ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸಂಸತ್ Archives » Dynamic Leader
October 16, 2024
Home Posts tagged ಸಂಸತ್
ದೇಶ

ನವದೆಹಲಿ: ಕಳೆದ 5 ವರ್ಷಗಳಲ್ಲಿ 633 ಭಾರತೀಯ ವಿದ್ಯಾರ್ಥಿಗಳು ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದ ವಿದೇಶದಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಒಟ್ಟು 41 ದೇಶಗಳಲ್ಲಿ ವಿದ್ಯಾರ್ಥಿಗಳ ಸಾವಿನ ಘಟನೆಗಳು ನಡೆದಿವೆ. ಕೆನಡಾದಲ್ಲಿ ಗರಿಷ್ಠ 172 ಮತ್ತು ಅಮೆರಿಕದಲ್ಲಿ 108 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇದಲ್ಲದೆ, ದಾಳಿಯಲ್ಲಿ 19 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ, ಅದರಲ್ಲಿ 9 ಕೆನಡಾದಲ್ಲಿ ಮತ್ತು 6 ಅಮೆರಿಕದಲ್ಲಿ ಸಾವನ್ನಪ್ಪಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಕೊಡಿಕುನ್ನಿಲ್ ಸುರೇಶ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವಾಲಯ ಈ ಮಾಹಿತಿಯನ್ನು ಒದಗಿಸಿದೆ. ಈ ಕುರಿತು ಲೋಕಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ. “ಅಪಘಾತಗಳು, ವೈದ್ಯಕೀಯ ಚಿಕಿತ್ಸೆ ಮುಂತಾದ ವಿವಿಧ ಕಾರಣಗಳಿಂದ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಸಾವನ್ನಪ್ಪಿದ್ದಾರೆ. ಕೆನಡಾ ಮತ್ತು ಅಮೆರಿಕದಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.

ಇದರ ನಂತರ ಇಂಗ್ಲೆಂಡ್ 58 ವಿದ್ಯಾರ್ಥಿಗಳು, ಆಸ್ಟ್ರೇಲಿಯಾ 57 ವಿದ್ಯಾರ್ಥಿಗಳು ಮತ್ತು 37 ವಿದ್ಯಾರ್ಥಿಗಳೊಂದಿಗೆ ರಷ್ಯಾ ನಂತರದ ಸ್ಥಾನದಲ್ಲಿದೆ. ಏತನ್ಮಧ್ಯೆ, ಕಳೆದ ಮೂರು ವರ್ಷಗಳಲ್ಲಿ 48 ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಗಡಿಪಾರಿಗೆ ಕಾರಣಗಳನ್ನು ಅಮೆರಿಕ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಒದಗಿಸಿಲ್ಲ” ಎಂದು ಅವರು ಹೇಳಿದ್ದಾರೆ.

ದೇಶ

ಸಂಸತ್ತಿನ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಕೇಂದ್ರ ಬಿಂದುವಾಗಿದೆ. ಕೇಂದ್ರ ಗೃಹ ಸಚಿವಾಲಯವು ಸ್ಪೀಕರ್ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ!

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯನ್ನು ಒಳಗೊಂಡಿರುವ ಸಂಸತ್ತಿನ ಭದ್ರತೆಯನ್ನು ಲೋಕಸಭೆಯ ಸ್ಪೀಕರ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ಸಲಹೆಯಂತೆ ನಿರ್ವಹಿಸಲಾಗುತ್ತದೆ. ಈ ಪದ್ಧತಿಯನ್ನು 1929 ರಿಂದ ಅನುಸರಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು, ಈ ಪದ್ಧತಿಯನ್ನು ಬದಲಿಸುವ ರೀತಿಯಲ್ಲಿ ಮೇ 3 ರಂದು ಆದೇಶವೊಂದನ್ನು ಹೊರಡಿಸಿದೆ. ಅದರಲ್ಲಿ ಸಂಸತ್ತಿನ ಭದ್ರತೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದ್ದು, ಭದ್ರತೆಗಾಗಿ ಹೆಚ್ಚುವರಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯನ್ನು ನೇಮಿಸಲಾಗುವುದು ಎಂದು ಹೇಳಿದೆ.

ಆದೇಶದ ಪ್ರಕಾರ, ಸಂಸತ್ತಿನ ಭದ್ರತೆಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನಿರ್ದೇಶಕ ಅಜಯ್ ಕುಮಾರ್ ಅವರು ಆದೇಶಿಸಿದ್ದಾರೆ. ಈ ಆದೇಶವೇ ಸದ್ಯ ವಿವಾದಕ್ಕೆ ಕಾರಣವಾಗಿದೆ.

ಸಂಸತ್ತಿನ ಭದ್ರತೆಯು ಸ್ಪೀಕರ್ ನಿಯಂತ್ರಣದಲ್ಲೇ ಇರಬೇಕು ಎಂದು ಲೋಕಸಭೆಯ ಮಾಜಿ ಕಾರ್ಯದರ್ಶಿ ಆಚಾರಿ ಹೇಳಿದ್ದಾರೆ. “ಸಂಸತ್ತು ವಿಮಾನ ನಿಲ್ದಾಣಗಳಂತೆ ಸಾರ್ವಜನಿಕ ವಲಯದ ಸಂಸ್ಥೆ ಅಲ್ಲ. ದೇಶಾದ್ಯಂತ ಚುನಾಯಿತ ಸಂಸದರ ಭದ್ರತೆಯನ್ನು ಖಾತ್ರಿಪಡಿಸುವುದು ಸ್ಪೀಕರ್ ಮತ್ತು ಲೋಕಸಭೆ ಸಚಿವಾಲಯದ ಅಧಿಕಾರಕ್ಕೆ ಒಳಪಟ್ಟಿರುತ್ತದೆ” ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸಂಸದ ಜಾನ್ ಬ್ರಿಟಾಸ್, ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಟೀಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಅದರಲ್ಲಿ, “ಸಂಸತ್ತಿನ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಕೇಂದ್ರ ಬಿಂದುವಾಗಿದೆ. ಕೇಂದ್ರ ಗೃಹ ಸಚಿವಾಲಯವು ಸ್ಪೀಕರ್ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ಸಂಸತ್ತಿನ ಭದ್ರತೆಯು ಗೃಹ ಸಚಿವಾಲಯದ ನಿಯಂತ್ರಣಕ್ಕೆ ಹೋದರೆ, ಸಂಸತ್ತಿನ ಉಭಯ ಸದನಗಳಲ್ಲಿ ಭದ್ರತಾ ಸಿಬ್ಬಂದಿ ನೇಮಕ, ಸಂಸದರು, ಅವರ ಸಹಾಯಕರು, ಪತ್ರಕರ್ತರು ಮತ್ತು ಸಂದರ್ಶಕರ ಪ್ರವೇಶ ಸೇರಿದಂತೆ ಎಲ್ಲಾ ನಿರ್ಧಾರಗಳನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ ಪಾಲಾಗುತ್ತವೆ ಎಂಬುದು ಗಮನಾರ್ಹ.

