ಭಾರತದ ಪ್ರಜಾಪ್ರಭುತ್ವ ಹೇಗೆ ಕುಸಿಯುತ್ತಿದೆ? ಪಿ.ಚಿದಂಬರಂ » Dynamic Leader
October 22, 2024
ದೇಶ ರಾಜಕೀಯ ವಿದೇಶ

ಭಾರತದ ಪ್ರಜಾಪ್ರಭುತ್ವ ಹೇಗೆ ಕುಸಿಯುತ್ತಿದೆ? ಪಿ.ಚಿದಂಬರಂ

ಭಾರತದ ಪ್ರಜಾಪ್ರಭುತ್ವವು ಭಾಗಶಃ ಸ್ವತಂತ್ರವಾಗಿದೆ ಎಂದು ಅಮೆರಿಕದ ಫ್ರೀಡಂ ಹೌಸ್ ಎಂಬ ಪ್ರಜಾಪ್ರಭುತ್ವ ಸಂಶೋಧನಾ ಸಂಸ್ಥೆ ಅಂದಾಜು ಮಾಡಿದೆ.  ಸ್ವೀಡನ್‌ನ ವಿ-ಡೆಮ್ ಇದನ್ನು ‘ಚುನಾಯಿತ ಸರ್ವಾಧಿಕಾರ’ ಎಂದು ವ್ಯಾಖ್ಯಾನಿಸಿದೆ. (ಈ ಸಂಸ್ಥೆಯು ದೇಶಗಳ ಸರ್ಕಾರಗಳ ಸ್ವರೂಪವನ್ನು ಪರಿಶೀಲಿಸುತ್ತದೆ ಮತ್ತು ಮೌಲ್ಯಮಾಪನ ಮಾಡುತ್ತದೆ) ಲಂಡನ್ ನಿಂದ ಪ್ರಕಟವಾಗುವ ಎಕನಾಮಿಸ್ಟ್ ನಿಯತಕಾಲಿಕದ ಸಂಶೋಧನಾ ಸಂಸ್ಥೆಯ ಪ್ರಕಾರ ಭಾರತ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 53ನೇ ಸ್ಥಾನಕ್ಕೆ ಕುಸಿದಿದೆ ಎಂದು ಹೇಳುತ್ತಿದೆ. ಈ ಪ್ರಜಾಸತ್ತಾತ್ಮಕ ಪತನದಲ್ಲಿ ಭಾರತದ ಸಂಸತ್ತಿನ ಉಭಯ ಸದನಗಳ ಸದಸ್ಯರ ಪಾತ್ರವೂ ಅಡಗಿದೆ. ಭಾರತೀಯ ಸಂಸತ್ತು ಹೇಗೆ ದುರ್ಬಲವಾಯಿತು ಎಂಬುದರ ಕಿರು ಪಟ್ಟಿಯನ್ನು ನಾನು ನಿಮಗೆ ನೀಡುತ್ತೇನೆ.

