ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕಿರಣ್ ರಿಜಿಜು Archives » Dynamic Leader
October 19, 2024
Home Posts tagged ಕಿರಣ್ ರಿಜಿಜು
ರಾಜಕೀಯ

ಕನ್ನಡಕ್ಕೆ: ಡಿ.ಸಿ.ಪ್ರಕಾಶ್
ಸಂಪಾದಕರು, ಡೈನಾಮಿಕ್ ಲೀಡರ್

ಕಳೆದ 4 ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆದ 50 ಸಾರ್ವಜನಿಕ ಸಭೆಗಳಲ್ಲಿ ದ್ವೇಷದ ಮಾತುಗಳನ್ನು ಆಡಿರುವ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ದೆಹಲಿ, ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲೂ ದ್ವೇಷದ ಭಾಷಣದ ಬಗ್ಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಪ್ರಕರಣಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಹಾಗೂ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಇದರ ಕುರಿತು ಮಾತನಾಡಿದ ನ್ಯಾಯಾಧೀಶರು, “ಪ್ರತಿಯೊಬ್ಬರೂ ದ್ವೇಷದ ಮಾತುಗಳನ್ನು ಆಡುವುದನ್ನು ನಿಯಂತ್ರಿಸಿಕೊಳ್ಳಬೇಕು. ರಾಜಕಾರಣಿಗಳು ರಾಜಕೀಯವನ್ನು ಧರ್ಮದೊಂದಿಗೆ ಬೆರೆಸಿದಾಗ ದೊಡ್ಡ ಸಮಸ್ಯೆ ಎದುರಾಗುತ್ತದೆ. ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕಿಸಿದಾಗ ಇದು ಕೊನೆಗೊಳ್ಳುತ್ತದೆ. ರಾಜಕಾರಣಿಗಳು ಧರ್ಮವನ್ನು ಬಳಸುವುದನ್ನು ನಿಲ್ಲಿಸಿದರೆ ಇದೆಲ್ಲವೂ ನಿಲ್ಲುತ್ತದೆ. ರಾಜಕೀಯವನ್ನು ಧರ್ಮದೊಂದಿಗೆ ಬೆರೆಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ನಾವು ಇತ್ತೀಚಿನ ತೀರ್ಪಿನಲ್ಲಿ ಹೇಳಿದ್ದೇವೆ. ಟಿವಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿಯೂ ದ್ವೇಷದ ಮಾತುಗಳು ಹೆಚ್ಚಾಗಿವೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನೋಡಬೇಕು? ಮಾತಿನಲ್ಲಿ ಸ್ವಲ್ಪ ಸಂಯಮ ಇರಬೇಕಲ್ಲವೇ? ಇಲ್ಲದಿದ್ದರೆ ನಮಗೆ ಬೇಕಾದ ಭಾರತವನ್ನು ಕಟ್ಟಲು ಸಾಧ್ಯವಿಲ್ಲ. ಈ ಮಾತುಗಳಿಂದ ನಮಗೆ ಯಾವ ರೀತಿಯ ಆನಂದ ಸಿಗುತ್ತದೆ” ಎಂದು ನ್ಯಾಯಾಧೀಶರು ತಮ್ಮ ಕಳವಳವನ್ನು ಕಟುವಾದ ಮಾತುಗಳಲ್ಲಿ ಎಚ್ಚರಿಕೆಯ ಭಾವದಿಂದ ವ್ಯಕ್ತಪಡಿಸಿದ್ದಾರೆ.

“ಇತರರನ್ನು ಅವಹೇಳನ ಮಾಡುವ ಉದ್ದೇಶದಿಂದ ‘ಪಾಕಿಸ್ತಾನಕ್ಕೆ ಹೋಗು’ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಇತರ ಸಮುದಾಯಗಳೂ ಈ ದೇಶವನ್ನು ಆರಿಸಿಕೊಂಡಿವೆ. ಅವರೂ ನಿಮ್ಮ ಸಹೋದರ ಸಹೋದರಿಯರಂತೆ. ಅವರನ್ನು ಅವಮಾನಿಸುವ ಮತ್ತು ದೇಶದ ಕಾನೂನನ್ನು ಉಲ್ಲಂಘಿಸುವ ಹಕ್ಕು ನಿಮಗೆ ಇದೆಯೇ? ನೆಲದ ಕಾನೂನನ್ನು ಮುರಿದರೆ ಅದು ಇಟ್ಟಿಗೆಯಂತೆ ನಿಮ್ಮ ತಲೆಯ ಮೇಲೆ ಬೀಳುತ್ತದೆ. ನಿಜವಾದ ಅಭಿವೃದ್ಧಿ ಎಂದರೆ ನಮ್ಮ ದೇಶವನ್ನು ಸೂಪರ್ ಪವರ್ ಮಾಡುವುದು. ಅದಕ್ಕಾಗಿ ನಾವು ಕಾನೂನಿನ ನಿಯಮವನ್ನು ಗೌರವಿಸಬೇಕು. ಆಗ ಮಾತ್ರ ನಾವು ನಮ್ಮ ದೇಶವನ್ನು ಬದುಕಲು ಉತ್ತಮ ಸ್ಥಳವನ್ನಾಗಿ ಮಾಡಬಹುದು” ಎಂದು ನ್ಯಾಯಾಧೀಶರು ಬುದ್ಧಿಮಾತು ಹೇಳಿದ್ದಾರೆ.