ಸಂಪಾದಕೀಯ

ಡಿ.ಸಿ.ಪ್ರಕಾಶ್, ಸಂಪಾದಕರು
dynamicleaderdesk@gmail.com

ಭಾರತದ ಸಂಸತ್ತಿನಿಂದ 92 ಸಂಸದರನ್ನು ಅಮಾನತು ಮಾಡಲಾಗಿದೆ. ಬಿಜೆಪಿಯ ಪ್ರಜಾಸತ್ತಾತ್ಮಕ ಸಾಧನೆಗಳಲ್ಲಿ ಇದೂ ಒಂದಾಗಿದೆ!

ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡುವುದು ಹೊಸದಲ್ಲ. ಕಳೆದ 5 ವರ್ಷಗಳಲ್ಲಿ ದೇಶದ ಪ್ರಮುಖ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಅನುಮತಿ ನೀಡುವಂತೆ ಧ್ವನಿ ಎತ್ತಿದ್ದಕ್ಕಾಗಿ 71 ಬಾರಿ ಸಂಸತ್ತಿನ 57 ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಬೆಲೆ ಏರಿಕೆ, ಜಿಎಸ್‌ಟಿ ತೆರಿಗೆ ಹೆಚ್ಚಳ, ಮಹಾರಾಷ್ಟ್ರ ಕುದುರೆ ವ್ಯಾಪಾರ, ಮಣಿಪುರ ಗಲಭೆ, ರಫೇಲ್ ಸಮಸ್ಯೆ, ಟೆಲಿಫೋನ್ ಕದ್ದಾಲಿಕೆ, ಅದಾನಿ ಸಮಸ್ಯೆಯಂತಹ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ 2019 ರಿಂದ 57 ಸಂಸತ್ ಸದಸ್ಯರನ್ನು ಸಂಸತ್ತಿನಲ್ಲಿ 71 ಬಾರಿ ಅಮಾನತುಗೊಳಿಸಲಾಗಿದೆ.

2022ರ ಮುಂಗಾರು ಅಧಿವೇಶನದಲ್ಲಿ ಜಿಎಸ್‌ಟಿ ತೆರಿಗೆ ಹೆಚ್ಚಳದ ವಿರುದ್ಧ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿತು. ಆದರೆ ಚರ್ಚೆಗೆ ಅನುಮತಿ ನಿರಾಕರಿಸಲಾಯಿತು. ಆ ಸಮಯದಲ್ಲಿ ಸಂಸತ್ತಿನಲ್ಲಿ ಘೋಷಣೆ ಕೂಗಿದ 23 ಸಂಸದರನ್ನು ಅಮಾನತುಗೊಳಿಸಲಾಗಿದೆ. ಡಿಎಂಕೆ ಪಕ್ಷದ ಐವರು ಸಂಸದರು ಸೇರಿದಂತೆ ರಾಜ್ಯಸಭೆಯಲ್ಲಿ 19 ಸಂಸದರನ್ನು ಅಮಾನತುಗೊಳಿಸಲಾಯಿತು. ಇದೇ ವಿಚಾರವಾಗಿ ಲೋಕಸಭೆಯಲ್ಲಿ ನಾಲ್ವರು ಸಂಸದರನ್ನು ಅಮಾನತುಗೊಳಿಸಲಾಗಿತ್ತು.

2021ರ ಚಳಿಗಾಲದ ಅಧಿವೇಶನದಲ್ಲಿ ರೈತರ ಸಮಸ್ಯೆ ಮತ್ತು ರೈತರ ಆಂದೋಲನದ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿದ 12 ಸಂಸದರನ್ನು ರಾಜ್ಯಸಭೆಯಲ್ಲಿ ಅಮಾನತುಗೊಳಿಸಲಾಯಿತು. ಇಂತಹ ಸಮಸ್ಯೆಗಳಿಂದಾಗಿ ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳ 57 ಸಂಸದರನ್ನು 71 ಬಾರಿ ಅಮಾನತುಗೊಳಿಸಿರುವುದು ಬಹಿರಂಗವಾಗಿದೆ. ಪ್ರಶ್ನಿಸುವವರನ್ನು ಅಮಾನತು ಗೊಳಿಸುವುದೇ ಬಿಜೆಪಿ ನಾಯಕತ್ವದ ರಾಜಕೀಯ ಶೈಲಿ.

