಲ್ಲೇ ಎದುರಿಸಲಾಗುವುದು; ಅಣ್ಣಾಮಲೈ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದೆಲ್ಲಾ ಹೇಳಿಕೊಂಡು ತಿರುಗಾಡಿದ ಪರಿಣಾಮದಿಂದಾಗಿ ಎಐಎಡಿಎಂಕೆ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮೈತ್ರಿಯಿಂದ ಬಿಜೆಪಿಯನ್ನು ಕಿತ್ತೆಸೆದರು. ‘5 ರಾಜ್ಯಗಳ ಚುನಾವಣೆ ಘೋಷಣೆ ಆಗಿದೆ, ನಂತರ ಸಂಸತ್ ಚುನಾವಣೆ ಬರಲಿದೆ ಅಲ್ಲಿಯವರೆಗೂ ಬಿಜೆಪಿಯಿಂದ ನಮಗೆ ಏನೂ ತೋದರೆಯಿಲ್ಲ’ ಎಂದು ಲೆಕ್ಕಾಚಾರ ಮಾಡಿದ ಎಡಪ್ಪಾಡಿ ಪಳನಿಸ್ವಾಮಿ ಮೈತ್ರಿಯನ್ನು ಮುರಿದುಕೊಂಡು ದೂರ ಸರಿದರು.

ತಮಿಳುನಾಡಿನಲ್ಲಿ ‘ನೋಟಾಗಿಂತ ಕಡಿಮೆ ಮತಗಳನ್ನು ಪಡೆಯುವ ಪಕ್ಷ’ ಎಂಬ ಹಣೆಪಟ್ಟಿಯ ಬಿಜೆಪಿ ಇಂದು ಏಕಾಂಗಿಯಾಗಿ ಹೋರಾಟ ನಡೆಸುತ್ತಿದೆ. ಪಾದಯಾತ್ರೆ ನಡೆಸುವುದು, ಪ್ರೆಸ್ ಮೀಟ್ ಮಾಡುವುದು, ಡಿಎಂಕೆ ಹಾಗೂ ಎಐಎಡಿಎಂಕೆ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಬಿಗಿಯುವುದು ಇತ್ಯಾದಿ. ಒಂದು ಸುಳ್ಳನ್ನು ಮರೆಮಾಚಲು ಇನ್ನೊಂದು ಸುಳ್ಳನ್ನು ಹೇಳುವುದು; ಅದರಿಂದ ತಪ್ಪಿಸಿಕೊಳ್ಳಲು ಮತ್ತೊಂದು ಸುಳ್ಳನ್ನು ಹೇಳುವುದು. ಅದೂ ಸಾಧ್ಯವಾಗದಿದ್ದರೆ ಅವಹೇಳನಕಾರಿಯಾಗಿ ಮಾತನಾಡುವುದು. ಇದುವೇ ತಮಿಳುನಾಡು ಬಿಜೆಪಿಯ ಸ್ಟ್ರಾಟರ್ಜಿ.

ಇದರಿಂದ ಆಡಳಿತರೂಢ ಡಿಎಂಕೆ ಸರ್ಕಾರ, ದ್ರಾವಿಡ ಚಳವಳಿಯ ನೇತಾರರನ್ನು, ಮುಖ್ಯಮಂತ್ರಿಯನ್ನು, ಸಚಿವರುಗಳನ್ನು, ಶಾಸಕರು ಮತ್ತು ಸಂಸದರ ವಿರುದ್ಧ ಅವಹೇಳನಕಾರಿ ಭಾಷಣ ಮಾಡುವವರ ವಿರುದ್ಧ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕವಾಗಿ ಕಂಟಂಟ್ ಬರೆಯುವವರ ವಿರುದ್ಧ  ದೂರು ದಾಖಲಿಸಿ ಬಂಧಿಸುತ್ತಿದೆ. ಇದನ್ನು ಕೇಂದ್ರ ಬಿಜೆಪಿ ನಾಯಕರು “ಕ್ರೂರ ಮತ್ತು ಅಸಂಬದ್ಧ ವರ್ತನೆ” ಎಂದು ಬಣ್ಣಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಕ್ರೂರ ಮತ್ತು ಅಸಂಬದ್ಧ ವರ್ತನೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿರುವ ಕೇಂದ್ರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ನಾಲ್ಕು ಸದಸ್ಯರ ನಿಯೋಗವೊಂದನ್ನು ರಚಿಸಿ, ತಮಿಳುನಾಡಿನಿಂದ ವರದಿ ತರುವಂತೆ ಸೂಚಿಸಿದ್ದಾರೆ. ಭಾನುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಬಿಜೆಪಿ ಕಾರ್ಯಕರ್ತರು ತಮಿಳುನಾಡು ಸರ್ಕಾರದಿಂದ ಕ್ರೂರ ಮತ್ತು ಅಸಂಬದ್ಧ ವರ್ತನೆಯನ್ನು ಎದುರಿಸುತ್ತಿದ್ದಾರೆ. ತಮಿಳುನಾಡಿಗೆ ಭೇಟಿ ನೀಡಲು ನಾಲ್ವರು ಸದಸ್ಯರ ನಿಯೋಗವನ್ನು ರಾಷ್ಟ್ರೀಯ ಅಧ್ಯಕ್ಷ ಜಿ.ಪಿ.ನಡ್ಡಾ ನಾಮನಿರ್ದೇಶನ ಮಾಡಿದ್ದಾರೆ. ಅದರ ವರದಿಯನ್ನು ಆದಷ್ಟು ಬೇಗ ಸಲ್ಲಿಸಿ.” ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ವಿ.ಸದಾನಂದಗೌಡ, ಮಧ್ಯಪ್ರದೇಶದ ಮಾಜಿ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್, ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಡಿ.ಪುರಂದೇಶ್ವರಿ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಅವರನ್ನೊಳಗೊಂಡ ನಿಯೋಗವು ಇದನ್ನು ಮುನ್ನಡೆಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾಜಿ ಸಚಿವ ಪೊನ್ ರಾಧಾಕೃಷ್ಣನ್, ಜಾರ್ಖಂಡ್ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್, ನಾಗಾಲ್ಯಾಂಡ್ ರಾಜ್ಯಪಾಲ ಎಲ್.ಗಣೇಶನ್, ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಹಾಗೂ ಕೇಂದ್ರ ಸಚಿವ ಎಲ್.ಮುರುಗನ್ ಮುಂತಾದವರೆಲ್ಲರೂ ಕಟ್ಟಿಬೆಳೆಸಿದ ತಮಿಳುನಾಡು ಬಿಜೆಪಿಯನ್ನು, ಈಗ ಕಂಡವರೆಲ್ಲ ಗೇಲಿ ಮಾಡುವ ಮಟ್ಟಕ್ಕೆ ತಂದಿಟ್ಟಿರುವ ಕೀರ್ತಿ ಹಾಲಿ ಅಧ್ಯಕ್ಷ ಅಣ್ಣಾಮಲೈಗೆ ಸೇರುತ್ತದೆ.

ಅಣಾಮಲೈ ವರ್ತನೆಯಿಂದ ಬೇಸೆತ್ತು ಸಿನಿಮಾ ಹಿರಿಯ ನಟ ಎಸ್.ವಿ.ಶೇಖರ್, ನಟಿ ಗಾಯತ್ರಿ ರಘುರಾಮ್, ಸೀರಿಯಲ್ ಆಕ್ಟರ್ ಡಾ.ಶರ್ಮಿಲಾ ಮುಂತಾದವರೆಲ್ಲ ಪಕ್ಷವನ್ನೇ ಬಿಟ್ಟಿದ್ದಾರೆ. ನೆನ್ನೆ ನಟಿ ಗೌತಮಿ ರಾಜಿನಾಮೆ ನೀಡಿದ್ದಾರೆ. ಬಿಜೆಪಿಯ ಹಲವಾರು ರಾಜ್ಯ ಮುಖಂಡರುಗಳು ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಅಣ್ಣಾಮಲೈ ಅವರನ್ನು ಆ ಸ್ಥಾನದಿಂದ ಪದಚ್ಯುತಿ ಗೊಳಿಸದೇ ಇರುವುದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಕೃಪಾಕಟಾಕ್ಷವೇ ಕಾರಣ ಎಂದು ಹೇಳಲಾಗುತ್ತಿದೆ.  