ಮತೀಯ ರಾಜಕಾರಣ ಮಾಡುವವರೇ ಹೆಚ್ಚು ದ್ವೇಷದ ಮಾತುಗಳನ್ನು ಹಾಡುತ್ತರೆ. ಈ ಬಗ್ಗೆ ಸ್ವತಃ ನ್ಯಾಯಮೂರ್ತಿಗಳೇ ಸ್ಪಷ್ಟನೆ ನೀಡಿದ್ದಾರೆ. ಅಸ್ಸಾಂ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ ಹಿಂಸಾಚಾರ ನಡೆಯುತ್ತಿದೆ. ಉತ್ತರ ಪ್ರದೇಶವನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗಿಲ್ಲ. ಪ್ರಜಾಸತ್ತಾತ್ಮಕ ಶಕ್ತಿಗಳು ತಮ್ಮ ಖಂಡನೆ ಮತ್ತು ಎಚ್ಚರಿಕೆಯನ್ನು ವ್ಯಕ್ತಪಡಿಸುತ್ತಲೇ ಇರುತ್ತವೆ.

‘ದೇಶದ ಸಂವಿಧಾನವನ್ನು ಬಲಿಪೀಠದ ಮೇಲೆ ಇಟ್ಟಂತೆ ಆಗಿದೆ. ಬೆಳೆಯುತ್ತಿರುವ ದ್ವೇಷ ರಾಜಕಾರಣವನ್ನು ಕೊನೆಗಾಣಿಸಿ’ ಎಂದು ಕಳೆದ ವರ್ಷ ಮೇ ತಿಂಗಳಲ್ಲಿ 108 ಮಂದಿ ಪ್ರಧಾನಿ ಮೋದಿಗೆ ಪತ್ರ ಬರೆದು ಸಹಿ ಹಾಕಿದ್ದರು. ಮಾಜಿ ನ್ಯಾಯಾಧೀಶರು, ಮಾಜಿ ಲೆಫ್ಟಿನೆಂಟ್ ಗವರ್ನರ್‌ಗಳು, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರು, ಮಾಜಿ ವಿದೇಶಾಂಗ ಕಾರ್ಯದರ್ಶಿಗಳು ಈ ಪತ್ರಕ್ಕೆ ಸಹಿ ಹಾಕಿದ್ದರು. ಹಾಗಾಗಿ ಇದು ಅನಾಮಧೇಯ ಪತ್ರವಲ್ಲ. ಅದನ್ನೇ ಈಗ ನ್ಯಾಯಾಲಯ ಹೇಳುತ್ತಿದೆ.

ಸುಪ್ರೀಂ ಕೋರ್ಟ್ ಈ ರೀತಿ ಹೇಳುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನೀಡಿದ ತೀರ್ಪಿನಲ್ಲಿ, ‘ದ್ವೇಷದ ಭಾಷಣಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ದೂರುಗಳಿಗಾಗಿ ಕಾಯಬಾರದು’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಆದೇಶಿಸಿದ್ದರು. ‘ಮುಸ್ಲಿಮರನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು’ ಎಂದು ಬಿಜೆಪಿ ಸಂಸದ ಮಾಡಿದ ದ್ವೇಶ ಭಾಷಣದ ವಿರುದ್ಧ ದಾಖಲಾದ ಪ್ರಕರಣವದು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ರಿಷಿಕೇಶ್ ರಾಯ್ ಪೀಠವು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿತ್ತು.

“ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಭಾರತದಲ್ಲಿ ಇಂತಹ ಭಾಷಣಗಳು ಅತ್ಯಂತ ಖಂಡನೀಯವಾದದ್ದು. ಮೂಲಭೂತ ಹಕ್ಕುಗಳು ಮತ್ತು ಕಾನೂನಿನ ನಿಯಮವನ್ನು ರಕ್ಷಿಸುವ ಹೊಣೆಗಾರಿಕೆ ನ್ಯಾಯಾಲಯಗಳಿವೆ. ದೇಶದ ಜಾತ್ಯತೀತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯವಾದ ಆದೇಶಗಳನ್ನು ಹೊರಡಿಸಲು ಮುಂದಾಗಬೇಕು’’ ಎಂದು ಆ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳಿದ್ದರು. ಆದ್ದರಿಂದ ಪೊಲೀಸ್ ಇಲಾಖೆ ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಕ್ರಮ ತೆಗೆದುಕೊಂಡರೆ ಸಮಸ್ಯೆ ಗಂಭೀರವಾಗುವುದನ್ನು ತಡೆಯಬಹುದು.

ಮತೀಯ ರಾಜಕಾರಣ ಮಾಡುವವರೇ ಹೆಚ್ಚು ದ್ವೇಷದ ಭಾಷಣಗಳನ್ನು ಮಾಡುತ್ತಾರೆ. ಇದಕ್ಕೆ ಈಗ ಸ್ವತಃ ನ್ಯಾಯಮೂರ್ತಿಗಳೇ ಸ್ಪಷ್ಟನೆಯನ್ನು ನೀಡಿದ್ದಾರೆ. ‘ರಾಜಕೀಯ ಮತ್ತು ಧರ್ಮವನ್ನು ಬೇರ್ಪಡಿಸಿದರೆ; ರಾಜಕಾರಣಿಗಳು ರಾಜಕೀಯದಲ್ಲಿ ಧರ್ಮದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ; ದ್ವೇಷದ ಮಾತುಗಳು ಕಡಿಮೆಯಾಗುತ್ತವೆ’ ಎಂಬುದೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತೋರಿದ ಹಾದಿಯಾಗಿದೆ.

ಆದರೆ ಬಿಜೆಪಿಗೆ ಇದರ ಅರಿವೇ ಇಲ್ಲ ಎಂಬುದನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಭಾಷಣವು ತೋರಿಸುತ್ತಿದೆ. ಇತ್ತೀಚೆಗೆ ‘ಇಂಡಿಯಾ ಟುಡೇ’ ಪತ್ರಿಕೆಯ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, “ಭಾರತ ವಿರೋಧಿ ಗುಂಪಿನ ಭಾಗವಾಗಿರುವ ನಿವೃತ್ತ ನ್ಯಾಯಮೂರ್ತಿಗಳು, ನ್ಯಾಯಾಂಗವನ್ನು ವಿರೋಧ ಪಕ್ಷವಾಗಿ ನರ್ತಿಸುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಹೇಳಿದ್ದರು. ಇದು ಭಾರತೀಯ ನ್ಯಾಯಾಂಗದ ಮೇಲೆ ಬಿಜೆಪಿಯ ದಾಳಿಯಾಗಿದೆ. ಇದು ನ್ಯಾಯಾಂಗವನ್ನು ಅಸಹ್ಯ ಮಾಡುವುದು ಮತ್ತು ಅದನ್ನು ತಮ್ಮ ಕೋಮು ರಾಜಕಾರಣಕ್ಕೆ ಎಳೆದು ತರುವುದಾಗಿದೆ.

ರಾಜಕೀಯಕ್ಕೆ ಧಾರ್ಮಿಕ ರಂಗು ಹೊಡೆದಂತೆ ನ್ಯಾಯಾಂಗಕ್ಕೂ ಹೊಡೆಯುವ ಪ್ರಯತ್ನ ಇದಾಗಿದೆ. ಬೆದರಿಕೆಯ ದ್ವೇಷ ಭಾಷಣಗಳು, ನ್ಯಾಯಾಲಯದ ಕಟ್ಟಡಗಳನ್ನೂ ಬಿಡಲಿಲ್ಲ.

ದೇಶ ವಿದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ಮುಂದಿನ ವರ್ಷ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಅದರ ಭಾಗವಾಗಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಸಂಸದ ರಾಹುಲ್‌ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯ ಹೆಸರಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಕೈಗೊಂಡು ದೇಶದ ಜನರನ್ನು ಭೇಟಿ ಮಾಡಿ ಅವರ ಅಹವಾಲು ಆಲಿಸಿದರು. ಈ ಏಕತಾ ಯಾತ್ರೆಗೆ ಜನ ಅದ್ಧೂರಿ ಸ್ವಾಗತ ನೀಡಿದ್ದರು.

