ದೇಶ Archives » Page 5 of 53 » Dynamic Leader
October 23, 2024
Home Archive by category ದೇಶ (Page 5)

ದೇಶ

ದೇಶ

“ದೇಶದ ಸಂವಿಧಾನ ಶೇ.10ರಷ್ಟು ಮಂದಿಗೆ ಮಾತ್ರವಲ್ಲ. ಜಾತಿವಾರು ಸಮೀಕ್ಷೆ ನಡೆಸದೆ ಭಾರತದ ವಾಸ್ತವದಲ್ಲಿ ನೀತಿಗಳನ್ನು ರೂಪಿಸಲು ಸಾಧ್ಯವಿಲ್ಲ” – ರಾಹುಲ್ ಗಾಂಧಿ

ಪ್ರಯಾಗ್‌ರಾಜ್‌,
ದೇಶದಾದ್ಯಂತ ಜಾತಿವಾರು ಜನಗಣತಿ ನಡೆಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸುತ್ತ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಿನ್ನೆ ನಡೆದ ಸಾಂವಿಧಾನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಗ್ಗೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

“ದೇಶದ ಶೇ.90ರಷ್ಟು ಜನ ವ್ಯವಸ್ಥೆಯಿಂದ ಹೊರಗಿದ್ದಾರೆ. ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವ ಅವರಿಗೂ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ. ಅದಕ್ಕಾಗಿಯೇ ನಾವು ಜಾತಿವಾರು ಜನಗಣತಿಗೆ ಬೇಡಿಕೆಯನ್ನು ಎತ್ತುತ್ತಿದ್ದೇವೆ. ದೇಶದ ಸಂವಿಧಾನ ಶೇ.10ರಷ್ಟು ಮಂದಿಗೆ ಮಾತ್ರವಲ್ಲ. ಜಾತಿವಾರು ಸಮೀಕ್ಷೆ ನಡೆಸದೆ ಭಾರತದ ವಾಸ್ತವದಲ್ಲಿ ನೀತಿಗಳನ್ನು ರೂಪಿಸಲು ಸಾಧ್ಯವಿಲ್ಲ.

ಸಂವಿಧಾನದಂತೆಯೇ ಜಾತಿವಾರು ಎಣಿಕೆ ಕೂಡ ಕಾಂಗ್ರೆಸ್‌ನ ನೀತಿಯ ಚೌಕಟ್ಟಾಗಿಯೂ, ಮಾರ್ಗದರ್ಶಿಯೂ ಆಗಿದೆ. ಈ ಜಾತಿವಾರು ಜನಗಣತಿ ಬೇಡಿಕೆಯಿಂದ ನಾವು ಸಂವಿಧಾನವನ್ನು ರಕ್ಷಿಸಲು ಬಯಸುತ್ತೇವೆ” ಎಂದು ಹೇಳಿದ್ದಾರೆ.

ದೇಶ

ನವದೆಹಲಿ: ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಅವರ ಅಚ್ಚುಮೆಚ್ಚಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ.

ಸೋನಿಯಾ ಅವರು ನಾಯಿಯೊಂದನ್ನು ಬೆನ್ನ ಮೇಲೆ ಹಿಡಿದಿರುವ ಫೋಟೋವನ್ನು ಪೋಸ್ಟ್ ಮಾಡಿರುವ ರಾಹುಲ್, ಅಮ್ಮನ ಅಚ್ಚುಮೆಚ್ಚಿನವರು ಯಾರು? ಅದು ಖಂಡಿತವಾಗಿಯೂ ನೂರಿ (ನಾಯಿಯ ಹೆಸರು) ಎಂದು ಹೇಳಿದ್ದಾರೆ. ಮುಂದಿನ 24 ಗಂಟೆಗಳಲ್ಲಿ, 5,968 ಜನರು ಈ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. 8.6 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ‘ಲೈಕ್’ ಮಾಡಿದ್ದಾರೆ.

ಕಳೆದ ವರ್ಷ ರಾಹುಲ್ ಗೋವಾದ ಮಾಪುಸಾದಲ್ಲಿ ನೂರಿಯನ್ನು ಖರೀದಿಸಿ, ವಿಶ್ವ ಪ್ರಾಣಿ ದಿನದಂದು ಸೋನಿಯಾಗೆ ಉಡುಗೊರೆಯಾಗಿ ನೀಡಿದ್ದರು. ಅದರ ಬಗ್ಗೆ ವಿಡಿಯೊವೊಂದನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು ಎಂಬುದು ಗಮನಾರ್ಹ.

ದೇಶ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಅವರು ರಾಜಧಾನಿ ದೆಹಲಿಯ ವೀರಭೂಮಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ರೀತಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಪುಷ್ಪನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಹಿಂದೆಂದೂ ಮಾಡದ ಕೆಲಸಗಳನ್ನು ಮಾಡಿ ಭಾರತವನ್ನು 21ನೇ ಶತಮಾನಕ್ಕೆ ತರಲು ಕೊಡುಗೆ ನೀಡಿದ್ದಾರೆ.

ಈ ಕುರಿತು ಖರ್ಗೆ ಅವರು ಪ್ರಕಟಿಸಿರುವ ‘ಎಕ್ಸ್’ ಸೈಟ್ ಪೋಸ್ಟ್‌ನಲ್ಲಿ, “ದೇಶವು ಇಂದು ಸಾಮರಸ್ಯ ದಿನವಾಗಿ ಆಚರಿಸುತ್ತಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭಾರತದ ಮಹಾನ್ ಪುತ್ರ. ಕೋಟ್ಯಂತರ ಭಾರತೀಯರಿಗೆ ಭರವಸೆಯ ಬೆಳಕನ್ನು ಬೆಳಗಿದವರು” ಎಂದು ಹೇಳಿದ್ದಾರೆ.