ಜನರಿಗೆ ಬೇಕಾಗಿರುವುದು ಏನು?
ರಾಜ್ಯಸಭೆಯ ನಿಯಮ ಸಂಖ್ಯೆ 267ರ ಅಡಿಯಲ್ಲಿ, (ಸಂಸತ್ತಿಗೂ ಇದೇ ರೀತಿಯ ನಿಯಮವಿದೆ) ಜನರ ಮೇಲೆ ಪರಿಣಾಮ ಬೀರುವ ಅಥವಾ ಜನರು ತಿಳಿದುಕೊಳ್ಳಬೇಕಾದ ಮತ್ತು ತಕ್ಷಣವೇ ಚರ್ಚಿಸಬೇಕಾದ ಪ್ರಮುಖ ವಿಷಯಗಳ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಲು, ವಿರೋಧ ಪಕ್ಷಗಳ ಸದಸ್ಯರು ಹಲವಾರು ಔಪಚಾರಿಕ ಮನವಿಗಳನ್ನು ಸಲ್ಲಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಉಭಯ ಸದನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಇಂತಹ ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಭಾರತದ ಭೂಪ್ರದೇಶಲ್ಲಿ ಚೀನಾ ಸೇನೆಯ ಒಳನುಗ್ಗುವಿಕೆ ಮತ್ತು ಅದಾನಿ ಸಮೂಹ ಕುರಿತು ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಪ್ರಕಟಿಸಿದ ವರದಿಯ ಬಗ್ಗೆ ಚರ್ಚಿಸಲು ಅವರು ಒತ್ತಾಯಿ ಮಾಡಿದರು. ಆದರೆ, ಪ್ರತಿಯೊಂದು ಮನವಿಯನ್ನೂ ಸ್ಪೀಕರ್ ತಿರಸ್ಕರಿಸಿದ್ದಾರೆ. ‘ಯಾವುದನ್ನು ಚರ್ಚಿಸಬೇಕು ಎಂದು ಅಧಿಕೃತ ಅಧ್ಯಯನ ಸಮಿತಿ ಮುಂಚಿತವಾಗಿ ನಿರ್ಧರಿಸಿದ್ದನ್ನು ಹೊರತುಪಡಿಸಿ, ಸಾರ್ವಜನಿಕ ಪರವಾಗಿ ಚರ್ಚಿಸಲು ತುರ್ತು ಏನೂ ಇಲ್ಲ. ಭಾರತೀಯ ಜನರು ಸುರಕ್ಷಿತವಾಗಿ ಮತ್ತು ತೃಪ್ತರಾಗಿದ್ದಾರೆ’ ಎಂದು ತಿಳೀಸಿ, ಸಂಸತ್ತಿನಲ್ಲಿ ತುರ್ತು ಚರ್ಚೆಯ ಅಗತ್ಯವಿರುವ ಯಾವುದಕ್ಕೂ ಅವರು ತಲೆಕೆಡಿಸಿಕೊಳ್ಳಲಿಲ್ಲ.

ರಾಷ್ಟ್ರಪತಿ ಶೈಲಿಯಲ್ಲಿ ಪ್ರಧಾನಿ!
ಪ್ರಧಾನಿ ಲೋಕಸಭೆಯ ಸದಸ್ಯರಾಗಿದ್ದರೆ ಅವರನ್ನು ಸದನದ ‘ನಾಯಕರು’ ಎಂದು ಕರೆಯಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ 17ನೇ ಲೋಕಸಭೆಯ ನಾಯಕರು. ಆದರೆ ಅವರು ಸದನಗಳಿಗೆ ಬರುವುದೇ ಅಪರೂಪವಾಗಿದೆ. ಅಧ್ಯಕ್ಷರ ಭಾಷಣಕ್ಕೆ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗಳಿಗೆ ವಾರ್ಷಿಕವಾಗಿ ಪ್ರತಿಕ್ರಿಯಿಸುತ್ತಾರೆ. ಈ ಎರಡು ಸಂದರ್ಭಗಳನ್ನು ಬಿಟ್ಟರೆ ಮೋದಿ ಅವರು ಸದನದಲ್ಲಿ ದೊಡ್ಡದಾಗಿ ಮಾತನಾಡಿದ್ದು ನನಗೆ ನೆನಪಿಲ್ಲ. ಸಂಸತ್ತಿನಲ್ಲಿ ಕೇಳುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸುವುದೂ ಇಲ್ಲ. ಯಾರಾದರು ಒಬ್ಬ ಸಚಿವರು ಅವರ ಪರವಾಗಿ ಸದನದಲ್ಲಿ ಉತ್ತರಿಸುತ್ತಾರೆ. (ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಪ್ರಧಾನ ಮಂತ್ರಿಯೇ ಪ್ರತಿ ಬುಧವಾರ ಉತ್ತರಿಸುವ ಪ್ರಶ್ನೆ-ಉತ್ತರ ಸಮಯ ವಿಧಾನ, ಭಾರತದಲ್ಲಿಯೂ ಇರಬೇಕಿತ್ತು ಎಂದು ನಾನು ಭಾವಿಸುತ್ತೇನೆ) ಹಿಂದಿನ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಡಾ.ಮನಮೋಹನ್ ಸಿಂಗ್ ಅಥವಾ ಅಟಲ್ ಬಿಹಾರಿ ವಾಜಪೇಯಿ ಅವರ ವಿಧಾನಕ್ಕಿಂತ ಮೋದಿಯವರ ವಿಧಾನ ವಿಭಿನ್ನವಾಗಿದೆ. ಪ್ರಧಾನಿ ರಾಷ್ಟ್ರಪತಿಯಂತೆ ವರ್ತಿಸುತ್ತಾರೆ. ಪ್ರಧಾನಿಯವರು ಹೀಗೆಯೇ ರಾಷ್ಟ್ರಪತಿಯಾಗಿ ಮುಂದುವರಿದರೆ, ಎಲ್ಲದರಲ್ಲೂ ರಾಷ್ಟ್ರಪತಿಯಂತೆ ವರ್ತಿಸಲು ಆರಂಭಿಸಿದರೆ ಭಾರತ ಸಂಸದೀಯ ಪ್ರಜಾಪ್ರಭುತ್ವವಾಗಿ ಹೆಚ್ಚು ದಿನ ಉಳಿಯುವುದಿಲ್ಲ.

