ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಯಾದಗಿರಿ Archives » Dynamic Leader
October 23, 2024
Home Posts tagged ಯಾದಗಿರಿ
ರಾಜಕೀಯ

ಗಿರೀಶ್ ಕುಮಾರ್ ಯಾದಗಿರಿ

ಯಾದಗಿರಿ: ಲೋಕಸಭಾ ಚುನಾವಣೆ ಹಾಗೂ ಸುರಪುರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ನಿರ್ಧರಿಸಿದೆ ಎಂದು ದಸಂಸ ಜಿಲ್ಲಾಧ್ಯಕ್ಷ ಶರಣು ಎಸ್.ನಾಟೇಕ‌ರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸಂಸ ರಾಜ್ಯ ಸಮಿತಿ ಆದೇಶದ ಮೇರೆಗೆ ಜಿಲ್ಲೆಯಲ್ಲಿನ ಲೋಕಸಭಾ ಚುನಾವಣೆ ಹಾಗೂ ಸುರಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ರಾಯಚೂರು ಲೋಕಸಭೆ ಅಭ್ಯರ್ಥಿ ಜಿ.ಕುಮಾರನಾಯಕ, ಕಲ್ಬುರ್ಗಿ ಅಭ್ಯರ್ಥಿ ಡಾ.ರಾಧಾಕೃಷ್ಣ ದೊಡ್ಡಮನಿ, ಸುರಪುರ ವಿಧಾನಸಭೆ ಉಪಚುನಾವಣೆ ಅಧಿಕೃತ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಇವರಿಗೆ ಬೆಂಬಲಿಸಲು ಭೀಮವಾದ ಸಮಿತಿಯ ಜಿಲ್ಲಾ, ತಾಲ್ಲೂಕು ವತಿಯಿಂದ ಹೋಬಳಿ ಹಾಗೂ ಹಿರಿಯ ಗ್ರಾಮ, ಮಹಿಳಾ ನಗರ ಘಟಕಗಳ ಪದಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಅಮಾಯಕ ಹೆಣ್ಣುಮಕ್ಕಳ ಮೇಲೆ ನಡೆಸಿರುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ‘ಪೆನ್ ಡ್ರೈವ್’ ಪ್ರಕರಣ ಬಯಲಿಗೆ ಬಂದ್ದಿದ್ದು ಕೂಡಲೇ ಪ್ರಜ್ವಲ್ ರೇವಣ್ಣ ಮತ್ತು ಹೆಚ್.ಡಿ.ರೇವಣ್ಣ ಅವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕೆಂದು ದಸಂಸ ಭೀಮವಾದ ಒತ್ತಾಯಿಸಿದೆ.

ಇದಕ್ಕೂ ಮುನ್ನ ದಸಂಸ ಜಿಲ್ಲಾ ಸಮಿತಿ ವತಿಯಿಂದ ರಾಜ್ಯದ ಹಿರಿಯ ರಾಜಕಾರಣಿ, ಬುದ್ಧ, ಬಸವ ಅಂಬೇಡ್ಕರ್ ಅನುಯಾಯಿಯಾಗಿದ್ದ ದಲಿತ ಚೇತನ ಮಾಜಿ ಸಚಿವ ಹಾಲಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ  ರಾಜ್ಯ ಸಂಚಾಲಕರಾದ ಭೀಮರಾಯ ಸಿಂಧಿಗೇರಿ, ವಿಭಾಗೀಯ ಸಂಚಾಲಕ ಶಿವಶಂಕರ, ಕಲ್ಬುರ್ಗಿ ಜಿಲ್ಲಾ ಸಂಚಾಲಕರಾದ ಕಾಶಿನಾಥ ಶೆಳ್ಳಗಿ, ಮಾರುತಿ ಕಾಳಗಿ, ಯಾದಗಿರಿ ಜಿಲ್ಲಾ ಸಂ. ಸಂಚಾಲಕರಾದ ಮಹಾದೇವಪ್ಪ ಗುರುಸುಣಿಗಿ, ಮಲ್ಲಪ್ಪ ಲಂಡನ್‌ಕರ್, ಮಲ್ಲಿಕಾರ್ಜುನ ತಳವಾರಗೇರಿ. ಸಿದ್ರಾಮ ನಾಯ್ಕಲ್, ತಾ. ಸಂಚಾಲಕ ಶರಣಪ್ಪ ಯರಗೋಳ, ಶರಣು ಹಾಲಳ್ಳಿ ಇನ್ನಿತರರು ಇದ್ದರು.