“18 ವರ್ಷ ವಯಸ್ಸಿನವರೂ ಮತದಾನ ಮಾಡುವಂತೆ ವಯೋಮಿತಿಯನ್ನು ಇಳಿಸಿದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿದ್ದು, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿ, ಗಣಕೀಕರಣ ಯೋಜನೆಗಳು, ಶಾಂತಿ ಒಪ್ಪಂದಗಳನ್ನು ಅನುಸರಿಸುವುದು, ಮಹಿಳೆಯರ ಸಬಲೀಕರಣ, ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮ ಮತ್ತು ಅಂತರ್ಗತ ಶಿಕ್ಷಣಕ್ಕೆ ಒತ್ತು ನೀಡುವ ಹೊಸ ಶಿಕ್ಷಣ ನೀತಿಯಂತಹ ಅವರ ಅನೇಕ ಗಮನಾರ್ಹ ಉಪಕ್ರಮಗಳು ದೇಶದಲ್ಲಿ ಬದಲಾವಣೆಗಳನ್ನು ತಂದಿದೆ.

ಭಾರತ ರತ್ನ, ರಾಜೀವ್ ಗಾಂಧಿ ಅವರ ಜನ್ಮದಿನದಂದು ನಾವು ಅವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸುತ್ತೇವೆ” ಎಂದೂ ಅವರು ಹೇಳಿದ್ದಾರೆ.

ದೇಶ

ರಕ್ಷಾ ಬಂಧನದ ಹಿನ್ನೆಲೆಯಲ್ಲಿ ರಾಣಿ ಕರ್ಣಾವತಿ-ರಾಜ ಹುಮಾಯೂನ್ ಕಥೆಯನ್ನು ಸುಧಾ ಮೂರ್ತಿ ಅವರು ಹಂಚಿಕೊಂಡಿರುವ ವಿಡಿಯೋಗೆ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ರಾಜ್ಯಗಳಲ್ಲಿ ಅತ್ಯಂತ ಜನಪ್ರಿಯ ಹಬ್ಬವಾದ ರಕ್ಷಾ ಬಂಧನವನ್ನು ನಿನ್ನೆ (ಆಗಸ್ಟ್ 19) ಆಚರಿಸಲಾಯಿತು. ಇದು ಸಹೋದರ – ಸಹೋದರಿಯರ ನಡುವಿನ ಪ್ರೀತಿಯ ಬಾಂಧವ್ಯವನ್ನು ವ್ಯಕ್ತಪಡಿಸುವ ಸಲುವಾಗಿ ಇದನ್ನು ಪ್ರತಿ ವರ್ಷವೂ ಆಚರಿಸಲಾಗುತ್ತದೆ.

ಪ್ರಧಾನಿ ಮೋದಿ, ಸಂಸದ ರಾಹುಲ್ ಗಾಂಧಿ ಸೇರಿದಂತೆ ಹಲವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಾ ಬಂಧನದ ಶುಭಾಶಯಗಳನ್ನು ಹಂಚಿಕೊಂಡಿದ್ದರು. ಆ ರೀತಿಯಲ್ಲಿ, ರಾಜ್ಯಸಭಾ ಸಂಸದೆ ಹಾಗೂ ಇನ್ಫೋಸಿಸ್ ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ರಕ್ಷಾ ಬಂಧನದ ಕುರಿತು ಮಾತನಾಡುವ ವಿಡಿಯೋವೊಂದನ್ನು ತಮ್ಮ ‘ಎಕ್ಸ್’ ಪೇಜ್ ನಲ್ಲಿ ಹಂಚಿಕೊಂಡಿದ್ದರು.

ಅದರಲ್ಲಿ, 16ನೇ ಶತಮಾನದ ರಾಣಿ ಕರ್ಣಾವತಿ ತನ್ನ ಶತ್ರುಗಳಿಂದ ದಾಳಿಗೊಳಗಾದಾಗ ಮೊಘಲ್ ಚಕ್ರವರ್ತಿ ಹುಮಾಯೂನ್‌ಗೆ ಸಣ್ಣ ಹಗ್ಗವೊಂದನ್ನು ಕಳುಹಿಸಿ, ತನ್ನನ್ನು ಕಿರಿಯ ಸಹೋದರಿ ಎಂದು ಭಾವಿಸಿ ಸಹಾಯ ಮಾಡುವಂತೆ ಕೇಳಿಕೊಂಡಳು ಎಂದು ಸುಧಾ ಮೂರ್ತಿ ವಿಡಿಯೊದಲ್ಲಿ ಉಲ್ಲೇಖಿಸಿದ್ದರು.

ಈ ಪೋಸ್ಟ್ ಅಡಿಯಲ್ಲಿ ಕಾಮೆಂಟ್ ಮಾಡಿದ ಅನೇಕರು, ರಕ್ಷಾ ಬಂಧನದ ಇತಿಹಾಸವು ಮಹಾಭಾರತದ ಕಾಲಕ್ಕೆ ಸೇರಿದ್ದು, ಶಿಶುಪಾಲನನ್ನು ಕೊಲ್ಲಲು ಕೃಷ್ಣನು ಸುದರ್ಶನ ಚಕ್ರವನ್ನು ಬಳಸಿದಾಗ, ಅದು ಅವರ ಬೆರಳನ್ನು ಕತ್ತರಿಸಿತು, ದ್ರೌಪದಿ ತಕ್ಷಣವೇ ಸಣ್ಣ ಬಟ್ಟೆಯಿಂದ ಗಾಯವನ್ನು ಕಟ್ಟಿದರು ಅದುವೆ ನಂತರ ರಕ್ಷಾ ಬಂಧನವಾಯಿತು ಎಂದು ಸೂಚಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಧಾ ಮೂರ್ತಿ, “ರಕ್ಷಾ ಬಂಧನದ ಬಗ್ಗೆ ನಾನು ಹಂಚಿಕೊಂಡ ಕಥೆಯು ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ನಾನು ವಿಡಿಯೊದಲ್ಲಿ ಹೇಳಿದಂತೆ, ಇದು ಈಗಾಗಲೇ ಭೂಮಿಯ ಸಂಪ್ರದಾಯವಾಗಿದೆ. ರಕ್ಷಾ ಬಂಧನದ ಹಿಂದಿನ ಸುಂದರವಾದ ಸಂಕೇತಗಳ ಬಗ್ಗೆ ನಾನು ಬೆಳೆದಾಗ ಕಲಿತ ಅನೇಕ ಕಥೆಗಳಲ್ಲಿ ಒಂದನ್ನು ಹೈಲೈಟ್ ಮಾಡುವುದೆ ನನ್ನ ಉದ್ದೇಶವಾಗಿತ್ತು. ರಕ್ಷಾ ಬಂಧನ ಬಹಳ ಪ್ರಾಚೀನವಾದ ಸಂಪ್ರದಾಯ” ಎಂದು ಹೇಳಿದ್ದಾರೆ.