ರಾಜಕೀಯ

ಚೆನ್ನೈ: ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಸಿಎಜಿ ಬಿಡುಗಡೆ ಮಾಡಿದ “7.5 ಲಕ್ಷ ಕೋಟಿ ರೂಪಾಯಿ ಅಕ್ರಮಗಳು ಹಾಗೂ ಪ್ರಧಾನಿಯ ಮೌನ” ಎಂಬ ಶೀರ್ಷಿಕೆಯಡಿ ಇಂದು (ಶನಿವಾರ) ಬಿಡುಗಡೆಯಾದ ‘ಸ್ಪೀಕಿಂಗ್ ಫಾರ್ ಇಂಡಿಯಾ’ ‘ಪಾಡ್‌ಕಾಸ್ಟ್’ ಸರಣಿಯ ಎರಡನೇ ಸಂಚಿಕೆಯಲ್ಲಿ ಹೇಳಿರುವುದು:

“ಈ ಸ್ಪೀಕಿಂಗ್ ಫಾರ್ ಇಂಡಿಯಾ ಪಾಡ್‌ಕಾಸ್ಟ್‌ನ ಮೊದಲ ಸಂಚಿಕೆಯ ನಂತರ, ‘ಕರುಣಾನಿಧಿ ಮಹಿಳಾ ಹಕ್ಕುಭತ್ಯೆ ಯೋಜನೆ’ ಮತ್ತು ಡಿಎಂಕೆ ಪಕ್ಷದ ‘ಅಮೃತ್ ಮಹೋತ್ಸವ’ ಪ್ರಾರಂಭ ಇತ್ಯಾದಿಗಳನ್ನು ಮುಗಿಸಿಕೊಂಡು ಈಗ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಕರುಣಾನಿಧಿ ಮಹಿಳಾ ಹಕ್ಕುಭತ್ಯೆ ಯೋಜನೆಯನ್ನು ಪ್ರಾರಂಭಸಿದಾಗ, ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಒಂದು ಪೋಸ್ಟನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಒಬ್ಬ ತಾಯಿ ಪ್ರಶ್ನಿಸುತ್ತಿರುವ ಪೋಸ್ಟ್ ಅದು. “ನಮ್ಮ ಮುಖ್ಯಮಂತ್ರಿ ಹೇಳಿದ ಸಾವಿರ ರೂಪಾಯಿ ಬಂದಾಯ್ತು, ಪ್ರಧಾನಿ ಹೇಳಿದ 15 ಲಕ್ಷ ಏನಾಯ್ತು? ಎಂಬುದಾಗಿದೆ. ಇದು ತಮಿಳುನಾಡಿನಲ್ಲಿ ವೈರಲ್ ಆಗಿದೆ.

ನಮ್ಮ ದೇಶ ಮತ್ತು ದೇಶದ ಜನರು, ಮತ್ತೆ ಬಿಜೆಪಿಯಿಂದ ಮೋಸ ಹೋಗಬಾರದು ಎಂಬುದಕ್ಕಾಗಿಯೇ ನಾನು ಈ ಸ್ಪೀಕಿಂಗ್ ಫಾರ್ ಇಂಡಿಯಾ ಪಾಡ್‌ಕಾಸ್ಟ್ ಸರಣಿಯನ್ನು ಪ್ರಾರಂಭಿಸಿದ್ದೇನೆ. 2014ರಲ್ಲಿ ಮೋಸ ಹೋದಂತೆ; 2019ರಲ್ಲಿ ಮೋಸ ಹೋದಂತೆ, 2024ರಲ್ಲಿ ದೇಶ ಮೋಸ ಹೋಗಬಾರದು. 2014ರಲ್ಲಿ ಅಧಿಕಾರಕ್ಕೆ ಬರುವ ಮೊದಲು, ಗುಜರಾತ್ ರಾಜ್ಯವನ್ನು ಅಭಿವೃದ್ಧಿಪಡಿಸಿ, ಅಲ್ಲಿ ಜೇನಿನ ನದಿ – ಹಾಲಿನ ನದಿಯೆಲ್ಲ ಹರಿಯುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಅದರ ಮೂಲಕ ತನ್ನನ್ನು ಅಭಿವೃದ್ಧಿಯ ನಾಯಕನಾಗಿ ಬಿಂಬಿಸಿಕೊಂಡವರು ಪ್ರಧಾನಿ ನರೇಂದ್ರ ಮೋದಿ.

ಗುಜರಾತ್ ಮಾದರಿ

‘ಕಾಂಗ್ರೆಸ್ ಪಕ್ಷ 60 ವರ್ಷಗಳ ಕಾಲ ಭಾರತವನ್ನು ಆಳಿದೆ, ನನಗೆ 60 ತಿಂಗಳು ಕೊಡಿ; ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇನೆ’ ಎಂದು ಮೋದಿ ಹೇಳಿದರು. ಅವರಿಗೆ 60 ತಿಂಗಳು ಮಾತ್ರವಲ್ಲ ಹೆಚ್ಚುವರಿಯಾಗಿ, ಇನ್ನೂ 60 ತಿಂಗಳು ಆಳುವ ಅವಕಾಶವನ್ನು ಭಾರತದ ಜನರು ನೀಡಿದರು. ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಿದರೇ? ಎಂಬುದನ್ನು ಅವರೇ ಉತ್ತರಿಸಬೇಕಾದ ಪ್ರಶ್ನೆಯಾಗಿದೆ. ಅವರು ಭಾರತವನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ ಎಂದು ಪಟ್ಟಿ ಮಾಡಲು ಅವರಿಂದ ಸಾಧ್ಯವೇ?

ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ ನನಗೆ 5 T-ಯೇ ಮುಖ್ಯ ಎಂದು ಹೇಳಿದರು. (Talent-ಪ್ರತಿಭೆ, Trading-ವ್ಯಾಪಾರ, Tradition-ಸಂಪ್ರದಾಯ, Tourism-ಪ್ರವಾಸೋದ್ಯಮ, Technology-ತಂತ್ರಜ್ಞಾನ) ಆದರೆ, ಈ 5 T ಗಳಲ್ಲಿ ಯಾವುದರಲ್ಲೂ ಅವರು ಸಾಧನೆ ಮಾಡಲಿಲ್ಲ?

ನನ್ನ ಪ್ರಕಾರ ಈ ಕೆಳಕಂಡ 5 C ಗಳನ್ನು ಒಳಗೊಂಡಂತೆಯೇ ಇಂದಿನ ಬಿ.ಜೆ.ಪಿ ಸರ್ಕಾರವಿದೆ. Communalism-ಕೋಮುವಾದ, Corruption-ಭ್ರಷ್ಟಾಚಾರ, Corporate Capitalism-ಕಾರ್ಪೊರೇಟ್ ಬಂಡವಾಳಶಾಹಿ, Cheating-ವಂಚನೆ, Character Assassination-ಪಾತ್ರ ಹತ್ಯೆ. ಈ ಸರ್ಕಾರವನ್ನು ಹೀಗೆಯೇ ಕರೆಯಬೇಕು. ಬಿಜೆಪಿ ಇಲ್ಲಿಯವರೆಗೆ ಇದನ್ನು ಜಾಹೀರಾತು ಎಂಬ ಬೆಳಕಿನ ಮೂಲಕ ಮರೆಮಾಡಿ ಇಟ್ಟಿತ್ತು. ಆದರೆ ಈಗ ರೂಪುಗೊಂಡಿರುವ ‘ಇಂಡಿಯಾ ಮೈತ್ರಿಕೂಟ’ ಹಾಗೂ ಇಂಡಿಯಾ ಮೈತ್ರಿ ಕೂಟದ ನಾಯಕರ ಅಬ್ಬರದ ಪ್ರಚಾರ, ಬಿಜೆಪಿ ಪಕ್ಷದ ಮುಖವಾಡವನ್ನು-ಪ್ರಧಾನಿ ನರೇಂದ್ರ ಮೋದಿಯವರ ಬಿಂಬವನ್ನು ಹರಿದುಹಾಕಿದೆ.

