ದೇಶ Archives » Page 6 of 53 » Dynamic Leader
October 23, 2024
Home Archive by category ದೇಶ (Page 6)

ದೇಶ

ದೇಶ

ಹೈದರಾಬಾದ್: ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅದರ ನಾಯಕ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು.

ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಯೋಜನೆಗಳನೆಲ್ಲ ಅನುಷ್ಠಾನಕ್ಕೆ ತರುತ್ತಿದ್ದಾರೆ. ಟಿಡಿಪಿ ಮತ್ತೆ ಅಧಿಕಾರಕ್ಕೆ ಬಂದರೆ ‘ಅಣ್ಣಾ ಕ್ಯಾಂಟೀನ್’ (Anna Canteen) ತೆರೆಯಲಾಗುವುದು ಎಂದು ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದರು. ಅದರಂತೆ ಇಂದು ಆಂಧ್ರಪ್ರದೇಶದ 14 ಜಿಲ್ಲೆಗಳಲ್ಲಿ ‘ಅಣ್ಣ ಕ್ಯಾಂಟೀನ್’ ತೆರೆಯಲಾಗಿದೆ.

ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ 3 ವೇಳೆಯೂ 5 ರೂಪಾಯಿಗೆ ರುಚಿಕರವಾದ ಆಹಾರವನ್ನು ನೀಡಲಾಗುತ್ತದೆ. ಪ್ರತಿದಿನ ಒಂದು ಲಕ್ಷ ಮಂದಿ ಆಹಾರ ಸೇವಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರವು ಉತ್ತಮ ಗುಣಮಟ್ಟದ ಮತ್ತು ರುಚಿಕರವಾಗಿರಬೇಕು ಎಂದು ಆದೇಶಿಸಲಾಗಿದೆ. ರಾಜ್ಯದ ಹಲವೆಡೆ ‘ಅಣ್ಣಾ ಕ್ಯಾಂಟೀನ್’ ತೆರೆಯಲಾಗುವುದು ಎಂದು ಅಧಿಕಾರಿಗಳಿಂದ ತಿಳಿದುಬಂದಿದೆ.

ತಮಿಳುನಾಡಿನಲ್ಲಿ ‘ಅಮ್ಮ ಕ್ಯಾಂಟೀನ್’ ಕರ್ನಾಟಕದಲ್ಲಿ ‘ಇಂದಿರಾ ಕ್ಯಾಂಟೀನ್’ ಇದೀಗ ಆಂಧ್ರಪ್ರದೇಶದಲ್ಲಿ ಅಣ್ಣಾ ಕ್ಯಾಂಟೀನ್ ತೆರೆದಿರುವುದು ಗಮನಾರ್ಹ.

ದೇಶ

ನವದೆಹಲಿ: “ಭಾರತ 2047ರಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ದೇಶದ ಜನತೆ ಅಖಂಡ ಭಾರತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳಬೇಕು” ಎಂದು ಪ್ರಧಾನಿ ಮೋದಿ ಅವರು ತಮ್ಮ ಸ್ವಾತಂತ್ರ್ಯ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ‘ಭಾರತ್ ಮಾತಾ ಕೀ ಜೈ’ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು.

ಪ್ರಧಾನಿ ಮೋದಿಯ ಭಾಷಣ: “ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ದೇಶಕ್ಕಾಗಿ ಪ್ರಾಣ ನೀಡಿದವರನ್ನು ನಾನು ಮೆಚ್ಚುತ್ತೇನೆ. ಅವರಿಗೆ ನಮಸ್ಕರಿಸೋಣ. ಅವರೇ ನಮ್ಮೆಲ್ಲರಿಗೂ ಸ್ವಾತಂತ್ರ್ಯದ ಗಾಳಿಯನ್ನು… ಉಸಿರಾಡುವ ಹಕ್ಕನ್ನು ತಂದುಕೊಟ್ಟವರು. ತ್ಯಾಗ ಮಾಡಿದವರಿಗೆ ನಾವು ಋಣಿಯಾಗಿದ್ದೇವೆ. ದೇಶವನ್ನು ರಕ್ಷಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಹಲವರು ಶ್ರಮಿಸುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನಾವು ಪ್ರಕೃತಿ ವಿಕೋಪದಿಂದ ತತ್ತರಿಸಿದ್ದೇವೆ. ನಮ್ಮ ದೇಶ ವಿಪತ್ತುಗಳಿಂದ ಸಂತ್ರಸ್ತರಾದವರ ಬೆಂಬಲಕ್ಕೆ ನಿಂತಿದೆ. ದೇಶದ ಅಭಿವೃದ್ಧಿಗೆ ರೈತರು, ಸೈನಿಕರು ಶ್ರಮಿಸಿದ್ದಾರೆ. ವಯನಾಡು ಭೂಕುಸಿತ ಸಂತ್ರಸ್ತರ ಜೊತೆಗಿರೋಣ. 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ದೇಶದ ಜನರು ಅಖಂಡ ಭಾರತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳಬೇಕು.

ಭಾರತ ಹಲವು ವರ್ಷಗಳ ಕಾಲ ವಸಾಹತುಶಾಹಿ ಆಳ್ವಿಕೆಯಲ್ಲಿ ಸಿಲುಕಿಕೊಂಡಿತ್ತು. ದಾಸ್ಯ ಮನೋಭಾವವನ್ನು ತೊರೆಯುವ ಸಮಯವಿದು. 40 ಕೋಟಿ ಭಾರತೀಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಅವರು ಸ್ವಾತಂತ್ರ್ಯವನ್ನು ನಿಜಗೊಳಿಸಿದ್ದಾರೆ.