ಉದ್ಯೋಗ ದೇಶ

ನವದೆಹಲಿ: ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು, ಉಪ ಕಾರ್ಯದರ್ಶಿಗಳು ಮತ್ತು ಇತರ ಪ್ರಮುಖ ಹುದ್ದೆಗಳನ್ನು ಐಎಎಸ್, ಐಪಿಎಸ್ ಮುಂತಾದ UPSC ಮೂಲಕ ಉತ್ತೀರ್ಣರಾದವರನ್ನು ಗ್ರೂಪ್ ಎ ಸೇವಾ ಅಧಿಕಾರಿಗಳ ಮೂಲಕವೇ ಭರ್ತಿ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ಕೇಂದ್ರ ಸಚಿವಾಲಯಗಳಲ್ಲಿ ಖಾಲಿಯಿರುವ 10 ಜಂಟಿ ಕಾರ್ಯದರ್ಶಿಗಳು ಮತ್ತು 35 ನಿರ್ದೇಶಕರು / ಅಧೀನ ಕಾರ್ಯದರ್ಶಿಗಳ ಹುದ್ದೆಗಳನ್ನು ಸರ್ಕಾರೇತರ ವಲಯದ ತಜ್ಞರಿಂದ ತುಂಬಲು (Lateral Entry) ಅರ್ಜಿಗಳನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿತ್ತು.

ಇದನ್ನು ವಿರೋಧಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮ ‘ಎಕ್ಸ್’ ಸೈಟ್‌ನಲ್ಲಿ, “ಲ್ಯಾಟರಲ್ ಎಂಟ್ರಿಯು ದಲಿತರು, ಹಿಂದುಳಿದ ಮತ್ತು ಆದಿವಾಸಿಗಳ ಮೇಲಿನ ದಾಳಿಯಾಗಿದೆ. ಬಿಜೆಪಿಯ ತಿರುಚಿದ ರಾಮರಾಜ್ಯವು ಸಂವಿಧಾನವನ್ನು ನಾಶಪಡಿಸಲು ಮತ್ತು ದೀನದಲಿತರಿಂದ ಮೀಸಲಾತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.

ಉದ್ಯೋಗ ದೇಶ ಶಿಕ್ಷಣ

ಚೆನ್ನೈ: ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯವನ್ನು ದುರ್ಬಲಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಅಲ್ಲದೇ ಸರ್ಕಾರದ ಆಡಳಿತವನ್ನು ಆರ್‌ಎಸ್‌ಎಸ್‌ ಅಧೀನಕ್ಕೆ ನೀಡವ ಬಿಜೆಪಿ ಸರ್ಕಾರದ ಷಡ್ಯಂತ್ರವನ್ನು ವಿಫಲಗೊಳಿಸಬೇಕು” ಎಂದು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಹೇಳಿದ್ದಾರೆ.

ಈ ಕುರಿತು, ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ, ಸಾಮಾಜಿಕ ನ್ಯಾಯವನ್ನು ದುರ್ಬಲಗೊಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಸರ್ಕಾರಿ ಆಡಳಿತದಲ್ಲಿ ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದ ಖಾಸಗಿ ಕಂಪನಿಗಳ ಉನ್ನತ ಅಧಿಕಾರಿಗಳನ್ನು ಸರ್ಕಾರಿ ಕಾರ್ಯದರ್ಶಿಗಳಾಗಿ, ಮತ್ತು ಉನ್ನತ ಅಧಿಕಾರಿಗಳಾಗಿ ನೇಮಕ ಮಾಡಿಕೊಳ್ಳುವ ಯೋಜನೆಯನ್ನು ಜಾರಿಗೊಳಿಸುತ್ತಿದೆ.

ಖಾಸಗಿ ವಲಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು (CEO) ನೇರವಾಗಿ ಐಎಎಸ್ ಅಧಿಕಾರಿಗಳಾಗಿ ನೇಮಿಸಿಕೊಳ್ಳುವ ಯೋಜನೆಯನ್ನು 2018ರಲ್ಲಿ ಪರಿಚಯಿಸಲಾಯಿತು. ಈ ಯೋಜನೆಯಲ್ಲಿ ಇದುವರೆಗೆ 63 ಜನರನ್ನು ನೇಮಿಸಲಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇತ್ತೀಚೆಗೆ ಇದೇ ಯೋಜನೆಯಡಿಯಲ್ಲಿ ಇನ್ನೂ 45 ಜನರನ್ನು ನೇಮಿಸಿಕೊಳ್ಳಲು ಜಾಹೀರಾತನ್ನು ಬಿಡುಗಡೆ ಮಾಡಿದೆ.