ಇಂಡಿಯಾ ಮೈತ್ರಿಕೂಟ

ಇದನ್ನು ನಾವು ರಾಜಕೀಯಕ್ಕಾಗಿ ಹೇಳುತ್ತಿಲ್ಲ. ನಿಜವಾದ ಅಂಕಿಅಂಶಗಳನ್ನು ಆಧರಿಸಿಯೇ ಹೇಳುತ್ತಿದ್ದೇವೆ. ಇದನ್ನು ಸಿಎಜಿ ವರದಿ ಬಹಿರಂಗಪಡಿಸಿದೆ. ಇಂಡಿಯಾ ಮೈತ್ರಿಕೂಟವನ್ನು ಭ್ರಷ್ಟರ ಮೈತ್ರಿಕೂಟ ಎಂದು ಆರೋಪಿಸುತ್ತಿರುವ ಮೋದಿ ಅವರೇ! ನಿಮ್ಮ ಆಡಳಿತದ ಬಗ್ಗೆ ಸಿಎಜಿ ವರದಿ ಏನು ಹೇಳುತ್ತದೆ ಎಂಬುದನ್ನು ನೀವು ಓದಿದ್ದೀರಾ? ಈ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚಿಸಿದ್ದೀರಾ? ಕನಿಷ್ಠ ಇದರ ಬಗ್ಗೆ ಉತ್ತರವನ್ನಾದರೂ ನೀಡಿದ್ದಿರಾ? ಅಯೋಧ್ಯೆ ಯೋಜನೆಯಲ್ಲಿಯೂ ಭ್ರಷ್ಟಾಚಾರ ಮಾಡಿದ ಪಕ್ಷ ಬಿಜೆಪಿ ಎಂದು ಸಿಎಜಿ ವರದಿ ಹೇಳಿದೆ.

ರಾಮಾಯಣ ನಡೆದ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಪ್ರವಾಸ ಯೋಜನೆಯೊಂದನ್ನು ಪ್ರಾರಂಭಿಸಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಗೋವಾ ಮತ್ತು ತೆಲಂಗಾಣ ಮುಂತಾದ 6 ರಾಜ್ಯಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು. ಈ ಯೋಜನೆ ಅನುಷ್ಠಾನದಲ್ಲಿ ಕೋಟ್ಯಂತರ ರೂಪಾಯಿ ವ್ಯರ್ಥವಾಗಿದೆ ಎಂದು ಸಿಎಜಿ ಆರೋಪ ಮಾಡಿದೆ. ಗುತ್ತಿಗೆ ನೀಡಿಕೆಯಲ್ಲಿ ಯಾವ ರೀತಿಯ ಉಲ್ಲಂಘನೆಗಳಾಗಿವೆ ಎಂಬುದನ್ನು ಈ ವರದಿಯಲ್ಲಿ ವಿವರಿಸಲಾಗಿದೆ.

ಬಿಜೆಪಿ ಘೋಷಿಸಿದ್ದನ್ನು ಈಡೇರಿಸುವುದಿಲ್ಲ ಎಂಬುದಕ್ಕೆ ಸಿಎಜಿ ವರದಿಯು ಒಂದು ಉದಾಹರಣೆಯನ್ನು ಉಲ್ಲೇಖಿಸಿದೆ. ಅದುವೇ ಉಡಾನ್ ಯೋಜನೆ. ಈ ಯೋಜನೆಯನ್ನು ಬಹಳ ಸಂಭ್ರಮದಿಂದ ಪ್ರಾರಂಭಿಸಲಾಯಿತು. ಬಡವರು ವಿಮಾನದಲ್ಲಿ ಪ್ರಯಾಣಿಸಬಹುದು, ಮಧ್ಯಮ ನಗರಗಳಲ್ಲೂ ವಿಮಾನ ನಿಲ್ದಾಣ ಸ್ಥಾಪಿಸಲಿದ್ದೇವೆ ಎಂದು ಹೇಳಿ ಈ ಯೋಜನೆಯನ್ನು 2016ರಲ್ಲಿ ಪ್ರಾರಂಭಿಸಿದರು. ಉಡಾನ್ ಯೋಜನೆಗಾಗಿ ಕೇಂದ್ರ ಸರ್ಕಾರ 1,089 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತು. ಯೋಜಿತ 774 ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ನಿರ್ಧರಿಸಲಾಯಿತು, ಅದು ಈಗ ಕೇವಲ 7% ಮಾರ್ಗಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿವೆ. 93% ಮಾರ್ಗಗಳು ಕಾರ್ಯನಿರ್ವಹಿಸುತ್ತಿಲ್ಲ.

ಉಡಾನ್ ಯೋಜನೆ

ಉದಾಹರಣೆಗೆ, ತಮಿಳುನಾಡಿನಲ್ಲಿ, ಉಡಾನ್ ಯೋಜನೆಯಡಿ ಸೇಲಂ, ತಂಜಾವೂರು, ರಾಮನಾಥಪುರಂ ಮತ್ತು ವೆಲ್ಲೂರು ನಗರಗಳಿಗೆ ವಿಮಾನ ಸೇವೆಗಳನ್ನು ಪರಿಚಯಿಸಲು ಯೋಜಿಸಲಾಗಿತ್ತು. ಆದರೆ, ಈ 4 ಯೋಜಿತ ನಗರಗಳಲ್ಲಿ, ಸೇಲಂ ಮಾತ್ರ ಉಡಾನ್ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದನ್ನೂ ಈಗ ಕಡಿತಗೊಳಿಸಲಾಗಿದೆ. ಒಟ್ಟು 774 ಯೋಜಿತ ಮಾರ್ಗಗಳ ಪೈಕಿ 720 ಮಾರ್ಗಗಳು ಕಾರ್ಯನಿರ್ವಹಿಸಿಲ್ಲ ಎಂದು ಸಿಎಜಿ ವರದಿ ಹೇಳುತ್ತದೆ.

2021-22 ರಲ್ಲಿ, ರೈಲ್ವೆ ವಲಯವು 100 ರೂಪಾಯಿಗಳ ಆದಾಯವನ್ನು ಗಳಿಸಲು 107 ರೂಪಾಯಿಗಳನ್ನು ಖರ್ಚು ಮಾಡುತ್ತಿದೆ, ಹೀಗಾಗಿ ಭಾರತೀಯ ರೈಲ್ವೆಯ ಆರ್ಥಿಕ ಸ್ಥಿತಿಯು ಆತಂಕಕಾರಿಯಾಗಿ ಪರಿಣಮಿಸಿದೆ ಎಂದು ಸಿಎಜಿ ವರದಿ ತಿಳಿಸಿದೆ.

ಜಾಹೀರಾತುಗಳ ಮೂಲಕ ಬಿಜೆಪಿ ಸರ್ಕಾರ ಸುಳ್ಳು ಚಿತ್ರಣ ನಿರ್ಮಿಸಿದೆ ಎಂದು ನಾವು ಆಗಾಗ್ಗೆ ಹೇಳುತ್ತಿರುತ್ತೇವೆ. ಆ ಜಾಹೀರಾತುಗಳಿಗೆ ಅವರು ಏನು ಮಾಡಿದ್ದಾರೆ ಗೊತ್ತಾ? 2017 ರಿಂದ 2021 ರವರೆಗೆ ಕೇಂದ್ರ ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳಲ್ಲಿ ಮಂಜೂರಾದ ಹಣವನ್ನು ಕೇಂದ್ರ ಸರ್ಕಾರದ ಜಾಹೀರಾತಿಗೆ ಬಳಸಿರುವುದು ಈಗ ಬಯಲಾಗಿದೆ.