ರಾಹುಲ್ ಗಾಂಧಿ ಮತ್ತು ಮಹುವಾ ಮೊಯಿತ್ರಾ ಅವರನ್ನು ಪದಚ್ಯುತಿ ಮಾಡಿದ ಹಾಗೇ ಮಾಡಲು ಸಾಧ್ಯವಾಗದ ಕಾರಣ ‘ಅಮಾನತು’ ಎಂಬ ಅಸ್ತ್ರವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಈಗಲೂ ಅದನ್ನೇ ಮಾಡಿದ್ದಾರೆ. 13 ರಂದು ಸಂಸತ್ತಿನ ಮೇಲೆ ಸ್ಮೋಕ್ ಬಾಂಬ್ ಎಸೆಯಲಾಯಿತು. ಈ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದ ಕನಿಮೋಳಿ ಕರುಣಾನಿಧಿ ಸೇರಿದಂತೆ 13 ಲೋಕಸಭಾ ಸದಸ್ಯರುಗಳೊಂದಿಗೆ ಒಬ್ಬ ರಾಜ್ಯಸಭಾ ಸದಸ್ಯರೊಬ್ಬರನ್ನೂ ಅಮಾನತುಗೊಳಿಸಲಾಯಿತು. ಅದರ ನಂತರ, 33 ಲೋಕಸಭಾ ಸದಸ್ಯರು ಮತ್ತು 45 ರಾಜ್ಯಸಭಾ ಸದಸ್ಯರು ಸೇರಿದಂತೆ 78 ಸಂಸದರನ್ನು ನಿನ್ನೆ ಅಮಾನತುಗೊಳಿಸಲಾಗಿದೆ. ಹಾಗಾಗಿ ಒಟ್ಟು 92 ಸದಸ್ಯರನ್ನು ಅಮಾನತು ಮಾಡಲಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಭೇಟಿ ನೀಡಿ ಸಂಸತ್ ಸದಸ್ಯರಿಗೆ ಸಾಂತ್ವನ ಹೇಳಲಿಲ್ಲ? ಗೃಹ ಸಚಿವ ಅಮಿತ್ ಶಾ ಸಂಸತ್ತಿಗೆ ಬಂದು ವಿವರಣೆಯನ್ನೂ ನೀಡುತ್ತಿಲ್ಲ? ವಿವರಿಸುವಲ್ಲಿ ಇವರಿಗೆ ಸಮಸ್ಯೆ ಏನಿದೆ?

ಈ ಹಿನ್ನಲೆಯಲ್ಲಿ, ಪ್ರಧಾನಿ ಮೋದಿ ಅವರು ಹಿಂದಿ ದಿನಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ‘ಸಂಸತ್ತಿನ ಭದ್ರತಾ ಲೋಪದ ಘಟನೆಯು ನೋವುಂಟುಮಾಡಿದೆ. ಈ ನಿಟ್ಟಿನಲ್ಲಿ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಅವ್ಯವಹಾರದ ಹಿಂದಿನ ವ್ಯಕ್ತಿಗಳು ಮತ್ತು ಅವರ ಉದ್ದೇಶವನ್ನು ಆಳವಾಗಿ ತನಿಖೆ ಮಾಡುವುದು ಅವಶ್ಯಕವಾಗಿದೆ. ಸಂಸತ್ತಿನ ಘಟನೆಯ ಗಂಭೀರತೆಯನ್ನು ಸುಲುಭವಾಗಿ ಅಂದಾಜಿಸಲು ಸಾಧ್ಯವಿಲ್ಲ. ಅದೇ ತೀವ್ರತೆಯಿಂದ ಲೋಕಸಭೆಯ ಸ್ಪೀಕರ್ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಮೂಹಿಕ ಮನೋಭಾವದಿಂದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಇಂತಹ ವಿಷಯಗಳ ಮೇಲೆ ನಿರರ್ಥಕ ವಿವಾದಗಳನ್ನು ಎಲ್ಲರೂ ತಪ್ಪಿಸಬೇಕು’ ಎಂದು ಪ್ರಧಾನಿ ಹೇಳಿರುವುದಾಗಿ ವರದಿಯಾಗಿದೆ.

ಅದನ್ನೇ ಸಂಸತ್ತಿನಲ್ಲಿ ಹೇಳಿದರೆ ಕಡಿಮೆಯಾಗುವುದೇನು? ಸಂಸತ್ತಿನ ಸದಸ್ಯರಿಗೆ ಯಾವುದೇ ಸ್ಥಳದಲ್ಲಿ ಯಾವುದೇ ಸಮಸ್ಯೆ ಎದುರಾದರೆ, ಆ ವಿಷಯವನ್ನು ಸಂಸತ್ತಿನಲ್ಲಿ “ಹಕ್ಕುಗಳ ಉಲ್ಲಂಘನೆ” ಎಂಬ ಅರ್ಥದಲ್ಲಿ ಪ್ರಸ್ತಾಪಿಸಿ ಚರ್ಚೆಗಳನ್ನು ನಡೆಸಲಾಗುತ್ತದೆ. ಆದರೆ ಇಲ್ಲಿ ಎಲ್ಲಾ ಸದಸ್ಯರಿಗೆ ಬೆದರಿಕೆ ಇರುವುದಾಗಿ ಕಾಣುತ್ತಿದೆ. ಬಿಜೆಪಿ ಸದಸ್ಯರೂ ಗಾಬರಿಯಾಗಿದ್ದಾರೆ. ಇದು ದೊಡ್ಡ ಬೆದರಿಕೆ ಅಲ್ಲವೇ? ಅದನ್ನು ಚರ್ಚಿಸಬೇಕಲ್ಲವೇ?

ಇದನ್ನು ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿಲ್ಲ. “ಗೃಹ ಸಚಿವರು ಉತ್ತರಿಸಬೇಕು” ಎಂದು ಕೇಳುತ್ತಿದ್ದಾರೆ. ಸಂಸತ್ ನಲ್ಲಿ ಗೃಹ ಸಚಿವರು, ಪ್ರಧಾನಿಯ ಬದಲು ಪುಟಗಟ್ಟಲೆ ಭಾಷಣ ಮಾಡುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಈಗ ಅವರು ಉತ್ತರಿಸಬೇಕಾದ ಉತ್ತರವನ್ನು ಏಕೆ ನಿರಾಕರಿಸುತ್ತಿದ್ದಾರೆ? “ಸಂಸತ್ತಿಗೆ ಬರಲು ನಮಗೆ ಯಾವ ರಕ್ಷಣೆ ಇದೆ?” ಎಂದು ಕೇಳುವ ಹಕ್ಕು ಸಂಸತ್ತಿನ ಸದಸ್ಯರಿಗಿಲ್ಲವೇ?

ದೇಶ

ಕೋಲ್ಕತ್ತಾ: ಸಂಸತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಮೋದಿ ಮತ್ತು ಅದಾನಿ ವಿರುದ್ಧ ಪ್ರಬಲವಾಗಿ ವಾದ ಮಂಡಿಸುತ್ತಿರುವವರಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಪ್ರಮುಖರು. ಇವರು, ಸಂಸತ್ತಿನಲ್ಲಿ ಅದಾನಿಯ ಕುರಿತು ಪ್ರಶ್ನಿಸಲು ಉದ್ಯಮಿ ಹಿರಾನಂದಾನಿಯಿಂದ ಹಣ ಮತ್ತು ಉಡುಗೊರೆಗಳನ್ನು ಲಂಚವಾಗಿ ಪಡೆದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ.