140 ಕೋಟಿ ಜನರೊಂದಿಗೆ ಸೇರಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸೋಣ. ‘ಜಲ ಜೀವನ್’ ಯೋಜನೆಯಿಂದ 15 ಕೋಟಿ ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ. ‘ಸ್ವಚ್ಛ’ ಯೋಜನೆ ಮೂಲಕ ಎರಡೂವರೆ ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಜನರಿಂದ ಬರುವ ಸಲಹೆಗಳು ಮತ್ತು ಕಾಮೆಂಟ್‌ಗಳು ನನಗೆ ಸ್ಫೂರ್ತಿ ನೀಡುತ್ತವೆ.

ನಮ್ಮ ನ್ಯಾಯಾಂಗದಲ್ಲಿ ಬದಲಾವಣೆ ತರಬೇಕಾಗಿದೆ. 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತ ಎಂಬುದು ಬರೀ ಪದಗಳಲ್ಲ, 140 ಕೋಟಿ ಭಾರತೀಯರ ಸಂಕಲ್ಪ ಮತ್ತು ಕನಸುಗಳ ಪ್ರತಿಬಿಂಬ. ಹವಾಮಾನ ಬದಲಾವಣೆಯ ಪರಿಹಾರಕ್ಕಾಗಿ ವಿಶ್ವದ ರಾಷ್ಟ್ರಗಳು ನಮ್ಮತ್ತ ನೋಡುತ್ತಿವೆ. ಆಡಳಿತಾತ್ಮಕ ಸುಧಾರಣೆಗಳು, ತ್ವರಿತ ನ್ಯಾಯ, ಸಾಂಪ್ರದಾಯಿಕ ಔಷಧದ ಅಭಿವೃದ್ಧಿ ಅತ್ಯಗತ್ಯವಾಗಿದೆ.

ನಾವು ಭಯೋತ್ಪಾದಕರ ವಿರುದ್ಧ ನಿಖರ ದಾಳಿ ನಡೆಸಿದ್ದೇವೆ. ದೇಶವನ್ನು ಬಲಪಡಿಸಲು ನಾವು ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತರುತ್ತಿದ್ದೇವೆ. ಭಯೋತ್ಪಾದನೆ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿದ್ದೇವೆ. ಭಾರತವನ್ನು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವನ್ನಾಗಿ ಮಾಡಬೇಕು.

ನಮ್ಮ ಬಲವಾದ ಬ್ಯಾಂಕಿಂಗ್ ಸುಧಾರಣೆಗಳನ್ನು ಜಗತ್ತು ಗುರುತಿಸಿದೆ. ಸುಧಾರಣೆಗಳು ದೇಶವನ್ನು ಬಲಪಡಿಸುವುದಕ್ಕಾಗಿಯೇ ಹೊರತು, ಪ್ರಚಾರಕ್ಕಾಗಿ ಅಲ್ಲ. ಇಂದಿನ ಯುವಕರು ನಿಧಾನಗತಿಯ ಬೆಳವಣಿಗೆಯನ್ನು ಬಯಸುವುದಿಲ್ಲ. ಅವರು ದೈತ್ಯ ಬೆಳವಣಿಗೆಯನ್ನು ಬಯಸುತ್ತಾರೆ. ಹಿಂದಿನ ಸಂಸ್ಕೃತಿಯಿಂದ ಆಡಳಿತವನ್ನು ಬದಲಾಯಿಸಿದ್ದೇವೆ. ಜನರು ಸರ್ಕಾರದತ್ತ ನೋಡುವ ಸ್ಥಿತಿ ಬದಲಾಗಿದ್ದು, ಸರ್ಕಾರ ಜನರಿಗೆ ಕಲ್ಯಾಣ ಯೋಜನೆಗಳನ್ನು ನೀಡಲು ಮುಂದಾಗಿದೆ.

ಎಲ್ಲಾ ಕ್ಷೇತ್ರಗಳಲ್ಲಿನ ಬೆಳವಣಿಗೆಗೆ ಇರುವ ಎಲ್ಲಾ ಅಡೆತಡೆಗಳನ್ನು ಕೆಡವಲಾಗುವುದು. ಬೆಳವಣಿಗೆ ಮತ್ತು ಪ್ರಗತಿ ಸಾಧಿಸಲು ನ್ಯಾಯ ಮತ್ತು ಪ್ರಾಮಾಣಿಕತೆ ಕೀಲಿಗಳಾಗಿವೆ. ರಸ್ತೆಗಳು, ರೈಲುಗಳು ಮತ್ತು ವಿಮಾನ ಸೇವೆಗಳು ಸುಧಾರಿಸಿವೆ. ಹೊಸ ಕ್ರಿಮಿನಲ್ ಕಾನೂನುಗಳು ನ್ಯಾಯಾಂಗದಲ್ಲಿ ಬದಲಾವಣೆ ತಂದಿದೆ. ಹೊಸ ಕ್ರಿಮಿನಲ್ ಕಾನೂನುಗಳು ತ್ವರಿತ ನ್ಯಾಯದ ವಿತರಣೆಯನ್ನು ಖಚಿತಪಡಿಸುತ್ತದೆ. ಆಡಳಿತದಲ್ಲಿ ಬದಲಾವಣೆ ತರಲು ನಾವು ಬದ್ಧರಾಗಿದ್ದೇವೆ.