ಈ ಯೋಜನೆಯು ಕಾನೂನು ಉಲ್ಲಂಘನೆ ಮಾತ್ರವಲ್ಲ, ಸಂವಿಧಾನದ ಮೇಲಿನ ಕ್ರೂರ ದಾಳಿಯೂ ಆಗಿದೆ. ಈ ಮೂಲಕ ಸರ್ಕಾರದ ಆಡಳಿತವನ್ನು ಸಂಪೂರ್ಣವಾಗಿ ಆರ್‌ಎಸ್‌ಎಸ್‌ ಅಧೀನಕ್ಕೆ ಕೊಡಲು ಸಂಚು ರೂಪಿಸುತ್ತಿರುವುದು ಅತ್ಯಂತ ಖಂಡನೀಯವಾದದ್ದು. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿನ ಪ್ರಮುಖ ಹುದ್ದೆಗಳಿಗೆ ‘ಲ್ಯಾಟರಲ್ ಎಂಟ್ರಿ’ ಮೂಲಕ ಮಾಡುತ್ತಿರುವ ನೇಮಕಾತಿಯಿಂದ SC, ST, OBC ಪಂಗಡದ ಮೀಸಲಾತಿಯನ್ನು ಕೇಂದ್ರ ಸರ್ಕಾರ ಬಹಿರಂಗವಾಗಿ ಕಿತ್ತುಕೊಳ್ಳುತ್ತಿದೆ.

ದೇಶದ ಅತ್ಯುನ್ನತ ಅಧಿಕಾರ ಸೇರಿದಂತೆ ಎಲ್ಲ ಉನ್ನತ ಹುದ್ದೆಗಳಲ್ಲಿ ಪರಿಶಿಷ್ಟ ವರ್ಗದವರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಹೇಳುತ್ತಲೇ ಬಂದಿದ್ದೇನೆ. ಇದನ್ನು ಸುಧಾರಿಸುವ ಬದಲು, ‘ಲ್ಯಾಟರಲ್ ಎಂಟ್ರಿ’ ಮೂಲಕ ಪರಿಶಿಷ್ಟ ವರ್ಗದವರನ್ನು ಉನ್ನತ ಸ್ಥಾನಗಳಿಂದ ಇನ್ನಷ್ಟು ದೂರ ತಳ್ಳಲಾಗುತ್ತಿದೆ.

ಈ ಕಾರ್ಯವು UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪ್ರತಿಭಾವಂತ ಯುವಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಕಾರ್ಯವಾಗಿದೆ. ಮತ್ತು ‘ಇದು ತುಳಿತಕ್ಕೊಳಗಾದವರ ಸಾಮಾಜಿಕ ನ್ಯಾಯದ ಮೇಲೆ ಕೇಂದ್ರ ಸರ್ಕಾರದ ದಾಳಿಯಾಗಿದೆ’ ಎಂದು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿರುವುದು ಗಮನಿಸಬೇಕಾದ ಸಂಗತಿ.

“ಇಂಡಿಯಾ ಮೈತ್ರಿಕೂಟ”ದ ಪಕ್ಷಗಳು ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು, ಒಗ್ಗಟ್ಟಿನಿಂದ ಹೋರಾಡುವ ಮೂಲಕ, ಸರ್ಕಾರದ ಆಡಳಿತವನ್ನು ಆರ್‌ಎಸ್‌ಎಸ್‌ ಅಧೀನಕ್ಕೆ ನೀಡಲು ಮುಂದಾಗುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಷಡ್ಯಂತ್ರವನ್ನು ವಿಫಲಗೊಳಿಸಬೇಕು” ಎಂದು ಹೇಳಿದ್ದಾರೆ.

ದೇಶ

ಪ್ರಸಿದ್ಧ ಕಂಪನಿಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಶೇ.12ರಷ್ಟು ಮಸಾಲೆ ಪದಾರ್ಥಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ತಿಳಿದುಬಂದಿದೆ.

MDH, ಮತ್ತು ಎವರೆಸ್ಟ್ ಭಾರತದಲ್ಲಿ ಮಸಾಲೆಗಳನ್ನು ಮಾರಾಟ ಮಾಡುವ ಅತ್ಯಂತ ಪ್ರಸಿದ್ಧ ಕಂಪನಿಗಳಾಗಿವೆ. ಇತ್ತೀಚೆಗೆ, ಬ್ರಿಟನ್, ನ್ಯೂಜಿಲೆಂಡ್, ಅಮೆರಿಕ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ಈ ಕಂಪನಿಗಳ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿವೆ. ನಿರ್ದಿಷ್ಟವಾಗಿ, ಹಾಂಗ್ ಕಾಂಗ್ ಈ ಕಂಪನಿಗಳಿಂದ ಮಸಾಲೆಗಳ ಉತ್ಪಾದನೆಯನ್ನು ನಿಷೇಧಿಸಿದೆ.

ಹೀಗಾಗಿ, ಈ ಉತ್ಪನ್ನಗಳ ಮೇಲೆ ಎದ್ದ ಅನುಮಾನಗಳ ಕಾರಣ, MDH ಮತ್ತು ಎವರೆಸ್ಟ್ ಉತ್ಪನ್ನಗಳ 4,054 ಮಾದರಿಗಳನ್ನು ತೆಗೆದು, ಕೇಂದ್ರ ಆಹಾರ ಸುರಕ್ಷತೆ ಸಚಿವಾಲಯವು ಪರೀಕ್ಷೆಗೆ ಕಳುಹಿಸಿತ್ತು. ಕಳೆದ ಮೇ ಮತ್ತು ಜುಲೈನಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಶೇ.12ರಷ್ಟು ಮಾದರಿಗಳು ಅಂದರೆ 474 ಮಾದರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂಬ ಸತ್ಯ ಬಹಿರಂಗವಾಗಿದೆ. ಇದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ಏತನ್ಮಧ್ಯೆ, MDH ಮತ್ತು ಎವರೆಸ್ಟ್ ಕಂಪನಿಗಳು ತಮ್ಮ ಉತ್ಪನ್ನಗಳು ಗುಣಮಟ್ಟ ಮತ್ತು ಸುರಕ್ಷಿತ ಎಂದು ವಿವರಣೆ ನೀಡಿವೆ. ಸ್ಯಾಂಪಲ್‌ಗಳ ಪರೀಕ್ಷೆ ವಿಚಾರದ ಬಗ್ಗೆ ಸ್ಪಷ್ಟನೆ ನೀಡದ ಆಹಾರ ಸುರಕ್ಷತಾ ಇಲಾಖೆ, ಸಂಬಂಧಪಟ್ಟ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ದೇಶ