ಅಲ್ಲದೆ, ಹಿರಾನಂದಾನಿ ಮತ್ತು ಅವರ ರಿಯಲ್ ಎಸ್ಟೇಟ್ ಕಂಪನಿ ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳಲು ಲೋಕಸಭೆಯ ವೆಬ್‌ಸೈಟ್ ಮತ್ತು ತಮ್ಮ ಲಾಗಿನ್ ಐಡಿಯನ್ನು ಮಹುವಾ ಮೊಯಿತ್ರಾ ನೀಡಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ. ಈ ಬಗ್ಗೆ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಪತ್ರ ಬರೆದ ನಂತರ, ಈ ವಿಚಾರದಲ್ಲಿ ಕ್ರಮ ಕೈಗೊಂಡಿರುವ ಸಂಸದೀಯ ನೈತಿಕ ಸಮಿತಿ, ನವೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಮಹುವಾ ಮೊಯಿತ್ರಾ ಅವರಿಗೆ ಆದೇಶ ಮಾಡಿತು.

ಈ ಹಿನ್ನಲೆಯಲ್ಲಿ, ನನ್ನನ್ನು ಸಂಸತ್ತಿನಿಂದ ಹೊರಹಾಕಲು ಬಯಸುವವರು ನನ್ನ ತಲೆ ಕೂದಲನ್ನೂ ಮುಟ್ಟಲಾಗದು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಹೇಳಿದ್ದಾರೆ. ಸಂಸತ್ತಿನಲ್ಲಿ ಅದಾನಿಯ ಕುರಿತು ಪ್ರಶ್ನಿಸಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚವಾಗಿ ಉಡುಗೊರೆ ಪಡೆದಿರುವ ಆರೋಪಕ್ಕೆ ಮೇಲಿನಂತೆ ಮಹುವಾ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.

ದೇಶ ರಾಜಕೀಯ

ನವದೆಹಲಿ: ದ್ವೇಷ ಭಾಷಣದಿಂದ ಪ್ರಭಾವಿತರಾದ ಬಹುಜನ ಸಾಮಾಜ ಪಾರ್ಟಿಯ ಸಂಸದ ಕುನ್ವರ್ ಡ್ಯಾನಿಶ್ ಅಲಿ ಅವರನ್ನು ಕಾಂಗ್ರೆಸ್ ಸಂಸದ ರಾಹುಲ್ ಭೇಟಿ ಮಾಡಿದ್ದಾರೆ.

ಸಂಸತ್ತಿನಲ್ಲಿ ಚರ್ಚೆಯ ಸಂದರ್ಭದಲ್ಲಿ ದೆಹಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಚಂದ್ರಯಾನ-3 ವಿಚಾರವಾಗಿ ಮಾತನಾಡುತ್ತಿದ್ದರು. ಆಗ ಮಾಯಾವತಿ ಅವರ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಅಡ್ಡಿಪಡಿಸುತ್ತಿದ್ದಂತೆ, ಇದರಿಂದ ಕೆರಳಿದ ರಮೇಶ್ ಬಿಧುರಿ, ಡ್ಯಾನಿಶ್ ಅವರನ್ನು ‘ಭಯೋತ್ಪಾದಕ’ ಎಂದು ಸಂಭೋಧಿಸಿದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್‌ನಿಂದ ಸಿಗ್ನಲ್ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ: ಇಸ್ರೋ

ಈ ವಿಚಾರ, ವಿವಾದ ಸೃಷ್ಟಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡ್ಯಾನಿಶ್ ಅಲಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ರಾಹುಲ್ ಜೊತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.

ಇಂಡಿಯಾ ಮೈತ್ರಿಕೂಟದ ಪರವಾಗಿ ಲೋಕಸಭೆಯ ಸ್ಪೀಕರ್‌ಗೆ ಕಳುಹಿಸಿರುವ ಪತ್ರದಲ್ಲಿ, ದ್ವೇಷ ಭಾಷಣ ಮಾಡಿದ ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ.  

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನ ನಾಳೆಯಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ನಾಳೆ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. 5 ರಾಜ್ಯಗಳ ಚುನಾವಣೆ, ಲೋಕಸಭೆ ಚುನಾವಣೆಗೂ ಮುನ್ನ ನಡೆಯಲಿರುವ ಈ ವಿಶೇಷ ಅಧಿವೇಶನದಿಂದ ಕುತೂಹಲ ಮೂಡಿಸಿದೆ. ಇನ್ನು ಕೆಲವೇ ವಾರಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಘೋಷಣೆಗಳು ಹೊರಬೀಳಲಿವೆ.

ಮುಂದಿನ ವರ್ಷದ ಆರಂಭದಲ್ಲಿ ಸಂಸತ್ತಿನ ಚುನಾವಣೆಯ ಅಧಿಸೂಚನೆಗಳನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ವಿರೋಧ ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟದ ಹೆಸರಿನಲ್ಲಿ ಒಗ್ಗೂಡಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.  ಈ ಹಿನ್ನಲೆಯಲ್ಲಿ ಸೆಪ್ಟಂಬರ್ 18 ರಿಂದ 22 ರವರೆಗೆ 5 ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ. ಮೊದಲ ದಿನದ ಕಾರ್ಯಕ್ರಮಗಳು ಎಂದಿನಂತೆ ಹಳೆಯ ಕಟ್ಟಡದಲ್ಲಿ ನಡೆಯಲಿವೆ. ಮರುದಿನ (ಸೆ.19) ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ನಡೆಯಲಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನು ‘ಇಂಡಿಯಾ’ ಮೈತ್ರಿಯೊಂದಿಗೆ ಒಗ್ಗೂಡಿಸಿ ಬಿಜೆಪಿ ವಿರುದ್ಧ ಹೋರಾಡಿ: ಸೋನಿಯಾ ಗಾಂಧಿ