ಜನರ ಜೀವನವನ್ನು ಸುಲಭಗೊಳಿಸಲು ನಾವು ಸುಧಾರಣೆಯ ಮಾರ್ಗವನ್ನು ಆರಿಸಿಕೊಂಡಿದ್ದೇವೆ. ಒಟ್ಟಾಗಿ ಕೆಲಸ ಮಾಡುವುದರಿಂದ ಮಾತ್ರ ಸುಧಾರಣೆಗಳನ್ನು ಜಾರಿಗೆ ತರಲು ಸಾಧ್ಯ. ನಾಗರಿಕರ ಅಗತ್ಯತೆಗಳಿಗೆ ಆದ್ಯತೆ ನೀಡಲಾಗುವುದು. ಜನರ ಸೇವೆ ಮಾಡುವುದೇ ನನ್ನ ಗುರಿ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಮೌಲ್ಯ ಏರಿದೆ. ಜನ ನಮ್ಮನ್ನು 3ನೇ ಬಾರಿ ಆಯ್ಕೆ ಮಾಡಿದ್ದಾರೆ. ನಾನು ಅವರಿಗೆ ವಂದಿಸುತ್ತೇನೆ. ಕೊರೊನಾ ವೈರಸ್ ನಂತರ ದೇಶದ ಆರ್ಥಿಕತೆಯನ್ನು ಸುಧಾರಿಸಿದ ದೇಶ ಭಾರತ.

75 ಸಾವಿರ ಹೊಸ ವೈದ್ಯಕೀಯ ಸೀಟ್ ಗಳನ್ನು ಸೃಷ್ಟಿಸಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ನಾವು ಬಯಸುತ್ತೇವೆ. ಕೃಷಿ ಸುಧಾರಣೆಗಳು ಪ್ರಸ್ತುತ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ದೇಶವನ್ನು ನೈಸರ್ಗಿಕ ಆಹಾರ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ವಿಶ್ವ ದರ್ಜೆಯ ಸೆಲ್ ಫೋನ್ ಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬದಲಾಗಿ, ಸ್ಥಳೀಯವಾಗಿ ಉತ್ಪಾದಿಸಲಾಗುತ್ತದೆ. ರಾಜ್ಯ ಸರ್ಕಾರಗಳು ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸಬೇಕು. ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಅಪರಾಧಿಗಳಿಗೆ ಶೀಘ್ರ ಶಿಕ್ಷೆಯಾಗಬೇಕು.

ಭಾರತವು ಪರ್ಯಾಯ ಶಕ್ತಿಯನ್ನು (Alternative energy) ಬಳಸುವ ತಂತ್ರಜ್ಞಾನಗಳನ್ನು ಉತ್ತೇಜಿಸುತ್ತದೆ. 2040ರ ಹೊತ್ತಿಗೆ ಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬೇಕು. 140 ಕೋಟಿ ಜನರ ಪರವಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಅಭಿನಂದನೆಗಳು. 2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಸಿದ್ಧತೆ ನಡೆಸಿದ್ದೇವೆ. ಭ್ರಷ್ಟರ ವಿರುದ್ಧ ಕ್ರಮ ಮುಂದುವರಿಯಲಿದೆ. ಭ್ರಷ್ಟಾಚಾರದ ಮೂಲಕ ಸಾಮಾನ್ಯ ಜನರನ್ನು ಲೂಟಿ ಮಾಡುವ ಸಂಪ್ರದಾಯವನ್ನು ನಿಲ್ಲಿಸಬೇಕು. ಭಾರತ ಬುದ್ಧನ ಕಡೆಗಿದೆ; ಯುದ್ಧದ ಕಡೆಯಲ್ಲ. ಬಾಂಗ್ಲಾದೇಶದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ಭದ್ರತೆಯನ್ನು ಖಾತ್ರಿಪಡಿಸಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.

ದೇಶ

ನವದೆಹಲಿ,
ನಾಳೆ (ಗುರುವಾರ) ದೇಶದಾದ್ಯಂತ ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ಮೋದಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ, ಇಂದು ದೆಹಲಿಯ ಪಾಕಿಸ್ತಾನ ರಾಯಭಾರಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಭಾರ ರಾಯಭಾರಿ ಅಧಿಕಾರಿ ಆ ದೇಶದ ರಾಷ್ಟ್ರಧ್ವಜಾರೋಹಣ ಮಾಡಿದರು. ರಾಯಭಾರಿ ಕಚೇರಿ ಅಧಿಕಾರಿಗಳು, ಅವರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ದೇಶ

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ‘ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ?’ ಎಂಬ ಗೊಂದಲ ಎಲ್ಲರಲ್ಲಿಯೂ ಇದೆ. ಈ ಗೊಂದಲಕ್ಕೆ ಕಾರಣ ಮತ್ತು ಉತ್ತರವನ್ನು ವಿವರವಾಗಿ ನೋಡೋಣ!

1947ರ ಆಗಸ್ಟ್ 15 ರಂದು ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತು. ಇದಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಮತ್ತು ಸ್ವಾತಂತ್ರ್ಯದ ಸಾಧನೆಯನ್ನು ಆಚರಿಸಲು ನಾವು ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತೇವೆ. ಆ ದಿನದಲ್ಲಿ ನಾವು ನಮ್ಮ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರಗೀತೆಯನ್ನು ಹಾಡುತ್ತೇವೆ.