ಕ್ರೈಂ ರಿಪೋರ್ಟ್ಸ್

ಡಿ.ಸಿ.ಪ್ರಕಾಶ್ ಸಂಪಾದಕರು

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬೆನ್ನಲ್ಲೇ ಕೋಮು ಘರ್ಷಣೆ, ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ರಾಮನವಮಿ ದಿನದಂದು ಜೈ ಶ್ರೀರಾಂ ಘೋಷಣೇ ಕೂಗಿದ್ದವರ ಮೇಲೆ ಹಲ್ಲೆ ಮಾಡಲಾಗಿತ್ತು. ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಬಳಿಕ ನೇಹಾ ಹತ್ಯೆಯಾಗಿದೆ. ಇದೀಗ ಯಾದಗಿರಿಯಲ್ಲಿ ಮುಸ್ಲಿಂ ಯುವಕನಿಂದ ದಲಿತ ಯುವಕನ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣದ ಕಹಿ ನೆನಪು ಇನ್ನೂ ಮಾಸಿಲ್ಲ. ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದೆ. ಅದುಮಾತ್ರವಲ್ಲ, ವಿಚಾರಣೆಯನ್ನು ತ್ವರಿತಗತಿಯಲ್ಲಿ ಮುಗಿಸಿ ಆರೋಪಿಗೆ ಶಿಕ್ಷೆ ಕೊಡಿಸುವ ಸಲುವಾಗಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವುದಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಷ್ಟರಲ್ಲಾಗಲೇ, ಯಾದಗಿರಿಯ ಶಗಾಪುರಪೇಟೆ ಬಡಾವಣೆಯಲ್ಲಿ ಮುಸ್ಲಿಂ ಯುವಕನೊಬ್ಬ ದಲಿತ ಯುವಕನನ್ನು ಹತ್ಯೆ ಮಾಡಿದ್ದಾನೆ. ರಾಕೇಶ್ (22) ಕೊಲೆಯಾದ ಯುವಕ. ರೊಟ್ಟಿ ಕೇಂದ್ರದ ಸದಸ್ಯ ಫಯಾಜ್ ಸೇರಿದಂತೆ ನಾಲ್ವರು ಕೃತ್ಯ ಎಸಗಿದ್ದಾರೆ.

ನಿನ್ನೆ ರಾತ್ರಿ ರೊಟ್ಟಿ ಕೇಂದ್ರಕ್ಕೆ ರೊಟ್ಟಿ ತರಲು ರಾಕೇಶ್ ಹೋಗಿದ್ದ. ಇದೇ ವೇಳೆ ರೊಟ್ಟಿ ಕೇಂದ್ರದ ಫಯಾಜ್ ಜೊತೆ ಜಗಳವಾಗಿದೆ. ರಾಕೇಶ್ ಮನೆಗೆ ಮರಳಿದ ನಂತರ ಮತ್ತೆ ಜಗಳವಾಗಿದ್ದು, ಈ ವೇಳೆ ರಾಕೇಶ್​ನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಆರೋಪ ಮಾಡಲಾಗಿದೆ.

