ಗಿರೀಶ್ ಕುಮಾರ್, ಯಾದಗಿರಿ
ಯಾದಗಿರಿ: ಲೋಕಸಭೆಯಲ್ಲಿ ಅಸಂವಿಧಾನಿಕವಾಗಿ ಅಂಗೀಕಾರವಾದ ವಕ್ಫ್ ಮಸೂದೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲೆಯ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಮಯದಲ್ಲಿ ಮಾತನಾಡಿದ ಸೈಯದ ಸೈಯದುದ್ದೀನ ಖಾದ್ರಿ ಅವರು, “ವಕ್ಫ್ ಎನ್ನುವುದು ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಅಲ್ಲಾಹನ ಹೆಸರಿನಲ್ಲಿ ಮುಸ್ಲಿಂ ಸಮುದಾದವರು ತಮ್ಮ ಸ್ಥಿರ, ಚರ ಆಸ್ತಿಗಳನ್ನು ದಾನ ಮಾಡಿರುವ ಆಸ್ತಿಯಾಗಿದೆ. ಈ ಆಸ್ತಿಯನ್ನು ಮತ್ತೆ ವಾಪಸ್ ಪಡೆಯಲು, ಮಾರಾಟ ಮಾಡಲು ಸಾಧ್ಯವಿಲ್ಲ. ಈ ವಿಷಯದ ಕುರಿತು ಸುಪ್ರಿಂ ಕೋರ್ಟ್ ಹಲವಾರು ತೀರ್ಪುಗಳಲ್ಲಿ ಅಭಿಪ್ರಾಯ ಪಟ್ಟಿದೆ. ಒಮ್ಮೆ ವಕ್ಫ್ ಎಂದು ಘೋಷಿಸಿದ ಆಸ್ತಿಯು ವಕ್ಫ್ ಆಗಿಯೇ ಉಳಿಯುತ್ತದೆ. ಹಾಗಾಗಿ ಕೂಡಲೇ ಈ ಮಸೂದೆ ರದ್ದುಪಡಿಸಬೇಕು” ಎಂದು ಅವರು ಆಗ್ರಹಿಸಿದರು.
“ಎಲ್ಲಾ ಧರ್ಮಗಳಲ್ಲಿರುವಂತೆ ದಾನವು ಪುಣ್ಯದ ಕೆಲಸವೆಂಬ ಭಾವನೆ ಇಸ್ಲಾಂ ಧರ್ಮದಲ್ಲೂ ಇದ್ದು, ಹಿಂದಿನಿಂದಲೂ ಉಳ್ಳವರು ತಮ್ಮ ಆಸ್ತಿಗಳನ್ನು ದೇವರ ಹೆಸರಿನಲ್ಲಿ ದಾನ ಮಾಡುತ್ತಾ ಬಂದಿರುವ ಪರಂಪರೆ ಇದೆ. ಇದು ಅನೇಕ ಮುಸ್ಲಿಂ ಮತ್ತು ಇತರೆ ರಾಷ್ಟ್ರಗಳಲ್ಲಿಯೂ ಪ್ರಚಲಿತದಲ್ಲಿದೆ. ಭಾರತದಲ್ಲಿ ಹಿಂದಿನಿಂದಲೂ ರಾಜರು ಮತ್ತು ಶ್ರೀಮಂತರು ಭೂಮಿ, ಮಹಲು, ಮತ್ತಿತರ ಸಂಪತ್ತನ್ನು ದಾನ ಮಾಡಿದ್ದು ಮಸೀದಿ, ದರ್ಗಾ, ಸ್ಮಶಾನ, ಮದ್ರಾಸಾ, ಬಡವರಿಗೆ ಮನೆ, ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರೆ ಕಲ್ಯಾಣ ಕೆಲಸಗಳಿಗೆ ಉಪಯೋಗಿಸಲ್ಪಡುತ್ತಿದೆ” ಎಂದರು.