ಆದರೆ ಈಗ ಪ್ರಶ್ನೆ ಅದಲ್ಲ. ಪ್ರತಿ ವರ್ಷ ಈ ದಿನ ಬಂದರೆ ‘ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ? ಎಂಬ ಗೊಂದಲ ಹೆಚ್ಚಿನ ಜನರಿಗೆ ಏಳುವುದು ಸಾಮಾನ್ಯ. ಅಂದರೆ 1947ಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಗಿರುವುದರಿಂದ ನಾಳೆಯ ದಿನವನ್ನು 77ನೇ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಬಹುದೇ ಎಂದು ಉಲ್ಲೇಖಿಸುವವರಿಗೆ ಇಲ್ಲಿದೆ ಸರಿಯಾದ ಉತ್ತರ.

1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಾಗ ಆಗಸ್ಟ್ 15ನ್ನು ಮೊದಲ ಸ್ವಾತಂತ್ರ್ಯ ದಿನವೆಂದು ದಾಖಲಿಸಲಾಗಿತ್ತು. ಆದ್ದರಿಂದ, ಮುಂದಿನ ವರ್ಷ (1948ರಲ್ಲಿ) ನಾವು 2ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದೇವೆ. ಆ ದೃಷ್ಟಿಯಿಂದ, ನಾಳೆಯ ದಿನವನ್ನು 78ನೇ ಸ್ವಾತಂತ್ರ್ಯ ದಿನಾಚರಣೆ ಎಂದು ಲೆಕ್ಕಿಸಲಾಗಿದೆ. ಈ ವರ್ಷ ಸರ್ಕಾರ ಹೊರಡಿಸಿರುವ ಎಲ್ಲ ಪ್ರಕಟಣೆಗಳಲ್ಲಿಯೂ 78ನೇ ಸ್ವಾತಂತ್ರ್ಯ ದಿನಾಚರಣೆ ಎಂದೇ ನಮೂದಿಸಲಾಗಿದೆ.

ಕ್ರೈಂ ರಿಪೋರ್ಟ್ಸ್ ದೇಶ

ಕಳೆದ ಶುಕ್ರವಾರ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯ ಶವ ಪತ್ತೆಯಾಗಿತ್ತು. ಕಣ್ಣು, ಬಾಯಿ, ಖಾಸಗಿ ಭಾಗಗಳಲ್ಲಿ ರಕ್ತಸ್ರಾವವಾಗಿದ್ದು, ಎಡಗಾಲು, ಕುತ್ತಿಗೆ, ಬಲಗೈ ಮತ್ತು ತುಟಿಗಳಿಗೆ ಗಾಯಗಳಾಗಿದ್ದವು. ಶವಪರೀಕ್ಷೆ ವರದಿಯ ಪ್ರಕಾರ, ಕೊಲೆಯ ನಂತರ ಯುವ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.

ತನಿಖೆಯಲ್ಲಿ, ಕೊಲೆ ಆರೋಪಿ ಆಸ್ಪತ್ರೆಗೆ ಆಗಾಗ್ಗೆ ಬರುತ್ತಿದ್ದ ಭದ್ರತಾ ಸ್ವಯಂಸೇವಕ ಎಂಬುದು ಬಹಿರಂಗವಾಗಿದೆ. ಅಲ್ಲದೇ ಕೊಲೆಯಾದ ಬಳಿಕ ಯಾವುದೇ ಟೆನ್ಷನ್ ಇಲ್ಲದೇ, ಓಡಿ ಹೋಗದೆ ರಕ್ತಸಿಕ್ತ ಬಟ್ಟೆಗಳನ್ನು ಒಗೆದ ಆ ವ್ಯಕ್ತಿ, ಪಕ್ಕದ ಭದ್ರತಾ ಕೊಠಡಿಗೆ ಹೋಗಿ ನೆಮ್ಮದಿಯಿಂದ ಮಲಗಿ ನಿದ್ರಿಸಿದ್ದಾನೆ.

ಆ ವ್ಯಕ್ತಿಯ ಶೂ ಮೇಲಿದ್ದ ರಕ್ತದ ಕಲೆಗಳಿಂದ ಆತನೇ ಕೊಲೆಗಾರ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಘಟನೆ ನಡೆದ ದಿನ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ.

ಪಶ್ಚಿಮ ಬಂಗಾಳವನ್ನು ಬೆಚ್ಚಿಬೀಳಿಸಿದ ಕೊಲೆ ಘಟನೆಯ ನಂತರ ಪಶ್ಚಿಮ ಬಂಗಾಳದಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಅಭ್ಯಾಸ ವೈದ್ಯರು ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಆರಂಭಗೊಂಡು ದೇಶಾದ್ಯಂತ ವಿವಿಧ ಆಸ್ಪತ್ರೆಗಳ ವೈದ್ಯರು ಆರೋಪಿಗಳಿಗೆ ತಕ್ಷಣದ ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆ ವಿವಾದ ಎದ್ದ ಬೆನ್ನಲ್ಲೇ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಸಂದೀಪ್ ಘೋಷ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಇಂದು (ಆಗಸ್ಟ್ 13) ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಅಧಿವೇಶನದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಹೆಚ್ಚುತ್ತಿರುವ ರಾಜಕೀಯ ಒತ್ತಡದ ನಡುವೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹತ್ಯೆಗೀಡಾದ ವಿದ್ಯಾರ್ಥಿಯ ಕುಟುಂಬವನ್ನು ಭೇಟಿ ಮಾಡಿ, “ಮುಂದಿನ ಶನಿವಾರದೊಳಗೆ ತನಿಖೆ ಪೂರ್ಣಗೊಳಿಸದಿದ್ದರೆ, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಶಿಫಾರಸು ಮಾಡಲಾಗುವುದು” ಎಂದು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ, ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ವೈದ್ಯರು ತಿಳಿಸಿದ್ದಾರೆ.

ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಪ್ರತಿಭಟನಾ ನಿರತ ವೈದ್ಯಕೀಯ ಸಂಘಗಳ ಜತೆ ಮಾತುಕತೆ ನಡೆಸಿದ್ದಾರೆ. ಆ ಸಮಯದಲ್ಲಿ, “ಘಟನೆಯ ಕುರಿತು ಕೇಂದ್ರ ಗುಪ್ತಚರ ಸಂಸ್ಥೆ ತನಿಖೆ ನಡೆಸಬೇಕು ಮತ್ತು ಕರ್ತವ್ಯದಲ್ಲಿರುವ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು” ಎಂಬ ಬೇಡಿಕೆಗಳನ್ನು ವೈದ್ಯಕೀಯ ಸಂಘದಿಂದ ಮುಂದಿಡಲಾಗಿದೆ.

ಆದರೆ, ಕೇಂದ್ರ ಸಚಿವರ ಜತೆಗಿನ ಮಾತುಕತೆಯಲ್ಲಿ ಸೌಹಾರ್ದಯುತ ಪರಿಹಾರ ಸಿಗದ ಕಾರಣ ಪ್ರತಿಭಟನೆ ಮುಂದುವರಿಸುವುದಾಗಿ ವೈದ್ಯಕೀಯ ಸಂಘಗಳು ಘೋಷಿಸಿವೆ.

ಈ ಹಿನ್ನೆಲೆಯಲ್ಲಿ, ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟವು ಕೋಲ್ಕತ್ತಾ ವೈದ್ಯಕೀಯ ವಿದ್ಯಾರ್ಥಿ ಹತ್ಯಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಈ ಕುರಿತು ಪ್ರಕಟಿಸಿರುವ ಹೇಳಿಕೆಯಲ್ಲಿ, “ಕೋಲ್ಕತ್ತಾದ ಘಟನೆ ನಿರ್ಭಯಾ 2.0. ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ವೈದ್ಯಕೀಯ ಸಂಘಗಳು ಇಂದಿನಿಂದ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಹೀಗಾಗಿ, ಒಪಿಡಿ ಎಂಬ ಹೊರರೋಗಿ ವಿಭಾಗದಲ್ಲಿ ವೈದ್ಯರು ನಿರ್ದಿಷ್ಟ ಸೇವೆಗಳಲ್ಲಿ ಕೆಲಸ ಮಾಡುವುದಿಲ್ಲ.

ಈ ಹೋರಾಟವನ್ನು ಬಲಪಡಿಸಲು ಎಲ್ಲಾ ವೈದ್ಯರು, ತರಬೇತಿ ವೈದ್ಯರು, ಡೀನ್‌ಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳು ಕೈಜೋಡಿಸಬೇಕು” ಎಂದು ಹೇಳಲಾಗಿದೆ. ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟವು ಮುಷ್ಕರವನ್ನು ಘೋಷಿಸಿರುವುದರಿಂದ ದೇಶಾದ್ಯಂತ ಆಸ್ಪತ್ರೆಗಳಲ್ಲಿ ವಿವಿಧ ವಿಭಾಗಗಳು ಪರಿಣಾಮ ಬೀರುವ ವಾತಾವರಣವಿದೆ.

ದೇಶ

ತಿರುವನಂತಪುರಂ: ಪತ್ರಿಕೆಗಳು ಮತ್ತು ಪತ್ರಕರ್ತರ ವಿರುದ್ಧ ಅನಗತ್ಯ ಮಾನನಷ್ಟ ಮೊಕದ್ದಮೆಗಳಿಗೆ ಅವಕಾಶ ನೀಡದಂತೆ ಕೆಳ ನ್ಯಾಯಾಲಯಗಳಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.

ಕೇರಳದ ಆಲುವಾ ಪುರಸಭೆಯ ಮಹಿಳಾ ಕೌನ್ಸಿಲರ್, ಮಲಯಾಳ ಮನೋರಮಾ ದೈನಿಕದ ವಿರುದ್ಧ ಅಪರಾಧ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಲಯಾಳಂ ಮನೋರಮಾ ದಿನಪತ್ರಿಕೆಯ ಪರವಾಗಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎ.ಬದರುದ್ದೀನ್ ಹೊರಡಿಸಿದ ಆದೇಶದಲ್ಲಿ, “ಪತ್ರಿಕಾರಂಗವು ಭಾರತದ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ. ದೇಶದ ದೈನಂದಿನ ವಿದ್ಯಮಾನಗಳನ್ನು ಸಾರ್ವಜನಿಕರಿಗೆ ತಿಳಿಸುವಲ್ಲಿ ಪತ್ರಿಕಾ ಮತ್ತು ಮಾಧ್ಯಮಗಳ ಪಾತ್ರ ಅಪಾರವಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು ಸೆಕ್ಷನ್ 500ರ ಅಡಿಯಲ್ಲಿ, ಪತ್ರಕರ್ತರ ವಿರುದ್ಧ ಅನಗತ್ಯ ಮಾನನಷ್ಟ ಮೊಕದ್ದಮೆ ಹೂಡುವುದು ಜನರ ಹಕ್ಕುಗಳ ಉಲ್ಲಂಘನೆಯೂ ಆಗಿದೆ.