ಮೇಲಿನ ಎರಡೂ ಪ್ರಕರಣಗಳಲ್ಲಿ, ಕೊಲೆ ಮಾಡಿದವರು ಯಾರೇ ಆಗಿದ್ದರು ಕಾನೂನಿನಡಿಯಲ್ಲಿ ಶಿಕ್ಷೆ ಆಗಲಿದೆ. ಕಾನೂನಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತ ಎಂಬ ಭೇದಭಾವ ಇರುವುದಿಲ್ಲ. ಇದರಲ್ಲಿ ಜಾತಿ, ಧರ್ಮ ಬೆರಸುವುದೇಕೆ? ಅಮಾಯಕರ ಸಾವು ನೋವುಗಳ ಮೇಲೆ ರಾಜಕೀಯ ಲೆಕ್ಕಾಚಾರ ಮಾಡುತ್ತಿರುವ ನಾಚಿಕೆಗೆಟ್ಟ ರಾಜಕೀಯ ವ್ಯವಸ್ಥೆಯನ್ನು ಬದಿಗೊತ್ತಿ ಮಾನವೀಯತೆಗೆ ಆದ್ಯತೆ ಕೊಡಿ.

ಪ್ರತಿಭಾರಿಯೂ ಹಿಂದೂ-ಮುಸ್ಲಿಂ ಎಂದು ದ್ವೇಶಕಾರುತ್ತಿರುವ ಕೋಮು ಮನಸ್ಥಿತಿಯ ಮತಾಂಧ ಶಕ್ತಿಗಳು, ಇದೀಗ ದಲಿತ-ಮುಸ್ಲಿಂ ಎಂಬ ಹೊಸ ವರೆಸೆಯನ್ನು ಕೈಗೆತ್ತಿಕೊಂಡಿದೆ. ಪ್ರತಿಯೊಂದನ್ನೂ ಹಿಂದೂ-ಮುಸ್ಲಿಂ ಹಿನ್ನಲೆಯಿಂದಲೇ ನೋಡುವ ಕಾಮಾಲೆ ಕಣ್ಣುಗಳಿಗೆ ರಾಕೇಶ್ ಹಿಂದೂ ಯುವಕ ಎಂದು ಏಕೆ ಗೊತ್ತಾಗುತ್ತಿಲ್ಲ.

ಚುನಾವಣೆ ಸಂದರ್ಭದಲ್ಲಿ ನಡೆದಿರುವ ವೈಯಕ್ತಿಕ ಕೊಲೆಗಳನ್ನು ರಾಜಕೀಯ ಗೊಳಿಸುತ್ತಿರುವ ಮತಾಂಧ ಶಕ್ತಿಗಳು, ರಾಕೇಶ್ ಕೊಲೆಯನ್ನು ದಲಿತ-ಮುಸ್ಲಿಂ ಬಾಂಧವ್ಯವನ್ನು ಹಾಳುಗೆಡವಲು ಬಳಸುತ್ತಿದೆ ಎಂದು ಅನುಮಾನ ವ್ಯಕ್ತವಾಗುತ್ತಿದೆ. ದಲಿತರು ಮತ್ತು ಅಲ್ಪಸಂಖ್ಯಾತರು ಇಂತಹ ಕುತಂತ್ರಗಳಿಗೆ ಬಲಿಯಾಗಬಾರದು. ಅದೇ ಸಂದರ್ಭದಲ್ಲಿ, ದಲಿತ ಯುವಕ ರಾಕೇಶನ ಸಾವಿಗೆ ನ್ಯಾಯ ಸಿಗಬೇಕು; ಫಯಾಜ್ ಮತ್ತು ಇತರರಿಗೆ ಶಿಕ್ಷೆ ಆಗಲೇಬೇಕು. ಇದು ನಮ್ಮ ಒತ್ತಾಯ!