ಸಾಂದರ್ಭಿಕ ಚಿತ್ರ

ಸದನ ಕೆಲಸ ಮಾಡಬಾರದೇ?
ಬ್ರಿಟನ್‌ನ ಲೋಕಸಭೆಯು ವರ್ಷದಲ್ಲಿ 135 ದಿನಗಳ ಕಾಲ ಸಭೆ ಸೇರುತ್ತದೆ. ಭಾರತದಲ್ಲಿ 2021ರಲ್ಲಿ ಲೋಕಸಭೆಯು 59 ದಿನಗಳವರೆಗೆ ಮತ್ತು ರಾಜ್ಯಸಭೆಯು 58 ದಿನಗಳವರೆಗೆ ಮಾತ್ರ ಸಭೆ ಸೇರಿತ್ತು. 2022ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳೆರಡೂ ಕೇವಲ 56 ದಿನಗಳ ಕಾಲ ನಡೆದವು. ಸದನದಲ್ಲಿ ಗದ್ದಲ ಉಂಟಾಗಿ ಬಹುತೇಕ ದಿನಗಳು ಕಲಾಪ ನಡೆಯದೆ ಮುಂದೂಡಲ್ಪಟ್ಟವು. ದಿವಂಗತ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರು ಒಮ್ಮೆ “ಸದಗಳಲ್ಲಿ ಏನೂ ನಡೆಯದಂತೆ ಅಡ್ಡಿಪಡಿಸುವುದು ಮತ್ತು ಅದನ್ನು ತಡೆಯುವುದು ಸಂಸದೀಯ ಕಾರ್ಯವಿಧಾನದಲ್ಲಿ ಕಾನೂನುಬದ್ಧ ತಂತ್ರವಾಗಿದೆ” ಎಂದು ಹೇಳಿದ್ದರು. 2010ರ ಚಳಿಗಾಲದ ಅಧಿವೇಶನದ ಉದ್ದಕ್ಕೂ, ಒಂದು ಸಚಿವರ ರಾಜೀನಾಮೆಗೆ ಆಗ್ರಹಿಸಿ, ಸಂಸದೀಯ ಜಂಟಿ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿ, ವಿರೋಧ ಪಕ್ಷಗಳು ಅಡ್ಡಿಪಡಿಸಿದ್ದರಿಂದ ಯಾವುದೇ ಕ್ರಮವಿಲ್ಲದೆ ಅಧಿವೇಶನವು ಮುಕ್ತಾಯಗೊಂಡಿತು. ಆ ಅಧಿವೇಶನದಲ್ಲಿ ಲೋಕಸಭೆಯು ತನ್ನ ನಿಗದಿತ ಸಮಯದ 6% ಮತ್ತು ರಾಜ್ಯಸಭೆ 2% ಮಾತ್ರ ಕಾರ್ಯನಿರ್ವಹಿಸಿತು.