ಈ ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ಪ್ರಕಟಿಸದಿರುವುದನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಖಂಡಿಸಿದವು. ಈ ನಡುವೆ ನಾಳೆ (ಸೆ.17) ಸರ್ವಪಕ್ಷ ಸಭೆ ನಡೆಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಸಂಸದೀಯ ಸುದ್ದಿ ಪತ್ರಿಕೆಯಲ್ಲಿ ಈ ವಿಶೇಷ ಸಭೆಯ ಬಗ್ಗೆ ವಿವರಣೆ ನೀಡಲಾಗಿದೆ. ಅದರಲ್ಲಿ, ‘ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನ ಸಂವಿಧಾನ ರಚನಾ ಸಭೆ ಸ್ಥಾಪನೆಯಾದ ನಂತರ ಸಂಸತ್ತಿನ 75 ವರ್ಷಗಳ ಪಯಣದ ಕುರಿತು ಚರ್ಚೆ ನಡೆಯಲಿದೆ. ಅದರಲ್ಲೂ ಸಂಸದೀಯ ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಪಾಠಗಳನ್ನು ವಿವರವಾಗಿ ಚರ್ಚಿಸಲಾಗುವುದು’ ಎಂದು ಹೇಳಲಾಗಿದೆ.

ಇದಲ್ಲದೇ ಹೊಸ ವಿವಾದ ಸೃಷ್ಟಿಸಿರುವ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮಗಳು, ಅಧಿಕಾರಾವಧಿ) ಮಸೂದೆಯನ್ನು ಈ ಅಧಿವೇಶನದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಪತ್ರಿಕೆ ತಿಳಿಸಿದೆ. ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದು, ಕೇಂದ್ರ ಸರ್ಕಾರವು ಪ್ರಸ್ತುತ ವಿಶೇಷ ಅಧಿವೇಶನದಲ್ಲಿ ಅದನ್ನು ಅಂಗೀಕರಿಸಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನ್: ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಿದ ಅಪರಾಧಕ್ಕಾಗಿ ಒಬ್ಬ ಅಮೇರಿಕನ್ ಸೇರಿದಂತೆ 18 ಸಿಬ್ಬಂದಿಯನ್ನು ಬಂಧಿಸಲಾಗಿದೆ!

ಕೆಲವು ವಾರಗಳ ಹಿಂದೆ ಕೇಂದ್ರ ಸರ್ಕಾರವು ‘ಒಂದು ದೇಶ; ಒಂದು ಚುನಾವಣೆ’ ಯೋಜನೆಯ ಅಧ್ಯಯನಕ್ಕಾಗಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಹೀಗಾಗಿ ಈ ವಿಶೇಷ ಅಧಿವೇಶನದಲ್ಲಿ ಅದರ ಬಗ್ಗೆ ಚರ್ಚೆಯಾಗಬಹುದು ಎಂಬ ಮಾಹಿತಿ ಹೊರಬಿದ್ದಿರುವುದರಿಂದ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರನ್ನು ಒತ್ತಾಯಿಸಿ ವಿಪ್ ಆದೇಶ ಹೊರಡಿಸಲಾಗಿದೆ.

ರಾಜಕೀಯ

ಡಿ.ಸಿ.ಪ್ರಕಾಶ್

ಮುಂದಿನ ವರ್ಷ ಸಂಸತ್ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಭಾರತದ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಜನಸಾಮಾನ್ಯರಿಗೆ ಅಡ್ಡಿ, ಸಂಕಷ್ಟ ತಂದೊಡ್ಡುತ್ತಿರುವ ಆಡಳಿತಾರೂಢ ಬಿಜೆಪಿಯನ್ನು ಬದಿಗೊತ್ತಲು ವಿರೋಧ ಪಕ್ಷಗಳು ಒಂದಾಗಿವೆ. ವಿರೋಧ ಪಕ್ಷಗಳ ಮೈತ್ರಿಗೆ ‘ಇಂಡಿಯಾ’ ಎಂಬ ಹೆಸರನ್ನೂ ಇಡಲಾಗಿದೆ.

ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳ 4ನೇ ಸಭೆ ನಡೆಯಲಿದ್ದು, ಬಿಜೆಪಿಯಲ್ಲಿ ಆತಂಕ ಸೃಷ್ಟಿಯಾಗಿದೆ. ಏಕೆಂದರೆ ಇತ್ತೀಚೆಗೆ ನಡೆದ 6 ರಾಜ್ಯಗಳ 7 ವಿಧಾನಸಭಾ ಉಪಚುನಾವಣೆಗಳಲ್ಲಿ ಇಂಡಿಯಾ ಮೈತ್ರಿಕೂಟ 4 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಇದಲ್ಲದೇ ಇಂಡಿಯಾ ಮೈತ್ರಿಯಿಂದಾಗಿ ದೇಶದ ಹೆಸರನ್ನೇ ಬದಲಾಯಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.

ಈ ಹಿನ್ನೆಲೆಯಲ್ಲಿ ‘ಒಂದು ದೇಶ ಒಂದೇ ಚುನಾವಣೆ’ ಪದ್ಧತಿಯನ್ನು ದೇಶಾದ್ಯಂತ ತರಲು ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಇದಕ್ಕೆ ದೇಶಾದ್ಯಂತ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈ ಕಾರಣದಿಂದಾಗಿ ಸಂಸತ್ ಚುನಾವಣೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.

ಇಂತಹ ಪರಿಸ್ಥಿತಿಯಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ. ಸೆಪ್ಟೆಂಬರ್ 18 ರಂದು ಪ್ರಾರಂಭವಾಗಲಿರುವ ಅಧಿವೇಶನ ಸೆಪ್ಟೆಂಬರ್ 22 ರವರೆಗೆ ಮುಂದುವರೆಯಲಿದೆ. ಈ ವಿಶೇಷ ಅಧಿವೇಶನದಲ್ಲಿ ಹಲವು ಮಹತ್ವದ ವಿಷಯಗಳು ಚರ್ಚೆಯಾಗುವ ನಿರೀಕ್ಷೆಯಿದ್ದರೂ, ಈ ಸಭೆ ಯಾವ ಕಟ್ಟಡದಲ್ಲಿ ನಡೆಯಲಿದೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ವರದಿಗಳ ಪ್ರಕಾರ, ಮೊದಲ ದಿನದ ಸಭೆಯು ಹಳೆಯ ಕಟ್ಟಡದಲ್ಲಿ ಮತ್ತು ಉಳಿದ ಸಭೆಯು ಹೊಸ ಸಂಸತ್ ಭವನದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಹಿನ್ನಲೆಯಲ್ಲಿ ಸಂಸತ್ತಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಮಲದ ಹೂವುಗಳಿಂದ ವಿನ್ಯಾಸಗೊಳಿಸಿದ ಹೊಸ ಸಮವಸ್ತ್ರಗಳನ್ನು ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಮುಂದಿನ ವಾರ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ. ಸೆಪ್ಟೆಂಬರ್ 19 ರಿಂದ ಹೊಸ ಸಂಸತ್ ಭವನದಲ್ಲಿ ಅಧಿವೇಶನ ನಡೆಯಲಿದೆ ಎಂದು ಹೇಳಲಾಗಿದೆ. ಇದೇ ವೇಳೆ ಸಂಸತ್ತಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಹೊಸ ಸಮವಸ್ತ್ರವನ್ನು ಪರಿಚಯಿಸಲಾಗಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.