ರಾಜ್ಯ

ಗಿರೀಶ್ ಕುಮಾರ್, ಯಾದಗಿರಿ

ಯಾದಗಿರಿ: ಅಕ್ಷರಧಾತೆ ಸಾವಿತ್ರಿಬಾಯಿ ಪುಲೆ ಅವರ 127ನೇ ಪುಣ್ಯಸ್ಮರಣೆ ಅಂಗವಾಗಿ ಭಾರತೀಯ ಬೌದ್ಧ ಮಹಾಸಭಾ ಹಾಗೂ ಧಮ್ಮ ಮಹಿಳಾ ಪರಿಷತ್ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಇದೇ ಮಾರ್ಚ್ 17 ರಂದು ಸಂವಿಧಾನ ಅರಿವಿನ ಯಾನ ಕಾರ್ಯಕ್ರಮವನ್ನು ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ಯಾದಗಿರಿ ಜಿಲ್ಲಾಧ್ಯಕ್ಷ ಮರೆಪ್ಪ ಬುಕ್ಕಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಬರೆದು 1949 ರಂದು ಈ ದೇಶಕ್ಕೆ ಸಮರ್ಪಣೆ ಮಾಡಿದ ದಿನದಿಂದ ಇಲ್ಲಿಯವರೆಗೆ ಈ ದೇಶದಲ್ಲಿ ಸುವ್ಯವಸ್ಥೆ ಸಮರ್ಪಕವಾಗಿ ಜಾರಿಯಲ್ಲಿದೆ. ಸಂವಿಧಾನದ ಅಡಿಯಲ್ಲಿ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ ಹಾಗೂ ಪ್ರಜಾಸತಾತ್ಮಕ ಮೌಲ್ಯಗಳು ಸಿಕ್ಕಿರುವುದು ನಮಲ್ಲೆರಿಗೂ ಗೊತ್ತಿರುವ ವಿಷಯ.

ಬಾಬಾ ಸಾಹೇಬರು ದೇಶದ ಬಹುಸಂಖ್ಯಾತರಿಗಾಗಿ ಮತ್ತು ಮಹಿಳೆಯರ ವಿಮೋಚನೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು. ಮಹಿಳಾ ಸಮಸ್ಯೆಗಳ ಕುರಿತು ಪ್ರಪ್ರಥಮವಾಗಿ ಧ್ವನಿ ಎತ್ತಿ ಹೋರಾಟ ನಡೆಸಿದರು. ಆದರೆ ಸಂವಿಧಾನದ ಆಶಯಗಳ ಬಗ್ಗೆ ಇವತ್ತಿನ ನಮ್ಮ ಮಹಿಳಾ ಸಮೂಹದಲ್ಲಿ ಮಾಹಿತಿ ಇಲ್ಲದೇ ಇರುವುದು ಬೇಸರದ ಸಂಗತಿಯಾಗಿದೆ. ಬಹುಪಾಲು ಮಹಿಳೆಯರು ಇಂದಿಗೂ ಯಾವುದೋ ಮೌಡ್ಯದ ಸಂಕೋಲೆಯಲ್ಲಿ ಸಿಲುಕಿಕೊಂಡಿದ್ದಾರೆ.