ಏಕತಾ ಯಾತ್ರೆ ಮುಗಿಸಿ ಇಂಗ್ಲೆಂಡ್ ರಾಜಧಾನಿ ಲಂಡನ್ ಗೆ ತೆರಳಿದ ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಅಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ರಾಹುಲ್ ಭಾಗವಹಿಸುತ್ತಿದ್ದಾರೆ. ಲಂಡನ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷ ನಾಯಕರ ಮೇಲೆ ನಿಗಾ ಇಡಲಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಇದೇ ವೇಳೆ ಬೆಲೆಯೂ ಏರಿಕೆಯಾಗಿದೆ. ಭಾರತದ ಸಂಪೂರ್ಣ ಆರ್ಥಿಕತೆಯನ್ನು ಒಬ್ಬರು ಅಥವಾ ಇಬ್ಬರು ನಿಯಂತ್ರಿಸುತ್ತಿದ್ದಾರೆ. ಹಾಗಾಗಿ ಜನರು ತಮ್ಮ ಆರ್ಥಿಕತೆಯನ್ನು ಕಳೆದುಕೊಂಡಿದ್ದಾರೆ. ಅಮೆರಿಕ, ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳ ಉತ್ಪಾದನೆ ಕುಸಿದು ಚೀನಾಕ್ಕೆ ಸ್ಥಳಾಂತರವಾಗುತ್ತಿದೆ’ ಎಂದು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Kiran Rijiju

ಇದರಿಂದ ಕೆಂಡಾಮಂಡಲರಾದ ಬಿಜೆಪಿ ಸದಸ್ಯರು ‘ರಾಹುಲ್ ಗಾಂಧಿ ವಿಶ್ವಮಟ್ಟದಲ್ಲಿ ಭಾರತದ ಕೀರ್ತಿಯನ್ನು ಕೆಡಿಸಿದ್ದಾರೆ’ ಎಂದು ತೀವ್ರ ಟೀಕೆ ಮಾಡುತ್ತಿದ್ದಾರೆ. ಈ ಸಂಬಂಧ ಕೇಂದ್ರ ಕಾನೂನು ಸಚಿವ ರಿಜಿಜು ಮಾತನಾಡಿ, ರಾಹುಲ್ ಗಾಂಧಿಯ ಹೆಸರು ಹೇಳದೆ, ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಮಸಿ ಬಳಿಯುವ ಉದ್ದೇಶದಿಂದ ಕೆಲವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ ಈ ಪ್ರಯತ್ನ ಎಂದಿಗೂ ಯಶಸ್ವಿಯಾಗುವುದಿಲ್ಲ. ಅಮೆರಿಕ ಬಹುಶಃ ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವವಾಗಿದೆ. ಆದರೆ ಭಾರತವು ಪ್ರಜಾಪ್ರಭುತ್ವದ ತಾಯಿನಾಡು. ನ್ಯಾಯಾಲಯಗಳು ವಿರೋಧ ಪಕ್ಷಗಳಂತೆ ವರ್ತಿಸಬೇಕು ಎಂದು ಅವರು ಭಾವಿಸುತ್ತಿದ್ದಾರೆ. ಅವರು ಸರ್ಕಾರದ ವಿರುದ್ಧ ಮತ್ತು ಅವರ ಪರವಾಗಿ ತೀರ್ಪುಗಳನ್ನು ಬಯಸುತ್ತಿದ್ದಾರೆ. ಆದರೆ ಅದು ಆಗದ ಕಾರಣದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ’ ಎಂದು ತೀವ್ರವಾಗಿ ಟೀಕಿಸಿದ್ದರು.