ಡಿ.ಸಿ.ಪ್ರಕಾಶ್

ಏಕರೂಪ ನಾಗರಿಕ ಸಂಹಿತೆ ಸೇರಿದಂತೆ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿಯವರ ಮಾತುಗಳು ಪ್ರತ್ಯೇಕತಾವಾದಿ ಉದ್ದೇಶವನ್ನು ಹೊಂದಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಕೆಂಪು ಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದರು. ಆಗ, ಏಕರೂಪ ನಾಗರಿಕ ಸಂಹಿತೆ, ಒಂದು ದೇಶ, ಒಂದು ಚುನಾವಣೆಯಂತಹ ವಿಷಯಗಳ ಕುರಿತು ಅವರ ಅಭಿಪ್ರಾಯಗಳು ವಿವಾದಕ್ಕೆ ಒಳಗಾಗಿದೆ.

‘ಒಂದು ದೇಶ, ಒಂದು ಚುನಾವಣೆ’ ಕುರಿತು ಮಾತನಾಡಿದ ಪ್ರಧಾನಿ ಮೋದಿ, ‘ದೇಶದಲ್ಲಿ ಹಲವು ಚುನಾವಣೆಗಳು ಅಭಿವೃದ್ಧಿಗೆ ಅಡ್ಡಿಯಾಗಿವೆ. ಆದ್ದರಿಂದ, ಒಂದು ದೇಶ, ಒಂದು ಚುನಾವಣೆ ಎಂಬ ಕಲ್ಪನೆಯನ್ನು ರಾಷ್ಟ್ರವು ಅಳವಡಿಸಿಕೊಳ್ಳುವುದು ಅವಶ್ಯಕ. ದೇಶದ ಅಭಿವೃದ್ಧಿಗಾಗಿ ಈ ವಿಚಾರವನ್ನು ಒಪ್ಪಿಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.

ಇದಲ್ಲದೆ, ನಮ್ಮ ದೇಶದ ಸಾಮಾನ್ಯ ನಾಗರಿಕ ಕಾನೂನಿನ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಬಾರಿ ಮಾತನಾಡಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ನಾಗರಿಕ ಕಾನೂನುಗಳು ಧಾರ್ಮಿಕವಾಗಿವೆ ಎಂದು ಬಹುಪಾಲು ಜನರು ನಂಬುತ್ತಾರೆ. ನಮ್ಮ ದೇಶವು 75 ವರ್ಷಗಳಿಂದ ಧಾರ್ಮಿಕ ನಾಗರಿಕ ಕಾನೂನುಗಳೊಂದಿಗೆ ಪ್ರಯಾಣಿಸುತ್ತಿದೆ. ಈ ಕಾನೂನುಗಳು ದೇಶವನ್ನು ಧಾರ್ಮಿಕ ರೀತಿಯಲ್ಲಿ ವಿಭಜಿಸುತ್ತವೆ. ಅಲ್ಲದೆ, ಇದು ಜನರಲ್ಲಿ ತಾರತಮ್ಯವನ್ನು ಉತ್ತೇಜಿಸುತ್ತದೆ.

ಆದ್ದರಿಂದ, ನಾವು ಸಿವಿಲ್ ಕಾನೂನನ್ನು ಬಿಟ್ಟು ‘ಸೆಕ್ಯುಲರ್’ ಸಿವಿಲ್ ಕಾನೂನಿನ ಕಡೆಗೆ ಹೋಗಬೇಕಾಗಿದೆ. ಜಾತ್ಯತೀತ ನಾಗರಿಕ ಕಾನೂನು ಇಂದಿನ ಅಗತ್ಯವಾಗಿದೆ. ಸಂವಿಧಾನ ರಚನೆಕಾರರ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ’ ಎಂದು ಪ್ರಧಾನಿ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದರು.

ಪ್ರಧಾನಿ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣವನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ‘ಜಾತ್ಯತೀತ ನಾಗರಿಕ ಕಾನೂನು ಇರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಟೀಕಿಸುವ ವಿರೋಧ ಪಕ್ಷಗಳು ಇಂದು ‘ಜಾತ್ಯತೀತ ನಾಗರಿಕ ಕಾನೂನು’ ಕುರಿತು ಪ್ರಧಾನಿಯವರು ಮಾತನಾಡಿದ ಮೇಲೆ ಬಾಯಿ ಮುಚ್ಚಿಕೊಂಡಿದೆ. ಜಾತ್ಯತೀತ ನಾಗರಿಕ ಕಾನೂನು ಬೇಡ ಎಂದು ವಿರೋಧ ಪಕ್ಷಗಳು ಹೇಳಬಹುದೇ?’ ಎಂದು ಬಿಜೆಪಿಗರು ಪ್ರಶ್ನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ‘ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದು, ಮೂರನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಿರುವ ನರೇಂದ್ರ ಮೋದಿ ಅವರು ಹತ್ತು ವರ್ಷಗಳ ಆಡಳಿತದ ಸಾಧನೆಗಳ ಬಗ್ಗೆ ಮಾತನಾಡದೆ, ದೇಶದಲ್ಲಿ ವಿಭಜನೆ ಉಂಟು ಮಾಡುವಂತಹ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ’ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.