ಹಾಗಾಗಿ, ಭಾರತೀಯ ಬೌದ್ಧ ಮಹಾಸಭಾ ಮತ್ತು ಧಮ್ಮ ಮಹಿಳಾ ಪರಿಷತ್ ವತಿಯಿಂದ ಸಂವಿಧಾನ ಅರಿವಿನ ಯಾನ ಕುರಿತು, ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ಕೆಂಭಾವಿಯಲ್ಲಿ, ನಾಡಿನ ಎಲ್ಲಾ ಮಹಿಳೆಯರನ್ನು ಒಗ್ಗೂಡಿಸಿ, ಇತಿಹಾಸದಲ್ಲಿ ನಮಗೆ ಅರಿವು ಮೂಡಿಸಿ ಅಕ್ಷರದ ಜ್ಞಾನ ನೀಡಿದ ಅಕ್ಷರಧವ್ವ ಮಾತೆ ಸಾವಿತ್ರಿಬಾಯಿ ಪುಲೆ ಅವರ 127ನೇ ಪುಣ್ಯಸ್ಮರಣೆ ಅಂಗವಾಗಿ ಹಾಗೂ ತ್ಯಾಗಮಯಿ ರಮಾತಾಯಿಯವರ ಜೀವನ ಆದರ್ಶ ಹಿಂಬಾಲಿಕೆಗಾಗಿ, ಈ ಕಾರ್ಯಕ್ರಮದ ಮುಖಾಂತರ ಬಾಬಾ ಸಾಹೇಬರ ಆಶಯಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ.ಭಗವಂತ ಅನುವಾರ, ವೆಂಕಟೇಶ ಹೊಸಮನಿ, ನಿಲ್ಲಮ್ಮ ಬಿ.ಮಲ್ಲೆ, ಭೀಮಬಾಯಿ ಕಲ್ಲದೇವನಹಳ್ಳಿ, ರಾಜೇಶ್ವರಿ ಯಡಿಯಪ್ಪ, ರಾಹುಲ್ ಹುಲಿಮನಿ, ಬಸವರಾಜ ಆರ್ ಮಲ್ಪೆ, ಸುರೇಶ್ ಬೋಮ್ಮನ್, ಚಂದ್ರಕಾಂತ ಛಲವಾದಿ, ರಣಧೀರ ಹೊಸಮನಿ, ಶಿಲ್ಪ ಆರ್. ಹುಲಿಮನಿ, ಮಂಜುಳಾ ಸುರಪುರ, ಪ್ರೀಯಾದರ್ಶಿನಿ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ

ಗಿರೀಶ್ ಕುಮಾರ, ಯಾದಗಿರಿ

ಯಾದಗಿರಿ: ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ (ರಿ) ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ನೆನ್ನೆ ಜಿಲ್ಲಾ ಸಮಿತಿ, ತಾಲೂಕ ಸಮಿತಿ ಹಾಗೂ ನಗರ ಸಮಿತಿಗಳ ಪದಾಧಿಕಾರಿಗಳ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷರಾದ ಡಾ.ಕೆ.ಎಂ.ಸಂದೇಶ್ ರವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರಾದ ರಾಹುಲ್ ಕೊಲ್ಲೂರಕರ್ ಅವರ ಮುಂದಾಳುತ್ವದಲ್ಲಿ ಅಂಬೇಡ್ಕರ್ ಭವನ ಕೋಟೆಗಾರವಾಡದಲ್ಲಿ ಹಮ್ಮಿಕೊಳ್ಳಲಾಗಿತ್ತು.

ತಾಲೂಕ ಸಮಿತಿಯ ಅಧ್ಯಕ್ಷರಾಗಿ ಯಾದಗಿರಿ ರಾಮು ಗಣಪುರ, ಉಪಾಧ್ಯಕ್ಷರಾಗಿ ಕುಮಾರ್ ಅರಿಕೇರಿ, ಸಹ ಕಾರ್ಯದರ್ಶಿಯಾಗಿ ಮಂಜು ಕುಲೂರ್, ಕಾರ್ಯದರ್ಶಿಯಾಗಿ ದಶರಥ, ಸಹ ಕಾರ್ಯದರ್ಶಿಯಾಗಿ ರಾಧಾಕೃಷ್ಣ, ಖಜಾಂಚಿಯಾಗಿ ರಾಹುಲ್ ಅರಿಕೇರಿ ಹಾಗೂ ಸಮಿತಿ ಸದಸ್ಯರುಗಳಾಗಿ ರಾಜು ಮತ್ತು ಪುಟ್ಟು  ಅವರನ್ನು ಆಯ್ಕೆ ಮಾಡಲಾಯಿತ್ತು ಅದೇ ರೀತಿ, ನಗರ ಸಮಿತಿ ಅಧ್ಯಕ್ಷರಾಗಿ ಯಾದಗಿರಿ ಗಿರೀಶ್ ವಾಡಗೇರಿ, ಉಪಾಧ್ಯಕ್ಷರಾಗಿ ಬಾಲು ಹಳ್ಳಿ, ಕಾರ್ಯದರ್ಶಿಯಾಗಿ ಅನಿಲ್ ಆಯ್ಕೆ ಮಾಡಲಾಗಿದೆ.