ಇತ್ತೀಚಿನ ದಿನಗಳಲ್ಲಿ ಈ ತಂತ್ರವನ್ನು ಮತ್ತಷ್ಟು ಸುಧಾರಿಸಲಾಗಿದೆ ಮತ್ತು ಬಲಪಡಿಸಲಾಗಿದೆ. ಪ್ರಸಕ್ತ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಆಡಳಿತ ಪಕ್ಷವೇ ಕಲಾಪ ನಡೆಯದಂತೆ ತಡೆದು ಪ್ರತಿ ದಿನವೂ ಅವಾಂತರವನ್ನು ಸೃಷ್ಟಿಸುತ್ತಿದೆ. ಕೆಲವೇ ದಿನಗಳು ಚರ್ಚೆಗಳಾಗಿ ಹೆಚ್ಚಿನ ದಿನಗಳಲ್ಲಿ ಗದ್ದಲ-ಮುಂದೂಡಿಕೆಗಳು ಆದರೆ, ಸಂಸತ್ ಅಧಿವೇಶನವೇ ಅನಗತ್ಯವಾಗಿಬಿಡುತ್ತದೆ. ಸರ್ಕಾರ ಮಾಂಡಿಸುವ ವಿಧೇಯಕಗಳು ಚರ್ಚೆಯಿಲ್ಲದೆ ಅಂಗೀಕಾರ ಪಡೆದುಕೊಳ್ಳುತ್ತವೆ. ಈ ಹಿಂದೆಯೂ ಕೆಲವೊಮ್ಮೆ ಈ ರೀತಿಯಾಗಿದೆ. ಇನ್ನು ಮುಂದೆ ಸಂಸತ್ತಿನ ಸಭೆಗಳು ಕೆಲವೇ ದಿನಗಳು ಸೇರಿ, ಗದ್ದಲ, ಆರೋಪ-ಪ್ರತ್ಯಾರೋಪದ ಮಧ್ಯೆಯೇ ವಿಧೇಯಕಗಳ ಮೇಲೆ  ಚರ್ಚೆಯಾಗದೆ ಮತದಾನವನ್ನು ಮಾಡಿ ತಮ್ಮ ಕರ್ತವ್ಯವನ್ನು ಮುಗಿಸಿಕೊಳ್ಳುತ್ತದೆ.

ಚರ್ಚೆಗಳಿಲ್ಲದ ಸಂಸತ್ತು:
ಸಂಸತ್ತಿನ ಉಭಯ ಸದನಗಳು ಜನರ ಸಮಸ್ಯೆಗಳನ್ನು ಚರ್ಚಿಸಲಿಕಾಗಿಯೇ ಇರುವುದು. ಭಾರತದ ಸಂಸತ್ತಿನಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಭಾರಿ ಚರ್ಚೆಗಳು ನಡೆದಿವೆ. 1962ರ ಚೀನಾದ ಆಕ್ರಮಣದಲ್ಲಿ ಭಾರತದ ಅವಮಾನಕರ ಸೋಲಿನ ಬಗ್ಗೆ ಸಂಸತ್ತು ಚರ್ಚೆ ನಡೆಸಿತು. ಹರಿದಾಸ್ ಮುಂದ್ರಾ ಕಂಪನಿಯಲ್ಲಿ ಎಲ್.ಐ.ಸಿ ಹೂಡಿಕೆ ಮಾಡಿದ ಬಗ್ಗೆ ಸಂಸತ್ತ್ ಚರ್ಚೆ ಮಾಡಿದೆ. ಬೋಫೋರ್ಸ್ ಫಿರಂಗಿಗಳ ಆಮದಿಗೆ ಕಮಿಷನ್ ಪಡೆಯಲಾಗಿದೆ ಎಂಬ ಆರೋಪದ ಮೇಲೆ ಸದನದಲ್ಲಿ ಹಲವು ಬಾರಿ ಚರ್ಚೆ ನಡೆದಿದೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆಯೂ ಚರ್ಚೆ ನಡೆದಿರುತ್ತದೆ.