ಈ ಎಲ್ಲ ಅಕ್ರಮಗಳಿಗಿಂತ ದೊಡ್ಡ ಅಕ್ರಮವೆಂದರೆ ಅದು ಟೋಲ್ ಪ್ಲಾಜಾ ಅಕ್ರಮ. ಪ್ರಯಾಣಿಸುವ ಸಾರ್ವಜನಿಕರಿಂದ ಟೋಲ್ ಪ್ಲಾಜಾ ಮೂಲಕ ಪ್ರತಿ ದಿನವೂ ಅಕ್ರಮ ವಸೂಲಿ ನಡೆದಿರುತ್ತದೆ. ಕೇವಲ 5 ಟೋಲ್ ಪ್ಲಾಜಾಗಳನ್ನು ಮಾತ್ರ ಲೆಕ್ಕಪರಿಶೋಧನೆ ಮಾಡಿದಾಗ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಾಹನ ಚಾಲಕರಿಂದ 132 ಕೋಟಿ 5 ಲಕ್ಷ ರೂಗಳನ್ನು ವಸೂಲಿ ಮಾಡಿದೆ ಎಂದು ಸಿಎಜಿ ವರದಿ ಆರೋಪಿಸಿದೆ. ಹಾಗೇ ನೋಡಿದರೆ, ಭಾರತದಾದ್ಯಂತ ಎಷ್ಟು ಟೋಲ್ ಪ್ಲಾಜಾಗಳಿವೆ? ಅದರ ಮೂಲಕ ಎಷ್ಟು ಲಕ್ಷ ಕೋಟಿ ರೂಪಾಯಿ ಅಕ್ರಮವಾಗಿ ಸಂಗ್ರಹವಾಗಿರುತ್ತದೆ ಎಂದು ಲೆಕ್ಕ ಮಾಡಿ?

ಟೋಲ್ ಪ್ಲಾಜಾ

ದೇಶಾದ್ಯಂತ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಸಂಪರ್ಕಿಸಲು 2015ರಲ್ಲಿ ‘ಭಾರತಮಾಲಾ’ ಎಂಬ ಯೋಜನೆಯನ್ನು ತಂದರು. ಅದರಲ್ಲಿ ಪ್ರತಿ ಕಿಲೋಮೀಟರ್ ಗೆ 15 ಕೋಟಿ 37 ಲಕ್ಷ ರೂಪಾಯಿ ಎಂಬುದನ್ನು ಬದಲಿಸಿ, 32 ಕೋಟಿ 17 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ 8 ವರ್ಷಗಳ ಅವಧಿಯಲ್ಲಿ ಕೇವಲ 13,000 ಕಿ.ಮೀ ರಸ್ತೆಗಳನ್ನು ಮಾತ್ರ ಹಾಕಲಾಗಿದೆ. ಇನ್ನೂ ಶೇ.40 ರಷ್ಟು ಕೆಲಸಗಳು ಪೂರ್ಣಗೊಂಡಿಲ್ಲ. “ಭಾರತಮಾಲಾ ಪರಿಯೋಜನೆ-1 ರಲ್ಲಿಯೂ ಅಕ್ರಮ ನಡೆದಿದೆ. ಅದೇ ರೀತಿ, “ದ್ವಾರಕಾ ಎಕ್ಸ್‌ಪ್ರೆಸ್‌ವೇ” ಯೋಜನೆ. “ಭಾರತಮಾಲಾ ಪರಿಯೋಜನೆ-1 ರಲ್ಲಿಯೂ ಅಕ್ರಮ ನಡೆದಿದೆ. ಯೋಜಿತ ಮೊತ್ತಕ್ಕಿಂತ 1,278 ಪಟ್ಟು ಹೆಚ್ಚು ಖರ್ಚು ಮಾಡಲಾಗಿದೆ.

ಭಾರತದಲ್ಲೇ ಪ್ರಪ್ರಥಮವಾಗಿ ತಮಿಳುನಾಡಿನಲ್ಲಿ 2009ರಲ್ಲಿ ‘ಕಲೈಜ್ಞರ್ ವಿಮಾ ಯೋಜನೆ’ ಯನ್ನು ಜಾರಿಗೆ ತರಲಾಯಿತು. ಸುಮಾರು 9 ವರ್ಷಗಳ ನಂತರ, 2018ರಲ್ಲಿ ಪ್ರಧಾನ ಮಂತ್ರಿ ಘೋಷಿಸಿದ ದೊಡ್ಡ ಯೋಜನೆಗಳಲ್ಲಿ “ಆಯುಷ್ಮಾನ್ ಭಾರತ್” ಯೋಜನೆಯೂ ಒಂದಾಗಿದೆ. ಬಡ ಕುಟುಂಬಗಳಿಗೆ 5 ಲಕ್ಷ ರೂಪಾಯಿವರೆಗೆ ವಿಮೆ ನೀಡಲಾಗುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. “ಆಯುಷ್ಮಾನ್ ಭಾರತ್” ಯೋಜನೆಯಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಾವನ್ನಪ್ಪಿದ ರೋಗಿಗಳಿಗೆ, ಮರಣದ ನಂತರವೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುಳ್ಳು ಹೇಳಿ, ವಿಮಾ ಕ್ಲೇಮ್ ಅರ್ಜಿಗಳನ್ನು ಸ್ವೀಕರಿಸಿ, ವಿಮಾ ಮೊತ್ತವನ್ನು ನೀಡಲಾಗುತ್ತಿದೆ.

ಏಕ ಕಾಲದಲ್ಲಿ, ಒಂದೇ ರೋಗಿ ಹಲವಾರು ಆಸ್ಪತ್ರೆಗಳಲ್ಲಿ ದಾಖಲಾಗಿರುವ ಬಗ್ಗೆ ಲೆಕ್ಕ ತೋರಿಸಿವುದು, ಒಂದೇ ಆಧಾರ್ ಸಂಖ್ಯೆಯನ್ನು ಹಲವರಿಗೆ ನೀಡುವುದು, ಒಂದೇ ಪೋನ್ ನಂಬರನ್ನು ಹಲವರು ನೋಂದಣಿ ಮಾಡುವುದು, ಪೋನ್ ನಂಬರ್ ನೀಡದೆ ನೋಂದಣಿ ಮಾಡುವುದು ಮುಂತಾದ ಹಲವಾರು ಅಕ್ರಮಗಳು ನಡೆದಿರುತ್ತದೆ. ಎಷ್ಟು ಜನ, ಎಷ್ಟು ಕೋಟಿ ಎಂದು ಪ್ರತ್ಯೇಕ ಸಂಖ್ಯೆಗಳಾಗಿ ಹೇಳಿದರೆ, ಕೇಳುವವರು ಗಾಬರಿ ಗೊಳ್ಳುತ್ತಾರೆ!

ಆಯುಷ್ಮಾನ್ ಭಾರತ್

ಹೀಗೆ ಅಯೋಧ್ಯೆ ಯೋಜನೆಯಿಂದ ಹಿಡಿದು ಆಯುಷ್ಮಾನ್ ಭಾರತ್ ಯೋಜನೆಯವರೆಗೆ 7.5 ಲಕ್ಷ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ಅಂದಾಜು ಮಾಡಿದೆ. ಇದುವರೆಗೂ ಪ್ರಧಾನಿಯಾಗಲಿ, ಸಂಬಂಧಪಟ್ಟ ಕೇಂದ್ರ ಸಚಿವರಾಗಲಿ ಇದಕ್ಕೆ ಉತ್ತರಿಸಲಿಲ್ಲ; ಅವರು ಉತ್ತರಿಸಲು ಸಾಧ್ಯವೂ ಇಲ್ಲ. ಇದರಿಂದ ಜನರನ್ನು ದಿಕ್ಕು ತಪ್ಪಿಸಲು ವಿಭಿನ್ನ ರಾಜಕೀಯ ಮಾಡುತ್ತಿದ್ದಾರೆ.