ಆಯ್ಕೆಯಾದ ಸಮಿತಿಯ ನಾಯಕರುಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಹುಲ್ ಕೊಲ್ಲೂರಕರ್ ಅವರು,  “ಪ್ರತಿಯೊಬ್ಬ ನಾಯಕರೂ ಸಾಮಾಜಿಕ ಕಳಕಳಿಯಿಂದ ಶೋಷಿತರಿಗೆ, ದಿನಲಿತರಿಗೆ, ಬಹುಜನರ ಏಳಿಗೆಗಾಗಿ ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಹೋರಾಡುತೀರಿ ಎಂದು ಆಶಿಸುತ್ತೇನೆ. ನಿಮ್ಮೆಲ್ಲರಿಗೂ ಇದರಲ್ಲಿ ಯಶಸ್ಸು ದೊರಕಿ, ಸಂಘಟನೆಗೆ ಕೀರ್ತಿ ತರುತ್ತೀರಿ ಎಂದು ಶುಭ ಹಾರೈಸುತ್ತೆನೆ” ಎಂದು ಹೇಳಿದರು.

ರಾಜ್ಯ

ಯಾದಗಿರಿ: ನೆನ್ನೆ ಕೋಕಲ್ ಗ್ರಾಮದಲ್ಲಿ “ಸ್ವರ ಸಾಮ್ರಾಟ್ ಸಂಗೀತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ತಂಡ” ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ 2023-24 ಸಾಲಿನ ಅಸ್ಪೃಶ್ಯತೆ ಆಚರಣೆಯ ಬಗ್ಗೆ ಜನಜಾಗೃತಿ ಮೂಡಿಸು ಜಾನಪದ ಹಾಗೂ ಬೀದಿ ನಾಟಕಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಲಾಯಿತು.

ಈ ದೇಶದಲ್ಲಿ ಕೆಲವು ಮತಾಂಧ ಶಕ್ತಿಗಳು, ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ನ್ಯಾಯ ಮುಂತಾದವುಗಳನ್ನು ಬದಿಗೊತ್ತಿ, ಧರ್ಮ, ಜಾತಿ ಹಾಗೂ ಭಾಷೆಯ ವಿಚಾರಗಳನ್ನು ಮುಂದಿಟ್ಟು ಅದನ್ನು ರಾಜಕೀಯ ಗೊಳಿಸಿ, ಈ ದೇಶವನ್ನು / ರಾಜ್ಯವನ್ನು ತುಂಡಾಡುತ್ತಿರುವ ಇಂತಹ ಸಂದರ್ಭದಲ್ಲಿ, “ಸ್ವರ ಸಾಮ್ರಾಟ್ ಸಂಗೀತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲಾ ತಂಡ” ಮತ್ತು ಸಮಾಜ ಕಲ್ಯಾಣ ಇಲಾಖೆ, ಗ್ರಾಮಗಳಲ್ಲಿ ಈ ರೀತಿಯ ಅಸ್ಪೃಶ್ಯತೆ ಆಚರಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಜಾನಪದ ಕಲೆಯನ್ನು ನಾಟಕದ ಮೂಲಕ ಪ್ರದರ್ಶಿಸಿ, ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿತ್ತು.

ಈ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೈಯದ್ ಅಲಿ, ಆಶಾ ಕಾರ್ಯಕರ್ತರು, ಕೊಂಕಲ್ ಹಾಸ್ಟೆಲ್ ವಾರ್ಡನ್ ಲಕ್ಷ್ಮಣ, ಕಲಾ ತಂಡದ ನಾಯಕರಾದ ಶರಣು ಎಸ್ ನಾಟೇಕರ್, ಶ್ರೀಮತಿ ನಿರ್ಮಲಾ ಎಸ್ ನಾಟೇಕರ್, ಶಾಂತಯ್ಯ ಎಸ್ ಮಠಪತಿ, ಸದಾಶಿವ ನಾಟೇಕರ್, ಮರೆಪ್ಪ ಈಟೆ, ರಾಜು ಕೊಂಕಲ್, ಗಿರೀಶ್ ಚಟ್ಟೇರಕರ್ ಇನ್ನಿತರರು ಗ್ರಾಮಸ್ಥರು ಭಾಗವಹಿಸಿದ್ದರು.