ಅಲ್ಲದೆ, ‘ಸಂಸತ್ ಚುನಾವಣೆಗಳು ಮುಗಿದಿದ್ದರೂ, ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರದ ಮೂಡ್‌ನಿಂದ ಇನ್ನೂ ಹೊರಬಂದಿಲ್ಲ ಎಂಬುದನ್ನು ಅವರ ಸ್ವಾತಂತ್ರ್ಯ ದಿನದ ಭಾಷಣ ತೋರಿಸುತ್ತದೆ. ಬಿಜೆಪಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದಂತೆ ಪ್ರಧಾನಿ ಮಾತನಾಡಿದ್ದಾರೆ’ ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ‘ತಾನು ಮಾನವನಲ್ಲ ಎಂದು ಹೇಳಿಕೊಳ್ಳುವ ಪ್ರಧಾನಿಯ ದುಷ್ಟ ಭಾವನೆಗಳಿಗೆ ಮತ್ತು ಮಾನಹಾನಿಯ ಅಭಿಪ್ರಾಯಗಳಿಗೆ ಮಿತಿಯೇ ಇಲ್ಲವಾಗಿದೆ. ಇದು ಕೆಂಪುಕೋಟೆಯಲ್ಲಿ ಮಾಡಿದ ಭಾಷಣದ ಮೂಲಕ ಬಹಿರಂಗವಾಗಿದೆ’ ಎಂದು ಕಿಡಿಕಾರಿದ್ದಾರೆ.

ಅಲ್ಲದೆ, ‘ದೇಶದಲ್ಲಿ ಮತೀಯ ನಾಗರಿಕ ಕಾನೂನುಗಳು ಜಾರಿಯಲ್ಲಿವೆ ಎಂದು ಪ್ರಧಾನಿ ಮೋದಿ ಹೇಳಿರುವ ಅಭಿಪ್ರಾಯವು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿದ ಘೋರ ಅವಮಾನವಾಗಿದೆ. ಹೆಚ್ಚಿನ ದೇಶಗಳು ವೈವಿಧ್ಯತೆಯನ್ನು ಗುರುತಿಸುವತ್ತ ಸಾಗುತ್ತಿವೆ. ಬಹುಮುಖಿ ವ್ಯತ್ಯಾಸಗಳು ತಾರತಮ್ಯವನ್ನು ಸೂಚಿಸುವುದಿಲ್ಲ. ಬದಲಿಗೆ ಬಲಿಷ್ಠ ಪ್ರಜಾಪ್ರಭುತ್ವದ ಸಂಕೇತವಾಗಿರುತ್ತದೆ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಮನೋಜ್ ಝಾ ಅವರು, ‘ಭಾರತಕ್ಕೆ ಒಬ್ಬರೇ ಪ್ರಧಾನಿ ಇದ್ದಾರೆ… ವಿರೋಧ ಪಕ್ಷಗಳಿಗೆ ಮತ ಹಾಕಿದವರಿಗೆ ಪ್ರತ್ಯೇಕ ಪ್ರಧಾನಿ ಇಲ್ಲ ಎಂಬುದನ್ನು ಮೋದಿ ಅರಿತುಕೊಳ್ಳಬೇಕು. ಪ್ರತಿ ಬಾರಿಯೂ ನಾವು ಮೋದಿಯವರಿಂದ ವಿಶಾಲ ಮನೋಭಾವವನ್ನು ನಿರೀಕ್ಷಿಸುತ್ತೇವೆ. ಆದರೆ, ನಮಗೆ ಸಿಗುವುದು ನಿರಾಶೆ ಮಾತ್ರ. ಅವರು ಮಾಡಿದ್ದು ರಾಜಕೀಯ ಭಾಷಣ ಅಷ್ಟೆ’ ಎಂದು ಟೀಕಿಸಿದ್ದಾರೆ.

ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರು, ‘ಆರ್ ಎಸ್ ಎಸ್ ನ ಪ್ರತ್ಯೇಕತಾವಾದಿ ಅಜೆಂಡಾ ಆಧರಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ’ ಎಂದು ಟೀಕಿಸಿದ್ದಾರೆ. ‘ಪ್ರಧಾನಿಯವರು ಒಂದು ದೇಶ ಒಂದು ಚುನಾವಣೆಯ ಬಗ್ಗೆ ಮಾತನಾಡುತ್ತಾರೆ. ಮೊದಲು, ಅವರು ನ್ಯಾಯಯುತ ಮತ್ತು ಮುಕ್ತ ಚುನಾವಣೆಗಳು ನಡೆಯುವುದನ್ನು ಖಚಿತಪಡಿಸಬೇಕು’ ಎಂದು ವಿರೋಧ ಪಕ್ಷಗಳಿಂದ ಧ್ವನಿ ಎತ್ತಲಾಗಿದೆ.

ದೇಶ

ಪ್ರಧಾನಿ ಮೋದಿಯವರಂತೆ ಒಡೆದು ಆಳುವ ವ್ಯಕ್ತಿ ಹಿಂದೆಂದೂ ಕಾಣಲಿಲ್ಲ ಎಂದು ರಾಜ್ಯಸಭಾ ಸದಸ್ಯ ಹಾಗೂ ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ಅಧ್ಯಕ್ಷ ಕಪಿಲ್ ಸಿಬಲ್ ಹೇಳಿದ್ದಾರೆ.

ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈಗಿರುವ ಕಾನೂನುಗಳಲ್ಲಿ ಜಾತೀಯತೆ ಇದ್ದು, ಅದಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಾಗುವುದು ಎಂದರು.

ಅಲ್ಲದೆ, ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಜನರನ್ನು ಕೆರಳಿಸಿದೆ ಎಂದೂ ಅವರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಅನೇಕ ವಿರೋಧ ಪಕ್ಷದ ನಾಯಕರು, ಮೋದಿಯವರು ತಮ್ಮ ಬಗ್ಗೆ ಮಾತನಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸುವ ಮೂಲಕ, ಮೋದಿ ಆಡಳಿತದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಪಟ್ಟಿ ಮಾಡಿ ಹೇಳಿದ್ದಾರೆ.

ಆ ರೀತಿಯಲ್ಲಿ, ಮೋದಿಯವರ ವಿವಾದಾತ್ಮಕ ಭಾಷಣದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಹಾಗೂ ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ಅಧ್ಯಕ್ಷ ಕಪಿಲ್ ಸಿಬಲ್, “ಭಾರತದ ಇತಿಹಾಸವನ್ನು ಅವಲೋಕಿಸಿದರೆ ಈಗಿನ ಪ್ರಧಾನಿಯವರಂತೆ ಒಡೆದು ಆಳುವ ವ್ಯಕ್ತಿ ಹಿಂದೆಂದೂ ಇರಲಿಲ್ಲ.

ಉತ್ತರ ಪ್ರದೇಶದಲ್ಲಿ, ಅಂಗಡಿ ಮಾಲೀಕರ ಹೆಸರನ್ನು ನಾಮಫಲಕದಲ್ಲಿ ಬರೆಯುವಂತೆ ಹೇಳುವುದು, ಬಾಂಗ್ಲಾದೇಶದಿಂದ ಭಾರತಕ್ಕೆ ಬರಲು ಬಯಸುವ ಹಿಂದೂ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಮಾಡುವುದು, ಜೊತೆಗೆ ಏಕರೂಪ ನಾಗರಿಕ ಸಂವಿತೆಯ ಬಗ್ಗೆ ಪ್ರಸ್ತಾಪ ಎಲ್ಲವೂ ಪ್ರತ್ಯೇಕತಾವಾದಿ ರಾಜಕೀಯವಲ್ಲದೆ ಮತ್ತೇನು.

ಕೇಂದ್ರ ಬಿಜೆಪಿ ಒಳನುಸುಳುವಿಕೆಯ ಬಗ್ಗೆ ಮಾತನಾಡುತ್ತದೆ. ಆದರೆ ನಿಜವಾಗಿ ನುಸುಳುತ್ತಿರುವವರು ಯಾರು? ಇವರೆ, ರಾಜಕೀಯ ವ್ಯವಸ್ಥೆಯೊಳಗೆ ನುಸುಳಿ ಪ್ರಜಾಪ್ರಭುತ್ವದ ತಳಹದಿಯನ್ನು ಹತ್ತಿಕ್ಕುತ್ತಿದ್ದಾರೆ” ಎಂದು ಹೇಳಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್

ಭಾರತದ ಸಂವಿಧಾನವು ಈ ಸಮಾಜದಲ್ಲಿ ಧಾರ್ಮಿಕ ಸಾಮರಸ್ಯವನ್ನು ಮತ್ತು ಸಮಾನತೆಯನ್ನು ಬೆಳೆಸಿದೆ. ಅದಕ್ಕಾಗಿಯೇ ಆ ಸಮಾನತೆಯನ್ನು ಒಪ್ಪಿಕೊಳ್ಳಲು ಆರ್‌ಎಸ್‌ಎಸ್ (RSS) ನಿರಾಕರಿಸುತ್ತಿದೆ.

ಭಾಷೆಯಿಂದ, ಪದ್ಧತಿಗಳಿಂದ, ನಮ್ಮ ಪೂರ್ವಜರ ಮಾರ್ಗಗಳನ್ನು ಅಳವಡಿಸಿಕೊಳ್ಳುವುದರಿಂದ ಇತಿಹಾಸ, ಪ್ರೀತಿ ಮತ್ತು ಜ್ಞಾನ ಬೆಳೆಯಬೇಕೆ ಹೊರತು, ಗುಲಾಮಗಿರಿ ಬೆಳೆಯಬಾರದು ಎಂಬುದನ್ನು ಕಳೆದ 1,000 ವರ್ಷಗಳ ರಾಜಕೀಯದಿಂದ ನಾವು ಕಲಿತಿದ್ದೇವೆ.

ಅದರ ಭಾಗವಾಗಿಯೇ ಡಾ.ಬಿ.ಆರ್.ಅಂಬೇಡ್ಕರ್ (Dr.B.R.Ambedkar) ಅವರು ಸಂವಿಧಾನದಲ್ಲಿ ಸ್ವಯಂ ನಿರ್ಣಯದ ಹಕ್ಕು ಮತ್ತು ನಿಮ್ಮ ಇಷ್ಟದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಒತ್ತಿ ಹೇಳಿದರು. ಈ ಕ್ರಮದಿಂದಾಗಿ ಧಾರ್ಮಿಕ ಸಾಮರಸ್ಯವನ್ನು ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯವಸ್ಥೆ ಈ ಸಮಾಜದಲ್ಲಿ ಚಿಗುರೊಡೆಯಿತು. ಅದಕ್ಕಾಗಿಯೇ ಆ ಸಮಾನತೆಯನ್ನು ಒಪ್ಪಿಕೊಳ್ಳಲು ಆರ್‌ಎಸ್‌ಎಸ್ ನಿರಾಕರಿಸಿದೆ.

ಆರ್‌ಎಸ್‌ಎಸ್ ಹುಟ್ಟಿನ ಆಧಾರದ ಮೇಲೆ ಜನರ ನಡುವೆ ವಿಭಜನೆಯನ್ನು ಸೃಷ್ಟಿಸುವ… ಮನು ಧರ್ಮವನ್ನು ಉತ್ತೇಜಿಸುವ ಸಂಘಟನೆಯಾಗಿದೆ. ಅಲ್ಲದೆ, ಉತ್ತರ ಪ್ರದೇಶದ ಬಾಬರಿ ಮಸೀದಿ ಧ್ವಂಸಕ್ಕೆ ಮತ್ತು ಭಾರತದ ಹಲವೆಡೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳಲು ಮೂಲ ಕಾರಣವಾಗಿದೆ.

ಆರ್‌ಎಸ್‌ಎಸ್ ಆರಂಭವಾಗಿ 98 ವರ್ಷಗಳಾಗಿವೆ. ಇನ್ನು ಒಂದು ತಿಂಗಳಲ್ಲಿ 99ನೇ ವರ್ಷ ಪೂರ್ಣಗೊಳ್ಳಲಿದೆ. ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಈ ಸಂಘಟನೆಯನ್ನು ಆರಂಭಿಸಲಾಗಿತ್ತು. ಅದರ ಪ್ರತ್ಯೇಕತಾವಾದವು ಕೂಡ ತುಂಬಾ ಹಳೆಯದ್ದೆ.

ಇಲ್ಲಿ ಪ್ರಾಚೀನತೆ ಎಂಬುದು ಸಂಸ್ಕೃತಿಯಲ್ಲ! ಪ್ರತ್ಯೇಕತೆಯಾಗಿ ಕಾಣಿಸಿಕೊಳ್ಳುತ್ತದೆ. ಕಾರಣ ಆರ್‌ಎಸ್‌ಎಸ್ ಎಲ್ಲರಿಗೂ ಆಡಳಿತ ನಡೆಸಲು ಅವಕಾಶ ನೀಡುವುದಿಲ್ಲ. ಎಲ್ಲರಿಗೂ ಎಲ್ಲಾ ಹಕ್ಕುಗಳನ್ನು ಹೊಂದಲು ಅವಕಾಶ ನೀಡುವುದಿಲ್ಲ. ಅದಕ್ಕೆ ಅತ್ಯುತ್ತಮ ಪುರಾವೆ ಎಂದರೆ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಭಾರತೀಯ ಸಂವಿಧಾನವನ್ನು ಮೊದಲಿನಿಂದಲೂ ನಾಶಮಾಡಲು ಬಯಸುವ ಗುಂಪು ಆರ್‌ಎಸ್‌ಎಸ್ ಆಗಿರುವುದು.

ಅಂದು ಕೇವಲ ಕೂಗಾಟವಾಗಿದ್ದ ಪ್ರತಿಭಟನೆ, ಈಗ ಅಧಿಕಾರವನ್ನು ವಶಪಡಿಸಿಕೊಳ್ಳುವ ಮೂಲಕ ಶಾಸನ ತಿದ್ದುಪಡಿಯಾಗಿ ಬದಲಾಗಿದೆ. ಅಲ್ಪಸಂಖ್ಯಾತರಿಗೆ ಹಕ್ಕು ನೀಡುವ ವಿವಿಧ ಕಾನೂನುಗಳಲ್ಲಿ ಬಿಜೆಪಿ ಬದಲಾವಣೆ ತರಲು ಆರ್‌ಎಸ್‌ಎಸ್‌ನ ಸಿದ್ಧಾಂತವೇ ಕಾರಣವಾಗಿದೆ.

ಆರ್‌ಎಸ್‌ಎಸ್ ಬಿಜೆಪಿಯ ಮೂಲಾಧಾರವಾಗಿದೆ. ಇಂದು ಬಿಜೆಪಿಯ ನೇತೃತ್ವ ವಹಿಸಿರುವ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಲ್ಲರೂ ಆರ್‌ಎಸ್‌ಎಸ್‌ನ ಕಟ್ಟಾ ಅನುಯಾಯಿಗಳೇ.

ಆ ಕಾರಣದಿಂದಲೆ, ಆಡಳಿತ ಶಕ್ತಿಯೊಂದಿಗೆ ಕಾನೂನನ್ನು ಬದಲಾಯಿಸಿದರೆ ಸಾಲದು… ಅಲ್ಪಸಂಖ್ಯಾತರನ್ನು ಗುಲಾಮರನ್ನಾಗಿ ಮಾಡಿದರೆ ಸಾಲದು… ಸೈದ್ಧಾಂತಿಕ ಹೇರಿಕೆಯ ಅಗತ್ಯವಿದೆ ಎಂಬ ದೃಷ್ಟಿಯಿಂದ ಹೊಸ ಶಿಕ್ಷಣ ನೀತಿ, ರಾಜ್ಯ ಸರ್ಕಾರದ ಪಠ್ಯಕ್ರಮಗಳಲ್ಲಿ ಬದಲಾವಣೆ ಸೇರಿದಂತೆ ಅನೇಕ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಡೆಸುತ್ತಿದೆ.

ಅಂತಹ ಚಟುವಟಿಕೆಗಳ ಮುಂದುವರಿಕೆಯಾಗಿ, ಮಧ್ಯಪ್ರದೇಶದ ಉನ್ನತ ಶಿಕ್ಷಣ ಪಠ್ಯಕ್ರಮದಲ್ಲಿ ಆರ್‌ಎಸ್‌ಎಸ್ ನಾಯಕರ ಪುಸ್ತಕಗಳನ್ನು ಸೇರಿಸುವುದೂ ಆಗಿದೆ. ಈ ನಡೆ ತಪ್ಪು ಎಂದು ವಿರೋಧ ಪಕ್ಷಗಳು ಪ್ರತಿಪಾದಿಸುತ್ತಿದ್ದರೆ, ಸಂಸ್ಕೃತಿ ಬೆಳೆಸುವುದೇ ಆರ್‌ಎಸ್‌ಎಸ್‌ ಉದ್ದೇಶ ಎಂದು ಬಿಜೆಪಿ ತಿರುಚಿ ಹೇಳುತ್ತಿದೆ.

ಹೀಗಾಗಿ, ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶದ ಸಚಿವ ವಿಶ್ವಾಸ್ ಕೈಲಾಶ್ ಸಾರಂಗ್, “ಮುಂದಿನ ಪೀಳಿಗೆಗೆ ನಮ್ಮ ಹಿಂದಿನ ಸಂಸ್ಕೃತಿಯನ್ನು ಕಲಿಸುವುದು ತಪ್ಪೇ? ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.

ಈ ಮೂಲಕ, ಆರ್‌ಎಸ್‌ಎಸ್‌ನ ಮೂಲಭೂತ ರಾಜಕೀಯವಾದ ವಿಭಜನೆಯನ್ನು ಸಾಂಸ್ಕೃತಿಕೀಕರಣಗೊಳಿಸಿ ಜನರನ್ನು ದಿಕ್ಕು ತಪ್ಪಿಸುವ ಕೃತ್ಯವನ್ನು ಇತಿಹಾಸಕಾರರು ಮತ್ತು ರಾಜಕೀಯ ನಾಯಕರು ತೀವ್ರವಾಗಿ ಟೀಕಿಸುತ್ತಿದ್ದಾರೆ.