ಪ್ರಸ್ತುತ ಸಂಸದೀಯ ಸಿಬ್ಬಂದಿ ಧರಿಸುವ ಸಫಾರಿ ಸೂಟ್‌ಗಳ ಬದಲಿಗೆ ಪುರುಷ ಸಿಬ್ಬಂದಿಗೆ ಕುರ್ತಾ ಮತ್ತು ಪೈಜಾಮ ಹಾಗೂ ಮಹಿಳಾ ಸಿಬ್ಬಂದಿಗೆ ಸೀರೆಯನ್ನು ಪರಿಚಯಿಸಲಾಗಿದೆ. ಇದನ್ನು NIFT, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್ ವಿನ್ಯಾಸಗೊಳಿಸಿದೆ. ಹೊಸ ಸಮವಸ್ತ್ರಗಳು ಕಮಲದ ಹೂವುಗಳಿಂದ ವಿನ್ಯಾಸಗೊಳಿಸಲಾಗಿದೆ. ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿರುವ ಈ ಸಂದರ್ಭದಲ್ಲಿ ಹೊಸ ಸಮವಸ್ತ್ರದ ವಿಚಾರ ವಿವಾದಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ರಾಜಕೀಯ

 ಡಿ.ಸಿ.ಪ್ರಕಾಶ್ ಸಂಪಾದಕರು

ಲೋಕಸಭೆ ಚುನಾವಣೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಯನ್ನು ಏಕಕಾಲಕ್ಕೆ ನಡೆಸಲು ಕಾನೂನು ಕರಡು ತರಬಹುದು ಎಂದು ಹೇಳಲಾಗುತ್ತಿದೆ.

ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಮೈತ್ರಿಕೂಟದ ಮೂರನೇ ಸಭೆ ನಿನ್ನೆ ಮುಂಬೈನಲ್ಲಿ (ಆ. 31) ಆರಂಭವಾಗುತ್ತಿದ್ದಂತೆಯೇ ಸಂಸತ್ತಿನ ವಿಶೇಷ ಅಧಿವೇಶನ ಕುರಿತಾದ ಘೋಷಣೆಯನ್ನು ದಿಢೀರ್ ಎಂದು ಹೊರಡಿಸಲಾಗಿದೆ.

ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ ಎಂದು ಘೋಷಿಸಲಾಗಿದೆ. ‘ಇದು 17ನೇ ಲೋಕಸಭೆಯ 13ನೇ ಅಧಿವೇಶನವಾಗಿದ್ದು, ರಾಜ್ಯಸಭೆಯ 261ನೇ ಅಧಿವೇಶನವೂ ಆಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ: ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿ!

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯ ಒಂಬತ್ತೂವರೆ ವರ್ಷಗಳ ಆಡಳಿತದಲ್ಲಿ ಜಿಎಸ್‌ಟಿಯನ್ನು ಪರಿಚಯಿಸಿದಾಗ, ಜೂನ್ 10, 2017 ರಂದು ಮೊದಲ ಬಾರಿಗೆ ಸಂಸತ್ತಿನ ಉಭಯ ಸದನಗಳ ಜಂಟಿ ಸಭೆ ನಡೆಸಲಾಯಿತು. ಆ ಬಳಿಕ ಇದೀಗ ಎರಡನೇ ಬಾರಿಗೆ ಉಭಯ ಸದನಗಳ ಜಂಟಿ ಸಭೆ ನಡೆಯಲಿದೆ. ವರದಿಗಳ ಪ್ರಕಾರ ಸಂಸತ್ತಿನ ನೂತನ ಕಟ್ಟಡದಲ್ಲಿ ಈ ಸಭೆ ನಡೆಯಲಿದೆ.

ಆದರೆ, ಸಂಸದೀಯ ವ್ಯವಹಾರಗಳ ಸಚಿವಾಲಯ ಅಥವಾ ಉಭಯ ಸದನಗಳ ಕಚೇರಿಗಳು ಈ ಅಧಿವೇಶನದ ಕಾರ್ಯಸೂಚಿಯ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಸೆಪ್ಟೆಂಬರ್ 18 ರಂದು ಅಧಿವೇಶನ ಪ್ರಾರಂಭವಾಗುತ್ತದೆ. ಉತ್ತರ ರಾಜ್ಯಗಳಲ್ಲಿ ಗಣೇಶ ಚತುರ್ಥಿಯನ್ನು ಆ ದಿನವೇ ಆಚರಿಸಲಾಗುತ್ತದೆ. ಹೀಗಾಗಿ ಈ ಸಭೆಯ ‘ಅಜೆಂಡಾ’ ಕುರಿತು ಊಹಾಪೋಹಗಳ ಆಧಾರದಲ್ಲಿ ರಾಜಕೀಯ ವಲಯದಲ್ಲಿ ನಾನಾ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ: ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿ ಕೂಟವು 14 ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸಿದೆ!

ಅದಾನಿ ವಿಚಾರ ಸೇರಿದಂತೆ ಬಿಜೆಪಿ ವಿರುದ್ಧ ಎದ್ದಿರುವ ಕೆಲವು ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಹೇಳುತ್ತಿದ್ದಾರೆ. ಆದರೆ, ಬಹಿರಂಗವಾಗಿ ಪ್ರಸ್ತಾಪಿಸದ ಕೆಲವು ಪ್ರಮುಖ ಅಜೆಂಡಾಗಳನ್ನು ಜಾರಿಗೆ ತರಲು ಬಿಜೆಪಿ ಸರ್ಕಾರ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಿದೆ ಎಂದು ದೆಹಲಿಯ ರಾಜಕೀಯ ಮೂಲಗಳು ಹೇಳುತ್ತವೆ.

