ಜನಗಣತಿಯಲ್ಲಿ ಸಂಸ್ಕೃತವನ್ನು ಉಲ್ಲೇಖಿಸಿ! ಲೇಖಕಿ ಮೃದುಲ್ ಕೀರ್ತಿ » Dynamic Leader
October 21, 2024
ದೇಶ

ಜನಗಣತಿಯಲ್ಲಿ ಸಂಸ್ಕೃತವನ್ನು ಉಲ್ಲೇಖಿಸಿ! ಲೇಖಕಿ ಮೃದುಲ್ ಕೀರ್ತಿ

ಭಾರತದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಸಲಾಗುತ್ತದೆ. ಕೊನೆಯ ಜನಗಣತಿ 2011ರಲ್ಲಿ ಆಗಿತ್ತು. ಇದರಲ್ಲಿ ಹೆಸರು, ಲಿಂಗ, ಧರ್ಮ, ಮಾತೃಭಾಷೆ ಹಾಗೂ ತಿಳಿದಿರುವ ಭಾಷೆಗಳು ಸೇರಿದಂತೆ ಹಲವು ಅಂಶಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಈಗ 2023ರ ಜನಗಣತಿ ನಡೆಯಲಿದೆ. ಈ ಜನಗಣತಿಯ ಬಗ್ಗೆ ಸಂಸ್ಕೃತ ವಿದ್ವಾಂಸೆ, 17 ಪುಸ್ತಕಗಳ ಲೇಖಕಿಯೂ ಆದ ಮೃದುಲ್ ಕೀರ್ತಿ ಕೆಲವು ವಿಚಾರಗಳನ್ನು ಮುಂದಿಟ್ಟಿದ್ದಾರೆ.

“2023ರ ಜನಗಣತಿಯ ತಯಾರಿ ಅಂತಿಮ ಹಂತದಲ್ಲಿದೆ. ಅಧಿಕಾರಿಗಳು ಶೀಘ್ರದಲ್ಲೇ ನಿಮ್ಮ ಮನೆಗೆ ಬಂದು ಮಾಹಿತಿಯನ್ನು ಪಡೆಯಲಿದ್ದಾರೆ. ಅದರಲ್ಲಿ, ನಿಮ್ಮ ಮಾತೃ ಭಾಷೆಯನ್ನು ಕುರಿತು ಹಾಗೂ ನಿಮಗೆ ತಿಳಿದಿರುವ ಬೇರೆ ಭಾಷೆಗಳನ್ನು ಕುರಿತು ಪ್ರಶ್ನೆ ಕೇಳುತ್ತಾರೆ. ಆಗ ನಿಮ್ಮ ಮಾತೃ ಭಾಷೆಯನ್ನು ಹೊರತುಪಡಿಸಿ, ನೀವು ಮಾತನಾಡುವ ಅಥವಾ ತಿಳಿದಿರುವ ಇತರೆ ಭಾಷೆಯೆಂದು ಸಂಸ್ಕೃತವನ್ನು ಉಲ್ಲೇಖಿಸಿ. ಏಕೆಂದರೆ, ಸಂಸ್ಕೃತವನ್ನು ನೀವು ಪೂರ್ತಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರೂ ಪ್ರತಿ ದಿನವೂ ಅದನ್ನು ಮಾತನಾಡುತ್ತಿದ್ದೀರಿ ಎಂಬುದು ಸತ್ಯ. ಹೌದು, ಹಾಡುವುದರ ಮೂಲಕ, ಮಂತ್ರಗಳನ್ನು ಉಚ್ಚರಿಸುವ ಮೂಲಕ, ಪ್ರಾರ್ಥಿಸುವುದರ ಮೂಲಕ ನಾವು ಪ್ರತಿದಿನ ಸಂಸ್ಕೃತ ಭಾಷೆಯನ್ನು ಬಳಸುತ್ತಾ ಇರುತ್ತೇವೆ. ಅನೇಕರು ತಮ್ಮ ಶಾಲೆಗಳಲ್ಲಿ ಈ ಭಾಷೆಯನ್ನು ಕಲಿಯುತ್ತಿದ್ದಾರೆ.

ಹೀಗಿರುವಾಗ ಸಂಸ್ಕೃತ ಭಾಷೆಯ ಬಗ್ಗೆ ಹೇಳುವುದು ಮುಖ್ಯವಾಗಿದೆ. ಜನಗಣತಿಯಲ್ಲಿ ಇಡೀ ದೇಶದಲ್ಲಿ ಕೇವಲ 2000 ಜನರು ಮಾತ್ರ ಸಂಸ್ಕೃತ ಮಾತನಾಡುವುದಾಗಿ ಹೇಳಿದ್ದಾರೆ. ಅದೇ ಸಮಯದಲ್ಲಿ, ಅರೇಬಿಕ್ ಭಾಷೆಯನ್ನು 50 ಸಾವಿರ ಜನರು, ಪರ್ಷಿಯನ್ ಭಾಷೆಯನ್ನು ಸುಮಾರು 12 ಸಾವಿರ ಜನರು ಮಾತನಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಈ ಭಾಷೆಗಳು ತಮ್ಮ ಅಭಿವೃದ್ಧಿಗೆ ಹಣವನ್ನು ಪಡೆಯುತ್ತವೆ. ಆದರೆ ನಮ್ಮದೇ ಸಂಸ್ಕೃತಿಯ ತಳಹದಿಯಾದ ಸಂಸ್ಕೃತ ನಿಧಾನವಾಗಿ ಮರೆಯಾಗುತ್ತಿದೆ. ಈ ಸಂಖ್ಯೆ ಇನ್ನೂ ಕಡಿಮೆಯಾದರೆ, ಸಂಸ್ಕೃತ ಅಳಿವಿನಂಚಿನಲ್ಲಿದೆ ಎಂದು ಘೋಷಿಸಲಾಗುವುದು. ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸಂಸ್ಕೃತ ಪದವನ್ನು ಉಲ್ಲೇಖಿಸಿದರೆ ಸಾಕು” ಎಂದು ಹೇಳಿದ್ದಾರೆ.

Related Posts