ಪತ್ರಿಕೆಗಳು ಮತ್ತು ಪತ್ರಕರ್ತರ ವಿರುದ್ಧ ಅನಗತ್ಯ ಮಾನನಷ್ಟ ಮೊಕದ್ದಮೆಗಳಿಗೆ ಅವಕಾಶ ನೀಡಬಾರದು. ಕ್ರಿಮಿನಲ್ ನ್ಯಾಯಾಲಯಗಳು ಭವಿಷ್ಯದಲ್ಲಿ ಜಾಗರೂಕರಾಗಿರಬೇಕು. ಈ ಪ್ರಕರಣದಲ್ಲಿ ಮಹಿಳಾ ಪುರಸಭಾ ಸದಸ್ಯೆಯ ಬಗ್ಗೆ ವರದಿ ಮಾಡಿದ ವಿಚಾರದಲ್ಲಿ ಮಲಯಾಳ ಮನೋರಮಾ ವಿರುದ್ಧ ಬಾಕಿ ಇರುವ ಮಾನನಷ್ಟ ಮೊಕದ್ದಮೆ ಅನಗತ್ಯವಾದದ್ದು” ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಇದರಿಂದ ಮಾನನಷ್ಟ ಮೊಕದ್ದಮೆ ರದ್ದಾಗಿದೆ.

ದೇಶ

ಡಿ.ಸಿ.ಪ್ರಕಾಶ್

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ನೇತೃತ್ವದ ಪ್ರಸ್ತುತ ಸರ್ಕಾರವನ್ನು ಉರುಳಿಸಲಾಗಿದ್ದು, ಸೇನೆಯ ಬೆಂಬಲದೊಂದಿಗೆ ವಿರೋಧ ಪಕ್ಷವಾದ ರಾಷ್ಟ್ರೀಯವಾದಿ ಪಕ್ಷ ಸರ್ಕಾರ ರಚಿಸಲಿದೆ ಎಂದು ಘೋಷಿಸಲಾಗಿದೆ. ಆದರೆ, ಅಲ್ಲಿ ಪ್ರತಿಭಟನೆ ಮುಂದುವರಿದಿದೆ. ಅಲ್ಲದೆ, ಅಲ್ಲಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ವಿವಿಧ ನಕಲಿ ಸುದ್ದಿಗಳು ಮತ್ತು ವಿಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.

ರಿಪಬ್ಲಿಕ್ ಟಿವಿ ಇಂತಹ ಸುದ್ದಿಯನ್ನು ಪ್ರಕಟಿಸಿದ ನಂತರ, ಬಾಂಗ್ಲಾದೇಶದ ರಾಷ್ಟ್ರೀಯ ಹಿಂದೂ ಮಹಾಜೋತ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೋಬಿಂದ ಪ್ರಮಾಣಿಕ್ ಅವರು ‘ಹಿಂದೂಗಳ ಮೇಲೆ ದಾಳಿ ನದೆದಿಲ್ಲ, ಬದಲಿಗೆ ಅವರನ್ನು ಮತ್ತು ದೇವಾಲಯಗಳನ್ನು ರಕ್ಷಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಬಿಜೆಪಿ ಮತ್ತು ಹಿಂದುತ್ವ ಗ್ಯಾಂಗ್‌ಗಳು ನಿರಂತರವಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿವೆ.

ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಈ ನಕಲಿ ಸುದ್ದಿಗೆ ಪ್ರತಿಯಾಗಿ ಹಿಂದುತ್ವದ ಗ್ಯಾಂಗ್‌ಗಳು ಭಾರತದಲ್ಲಿ ಮುಸ್ಲಿಮರ ಮೇಲೆ ದಾಳಿ ಮಾಡುವ ಮೂಲಕ ಅರಾಜಕತೆಯಲ್ಲಿ ತೊಡಗಿವೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಗಾಜಿಯಾಬಾದ್ ಪ್ರದೇಶದಲ್ಲಿ ಹಿಂದೂ ಗುಂಪು ಭಾರತೀಯ ಮುಸ್ಲಿಂ ಕೊಳೆಗೇರಿ ನಿವಾಸಿಗಳ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಪಿಂಕಿ ಚೌಧರಿ ನೇತೃತ್ವದ ಹಿಂದೂ ರಕ್ಷಾ ದಳ ಮತ್ತು ಅವರ ಸಹಚರರು, ಅಲ್ಲಿನ ನಿವಾಸಿಗಳ ಹೆಸರುಗಳನ್ನು ಕೇಳಿ, ಅದು ಇಸ್ಲಾಮಿಕ್ ಹೆಸರಾಗಿದ್ದರೆ ಅವರ ಮೇಲೆ ದಾಳಿ ಮಾಡಿ, ಅವರ ಗುಡಿಸಲುಗಳನ್ನು ಧ್ವಂಸಗೊಳಿಸಿ, ‘ಬಾಂಗ್ಲಾದೇಶಿ’ ಎಂದು ಕಿರುಚಾಡುತ್ತಾ ಅವರ ಮೇಲೆ ದಾಳಿ ನಡೆಸಿದ್ದಾರೆ.