ಪ್ರಸ್ತುತ ಲೋಕಸಭೆಯು ಮೇ 2024 ರಲ್ಲಿ ಕೊನೆಗೊಳ್ಳಲಿರುವುದರಿಂದ, ಸಂಸತ್ತಿನ ಸಾರ್ವತ್ರಿಕ ಚುನಾವಣೆಯನ್ನು ಮೊದಲೇ ನಡೆಸಲು ಬಿಜೆಪಿ ಯೋಜಿಸುತ್ತಿದೆ ಎಂಬ ವರದಿಗಳಿವೆ. ಅಲ್ಲದೇ ಬಹುದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆಯನ್ನು ಬಿಜೆಪಿ ಜಾರಿಗೆ ತರಲು ಹೊರಟಿದೆ ಎಂಬ ಸುದ್ದಿಯೂ ಇದೆ. ಅಂದರೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಈ ವಿಶೇಷ ಅಧಿವೇಶನದಲ್ಲಿ ವಿಧೇಯಕ ತರಲು ಹೊರಟಿದ್ದಾರೆ ಎಂದು ವರದಿಯಾಗಿದೆ.

ದೇಶ

ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಮಣಿಪುರ ವಿಚಾರವಾಗಿ ಪ್ರಧಾನಿ ಮೋದಿ ವಿವರಣೆ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಆದರೆ ಉಭಯ ಸದನಗಳಲ್ಲಿ ಅನುಮತಿ ನಿರಾಕರಣೆ ಆಗುತ್ತಿರುವುದರಿಂದ ನಿರಂತರ ಉದ್ವಿಗ್ನತೆ ಉಂಟಾಗಿದೆ. ಮತ್ತು ಸದನಗಳನ್ನು ಸಹ ಮುಂದೂಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ಈ ನಿರ್ಣಯದ ಮೇಲಿನ ಚರ್ಚೆ ಇಂದು (ಆ.9) 2ನೇ ದಿನವೂ ನಡೆಯಿತು.

ಇಂದಿನ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಡಿಎಂಕೆ ಪಕ್ಷದ ಸಂಸದೆ ಕನಿಮೊಳಿ ಮಾತನಾಡಿದರು. ”ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ರಾಜ್ಯವನ್ನು ಉಳಿಸಬೇಕಾದ ಪರಿಸ್ಥಿತಿ ಇದೆ. ‘ಡಬಲ್ ಇಂಜಿನ್ ಸರ್ಕಾರ’ ಎಂದು ಬಿಂಬಿಸಿಕೊಳ್ಳುವ ಬಿಜೆಪಿ, ಮಣಿಪುರದ ವಿಚಾರದಲ್ಲಿ ಏಕೆ ವಿವರಣೆ ನೀಡುತ್ತಿಲ್ಲ? ಮಣಿಪುರದ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಮೌನವಾಗಿರುವುದೇಕೆ?

ಮಣಿಪುರದಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಫಲವಾಗಿವೆ. ಮಣಿಪುರದಲ್ಲಿ ಮೂರು ತಿಂಗಳಿನಿಂದ ಗಲಭೆ ತಡೆಯುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ಮಣಿಪುರದ ಶಿಬಿರಗಳಲ್ಲಿ ತಂಗಿರುವ ಜನರ ಸ್ಥಿತಿ ಗಂಭೀರವಾಗಿದೆ. ‘ಮಣಿಪುರ ಕ್ಯಾಂಪ್‌ನಲ್ಲಿ ತಂಗಿರುವ ಜನರನ್ನು ನೋಡಲು ಮಣಿಪುರದ ಮುಖ್ಯಮಂತ್ರಿ ಮತ್ತು ಪ್ರಧಾನಿ ಏಕೆ ಬಂದಿಲ್ಲ’ ಎಂದು ಹುಡುಗಿಯೊಬ್ಬರು ನನ್ನನ್ನು ಕೇಳಿದರು.

ಮಣಿಪುರದಲ್ಲಿ ಸಂತ್ರಸ್ತರಿಗೆ ಪೊಲೀಸರು ಯಾವ ಸಹಾಯವನ್ನೂ ಮಾಡಲಿಲ್ಲ. 161 ಸಶಸ್ತ್ರ ಪಡೆಗಳು ಅಲ್ಲಿದ್ದರೂ ಹಿಂಸಾಚಾರವನ್ನು ತಡೆಯಲಿಲ್ಲ. ಮೃತ ದೇಹಗಳು ಕೂಡ ಸಂಬಂಧಿಕರಿಗೆ ತಲುಪಿಲ್ಲ. ಬಿಜೆಪಿ ಆಡಳಿತದಲ್ಲಿ ಬೆಲೆ ಏರಿಕೆ ಮಾತ್ರವಲ್ಲ, ಮಹಿಳೆಯರ ಮೇಲಿನ ಅಪರಾಧಗಳೂ ಹೆಚ್ಚಿವೆ. ಮಣಿಪುರದಲ್ಲಿ ಸ್ಥಾಪಿಸಲಾಗಿರುವ ನೂರಾರು ಪರಿಹಾರ ಶಿಬಿರಗಳಲ್ಲಿ ಸೂಕ್ತ ಸೌಲಭ್ಯ, ಆಹಾರ, ಕುಡಿಯುವ ನೀರೂ ಇಲ್ಲ. ಮಣಿಪುರದಲ್ಲಿನ ಪರಿಹಾರ ಶಿಬಿರಗಳು ಅನೈರ್ಮಲ್ಯ ಮತ್ತು ವಾಸಕ್ಕೆ ಯೋಗ್ಯವಲ್ಲ.

ದೇಶದಲ್ಲಿ ಸಾಕಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಖಾಲಿ ಇರುವ ಹುದ್ದೆಗಳ ಭರ್ತಿಗೂ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ. ಅದರಲ್ಲೂ ರೈಲ್ವೆ ವಲಯದಲ್ಲಿ ಹುದ್ದೆಗಳು ಭರ್ತಿಯಾಗಿಲ್ಲ. ಸಂಸತ್ತಿನಲ್ಲಿ ರಾಜದಂಡವನ್ನು ಅಳವಡಿಸಿ, ‘ಇದು ಚೋಳರಾಜನಿಗೆ ಸೇರಿದ್ದು’ ಎಂದು ಹೇಳಿದ್ದೀರಿ. ಕನ್ನಗಿಯ ಕೋಪಕ್ಕೆ ಪಾಂಡಿಯನ ರಾಜದಂಡ ಮುರಿದ ಕಥೆ ಏನು ಗೊತ್ತಾ? ನಮ್ಮ ಮೇಲೆ ಹಿಂದಿ ಹೇರುವುದನ್ನು ನಿಲ್ಲಿಸಿಕೊಂಡು, ಸಿಲಪತಿಕಾರಂ ಓದಿ; ಅದರಲ್ಲಿ ನಿಮಗೆ ಅನೇಕ ಪಾಠಗಳಿವೆ.

ಪ್ರಧಾನಮಂತ್ರಿಯವರು ಮಣಿಪುರದ ಜನರನ್ನು ಖುದ್ದಾಗಿ ಭೇಟಿ ಮಾಡಿ ನ್ಯಾಯ ಸ್ಥಾಪಿಸುವುದು ಅಗತ್ಯವಾಗಿದೆ. ಮಣಿಪುರ ಹಿಂಸಾಚಾರದಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣದ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ದ್ರೌಪದಿಯಂತೆಯೇ ಮಣಿಪುರದ ಮಹಿಳೆಯರನ್ನು ವಿವಸ್ತ್ರಗೊಳಿಸಿದಾಗ ಅವರ ಇಷ್ಟ ದೇವರನ್ನು ಪ್ರಾರ್ಥಿಸಿರುತ್ತಾರೆ. ಆದರೆ ಅವರನ್ನು ರಕ್ಷಿಸಲು ದೇವರಾಗಲಿ, ಸರ್ಕಾರವಾಗಲಿ ಬರಲಿಲ್ಲ.

ಮಹಾಭಾರತವನ್ನು ಚೆನ್ನಾಗಿ ಓದಿದವರಿಗೆ ಗೊತ್ತು. ಅಪರಾಧಿಗಳಿಗೆ ಮಾತ್ರವಲ್ಲ, ಅದನ್ನು ಮೌನವಾಗಿದ್ದು ನೋಡಿ ಆನಂದಿಸಿದವರಿಗೂ ಶಿಕ್ಷೆಯಾಯಿತು. ಹತ್ರಾಸ್, ಕಥುವಾ, ಉನ್ನಾವೋ, ಬಿಲ್ಕಿಸ್ ಬಾನು, ಕುಸ್ತಿಪಟುಗಳ ಪ್ರತಿಭಟನೆಯ ಸಂದರ್ಭದಲ್ಲಿ ಮೌನವಹಿಸಿದವರನ್ನು ಭಾರತ ಮಾತೆಯರು ಶಿಕ್ಷಿಸುತ್ತಾರೆ. ಆಡಳಿತಾರೂಢ ಸಮ್ಮಿಶ್ರ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಕನಿಮೋಳಿ ಭಾವುಕ ಭಾಷಣ ಮಾಡಿದ್ದಾರೆ.

ದೇಶ ರಾಜಕೀಯ

ಹೈದರಾಬಾದ್: ತಮ್ಮ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ಸ್ವಂತ ಮನೆ ಕಟ್ಟಿಕೊಂಡು ಮಗನಿಗೆ ಮದುವೆಯನ್ನೂ ಮಾಡಿದ್ದೇನೆ ಎಂದು ತೆಲಂಗಾಣ ಬಿಜೆಪಿ ಸಂಸದ ಸೋಯಂ ಬಾಪುರಾವ್ ಹೇಳಿರುವ ಮಾತು ವಿವಾದಕ್ಕೆ ಕಾರಣವಾಗಿದೆ.

ಪ್ರತಿಯೊಬ್ಬ ಸಂಸದರಿಗೂ ಕ್ಷೇತ್ರ ಅಭಿವೃದ್ಧಿ ನಿಧಿ ಯೋಜನೆಯಡಿ (MPLADS) ಮಂಜೂರು ಮಾಡುವ ಹಣವನ್ನು, ಅವರ ಕ್ಷೇತ್ರಗಳಲ್ಲಿ ವರ್ಷಕ್ಕೆ ರೂ.5 ಕೋಟಿ ವರೆಗೆ ಖರ್ಚು ಮಾಡಿ, ಅಭಿವೃದ್ಧಿ ಮತ್ತು ಸುಧಾರಣೆ ಕಾರ್ಯಗಳನ್ನು ಕೈಗೊಳ್ಳಬೇಕು. ಇದನ್ನು ಕೇಂದ್ರ ಅಂಕಿಅಂಶ ಮತ್ತು ಯೋಜನೆ ಅನುಷ್ಠಾನ ಇಲಾಖೆ ಮೇಲ್ವಿಚಾರಣೆ ಮಾಡುತ್ತದೆ.

https://twitter.com/KP_Aashish/status/1670710328638988288?s=20

ಈ ಹಿನ್ನಲೆಯಲ್ಲಿ, ತೆಲಂಗಾಣ ರಾಜ್ಯ ಆದಿಲಾಬಾದ್ ಲೋಕಸಭಾ ಕ್ಷೇತ್ರ ಬಿಜೆಪಿ ಸಂಸದ ಸೋಯಂ ಬಾಪುರಾವ್, ಇತ್ತೀಚೆಗೆ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗಿದೆ. ಅದರಲ್ಲಿ “ಇತ್ತೀಚೆಗೆ ನನ್ನ ಕ್ಷೇತ್ರದ ಅಭಿವೃದ್ಧಿಗೆ 2.5 ಕೋಟಿ ಹಣವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು, ಈ ಹಣದಲ್ಲಿ ಸ್ವಂತವಾಗಿ ಮನೆ ಕಟ್ಟಿದ್ದೇನೆ; ಮಗನ ಮದುವೆಗೆ ಖರ್ಚು ಮಾಡಿದ್ದೇನೆ”  ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.