ಸಿನಿಮಾ

ಗಿರೀಶ್ ಕುಮಾರ ಯಾದಗಿರಿ

ಯಾದಗಿರಿ: ಇಂದು ಯಾದಗಿರಿಯಲ್ಲಿ “ಕಾಣದ ಶಕ್ತಿ” ಚಿತ್ರ ತಂಡಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ನಗರದ ಎಲ್ಲಾ ಹಿರಿಯರು ಹಾಗೂ ಅಭಿಮಾನಿಗಳು ಚಿತ್ರ ತಂಡಕ್ಕೆ ಶುಭ ಆರೈಸಿ ಸನ್ಮಾನಿಸಿದರು.

ನಿವೃತ್ತ ವೈದ್ಯಾಧಿಕಾರಿಗಳಾದ ಡಾ.ಭಗವಂತ ಅನವಾರ ಅವರು ಮಾತನಾಡಿ, “ಕಾಣದ ಶಕ್ತಿ” ಚಿತ್ರತಂಡದ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಚಿತ್ರವು ಯಶಸ್ಸು ಕಾಣಲೆಂದು ಶುಭ ಆರೈಸಿದರು. ಅದೇ ರೀತಿ ಕಲಾವಿದರ ತಂಡಕ್ಕೆ ಶುಭ ಆರೈಸಿ ಮಾತನಾಡಿದ ಶರಣು ನಾಟೇಕರ್ ರವರು, ಚಿತ್ರ ತಂಡದಲ್ಲಿ ಎಲ್ಲಾ ಉದಯೋನ್ಮುಖ ನಟರಿದ್ದಾರೆ ಅವರೆಲ್ಲರಿಗೂ ಭವಿಷ್ಯದಲ್ಲಿ ಒಳ್ಳೆಯ ಅವಕಾಶ ದೊರೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಹೊಸ ಪ್ರತಿಭೆಯ ನಿರ್ಮಾಪಕರಾದ ಶೃತಿ ಎಂ ಹಾಗೂ ಎಸ್.ಆರ್.ಸತೀಶ್ ಬಾಬು, ಯುವ ನಟರಾದ ಮಲ್ಲಿಕಾರ್ಜುನ, ಅವಿನಾಶ್ ಅನ್ವರ್, ರೆಡ್ಡಿ ಮುಂತಾದವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸುರೇಶ್ ಬೊಮ್ಮನ, ಕೈಲಾಸ ಅನವಾರ, ಗುರುಲಿಂಗಪ್ಪ ಕಟ್ಟಿಮನಿ, ರಮೇಶ್ ಸುಂಗಲಕರ್, ನರೇಂದ್ರ ಅನವಾರ, ಚಂದ್ರಕಾಂತ ಚಲುವಾದಿ, ಮಲ್ಲಿಕಾರ್ಜುನ ಬೊಮ್ಮನ, ಮಲ್ಲಿಕಾರ್ಜುನ ಈಟೆ, ಆನಂದ್ ಚಟ್ಟೇರಕರ್, ಶಿವುಕುಮಾರ ಬೆಳಗುಂದಿ, ಗೀರಿಶಕುಮಾರ ಚಟ್ಟೇರಕರ್, ಮಲ್ಲಪ್ಪ ಹುಲಕಲ್ ಇನ್ನಿತರರು ಭಾಗವಹಿಸಿ ಚಿತ್ರತಂಡಕ್ಕೆ ಶುಭಾ ಹಾರೈಸಿದರು.