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಈ ಎಲ್ಲಾ ಚರ್ಚೆಗಳು ಮತದಾನವಿಲ್ಲದೆ ಅಂತಿಮಗೊಂಡ ವಿಷಯಗಳಾಗಿವೇ. ಹಾಗಾಗಿ ಸರ್ಕಾರ ಚರ್ಚೆಗೆ ಹೆದರುವ ಅಗತ್ಯವಿಲ್ಲ. ಅಲ್ಲದೆ ಈ ಸರ್ಕಾರಕ್ಕೆ ಸಂಸತ್ತಿನಲ್ಲಿ ಬಹುಮತದ ಬೆಂಬಲವಿದೆ. ಹಾಗಾಗಿ ಚರ್ಚೆಯ ನಂತರ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಭಯ ಪಡುವ ಅಗತ್ಯವಿಲ್ಲ. ಆದರೆ ಈ ಸರ್ಕಾರ ಯಾವ ವಿಚಾರಕ್ಕಾಗಿ ಅಂಜುತ್ತಿದೆ ಎಂದರೆ, ವಿರೋಧ ಪಕ್ಷಗಳು ಸರ್ಕಾರಕ್ಕೆ ಮುಜುಗರ ತರುವ ವಿಷಯಗಳ ಬಗ್ಗೆ ಸದನದಲ್ಲಿ ಮಾತನಾಡುತ್ತವೆ ಎಂದೇ ಅಂಜಿಕೊಂಡಿದೆ. ಭಾರತವು ಚರ್ಚೆಗಳಿಲ್ಲದ ಸಂಸತ್ತು ಎಂಬ ಯುಗವನ್ನು ಪ್ರವೇಶಿಸಿದೆಯೇ? ‘ಹೌದು’ ಎಂದೇ ಹೆದರುತ್ತಿದ್ದೇನೆ; ನನ್ನ ಭಯ ನಿಜವಾಗಿದ್ದರೆ, ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವಕ್ಕಾಗಿ ನಾವು ಶೀಘ್ರದಲ್ಲೇ ‘ವಿದಾಯ ಸಮಾರಂಭ’ವನ್ನು ನಡೆಸಬೇಕಾಗಿದೆ.

ಸಾಂದರ್ಭಿಕ ಚಿತ್ರ

ಕಾದಿರುವ ಬೆದರಿಕೆ:
ಹೊಸ ಅಧಿವೇಶನಕ್ಕಾಗಿ ಸಂಸತ್ತಿನ ಸಭೆ ಸೇರುವುದಾಗಿ ಕಲ್ಪಿಸಿಕೊಳ್ಳಿ; ಉಭಯ ಸದನಗಳ ಎಲ್ಲಾ ಸದಸ್ಯರು ಒಂದು ದೊಡ್ಡ ಸಭಾಂಗಣದಲ್ಲಿ ಒಟ್ಟುಗೂಡಿರುವುದಾಗಿ ಊಹಿಸಿಕೊಳ್ಳಿ; ಭಾರತದ ಗಣರಾಜ್ಯದ ಅಧ್ಯಕ್ಷರು ಅದರ ಎಲ್ಲಾ ಸದಸ್ಯರಿಂದ ಚುನಾಯಿತರಾಗಿದ್ದಾರೆ ಎಂದು ಕಲ್ಪಿಸಿಕೊಳ್ಳಿ; ಆ ಅಭ್ಯರ್ಥಿಯ ವಿರುದ್ಧ ಯಾರೂ ಮತ ಚಲಾಯಿಸಲು ಆಗುವುದಿಲ್ಲ ಮತ್ತು ಮತದಾನದಿಂದ ಯಾರೊಬ್ಬರೂ ದೂರವಿರಲು ಸಾದ್ಯವಿಲ್ಲ. How is Indian democracy falling?