“ಮುಸ್ಲಿಮೇತರರು ಮತ್ತು ಇಬ್ಬರು ಸದಸ್ಯರು ಮಹಿಳೆಯರು ಆಗಿರತಕ್ಕದ್ದು. ರಾಜ್ಯ ವಕ್ಫ್ ಮಂಡಳಿಯಲ್ಲಿ ಒಬ್ಬ ಹಿಂದುಳಿದ ವರ್ಗದ ಮುಸಲ್ಮಾನರು ಆಗಿರಬೇಕು. ವಿವಾದಿತ ವಕ್ಫ್ ಸ್ವತ್ತುಗಳನ್ನು ಪರಿಹರಿಸಲು ರಾಜ್ಯ ಸರ್ಕಾರಗಳು ಉನ್ನತ ಅಧಿಕಾರಿಗಳನ್ನು ನೇಮಿಸಿ ಅವರಿಂದ ತೀರ್ಮಾನಗಳನ್ನು ಪಡೆದುಕೊಳ್ಳುವುದು. ಆ ಅಧಿಕಾರಿಯು ಸಂಬಂಧಿಸಿದ ಭೂಮಿ ಅಥವಾ ಕಟ್ಟಡವು ವಕ್ಫ್ ಸಂಬಂದಿತವೇ ಅಲ್ಲವೇ ಎಂದು ತೀರ್ಮಾನಿಸುತ್ತಾರೆ. ಕನಿಷ್ಠ ಐದು ವರ್ಷ ಇಸ್ಲಾಂ ಅನುಸರಿಸುತ್ತಿರುವ ವ್ಯಕ್ತಿಗಳು ಮಾತ್ರ ವಕ್ಫದಾನ ಮಾಡಬೇಕೆಂಬ ತಿದ್ದುಪಡಿಯು ತೀವ್ರ ಟೀಕೆಗೆ ಒಳಗಾಗಿದೆ. ಇಸ್ಲಾಂ ಧರ್ಮದ ಅನುಯಾಯಿ ಎಂದು ಗುರುತಿಸಲು ಯಾವ ವ್ಯಾಖ್ಯಾನ ಮತ್ತು ಮಾನದಂಡಗಳಿವೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ” ಎಂದರು.
ಮುಖ್ಯವಾಗಿ ಧಾರ್ಮಿಕ ಸ್ವಾತಂತ್ರ್ಯ ಎಲ್ಲಾ ಧರ್ಮಿಯರಿಗೂ ಅನ್ವಯಿಸುವ ಕಾರಣ, ತಮಗಿಷ್ಟ ಬಂದ ಧರ್ಮಕ್ಕೆ ದೇಣಿಗೆ ನೀಡುವ ಹಕ್ಕನ್ನು ಎಲ್ಲರಿಗೂ ಸಂವಿಧಾನವು ಖಾತ್ರಿಗೊಳಿಸಿರುವ ಹಿನ್ನೆಲೆಯಲ್ಲಿ ಇತರೆ ಧರ್ಮಿಯರು ವಕ್ಫ್ ನೀಡುವುದನ್ನು ನಿರ್ಬಂಧಿಸುವುದು ನ್ಯಾಯಸಮ್ಮತವಲ್ಲ. ಯಾವುದೇ ಸರಕಾರಿ ಕಟ್ಟಡಗಳು ವಕ್ಫ್ ಭೂಮಿಯಲ್ಲಿದ್ದರೆ ಅದನ್ನು ವಕ್ಫ್ ಎಂದು ಪರಿಗಣಿಸಲಾಗುದಿಲ್ಲ. ವಕ್ಫ್ ಸಂಬಂಧಿತ ಮುತವಲ್ಲಿಗಳು ಸಚ್ಚಾರಿತ್ರ್ಯ ವಂತರಾಗಿರಬೇಕು, ಆದ್ದರಿಂದ ಲೋಕಸಭೆಯಲ್ಲಿ ಅಂಗೀಕರಿಸಿದ ಅಸಂವಿಧಾನಿಕವಾದ ವಕ್ಫ್ ತಿದ್ದುಪಡಿ ಕಾಯಿದೆ ರದ್ದುಪಡಿಸಿ ಈ ಹಿಂದೆ ಇದ್ದ ವಕ್ಫ್ ಕಾಯಿದೆಯನ್ನು ಮರುಸ್ಥಾಪಿಸುವಂತೆ ಸೂಕ್ತ ಆದೇಶ ಮಾಡಬೇಕು” ಎಂದು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಹಮ್ಮದ ರಫೀಕ ಚೌದ್ರಿ, ಸೈಯದ ಪಾಶ ಪಟೇಲ್, ಶೇಖ್ ಕಲೀಮ್ ತವಕಲ್ಲಿ, ಸೈಯದ ಶಫೀವುದ್ದೀನ ಸರಮಸ್ತ ಸೇರಿದಂತೆ ಸಂಘಟನೆಗಳ ಸಾವಿರಾರು ಜನಸಂಖ್ಯೆ ಭಾಗಿಯಾಗಿದ್ದರು.