Jayaram Ramesh

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯರಾಮ್ ರಮೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಇದಕ್ಕೆ ವಿವರಣೆ ನೀಡಿದ್ದಾರೆ: ‘ರಾಹುಲ್ ಗಾಂಧಿ ಅವರು ಚೀನಾದಂತಹ ರಾಜ್ಯ-ನಿಯಂತ್ರಿತ ಉದ್ಯಮ ವ್ಯವಸ್ಥೆಯ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ ಮತ್ತು ಭಾರತದಂತಹ ಪ್ರಜಾಪ್ರಭುತ್ವ ದೇಶಗಳಲ್ಲಿ ಉತ್ಪಾದನಾ ಸಾಧನಗಳನ್ನು ಗರಿಷ್ಠಗೊಳಿಸಲು ಒತ್ತು ನೀಡುವ ಅವಶ್ಯಕತೆಯಿದೆ. ಬಿಜೆಪಿಯವರಿಗೆ ಆ ಮಾತಿನ ಸೂಕ್ಷ್ಮತೆ ಅರ್ಥವಾಗುತ್ತಿಲ್ಲ’ ಎಂದರು. ಇದೇ ವೇಳೆ ರಾಹುಲ್ ಭಾಷಣಕ್ಕೆ ಹಲವರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

Anyone who tries to discredit India will never succeed: Kiren Rijiju
The comments come in wake of the ruling BJP attacking Congress leader Rahul Gandhi and accusing him of attempting to defame and denigrate India on foreign soil after the latter’s speech at Cambridge. Union minister of law Kiren Rijiju on Monday said that anyone who attempts to discredit India and its institution will never succeed.

ದೇಶ

‘ಆಡಳಿತಾರೂಢ ಬಿಜೆಪಿ ಪಕ್ಷವು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ತಮ್ಮ ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿದೆ’ ಎಂದು ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ನೇಮಕವನ್ನು ಕೊಲಿಜಿಯಂ ಮುಖಾಂತ ಮಾಡಲಾಗುತ್ತದೆ. ಕೊಲಿಜಿಯಂನಲ್ಲಿರುವ ನ್ಯಾಯಾಧೀಶರ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರವು ಹೊಸ ನ್ಯಾಯಾಧೀಶರನ್ನು ನೇಮಕ ಮಾಡುತ್ತದೆ. ಅದರಂತೆ ದೇಶದ ವಿವಿಧ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದರಿಂದಾಗಿ ಹಲವು ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ನೇಮಕವಾಗುತ್ತಿಲ್ಲ.

ಇದರಿಂದ ನ್ಯಾಯಾಂಗ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷ ಬೆಳಕಿಗೆ ಬಂದಿತು. ಹಾಗಾಗಿಯೇ ‘ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಕಡೆಗಣಿಸಿದ್ದರು’ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ಮುಖ್ಯನ್ಯಾಯಮೂರ್ತಿಗಳ ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸದೇ ಇರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂಬುದು ಗಮನಾರ್ಹ.

ಈ ಹಿನ್ನಲೆಯಲ್ಲಿ ಕಳೆದ ನವೆಂಬರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕೊಲಿಜಿಯಂ ವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸಿದ್ದರು. ‘ಕೊಲಿಜಿಯಂ ಪದ್ಧತಿಯು ಮೂಲಭೂತವಾಗಿ ದೋಷಪೂರಿತವಾಗಿದೆ’ ಎಂದು ಟೀಕಿಸಿದ ಅವರು, ‘ಕೊಲಿಜಿಯಂ ವ್ಯವಸ್ಥೆಯಲ್ಲಿ ನ್ಯಾಯಾಧೀಶರು ತಮಗೆ ತಿಳಿದಿರುವ ವಕೀಲರನ್ನು ನ್ಯಾಯಾಧೀಶರನ್ನಾಗಿ ನಾಮನಿರ್ದೇಶನ ಮಾಡುತ್ತಾರೆ ಮತ್ತು ಅದೇ ರೀತಿ ತಮಗೆ ತಿಳಿದಿರುವ ನ್ಯಾಯಾಧೀಶರನ್ನು ಬಡ್ತಿಗೆ ಶಿಫಾರಸು ಮಾಡುತ್ತಾರೆ’ ಎಂದು ಆರೋಪಿಸಿದ್ದಾರೆ.