ಆದರೆ ಬಡವರು, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ, ಪ್ರಧಾನಿ ನರೇಂದ್ರ ಮೋದಿಯವರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಈಗ ದೇಶದ ಜನತೆ ಚೆನ್ನಾಗಿ ಅರಿತುಕೊಂಡಿದ್ದಾರೆ. ಭಾರತದ ವಿವಿಧ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿರುವುದು ಇದರ ಸಂಕೇತವಾಗಿದೆ.

2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು. ಬಿಜೆಪಿಯ ಕೋಮುವಾದ-ಭ್ರಷ್ಟ-ಕಾರ್ಪೊರೇಟ್ ರಾಜಕಾರಣವನ್ನು ಕೊನೆಗಾಣಿಸಲು ಭಾರತದ ಎಲ್ಲಾ ಜನರು ಒಂದೇ ಧ್ವನಿಯಾಗಿ ಗಟ್ಟಿ ನಿಲ್ಲಬೇಕು. ನಮ್ಮ ವಿಶಾಲ ಭಾರತ ದೇಶವನ್ನು ಉಳಿಸುವ ಕರ್ತವ್ಯ ನಮ್ಮೆಲ್ಲರ ಕೈಯಲ್ಲಿದೆ!

ಎಂ.ಕೆ.ಸ್ಟಾಲಿನ್ ಅವರ ಈ ಧ್ವನಿಯನ್ನು ಭಾರತದ ಧ್ವನಿಯಾಗಿ ಪ್ರತಿಯೊಬ್ಬರಿಗೂ ಕೊಂಡೊಯ್ಯಬೇಕೆಂದು ನಾನು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ. ಭಾರತಕ್ಕಾಗಿ ಮಾತನಾಡುವುದನ್ನು ಮುಂದುವರಿಸೋಣ; ಭಾರತವನ್ನು ಉಳಿಸೋಣ! ಎಂದು ಹೇಳಿದ್ದಾರೆ.

ರಾಜಕೀಯ

ಚೆನ್ನೈ: 2021ರ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಕಟಿಸಲಾದ ಡಿಎಂಕೆ ಚುನಾವಣಾ ಪ್ರಣಾಳಿಕೆಯಲ್ಲಿ ‘ತಮಿಳುನಾಡಿನ ಎಲ್ಲ ಗೃಹಿಣಿಯರಿಗೆ ಮಾಸಿಕ ರೂ.1,000 ಹಕ್ಕುಭತ್ಯೆ ನೀಡುತ್ತೇವೆ’ ಎಂದು ಘೋಷಿಸಲಾಗಿತ್ತು.

ಡಿಎಂಕೆ ಚುನಾವಣೆಯಲ್ಲಿ ಗೆದ್ದು ತಮಿಳುನಾಡಿನಲ್ಲಿ ಸರ್ಕಾರ ರಚಿಸಿದಾಗ, ಹಲವಾರು ಘೋಷಣೆಗಳನ್ನು ಜಾರಿಗೆ ತಂದರೂ, ಮನೆಯ ಎಜಮಾನಿಗೆ ತಿಂಗಳಿಗೆ ರೂ.1,000 ಹಕ್ಕುಭತ್ಯೆ ನೀಡುವ ಯೋಜನೆಯನ್ನು ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಏತನ್ಮಧ್ಯೆ, ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ 2023-24ನೇ ಸಾಲಿನ ಬಜೆಟ್‌ನಲ್ಲಿ ಮನೆಯ ಎಜಮಾನಿಗೆ ಮಾಸಿಕ ರೂ.1,000 ಹಕ್ಕುಭತ್ಯೆ ನೀಡುವ ಯೋಜನೆಗೆ ರೂ.7 ಸಾವಿರ ಕೋಟಿ ಹಣವನ್ನು ನಿಗದಿಪಡಿಸಲಾಯಿತು. ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು (ಇಂದು) ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿತು.

ಕಳೆದ ಜುಲೈ 24 ರಂದು ಧರ್ಮಪುರಿ ಜಿಲ್ಲೆಯ ತೊಪ್ಪೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಹಿಳೆಯರು ಅರ್ಜಿ ಸಲ್ಲಿಸುವ ಶಿಬಿರವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಉದ್ಘಾಟಿಸಿದರು. ಇದಕ್ಕಾಗಿ ರಾಜ್ಯಾದ್ಯಂತ 35 ಸಾವಿರದ 925 ಶಿಬಿರಗಳನ್ನು ನಡೆಸಲಾಗಿದೆ. 68 ಸಾವಿರದ 190 ಸ್ವಯಂಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರವು ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಯೋಜನೆಗೆ ಒಂದು ಕೋಟಿ 63 ಲಕ್ಷ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಸುಮಾರು 56 ಲಕ್ಷದ 50 ಸಾವಿರ ಅರ್ಜಿಗಳು ಅನರ್ಹವೆಂದು ತಿರಸ್ಕೃತಗೊಂಡಿವೆ. ಅಂತಿಮವಾಗಿ 1 ಕೋಟಿ 6 ಲಕ್ಷದ 55 ಸಾವಿರ ಅರ್ಹ ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಹಿನ್ನಲೆಯಲ್ಲಿ, ಒಂದು ಕೋಟಿ ಮನೆಯ ಎಜಮಾನಿಗೆ ಮಾಸಿಕ ರೂ.1,000 ನೀಡುವ ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಯನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇಂದು ಉದ್ಘಾಟಿಸಿದರು. ಈ ಯೋಜನೆಯನ್ನು ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಸಚಿವರು ಉದ್ಘಾಟಿಸಿದ್ದಾರೆ.

ಈ ಯೋಜನೆಯಡಿ, ಅರ್ಹ ಗೃಹಿಣಿಯರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಒಂದು ರೂಪಾಯಿಯನ್ನು ಕಳುಹಿಸಿಕೊಟ್ಟು ಪರೀಕ್ಷಿಸಲಾಗಿದೆ. ಈ ನಡುವೆ ನಿನ್ನೆಯಿಂದ ಹಲವರ ಬ್ಯಾಂಕ್ ಖಾತೆಗೆ ರೂ.1000 ಜಮಾ ಆಗಿದೆ. ಆದರೆ, ತಕ್ಷಣವೇ ಬ್ಯಾಂಕ್ ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗಲಿಲ್ಲ. ಖಾತೆಯಿಂದ ಇಂದು ಹಣವನ್ನು ತೆಗೆಯಬಹುದು. ಅಲ್ಲದೆ, ತಿರಸ್ಕರಿಸಿದ ಅರ್ಜಿದಾರರಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ದಾಖಲೆ ಪರಿಶೀಲನೆಯಲ್ಲಿ ಅರ್ಹ ಫಲಾನುಭವಿಗಳಾಗಿದ್ದರೆ ಅವರನ್ನೂ ಕಲೈಜ್ಞರ್ ಮಹಿಳಾ ಹಕ್ಕುಭತ್ಯೆ ಯೋಜನೆಗೆ ಸೇರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ದ್ರಾವಿಡ ಚಳವಳಿಯ ಉಗಮಕ್ಕೆ ಕೆಲವು ವರ್ಷಗಳ ಹಿಂದೆ ಅಂದರೆ, 1912ರಲ್ಲಿ ಡಾ.ಸಿ.ನಟೇಶನಾರ್, ಅವರಂತಹ ಕೆಲವು ವಕೀಲರು ಒಟ್ಟುಗೂಡಿ, ಚೆನ್ನೈ ಕಾಲೇಜುಗಳಲ್ಲಿ ಓದುತ್ತಿದ್ದ ಬ್ರಾಹ್ಮಣೇತರ ವಿದ್ಯಾರ್ಥಿಗಳಿಗೆ ಇತರೆ ಹಾಸ್ಟೆಲ್‌ಗಳಲ್ಲಿ ಉಳಿದು ಓದುವ ಅವಕಾಶವನ್ನು ನಿರಾಕರಿಸಿದ್ದರಿಂದ ತಮ್ಮ ದುಸ್ಥಿತಿಯ ನಡುವೆಯೂ ತಾವೇ ತಿರುವಲ್ಲಿಕೇಣಿಯಲ್ಲಿ ‘ದ್ರಾವಿಡನ್ ಹಾಸ್ಟೆಲ್’ ನಡೆಸಿ ಅನೇಕರು, ತುಳಿತಕ್ಕೊಳಗಾದವರ ಶಿಕ್ಷಣಕ್ಕೆ ಸಹಾಯ ಮಾಡಿದರು.