ವಾಸ್ತವವಾಗಿ ಅಲ್ಲಿ ಒಬ್ಬರೇ ಅಭ್ಯರ್ಥಿ ಇರುತ್ತಾರೆ. ದೇಶದ ಸಮಸ್ತ ಜನತೆ ಈ ಚುನಾವಣಾ ಫಲಿತಾಂಶವನ್ನು ‘ಜನತಂತ್ರದ ವಿಜಯ’ ಎಂದು ಸಂಭ್ರಮಿಸುತ್ತಾರೆ. ಇದು ಭಾರತದಲ್ಲಿ ಸಾದ್ಯವೇ? ಖಂಡಿತ ಸಾದ್ಯವಿದೆ! ಕಾರಣ ನಾವು ಈಗ ನಿರಂತರವಾಗಿ, ಏಕರೂಪವಾಗಿ; ಒಂದು ಪಕ್ಷದ ಆಡಳಿತದತ್ತ ಸಾಗುತ್ತಿದ್ದೇವೆ. 15 ರಾಜ್ಯಗಳು ಒಂದೇ ರಾಜಕೀಯ ಪಕ್ಷದಿಂದ ಆಳ್ವಿಕೆ ನಡೆಸುತ್ತಿರುವ ಹಿನ್ನಲೆಯಲ್ಲಿ, ಆ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳು ಒಟ್ಟಾಗಿ ಲೋಕಸಭೆಯಲ್ಲಿ 362 ಮತ್ತು ರಾಜ್ಯಸಭೆಯಲ್ಲಿ 163 ಸದಸ್ಯರನ್ನು ಹೊಂದಿರುವುದರಿಂದ, ಭಾರತವನ್ನು ‘ಪ್ರಜಾಸತ್ತಾತ್ಮಕ ಗಣರಾಜ್ಯ’ ಸ್ಥಾನಮಾನದಿಂದ ‘ಪ್ರಜೆಗಳ ಗಣರಾಜ್ಯ’ ಎಂದು ಬದಲಾಯಿಸುವುದನ್ನು ಯಾರೂ ತಡೆಯಲು ಸಾದ್ಯವಿಲ್ಲ.How is Indian democracy falling?

ಈ ಅಪಾಯವು ಸ್ವಲ್ಪ ದೂರದಲ್ಲಿದೆ. ಆದರೆ, ಅದು ನಡೆಯುವುದಿಲ್ಲ ಎಂದು ನಿರಾಕರಣೆ ಮಾಡಲಾಗದು. ಭಾರತ ಹೀಗೆ ಪ್ರಜೆಗಳ ಗಣರಾಜ್ಯವಾಗಿ ಬದಲಾದಾಗ, ಭಾರತದ ಪ್ರಜಾಸತ್ತಾತ್ಮಕ ಗಣರಾಜ್ಯವು ಕೊನೆಯದಾಗಿ ಅದು ವಿಶ್ರಾಂತಿ ತೆಗೆದುಕೊಳ್ಳಬೇಕಾದ ಸ್ಥಳಕ್ಕೆ ಹೋಗಿ ಸೇರಿರುತ್ತದೆ! How is Indian democracy falling?

ಕೃಪೆ: arunchol.com
ಕನ್ನಡಕ್ಕೆ: ಡಿ.ಸಿ.ಪ್ರಕಾಶ್, ಸಂಪಾದಕರು,
ಡೈನಾಮಿಕ್ ಲೀಡರ್

Related Posts