ತರುವಾಯ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಕೂಡ ‘ನ್ಯಾಯಾಂಗವು ಸಂಸತ್ತನ್ನು ನಿಯಂತ್ರಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ‘ಆಡಳಿತಾರೂಢ ಬಿಜೆಪಿ ಪಕ್ಷವು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿದೆ’ ಎಂದು ಗಂಭೀರವಾದ ಆರೋಪವನ್ನು ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್, ‘ನ್ಯಾಯಾಂಗವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದೆ. ಮತ್ತೊಂದು ಕಡೆ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) ರಚನೆಯಾಗುವ ಪರಿಸ್ಥಿತಿಯನ್ನು ಸೃಷ್ಠಿಸುವ ಪ್ರಯತ್ನವನ್ನೂ ಮಾಡುತ್ತಿದೆ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಪ್ರಕರಣದಲ್ಲಿ ಕೇಶವಾನಂದ ಭಾರತಿ ಅವರ ತೀರ್ಪಿನಲ್ಲಿ ಹೇಳಲಾದ ಮೂಲಭೂತ ರಚನೆಯ ತತ್ವವು ಪ್ರಸ್ತುತ ಕಾಲದಲ್ಲಿ ಬಹಳ ಮುಖ್ಯವಾಗಿದೆ. ಉನ್ನತ ನ್ಯಾಯಾಂಗದ ನೇಮಕಾತಿಗಳ ಬಗ್ಗೆ ಸರ್ಕಾರವು ಅಂತಿಮವಾಗಿ ನಿರ್ಧರಿಸುವ ಅಧಿಕಾರವನ್ನು ಹೊಂದಿಲ್ಲ.

ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NJAC) ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ರೂಪದಲ್ಲಿ ಪರೀಕ್ಷೆಗೆ ಒಳಗಾಗುವ ಪರಿಸ್ಥಿತಿಯನ್ನು ಸೃಷ್ಟಿಸಲು ಅವರು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿದ್ದಾರೆ. ಕಾನೂನು ಸಚಿವರಿಗೆ ನ್ಯಾಯಾಲಯಗಳ ಕಾರ್ಯವೈಖರಿ ಬಗ್ಗೆ ಅರಿವಿಲ್ಲ. ನ್ಯಾಯಾಲಯದ ಕಾರ್ಯವಿಧಾನಗಳ ಬಗ್ಗೆ ಅವರಿಗೆ ತಿಳಿದಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ.

ಸರ್ಕಾರವು ಎಲ್ಲ ಸಂಸ್ಥೆಗಳನ್ನು (ಸಿಬಿಐ, ಇಡಿ, ಐಟಿ ಮುಂತಾದ) ತಮ್ಮ ವಶಕ್ಕೆ ತೆಗೆದುಕೊಂಡಿದೆ. ನ್ಯಾಯಾಂಗವು ಸ್ವಾತಂತ್ರ್ಯದ ಕೊನೆಯ ಭದ್ರಕೋಟೆಯಾಗಿದೆ. ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರ ನೇಮಕವನ್ನು ಮಾಡುವ ಅಂತಿಮ ನಿರ್ದಾರದ ಅಧಿಕಾರವನ್ನು ಸರ್ಕಾರಕ್ಕೆ ಬಿಟ್ಟರೆ, ಸರ್ಕಾರವು ಈ ಸಂಸ್ಥೆಗಳನ್ನು ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಸಿದ್ಧಾಂತದೊಂದಿಗೆ ಶಾಮೀಲಾಗಿರುವ ವ್ಯಕ್ತಿಗಳಿಂದ ತುಂಬಿಸುತ್ತಾರೆ.

ಅವರು ಸ್ವಾಧೀನಪಡಿಸಿಕೊಂಡಿರುವ ಈ ಸಂಸ್ಥೆಗಳು ಸರ್ಕಾರದ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿವೆ ಅಥವಾ ಅವರಿಗೆ ತಿಳಿದಿರುವ ಕಾರಣಗಳಿಗಾಗಿ ಅವರು ಸರ್ಕಾರವನ್ನು ಮೆಚ್ಚಿಸಲು ಬಯಸುತ್ತಾರೆ ಎಂದು ನಾವು ಭಾವಿಸುತ್ತೇವೆ.

ಮೂಲಭೂತ ರಚನಾತ್ಮಕ ಸಿದ್ಧಾಂತವು ಎಷ್ಟು ಮುಖ್ಯವಾದದ್ದು ಎಂಬುದನ್ನು, ನಮ್ಮ ಜೀವನಕ್ಕೆ ಮೂಲಭೂತವಾದ ವಾಕ್ ಸ್ವಾತಂತ್ರ್ಯ, ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯದಂತಹ ಸಂವಿಧಾನದ ಅಂಶಗಳನ್ನು ಪ್ರಸ್ತಾಪಿಸಿದ ಕೇಶವಾನಂದ ಭಾರತಿಯ ತೀರ್ಪು ಇಂತಹ ಸಮಯದಲ್ಲಿ ಎಷ್ಟು ಸರಿಯಾಗಿದೆ ಎಂಬುದು ನಮಗೆ ಅರಿವಾಗುತ್ತಿದೆ’ ಎಂದು ಅವರು ಹೇಳಿದರು.