ಜಸ್ಟೀಸ್ ಪಾರ್ಟಿಯ ಸಂಸ್ಥಾಕರು-1920

ಶೂದ್ರನಿಗೆ ಶಿಕ್ಷಣವಿಲ್ಲ ಎಂದ ಮನುಧರ್ಮ:
ಶೂದ್ರ, ಪಂಚಮ ಹಾಗೂ ಕೆಳವರ್ಗದವರಿಗೆ ಶಿಕ್ಷಣ ನೀಡಬಾರದು ಎಂಬ ಮನು ಧರ್ಮದ ನೀತಿಯನ್ನು ಪಾಲಿಸಿಕೊಂಡು ಬಂದಿತು ಇತಿಹಾಸ; ಮನು ಧರ್ಮದ ಪ್ರಕಾರ ರಾಜರ ಕಾಲದಲ್ಲೂ ಬ್ರಾಹ್ಮಣ ಮಕ್ಕಳಿಗೆ ಮಾತ್ರ ಓದಲು ಅವಕಾಶವಿತ್ತು; ಇತರರಿಗೆ ಇಲ್ಲ! ಮಧುರೈ ನಾಯಕರ ಆಳ್ವಿಕೆಯಲ್ಲಿ, ಇಟಾಲಿಯನ್ ಪಾದ್ರಿ ರಾಬರ್ಟ್ ಡಿ ನೊಬಿಲಿ ಅವರು ಅಧ್ಯಯನ ಮಾಡಿ ಹೇಳಿದಂತೆ “10 ಸಾವಿರ ಬ್ರಾಹ್ಮಣ ಮಕ್ಕಳು ಸಂಸ್ಕೃತ ಶಿಕ್ಷಣವನ್ನು ಪಡೆದಿದ್ದಾರೆ” ಎಂದು ಹೇಳಿದ್ದಾರೆ. (1610ನೇ ವರ್ಷ) ಅದನ್ನು ಹಿಮ್ಮೆಟ್ಟಿಸಿ, ತುಳಿತಕ್ಕೊಳಗಾದವರಿಗೆ ಶಿಕ್ಷಣ, ಆರೋಗ್ಯ, ವೈಚಾರಿಕತೆ ಮತ್ತು ಮಹಿಳಾ ಹಕ್ಕುಗಳನ್ನು ನೀಡಲು ಜನ್ಮ ತಾಳಿದ್ದೇ ಜಸ್ಟೀಸ್ ಪಾರ್ಟಿ ಎಂಬ ದ್ರಾವಿಡ ಹಾಗೂ ಸ್ವಾಭಿಮಾನ ಚಳುವಳಿ!

ಕೆ.ಕಾಮರಾಜ್

ಜಸ್ಟೀಸ್ ಪಾರ್ಟಿಯ ಆಹಾರ ಕಾರ್ಯಕ್ರಮ:
ಸರ್ ಪಿಟ್ಟಿ ತ್ಯಾಗರಾಯರು ಚೆನ್ನೈ ಪ್ರಾಂತ್ಯದ ಅಧ್ಯಕ್ಷರಾಗಿ (ಆಗ ಮೇಯರ್ ಹುದ್ದೆ ಇರಲಿಲ್ಲ) ಚೆನ್ನೈ ಕಾರ್ಪೊರೇಷನ್ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಆಹಾರ ನೀಡುವ ಯೋಜನೆಯನ್ನು ಮೊಟ್ಟ ಮೊದಲ ಬಾರಿಗೆ ಪ್ರಾರಂಭಿಸಿದರು. ಬ್ರಿಟಿಷ್ ಸರ್ಕಾರವು ಅದನ್ನು ಸ್ವಲ್ಪ ಕಾಲದವರೆಗೆ ನಡೆಸಲು ಅವಕಾಶ ಮಾಡಿಕೊಟ್ಟಿತು. ನಂತರ ಅನುದಾನ ನಿರಾಕರಿಸಿದ ಕಾರಣ ಯೋಜನೆಯನ್ನು ಅಲ್ಲಿಗೆ ನಿಲ್ಲಿಸಬೇಕಾಯಿತು; ಆಗ ಸರ್ಕಾರಕ್ಕೆ ಪೂರ್ಣ ಅಧಿಕಾರ ಇರಲಿಲ್ಲ!

ಎಂ.ಕರುಣಾನಿಧಿ

ಸ್ವಾತಂತ್ರ್ಯದ ನಂತರ ಮುಖ್ಯಮಂತ್ರಿಯಾದ ಕಾಂಗ್ರೆಸ್ ನ ಕೆ.ಕಾಮರಾಜ ಅವರು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಕಾರ್ಯಕ್ರಮವನ್ನು ಆರಂಭಿಸಿ, ಬಡಮಕ್ಕಳು ಓದುವುದನ್ನು ಮುಂದುವರಿಸುವಂತೆ ಮಾಡಿದರು! ಬಡ ಮಕ್ಕಳು, ಹಳ್ಳಿಗಳಲ್ಲಿನ ಜನರು, ತುಳಿತಕ್ಕೊಳಗಾದ ಸಮುದಾಯದ ಮಕ್ಕಳು ಮುಂದುವರಿದು ಓದಿ ಪ್ರಗತಿ ಹೊಂದಲು ಈ ಮಧ್ಯಾಹ್ನದ ಊಟದ ಕಾರ್ಯಕ್ರಮವು ಮೆಟ್ಟಿಲು (ಆಕ್ಷನ್ ಬೂಸ್ಟರ್) ಆಗಿ ಸಹಾಯ ಮಾಡಿತು! ಅವರ ನಂತರ ಮುಖ್ಯಮಂತ್ರಿಯಾದ ಡಿಎಂಕೆ ಪಕ್ಷದ ಸಿ.ಎಂ.ಅಣ್ಣಾದುರೈ ಹಾಗೂ ಎಂ.ಕರುನಾನಿಧಿ ಆ ಯೋಜನೆಯನ್ನು ಮುಂದುವರಿಸಿಕೊಂಡು ಹೋದರು.

ಎಂಜಿಆರ್

ನಂತರ ಮುಖ್ಯಮಂತ್ರಿಯಾದ ಎಂ.ಜಿ.ರಾಮಚಂದ್ರನ್ (ಎಂಜಿಆರ್) ನೇತೃತ್ವದ ಎಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದಾಗ. ಮಧ್ಯಾಹ್ನ ಊಟ ಕಾರ್ಯಕ್ರಮ ‘ಪೌಷ್ಟಿಕ ಆಹಾರ ಯೋಜನೆ’ ಎಂಬ ಹೆಸರಿನಲ್ಲಿ ಮುಂದುವರೆಯಿತು. ಆನಂತರ ಎಂ.ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರ ಮತ್ತೆ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ, ಎರಡು ಮೊಟ್ಟೆ ಅಥವಾ ಬಾಳೆಹಣ್ಣು ನೀಡಿ ಅದನ್ನು ನಿಜವಾಗಿಯೂ ಪೌಷ್ಟಿಕಾಂಶವನ್ನಾಗಿ ಮಾಡಿದರು. ಮತ್ತು ಮಕ್ಕಳ ಹಸಿವು ನೀಗಿಸುವ ಜೊತೆಗೆ ಮಕ್ಕಳ ಪೋಷಣೆಯನ್ನು ಬೆಂಬಲಿಸಲು ಮತ್ತು ಮಕ್ಕಳ ಯೋಗಕ್ಷೇಮಕ್ಕೆ ಸಹಾಯ ಮಾಡಲು ಅವರು ಈ ಕಾರ್ಯಕ್ರಮವನ್ನು ಮತ್ತಷ್ಟು ಪರಿಷ್ಕರಿಸಿದರು. ಮುಂದಿನ ದಿನಗಳಲ್ಲಿ ಆ ಯೋಜನೆಯನ್ನು ಜೆ.ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರವು ಕೂಡ ಮುಂದುವರಿಸಿತು.

ಜೆ.ಜಯಲಲಿತಾ

ಮುಂದುವರಿದು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ದ್ರಾವಿಡ ಮಾದರಿ ಸರ್ಕಾರದ ಎರಡು ವರ್ಷಗಳ ಆಡಳಿತದಲ್ಲಿ, ಕೆಲವು ಸರ್ಕಾರಿ ಶಾಲೆಗಳಲ್ಲಿ ಮೊದಲ ಹಂತವಾಗಿ ಮಧ್ಯಾಹ್ನದ ಊಟದ ಜೊತೆಗೆ ಉಪಹಾರವನ್ನೂ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಎಂ.ಕರುಣಾನಿಧಿ ಶತಮಾನೋತ್ಸವದ ಸಂದರ್ಭದಲ್ಲಿ (25.8.2023) ರಾಜ್ಯದಾದ್ಯಂತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅಪರೂಪದ ಹಸಿವು ನೀಗಿಸಿ ಶಿಕ್ಷಣ (ಮಧ್ಯಾಹ್ನದ ಊಟದ ಜೊತೆಗೆ ಉಪಹಾರ) ನೀಡುವ ವಿನೂತನ ಕಾರ್ಯಕ್ರಮವನ್ನು ಎಂ.ಕರುಣಾನಿಧಿ ಅವರು ಶಿಕ್ಷಣ ಪಡೆದ ತಂಜಾವೂರಿನ ತಿರುಕ್ಕುವಲದಲ್ಲಿನ ಶಾಲೆಯಲ್ಲಿ ಪ್ರಾರಂಭಿಸಿದ್ದಾರೆ.

ಎಂ.ಕೆ.ಸ್ಟಾಲಿನ್

ಓದಿ… ಓದಿ… ಓದಿ… ಎಂದು ಈ ಹಿಂದೆ ಹೇಳಿದಾಗ ಹಳ್ಳಿಯ ಬಡ ವಿದ್ಯಾರ್ಥಿಗಳು, ಬಡತನದ ಕಾರಣಗಳಿಂದ ದನ-ಕರುಗಳನ್ನು ಮೇಯಿಸಲು ಮುಂದಾಗಿದ್ದರು. ಹಸಿವು, ಹಸಿವು ಎಂಬ ಪರಿಸ್ಥಿತಿಯನ್ನು ಬದಲಾಯಿಸಿದ ಕರ್ಮವೀರ ಕಾಮರಾಜರು ಮಧ್ಯಹ್ನದ ಊಟದ ಕಾರ್ಯಕ್ರಮವನ್ನು ತಂದು ಹಸಿವು ನೀಗಿಸಿ ಶಿಕ್ಷಣ ನೀಡುವ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಬಂದ ಸರ್ಕಾರಗಳು ಆ ಯೋಜನೆಯನ್ನು ವಿಸ್ತರಿಸಿ, ಪೌಷ್ಟಿಕ ಆಹಾರವನ್ನಾಗಿ ಪರಿವರ್ತಿಸಿತು. ಇದೀಗ ಬಂದಿರುವ ಡಿಎಂಕೆ ಸರ್ಕಾರ ವಿದ್ಯಾರ್ಥಿಗಳು ಹಸಿವಿನಿಂದ ಶಿಕ್ಷಣ ಪಡೆಯಬಾರದು ಎಂಬ ಉದ್ದೇಶದಿಂದ ಉಪಹಾರ ಸೇವಿಸಿ ತೃಪ್ತರಾಗಿ ನಂತರ ತರಗತಿಯಲ್ಲಿ ಕೂತು ಶಿಕ್ಷಣ ಪಡೆಯಲಿ ಎಂದು ತೀರ್ಮಾನಿಸಿ ಈ ಯೋಜನೆಯನ್ನು ಜಾರಿಗೆ ತಂದಿರುವುದು ಒಂದು ದೊಡ್ಡ ಶೈಕ್ಷಣಿಕ ಕ್ರಾಂತಿಯೇ ಆಗಿದೆ!

ಉಪಹಾರ ಸೇವಿಸುತ್ತಿರುವ ಶಾಲಾ ಮಕ್ಕಳು

ಆರ್ಥಿಕ ಮುಗ್ಗಟ್ಟು ಸರಕಾರದ ಗಂಟಲು ಕಟ್ಟುತ್ತಿರುವ ಈ ಸಂದರ್ಭದಲ್ಲಿ ಈ ಯೋಜನೆಗೆ ಆದ್ಯತೆ ನೀಡಲಾಗಿದ್ದು, 17 ಲಕ್ಷ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯ ಮೂಲಕ ಕಾಯಕಲ್ಪ ನೀಡಲಾಗಿದೆ. ಈ ಯೋಜನೆ ರೂಪಿಸಿದ ಮಾನ್ಯ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಮೆಚ್ಚಲೇಬೇಕು. ಇದಕ್ಕಾಗಿ ಮುಖ್ಯಮಂತ್ರಿಗಳು ಪ್ರತ್ಯೇಕ ನಿಧಿಯನ್ನು ರಚಿಸಿ ಟ್ರಸ್ಟ್‌ ಮಾಡಿ, ಜನರಲ್ಲಿ ಸುಸ್ಥಿತಿಯಲ್ಲಿರುವವರು ದೇಣಿಗೆ ನೀಡುವಂತೆ ನೋಡಿಕೊಂಡು ಎಲ್ಲಾ ಶಾಲೆಗಳಲ್ಲಿ, ಖಾಸಗಿ ಶಾಲೆಗಳಲ್ಲಿಯೂ ಸಹ ಅವರ ಜವಾಬ್ದಾರಿಯಲ್ಲೇ ಮಕ್ಕಳಿಗೆ ಬೆಳಗಿನ ಉಪಾಹಾರವನ್ನು ನೀಡಬಹುದು. ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು; ಸ್ವಚ್ಛತೆ ಸೇರಿದಂತೆ!

ಅತಿಯಾದ ನಿದ್ದೆ ಮಕ್ಕಳಿಗೆ ಬಾರದ ಆಹಾರವಾಗಿದ್ದು, ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲು ತಜ್ಞರು ಯೋಜಿಸಿ ಪರಿಷ್ಕರಿಸಬೇಕು. ಸನಾತನ ಶಿಕ್ಷಣದ ಕಣ್ಣುಗಳನ್ನು ಇರಿಯುತ್ತದೆ ಮತ್ತು ಕುಲ ಶಿಕ್ಷಣವನ್ನು ಹೇರುತ್ತದೆ. ದ್ರಾವಿಡವು ಹಸಿವನ್ನು ನೀಗಿಸಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತದೆ. ಇದೇ ಎರಡರ ನಡುವಿನ ವ್ಯತ್ಯಾಸ!

ದೇಶ

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಮಣಿಪುರ ವಿಚಾರವಾಗಿ ಪ್ರಧಾನಿ ಮೋದಿ ವಿವರಣೆ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಆದರೆ ಉಭಯ ಸದನಗಳಲ್ಲಿ ಅನುಮತಿ ನಿರಾಕರಣೆ ಆಗುತ್ತಿರುವುದರಿಂದ ನಿರಂತರ ಉದ್ವಿಗ್ನತೆ ಉಂಟಾಗಿದೆ. ಮತ್ತು ಸದನಗಳನ್ನು ಸಹ ಮುಂದೂಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಈ ನಿರ್ಣಯದ ಮೇಲಿನ ಚರ್ಚೆ ಇಂದು (ಆ.9) 2ನೇ ದಿನವೂ ನಡೆಯಿತು.

ಇಂದಿನ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಡಿಎಂಕೆ ಪಕ್ಷದ ಸಂಸದೆ ಕನಿಮೊಳಿ ಮಾತನಾಡಿದರು. ”ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ರಾಜ್ಯವನ್ನು ಉಳಿಸಬೇಕಾದ ಪರಿಸ್ಥಿತಿ ಇದೆ. ‘ಡಬಲ್ ಇಂಜಿನ್ ಸರ್ಕಾರ’ ಎಂದು ಬಿಂಬಿಸಿಕೊಳ್ಳುವ ಬಿಜೆಪಿ, ಮಣಿಪುರದ ವಿಚಾರದಲ್ಲಿ ಏಕೆ ವಿವರಣೆ ನೀಡುತ್ತಿಲ್ಲ? ಮಣಿಪುರದ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಮೌನವಾಗಿರುವುದೇಕೆ?

ಮಣಿಪುರದಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಫಲವಾಗಿವೆ. ಮಣಿಪುರದಲ್ಲಿ ಮೂರು ತಿಂಗಳಿನಿಂದ ಗಲಭೆ ತಡೆಯುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ಮಣಿಪುರದ ಶಿಬಿರಗಳಲ್ಲಿ ತಂಗಿರುವ ಜನರ ಸ್ಥಿತಿ ಗಂಭೀರವಾಗಿದೆ. ‘ಮಣಿಪುರ ಕ್ಯಾಂಪ್‌ನಲ್ಲಿ ತಂಗಿರುವ ಜನರನ್ನು ನೋಡಲು ಮಣಿಪುರದ ಮುಖ್ಯಮಂತ್ರಿ ಮತ್ತು ಪ್ರಧಾನಿ ಏಕೆ ಬಂದಿಲ್ಲ’ ಎಂದು ಹುಡುಗಿಯೊಬ್ಬರು ನನ್ನನ್ನು ಕೇಳಿದರು.

ಮಣಿಪುರದಲ್ಲಿ ಸಂತ್ರಸ್ತರಿಗೆ ಪೊಲೀಸರು ಯಾವ ಸಹಾಯವನ್ನೂ ಮಾಡಲಿಲ್ಲ. 161 ಸಶಸ್ತ್ರ ಪಡೆಗಳು ಅಲ್ಲಿದ್ದರೂ ಹಿಂಸಾಚಾರವನ್ನು ತಡೆಯಲಿಲ್ಲ. ಮೃತ ದೇಹಗಳು ಕೂಡ ಸಂಬಂಧಿಕರಿಗೆ ತಲುಪಿಲ್ಲ. ಬಿಜೆಪಿ ಆಡಳಿತದಲ್ಲಿ ಬೆಲೆ ಏರಿಕೆ ಮಾತ್ರವಲ್ಲ, ಮಹಿಳೆಯರ ಮೇಲಿನ ಅಪರಾಧಗಳೂ ಹೆಚ್ಚಿವೆ. ಮಣಿಪುರದಲ್ಲಿ ಸ್ಥಾಪಿಸಲಾಗಿರುವ ನೂರಾರು ಪರಿಹಾರ ಶಿಬಿರಗಳಲ್ಲಿ ಸೂಕ್ತ ಸೌಲಭ್ಯ, ಆಹಾರ, ಕುಡಿಯುವ ನೀರೂ ಇಲ್ಲ. ಮಣಿಪುರದಲ್ಲಿನ ಪರಿಹಾರ ಶಿಬಿರಗಳು ಅನೈರ್ಮಲ್ಯ ಮತ್ತು ವಾಸಕ್ಕೆ ಯೋಗ್ಯವಲ್ಲ.

ದೇಶದಲ್ಲಿ ಸಾಕಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಖಾಲಿ ಇರುವ ಹುದ್ದೆಗಳ ಭರ್ತಿಗೂ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಅದರಲ್ಲೂ ರೈಲ್ವೆ ವಲಯದಲ್ಲಿ ಹುದ್ದೆಗಳು ಭರ್ತಿಯಾಗಿಲ್ಲ. ಸಂಸತ್ತಿನಲ್ಲಿ ರಾಜದಂಡವನ್ನು ಅಳವಡಿಸಿ, ‘ಇದು ಚೋಳರಾಜನಿಗೆ ಸೇರಿದ್ದು’ ಎಂದು ಹೇಳಿದ್ದೀರಿ. ಕನ್ನಗಿಯ ಕೋಪಕ್ಕೆ ಪಾಂಡಿಯನ ರಾಜದಂಡ ಮುರಿದ ಕಥೆ ಏನು ಗೊತ್ತಾ? ನಮ್ಮ ಮೇಲೆ ಹಿಂದಿ ಹೇರುವುದನ್ನು ನಿಲ್ಲಿಸಿಕೊಂಡು, ಸಿಲಪತಿಕಾರಂ ಓದಿ; ಅದರಲ್ಲಿ ನಿಮಗೆ ಅನೇಕ ಪಾಠಗಳಿವೆ.

ಪ್ರಧಾನಮಂತ್ರಿಯವರು ಮಣಿಪುರದ ಜನರನ್ನು ಖುದ್ದಾಗಿ ಭೇಟಿ ಮಾಡಿ ನ್ಯಾಯ ಸ್ಥಾಪಿಸುವುದು ಅಗತ್ಯವಾಗಿದೆ. ಮಣಿಪುರ ಹಿಂಸಾಚಾರದಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ದ್ರೌಪದಿಯಂತೆಯೇ ಮಣಿಪುರದ ಮಹಿಳೆಯರನ್ನು ವಿವಸ್ತ್ರಗೊಳಿಸಿದಾಗ ಅವರ ಇಷ್ಟ ದೇವರನ್ನು ಪ್ರಾರ್ಥಿಸಿರುತ್ತಾರೆ. ಆದರೆ ಅವರನ್ನು ರಕ್ಷಿಸಲು ದೇವರಾಗಲಿ, ಸರ್ಕಾರವಾಗಲಿ ಬರಲಿಲ್ಲ.

ಮಹಾಭಾರತವನ್ನು ಚೆನ್ನಾಗಿ ಓದಿದವರಿಗೆ ಗೊತ್ತು. ಅಪರಾಧಿಗಳಿಗೆ ಮಾತ್ರವಲ್ಲ, ಅದನ್ನು ಮೌನವಾಗಿದ್ದು ನೋಡಿ ಆನಂದಿಸಿದವರಿಗೂ ಶಿಕ್ಷೆಯಾಯಿತು. ಹತ್ರಾಸ್, ಕಥುವಾ, ಉನ್ನಾವೋ, ಬಿಲ್ಕಿಸ್ ಬಾನು, ಕುಸ್ತಿಪಟುಗಳ ಪ್ರತಿಭಟನೆಯ ಸಂದರ್ಭದಲ್ಲಿ ಮೌನವಹಿಸಿದವರನ್ನು ಭಾರತ ಮಾತೆಯರು ಶಿಕ್ಷಿಸುತ್ತಾರೆ. ಆಡಳಿತಾರೂಢ ಸಮ್ಮಿಶ್ರ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಕನಿಮೋಳಿ ಭಾವುಕ ಭಾಷಣ ಮಾಡಿದ್ದಾರೆ.