ಇದು ಭಾರೀ ಸಂಚಲನ ಮೂಡಿಸಿರುವಾಗಲೇ, ದೆಹಲಿಯಲ್ಲಿ ಬಾಂಗ್ಲಾದೇಶಿಯರ ಮೇಲೆ ದಾಳಿ ನಡೆಸಿದ ತನ್ನ ಸಹಚರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪಿಂಕಿ ಚೌಧರಿ ವಿಡಿಯೋ ಮೂಲಕ ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದ್ದಾನೆ. ಅಲ್ಲದೇ “ಭಾರತದಲ್ಲಿರುವ ಯಾವ ಬಾಂಗ್ಲಾದೇಶಿಯನ್ನೂ ಬಿಡುವುದಿಲ್ಲ, 24 ಗಂಟೆಗಳ ಒಳಗೆ ನಾನು ಯಾರನ್ನೂ ಬಿಡುವುದಿಲ್ಲ, ಅವರು ಉಳಿದುಕೊಂಡಿರುವ ಸ್ಥಳಗಳೆಲ್ಲವೂ ನನಗೆ ಗೊತ್ತಿದೆ” ಎಂದು ಬೆದರಿಕೆ ಹಾಕಿದ್ದಾನೆ.

ಹಿಂದೂ ರಕ್ಷಾ ದಳದ ಪಿಂಕಿ ಚೌಧರಿ ಮತ್ತು ಆತನ ಸಹಚರರು ಅಮಾಯಕ ಮುಸ್ಲಿಮರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಖಂಡನೆ ವ್ಯಕ್ತವಾಗುತ್ತಿದೆ. ಪಿಂಕಿ ಚೌಧರಿ ದಾಳಿ ನಡೆಸಿದ ಜಾಗದಲ್ಲಿ, ಬಾಂಗ್ಲಾದೇಶಿಗರು ಯಾರೂ ಇಲ್ಲ ಎಂದು ಪೊಲೀಸರು ಈಗಾಗಲೆ ವಿವರಣೆ ನೀಡಿದ್ದಾರೆ. ಪೊಲೀಸರು ಅವರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ.

ದೇಶ

ಚೆನ್ನೈ: ಸಾಮಾಜಿಕ ಮಾಧ್ಯಮಗಳು ಜನರ ಕುಂದುಕೊರತೆಗಳನ್ನು ಅರ್ಥಮಾಡಿಕೊಳ್ಳುವ ಸಾಧನವಾಗಿರುವುದರಿಂದ ಅದನ್ನು ನಿಷ್ಕ್ರಿಯಗೊಳಿಸಬಾರದು ಎಂದು ಚೆನ್ನೈ ಹೈಕೋರ್ಟ್ ಹೇಳಿದೆ.

ಗೂಂಡಾ ಕಾಯ್ದೆಯನ್ನು ಪ್ರಶ್ನಿಸಿ ಯೂಟ್ಯೂಬರ್ ‘ಸವುಕ್ಕು’ ಶಂಕರ್ ಅವರ ತಾಯಿ ಸಲ್ಲಿಸಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಸಾಮಾಜಿಕ ಮಾಧ್ಯಮಗಳಿಗೆ ನಿಯಂತ್ರಣದ ನಿಯಮಗಳನ್ನು ತರುವುದು ಅವಶ್ಯಕ. ಅದನ್ನು ನಿಷ್ಕ್ರಿಯಗೊಳಿಸಲು ಯೋಚಿಸುವುದು ಸರಿಯಲ್ಲ.

ಅದು ಬಂದ ನಂತರ, ಸರ್ಕಾರದ ಕಾರ್ಯನಿರ್ವಹಣೆಯ ಬಗ್ಗೆ ಚರ್ಚೆಗಳು ಹೆಚ್ಚುತ್ತಿವೆ; ಆರೋಗ್ಯಕರವಾಗಿದೆ. ಸಾಮಾಜಿಕ ಮಾಧ್ಯಮಗಳು ಜನರ ಕುಂದುಕೊರತೆಗಳನ್ನು ಅರ್ಥಮಾಡಿಕೊಳ್ಳುವ ಸಾಧನವಾಗಿರುವುದರಿಂದ ಅದನ್ನು ನಿಷ್ಕ್ರಿಯಗೊಳಿಸಬಾರದು. 77ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಲಿರುವ ಈ ಸಂದರ್ಭದಲ್ಲಿ ಮತ್ತೆ ಜನರ ದನಿ ದಮನ ಮಾಡಬೇಕೆ? ಎಂದು ನ್ಯಾಯಾಧೀಶರು ಹೇಳಿದ್ದಾರೆ.

ದೇಶ

ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ಒಂದೂವರೆ ವರ್ಷದ ಬಳಿಕ ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ದೆಹಲಿ ಆಮ್ ಆದ್ಮಿ ಸರ್ಕಾರದ ಹೊಸ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಆಮ್ ಆದ್ಮಿ ಪಕ್ಷದ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 2023ರಲ್ಲಿ ಜಾರಿ ಇಲಾಖೆ ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.

ಅವರ ವಿರುದ್ಧ ದೆಹಲಿ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಅಲ್ಲಿ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ನಂತರ, ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಮೇಲ್ಮನವಿಯನ್ನು ಕೂಡ ಮೇ 21 ರಂದು ವಜಾಗೊಳಿಸಲಾಯಿತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಧೀಶರಾದ ಗವಾಯಿ ಮತ್ತು ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯ ಪೀಠವು ದಿನಾಂಕವನ್ನು ಸೂಚಿಸದೆ ಕಳೆದ 6 ರಂದು ಮುಂದೂಡಿದ್ದರು.

ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾಗೆ ಇಂದು (ಆಗಸ್ಟ್ 09) ಜಾಮೀನು ಮಂಜೂರಾಗಿದೆ. ರೂ.10 ಲಕ್ಷ ಪಾವತಿಸುವುದರೊಂದಿಗೆ, ಪಾಸ್‌ಪೋರ್ಟ್ ಒಪ್ಪಿಸುವಂತೆಯೂ ಆದೇಶಿಸಲಾಗಿದೆ.

ದೇಶ

ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾರೆ. ಧಾರ್ಮಿಕ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಬಳಸಲು ಮುಸ್ಲಿಮರು ಚರ ಮತ್ತು ಸ್ಥಿರ ಆಸ್ತಿಯನ್ನು ದಾನ ಮಾಡುತ್ತಾರೆ. ಈ ದೇಣಿಗೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ರಾಜ್ಯಗಳಲ್ಲಿ ವಕ್ಫ್ ಮಂಡಳಿಗಳು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಕ್ಫ್ ಕೌನ್ಸಿಲ್‌ಗಳಿವೆ. ಇದಲ್ಲದೇ ವಕ್ಫ್ ಟ್ರಿಬ್ಯೂನಲ್ ಕೂಡ ಇದೆ.

ವಕ್ಫ್ ಬೋರ್ಡ್ ಕಾಯ್ದೆ 1995ರಲ್ಲಿ, ವಕ್ಫ್ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹಲವಾರು ನಿಬಂಧನೆಗಳನ್ನು ಮಾಡಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ 2013ರಲ್ಲಿ, ಇದರಲ್ಲಿ ಹಲವು ನಿಬಂಧನೆಗಳನ್ನು ಸಡಿಲಗೊಳಿಸಲಾಯಿತು ಮತ್ತು ಉದಾರೀಕರಣಗೊಳಿಸಲಾಯಿತು.

ಪ್ರಸ್ತುತ, 9.4 ಲಕ್ಷ ಎಕರೆ ಪ್ರದೇಶದಲ್ಲಿ 8.7 ಲಕ್ಷ ಆಸ್ತಿಗಳು ದೇಶಾದ್ಯಂತ ವಕ್ಫ್ ಮಂಡಳಿಗಳ ಒಡೆತನದಲ್ಲಿದೆ. ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರುವ ಹೊಸ ಮಸೂದೆಯನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್, ಸಮಾಜವಾದಿ ಸೇರಿದಂತೆ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ.

ಮಸೂದೆಯ ಕೆಲವು ಮುಖ್ಯಾಂಶಗಳು:
ಕುಟುಂಬದ ಆಸ್ತಿಯಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸಲಾಗುವುದು.

ವಕ್ಫ್ ಆಸ್ತಿಗಳನ್ನು ಸರ್ವೆ ಆಯುಕ್ತರಿಂದ ಜಿಲ್ಲಾಧಿಕಾರಿಯವರೆಗೆ ಅಥವಾ ಜಿಲ್ಲಾಧಿಕಾರಿ ನೇಮಿಸಿಸುವ ಉಪ ಜಿಲ್ಲಾಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುವುದು.

ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರು ಭಾಗವಹಿಸುವಿಕೆಯನ್ನು ಖಾತ್ರಿಪಡಿಸಲಾಗುವುದು.

ಬೋರ ಮತ್ತು ಅಗಕಾನಿಗಳಿಗೆ ಪ್ರತ್ಯೇಕ ಮಂಡಳಿ ಸ್ಥಾಪಿಸಲಾಗುವುದು. ವಕ್ಫ್ ಬೋರ್ಡ್‌ಗಳು ಸುನ್ನಿ, ಶಿಯಾ, ಬೋರಾ, ಅಗಾಕಾನಿಗಳು ಮತ್ತು ಆ ಧರ್ಮದ ಹಿಂದುಳಿದ ವರ್ಗಗಳನ್ನು ಒಳಗೊಂಡಿರಬೇಕು.

ಎಲ್ಲಾ ವಕ್ಫ್ ಆಸ್ತಿಗಳನ್ನು ಸಾಮಾನ್ಯ ಕೇಂದ್ರ ತಾಣದ ಮೂಲಕ ನೋಂದಾಯಿಸಬೇಕು. ಅದರ ಮಾಹಿತಿಯನ್ನು ಕ್ರೋಢೀಕರಿಸಬೇಕು.

ಆಸ್ತಿಯನ್ನು ನೋಂದಾಯಿಸುವ ಮೊದಲು, ಕಂದಾಯ ಕಾನೂನುಗಳನ್ನು ಅನುಸರಿಸಬೇಕು. ಮತ್ತು ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಆಲಿಸಲಾಗುವುದು.

ವಕ್ಫ್ ಆಸ್ತಿಗಳಿಗೆ, ಇನ್ನು ವಕ್ಫ್ ಬೋರ್ಡ್‌ಗಳು ಮಾತ್ರ ಅಧಿಕಾರವಲ್ಲ.

ವಕ್ಫ್ ಮಂಡಳಿಯ ಆಸ್ತಿಗಳು ಮತ್ತು ಅದರ ಚಟುವಟಿಕೆಗಳಿಂದ ಸಿಗುವ ಆದಾಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕೇಂದ್ರ ತಾಣದಲ್ಲಿ ಪೋಸ್ಟ್ ಮಾಡಬೇಕು.

ನ್ಯಾಯಮಂಡಳಿ ವ್ಯವಸ್ಥೆಯನ್ನು ಪರಿಷ್ಕರಿಸಲಾಗುವುದು. ಮತ್ತು ನ್ಯಾಯಾಧಿಕರಣದ ತೀರ್ಪನ್ನು ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಬಹುದು. ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಸುಧಾರಣೆಗಳನ್ನು ಕೈಗೊಳ್ಳುವ ಸಲುವಾಗಿ ಹೊಸ ಮಸೂದೆಯಲ್ಲಿ ಹಲವು ತಿದ್ದುಪಡಿಗಳನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ.